Connect with us

ಅಂತರಂಗ

ಅರಿಮೆಯ ಅರಿವಿರಲಿ – 17 : ತ್ಯಾಗವೇ ನನ್ನುಸಿರು

Published

on

  • ಯೋಗೇಶ್ ಮಾಸ್ಟರ್

ತಾನು ನೋವಿಗೊಳಗಾಗುತ್ತಾ ಇತರರ ಅನುಕಂಪ ಮತ್ತು ಗಮನವನ್ನು ತನ್ನ ಕಡೆಗೆ ಸೆಳೆದುಕೊಳ್ಳುವುದೇ ಮಾರ್ಟಿರ್ ಕಾಂಪ್ಲೆಕ್ಸ್. ಬಲಿದಾನದರಿಮೆಯುಳ್ಳವರ ಧ್ಯೇಯವಾಕ್ಯ “ಪರೋಪಕಾರಾರ್ಥೇಮಿದಂ ಶರೀರಂ.”ಅತಿಯೆನಿಸುವಷ್ಟು ಅಧಿಕ ಪರೋಪಕಾರಿಗಳು.ಕೆಲವೊಮ್ಮೆ ಅದು ನೋಡುಗರಿಗೆ ಮತ್ತು ಸಹವಾಸಿಗಳಿಗೆ ಉಪಕಾರವೆನಿಸುವುದೂ ಇಲ್ಲ. ತಮ್ಮನ್ನು ತಾವು ದಂಡಿಸಿಕೊಂಡು ಮತ್ತೊಬ್ಬರಿಗೆ ಕೆಲಸ ಮಾಡುವುದನ್ನು ನೋಡಿದರೆ ಕಿರಿಕಿರಿಯಾಗುತ್ತದೆ.

ಕೆಲವೊಂದು ಮನೆಗಳಲ್ಲಿ ಹೆಂಗಸರು ತಾನು ಏನೂ ತಿನ್ನದೇ, ಕುಡಿಯದೇ ಬರಿದೇ ಕೆಲಸ ಮಾಡುತ್ತಿರುತ್ತಾರೆ. ಎಲ್ಲರಿಗೂ ಅಡುಗೆ ಮಾಡಿ ಬಡಿಸುತ್ತಾರೆ, ಪಾತ್ರೆ ತೊಳೆಯುತ್ತಾರೆ, ಬಟ್ಟೆ ಒಗೆಯುತ್ತಾರೆ. ಆದರೆ ತಮ್ಮ ಹೊಟ್ಟೆಗೇನೂ ಹಾಕಿಕೊಳ್ಳುವುದಿಲ್ಲ. ಗಮನಿಸಿದವರು ತಿನ್ನು ತಿನ್ನು ಎಂದರೂ ಇದೊಂದು ಕೆಲಸ ಮುಗಿದುಹೋಗಲಿ, ಆಮೇಲೆ ತಿನ್ನುತ್ತೇನೆ ಎನ್ನುವರು. ಹಸಿದುಕೊಂಡೇ ಎಷ್ಟು ಹೊತ್ತಾದರೂ ಕೆಲಸ ಮಾಡುತ್ತಿರುವರು. ಅವರ ಆಂತರ್ಯಕ್ಕೆ ಬೇಕಾಗಿರುವುದೇ ಅದು. ನೋಡುಗರು “ನೋಡು ಅವಳನ್ನು. ಏನೂ ತಿನ್ನದೇ, ಬರೀ ಹೊಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ತನ್ನ ಹೊಟ್ಟೆಗೇನೂ ಹಾಕಿಕೊಳ್ಳದಿದ್ದರೂ ಇತರರ ಹೊಟ್ಟೆ ತುಂಬಿಸುತ್ತಾಳೆ. ಯಾವಾಗಲೂ ಅವಳಿಗೆ ಗಂಡ, ಮಕ್ಕಳು, ಇತರರದೇ ಯೋಚನೆ. ತನ್ನ ಸ್ವಂತದ್ದೇನನ್ನೂ ಲಕ್ಷಿಸುವುದಿಲ್ಲ.” ಈ ತ್ಯಾಗಮಯಿಯ ಹಣೆಪಟ್ಟಿ ಬೇಕವರಿಗೆ. ಜ್ವರ ಬಂದಿದ್ದರೂ ಎದ್ದು ಕೆಲಸ ಮಾಡುವುದು. ಔಷಧ ತೆಗೆದುಕೊಳ್ಳುವುದನ್ನೂ ಬಿಟ್ಟು ಕೆಲಸ ಮಾಡಲು ಬರುವುದು.

ಇತರರಿಗಾಗಿ ರಾತ್ರಿ ನಿದ್ದೆಗೆಟ್ಟು ದುಡಿಯುವುದು. ಎಲ್ಲಾ ಕೆಲಸಗಳನ್ನೂ ತಾನೇ ಮೈಮೇಲೆಳೆದುಕೊಳ್ಳುವುದು. ಇಂತವೆಲ್ಲಾ ಮಾರ್ಟಿರ್ ಕಾಂಪ್ಲೆಕ್ಸ್ ಅಥವಾ ಬಲಿದಾನದರಿಮೆಯ ಅಥವಾ ಹುತಾತ್ಮನರಿಮೆಯ ಲಕ್ಷಣಗಳು. ಇತರರು ಮೊದಲು ತಾನು ನಂತರ – ಇದು ಅವರ ಆದ್ಯತೆ. ಅದಕ್ಕಾಗಿ ಅವರು ತಮ್ಮ ಆರೋಗ್ಯ ಮತ್ತು ಸುಖವನ್ನೆಲ್ಲಾ ಬೇಕಾದರೆ ತ್ಯಾಗ ಮಾಡುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ಈ ತ್ಯಾಗದ ಹಿಂದೆ ಇರುವುದು ಅವರ ಅರಿಮೆಯ ಆಳದಲ್ಲಿ ಇತರರ ಗಮನ ಸೆಳೆಯುವ ಬಯಕೆ ಮತ್ತು ಅವರ ಕಾಳಜಿಯ ಕೋರಿಕೆ.

ತಾವು ಬಯಸುವಂತಹ ಅಥವಾ ಅಂತರಾಳದ ಆಸೆಯಿಂದ ನಿರೀಕ್ಷಿಸುತ್ತಿರುವಂತಹ ಪ್ರಶಂಸೆ, ಗಮನ ಮತ್ತು ಕಾಳಜಿಗಳು ಅತ್ತ ಕಡೆಯಿಂದ ಬರದೇ ಹೋದರೆ ತಮ್ಮನ್ನು ಇನ್ನಷ್ಟು ಕಠಿಣ ಪರಿಶ್ರಮಗಳಿಗೆ ಒಳಪಡಿಸಿಕೊಳ್ಳುತ್ತಾರೆ. ಹಾನಿ ಮಾಡಿಕೊಳ್ಳುವುದು, ಘಾಸಿ ಮಾಡಿಕೊಳ್ಳುವುದು ಕೂಡಾ ಉಂಟು.ಎಲ್ಲಿಂದಲೋ ಬಿದ್ದುಬಿಡುವುದು, ಕೈ ಕುಯ್ದುಕೊಳ್ಳುವುದು. ಇವುಗಳ ಜೊತೆಗೆ ಖಿನ್ನತೆಗೂ ಜಾರುತ್ತಾರೆ. ಇದು ಅವರ ಉಗ್ರವಾದ ವರ್ತನೆಗಳಿಗೂ ದಾರಿಯಾಗುತ್ತದೆ.

ದೇಶಕ್ಕಾಗಿ ಪ್ರಾಣ ಕೊಡುತ್ತೇನೆ

ಆರನೆಯ ತರಗತಿಯೊಂದರಲ್ಲಿ ಮಕ್ಕಳೆಲ್ಲಾ ತಾವು ದೊಡ್ದವರಾದ ಮೇಲೆ ಏನಾಗಬೇಕೆಂದು ಬಯಸುತ್ತೇವೆ ಎಂದು ಹೇಳುತ್ತಿದ್ದರು. ಒಬ್ಬ ಹುಡುಗ ತಾನು ಮಿಲಿಟರಿ ಸೇರಬೇಕು ಎಂದ.
“ಮಿಲಿಟರಿ ಏಕೆ?”
“ಸೋಲ್ಜರ್ ಆಗುತ್ತೇನೆ.”
“ಸೋಲ್ಜರ್ ಆಗಿ ಏನು ಮಾಡುತ್ತೀಯಾ?”
“ದೇಶವನ್ನು ರಕ್ಷಿಸುತ್ತೇನೆ. ಶತ್ರುಗಳೊಂದಿಗೆ ಹೋರಾಡುತ್ತೇನೆ.”
“ಆಮೇಲೆ?”
“ಆಮೇಲೆ?” ಅವನಿಗೆ ಮುಂದೆ ಏನು ಹೇಳುವುದು ಎಂದು ತೋಚಲಿಲ್ಲ. ಆದರೂ ಹೇಳಿದ “ದೇಶಕ್ಕಾಗಿ ಪ್ರಾಣಬಿಡುತ್ತೇನೆ.”
“ಆಮೇಲೆ?”
“ಆಮೇಲೆ. ದೇಶಕ್ಕೆಲ್ಲಾ ಒಳ್ಳೆಯದಾಗತ್ತೆ. ಆಮೇಲೆ,” ಅವನು ಆಲೋಚಿಸಲು ಕಷ್ಟಪಡುತ್ತಿದ್ದ, “ಆಮೇಲೆ, ನನ್ನ ಹೆಸರು ಎಲ್ಲಾ ಹೇಳ್ತಾರೆ….”
“ನಿನಗೆ ಗೊತ್ತಿರುವ ಒಂದೆರಡು ಸೋಲ್ಜರ್ಸ್ ಹೆಸರು ಹೇಳು.”
ಅವನು ಒಂದೂ ಹೇಳಲಿಲ್ಲ.

ಆದರೆ ಅವನಲ್ಲಿ ಸೈನಿಕನಾಗಿ ಸಾಯುವುದೆಂದರೆ ಬಹಳ ಹೀರೋಯಿಕ್ ಆಗಿರುವ ಕಲ್ಪನೆಯಷ್ಟೇ ಇತ್ತು. ಅವನ ತಂದೆ ಅಕೌಂಟೆಂಟ್. ಅವರ ಮನೆಯಲ್ಲಿ ಯಾರೂ ಯಾವ ವಿಶೇಷ ಪ್ರತಿಭೆಯುಳ್ಳವರೂ, ಅಥವಾ ಹೆಸರುವಾಸಿಯಾದವರೂ ಇರಲಿಲ್ಲ. ಇವನೊಳಗೆ ಸಹಜವಾಗಿ ಇರುವಂತ ಆತ್ಮರತಿಗೆ ಏನಾದರೊಂದು ಪ್ರದರ್ಶನಕ್ಕೆ ವೇದಿಕೆ ಬೇಕಿತ್ತು. ಅವನು ತಾನೊಬ್ಬ ವೀರ ಸಿಪಾಯಿಯಾಗುವುದರಿಂದ ಪ್ರಖ್ಯಾತನಾಗಬಹುದು ಅಥವಾ ತಾನು ಕಂಡುಕೊಂಡಿರುವ ಆ ಹೀರೋಯಿಕ್ ಚಿತ್ರಣ ತನ್ನದಾಗಬಹುದೆಂಬ ಆಲೋಚನೆಯೋ ಏನೋ? ಆ ಬಾಲಕ ಇವತ್ತು ಸಾಫ್ಟ್‍ವೇರ್ ಇಂಜಿನಿಯರ್ ಆಗಿದ್ದಾನೆ. ಹೆಂಡತಿ ಮಕ್ಕಳ ಜೊತೆ ಸುಖವಾಗಿದ್ದಾನೆ. ಅವನು ಸೈನಿಕನಾಗಲಿಲ್ಲ.

ಇತ್ತೀಚೆಗೆ ದೇಶದ ಮೇಲೆ ದಾಳಿ ಮಾಡುವ ಶತ್ರುಗಳ ಮತ್ತು ದೇಶಕ್ಕಾಗಿ ಹೋರಾಡುವ ವೀರ ಸೈನಿಕರ ವಿಷಯಗಳು ಬಂದಾಗ, “ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳೇ ಅಪಾಯಕಾರಿ. ನಮ್ಮೊಳಗಿನ ಶತ್ರುಗಳು ಅವರು ಮಿತ್ರರಾಗಬಹುದಾದ ಅವಕಾಶವನ್ನು ಇಲ್ಲವಾಗಿಸಿ ಅವರನ್ನು ಶತ್ರುಗಳನ್ನಾಗಿಯೇ ಉಳಿಸಿ, ಅವರೊಂದಿಗೆ ಹೋರಾಡಲು ಇತರರನ್ನು ಹುರಿದುಂಬಿಸಿ ಬ್ಲಡ್ ಸ್ಪೋರ್ಟ್ ಆಡುತ್ತಿದ್ದಾರೆ. ಭಾವೋದ್ರಿಕ್ತರಾಗಿ ವಿಚಾರ ಮಾಡದೇ ಮುನ್ನುಗ್ಗುವವರೇ ಅವರಿಗೆ ಬೇಕಾಗಿರುವುದು, ಎಚ್ಚರ” ಎಂದು ಫೇಸ್ಬುಕ್ಕಿನ ತನ್ನ ಗೋಡೆಯ ಮೇಲೆ ಬರೆದುಕೊಂಡಿದ್ದ.

ಆಲೋಚನೆಗಳು ಅಸೀಮವಾಗಲಿ

ಇಷ್ಟನ್ನು ಆಲೋಚನೆ ಮಾಡೋಣ.ಅರಿಮೆಗಳಿಗೆ ಒಂದು ನಿರ್ಧರಿತ ಚೌಕಟ್ಟುಗಳಿರುತ್ತವೆ. ಅದನ್ನು ದಾಟಲು ಅಥವಾ ಮೀರಲು ನಾವು ಸಹಕರಿಸಬೇಕೆಂದರೆ ಅವರ ಆಲೋಚನೆಗಳಿಗೆ ಉತ್ತರಗಳನ್ನೋ ಅಥವಾ ಪ್ರತ್ಯಾಲೋಚನೆಗಳನ್ನು ಕೊಡಬಾರದು. ಅವರದೇ ಆಲೋಚನೆಗಳನ್ನು ವಿಸ್ತರಿಸಿಕೊಳ್ಳಲು, ತಾವು ವಿಚಾರ ಮಾಡಿರುವಷ್ಟರ, ಚಿತ್ರಿಸಿಕೊಂಡಿರುವಷ್ಟರ ಆಚೆಗೆ ಆಲೋಚನೆಗಳನ್ನು ಮಾಡಲು ಅವಕಾಶ ಮಾಡಿಕೊಡಬೇಕು. ಅರಿಮೆಗಳು ಗಟ್ಟಿಯಾಗುವುದು, ಅವರ ಸೀಮಿತ ಚೌಕಟ್ಟುಗಳ ಒಳಗಿನ ವಿಚಾರಗಳಿಗೆ ಸತತವಾಗಿ ಸ್ಪಂದಿಸುತ್ತಿದ್ದಾಗ. ಸಕಾರಾತ್ಮಕವಾಗಿಯಾದರೂ ಸ್ಪಂದಿಸಿ, ನಕಾರಾತ್ಮಕವಾಗಿಯಾದರೂ ಸ್ಪಂದಿಸಿ, ಅದು ಗಟ್ಟಿಯಾಗುತ್ತದೆ.

ನೀವು ಈಗಾಗಲೇ ತಲೆಯಲ್ಲಿ ಕೂತಿರುವ ಆ ವ್ಯಕ್ತಿಯ ವಿಚಾರಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಸಹಜವಾಗಿ ಅದು ಪ್ರೋತ್ಸಾಹವನ್ನು ಪಡೆದು ಮತ್ತಷ್ಟು ಗಟ್ಟಿಯಾಗುತ್ತದೆ. ನೀವು ನಕಾರಾತ್ಮಕವಾಗಿ ಸ್ಪಂದಿಸಿದಿರೋ, ಆ ವಿಚಾರಕ್ಕೆ ವಿರುದ್ಧವಾಗಿ ನೀವು ಇದ್ದೀರಿ ಎಂದು ತಮ್ಮ ವಿಚಾರವನ್ನು ಮತ್ತಷ್ಟು ಗಟ್ಟಿಯಾಗಿ ಅವುಚಿಕೊಂಡು ಹಿಡಿಯುತ್ತಾರೆ. ಅದು ತಮ್ಮನ್ನು ಬಿಟ್ಟುಹೋಗದಂತೆ, ಅಥವಾ ತಾವು ಅದನ್ನು ಬಿಡದಂತೆ ಹಟದಿಂದ ಗಟ್ಟಿ ಹಿಡಿಯುತ್ತಾರೆ. ಇದು ಸಾಮಾನ್ಯವಾಗಿ ಯಾವುದೇ ಅರಿಮೆಯ ಲಕ್ಷಣ. ಹಾಗಾಗಿ ಅರಿಮೆಯುಳ್ಳ ವ್ಯಕ್ತಿಗಳಿಗೆ ತಮ್ಮಲ್ಲಿರುವ ಯಾವುದೇ ವಿಚಾರವನ್ನು ವಿಸ್ತರಿಸಲು, ಹಿಗ್ಗಿಸಲು, ಕ್ಷಿತಿಜಗಳನ್ನು ವಿಸ್ತರಿಸಿಕೊಳ್ಳಲು, ಸೀಮೆಗಳನ್ನು ದಾಟಿ ನೋಡಲು ಅನುಕೂಲವಾಗುವಂತಹ ಅವಕಾಶಗಳನ್ನು ಒದಗಿಸಿಕೊಡಬೇಕು. ಹೇಗೆ ಅರಿಮೆಯು ತನ್ನ ತೀರಾ ಖಾಸಗಿ ಮನಸ್ಸಿನ ಭಾಗವೋ, ಹಾಗೆಯೇ ಅರಿವೂ ಕೂಡಾ ತನ್ನದೇ ಮನಸ್ಸಿನ ಆಲೋಚನೆಗಳ ವಿಸ್ತರಣೆಯಿಂದ ಲಭಿಸಿದರೆ ಆತ್ಮತೃಪ್ತಿ. ತಾನು ಯಾರದೋ ಮಾತನ್ನು ಕೇಳುತ್ತಿದ್ದೇನೆ. ಯಾರಿಗೋ ವಿಧೇಯಕನಾಗಿದ್ದೇನೆ ಎಂಬ ಕೀಳರಿಮೆಯಿರದು. ಹಾಗಾಗಿಯೇ ವಿಚಾರಗಳನ್ನಾಗಲಿ, ಆಲೋಚನೆಗಳನ್ನಾಗಲಿ ಕೊಡಬಾರದು. ಬದಲಿಗೆ ವಿಚಾರ ಮಾಡುವ ಹಾಗೆ, ಆಲೋಚನೆ ಮಾಡುವ ಹಾಗೆ ಪ್ರೇರೇಪಿಸಬೇಕು.

ಆತ್ಮರತಿಯ ಅತ್ಯುನ್ನತ ಸ್ಥಿತಿ

ರೋಮಾಂಚನಗೊಳಿಸುವಂತಹ ಹಿನ್ನೆಲೆಯ ಸಂಗೀತ, ಪರವಶಗೊಳಿಸುವ ಬೆಳಕು, ಉತ್ತಮ ಮತ್ತು ಆಕರ್ಷಕವಾದ ಚಿತ್ರೀಕರಣ, ಪರಿಣಾಮಕಾರಿಯಾದ ಅಭಿನಯ; ಇವುಗಳೆಲ್ಲಾ ಇರುವ ನೇಣಿಗೇರುವ ಅಥವಾ ಹೋರಾಡಿ ಮಡಿಯುವ ವೀರನ ಕಥೆಯನ್ನು ಸಿನಿಮಾ ಮಂದಿರದಲ್ಲಿ ನೋಡುವ ಮಂದಿಗೆ ಈ ಬಲಿದಾನದರಿಮೆಯು ಮತ್ತಷ್ಟು ಬಲಿಯುತ್ತದೆ. ಹಿಂದೆ ಬರಹಗಳು ಈ ಬಗೆಯ ಬಲಿದಾನಗಳಿಗೆ ಪ್ರೇರೇಪಿಸುತ್ತಿದ್ದವು.

ಬಲಿದಾನದರಿಮೆ ಒಂದು ಮನೋವ್ಯಾಧಿ. ನಾನುಹುತಾತ್ಮನಾಗಬೇಕು.ಮಹಾತ್ಮನಾಗಬೇಕು.ನಾನು ಮನೆ, ಮಠ, ಮಡದಿ, ಮಕ್ಕಳು, ಕೊನೆಗೆ ಜೀವ ಎಲ್ಲವನ್ನೂ ತ್ಯಾಗ ಮಾಡಬೇಕು ಎಂದು ದೃಢ ಸಂಕಲ್ಪವನ್ನು ಮಾಡಿ ಬಲಿಯಾಗುವುದು ಆತ್ಮರತಿಯ ಅತ್ಯುನ್ನತ ಸ್ಥಿತಿಯೇ ಹೊರತು ಮತ್ತೇನಿಲ್ಲ.

ಹಾಗಾದರೆ ತ್ಯಾಗ, ಬಲಿದಾನಗಳಿಗೆ ಬೆಲೆಯೇ ಇಲ್ಲವೇ? ಇವೂ ಕೂಡಾ ಮಾನಸಿಕ ಸಮಸ್ಯೆಗಳೇ ಎಂಬ ಆಲೋಚನೆ ಬಂದರೆ ಎಷ್ಟೆಷ್ಟೋ ಆಧ್ಯಾತ್ಮಿಕ ವ್ಯಕ್ತಿಗಳ ತ್ಯಾಗಗಳು, ದೇಶಭಕ್ತರ ತ್ಯಾಗಗಳೆಲ್ಲವನ್ನೂ ಈ ಮಾನದಂಡದಲ್ಲಿ ನೋಡಲಾರಂಭಿಸಿದರೆ ಗೊಂದಲವುಂಟಾಗುತ್ತದೆ. ಆದರೆ, ನಿಧಾನವಾಗಿ ಬಿಡಿಸಿ ನೋಡಿದರೆ ಅರ್ಥವಾಗುವುದು. ಸ್ವಾತಂತ್ರ್ಯ ಸಂಗ್ರಾಮದಂತಹ ಹೋರಾಟಗಳಲ್ಲಿ ಅವರಿಗೊಂದು ಸ್ಪಷ್ಟವಾದ ಗುರಿಯಿದ್ದು, ಆ ಗುರಿಸಾಧನೆಗೆ ಶ್ರಮ ಪಡುತ್ತಿರುತ್ತಾರೆ. ಆಗ ಕುಣಿಕೆಗೆ ಕೊರಳೊಡ್ಡುವ ಅಥವಾ ಗುಂಡಿಗೆ ಗುಂಡಿಗೆಯೊಡ್ಡುವ ಅನಿವಾರ್ಯತೆ ಬಂದಾಗ ಅದನ್ನು ಧೈರ್ಯದಿಂದ ಸ್ವೀಕರಿಸುತ್ತಾರೆ.

ಇವರ ಸ್ವೀಕಾರದಲ್ಲಿ ಅನಿವಾರ್ಯತೆಯೇ ಪ್ರಧಾನ. ತಮ್ಮ ವ್ಯಕ್ತಿಗತವಾದ ಮನೋಭಾವದ ಕಾರಣವು ತಮ್ಮನ್ನು ನೋವಿಗೆ ಅಥವಾ ಸಾವಿಗೆ ಒಡ್ಡಿಕೊಳ್ಳುವುದಿಲ್ಲ. ಅವರ ನೋವು ಮತ್ತು ಸಾವಿನ ಕಾರಣ ಮತ್ತು ಉದ್ದೇಶವು ಆತ್ಮಕೇಂದ್ರಿತವಾಗಿರದೇ ಸಮುದಾಯ ಕೇಂದ್ರಿತವಾಗಿರುತ್ತದೆ. ಈ ವಿಷಯದಲ್ಲಿ ಸಾವಾಗಲಿ ಅಥವಾ ನೋವಾಗಲಿ ಅವರ ಬಯಕೆಯಲ್ಲ. ಅದು ಎದುರಾದಾಗ ಹಿಮ್ಮೆಟ್ಟದೆ ಅದನ್ನು ಎದುರಿಸುವುದು. ಈ ಸ್ಪಷ್ಟತೆಯನ್ನು ತಿಳಿದರೆ ಬಲಿದಾನದರಿಮೆಯ ಲಕ್ಷಣಗಳು ಅರ್ಥವಾಗುತ್ತವೆ. ಈ ಅರಿಮೆಯುಳ್ಳವರೂ ಕೂಡಾ ಹುತಾತ್ಮರಾಗಿರಬಹುದು. ಆದರೆ ಸಾಮಾನ್ಯೀಕರಿಸಲಾಗುವುದಿಲ್ಲ.

ವೀರಗಲ್ಲು ಮಾಸ್ತಿಗಲ್ಲು

ಇನ್ನು ನಮ್ಮ ಇತಿಹಾಸದಲ್ಲಿ ತಮ್ಮ ಒಡೆಯನಿಗಾಗಿ, ಊರಿಗಾಗಿ, ಗೋವುಗಳಿಗಾಗಿ ತಮ್ಮ ಪ್ರಾಣವನ್ನು ತೆತ್ತ ಗರುಡರೇ ಮೊದಲಾದ ವೀರರನ್ನು ನೋಡುತ್ತೇವೆ. ಆ ವೀರರ ಶೌರ್ಯ ಮತ್ತು ಬಲಿದಾನವನ್ನು ಗೌರವಿಸಲು ವೀರಗಲ್ಲುಗಳು ಘನತೆಯಿಂದ ನಿಂತಿರುತ್ತವೆ. ಗಂಡನನ್ನು ಕಳೆದುಕೊಂಡ ಗರತಿಯರು ಸತಿಯಾಗಲು ಚಿತೆಯಲ್ಲಿ ಸತ್ತು ಮಹಾಸತಿಯರಾಗುತ್ತಾರೆ. ಸಮಾಜ ಬಹಳ ಕಿಲಾಡಿ. ಸಾಮೂಹಿಕ ಮನಸ್ಥಿತಿಯು ದುರ್ಬಲವಾಗಿರುವ ವ್ಯಕ್ತಿಯೊಬ್ಬನ ಮನಸ್ಥಿತಿಯ ಬಲವನ್ನು ತನ್ನ ಅಸ್ತಿತ್ವಕ್ಕೆ ಬಳಸಿಕೊಳ್ಳುವುದು ಯಾವಾಗಲಿಂದಲೋ ರೂಢಿಸಿಕೊಂಡಿದೆ.

ಅವನ ಧೈರ್ಯವನ್ನು, ವೀರಾವೇಶವನ್ನು, ಪರೋಪಕಾರಿ ಗುಣವನ್ನು, ತ್ಯಾಗವನ್ನು ವೈಭವೀಕರಿಸಿ ಹೊಗಳಿ ಹೊಗಳಿ ಅದರಿಂದ ಅವನು ಗರ್ವದಿಂದ ಆ ಘನತೆಯನ್ನು ತನ್ನದಾಗಿಸಿಕೊಂಡುಬಿಟ್ಟಿರುತ್ತಾನೆ. ಪದೇ ಪದೇ ಅದನ್ನೇ ಧ್ಯಾನಿಸುತ್ತಾ ಅವನಂತರಾಳ ಅದನ್ನೊಪ್ಪಿಕೊಳ್ಳುವುದು ಮಾತ್ರವಲ್ಲದೇ ಅಪ್ಪಿಕೊಂಡಿ ಬಿಟ್ಟಿರುತ್ತದೆ. ಅವನೀಗ ಜಾಗೃತನಾಗಲಾರ, ಜಾಗೃತನಾದರೂ ಬಿಡಲಾರ. ಪಡೆದು ಸಂಭ್ರಮಿಸಿ ಗರ್ವಪಟ್ಟ ಗೌರವಕ್ಕೆ ಜವಾಬ್ದಾರನಾಗಿ ನಡೆದುಕೊಳ್ಳಬೇಕಾಗುತ್ತದೆ. ವೀರರು ವೀರಗಲ್ಲುಗಳಾಗುತ್ತಾರೆ. ಇನ್ನು ಸತಿ ಹೋಗುವ ವಿಷಯದಲ್ಲಿಯೂ ಕೂಡಾ ಸಮಾಜವು ಹೆಣ್ಣಿಗೆ ಮಾಡಿರುವ ಶೋಷಣೆಯೇ ಸರಿ. ಊರವರೆಲ್ಲಾ ಹಾಡಿ ಕೊಂಡಾಡಿ ಗಂಡ ಸತ್ತ ಒಂದು ಹೆಣ್ಣನ್ನು ಮುತ್ತೈದೆಯಾಗಿ ಸಾಯಲು ಪ್ರೇರೇಪಿಸುತ್ತಿದ್ದದ್ದು ಏನೂ ರಚನಾತ್ಮಕವೇನಲ್ಲ.

ಅವಳು ಸಮಾಜದ ಈ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲಾಗದೇ ಸಾಯಬೇಕಿತ್ತು ಅಥವಾ ಸಮಾಜವು ರೂಪಿಸಿದ್ದ ಬಲಿದಾನದ ಅರಿಮೆಯ ಪ್ರಭಾವದ ಗರ್ವದಿಂದ ಚಿತೆಯೇರಬೇಕಿತ್ತು. ಪಾಪದ ಅವಳು ಮಾನಸಿಕ ಸಮಸ್ಯೆಯುಳ್ಳವಳು. ತಾನು ಗಂಡನ ಚಿತೆಯೊಂದಿಗೆ ಬೇಯುವುದಿಲ್ಲ, ನಾನು ಸಾಯುವುದಿಲ್ಲ ಎಂದು ಹೆದರಿಕೊಂಡು ಓಡೋಡಿ ಹೋಗುತ್ತಿದ್ದವಳನ್ನು ಎಳೆದೆಳೆದು ಬಲತ್ಕಾರದಿಂದ ಚಿತೆಗೆ ದೂಡಿರುವ ಉದಾಹರಣೆಗಳುಂಟು. ಒಟ್ಟಾರೆ ಆರೋಗ್ಯವಾದ ಮನಸ್ಥಿತಿಯಿರುವವಳು ಸಹಜವಾಗಿ ಇರುವುದಕ್ಕೆ ಬಿಡದೇ ಸಮಾಜವು ಅವಳನ್ನು ಕೊಲ್ಲುತ್ತಿತ್ತು. ಹಳತೆಲ್ಲಾ ಹೊನ್ನಲ್ಲ. ಮಹಾಸತಿಗಲ್ಲುಗಳು ನಮ್ಮ ಹೆಮ್ಮೆಯ ಸಂಕೇತಗಳೇನಲ್ಲ. ಇದೇ ರೀತಿ ನಮ್ಮ ಪುರಾತನರ ಬದುಕು ಮತ್ತು ಪ್ರಾಚೀನ ವ್ಯವಸ್ಥೆಗಳು ಅಧ್ಯಯನಗಳಿಗೆ ಬೇಕೇ ಹೊರತು, ಅನುಕರಣೆಗಲ್ಲ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending