ಅಂತರಂಗ
ಅರಿಮೆಯ ಅರಿವಿರಲಿ-55 : ಭಯಗಳು ಭಾವಗಳಾಗೆ

- ಯೋಗೇಶ್ ಮಾಸ್ಟರ್
ಆಲೋಚನೆಗಳಿಂದ ಭಾವನೆಗಳೋ ಅಥವಾ ಭಾವನೆಗಳಿಂದ ಆಲೋಚನೆಗಳೋ; ಚರ್ಚೆ ಒಂದೊಟ್ಟಿಗಿರಲಿ. ಆದರೆ ವ್ಯಕ್ತಿಯೊಬ್ಬನು ತನ್ನತನದ ಬದ್ಧತೆಯಿಂದ ತನಗೆ ಎದುರಾಗುವ ಸಂಗತಿ, ವ್ಯಕ್ತಿ ಮತ್ತು ಸನ್ನಿವೇಶಗಳನ್ನು ಹೇಗೆ ಗ್ರಹಿಸುತ್ತಾನೆ? ಅದು ಮುಖ್ಯ. ಆ ಗ್ರಹಿಕೆಯಿಂದಲೇ ಆಲೋಚನೆಗಳು ಮೂಡುವವು. ಭಾವನೆಗಳು ಉಂಟಾಗುವವು.
ಈಗ ಹುಟ್ಟುವ ಒಂದು ಬಗೆಯ ಆಲೋಚನೆಗೆ ಅಂದೆಂದೋ ಬಿತ್ತಿರುವ ಆಲೋಚನೆಯು ಬೀಜವಾಗಿ ಮೊಳೆದಿರುತ್ತವೆ. ಇರಲಿ, ಮನುಷ್ಯನ ಮೂಲ ಪ್ರವೃತ್ತಿಗಳು ಆಲೋಚನೆಗಳಿಗೆ ಪ್ರೇರೇಪಿಸುತ್ತವೆ. ಹಾಗೆಯೇ ಆಲೋಚನೆಗಳೂ ಆ ಪ್ರವೃತ್ತಿಗಳನ್ನು ಪ್ರೇರೇಪಿಸುತ್ತವೆ.
ಭಾವನೆಗಳು ಆಲೋಚನೆಗಳನ್ನು, ಆಲೋಚನೆಗಳು ಭಾವನೆಗಳನ್ನು, ಇವೆರಡೂ ಪ್ರವೃತ್ತಿಗಳನ್ನು, ಪ್ರವೃತ್ತಿಗಳು ಇವೆಲ್ಲವನ್ನೂ ಪ್ರೇರೇಪಿಸುತ್ತಿರುತ್ತವೆ. ಒಟ್ಟಾರೆ, ಮನಸ್ಸೆಂಬ ತರಂಗವಿದೆಯಲ್ಲಾ ಅದು ಎಲ್ಲದಕ್ಕೂ ವಾಹಕವಾಗುತ್ತದೆ, ಮಿಡಿಯುತ್ತದೆ ಮತ್ತು ಅಲೆಯಾಗುತ್ತದೆ.
ಆತಂಕಗಳ ಪ್ರಸಂಗಗಳು
ವೇದಿಕೆಯ ಮೇಲೆ ಮಾತಾಡಿ ರೂಢಿ ಇಲ್ಲದಿರುವಾಗ ಅಥವಾ ಮಾತಾಡುವ ವಿಷಯದಲ್ಲಿ ಗೊಂದಲ ಇರುವಾಗ ಅಥವಾ ಸ್ಪಷ್ಟತೆ ಇಲ್ಲದಿರುವಾಗ ಅಥವಾ ಬಹಳಷ್ಟು ಜನ ಸೇರಿರುವ ಸಭೆಯನ್ನು ಎದುರಿಸುವ ಭಯವಿರುವಾಗ ವೇದಿಕೆಗೆ ಹೋಗುವಾಗ ಅಥವಾ ಹೋಗಿ ನಿಂತಾದ ಮೇಲೆ ಹೊಟ್ಟೆಯಲ್ಲಿ ಏನೋ ಒಂದು ತರ ಆಗುತ್ತಿರುತ್ತದೆ.
ಕೆಲವೊಮ್ಮೆ ಧಾರಾಕಾರವಾಗಿ ಬೆವರು ಸುರಿಯುತ್ತಿರುತ್ತದೆ. ಮತ್ತೂ ಕೆಲವೊಮ್ಮೆ ಹೇಳಬೇಕಾದುದೆಲ್ಲಾ ಮರೆತೇ ಹೋಗತ್ತೆ. ನಾಲಿಗೆ ತೊದಲುತ್ತದೆ, ಗಂಟಲು ಒಣಗುತ್ತದೆ. ಕೈ ಕಾಲುಗಳು ನಡುಗುತ್ತಿರುತ್ತದೆ. ಹಾಗಾಗುವುದು ಏಕೆ?
ನಿಮ್ಮ ಮನೆಯವರೋ ಸ್ನೇಹಿತರೋ ಅದ್ಯಾವುದೋ ಸ್ಥಳಕ್ಕೆ ಹೋಗಿದ್ದಾರೆ. ನಿಮಗೆ ಆ ಸ್ಥಳದಲ್ಲಿ ದೊಡ್ಡ ಗಲಭೆಯಾಗಿದೆ, ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ, ವಾಹನಗಳಿಗೆ ಕಲ್ಲು ತೂರುತ್ತಿದ್ದಾರೆ ಎಂದೆಲ್ಲಾ ಸುದ್ಧಿ ಬರುತ್ತದೆ. ನೀವು ಸಂಪರ್ಕಿಸಲು ಯತ್ನಿಸಿದರೆ ನಿಮ್ಮವರ ಫೋನ್ ಸ್ವಿಚ್ ಆಫ್ ಆಗಿದೆ ಅಥವಾ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂದು ಕೇಳುತ್ತಿರುತ್ತದೆ. ಆಗ ಹೊಟ್ಟೆಯಲ್ಲಿ ಸಂಕಟ ಪ್ರಾರಂಭವಾಗುತ್ತದೆ.
ಕೆಲವೊಮ್ಮೆ ಅದು ವಿಪರೀತಕ್ಕೆ ಹೋಗಿ ಮಲ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಒಮ್ಮೆ ಹೋಗಿ ಬಂದರೂ ಮತ್ತೆ ಮತ್ತೆ ಹೋಗುವಂತಾಗುತ್ತದೆ. ಏಕೆ?
ತಡೆಯಲಾರದಷ್ಟು ಬೇಸರವಾಗಿದೆ. ಕೋಪ ಬಂದಿದೆ ಅಥವಾ ಆತಂಕವಾಗಿದೆ ಎಂದರೆ ಉಸಿರಾಟ ವಿಪರೀತ ಏರಿಳಿಯುತ್ತಿರುತ್ತದೆ. ಬೆವರುತ್ತಿದೆ. ಕೈ ಕಾಲುಗಳು ನಡುಗುತ್ತವೆ. ಏನು ಮಾಡಬೇಕೆಂದು ತೋಚುವುದಿಲ್ಲ. ಹೀಗೇಕಾಗುತ್ತದೆ?
ನಮಗೆ ಇಷ್ಟವಾದವರೊಬ್ಬರು ಯಾವುದೋ ಊರಿನಿಂದ ಬರುತ್ತಿದ್ದಾರೆ. ನಮ್ಮ ಪ್ರೀತಿಪಾತ್ರರು ನಮಗಾಗಿ ಬರುತ್ತಾರೆ. ಯಾವುದೋ ಹಬ್ಬ. ಕೆಲಸಕ್ಕೆ ರಜೆ ಹಾಕಿ ಎಲ್ಲರೊಟ್ಟಿಗೆ ಮನೆಯಲ್ಲಿರುತ್ತೇವೆ. ಉತ್ಸಾಹ ಮತ್ತು ಆನಂದವಿರುವಾಗ ಮೈ ಮನಸ್ಸು ಪ್ರಫುಲ್ಲವಾಗಿರುತ್ತದೆ. ಇಷ್ಟಪಟ್ಟಿರುವ ಹೊಸ ಬಟ್ಟೆಯೊಂದನ್ನು ಹಾಕಿಕೊಂಡಾಗ ನಮ್ಮಲ್ಲಿ ಉಂಟಾಗುವ ಹುರುಪನ್ನು ಗಮನಿಸಿ.
ಅಂದು ಹೆಚ್ಚು ಕೆಲಸ ಮಾಡಿದರೂ, ಹೆಚ್ಚು ಹೆಚ್ಚು ಓಡಾಡಿದರೂ ಆಯಾಸವಿಲ್ಲ. ಅಂದೇನೋ ಹೊಸಬಲ. ಅದೆಲ್ಲೆಂದ ಬರುವುದು?
ಕೋಪ ಬರುವುದು, ಬೇಜಾರಾಗುವುದು, ಸಂತೋಷವಾಗುವುದು, ಭಯವಾಗುವುದು, ಆತಂಕವಾಗುವುದು; ಇವೆಲ್ಲವೂ ಮನಸ್ಸಿಗೆ ಮತ್ತು ಭಾವನೆಗಳಿಗೆ ಸಂಬಂಧಪಟ್ಟಿರುವುದು. ಆದರೆ ಅದರ ಪರಿಣಾಮವು ದೇಹದ ಮೇಲೂ ಆಗುತ್ತಿರುತ್ತದೆ. ಮನಸ್ಸಿನ ಅಧೀನ ದೇಹವೋ? ಅಥವಾ ದೇಹದ ಭಾಗವು ಮನಸ್ಸಿನದೋ? ಹೇಗಾದರೂ ಆಲೋಚಿಸಿ.
ಆದರೆ ಒಂದು ವಿಷಯ ನಿಜ. ಮನಸ್ಸು ಸಂತೋಷಗೊಂಡಾಗ ದೇಹದಲ್ಲಿ ಕೆಲವು ಬಗೆಯ ರಸಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗೆಯೇ ಖೇದಗೊಂಡಾಗ, ದುಃಖಿತರಾದಾಗ, ಆತಂಕಗೊಂಡಾಗ, ಕೋಪಗೊಂಡಾಗಲೂ ಹಾಗೆಯೇ ಕೆಲವು ಬಗೆಯ ರಸಗಳು ಉತ್ಪತ್ತಿಯಾಗುತ್ತದೆ. ಹಾಗೆ ಉತ್ಪತ್ತಿಯಾದ ರಸಗಳ ರಾಸಾಯನಿಕ ಕ್ರಿಯೆಗಳು ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ರಸಗಳು ಹೆಚ್ಚುಹೆಚ್ಚಾಗಿ ಸ್ರವಿಸುತ್ತಿದ್ದರೆ, ರಾಸಾಯನಿಕ ಕ್ರಿಯೆಯು ತೀವ್ರವಾದರೆ ಸಹಜವಾಗಿ ದೇಹದ ಮೇಲೆಯೂ ಪರಿಣಾಮವನ್ನು ಬೀರುತ್ತದೆ.
ಆತಂಕ, ಉದ್ವೇಗ, ಉದ್ರೇಕಗಳು ಹೃದಯದ ಬಡಿತವನ್ನು ಏರಿಸುತ್ತದೆ. ಸಿಕ್ಕಾಪಟ್ಟೆ ವೇಗವಾಗಿ ಹೊಡೆದುಕೊಳ್ಳಲು ಆರಂಭಿಸುತ್ತದೆ. ರಕ್ತದ ಒತ್ತಡ ಏರುತ್ತದೆ. ರಕ್ತ ಸಂಚಲನ ವೇಗವಾಗುತ್ತದೆ. ವಾಕರಿಕೆ ಬರುವುದು, ಕೆಲವೊಮ್ಮೆ ವಾಂತಿಯಾಗುವುದೂ ಉಂಟು. ನಡುಕ, ಬೆವರುವಿಕೆ, ಬಾಯಿ ಒಣಗುವುದು, ಎದೆಯಲ್ಲಿ ನೋವು, ತಲೆ ನೋವು, ಹೊಟ್ಟೆಯಲ್ಲಿ ಹಿಂಡಿದಂತೆ ನೋವು ಮತ್ತು ಉಸಿರಾಟದಲ್ಲಿ ವಿಪರೀತವಾಗಿ ಏರಿಳಿತ.
ಮೆದುಳು ಆತಂಕವನ್ನು ಗ್ರಹಿಸಿ ಅಥವಾ ಉದ್ವೇಗಗೊಂಡು ದೇಹದ ಇತರ ಭಾಗಗಳಿಗೆ ತನ್ನ ಆತಂಕದ ಸಂದೇಶಗಳನ್ನು ಕಳುಹಿಸುತ್ತದೆ. ಅದರಂತೆ ದೇಹದ ಇತರ ಭಾಗಗಳೂ ಕೂಡಾ ವರ್ತಿಸುತ್ತವೆ. ಈ ಮನೋದೈಹಿಕ ವ್ಯತ್ಯಾಸವು ಬಹಳಷ್ಟು ಸಲ ಸಾಂದರ್ಭಿಕವಾಗಿ ಎದುರಿಸುವ ಸನ್ನಿವೇಶಕ್ಕೆ ಅನುಗುಣವಾಗಿ ಇರುತ್ತದೆ.
ಆಗ ಬರುವ ಶಾರೀರಿಕ ಸಮಸ್ಯೆ ಸನ್ನಿವೇಶವು ಬದಲಾಗುತ್ತಿದ್ದಂತೆ, ವಾತಾವರಣವು ತಿಳಿಯಾಗುತ್ತಿದ್ದಂತೆ ಬಂದಂತೆಯೇ ಹೊರಟೂ ಹೋಗುತ್ತದೆ. ಆದರೆ, ಕೆಲವರಿಗೆ ಕೋಪಗೊಳ್ಳುವುದು ಅಥವಾ ಆತಂಕಗೊಳ್ಳುವುದು, ಖಿನ್ನತೆಗೆ ಒಳಗಾಗುವುದು, ನಕಾರಾತ್ಮಕವಾಗಿಯೇ ಚಿಂತಿಸುವುದು, ಏನಾಗುತ್ತದೋ, ಏನನ್ನು ಎದುರಿಸಬೇಕೋ ಎಂದು ಭಯದಲ್ಲಿಯೇ ಇರುವುದು ವ್ಯಕ್ತಿತ್ವದ ಭಾಗವಾಗಿಟ್ಟಿರುತ್ತದೆ.
ಆಗ ಅವರು ಅವರ ರಕ್ತದೊತ್ತಡವನ್ನು ಸದಾ ಹೊಂದುತ್ತಿರುತ್ತಾರೆ. ಯಾವಾಗಲೂ ಏರಿಳಿತಗಳಾಗುತ್ತಿರುತ್ತದೆ. ಇದರಿಂದ ರಕ್ತದೊತ್ತಡದಿಂದ ಉಂಟಾಗುವ ರೋಗಗಳನ್ನು ಬಳುವಳಿಯಾಗಿ ಪಡೆಯುತ್ತಾರೆ. ಮೆದುಳಿಗೆ ಮತ್ತು ಹೃದಯಕ್ಕೆ ಸಂಬಂಧಪಟ್ಟಂತಹ ತೊಂದರೆಗಳನ್ನು ಪರಿಣಾಮಗಳಾಗಿ ನೋಡಬೇಕಾಗುತ್ತದೆ.
ಕೆಲವರು ಹೇಳುತ್ತಿರುತ್ತಾರೆ, ಅವರಿಗೆ ಬ್ಲಡ್ ಪ್ರೆಷರ್ ಇದೆ ಅದಕ್ಕೆ ಹೆಚ್ಚು ಕೋಪ ಎಂದು. ಆದರೆ ಅದು ಹೀಗೂ ಇರಬಹುದು. ಅವರಿಗೆ ಕೋಪಗೊಳ್ಳುವುದು, ಆತಂಕಗೊಳ್ಳುವುದು ಸತತವಾದ ಅಭ್ಯಾಸವಾಗಿವುದರಿಂದ ರಕ್ತದೊತ್ತಡವು ಖಾಯಿಲೆಯಾಗಿ ಪರಿಣಮಿಸಿದೆ ಎಂದು.
ಏನೇ ಆಗಲಿ, ವಂಶವಾಹಿನಿಯಿಂದ, ಬೇರೆ ಕಾರಣಗಳಿಂದ ಬರುವ ಕಾಯಿಲೆಗಳನ್ನೂ ಕೂಡಾ ಮನೋಭಾವನೆಗಳ ಮತ್ತು ವರ್ತನೆಗಳ ಸರಿಯಾದ ನಿಯಂತ್ರಣ ಮತ್ತು ತರಬೇತಿಯಿಂದ ವಾಸಿ ಮಾಡಲಾಗದಿದ್ದರೂ ಉಲ್ಬಣಗೊಳ್ಳದಿರುವಂತೆ ನೋಡಿಕೊಳ್ಳಬಹುದು.
ಮನೋದೈಹಿಕ ಸಮಸ್ಯೆಗಳು
ಕೌಟುಂಬಿಕವಾಗಿ, ವೃತ್ತಿಯಲ್ಲಿ, ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅದೆಷ್ಟೇ ಒತ್ತಡಗಳಿದ್ದರೂ, ಆತಂಕಗಳಿದ್ದರೂ ಅವುಗಳನ್ನು ನೋಡುವ ದೃಷ್ಟಿ ಮತ್ತು ಅವುಗಳೊಂದಿಗೆ ಕೆಲಸ ಮಾಡುವ ಮುಕ್ತ ಮನಸ್ಥಿತಿಯನ್ನು ಹೊಂದಬೇಕು. ಆಗ ಅವು ರೋಗಗಳಾಗಿ ತಿರುಗುವುದಿಲ್ಲ. ಹೊರಗಿನ ಕೆಲಸಗಳು ಎಷ್ಟೇ ಒತ್ತಡಗಳನ್ನು ಹೇರಿದರೂ ಮನಸ್ಸಿನ ಒತ್ತಡಕ್ಕೆ ಬಲಿಯಾಗಲೇಬಾರದು. ಇದನ್ನು ಸ್ಪಷ್ಟವಾಗಿ ತಿಳಿಯೋಣ.
ಮನಸ್ಸಿನ ಸ್ಥಿತ್ಯಂತರಗಳ ನಿರೋಧಕ ಶಕ್ತಿಯು ಶರೀರದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ದುರ್ಬಲ ಮನಸ್ಸಿನವರಿಗೆ ರೋಗ ನಿರೋಧಕ ಶಕ್ತಿಯೂ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಿಂದೆ ಮುಂದೆ ನೋಡುತ್ತದೆ. ಖಿನ್ನತೆಗೊಳಗಾಗುವ ಅಥವಾ ಆತಂಕಕ್ಕೊಳಗಾಗುವ ರೂಢಿಯವರಿಗೆ ಸರಿಯಾಗಿ ಊಟ ಸೇರುವುದಿಲ್ಲ, ನಿದ್ದೆ ಬರುವುದಿಲ್ಲ.
ಸರಿ, ಹೊತ್ತು ಹೊತ್ತಿಗೆ ಸರಿಯಾಗಿ ಆಹಾರ ತೆಗೆದುಕೊಳ್ಳದೇ ಮತ್ತು ನಿದ್ದೆ ಮಾಡದೇ ಇರುವುದರಿಂದ ಆಗುವಂತಹ ಸಮಸ್ಯೆಗಳಿಗೆ ಅದು ಆಹ್ವಾನ ಕೊಟ್ಟಂತಾಗುತ್ತದೆ. ಈ ರೀತಿ ಮನಸ್ಸಿನ ಸ್ಥಿತ್ಯಂತರದ ಕಾರಣಗಳಿಂದ ದೇಹದ ಮೇಲೆ ಉಂಟಾಗುವ ಪರಿಣಾಮಗಳಿಗೆ ಮನೋದೈಹಿಕ ಸಮಸ್ಯೆಗಳು ಅಥವಾ ಸೈಕೋಸೊಮ್ಯಾಟಿಕ್ ಡಿಸಾರ್ಡರ್ ಎನ್ನುತ್ತಾರೆ.
ಈ ಮನೋದೈಹಿಕ ಸಮಸ್ಯೆಗಳು ಎಗ್ಸಿಮಾ, ಹೊಟ್ಟೆಯ ಹುಣ್ಣುಗಳಿಗೆ, ಹೈಪರ್ ಟೆಂನ್ಶನ್, ಸೋರಿಯಾಸಿಸ್ ಮತ್ತು ಹೃದಯದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಆತಂಕ ಮತ್ತು ಉದ್ವೇಗಗಳನ್ನು ಹೊಂದುವುದರಿಂದ, ಖಿನ್ನತೆಗೆ ಜಾರುವುದರಿಂದ ಅಡ್ರಿನಲ್ ಗ್ರಂಥಿಯಲ್ಲಿ, ಎಪಿನೆಫ್ರಿನ್ ನಲ್ಲಿ ತೀವ್ರಗತಿಯಲ್ಲಿ ಹಾರ್ಮೋನುಗಳ ವ್ಯತ್ಯಯ ಉಂಟಾಗುವುದು.
ಆಗ ಸಹಜವಾಗಿ ಈ ಹಾರ್ಮೋನುಗಳ ವ್ಯತ್ಯಾಸದಿಂದ ಏನು ಶಾರೀರಿಕ ಸಮಸ್ಯೆ ಬರುವುದೋ ಅದನ್ನು ಎದುರಿಸಬೇಕಾಗುವುದು. ಸಾಮಾನ್ಯವಾಗಿ ಕುತ್ತಿಗೆ ನೋವು, ಆಮ್ಲತೆ (ಅಸಿಡಿಟಿ), ಬೆನ್ನು ನೋವು, ಮರೆತುಹೋಗುವುದು, ಪಿತ್ತ ಕೆರಳುವುದು, ಹಠಾತ್ ಕೋಪ ಬರುವುದು ಕೂಡಾ ಮನೋದೈಹಿಕ ಸಮಸ್ಯೆಗಳಾಗಿರುತ್ತವೆ. ಮನೋದೈಹಿಕ ಸಮಸ್ಯೆಗಳಲ್ಲಿ ಮುಖ್ಯವಾಗಿ ಎರಡು ವಿಧವನ್ನು ಗುರುತಿಸಬಹುದು.
ಶರೀರದಲ್ಲಿ ನೋವು, ಆಯಾಸ, ಅಧಿಕವಾಗಿ ನಿದ್ರೆ, ಅಥವಾ ನಿದ್ರೆ ಇಲ್ಲದಿರುವುದು, ಹಸಿವು ಇಲ್ಲದಿರುವುದು, ಆಮ್ಲತೆ (ಅಸಿಡಿಟಿ) ಈ ಬಗೆಯ ಸಮಸ್ಯೆಗಳು ಬರುವುದು ಒಂದಾದರೆ, ನರದೌರ್ಬಲ್ಯ ಸಮಸ್ಯೆಗಳು ಎದುರಾಗುವುದು, ಹೆಂಗಸರಲ್ಲಿ ಋತುಚಕ್ರವು ವ್ಯತ್ಯಾಸಗೊಳ್ಳುವುದು, ಲೈಂಗಿಕತೆಯಲ್ಲಿ ದೌರ್ಬಲ್ಯವನ್ನು ಹೊಂದುವುದು ಇತ್ಯಾದಿಗಳು ಮತ್ತೊಂದು ಬಗೆಯ ಸಮಸ್ಯೆಗಳು.
ಗರ್ಭಿಣಿಯರಾದಾಗಲೂ ಕೂಡಾ ಆ ಬಗೆಯ ಮನೋದೈಹಿಕ ಸಮಸ್ಯೆಗಳನ್ನು ಎದುರಿಸಬಹುದು. ಇದರಿಂದ ವಾಕರಿಕೆ, ಹುಸಿ ಹೆರಿಗೆ ನೋವು, ದೇಹದ ಇತರ ಭಾಗಗಳಲ್ಲಿ ನೋವು; ಇತ್ಯಾದಿಗಳನ್ನು ಕಾಣಬಹುದು.
ಅದೇ ರೀತಿ ಮನೋದೈಹಿಕ ವ್ಯತ್ಯಾಸಗಳು ಇನ್ನೂ ಕೆಲವು ಲಕ್ಷಣಗಳನ್ನು ತೋರುತ್ತವೆ. ಕೆಲವೊಮ್ಮೆ ದಿಢೀರನೆ ಹಾಸಿಗೆ ಹಿಡಿದು ಮಲಗುವಂತೆ ಮಾಡಬಹುದು. ಮೂರ್ಚೆ ಹೋಗುವುದು, ನಿದ್ರೆ ಬರುತ್ತಿರುವಂತೆ ಕಣ್ಣುಗಳು ಭಾರವಾಗಿದ್ದು ಕಣ್ಣೆಳೆಯುತ್ತಿರುವುದು, ಕೆಲವೊಮ್ಮೆ ಕಣ್ಣು ಕಾಣಿಸದೇ ಹೋಗುವುದು. ದೇಹದ ಯಾವುದಾದರೂ ಒಂದೋ, ಎರಡೋ ಭಾಗವನ್ನು ಕಳೆದುಕೊಂಡಂತೆ ಭಾಸವಾಗುವ ರೀತಿಗಳಲ್ಲಿಯೂ ಕಾಣುವುದು.
ಬಯಸಿ ಬರುವ ರೋಗ
ಮನೋದೈಹಿಕ ಸಮಸ್ಯೆಯಿಂದಾಗಿ ಕೆಲವರು ತಮಗೇನೋ ಬಹುದೊಡ್ಡ ರೋಗವೊಂದಿದೆ ಎಂದು ಭಾವಿಸತೊಡಗುತ್ತಾರೆ. ಯಾರಾದರೂ ವೈದ್ಯರ ಬಳಿ ತೋರಿಸಿ ಏನಿಲ್ಲ ಎಂದು ವರದಿ ಬಂದರೂ ಅವರಿಗೆ ಸಮಾಧಾನವಾಗುವುದಿಲ್ಲ. ಮತ್ತೊಬ್ಬ, ಮಗದೊಬ್ಬ ವೈದ್ಯರ ಬಳಿ ಪರೀಕ್ಷೆಗೆ ಒಳಪಡುತ್ತಿರುತ್ತಾರೆ. ನಿಮಗೆ ಏನೂ ಸಮಸ್ಯೆ ಇಲ್ಲವೆಂದರೂ ಅವರು ನಂಬುವುದಿಲ್ಲ.
ವೈದ್ಯರನ್ನು ಬದಲಾಯಿಸುತ್ತಾರೆಯೇ ಹೊರತು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ. ಕೆಲವರಿಗೆ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ. ಅದಕ್ಕೆ ಯಾವ ಕಾರಣವೂ ಇರುವುದಿಲ್ಲ. ಅದನ್ನು ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ಅವರಿಗೆ ಅಲ್ಲಿ ಏನೂ ತಿಳಿಯುದಿಲ್ಲ. ಆದರೆ ಇವರಿಗೆ ಮಾತ್ರ ಬಹುಕಾಲದಿಂದ ಆ ನೋವು ಕಾಣುತ್ತಿರುತ್ತದೆ. ಇದೂ ಕೂಡಾ ಮನೋದೈಹಿಕ ನೋವಿನ ಸಮಸ್ಯೆಯೇ ಆಗಿರುತ್ತದೆ.
ಕೆಲವರು ತಮ್ಮ ಮುಖದಲ್ಲಿ ಅಥವಾ ದೇಹದಲ್ಲಿ ಯಾವುದೋ ನ್ಯೂನ್ಯತೆ ಇದೆ ಎನಿಸುತ್ತಿರುತ್ತದೆ. ಅದಕ್ಕಾಗಿ ಕಾಸೆಮೆಟಿಕ್ ಚಿಕಿತ್ಸೆ ತೆಗೆದುಕೊಳ್ಳುತ್ತಿರುತ್ತಾರೆ. ಕೆಲವರು ಲಘು ಶಸ್ತ್ರ ಚಿಕಿತ್ಸೆಗಳನ್ನೂ ಕೂಡಾ ಕಾಲದಿಂದ ಕಾಲಕ್ಕೆ ಮಾಡಿಸಿಕೊಳ್ಳುತ್ತಿರುತ್ತಾರೆ. ಅದೆಷ್ಟು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡರೂ ಅಥವಾ ಕಾಸ್ಮೆಟಿಕ್ ಚಿಕಿತ್ಸೆಗಳನ್ನು ತೆಗೆದುಕೊಂಡರೂ ಅವರಿಗೆ ತೃಪ್ತಿಯೇ ಇರದಂತೆ ಮನೋರೋಗವಾಗಿ ಪರಿಣಮಿಸಿರುತ್ತದೆ.
ಉದಾಹರಣೆಗೆ ತಮ್ಮ ಮೂಗು ಸೊಟ್ಟ ಎನಿಸುತ್ತಿರುತ್ತದೆ. ತುಟಿಯಲ್ಲೇನೋ ಸ್ವಲ್ಪ ಸಮಸ್ಯೆ ಎನಿಸುತ್ತಿರುತ್ತದೆ. ಕೆನ್ನೆಯ ಮೇಲ್ಭಾಗದಲ್ಲೇನೋ ವಿನ್ಯಾಸ ಸರಿ ಇಲ್ಲ ಎನಿಸುತ್ತಿರುತ್ತದೆ, ಹೀಗೆ ತಮ್ಮ ಶರೀರ ರಚನೆಯ ಬಗ್ಗೆ ಅವರಿಗೆ ಸದಾ ಅತೃಪ್ತಿ. ಕೆಲವು ಸಿನಿಮಾ ಕಲಾವಿದರು, ಫ್ಯಾಷನ್ ಮತ್ತು ಪಾಪ್ ತಾರೆಯರಿಗೆ ಈ ಗೀಳಿತ್ತು. ತಮ್ಮ ಶರೀರದ ಯಾವುದೋ ಒಂದು ಭಾಗವನ್ನು ಒಂದಲ್ಲಾ ಒಂದು ಕಾರಣಕ್ಕೆ ಚಿಕಿತ್ಸೆಗೆ ಒಳಪಡಿಸಿಕೊಳ್ಳುತ್ತಿದ್ದರು. ಅವರಿಗೆ ತಮ್ಮದೇ ಶರೀರದ ಬಗ್ಗೆ ತೃಪ್ತಿಯೇ ಇರುತ್ತಿರಲಿಲ್ಲ.
ಸಾಮಾನ್ಯವಾಗಿ ಮಾನಸಿಕ ಖಿನ್ನತೆ ಮತ್ತು ಅನಿಯಂತ್ರಿತ ಭಾವೋದ್ವೇಗ ಈ ಬಗೆಯ ಮನೋದೈಹಿಕ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. ಒಟ್ಟಾರೆ ಮನಸ್ಥಿತಿಯು ದೇಹದ ಸ್ಥಿತಿಗತಿಗಳ ಮೇಲೆ ನೇರಾನೇರ ಪ್ರಭಾವವನ್ನು ಬೀರುತ್ತದೆ. ಅಂದರೆ ಈ ದೇಹದಲ್ಲಿ ತೊಂದರೆಗಳನ್ನು ಸರಿಪಡಿಸಿಕೊಳ್ಳಬೇಕೆಂದರೆ, ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕೆಂದಾಯಿತು.
ಮನೋದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ
ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ, ರೀತಿಯಿಂದ ರೀತಿಗೆ ಬದಲಾಗುತ್ತಿರುತ್ತದೆ. ಏನೇ ಆಗಲಿ, ಮನೋದೈಹಿಕ ಸಮಸ್ಯೆ ಇದೆ ಎಂಬುದನ್ನು ಗುರುತಿಸಿದ ಮೇಲೆ ವ್ಯಕ್ತಿಯು ಪ್ರಶಾಂತತೆಯನ್ನು ಪಡೆಯುವುದರ ಕಡೆಗೆ ಮೊದಲ ಗಮನ ಹರಿಸಬೇಕು.
ವಾತಾವರಣ ಬದಲಾವಣೆ ಬಹಳ ಉತ್ತಮವಾದದ್ದು.
ಯಾಂತ್ರಿಕವಾಗಿ ಕೆಲಸ ಮಾಡಿಕೊಂಡಿರುವ ಮತ್ತು ಒಂದೇ ಸಮನೆ ಅದೇ ಸ್ಥಳದಲ್ಲಿ ಇರುವ ಮೂಲಕ ಉಂಟಾಗಿರುವ ಏಕತಾನತೆಯನ್ನು ಒಡೆಯಲು ಬೇರೆ ವಾತಾವರಣಕ್ಕೆ ಹೋಗಬೇಕು. ಸ್ಥಳ ಬದಲಾವಣೆಯಾಗಬೇಕು. ಹೆಚ್ಚಿನ ಜನ ಸಂಚಾರವಿರದ, ಗದ್ದಲವಿರದ ಸ್ಥಳಗಳಿಗೆ ಪ್ರವಾಸ ಹೋಗುವುದು, ಅಲ್ಲಿ ಇರುವುದು ಮತ್ತು ತಮ್ಮ ಓದು, ಬರಹ, ಅಥವಾ ಇನ್ನಾವುದೇ ಒಬ್ಬರೇ ಮಾಡಿಕೊಳ್ಳುವ ಕೆಲಸ ಮಾಡಿಕೊಳ್ಳುವುದೆಲ್ಲವೂ ಮನೋದೈಹಿಕ ಸಮಸ್ಯೆಗಳಿಂದ ಪಾರಾಗಲು ಒಳ್ಳೆಯದೇ.
ಸುಂದರ ಮತ್ತು ಗದ್ದಲವಿಲ್ಲದಂತಹ ಸುಮಧುರ ಸಂಗೀತವನ್ನು ಕೇಳಬೇಕು. ಹಿಂಸೆ, ಅತಿ ಮಾನುಷಶಕ್ತಿಯ ಪ್ರದರ್ಶನಗಳಿರದ, ತುಂಬಾ ಉತ್ಪ್ರೇಕ್ಷಿತ ವೈಭವಗಳಿರದ ಸಕಾರಾತ್ಮಕವಾದ ಸಿನಿಮಾಗಳಿಗೆ ಹೋಗಬೇಕು. ನಿತ್ಯವೂ ನಿಯಮಿತವಾಗಿ ವ್ಯಾಯಾಮ, ನೃತ್ಯ ಈ ರೀತಿಯಲ್ಲಿ ದೇಹಕ್ಕೆ, ಮನಸ್ಸಿಗೆ ಮತ್ತು ಹೃದಯಕ್ಕೆ ಹದ ನೀಡಬೇಕು.
ಧಾರ್ಮಿಕತೆಯ ರೂಢಿಯಿದ್ದರೆ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಗಳನ್ನು ಮಾಡಬೇಕು.
ಒಳ್ಳೆಯ ಧನಾತ್ಮಕವಾದ ಕತೆಗಳನ್ನು ಕೇಳಬೇಕು ಅಥವಾ ಓದಬೇಕು.
ನಮ್ಮನ್ನು ನಾವು ಗಮನಿಸಿಕೊಂಡು, ಆತ್ಮಾವಲೋಕನ ಮಾಡಿಕೊಂಡು ನಮ್ಮ ವರ್ತನೆಗಳಲ್ಲಿ ಉದ್ದೇಶಪೂರ್ವಕವಾದಂತಹ ಬದಲಾವಣೆಗಳನ್ನು ತಂದುಕೊಳ್ಳಬೇಕು. ಇತರರಿಗೆ ಕಷ್ಟಗಳಲ್ಲಿ ನೆರವಾಗುವುದು, ಒತ್ತಡ ಮತ್ತು ಖಿನ್ನತೆ ಇರುವಂತವರನ್ನು ಕೂರಿಸಿಕೊಂಡು ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅದರಿಂದ ಹೇಗೆ ಹೊರಗೆ ಬರಬೇಕೆಂಬ ಸಾಧ್ಯತೆಗಳನ್ನು ಅವರಿಗೆ ಅರಿವಾಗುವಂತೆ ತಿಳಿಸಬೇಕು.
ಎಷ್ಟೋ ಸಲ ಈ ರೀತಿ ಇನ್ನೊಬ್ಬರಿಗೆ ಅವರ ಕಷ್ಟದಿಂದ ಹೊರಗೆ ನೆರವಾಗಲು ಹೇಳಿಕೊಡುವಾಗ ನಮ್ಮ ಕಷ್ಟಗಳಿಂದ ನಾವು ಹೊರಗೆ ಬರಲು, ನಮ್ಮ ಒತ್ತಡಗಳಿಂದ ನಾವು ಹಗುರವಾಗಲು ನಮಗೆ ಒಳನೋಟಗಳು, ದಾರಿ ಸಿಗುವುದು. ಮಕ್ಕಳೊಂದಿಗೆ ಆಡುವುದು, ಅವರೊಂದಿಗೆ ಓದುವುದು, ಉದ್ಯಾನವನಗಳಲ್ಲಿ ಓಡಾಡುವುದು ಇವೆಲ್ಲವೂ ಮನೋದೈಹಿಕ ಸಮಸ್ಯೆಗಳಿಗೆ ಚಿಕಿತ್ಸಕ ರೀತಿಯಲ್ಲಿ ಸಹಾಯಕ್ಕೆ ಬರುವುದು.
ಒಟ್ಟಾರೆ ಮನೋಭಾವ, ಏಕಪ್ರಕಾರದ ಯೋಚನೆಗಳು ಮತ್ತು ಮನಸ್ಸಿನ ವಿವಿಧ ಬಗೆಯ ಆಲೋಚನೆಗಳು ಆತಂಕಗಳನ್ನು, ಒತ್ತಡವನ್ನು ಉಂಟುಮಾಡುತ್ತವೆ. ಅವು ದೇಹದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಗಮನಕ್ಕೆ ಬರುವಂತಹ ಆಲೋಚನೆಗಳ ಮನಸ್ಸು ಒಂದಾದರೆ, ನಮ್ಮ ಗಮನಕ್ಕೆ ಬರದೇ ಇರಬಹುದಾದಂತಹ ದೇಹದ ಮನಸ್ಸೊಂದು ಇದೆ. ಅದರಲ್ಲಿಯೂ ಕೂಡಾ ವ್ಯತ್ಯಾಸಗಳಾಗುತ್ತಿರುತ್ತವೆ.
ಇದು ನಾನಾ ರೀತಿಯ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಾಗಿ ಕಾಣುತ್ತವೆ. ಮನೋದೈಹಿಕ ಸಮಸ್ಯೆಗೆ ಎಷ್ಟೋ ಕಾರಣಗಳಿವೆ.
ಕೆಲವು ಜನಕ್ಕೆ ಸುಮ್ಮನೆ ದಿಗಿಲು ಬೀಳುವುದೇ ಒಂದು ಸಮಸ್ಯೆ. ಸಾಮಾಜಿಕ ಆತಂಕದ ಸಮಸ್ಯೆ, ವಿವಿಧ ರೀತಿಯ ಭಯಗಳು, ಏನೇನೋ ಕಾಣುವುದು, ಆರೋಗ್ಯದ ಬಗ್ಗೆಯೇ ಆತಂಕ, ಭಾವನೆಗಳ ವ್ಯತ್ಯಾಸಗಳು, ನಿದ್ರಾಹೀನತೆ, ಒತ್ತಡಗಳು, ಬಾಲ್ಯದ ಆತಂಕಗಳು, ಮದುವೆಯಾಗಿ ಹೊಸ ಮನೆಗೆ ಹೋಗುವ ಹೆಣ್ಣುಮಗುವಿನ ಆತಂಕ ಮತ್ತು ಒತ್ತಡಗಳು, ಸಂಬಂಧಗಳು ಮುರಿದುಹೋಗುತ್ತವೆ ಎಂಬ ಆತಂಕ, ಯಾರನ್ನಾದರೂ ಪ್ರೀತಿಪಾತ್ರರ ಕಳೆದುಕೊಂಡಿರುವ ನೋವು, ವ್ಯಾಪಾರ ವ್ಯವಹಾರ ರಾಜಕೀಯ ಅಥವಾ ಯಾವುದೇ ಉದ್ದಿಮೆಯಲ್ಲಿ ಅಪಾರವಾದ ನಷ್ಟ, ಕಿರುಕುಳ ನೀಡುವ ಸಾಲಗಾರರು, ಲೈಂಗಿಕ ಸಮಸ್ಯೆ, ಹೆಂಗಸರಲ್ಲಿ ಋತು ಸಮಸ್ಯೆ, ಸಾಮಾಜಿಕ ಅಥವಾ ಧಾರ್ಮಿಕತೆಯ ಕಾರಣದಿಂದ ಹತ್ತಿಕ್ಕಲಾಗುವ ಎಷ್ಟೋ ಮನೋಬಯಕೆಗಳು ಮತ್ತುಅವುಗಳಿಂದಾಗುವ ಒತ್ತಡಗಳು; ಹೀಗೆ ಯಾವುದ್ಯಾವುದೋ ಕಾರಣಗಳು ಮನೋದೈಹಿಕ ಸಮಸ್ಯೆಗೆ ಕಾರಣವಾಗುತ್ತವೆ.
ಒಟ್ಟಾರೆ ಕಣ್ಣು, ಕಿವಿ, ಮೂಗುಗಳಿಗೆ ಏನೋ ಸಮಸ್ಯೆ ಬಂದಂತೆ ಮನಸ್ಸಿಗೂ ಸಮಸ್ಯೆ ಬರುತ್ತಿರುತ್ತದೆ. ಹಾಗಾಗಿ ನಮ್ಮ ಮನಸ್ಸಿನ ಸಮಸ್ಯೆಗೆ, ಮೆದುಳಿನ ಸಮಸ್ಯೆಗೆ ಅಥವಾ ನರಗಳ ಸಮಸ್ಯೆಗೆ ಸಂಕೋಚಪಡುವುದು ಬೇಡ. ಮನಸಿನ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಎಷ್ಟೋ ಸಮಸ್ಯೆಗಳು ಇಲ್ಲವಾಗುತ್ತವೆ. ದೈಹಿಕ ಸಮಸ್ಯೆಗಳೂ ಗುಣ ಹೊಂದುತ್ತವೆ.
ಕೊನೆಯ ಎಲೆ
ವಾಸ್ತವಧಾರವಲ್ಲದೇ ಭ್ರಮಾಧೀನವಾದ ಮನಸ್ಸಿಗೂ ಬದುಕನ್ನು ಕಲ್ಪಿಸಿಕೊಡಲು ಸಾಧ್ಯವಾಗುವುದು. ಅದೊಂದು ತಂತ್ರ. ದ ಲಾಸ್ಟ್ ಲೀಫ್ ಅಂದರೆ ಕೊನೆಯ ಎಲೆ ಎಂಬ ಕತೆ ಇದೆ. ಅದನ್ನು ಬರೆದವರು ಓ ಹೆನ್ರಿ ಎಂಬ ಅಮೇರಿಕೆಯ ಕತೆಗಾರ. ಅದರಲ್ಲಿ ಇಬ್ಬರು ಗೆಳತಿಯರಿರುತ್ತಾರೆ. ಅವರಿಬ್ಬರೂ ಚಿತ್ರಕಲಾವಿದೆಯರು. ಒಂದೇ ಸ್ಟುಡಿಯೋ ಮಾಡಿಕೊಂಡಿರುತ್ತಾರೆ. ಅವರಲ್ಲಿ ಒಬ್ಬಳಿಗೆ ನಿಮೋನಿಯಾ ರೋಗ ಬರುತ್ತದೆ.
ಅವಳಿಗೆ ಔಷಧೋಪಚಾರ ಆಗುತ್ತಿದ್ದರೂ, ಅವಳು ಮಲಗಿದ್ದ ಮಂಚದಿಂದ ಹೊರಗೆ ಒಂದು ಮರವನ್ನು ನೋಡುತ್ತಿರುತ್ತಾಳೆ. ಶಿಶಿರ ಕಾಲದಲ್ಲಿ ಆ ಮರದ ಎಲೆಗಳೆಲ್ಲಾ ದಿನದಿನವೂ ಉದುರುತ್ತಿರುತ್ತವೆ. ಅದನ್ನು ನೋಡುತ್ತಿದ್ದ ಅವಳಿಗೆ ಆ ಮರದ ಎಲೆಗಳೆಲ್ಲ ಉದುರುತ್ತಿರುವ ಹಾಗೆ ತನ್ನ ಬದುಕಿನ ದಿನಗಳೂ ಮುಗಿದುಹೋಗುತ್ತಿವೆ. ಆ ಮರದ ಕೊನೆಯ ಎಲೆ ಉದುರಿದ ಮೇಲೆ ತಾನೂ ಇರುವುದಿಲ್ಲ ಎಂದು ಹೇಳುತ್ತಿರುತ್ತಾಳೆ.
ದಿನವೂ ಅದನ್ನು ಕೇಳುತ್ತಿದ್ದ ಗೆಳತಿಯು ನಿಮೋನಿಯಾ ಬಂದಿರುವ ಗೆಳತಿಯ ಹುಚ್ಚು ಕಲ್ಪನೆಯನ್ನು ಒಪ್ಪದೇ ಸಕಾರಾತ್ಮಕವಾಗಿ ಅವಳಿಗೆ ಯೋಚಿಸಲು ಹಚ್ಚಲು ಯತ್ನಿಸುತ್ತಿರುತ್ತಾಳೆ. ಆದರೆ ಆಗುವುದಿಲ್ಲ. ನಿಮೋನಿಯಾದ ಹುಡುಗಿ ತನ್ನ ಕಲ್ಪನೆಯನ್ನೇ ಬಲಗೊಳಿಸಿಕೊಳ್ಳುತ್ತಿರುತ್ತಾಳೆ. ಒಂದು ದಿನ ಕಿಟಕಿ ತೆರೆದಾಗ ಮರದ ಎಲ್ಲಾ ಎಲೆಗಳು ಉದುರಿಬಿದ್ದಿದ್ದರೂ ಒಂದೇ ಒಂದು ಎಲೆ, ಕೊನೆಯ ಎಲೆ ಪಕ್ಕದ ಕಟ್ಟಡದ ಗೋಡೆಯೊಂದಕ್ಕೆ ತಗುಲಿದ್ದು, ಅದು ಉದುರಿರುವುದೇ ಇಲ್ಲ.
ಅದು ಉದುರುವ ಹೊತ್ತಿಗೆ ತಾನೂ ಸಾಯುತ್ತೇನೆ ಎಂದು ಅವಳ ನಂಬಿಕೆ. ಆದರೆ ಎಷ್ಟೇ ದಿನಗಳು ಕಳೆದರೂ ಅದು ಉದುರುವುದೇ ಇಲ್ಲ. ತಾನು ಬದುಕುತ್ತೇನೆ. ಆ ಎಲೆಯು ಅದನ್ನು ಸೂಚಿಸಲೆಂದೇ ಉದುರುತ್ತಿಲ್ಲ ಎಂದು ಅವಳಿಗೆ ಅನಿಸುತ್ತದೆ. ಅವಳು ಬದುಕುತ್ತಾಳೆ. ಆರೋಗ್ಯಕ್ಕೆ ಮರಳುತ್ತಾಳೆ.
ಆ ಎಲೆ ಉದುರುವುದೇ ಇಲ್ಲ. ಏಕೆಂದರೆ, ಈ ಹುಡುಗಿಯ ಹುಚ್ಚು ಭ್ರಮೆಯನ್ನು ಗೆಳತಿಯಿಂದ ತಿಳಿದ ಮುದುಕ ಕಲಾವಿದನೊಬ್ಬ ಮರದ ಕೊಂಬೆ ಮತ್ತು ಕಟ್ಟಡದ ಗೋಡೆ ಸಂಧಿಸುವಂತಹ ಎಡೆಯಲ್ಲಿ ಒಂದು ಎಲೆಯ ಚಿತ್ರವನ್ನು ಬಿಡಿಸಿರುತ್ತಾನೆ. ದೂರದಿಂದ ನೋಡಲು ಕೊಂಬೆಗೆ ಅಂಟಿಕೊಂಡಿರುವ, ಕಟ್ಟಡದ ಗೋಡೆಗೆ ತಗುಲಿಕೊಂಡಿರುವ ಹಳದಿ ಬಣ್ಣಕ್ಕೆ ತಿರುಗಿರುವ ಎಲೆಯಂತೆ ಕಾಣುತ್ತಿರುತ್ತದೆ. ಅದು ಅವಳ ಭ್ರಮೆಯ ಪ್ರಕಾರವೇ ಅವಳ ಜೀವವನ್ನು ಉಳಿಸಿರುತ್ತದೆ.
ಆದರೆ ದುರದೃಷ್ಟವಶಾತ್, ಆ ಕೊನೆಯ ಎಲೆಯ ಮಾಸ್ಟರ್ ಪೀಸ್ ಮಾಡಿದ್ದ ವೃದ್ಧ ಮತ್ತು ಕುಡುಕ ಕಲಾವಿದ ಮಾಗಿಯ ಚಳಿಯ ರಾತ್ರಿಯಲ್ಲಿ ಚಿತ್ರವನ್ನು ಬರೆದು ತಾನು ಚಳಿಗೆ ಸತ್ತಿರುತ್ತಾನೆ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಿದ್ಧಾಂತ ಮತ್ತು ಪತ್ರಿಕೋದ್ಯಮ

- ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್
ಇದು ಸುಮಾರು 2002-03ರ ಸಂದರ್ಭ. ಶಿವಮೊಗ್ಗದಲ್ಲಿ ನಾವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕಾಲ. ಒಬ್ಬ ಪತ್ರಕರ್ತ ಮಿತ್ರರೊಂದಿಗೆ ಹೀಗೇ ಚರ್ಚೆ ನಡೆಯುತ್ತಿತ್ತು. ಅವರು ಪತ್ರಿಕೋದ್ಯಮದ ನ್ಯೂಟ್ರಾಲಿಟಿ ಕುರಿತು ಮಾತಾಡುತ್ತಾ, ʼನಾವು ಪತ್ರಕರ್ತರು ನಿಮ್ಮ ರೀತಿ ಯೋಚನೆ ಮಾಡೋದಕ್ಕೆ ಆಗಲ್ಲ. ನಾವು ಯಾವತ್ತೂ ಯಾವುದೇ ಸಿದ್ಧಾಂತಕ್ಕೆ ವಾಲಿಕೊಳ್ಳದೇ ತಟಸ್ಥತೆ ಕಾಪಾಡಬೇಕಾಗುತ್ತದೆʼ ಎಂದು ಹೇಳಿದರು. ʼಅವರ ಜೊತೆ ನಾನು ವಾದಿಸಿದೆ.
ಸರ್, ಸುಳ್ಳನ್ನೇ ಬಂಡವಾಳ ಮಾಡಿಕೊಂಡ ಸಿದ್ಧಾಂತಗಳು ರಾರಾಜಿಸುವಾಗ ಸತ್ಯವನ್ನು ಹುಡುಕಲು ಸಹ ಸಿದ್ಧಾಂತದ ಸಹಾಯ ಬೇಕಾಗುತ್ತದೆ. ಯಾವ ವ್ಯಕ್ತಿಯೂ ಸಿದ್ಧಾಂತದ ಹೊರಗಾಗಿ ಇರಲು ಸಾಧ್ಯವಿಲ್ಲ. ನನಗೆ ಸಿದ್ದಾಂತವೇ ಇಲ್ಲ ಎನ್ನುವ ವ್ಯಕ್ತಿಯನ್ನು ಕೂಡಾ ಅವನಿಗೆ ತಿಳಿದೋ ತಿಳಿಯದೆಯೋ ಒಂದಲ್ಲಾ ಒಂದು ಸಿದ್ದಾಂತ ಇಲ್ಲವೇ ಹಲವು ಸಿದ್ಧಾಂತಗಳು ನಿರ್ದೇಶಿಸುತ್ತಿರುತ್ತವಲ್ಲ.. ʼ ಎಂದ ನನ್ನ ಮಾತಿಗೆ ನಮಗೆ ಪತ್ರಕರ್ತರಿಗೆ ಹಾಗೆ ಯೋಚಿಸಲು ಬರುವುದಿಲ್ಲ. ನೀವು ಎಡ ಪಂಥ ಅಂತೀರಿ, ಅವರು ಬಲಪಂಥ ಅಂತಾರೆ, ನಾವು ಇವೆರಡರ ನಡುವೆ ಸತ್ಯ ಹುಡುಕ್ತೀವಿʼ ಎಂದೆಲ್ಲಾ ಹೇಳಿದರು. ಕೊನೆಗೆ ಯಾರೂ ರಾಜಿಯಾಗಲಿಲ್ಲ.
ಇದಾಗಿ ಹದಿನೈದು ವರ್ಷಗಳ ನಂತರ, 2019ರಲ್ಲಿ ಅದೇ ಪತ್ರಕರ್ತ ಸ್ನೇಹಿತರು ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಅವರು ನರೇಂದ್ರ ಮೋದಿ ಸರ್ಕಾರದ ಆರ್ಥಿಕ ವಂಚನೆಗಳನ್ನು ಅದ್ಭುತ ರೀತಿಯಲ್ಲಿ ಅಂಕಿಅಂಶಗಳ ಸಮೇತ ಬಯಲು ಮಾಡುತ್ತಿದ್ದುದು ಕಂಡು ನನಗೆ ಅಚ್ಚರಿ ಮತ್ತು ಸಂತೋಷವಾಗಿತ್ತು. ಅಂದು ಅವರು ನಿಜಕ್ಕೂ ಸತ್ಯದ ಪರವಾಗಿದ್ದರು. ಆದರೆ ಅವರ ಬರೆಹಗಳನ್ನು ಯಾರಾದರೂ ಬಲಪಂಥೀಯರು ಓದಿದರೆ ಅವರಿಗೆ ಖಂಡಿತಾ ಇವರು ʼಎಡಪಂಥೀಯ ಸಿದ್ಧಾಂತಿʼ, ʼನಗರ ನಕ್ಸಲ್ʼ ಎಂದೆಲ್ಲಾ ಸುಲಭವಾಗಿ ಹಣೆಪಟ್ಟಿ ಕಟ್ಟಬಹುದಿತ್ತು. ಆದರೆ ಆ ಪತ್ರಕರ್ತ ಸ್ನೇಹಿತರು ನಿಜಕ್ಕೂ ಈ ದೇಶದ ಭವಿಷ್ಯದ ಬಗ್ಗೆ ತುಂಬಾ ಆತಂಕಗೊಂಡು, ಕಾಳಜಿಯಿಂದ ಕೆಲಸ ಮಾಡುತ್ತಿದ್ದರು. ಕೊನೆಗೆ ಅವರಿಗೂ ಸಹ ಅವರು ಹಿಂದೆ ಹೇಳಿದ್ದ ರೀತಿಯಲ್ಲಿ ತಟಸ್ಥವಾಗಿ ಪತ್ರಿಕೋದ್ಯಮ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಾಗಿರಬಹುದು ಎಂದುಕೊಂಡೆ. ಹೌದು ಪತ್ರಕತ್ರರಾದವರು ಮಾಡಲು ಇರುವ ಬಹಳ ಕೆಲಸಗಳ ನಡುವೆಯೂ ಅವರು ಅದ್ಯತೆಯನ್ನು ಗುರುತಿಸಿಕೊಂಡಿದ್ದರು.
ಪತ್ರಿಕೋದ್ಯಮದ ಬಗ್ಗೆ ಮಾತಾಡುವಾಗ ನಾವು ಒಂದು ಪ್ರಾಥಮಿಕ ಸಂಗತಿಯನ್ನು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಪತ್ರಿಕೋದ್ಯಮ ಆರಂಭವಾದ ಸಂದರ್ಭದಲ್ಲಿ ಯಾವೆಲ್ಲಾ ಭಾರತೀಯರು ಪತ್ರಿಕೆಗಳನ್ನು ಹೊರತರುತ್ತಿದ್ದರೋ ಅವರೆಲ್ಲರೂ ಕಟು ಸಿದ್ಧಾಂತಿಗಳಾಗಿದ್ದರು. ಸಾಮ್ರಾಜ್ಯವಾದದ ವಿರುದ್ಧದ ಸಿದ್ದಾಂತ ಅವರೆಲ್ಲರನ್ನು ಮುನ್ನಡೆಸುತ್ತಿತ್ತು. ಬಹುತೇಕ ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರು ಇಲ್ಲವೇ ಸ್ವಾಭಿಮಾನ ಚಳವಳಿಯ ಹೋರಾಟಗಾರರು, ನಾಯಕರು ಆಗಿದ್ದರು. ಅಂತಹ ಸ್ಪಷ್ಟ ಸೈದ್ಧಾಂತಿಕ ಬುನಾದಿಯಿಟ್ಟುಕೊಂಡು ಅವರೆಲ್ಲಾ ಬ್ರಿಟಿಷರ ವಿರುದ್ಧ ಪತ್ರಿಕೋದ್ಯಮ ನಡೆಸದಿದ್ದರೆ ಈ ದೇಶದ ಪತ್ರಿಕೋದ್ಯಮದ ಇತಿಹಾಸ ಅತ್ಯಂತ ಟೊಳ್ಳಾದ, ಬೂಸಾ ಇತಿಹಾಸವಾಗುತ್ತಿತ್ತು.
ಕೆಲ ಬ್ರಿಟಿಷ್ ಪತ್ರಕರ್ತರು ಹೇಗೆ ಬ್ರಿಟಿಷ್ ಅಧಿಕಾರಿಗಳ ಬೆಡ್ ರೂಮ್ ಸ್ಟೋರಿಗಳನ್ನು ಚಪ್ಪರಿಸಿಕೊಂಡು ಅದನ್ನೇ ಪತ್ರಿಕೋದ್ಯಮ ಎಂದು ಬೀಗುತ್ತಿದ್ದರೋ ಅಷ್ಟರಲ್ಲೇ ಭಾರತೀಯ ಪತ್ರಿಕೋದ್ಯಮ ಉಳಿದುಬಿಡುತ್ತಿತ್ತು. ಆದರೆ ಹೀಗೆ ಆಗಲು ಬಿಡದೇ ಉದಾತ್ತ ಧ್ಯೇಯಗಳ ಮೂಲಕ ದೇಶದ ಪತ್ರಿಕೋದ್ಯಮ ಬೆಳೆಸಿದ 19ನೆಯ ಶತಮಾನದ ಅಂತಹ ಧೀಮಂತ ಪತ್ರಕರ್ತರು ಹಲವರು. ಸುರೇಂದ್ರ ನಾಥ್ ಬ್ಯಾನರ್ಜಿ (ಬೆಂಗಾಲಿ ಪತ್ರಿಕೆ- 1879) ಪತ್ರಕರ್ತರಾಗಿ ಕೆಲಸ ಮಾಡುತ್ತಲೇ ಸತ್ಯ ಹೇಳಿದ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಅವರನ್ನು ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯ ಅಡಿ ಜೈಲಿಗಟ್ಟಿತ್ತು. ಸಂವಾದ ಕೌಮುದಿ ಎಂಬ ಪತ್ರಿಕೆ ನಡೆಸುತ್ತಿದ್ದ ರಾಜಾರಾಮ ಮೋಹನ್ ರಾಯ್ ಒಬ್ಬ ಸ್ಪಷ್ಟ ವಿಚಾರವಾದಿಯಾಗಿದ್ದರು.
ಅವರು ಈ ದೇಶದ ಅನಿಷ್ಟಗಳ ಕುರಿತೇ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾ ಹೋದರು. ಇದೇ ಕೆಲಸವನ್ನು ಮಹಾರಾಷ್ಟ್ರದಲ್ಲಿ ಮರಾಠಿ ಪತ್ರಿಕೆ ಆರಂಭಿಸಿದ ಜಂಬೇಕರ್ ಮಾಡಿದರು, ಅವರು ತಮ್ಮ ದರ್ಪಣ್ ಪತ್ರಿಕೆಯ ಮೂಲಕ ಸಾಮಾಜಿಕ ಅನಿಷ್ಟಗಳು ಕುರಿತು ಜಾಗೃತಿ ಮೂಡಿಸಿದರು- ಇವರನ್ನು ಮರಾಠಿ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗುತ್ತದೆ. ಬಂಗಾಳದಲ್ಲಿ ಹರೀಶ್ಚಂದ್ರ ರಾಯ್ ಎಂಬುವವರು ಬಂಗದರ್ಶನ್ ಎಂಬ ಪತ್ರಿಕೆ ತಂದರು; ಗುಜರಾತಿಯಲ್ಲಿ ʼಬಾಂಬೆ ಸಮಾಚಾರ್ʼ ಪತ್ರಿಕೆ ಆರಂಭಿಸಿದ ಫರ್ದುನ್ಜಿ ಮರ್ಜ್ ಬಾನ್ ಎಂಬುವವರು ಸಹ ಪತ್ರಿಕೆಯ ಮೂಲಕ ಸಮಾಜ ಸುಧಾರಣೆಗೆ ಒತ್ತು ಕೊಟ್ಟರು. ಇನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಾಲಗಂಗಾಧರ ತಿಲಕ್ ಕೇಸರಿ ಮತ್ತು ಮರಾಟಾ ಪತ್ರಿಕೆ ಹೊರಡಿಸುತ್ತಿದ್ದರು, ಗಾಂದೀಜಿಯವರು ಆಫ್ರಿಕಾದಲ್ಲಿದ್ದಾಗಲೇ ಇಂಡಿಯನ್ ಒಪಿನಿಯನ್ ಪತ್ರಿಕೆ ನಡೆಸುತ್ತಿದ್ದರೆ, ಭಾರತಕ್ಕೆ ಬಂದ ಮೇಲೆ ಯಂಗ್ ಇಂಡಿಯಾ ಮತ್ತು ಹರಿಜನ್ ಎಂಬ ಪತ್ರಿಕೆಗಳನ್ನು ಹೊರತಂದರು,
ಸುಭಾಷ್ ಚಂದ್ರ ಬೋಸ್ ಅವರು ಸ್ವರಾಜ್ ಪತ್ರಿಕೆಯ ಸಂಪಾದಕರಾಗಿದ್ದರು, ಲಾಲಾ ಲಜಪತ್ ರಾಯ್ ಅವರು ದ ಟ್ರಿಬ್ಯೂನ್ ಎಂಬ ಇಂಗ್ಲಿಷ್ ಪತ್ರಿಕೆ ತಂದರು, ಜೊತೆಗೆ ವಂದೆ ಮಾತರಂ ಎಂಬ ಉರ್ದು ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು- ಇವುಗಳ ಮೂಲಕ ಸ್ವದೇಶಿ ಚಿಂತನೆಯನ್ನು ಅಥವಾ ಸಿದ್ಧಾಂತವನ್ನು ಪ್ರಚುರಪಡಿಸಿದರು, ಹೋಂರೂಲ್ ಚಳವಳಿಯ ಮುಂದಾಳು ಅನಿಬೆಸೆಂಟ್ ಅವರು ನ್ಯೂ ಇಂಡಿಯಾ ಪತ್ರಿಕೆ ತಂದರು, ಇನ್ನು ಮದನ್ ಮೋಹನ್ ಮಾಳವೀಯ ಅವರು ಮೋತಿಲಾಲ್ ನೆಹರೂ ಜೊತೆ ಸೇರಿಕೊಂಡು ದ ಲೀಡರ್ ಎಂಬ ಪತ್ರಿಕೆ ತಂದರೆ, ನಂತರ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯನ್ನೂ ಪುನರುಜ್ಜೀವಗೊಳಿಸಿದರು. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ʼಅಸ್ಪೃಶ್ಯರಿಗೆ ಈ ದೇಶದಲ್ಲಿ ಪತ್ರಿಕೆಯಿಲ್ಲʼ ಎಂದು ಘೋಷಿಸಿ ಮೊದಲಿಗೆ ಶಾಹು ಮಹಾರಾಜರ ಬೆಂಬಲದಿಂದ ಮೂಕನಾಯಕ ಪತ್ರಿಕೆ (1920) ತಂದರು; ನಂತರ ಬಹಿಷ್ಕೃತ ಭಾರತ (1927), ನಂತರ ಸಮತಾ (1928), ನಂತರ ಜನತಾ (1930) ಹಾಗೂ ಪ್ರಬುದ್ಧ ಭಾರತ (1956) ಪತ್ರಿಕೆಗಳನ್ನು ಹೊರಡಿಸಿ ನಿರಂತರವಾಗಿ ಅವುಗಳಲ್ಲಿ ಬರೆಯುತ್ತಾ ತಾವೊಬ್ಬ ಧೀಮಂತ ಪತ್ರಕರ್ತ ಎಂಬುದನ್ನೂ ನಿರೂಪಿಸಿದ್ದರು.
ಇವರನ್ನೆಲ್ಲಾ ಹೊರಗಿಟ್ಟು ಕೇವಲ ಬ್ರಿಟಿಷರು ತಂದ ಬೆಂಗಾಲ್ ಗೆಜೆಟ್ ನಂತವುಗಳನ್ನು ಮಾತ್ರವೇ ಭಾರತದ ಪತ್ರಿಕೋದ್ಯಮದ ಇತಿಹಾಸ ಎಂದು ಹೇಳಲು ಬರುತ್ತದೆಯೇ? ಈ ದೇಶದ ಪತ್ರಿಕೋದ್ಯಮದ ಇತಿಹಾಸದ ಸೈದ್ಧಾಂತಿಕ ಅಡಿಪಾಯ ಅತ್ಯಂತ ಭದ್ರವಾಗಿತ್ತು ಎಂಬುದಕ್ಕೆ ಇವೆಲ್ಲಾ ಸಾಕ್ಷಿಯಲ್ಲವೆ? ಅಲ್ಲಿ ಎಡಬಿಡಂಗಿತನಕ್ಕೆ, ಸೊ ಕಾಲ್ಡ್ ತಟಸ್ಥತೆಗೆ ಯಾವುದೇ ಅವಕಾಶವಿರಲಿಲ್ಲ. ಈ ದೇಶವನ್ನು ಕಾಡುತ್ತಿದ್ದ ಸಾಮ್ರಾಜ್ಯಶಾಹಿ ಮತ್ತು ಬ್ರಾಹ್ಮಣಶಾಹಿ ಶಕ್ತಿಗಳನ್ನು ನೇರವಾಗಿ ಎದುರಿಸಿಯೇ ಭಾರತದ ಪತ್ರಿಕೋದ್ಯಮ ನಡೆದುಕೊಂಡುಬಂದಿದೆ ಎಂಬುದಕ್ಕೆ ಮೇಲಿನ ಉದಾಹರಣೆಗಳೇ ಸಾಕ್ಷಿ.
ಸ್ವಾತಂತ್ರ್ಯಾನಂತರದಲ್ಲಿ, ನಮ್ಮ ಕರ್ನಾಟಕದಲ್ಲೇ ನಾವು ಯಾರನ್ನೆಲ್ಲಾ ಇಂದು ಧೀಮಂತ ಪತ್ರಕರ್ತರೆಂದು ಪರಿಗಣಿಸಿದ್ದೇವೆಯೋ, ಯಾರನ್ನೆಲ್ಲಾ ಆದರ್ಶ ಎಂದು ನೋಡುತ್ತೇವೆಯೋ ಅವರೆಲ್ಲರೂ ಅತ್ಯಂತ ಸ್ಪಷ್ಟ ಮತ್ತು ದೃಢವಾದ ಸಿದ್ಧಾಂತಿಗಳೇ ಆಗಿದ್ದರು ಎಂಬುದನ್ನು ಮರೆಯಬಾರದು. ಕರ್ನಾಟಕದ ಪತ್ರಿಕೋದ್ಯಮಕ್ಕೇ ಹೊಸ ಮೆರಗು ತಂದು ಸಂಚಲನ ಮೂಡಿಸಿದ ಪಿ. ಲಂಕೇಶ್ ಅವರು ಕಡಿಮೆ ಸಿದ್ಧಾಂತಿಯೇ? ಸ್ಪಷ್ಟ ಸೈದ್ಧಾಂತಿಕ ತಳಹದಿಯ ಪತ್ರಿಕೋದ್ಯಮವೇ ಅವರ ಆಕ್ಟಿವಿಸಂ ಆಗಿತ್ತು ಮಾತ್ರವಲ್ಲ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ರಾಜಕೀಯ ಬದಲಾವಣೆಯನ್ನೂ ಮಾಡಲು ಸಾಧ್ಯ ಎಂದು ಪಿ ಲಂಕೇಶ್ ಒಂದು ಮಾದರಿಯನ್ನೇ ಸೃಷ್ಟಿಸಿದರು. ಅದು ಸಾಧ್ಯವಾಗಿದ್ದೇ ಅವರ ಕಟಿಬದ್ಧ ಸೈದ್ಧಾಂತಿಕ ನಿಲುವಿನಿಂದ.
ನಾಡು ಕಂಡ ಮತ್ತೊಬ್ಬ ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಕೂಡಾ ಗಟ್ಟಿ ತಾತ್ವಿಕ ನಿಲುವುಗಳ ಮೂಲಕ ನಾಡಿನ ಜನರನ್ನು ತಲುಪಿದರು. ಇನ್ನು 70-80ರ ದಶಕಗಳಲ್ಲಿ ಭಾರತೀಯ ಪತ್ರಿಕೋದ್ಯಮದ ಧೀಮಂತ ಪರಂಪರೆಯಲ್ಲಿ ಸಾಗಿದ ಹಲವಾರು ಕನ್ನಡ ಪತ್ರಿಕೆಗಳಿದ್ದವು- ಸುದ್ದಿ ಸಂಗಾತಿ, ಶೂದ್ರ, ಪಂಚಮ, ಸಮುದಾಯ, ಸಂಕ್ರಮಣ ಮುಂತಾದ ನಿಯತಕಾಲಿಕೆಗಳು ಕನ್ನಡಿಗರ ಅರಿವಿನ ವಿಸ್ತರಣೆಯಲ್ಲಿ ಕಡಿಮೆ ಕೆಲಸ ಮಾಡಿವೆಯೇ? ಹಾಗಾದರೆ ಇವೆಲ್ಲವೂ ಖಚಿತ ಸೈದ್ದಾಂತಿಕತೆಯಿಂದಲೇ ನಡೆಯಲಿಲ್ಲವೇ?
ಇನ್ನು ಕಳೆದ ಕೆಲವು ದಶಕಗಳಲ್ಲಿ, ಅಗ್ನಿ, ಹಾಯ್ ಬೆಂಗಳೂರು, ಗೌರಿ ಲಂಕೇಶ್ ವಾರಪತ್ರಿಗಳೂ ತಮ್ಮ ಛಾಪು ಮೂಡಿಸಿದವು. ಪಿ ಲಂಕೇಶರ ಸ್ಪೂರ್ತಿಯಲ್ಲೇ ದೊಡ್ಡ ದೊಡ್ಡ ಭ್ರಷ್ಟಾಚಾರ ಪ್ರಕರಣಗಳನ್ನು ಅನಾವರಣಗೊಳಿಸಿದವು. ಇದ್ದುದರಲ್ಲಿ ರವಿ ಬೆಳಗರೆ ಎಡಬಿಡಂಗಿಯಾಗಿ ಕ್ರೈಂ, ಸೆಕ್ಸ್ ಗಳನ್ನ ಅಸ್ತ್ರವಾಗಿಸಿಕೊಂಡು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ಹಳ್ಳ ಹಿಡಿಸಿದರೂ ಹಾಯ್ ಬೆಂಗಳೂರು ಸಹ ಅನೇಕ ಬ್ರಷ್ಟಾಚಾರ ಹಗರಣಗಳನ್ನು ಬಯಲು ಮಾಡಿದ್ದು ಸತ್ಯ.
ಯಾವನ್ನು ನಾವು ದಿನಪತ್ರಿಕೆಗಳು ಅಥವಾ ವೃತ್ತ ಪತ್ರಿಕೆಗಳು ಎನ್ನುತ್ತೇವೆಯೋ ಇವುಗಳ ಆದ್ಯತೆ ದಿನನಿತ್ಯದ ಸುದ್ದಿಗಳನ್ನು ಜನರಿಗೆ ತಲುಪುವುದು ಮಾತ್ರವಾಗಿದ್ದ ಕಾರಣ ಬಹಳ ಪತ್ರಿಕೆಗಳಲ್ಲಿ ಸೈದ್ಧಾಂತಿಕತೆ ದೊಡ್ಡ ವಿಷಯವಾಗಲಿಲ್ಲ. ಆದರೆ ಅಂತಹ ಕಡೆಗಳಲ್ಲಿ ಸಹ ದೊಡ್ಡ ದೊಡ್ಡ ಸಿದ್ಧಾಂತಿಗಳು ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದ್ದರು ಮತ್ತು ತಮ್ಮ ಖಚಿತ ಅಭಿಪ್ರಾಯಗಳನ್ನು ಆ ವೇದಿಕೆಗಳ ಮೂಲಕ ಜನರಿಗೆ ತಲುಪಿಸುತ್ತಾ ಬಂದಿದ್ದರೆಂಬುದನ್ನು ನಾವು ಮರೆಯಕೂಡದು.
ಈಗ ಹೇಳಿ, ನಮ್ಮ ಪತ್ರಿಕೋದ್ಯಮಕ್ಕೆ ಸಿದ್ಧಾಂತ ಬೇಡವೆ, ಪತ್ರಕರ್ತರಾಗಿರುವವರು ಸೈದ್ಧಾಂತಿಕ ಸ್ಪಷ್ಟತೆ ಹೊಂದಿರಬಾರದೆ? ಆಕ್ಟಿವಿಸ್ಟುಗಳು ಪತ್ರಕರ್ತರಾಗುವುದು ಅಪರಾಧವೆ? ಪತ್ರಿಕೋದ್ಯಮ ಆಕ್ಟಿವಿಸಂಗೆ ಪೂರಕವಾಗಿರಬಾರದೆ? ಇಂದು ಬ್ರಾಹ್ಮಣ್ಯದ ದಿಗ್ವಿಜಯ ಮತ್ತೊಮ್ಮೆ ನಿಜವಾಗುವ ಕರಾಳ ಛಾಯೆ ಇಡೀ ದೇಶವನ್ನು ಆವರಿಸಿಕೊಂಡಿರುವಾಗ, ಬಾಬಾಸಾಹೇಬರು ಎಚ್ಚರಿಸಿದ್ದ ಆ ʼಪ್ರತಿಕ್ರಾಂತಿʼ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡ ಎಲ್ಲವನ್ನೂ ನೊಣೆಯುತ್ತಿರುವಾಗ, ಅಪರಾಧವೇ ಅಧಿಕಾರವಾಗಿ ದೇಶದ ಪ್ರಮುಖ ಸಂಸ್ಥೆಗಳೆಲ್ಲವನ್ನೂ ನುಂಗಿ ನೀರುಕುಡಿದು ತಮ್ಮ ಅಂಕೆಯಲ್ಲಿ ತಂದುಕೊಂಡು ಇಡೀ ದೇಶದ ಜನರಿಗೆ ಕರಾಳತೆ ದರ್ಶನ ಮಾಡುತ್ತಾ ಭ್ರಷ್ಟಾಚಾರದ ವ್ಯಾಖ್ಯಾನವನ್ನೇ ತಿರುಗುಮರುಗು ಮಾಡುತ್ತಿರುವಾಗ ಸೊ ಕಾಲ್ಡ್ ತಟಸ್ಥತೆಯ ಬದನೇಕಾಯಿಯನ್ನು ನೆಚ್ಚಿಕೊಳ್ಳದೇ ನಿರ್ಧಾರಿತ ಜನಾಂದೋಲನಗಳಿಗೆ ಪೂರಕವಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರಾದವರು ಜೊತೆಗೂಡುವುದು ಬೇಡವೇ?
‘ಬೇಡ’ ಎಂಬ ಅಭಿಪ್ರಾಯ ನಿಮ್ಮದಾಗಿದ್ದರೆ ನಿಮ್ಮ ಬಳಿ ಹೇಳಲು ನನಗೆ ಏನೂ ಉಳಿದಿಲ್ಲ. ನೀವು ನಿಮ್ಮದೇ ಸುಖಾಸನದಲ್ಲಿ ನೆಮ್ಮದಿಯಾಗಿ ಪವಡಿಸಬಹುದು, ನನಗೇನೂ ಅಭ್ಯಂತರವಿಲ್ಲ. (ಬರಹ- ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಮಹಿಳಾ ದಿನಾಚರಣೆ | ಸಾಧನೆಯ ಸುಗಂಧ, ಪ್ರೇರಣೆಯ ಬೆಳಕು

- ಡಾ. ವೆಂಕಟೇಶ ಬಾಬು ಎಸ್, ಸಹ ಪ್ರಾಧ್ಯಾಪಕರು, ದಾವಣಗೆರೆ
ಇಂದು ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲಾ ಮಹಿಳೆಯರಿಗೆ ಶುಭಾಷಯಗಳು
ಪ್ರತಿಯೊಂದು ಮಹಿಳೆ ತನ್ನ ಜೀವನದಲ್ಲಿ ವಿವಿಧ ಹಂತಗಳನ್ನು ದಾಟುತ್ತಾ, ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿ ಹೊಂದುವ ಪ್ರತಿರೂಪವಾಗಿರುತ್ತಾರೆ. ವಿಶ್ವ ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ, ಇದು ಮಹಿಳೆಯರ ಹಕ್ಕುಗಳು, ಸಾಧನೆಗಳು ಮತ್ತು ಅವರ ಜಗತ್ತಿನ ಮೇಲೆ ಬೀರಿದ ಪ್ರಭಾವವನ್ನು ಗೌರವಿಸುವ ಒಂದು ಅದ್ಭುತ ಅವಕಾಶ.
ಮಹಿಳೆಯರ ಬದುಕು ಕೇವಲ ಕುಟುಂಬದ ಕೇಂದ್ರದಲ್ಲಿಯೇ ಸೀಮಿತವಾಗಿಲ್ಲ; ಅವರು ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಆರ್ಥಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲೂ ಮಹತ್ತರ ಪಾತ್ರ ವಹಿಸುತ್ತಿದ್ದಾರೆ. ಅಮ್ಮನಾಗಿ, ಪತ್ನಿಯಾಗಿ, ಮಗುವಾಗಿ, ಸಂಸ್ಥಾಪಕಿಯಾಗಿ, ನಾಯಕಿಯಾಗಿ, ವೈಜ್ಞಾನಿಕರಾಗಿ, ಕ್ರೀಡಾಪಟುವಾಗಿ – ಎಲ್ಲಾ ಪಾತ್ರಗಳಲ್ಲೂ ಮಹಿಳೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ.
ಈಗ ಮಹಿಳೆಯರು ತಮ್ಮ ಇಚ್ಛಾಶಕ್ತಿಯೊಂದಿಗೆ ಮತ್ತು ಶಿಕ್ಷಣದ ಹಾದಿಯ ಮೂಲಕ ಜೀವನವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇಂದು ಕಲ್ಪನಾ ಚಾವ್ಲಾ, ಮೇರೀ ಕೋಮ್, ಸುಧಾ ಮುರ್ತಿ, ಕಿರಣ್ ಮಜುಂದಾರ್ ಶಾ, ಫಾಲ್ಗುಣಿ ನಾಯರ್ ಮುಂತಾದ ಅನೇಕ ಮಹಿಳೆಯರು ತಮ್ಮ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡುತ್ತಿದ್ದಾರೆ.
ಮಹಿಳಾ ದಿನಾಚರಣೆ – ಇತಿಹಾಸ ಮತ್ತು ಹಿನ್ನೆಲೆ
ಮಹಿಳಾ ದಿನಾಚರಣೆ (International Women’s Day – IWD) ಪ್ರತಿ ವರ್ಷ ಮಾರ್ಚ್ 8 ರಂದು ಆಚರಿಸಲಾಗುತ್ತದೆ. ಇದು ಮಹಿಳೆಯರ ಹಕ್ಕುಗಳು, ಸಶಕ್ತೀಕರಣ, ಸಾಧನೆಗಳು ಮತ್ತು ಲಿಂಗ ಸಮಾನತೆಯ ಪ್ರಗತಿ ಕುರಿತು ಜಾಗೃತಿಯನ್ನು ಮೂಡಿಸುವ ಮಹತ್ವದ ದಿನ.
ಮಹಿಳಾ ದಿನಾಚರಣೆಯ ಇತಿಹಾಸ
ಮಹಿಳಾ ದಿನಾಚರಣೆಯ ಮೂಲವು 1900ರ ದಶಕದ ಪ್ರಾರಂಭದಲ್ಲಿ ಕೈಗೆತ್ತಿಕೊಳ್ಳಲಾದ ಮಹಿಳಾ ಹಕ್ಕುಗಳ ಹೋರಾಟಕ್ಕೆ ಸರಿಹೊಂದಿದೆ. ಈ ದಿನವನ್ನು ಆಚರಿಸಲು ಪ್ರೇರಣೆ ನೀಡಿದ ಪ್ರಮುಖ ಘಟನೆಗಳು ಹೀಗಿವೆ:
1. 1908 – ಮಹಿಳಾ ಹಕ್ಕುಗಳ ಹೋರಾಟ:
ಅಮೇರಿಕಾದ ನ್ಯೂಯಾರ್ಕ್ ನಗರದಲ್ಲಿ ಸಾವಿರಾರು ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಘಂಟೆಗಳು, ಉತ್ತಮ ಸಂಬಳ ಮತ್ತು ಮತದಾನದ ಹಕ್ಕುಕ್ಕಾಗಿ ಪ್ರತಿಭಟನೆ ನಡೆಸಿದರು.
2. 1909 – ಮೊದಲ ಮಹಿಳಾ ದಿನಾಚರಣೆ:
ಫೆಬ್ರವರಿ 28, 1909 ರಂದು ಅಮೆರಿಕಾದ ಸೋಶಲಿಸ್ಟ್ ಪಾರ್ಟಿ ದೇಶದಾದ್ಯಂತ ಮಹಿಳಾ ದಿನವನ್ನು ಆಚರಿಸಿತು.
3. 1910 – ಅಂತಾರಾಷ್ಟ್ರೀಯ ಹೋರಾಟ:
ಡೆನ್ಮಾರ್ಕ್ನ ಕೊಪನ್ಹೇಗನ್ ನಲ್ಲಿ ನಡೆದ ಸೋಶಲಿಸ್ಟ್ ವುಮೆನ್ಸ್ ಕಾನ್ಫರೆನ್ಸ್ ನಲ್ಲಿ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರು ಪ್ರಪಂಚದಾದ್ಯಂತ ಮಹಿಳಾ ದಿನ ಆಚರಿಸುವ ಸಲಹೆ ನೀಡಿದರು.
4. 1911 – ಪ್ರಥಮ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ:
ಮೊದಲ ಬಾರಿ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್ಲೆಂಡ್ ದೇಶಗಳಲ್ಲಿ ಮಹಿಳಾ ದಿನವನ್ನು ಮಾರ್ಚ್ 19ರಂದು ಆಚರಿಸಲಾಯಿತು.
5. 1913 – ಮಾರ್ಚ್ 8ಕ್ಕೆ ದಿನಾಂಕ ಬದಲಾವಣೆ:
1913ರಿಂದ ಮಾರ್ಚ್ 8ನೇ ತಾರೀಖನ್ನು ಅಧಿಕೃತವಾಗಿ ಮಹಿಳಾ ದಿನಾಚರಣೆಗೆ ಮೀಸಲಾಗಿಸಲಾಯಿತು.
6. 1975 – ವಿಶ್ವ ಮಹಿಳಾ ವರ್ಷ:
UNO1975ನೇ ವರ್ಷವನ್ನು “ಅಂತರಾಷ್ಟ್ರೀಯ ಮಹಿಳಾ ವರ್ಷ” ಎಂದು ಘೋಷಿಸಿ, ಮಹಿಳಾ ದಿನವನ್ನು ಅಧಿಕೃತವಾಗಿ ಅಂಗೀಕರಿಸಿತು
7. 2011 – 100ನೇ ವಾರ್ಷಿಕೋತ್ಸವ:
2011ರಲ್ಲಿ ಮಹಿಳಾ ದಿನಾಚರಣೆ ಶತಮಾನೋತ್ಸವವನ್ನು ಪೂರೈಸಿತು.
ಮಹಿಳಾ ದಿನಾಚರಣೆಯ ಉದ್ದೇಶ
ಮಹಿಳಾ ದಿನವನ್ನು ಆಚರಿಸುವ ಪ್ರಮುಖ ಉದ್ದೇಶಗಳು:
✔ ಮಹಿಳಾ ಸಮಾನತೆ ಮತ್ತು ಹಕ್ಕುಗಳನ್ನು ಬಲಪಡಿಸುವುದು.
✔ ಮಹಿಳೆಯರ ಸಾಧನೆಗಳನ್ನು ಗುರುತಿಸಿ, ಗೌರವ ನೀಡುವುದು.
✔ ಅವರ ಸಮಸ್ಯೆಗಳನ್ನು ಅರಿತು, ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದು.
✔ ಮಹಿಳಾ ಶಕ್ತಿ ಮತ್ತು ಸ್ವಾವಲಂಬನೆಯ ಕುರಿತು ಜಾಗೃತಿಯನ್ನು ಹರಡುವುದು.
ಮಹಿಳಾ ದಿನಾಚರಣೆ – ಇಂದಿನ ಪ್ರಸ್ತುತತೆ
ಇಂದಿನ ಹೊತ್ತಿನಲ್ಲಿ, ಮಹಿಳೆಯರು ಶಿಕ್ಷಣ, ಉದ್ಯಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸೇವಾ ಕ್ಷೇತ್ರ ಮತ್ತು ಉದ್ಯಮಶೀಲತೆ ಎಲ್ಲೆಲ್ಲಿಯೂ ತಮ್ಮ ಸಾಮರ್ಥ್ಯವನ್ನು ತೋರಿಸುತ್ತಿದ್ದಾರೆ. ಮಹಿಳಾ ದಿನವು “Gender Equality – ಲಿಂಗ ಸಮಾನತೆ”, “Break the Bias – ಲಿಂಗತಾತ್ವಿಕ ಭೇದಭಾವವನ್ನು ಕಳಚುವುದು”, “DigitALL: Innovation and technology for gender equality” ಮುಂತಾದ ವಿಶೇಷ ಥೀಮ್ಗಳೊಂದಿಗೆ ಪ್ರತಿವರ್ಷ ಜಾಗೃತಿಯನ್ನು ಮೂಡಿಸುತ್ತದೆ.
ಮಹಿಳೆಯರು ಬದುಕಿನ ಉತ್ಸಾಹ
ಮಹಿಳೆಯರು ತಮ್ಮ ಕುಟುಂಬ, ಸಮಾಜ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರಲ್ಲಿರುವ ಹೃದಯಸ್ಪರ್ಶಿ ಭಾವನೆ, ತ್ಯಾಗ, ಶ್ರಮ ಹಾಗೂ ಪ್ರೀತಿ ಅವರ ಬದುಕಿನ ಹಾದಿಯನ್ನು ಮಾದರಿಯಾಗಿ ಮಾಡುತ್ತದೆ. ಶಿಕ್ಷಣ, ಉದ್ಯೋಗ, ರಾಜಕೀಯ, ಕಲೆ, ಕ್ರೀಡೆ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಅನೇಕ ಮಹಿಳೆಯರು ಸಂಕಷ್ಟಗಳನ್ನು ಎದುರಿಸುತ್ತಾ, ಸಾಧನೆಗೆ ಹೊಸ ಪರಿಮಾಣ ನೀಡಿದ ಉದಾಹರಣೆಗಳಿವೆ. ಐದು ದಶಕಗಳ ಹಿಂದೆಯೂ ಮಹಿಳೆಯರು ಮನೆಯಲ್ಲಿ ಸೀಮಿತವಾಗಿದ್ದರೆ, ಇಂದು ಅವರು ಅಂತರಿಕ್ಷ ಯಾತ್ರೆ, ವ್ಯವಹಾರ ನಿರ್ವಹಣೆ, ಕಾನೂನು, ತಂತ್ರಜ್ಞಾನ, ಆಡಳಿತ ಮತ್ತು ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಾಧನೆಗಳ ಬೆಳಕು
1. ಶಿಕ್ಷಣ ಮತ್ತು ಸಶಕ್ತೀಕರಣ:
ಜಗತ್ತಿನ ಅನೇಕ ದೇಶಗಳಲ್ಲಿ ಈಗ ಮಹಿಳಿಯರಿಗೆ ಶಿಕ್ಷಣ ಹಕ್ಕುಗಳನ್ನು ಒದಗಿಸಲಾಗುತ್ತಿದೆ, ಇದರಿಂದ ಮಹಿಳೆಯರು ಸಮಾಜದ ಮುಖ್ಯಧಾರೆಯಲ್ಲಿರಲು ಸಾಧ್ಯವಾಗಿದೆ. ಭಾರತದಲ್ಲಿ ಸವಿತ್ರಿಬಾಯಿ ಫುಲೆ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲಾ, ಮೇರೀ ಕೋಮ್ ಮುಂತಾದವರು ಮಹಿಳಾ ಶಿಕ್ಷಣ ಮತ್ತು ಸಶಕ್ತೀಕರಣದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ.
2. ಉದ್ಯೋಗ ಹಾಗೂ ಉದ್ಯಮಶೀಲತೆ:
ಈಗ ಮಹಿಳೆಯರು ಉದ್ಯೋಗ ಮಾತ್ರವಲ್ಲದೆ, ಸ್ವಂತ ಉದ್ಯಮಗಳನ್ನು ನಿರ್ಮಿಸಿ ಉದ್ಯಮಶೀಲತೆ ತೋರಿಸುತ್ತಿದ್ದಾರೆ. ಫಾಲ್ಗುಣಿ ನಾಯರ್ (ನೈಕಾ), ಕಿರಣ್ ಮಜುಂದಾರ್ ಶಾ (ಬಯೋಕಾನ್), ವಂದನಾ ಲೂತರ (ಪೇಪರ್ ಶೈರಿ) ಮುಂತಾದವರು ಉದ್ಯಮ ವಲಯದಲ್ಲಿ ತಮ್ಮ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
3. ಕ್ರೀಡೆ ಮತ್ತು ಸಾಹಸ:
ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೈನಾ ನೆಹ್ವಾಲ್, ಮೇರೀ ಕೋಮ್, ಪಿ.ವಿ. ಸಿಂಧು, ಮಿಥಾಲಿ ರಾಜ್ ಮುಂತಾದವರು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಮ್ಮೆ ಹೆಚ್ಚಿಸಿದ್ದಾರೆ.
4. ಸಮಾಜಸೇವೆ ಮತ್ತು ಪ್ರಭಾವ:
ಮಹಿಳೆಯರು ಕೇವಲ ತಮ್ಮ ವ್ಯಕ್ತಿಗತ ಜೀವನದಲ್ಲಷ್ಟೇ ಅಲ್ಲದೆ, ಸಮಾಜಸೇವೆಯಲ್ಲಿ ಕೂಡ ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಮದರ್ ತೆರೆಸಾ, ಸುಧಾ ಮುರ್ತಿ ಮುಂತಾದವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಲಕ್ಷಾಂತರ ಜನರಿಗೆ ಪ್ರೇರಣೆ ನೀಡಿದ್ದಾರೆ.
ಸಮಾಜದ ಹೊಣೆಗಾರಿಕೆ – ಮಹಿಳಾ ಸಮಾನತೆ ಮತ್ತು ಗೌರವ
ಮಹಿಳೆಯರನ್ನು ಗೌರವಿಸುವ, ಅವರ ಆತ್ಮವಿಶ್ವಾಸ ಹೆಚ್ಚಿಸುವ, ಅವರಿಗೆ ಸಮಾನ ಅವಕಾಶ ಒದಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಹಿಳಾ ಸುರಕ್ಷತೆ, ಸಂವೇದನಾಶೀಲತೆ ಮತ್ತು ಗೌರವ ಹೊಂದಿದ ಸಮಾಜವನ್ನು ನಿರ್ಮಿಸುವುದು ಅನಿವಾರ್ಯ.
ನಮ್ಮ ಕರ್ತವ್ಯ – ಮಹಿಳಾ ಶಕ್ತಿಗೆ ಸಾಥ್
ಈ ಮಹಿಳಾ ದಿನಾಚರಣೆ ದಿನದಂದು ನಾವು ನಮ್ಮ ಜೀವನದಲ್ಲಿ ಶಕ್ತಿ, ಪ್ರೇರಣೆ, ಪ್ರೀತಿಯ ಬೆಳಕು ತುಂಬುವ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸೋಣ. ಅವರ ಸಾಧನೆಗಳನ್ನು ಗೌರವಿಸೋಣ ಮತ್ತು ಹೊಸ ತಲೆಮಾರಿನ ಮಹಿಳೆಯರಿಗೆ ಇನ್ನಷ್ಟು ಉತ್ಸಾಹ, ಶಿಕ್ಷಣ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಸಶಕ್ತಗೊಳಿಸೋಣ.
“ಮಹಿಳೆಯರ ಪ್ರಗತಿ – ರಾಷ್ಟ್ರದ ಪ್ರಗತಿ!”(ಲೇಖನ-ಡಾ. ವೆಂಕಟೇಶ ಬಾಬು ಎಸ್,ಸಹ ಪ್ರಾಧ್ಯಾಪಕರು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ದಾವಣಗೆರೆ| ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ : ಜಾನಪದರನ್ನು ಅನಕ್ಷರಸ್ಥರೆನ್ನುವುದು ತಪ್ಪು : ಸಾಹಿತಿ ಕೃಷ್ಣಮೂರ್ತಿ ಹನೂರು

ಸುದ್ದಿದಿನ,ದಾವಣಗೆರೆ:ಜನಪದರು ನಿಜವಾದ ಇತಿಹಾಸವನ್ನು ಸೂಕ್ಷ್ಮವಾಗಿ ವಿಶ್ಲೇಷಣೆ ಮಾಡಿದ್ದಾರೆ.‘ಒಡಲ ಕಿಚ್ಚಿಗೆ ಈ ಕಿಚ್ಚು ಕಿರಿದು’ ಎಂಬುದಾಗಿ ಸತಿ ಸಹಗಮನ ಪದ್ಧತಿಯನ್ನೂ ಸಿರಿಯಜ್ಜಿ ವಿರೋಧಿಸಿದ್ದಳು ಹಾಗಾಗಿ ಜಾನಪದರನ್ನು ನಾವು ಅಕ್ಷರ ಬಾರದವರು ಅನಕ್ಷಸ್ಥರು ಎಂಬುದಾಗಿ ಹೇಳುವುದು ತಪ್ಪು ಎಂದು ಹಿರಿಯ ವಿದ್ವಾಂಸರಾದ ಕೃಷ್ಣಮೂರ್ತಿ ಹನೂರು ವಿಷಾದವ್ಯಕ್ತಪಡಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಯಜ್ಜಿ ಪ್ರತಿಷ್ಠಾನ, ಮಾನವ ಬಂಧುತ್ವ ವೇದಿಕೆ ಹಾಗೂ ಅಮಿತ ಪ್ರಕಾಶನದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಾಂಶುಪಾಲ ಎಂ.ಮಂಜಣ್ಣ ಅವರ ‘ಸಿರಿಯಜ್ಜಿ ಸಂಕಥನ’ ಪುಸ್ತಕ ಲೋಕರ್ಪಣೆ ಮಾಡಿ ಅವರು ಮಾತನಾಡಿದರು.
ಸಿರಿಯಜ್ಜಿ ಭೇಟಿ ಮಾಡಿ ಸುಮಾರು 50ವರ್ಷ ಆಯಿತು.ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಜೊತೆಗೆ ಮೊದಲ ಬಾರಿಗೆ ಗುಡಿಸಲಿನ ಭೇಟಿ ಮಾಡಿದ್ದೆ. ಆಡಿನ ಹಾಲು ಕರೆದು ಜತೆಗೆ ಮುದ್ದೆ ಕೊಡುತ್ತಿದ್ದರು. ಅದು 76ರ ಈ ಇಳಿವಯಸ್ಸಿನಲ್ಲೂ ನನಗೆ ಶಕ್ತಿ ಕೊಟ್ಟಿದೆ. ಪಾಶ್ಚಾತ್ಯ ವಿದ್ವಾಂಸರು 1800 ಸಂದರ್ಭದಲ್ಲಿ ದೇಶದಲ್ಲಿ ಹುಡುಕಿ ಹೊತ್ತೊಯ್ಯುವ ಕೆಲಸ ಮಾಡಿದರು. ಇಲ್ಲಿನ ಸಂಸ್ಕೃತಿಯ ಬಗ್ಗೆ ಅವರಿಗೆ ಅಭಿಮಾನ ಇತ್ತು. ಬುಡಕಟ್ಟು ಹಟ್ಟಿಯ ಸಿರಿಯಜ್ಜಿ ದೊಡ್ಡ ವಿದ್ವಾಂಸರು. ಅರೆ ಬರ ಕನ್ನಡ ಓದಿ ಎಲ್ಲವೂ ಗೊತ್ತದೆ ಎನ್ನುತ್ತೇವೆ. ಆದರೆ, ಸಿರಿಯಜ್ಜಿ ತನ್ನ ಬೌದ್ಧಿಕ ಶಕ್ತಿಯನ್ನು ಏನೂ ಅಲ್ಲ ಎಂದು ಹೇಳುತ್ತಿದ್ದರು. ‘ಹತ್ತ ಮಕ್ಕಳ ಹೆತ್ತು ಕತ್ತಿಗೆ ಬಲಿಕೊಟ್ಟೆ’ ಎಂಬ ಮಾತು ದೊಡ್ಡದು. ಇದರಲ್ಲಿ ದೊಡ್ಡ ಸಂದೇಶ ಇತ್ತು ಎಂದು ಸ್ಮರಿಸಿದರು.
ಅವಳ ಹಾಡುಗಾರಿಕೆಯ ಕ್ರಮ ವಿಸ್ಮಯ ಮೂಡಿಸುತ್ತಿತ್ತು. ನೋವಿನ ವಾಕ್ಯದಲ್ಲಿ ಇರುವ ಅರ್ಥ ಬಹಳ ದೊಡ್ಡದು. ಚರಿತ್ರೆಯನ್ನು ನಾಲ್ಕು ಪದಗಳಲ್ಲಿ ವಿಶ್ಲೇಷಣೆ ಮಾಡಿದಳು. . 100ಕ್ಕೂ ಹೆಚ್ಚು ತ್ರಿಪದಿಯಲ್ಲಿ ಸಿರಿಯಜ್ಜಿ ಹಾಡಿದ್ದಾಳೆ. ಸಮಾಜಿಕ, ಐತಿಹಾಸಿಕ, ಸಂತೋಷದ ಸಂಗತಿ, ಮಳೆರಾಯನ ಕುರಿತು ಹಾಡು ಹೇಳಿದ್ದಾಳೆ. ಮದುವೆ ಸಂಭ್ರದ ಸಾವಿರಾರು ತ್ರಿಪದಿ ಅವಳಲ್ಲಿದ್ದವು.ಶಿಷ್ಟ ಮತ್ತು ಜಾನಪದ ಸಾಹಿತ್ಯ ಈ ಎರಡರಲ್ಲೂ ಕೆಟ್ಟದ್ದು ಒಳ್ಳೆಯದು ಇದೆ. ಇದರ ಬಗೆಗೆ ಇನ್ನೂಹೆಚ್ಚಿನ ಅಧ್ಯಯನ ನಡೆಸಿ ಪ್ರಾಧ್ಯಾಪಕರು ಚರ್ಚಿಸಬೇಕಿದೆ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.
ಅನಕ್ಷರಸ್ಥರಲ್ಲಿ ಕೂಡ ವಿದ್ವಾಂಸರು ಇದ್ದಾರೆ. ಸಿರಿಯಜ್ಜಿ ರೀತಿಯವರು ಅಸಂಖ್ಯಾತರಷ್ಟು ಇದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿ ಮಾನವನನ್ನೇ ನಾಶ ಮಾಡುತ್ತಿದೆ. ಜನಪದರ, ಗ್ರಾಮೀಣ ಪ್ರದೇಶದ ಒಳಿತನ್ನು ಸ್ವೀಕರಿಸುವ ಮನೋಭಾವ ಉಳಿಸಿಕೊಳ್ಳೋಣ’.ಎ.ಕೆ.ರಾಮಾನುಜನ್, ಎಸ್.ಎಲ್.ಭೈರಪ್ಪ, ಗುಂಡೂರಾವ್, ಎಚ್.ಕೆ.ರಂಗನಾಥ್ ಸೇರಿ ಅನೇಕರು ಸಿರಿಯಜ್ಜಿ ಹುಡುಕಿಕೊಂಡು ಬಂದಿದ್ದರು. ಪ್ರಾಧ್ಯಾಪಕರು ಇದನ್ನು ಗುರುತಿಸಿ ಹೇಳಬೇಕು. ಮಕ್ಕಳಿಗೆ ಪಾಠ ಮಾಡಿದರೆ ಪ್ರಾಧ್ಯಾಪಕರ ಕಾರ್ಯ ಮುಗಿಯುದಿಲ್ಲ ಎಂದು ಕಿವಿಮಾತು ಹೇಳಿದರು.
ಅನಕ್ಷರಸ್ಥರು ಎಂದು ಹೇಳುವುದು ನಮ್ಮ ಅಜ್ಞಾನ ತೋರಿಸುತ್ತದೆ. ವಿಶ್ವವಿದ್ಯಾಲಯದ್ದು ಸೀಮಿತ ಪಠ್ಯ, ಜಾನಪದದ್ದು ಅಲಿಖಿತ ಸಂವಿಧಾನ, ಅಪರಿಮಿತ ಪಠ್ಯ ಇದು ಕೂಡ ಮುಖ್ಯ.‘ಸಾವಿರದ ಸಿರಿ ಬೆಳಕು’ ಹಂಪಿ ವಿಶ್ವವಿದ್ಯಾಲಯ ಹೊರತಂದಿದೆ. ಅಪ್ರಕಟಿತ ಗೀತೆಗಳು ಇನ್ನೂ ಇವೆ. ಅಕ್ಷರಕ್ಕೆ ಅಳಿವಿಲ್ಲ. ದೇಶದ ಉತ್ತಮ ಸಂಗತಿ, ಪಳಯುಳಿಕೆ ಅಮೆರಿಕಾ, ಇಂಗ್ಲೆಂಡ್ ನಲ್ಲಿವೆ.ಎಚ್ಚರಿಕೆ, ಗಮನ ಹರಿಸಬೇಕು ಪ್ರಾಧ್ಯಾಪಕರು. ಮಕ್ಕಳ ಆಸ್ತಿ ಯಾವುದು ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ ಎಂದು ಹಂಪಿ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಎಸ್.ಎಂ.ಮುತ್ತಯ್ಯ ಅಭಿಪ್ರಾಯಪಟ್ಟರು.
ಮನುಷ್ಯರೆಂಬಂತೆ ಸಮಾಜ ಕಾಣದ ಸಮುದಾಯದ ಮಹಿಳೆ ಬಗ್ಗೆ ನಡೆಸಿದ ಅಧ್ಯಯನಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಚಿಕ್ಕ ಸಂಗತಿಗೂ ನಿರ್ಬಂಧ ಹೇರುವ ಸಮುದಾಯದಲ್ಲಿ ದೊಡ್ಡ ಕಲಾವಿದೆಯೊಬ್ಬರೂ ಹೊರಹೊಮ್ಮಿದ ರೀತಿ ವಿಸ್ಮಯ ಮೂಡಿಸುತ್ತದೆ.ಸಿರಿಯಜ್ಜಿ ಸೃಷ್ಟಿಸಿದ್ದು ಸಾಹಿತ್ಯ ಅಲ್ಲ. ಇದು ಸಮುದಾಯಕ್ಕೆ ಪರಂಪರಾಗತವಾಗಿ ಬಂದದ್ದು. ಇದು ಕಾಡುಗೊಲ್ಲ ಮಾತ್ರವಲ್ಲ ಪಶುಪಾಲನಾ ಸಮುದಾಯದ ಅಸ್ಮಿತೆ ಕೂಡ ಹೌದು. ಕಾಡಲ್ಲಿ ಕುರಿ, ಜಾನುವಾರು ಕಾಯುತ್ತ ಬದುಕುತ್ತಿದ್ದ ಸಮುದಾಯದ ಕಲೆಗಳಿಗೆ ಮಾನ್ಯತೆ ಸಿಕ್ಕಿರಲಿಲ್ಲ. ಸಾಹಿತ್ಯ ಪರಂಪರೆಯಲ್ಲಿ ಜಾನಪದಕ್ಕೆ ಮಾನ್ಯತೆ ಸಿಕ್ಕಿದ್ದು ಜಿ.ಶಂ.ಪರಮಶಿವಯ್ಯ ಹಾಗೂ ಹಾ.ಮಾ.ನಾಯಕ ಸಾಕಷ್ಟು ಕಷ್ಟಪಟ್ಟಿದ್ದಾರೆ. ಜಾನಪದ ಸಾಹಿತ್ಯ ಕೂಡ ಸಂಶೋಧನೆಗೆ ಯೋಗ್ಯ ಕ್ಷೇತ್ರ ಮತ್ತು ವಸ್ತು ಎಂಬುದನ್ನು ಒಪ್ಪಿಸಲು ಸಾಕಷ್ಟು ಶ್ರಮಿಸಬೇಕಾಯಿತು ಎಂದು ಮೆಲುಕುಹಾಕಿದರು.
ಜಾನಪದ ಅಧ್ಯಯನ ವಿಸ್ತರಣೆ ಕಂಡ, ಮುಖ್ಯ ವಾಹಿನಿಯಲ್ಲಿ ಸ್ಥಾನ ಪಡೆದುಕೊಂಡ ಮೂರನೇ ಘಟ್ಟವಾಗಿ ಈ ಕೃತಿ ನೋಡಬೇಕು. ಶೈಕ್ಷಣಿಕ ಅಧ್ಯಯನದ ವಸ್ತವಾಗಿ ಸಿರಿಯಜ್ಜಿ ಪರಿಣಿಸಿ ಸಂಶೋಧನೆಗೆ ಒಳಪಡಿಸಿದ್ದಕ್ಕೆ ಹೆಮ್ಮೆ ಪಡಬೇಕು. ಜಾನಪದ ಅಧ್ಯಯನದ ಇತಿಹಾಸದಲ್ಲಿ ಹೊಸದೊಂದು ಪರ್ವ ಶುರು ಆಗಿದೆ.ಕಾಡು ಗೊಲ್ಲರಂತಹ ನಿರ್ಬಂಧಿತ ಸಮುದಾಯದ ಮಹಿಳೆಯೊಬ್ಬರು ಇಷ್ಟು ಎತ್ತರಕ್ಕೆ ಬೆಳೆಯುವ ಅವಕಾಶ ಸಿಕ್ಕಿದ್ದು ವಿಸ್ಮಯ. ಅವರ ಒಳಗಿನ ಆಸಕ್ತಿ, ಪ್ರಯತ್ನ ಹಾಗೂ ಕುಟುಂಬದ ಬೆಂಬಲದ ಕಾರಣಕ್ಕೆ ಅವಳಿಗೆ ಇದು ಸಾಧ್ಯ ಆಯಿತು. ಕಾಡಗೊಲ್ಲರ, ಸಾಂಸ್ಕೃತಿಕ ವೀರರ ಆರಾಧ್ಯ ದೈವ, ಬೇರೆ ಸಮುದಾಯದ ದೈವಗಳ ಬಗ್ಗೆ ಸಿರಿಯಜ್ಜಿ ಹಾಡಿದ್ದಾರೆ. ಹಾಡುವ ಸಾಹಿತ್ಯದಲ್ಲಿ ಭೇದ ಮಾಡಿಲ್ಲ. ಸಾಹಿತ್ಯದ ಪದ-ಪದದ ವಿವರಗಳನ್ನು ಅವಳು ನೀಡುತ್ತಿದ್ದಳು. ಕಾವ್ಯ ಅವಳ ಬದುಕಿನ ಭಾಗ ಆಗಿತ್ತು. ಹೀಗಾಗಿ ಅವಳು ನಿರರ್ಗಳವಾಗಿ ಹಾಡುತ್ತದ್ದಳು. ಆದರೆ, ಒಬ್ಬ ವ್ಯಕ್ತಿ ಇಷ್ಟು ಪದಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ್ ಕಲಮರಹಳ್ಳಿ, ಸಿರಿಯಜ್ಜಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ, ಕಲಾವಿದೆ ಸಿರಿಯಮ್ಮ, ಜಿ.ಕೆ.ಪ್ರೇಮಾ, ಅಮಿತ ಪ್ರಕಾಶನದ ಶಾರದಮ್ಮ ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಗ್ಯಾರಂಟಿಗೆ 90 ಸಾವಿರ ಕೋಟಿ ರೂ ಖರ್ಚು, ಗ್ಯಾರಂಟಿಯಿ0ದ ಸರ್ಕಾರ ದಿವಾಳಿಯಾಗಿಲ್ಲ : ಸಿಎಂ ಸಿದ್ದರಾಮಯ್ಯ
-
ದಿನದ ಸುದ್ದಿ6 days ago
ನುಡಿದಂತೆ ನಡೆದ ಸರ್ಕಾರಕ್ಕೆ 2 ವರ್ಷ | ಮೇ 20 ರಂದು ಹೊಸಪೇಟೆಯಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶ ; 1.03 ಲಕ್ಷ ಹಕ್ಕುಪತ್ರ ವಿತರಣೆ : ಸಿಎಂ ಸಿದ್ದರಾಮಯ್ಯ
-
ಅಂಕಣ4 days ago
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ
-
ದಿನದ ಸುದ್ದಿ3 days ago
ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ
-
ದಿನದ ಸುದ್ದಿ4 days ago
ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು
-
ದಿನದ ಸುದ್ದಿ7 days ago
ಚನ್ನಗಿರಿ | ರೈತರಿಗೆ, ವ್ಯಾಪಾರಿಗಳಿಗೆ ರಿಯಾಯಿತಿ ದರದಲ್ಲಿ ಗೋದಾಮುಗಳ ಬಾಡಿಗೆ
-
ದಿನದ ಸುದ್ದಿ3 days ago
ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ