Connect with us

ಅಂತರಂಗ

ಅರಿಮೆಯ ಅರಿವಿರಲಿ-55 : ಭಯಗಳು ಭಾವಗಳಾಗೆ

Published

on

  • ಯೋಗೇಶ್ ಮಾಸ್ಟರ್

ಲೋಚನೆಗಳಿಂದ ಭಾವನೆಗಳೋ ಅಥವಾ ಭಾವನೆಗಳಿಂದ ಆಲೋಚನೆಗಳೋ; ಚರ್ಚೆ ಒಂದೊಟ್ಟಿಗಿರಲಿ. ಆದರೆ ವ್ಯಕ್ತಿಯೊಬ್ಬನು ತನ್ನತನದ ಬದ್ಧತೆಯಿಂದ ತನಗೆ ಎದುರಾಗುವ ಸಂಗತಿ, ವ್ಯಕ್ತಿ ಮತ್ತು ಸನ್ನಿವೇಶಗಳನ್ನು ಹೇಗೆ ಗ್ರಹಿಸುತ್ತಾನೆ? ಅದು ಮುಖ್ಯ. ಆ ಗ್ರಹಿಕೆಯಿಂದಲೇ ಆಲೋಚನೆಗಳು ಮೂಡುವವು. ಭಾವನೆಗಳು ಉಂಟಾಗುವವು.

ಈಗ ಹುಟ್ಟುವ ಒಂದು ಬಗೆಯ ಆಲೋಚನೆಗೆ ಅಂದೆಂದೋ ಬಿತ್ತಿರುವ ಆಲೋಚನೆಯು ಬೀಜವಾಗಿ ಮೊಳೆದಿರುತ್ತವೆ. ಇರಲಿ, ಮನುಷ್ಯನ ಮೂಲ ಪ್ರವೃತ್ತಿಗಳು ಆಲೋಚನೆಗಳಿಗೆ ಪ್ರೇರೇಪಿಸುತ್ತವೆ. ಹಾಗೆಯೇ ಆಲೋಚನೆಗಳೂ ಆ ಪ್ರವೃತ್ತಿಗಳನ್ನು ಪ್ರೇರೇಪಿಸುತ್ತವೆ.

ಭಾವನೆಗಳು ಆಲೋಚನೆಗಳನ್ನು, ಆಲೋಚನೆಗಳು ಭಾವನೆಗಳನ್ನು, ಇವೆರಡೂ ಪ್ರವೃತ್ತಿಗಳನ್ನು, ಪ್ರವೃತ್ತಿಗಳು ಇವೆಲ್ಲವನ್ನೂ ಪ್ರೇರೇಪಿಸುತ್ತಿರುತ್ತವೆ. ಒಟ್ಟಾರೆ, ಮನಸ್ಸೆಂಬ ತರಂಗವಿದೆಯಲ್ಲಾ ಅದು ಎಲ್ಲದಕ್ಕೂ ವಾಹಕವಾಗುತ್ತದೆ, ಮಿಡಿಯುತ್ತದೆ ಮತ್ತು ಅಲೆಯಾಗುತ್ತದೆ.

ಆತಂಕಗಳ ಪ್ರಸಂಗಗಳು

ವೇದಿಕೆಯ ಮೇಲೆ ಮಾತಾಡಿ ರೂಢಿ ಇಲ್ಲದಿರುವಾಗ ಅಥವಾ ಮಾತಾಡುವ ವಿಷಯದಲ್ಲಿ ಗೊಂದಲ ಇರುವಾಗ ಅಥವಾ ಸ್ಪಷ್ಟತೆ ಇಲ್ಲದಿರುವಾಗ ಅಥವಾ ಬಹಳಷ್ಟು ಜನ ಸೇರಿರುವ ಸಭೆಯನ್ನು ಎದುರಿಸುವ ಭಯವಿರುವಾಗ ವೇದಿಕೆಗೆ ಹೋಗುವಾಗ ಅಥವಾ ಹೋಗಿ ನಿಂತಾದ ಮೇಲೆ ಹೊಟ್ಟೆಯಲ್ಲಿ ಏನೋ ಒಂದು ತರ ಆಗುತ್ತಿರುತ್ತದೆ.

ಕೆಲವೊಮ್ಮೆ ಧಾರಾಕಾರವಾಗಿ ಬೆವರು ಸುರಿಯುತ್ತಿರುತ್ತದೆ. ಮತ್ತೂ ಕೆಲವೊಮ್ಮೆ ಹೇಳಬೇಕಾದುದೆಲ್ಲಾ ಮರೆತೇ ಹೋಗತ್ತೆ. ನಾಲಿಗೆ ತೊದಲುತ್ತದೆ, ಗಂಟಲು ಒಣಗುತ್ತದೆ. ಕೈ ಕಾಲುಗಳು ನಡುಗುತ್ತಿರುತ್ತದೆ. ಹಾಗಾಗುವುದು ಏಕೆ?

ನಿಮ್ಮ ಮನೆಯವರೋ ಸ್ನೇಹಿತರೋ ಅದ್ಯಾವುದೋ ಸ್ಥಳಕ್ಕೆ ಹೋಗಿದ್ದಾರೆ. ನಿಮಗೆ ಆ ಸ್ಥಳದಲ್ಲಿ ದೊಡ್ಡ ಗಲಭೆಯಾಗಿದೆ, ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ, ವಾಹನಗಳಿಗೆ ಕಲ್ಲು ತೂರುತ್ತಿದ್ದಾರೆ ಎಂದೆಲ್ಲಾ ಸುದ್ಧಿ ಬರುತ್ತದೆ. ನೀವು ಸಂಪರ್ಕಿಸಲು ಯತ್ನಿಸಿದರೆ ನಿಮ್ಮವರ ಫೋನ್ ಸ್ವಿಚ್ ಆಫ್ ಆಗಿದೆ ಅಥವಾ ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂದು ಕೇಳುತ್ತಿರುತ್ತದೆ. ಆಗ ಹೊಟ್ಟೆಯಲ್ಲಿ ಸಂಕಟ ಪ್ರಾರಂಭವಾಗುತ್ತದೆ.

ಕೆಲವೊಮ್ಮೆ ಅದು ವಿಪರೀತಕ್ಕೆ ಹೋಗಿ ಮಲ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಒಮ್ಮೆ ಹೋಗಿ ಬಂದರೂ ಮತ್ತೆ ಮತ್ತೆ ಹೋಗುವಂತಾಗುತ್ತದೆ. ಏಕೆ?

ತಡೆಯಲಾರದಷ್ಟು ಬೇಸರವಾಗಿದೆ. ಕೋಪ ಬಂದಿದೆ ಅಥವಾ ಆತಂಕವಾಗಿದೆ ಎಂದರೆ ಉಸಿರಾಟ ವಿಪರೀತ ಏರಿಳಿಯುತ್ತಿರುತ್ತದೆ. ಬೆವರುತ್ತಿದೆ. ಕೈ ಕಾಲುಗಳು ನಡುಗುತ್ತವೆ. ಏನು ಮಾಡಬೇಕೆಂದು ತೋಚುವುದಿಲ್ಲ. ಹೀಗೇಕಾಗುತ್ತದೆ?

ನಮಗೆ ಇಷ್ಟವಾದವರೊಬ್ಬರು ಯಾವುದೋ ಊರಿನಿಂದ ಬರುತ್ತಿದ್ದಾರೆ. ನಮ್ಮ ಪ್ರೀತಿಪಾತ್ರರು ನಮಗಾಗಿ ಬರುತ್ತಾರೆ. ಯಾವುದೋ ಹಬ್ಬ. ಕೆಲಸಕ್ಕೆ ರಜೆ ಹಾಕಿ ಎಲ್ಲರೊಟ್ಟಿಗೆ ಮನೆಯಲ್ಲಿರುತ್ತೇವೆ. ಉತ್ಸಾಹ ಮತ್ತು ಆನಂದವಿರುವಾಗ ಮೈ ಮನಸ್ಸು ಪ್ರಫುಲ್ಲವಾಗಿರುತ್ತದೆ. ಇಷ್ಟಪಟ್ಟಿರುವ ಹೊಸ ಬಟ್ಟೆಯೊಂದನ್ನು ಹಾಕಿಕೊಂಡಾಗ ನಮ್ಮಲ್ಲಿ ಉಂಟಾಗುವ ಹುರುಪನ್ನು ಗಮನಿಸಿ.

ಅಂದು ಹೆಚ್ಚು ಕೆಲಸ ಮಾಡಿದರೂ, ಹೆಚ್ಚು ಹೆಚ್ಚು ಓಡಾಡಿದರೂ ಆಯಾಸವಿಲ್ಲ. ಅಂದೇನೋ ಹೊಸಬಲ. ಅದೆಲ್ಲೆಂದ ಬರುವುದು?
ಕೋಪ ಬರುವುದು, ಬೇಜಾರಾಗುವುದು, ಸಂತೋಷವಾಗುವುದು, ಭಯವಾಗುವುದು, ಆತಂಕವಾಗುವುದು; ಇವೆಲ್ಲವೂ ಮನಸ್ಸಿಗೆ ಮತ್ತು ಭಾವನೆಗಳಿಗೆ ಸಂಬಂಧಪಟ್ಟಿರುವುದು. ಆದರೆ ಅದರ ಪರಿಣಾಮವು ದೇಹದ ಮೇಲೂ ಆಗುತ್ತಿರುತ್ತದೆ. ಮನಸ್ಸಿನ ಅಧೀನ ದೇಹವೋ? ಅಥವಾ ದೇಹದ ಭಾಗವು ಮನಸ್ಸಿನದೋ? ಹೇಗಾದರೂ ಆಲೋಚಿಸಿ.

ಆದರೆ ಒಂದು ವಿಷಯ ನಿಜ. ಮನಸ್ಸು ಸಂತೋಷಗೊಂಡಾಗ ದೇಹದಲ್ಲಿ ಕೆಲವು ಬಗೆಯ ರಸಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗೆಯೇ ಖೇದಗೊಂಡಾಗ, ದುಃಖಿತರಾದಾಗ, ಆತಂಕಗೊಂಡಾಗ, ಕೋಪಗೊಂಡಾಗಲೂ ಹಾಗೆಯೇ ಕೆಲವು ಬಗೆಯ ರಸಗಳು ಉತ್ಪತ್ತಿಯಾಗುತ್ತದೆ. ಹಾಗೆ ಉತ್ಪತ್ತಿಯಾದ ರಸಗಳ ರಾಸಾಯನಿಕ ಕ್ರಿಯೆಗಳು ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಈ ರಸಗಳು ಹೆಚ್ಚುಹೆಚ್ಚಾಗಿ ಸ್ರವಿಸುತ್ತಿದ್ದರೆ, ರಾಸಾಯನಿಕ ಕ್ರಿಯೆಯು ತೀವ್ರವಾದರೆ ಸಹಜವಾಗಿ ದೇಹದ ಮೇಲೆಯೂ ಪರಿಣಾಮವನ್ನು ಬೀರುತ್ತದೆ.

ಆತಂಕ, ಉದ್ವೇಗ, ಉದ್ರೇಕಗಳು ಹೃದಯದ ಬಡಿತವನ್ನು ಏರಿಸುತ್ತದೆ. ಸಿಕ್ಕಾಪಟ್ಟೆ ವೇಗವಾಗಿ ಹೊಡೆದುಕೊಳ್ಳಲು ಆರಂಭಿಸುತ್ತದೆ. ರಕ್ತದ ಒತ್ತಡ ಏರುತ್ತದೆ. ರಕ್ತ ಸಂಚಲನ ವೇಗವಾಗುತ್ತದೆ. ವಾಕರಿಕೆ ಬರುವುದು, ಕೆಲವೊಮ್ಮೆ ವಾಂತಿಯಾಗುವುದೂ ಉಂಟು. ನಡುಕ, ಬೆವರುವಿಕೆ, ಬಾಯಿ ಒಣಗುವುದು, ಎದೆಯಲ್ಲಿ ನೋವು, ತಲೆ ನೋವು, ಹೊಟ್ಟೆಯಲ್ಲಿ ಹಿಂಡಿದಂತೆ ನೋವು ಮತ್ತು ಉಸಿರಾಟದಲ್ಲಿ ವಿಪರೀತವಾಗಿ ಏರಿಳಿತ.

ಮೆದುಳು ಆತಂಕವನ್ನು ಗ್ರಹಿಸಿ ಅಥವಾ ಉದ್ವೇಗಗೊಂಡು ದೇಹದ ಇತರ ಭಾಗಗಳಿಗೆ ತನ್ನ ಆತಂಕದ ಸಂದೇಶಗಳನ್ನು ಕಳುಹಿಸುತ್ತದೆ. ಅದರಂತೆ ದೇಹದ ಇತರ ಭಾಗಗಳೂ ಕೂಡಾ ವರ್ತಿಸುತ್ತವೆ. ಈ ಮನೋದೈಹಿಕ ವ್ಯತ್ಯಾಸವು ಬಹಳಷ್ಟು ಸಲ ಸಾಂದರ್ಭಿಕವಾಗಿ ಎದುರಿಸುವ ಸನ್ನಿವೇಶಕ್ಕೆ ಅನುಗುಣವಾಗಿ ಇರುತ್ತದೆ.

ಆಗ ಬರುವ ಶಾರೀರಿಕ ಸಮಸ್ಯೆ ಸನ್ನಿವೇಶವು ಬದಲಾಗುತ್ತಿದ್ದಂತೆ, ವಾತಾವರಣವು ತಿಳಿಯಾಗುತ್ತಿದ್ದಂತೆ ಬಂದಂತೆಯೇ ಹೊರಟೂ ಹೋಗುತ್ತದೆ. ಆದರೆ, ಕೆಲವರಿಗೆ ಕೋಪಗೊಳ್ಳುವುದು ಅಥವಾ ಆತಂಕಗೊಳ್ಳುವುದು, ಖಿನ್ನತೆಗೆ ಒಳಗಾಗುವುದು, ನಕಾರಾತ್ಮಕವಾಗಿಯೇ ಚಿಂತಿಸುವುದು, ಏನಾಗುತ್ತದೋ, ಏನನ್ನು ಎದುರಿಸಬೇಕೋ ಎಂದು ಭಯದಲ್ಲಿಯೇ ಇರುವುದು ವ್ಯಕ್ತಿತ್ವದ ಭಾಗವಾಗಿಟ್ಟಿರುತ್ತದೆ.

ಆಗ ಅವರು ಅವರ ರಕ್ತದೊತ್ತಡವನ್ನು ಸದಾ ಹೊಂದುತ್ತಿರುತ್ತಾರೆ. ಯಾವಾಗಲೂ ಏರಿಳಿತಗಳಾಗುತ್ತಿರುತ್ತದೆ. ಇದರಿಂದ ರಕ್ತದೊತ್ತಡದಿಂದ ಉಂಟಾಗುವ ರೋಗಗಳನ್ನು ಬಳುವಳಿಯಾಗಿ ಪಡೆಯುತ್ತಾರೆ. ಮೆದುಳಿಗೆ ಮತ್ತು ಹೃದಯಕ್ಕೆ ಸಂಬಂಧಪಟ್ಟಂತಹ ತೊಂದರೆಗಳನ್ನು ಪರಿಣಾಮಗಳಾಗಿ ನೋಡಬೇಕಾಗುತ್ತದೆ.

ಕೆಲವರು ಹೇಳುತ್ತಿರುತ್ತಾರೆ, ಅವರಿಗೆ ಬ್ಲಡ್ ಪ್ರೆಷರ್ ಇದೆ ಅದಕ್ಕೆ ಹೆಚ್ಚು ಕೋಪ ಎಂದು. ಆದರೆ ಅದು ಹೀಗೂ ಇರಬಹುದು. ಅವರಿಗೆ ಕೋಪಗೊಳ್ಳುವುದು, ಆತಂಕಗೊಳ್ಳುವುದು ಸತತವಾದ ಅಭ್ಯಾಸವಾಗಿವುದರಿಂದ ರಕ್ತದೊತ್ತಡವು ಖಾಯಿಲೆಯಾಗಿ ಪರಿಣಮಿಸಿದೆ ಎಂದು.

ಏನೇ ಆಗಲಿ, ವಂಶವಾಹಿನಿಯಿಂದ, ಬೇರೆ ಕಾರಣಗಳಿಂದ ಬರುವ ಕಾಯಿಲೆಗಳನ್ನೂ ಕೂಡಾ ಮನೋಭಾವನೆಗಳ ಮತ್ತು ವರ್ತನೆಗಳ ಸರಿಯಾದ ನಿಯಂತ್ರಣ ಮತ್ತು ತರಬೇತಿಯಿಂದ ವಾಸಿ ಮಾಡಲಾಗದಿದ್ದರೂ ಉಲ್ಬಣಗೊಳ್ಳದಿರುವಂತೆ ನೋಡಿಕೊಳ್ಳಬಹುದು.

ಮನೋದೈಹಿಕ ಸಮಸ್ಯೆಗಳು

ಕೌಟುಂಬಿಕವಾಗಿ, ವೃತ್ತಿಯಲ್ಲಿ, ಸಾಮಾಜಿಕವಾಗಿ, ವ್ಯಕ್ತಿಗತವಾಗಿ ಅದೆಷ್ಟೇ ಒತ್ತಡಗಳಿದ್ದರೂ, ಆತಂಕಗಳಿದ್ದರೂ ಅವುಗಳನ್ನು ನೋಡುವ ದೃಷ್ಟಿ ಮತ್ತು ಅವುಗಳೊಂದಿಗೆ ಕೆಲಸ ಮಾಡುವ ಮುಕ್ತ ಮನಸ್ಥಿತಿಯನ್ನು ಹೊಂದಬೇಕು. ಆಗ ಅವು ರೋಗಗಳಾಗಿ ತಿರುಗುವುದಿಲ್ಲ. ಹೊರಗಿನ ಕೆಲಸಗಳು ಎಷ್ಟೇ ಒತ್ತಡಗಳನ್ನು ಹೇರಿದರೂ ಮನಸ್ಸಿನ ಒತ್ತಡಕ್ಕೆ ಬಲಿಯಾಗಲೇಬಾರದು. ಇದನ್ನು ಸ್ಪಷ್ಟವಾಗಿ ತಿಳಿಯೋಣ.

ಮನಸ್ಸಿನ ಸ್ಥಿತ್ಯಂತರಗಳ ನಿರೋಧಕ ಶಕ್ತಿಯು ಶರೀರದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ದುರ್ಬಲ ಮನಸ್ಸಿನವರಿಗೆ ರೋಗ ನಿರೋಧಕ ಶಕ್ತಿಯೂ ಕೂಡಾ ಪರಿಣಾಮಕಾರಿಯಾಗಿ ಕೆಲಸ ಮಾಡಲು ಹಿಂದೆ ಮುಂದೆ ನೋಡುತ್ತದೆ. ಖಿನ್ನತೆಗೊಳಗಾಗುವ ಅಥವಾ ಆತಂಕಕ್ಕೊಳಗಾಗುವ ರೂಢಿಯವರಿಗೆ ಸರಿಯಾಗಿ ಊಟ ಸೇರುವುದಿಲ್ಲ, ನಿದ್ದೆ ಬರುವುದಿಲ್ಲ.

ಸರಿ, ಹೊತ್ತು ಹೊತ್ತಿಗೆ ಸರಿಯಾಗಿ ಆಹಾರ ತೆಗೆದುಕೊಳ್ಳದೇ ಮತ್ತು ನಿದ್ದೆ ಮಾಡದೇ ಇರುವುದರಿಂದ ಆಗುವಂತಹ ಸಮಸ್ಯೆಗಳಿಗೆ ಅದು ಆಹ್ವಾನ ಕೊಟ್ಟಂತಾಗುತ್ತದೆ. ಈ ರೀತಿ ಮನಸ್ಸಿನ ಸ್ಥಿತ್ಯಂತರದ ಕಾರಣಗಳಿಂದ ದೇಹದ ಮೇಲೆ ಉಂಟಾಗುವ ಪರಿಣಾಮಗಳಿಗೆ ಮನೋದೈಹಿಕ ಸಮಸ್ಯೆಗಳು ಅಥವಾ ಸೈಕೋಸೊಮ್ಯಾಟಿಕ್ ಡಿಸಾರ್ಡರ್ ಎನ್ನುತ್ತಾರೆ.

ಈ ಮನೋದೈಹಿಕ ಸಮಸ್ಯೆಗಳು ಎಗ್ಸಿಮಾ, ಹೊಟ್ಟೆಯ ಹುಣ್ಣುಗಳಿಗೆ, ಹೈಪರ್ ಟೆಂನ್ಶನ್, ಸೋರಿಯಾಸಿಸ್ ಮತ್ತು ಹೃದಯದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಆತಂಕ ಮತ್ತು ಉದ್ವೇಗಗಳನ್ನು ಹೊಂದುವುದರಿಂದ, ಖಿನ್ನತೆಗೆ ಜಾರುವುದರಿಂದ ಅಡ್ರಿನಲ್ ಗ್ರಂಥಿಯಲ್ಲಿ, ಎಪಿನೆಫ್ರಿನ್ ನಲ್ಲಿ ತೀವ್ರಗತಿಯಲ್ಲಿ ಹಾರ್ಮೋನುಗಳ ವ್ಯತ್ಯಯ ಉಂಟಾಗುವುದು.

ಆಗ ಸಹಜವಾಗಿ ಈ ಹಾರ್ಮೋನುಗಳ ವ್ಯತ್ಯಾಸದಿಂದ ಏನು ಶಾರೀರಿಕ ಸಮಸ್ಯೆ ಬರುವುದೋ ಅದನ್ನು ಎದುರಿಸಬೇಕಾಗುವುದು. ಸಾಮಾನ್ಯವಾಗಿ ಕುತ್ತಿಗೆ ನೋವು, ಆಮ್ಲತೆ (ಅಸಿಡಿಟಿ), ಬೆನ್ನು ನೋವು, ಮರೆತುಹೋಗುವುದು, ಪಿತ್ತ ಕೆರಳುವುದು, ಹಠಾತ್ ಕೋಪ ಬರುವುದು ಕೂಡಾ ಮನೋದೈಹಿಕ ಸಮಸ್ಯೆಗಳಾಗಿರುತ್ತವೆ. ಮನೋದೈಹಿಕ ಸಮಸ್ಯೆಗಳಲ್ಲಿ ಮುಖ್ಯವಾಗಿ ಎರಡು ವಿಧವನ್ನು ಗುರುತಿಸಬಹುದು.

ಶರೀರದಲ್ಲಿ ನೋವು, ಆಯಾಸ, ಅಧಿಕವಾಗಿ ನಿದ್ರೆ, ಅಥವಾ ನಿದ್ರೆ ಇಲ್ಲದಿರುವುದು, ಹಸಿವು ಇಲ್ಲದಿರುವುದು, ಆಮ್ಲತೆ (ಅಸಿಡಿಟಿ) ಈ ಬಗೆಯ ಸಮಸ್ಯೆಗಳು ಬರುವುದು ಒಂದಾದರೆ, ನರದೌರ್ಬಲ್ಯ ಸಮಸ್ಯೆಗಳು ಎದುರಾಗುವುದು, ಹೆಂಗಸರಲ್ಲಿ ಋತುಚಕ್ರವು ವ್ಯತ್ಯಾಸಗೊಳ್ಳುವುದು, ಲೈಂಗಿಕತೆಯಲ್ಲಿ ದೌರ್ಬಲ್ಯವನ್ನು ಹೊಂದುವುದು ಇತ್ಯಾದಿಗಳು ಮತ್ತೊಂದು ಬಗೆಯ ಸಮಸ್ಯೆಗಳು.

ಗರ್ಭಿಣಿಯರಾದಾಗಲೂ ಕೂಡಾ ಆ ಬಗೆಯ ಮನೋದೈಹಿಕ ಸಮಸ್ಯೆಗಳನ್ನು ಎದುರಿಸಬಹುದು. ಇದರಿಂದ ವಾಕರಿಕೆ, ಹುಸಿ ಹೆರಿಗೆ ನೋವು, ದೇಹದ ಇತರ ಭಾಗಗಳಲ್ಲಿ ನೋವು; ಇತ್ಯಾದಿಗಳನ್ನು ಕಾಣಬಹುದು.

ಅದೇ ರೀತಿ ಮನೋದೈಹಿಕ ವ್ಯತ್ಯಾಸಗಳು ಇನ್ನೂ ಕೆಲವು ಲಕ್ಷಣಗಳನ್ನು ತೋರುತ್ತವೆ. ಕೆಲವೊಮ್ಮೆ ದಿಢೀರನೆ ಹಾಸಿಗೆ ಹಿಡಿದು ಮಲಗುವಂತೆ ಮಾಡಬಹುದು. ಮೂರ್ಚೆ ಹೋಗುವುದು, ನಿದ್ರೆ ಬರುತ್ತಿರುವಂತೆ ಕಣ್ಣುಗಳು ಭಾರವಾಗಿದ್ದು ಕಣ್ಣೆಳೆಯುತ್ತಿರುವುದು, ಕೆಲವೊಮ್ಮೆ ಕಣ್ಣು ಕಾಣಿಸದೇ ಹೋಗುವುದು. ದೇಹದ ಯಾವುದಾದರೂ ಒಂದೋ, ಎರಡೋ ಭಾಗವನ್ನು ಕಳೆದುಕೊಂಡಂತೆ ಭಾಸವಾಗುವ ರೀತಿಗಳಲ್ಲಿಯೂ ಕಾಣುವುದು.

ಬಯಸಿ ಬರುವ ರೋಗ

ಮನೋದೈಹಿಕ ಸಮಸ್ಯೆಯಿಂದಾಗಿ ಕೆಲವರು ತಮಗೇನೋ ಬಹುದೊಡ್ಡ ರೋಗವೊಂದಿದೆ ಎಂದು ಭಾವಿಸತೊಡಗುತ್ತಾರೆ. ಯಾರಾದರೂ ವೈದ್ಯರ ಬಳಿ ತೋರಿಸಿ ಏನಿಲ್ಲ ಎಂದು ವರದಿ ಬಂದರೂ ಅವರಿಗೆ ಸಮಾಧಾನವಾಗುವುದಿಲ್ಲ. ಮತ್ತೊಬ್ಬ, ಮಗದೊಬ್ಬ ವೈದ್ಯರ ಬಳಿ ಪರೀಕ್ಷೆಗೆ ಒಳಪಡುತ್ತಿರುತ್ತಾರೆ. ನಿಮಗೆ ಏನೂ ಸಮಸ್ಯೆ ಇಲ್ಲವೆಂದರೂ ಅವರು ನಂಬುವುದಿಲ್ಲ.

ವೈದ್ಯರನ್ನು ಬದಲಾಯಿಸುತ್ತಾರೆಯೇ ಹೊರತು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ. ಕೆಲವರಿಗೆ ದೇಹದ ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿರುತ್ತದೆ. ಅದಕ್ಕೆ ಯಾವ ಕಾರಣವೂ ಇರುವುದಿಲ್ಲ. ಅದನ್ನು ವೈದ್ಯರ ಬಳಿ ತಪಾಸಣೆ ಮಾಡಿಸಿದಾಗ ಅವರಿಗೆ ಅಲ್ಲಿ ಏನೂ ತಿಳಿಯುದಿಲ್ಲ. ಆದರೆ ಇವರಿಗೆ ಮಾತ್ರ ಬಹುಕಾಲದಿಂದ ಆ ನೋವು ಕಾಣುತ್ತಿರುತ್ತದೆ. ಇದೂ ಕೂಡಾ ಮನೋದೈಹಿಕ ನೋವಿನ ಸಮಸ್ಯೆಯೇ ಆಗಿರುತ್ತದೆ.

ಕೆಲವರು ತಮ್ಮ ಮುಖದಲ್ಲಿ ಅಥವಾ ದೇಹದಲ್ಲಿ ಯಾವುದೋ ನ್ಯೂನ್ಯತೆ ಇದೆ ಎನಿಸುತ್ತಿರುತ್ತದೆ. ಅದಕ್ಕಾಗಿ ಕಾಸೆಮೆಟಿಕ್ ಚಿಕಿತ್ಸೆ ತೆಗೆದುಕೊಳ್ಳುತ್ತಿರುತ್ತಾರೆ. ಕೆಲವರು ಲಘು ಶಸ್ತ್ರ ಚಿಕಿತ್ಸೆಗಳನ್ನೂ ಕೂಡಾ ಕಾಲದಿಂದ ಕಾಲಕ್ಕೆ ಮಾಡಿಸಿಕೊಳ್ಳುತ್ತಿರುತ್ತಾರೆ. ಅದೆಷ್ಟು ಶಸ್ತ್ರ ಚಿಕಿತ್ಸೆಗಳನ್ನು ಮಾಡಿಸಿಕೊಂಡರೂ ಅಥವಾ ಕಾಸ್ಮೆಟಿಕ್ ಚಿಕಿತ್ಸೆಗಳನ್ನು ತೆಗೆದುಕೊಂಡರೂ ಅವರಿಗೆ ತೃಪ್ತಿಯೇ ಇರದಂತೆ ಮನೋರೋಗವಾಗಿ ಪರಿಣಮಿಸಿರುತ್ತದೆ.

ಉದಾಹರಣೆಗೆ ತಮ್ಮ ಮೂಗು ಸೊಟ್ಟ ಎನಿಸುತ್ತಿರುತ್ತದೆ. ತುಟಿಯಲ್ಲೇನೋ ಸ್ವಲ್ಪ ಸಮಸ್ಯೆ ಎನಿಸುತ್ತಿರುತ್ತದೆ. ಕೆನ್ನೆಯ ಮೇಲ್ಭಾಗದಲ್ಲೇನೋ ವಿನ್ಯಾಸ ಸರಿ ಇಲ್ಲ ಎನಿಸುತ್ತಿರುತ್ತದೆ, ಹೀಗೆ ತಮ್ಮ ಶರೀರ ರಚನೆಯ ಬಗ್ಗೆ ಅವರಿಗೆ ಸದಾ ಅತೃಪ್ತಿ. ಕೆಲವು ಸಿನಿಮಾ ಕಲಾವಿದರು, ಫ್ಯಾಷನ್ ಮತ್ತು ಪಾಪ್ ತಾರೆಯರಿಗೆ ಈ ಗೀಳಿತ್ತು. ತಮ್ಮ ಶರೀರದ ಯಾವುದೋ ಒಂದು ಭಾಗವನ್ನು ಒಂದಲ್ಲಾ ಒಂದು ಕಾರಣಕ್ಕೆ ಚಿಕಿತ್ಸೆಗೆ ಒಳಪಡಿಸಿಕೊಳ್ಳುತ್ತಿದ್ದರು. ಅವರಿಗೆ ತಮ್ಮದೇ ಶರೀರದ ಬಗ್ಗೆ ತೃಪ್ತಿಯೇ ಇರುತ್ತಿರಲಿಲ್ಲ.

ಸಾಮಾನ್ಯವಾಗಿ ಮಾನಸಿಕ ಖಿನ್ನತೆ ಮತ್ತು ಅನಿಯಂತ್ರಿತ ಭಾವೋದ್ವೇಗ ಈ ಬಗೆಯ ಮನೋದೈಹಿಕ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. ಒಟ್ಟಾರೆ ಮನಸ್ಥಿತಿಯು ದೇಹದ ಸ್ಥಿತಿಗತಿಗಳ ಮೇಲೆ ನೇರಾನೇರ ಪ್ರಭಾವವನ್ನು ಬೀರುತ್ತದೆ. ಅಂದರೆ ಈ ದೇಹದಲ್ಲಿ ತೊಂದರೆಗಳನ್ನು ಸರಿಪಡಿಸಿಕೊಳ್ಳಬೇಕೆಂದರೆ, ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಬೇಕೆಂದಾಯಿತು.

ಮನೋದೈಹಿಕ ಸಮಸ್ಯೆಗಳಿಗೆ ಚಿಕಿತ್ಸೆ

ಇಂತಹ ಸಮಸ್ಯೆಗಳಿಗೆ ಚಿಕಿತ್ಸೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ, ರೀತಿಯಿಂದ ರೀತಿಗೆ ಬದಲಾಗುತ್ತಿರುತ್ತದೆ. ಏನೇ ಆಗಲಿ, ಮನೋದೈಹಿಕ ಸಮಸ್ಯೆ ಇದೆ ಎಂಬುದನ್ನು ಗುರುತಿಸಿದ ಮೇಲೆ ವ್ಯಕ್ತಿಯು ಪ್ರಶಾಂತತೆಯನ್ನು ಪಡೆಯುವುದರ ಕಡೆಗೆ ಮೊದಲ ಗಮನ ಹರಿಸಬೇಕು.
ವಾತಾವರಣ ಬದಲಾವಣೆ ಬಹಳ ಉತ್ತಮವಾದದ್ದು.

ಯಾಂತ್ರಿಕವಾಗಿ ಕೆಲಸ ಮಾಡಿಕೊಂಡಿರುವ ಮತ್ತು ಒಂದೇ ಸಮನೆ ಅದೇ ಸ್ಥಳದಲ್ಲಿ ಇರುವ ಮೂಲಕ ಉಂಟಾಗಿರುವ ಏಕತಾನತೆಯನ್ನು ಒಡೆಯಲು ಬೇರೆ ವಾತಾವರಣಕ್ಕೆ ಹೋಗಬೇಕು. ಸ್ಥಳ ಬದಲಾವಣೆಯಾಗಬೇಕು. ಹೆಚ್ಚಿನ ಜನ ಸಂಚಾರವಿರದ, ಗದ್ದಲವಿರದ ಸ್ಥಳಗಳಿಗೆ ಪ್ರವಾಸ ಹೋಗುವುದು, ಅಲ್ಲಿ ಇರುವುದು ಮತ್ತು ತಮ್ಮ ಓದು, ಬರಹ, ಅಥವಾ ಇನ್ನಾವುದೇ ಒಬ್ಬರೇ ಮಾಡಿಕೊಳ್ಳುವ ಕೆಲಸ ಮಾಡಿಕೊಳ್ಳುವುದೆಲ್ಲವೂ ಮನೋದೈಹಿಕ ಸಮಸ್ಯೆಗಳಿಂದ ಪಾರಾಗಲು ಒಳ್ಳೆಯದೇ.

ಸುಂದರ ಮತ್ತು ಗದ್ದಲವಿಲ್ಲದಂತಹ ಸುಮಧುರ ಸಂಗೀತವನ್ನು ಕೇಳಬೇಕು. ಹಿಂಸೆ, ಅತಿ ಮಾನುಷಶಕ್ತಿಯ ಪ್ರದರ್ಶನಗಳಿರದ, ತುಂಬಾ ಉತ್ಪ್ರೇಕ್ಷಿತ ವೈಭವಗಳಿರದ ಸಕಾರಾತ್ಮಕವಾದ ಸಿನಿಮಾಗಳಿಗೆ ಹೋಗಬೇಕು. ನಿತ್ಯವೂ ನಿಯಮಿತವಾಗಿ ವ್ಯಾಯಾಮ, ನೃತ್ಯ ಈ ರೀತಿಯಲ್ಲಿ ದೇಹಕ್ಕೆ, ಮನಸ್ಸಿಗೆ ಮತ್ತು ಹೃದಯಕ್ಕೆ ಹದ ನೀಡಬೇಕು.

ಧಾರ್ಮಿಕತೆಯ ರೂಢಿಯಿದ್ದರೆ ಉಪವಾಸ, ಧ್ಯಾನ ಮತ್ತು ಪ್ರಾರ್ಥನೆಗಳನ್ನು ಮಾಡಬೇಕು.
ಒಳ್ಳೆಯ ಧನಾತ್ಮಕವಾದ ಕತೆಗಳನ್ನು ಕೇಳಬೇಕು ಅಥವಾ ಓದಬೇಕು.

ನಮ್ಮನ್ನು ನಾವು ಗಮನಿಸಿಕೊಂಡು, ಆತ್ಮಾವಲೋಕನ ಮಾಡಿಕೊಂಡು ನಮ್ಮ ವರ್ತನೆಗಳಲ್ಲಿ ಉದ್ದೇಶಪೂರ್ವಕವಾದಂತಹ ಬದಲಾವಣೆಗಳನ್ನು ತಂದುಕೊಳ್ಳಬೇಕು. ಇತರರಿಗೆ ಕಷ್ಟಗಳಲ್ಲಿ ನೆರವಾಗುವುದು, ಒತ್ತಡ ಮತ್ತು ಖಿನ್ನತೆ ಇರುವಂತವರನ್ನು ಕೂರಿಸಿಕೊಂಡು ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ಅದರಿಂದ ಹೇಗೆ ಹೊರಗೆ ಬರಬೇಕೆಂಬ ಸಾಧ್ಯತೆಗಳನ್ನು ಅವರಿಗೆ ಅರಿವಾಗುವಂತೆ ತಿಳಿಸಬೇಕು.

ಎಷ್ಟೋ ಸಲ ಈ ರೀತಿ ಇನ್ನೊಬ್ಬರಿಗೆ ಅವರ ಕಷ್ಟದಿಂದ ಹೊರಗೆ ನೆರವಾಗಲು ಹೇಳಿಕೊಡುವಾಗ ನಮ್ಮ ಕಷ್ಟಗಳಿಂದ ನಾವು ಹೊರಗೆ ಬರಲು, ನಮ್ಮ ಒತ್ತಡಗಳಿಂದ ನಾವು ಹಗುರವಾಗಲು ನಮಗೆ ಒಳನೋಟಗಳು, ದಾರಿ ಸಿಗುವುದು. ಮಕ್ಕಳೊಂದಿಗೆ ಆಡುವುದು, ಅವರೊಂದಿಗೆ ಓದುವುದು, ಉದ್ಯಾನವನಗಳಲ್ಲಿ ಓಡಾಡುವುದು ಇವೆಲ್ಲವೂ ಮನೋದೈಹಿಕ ಸಮಸ್ಯೆಗಳಿಗೆ ಚಿಕಿತ್ಸಕ ರೀತಿಯಲ್ಲಿ ಸಹಾಯಕ್ಕೆ ಬರುವುದು.

ಒಟ್ಟಾರೆ ಮನೋಭಾವ, ಏಕಪ್ರಕಾರದ ಯೋಚನೆಗಳು ಮತ್ತು ಮನಸ್ಸಿನ ವಿವಿಧ ಬಗೆಯ ಆಲೋಚನೆಗಳು ಆತಂಕಗಳನ್ನು, ಒತ್ತಡವನ್ನು ಉಂಟುಮಾಡುತ್ತವೆ. ಅವು ದೇಹದ ಮೇಲೂ ಪರಿಣಾಮ ಬೀರುತ್ತದೆ. ನಮ್ಮ ಗಮನಕ್ಕೆ ಬರುವಂತಹ ಆಲೋಚನೆಗಳ ಮನಸ್ಸು ಒಂದಾದರೆ, ನಮ್ಮ ಗಮನಕ್ಕೆ ಬರದೇ ಇರಬಹುದಾದಂತಹ ದೇಹದ ಮನಸ್ಸೊಂದು ಇದೆ. ಅದರಲ್ಲಿಯೂ ಕೂಡಾ ವ್ಯತ್ಯಾಸಗಳಾಗುತ್ತಿರುತ್ತವೆ.
ಇದು ನಾನಾ ರೀತಿಯ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಾಗಿ ಕಾಣುತ್ತವೆ. ಮನೋದೈಹಿಕ ಸಮಸ್ಯೆಗೆ ಎಷ್ಟೋ ಕಾರಣಗಳಿವೆ.

ಕೆಲವು ಜನಕ್ಕೆ ಸುಮ್ಮನೆ ದಿಗಿಲು ಬೀಳುವುದೇ ಒಂದು ಸಮಸ್ಯೆ. ಸಾಮಾಜಿಕ ಆತಂಕದ ಸಮಸ್ಯೆ, ವಿವಿಧ ರೀತಿಯ ಭಯಗಳು, ಏನೇನೋ ಕಾಣುವುದು, ಆರೋಗ್ಯದ ಬಗ್ಗೆಯೇ ಆತಂಕ, ಭಾವನೆಗಳ ವ್ಯತ್ಯಾಸಗಳು, ನಿದ್ರಾಹೀನತೆ, ಒತ್ತಡಗಳು, ಬಾಲ್ಯದ ಆತಂಕಗಳು, ಮದುವೆಯಾಗಿ ಹೊಸ ಮನೆಗೆ ಹೋಗುವ ಹೆಣ್ಣುಮಗುವಿನ ಆತಂಕ ಮತ್ತು ಒತ್ತಡಗಳು, ಸಂಬಂಧಗಳು ಮುರಿದುಹೋಗುತ್ತವೆ ಎಂಬ ಆತಂಕ, ಯಾರನ್ನಾದರೂ ಪ್ರೀತಿಪಾತ್ರರ ಕಳೆದುಕೊಂಡಿರುವ ನೋವು, ವ್ಯಾಪಾರ ವ್ಯವಹಾರ ರಾಜಕೀಯ ಅಥವಾ ಯಾವುದೇ ಉದ್ದಿಮೆಯಲ್ಲಿ ಅಪಾರವಾದ ನಷ್ಟ, ಕಿರುಕುಳ ನೀಡುವ ಸಾಲಗಾರರು, ಲೈಂಗಿಕ ಸಮಸ್ಯೆ, ಹೆಂಗಸರಲ್ಲಿ ಋತು ಸಮಸ್ಯೆ, ಸಾಮಾಜಿಕ ಅಥವಾ ಧಾರ್ಮಿಕತೆಯ ಕಾರಣದಿಂದ ಹತ್ತಿಕ್ಕಲಾಗುವ ಎಷ್ಟೋ ಮನೋಬಯಕೆಗಳು ಮತ್ತುಅವುಗಳಿಂದಾಗುವ ಒತ್ತಡಗಳು; ಹೀಗೆ ಯಾವುದ್ಯಾವುದೋ ಕಾರಣಗಳು ಮನೋದೈಹಿಕ ಸಮಸ್ಯೆಗೆ ಕಾರಣವಾಗುತ್ತವೆ.

ಒಟ್ಟಾರೆ ಕಣ್ಣು, ಕಿವಿ, ಮೂಗುಗಳಿಗೆ ಏನೋ ಸಮಸ್ಯೆ ಬಂದಂತೆ ಮನಸ್ಸಿಗೂ ಸಮಸ್ಯೆ ಬರುತ್ತಿರುತ್ತದೆ. ಹಾಗಾಗಿ ನಮ್ಮ ಮನಸ್ಸಿನ ಸಮಸ್ಯೆಗೆ, ಮೆದುಳಿನ ಸಮಸ್ಯೆಗೆ ಅಥವಾ ನರಗಳ ಸಮಸ್ಯೆಗೆ ಸಂಕೋಚಪಡುವುದು ಬೇಡ. ಮನಸಿನ ಸಮಸ್ಯೆಗೆ ಪರಿಹಾರ ಕಂಡುಕೊಂಡರೆ ಎಷ್ಟೋ ಸಮಸ್ಯೆಗಳು ಇಲ್ಲವಾಗುತ್ತವೆ. ದೈಹಿಕ ಸಮಸ್ಯೆಗಳೂ ಗುಣ ಹೊಂದುತ್ತವೆ.

ಕೊನೆಯ ಎಲೆ

ವಾಸ್ತವಧಾರವಲ್ಲದೇ ಭ್ರಮಾಧೀನವಾದ ಮನಸ್ಸಿಗೂ ಬದುಕನ್ನು ಕಲ್ಪಿಸಿಕೊಡಲು ಸಾಧ್ಯವಾಗುವುದು. ಅದೊಂದು ತಂತ್ರ. ದ ಲಾಸ್ಟ್ ಲೀಫ್ ಅಂದರೆ ಕೊನೆಯ ಎಲೆ ಎಂಬ ಕತೆ ಇದೆ. ಅದನ್ನು ಬರೆದವರು ಓ ಹೆನ್ರಿ ಎಂಬ ಅಮೇರಿಕೆಯ ಕತೆಗಾರ. ಅದರಲ್ಲಿ ಇಬ್ಬರು ಗೆಳತಿಯರಿರುತ್ತಾರೆ. ಅವರಿಬ್ಬರೂ ಚಿತ್ರಕಲಾವಿದೆಯರು. ಒಂದೇ ಸ್ಟುಡಿಯೋ ಮಾಡಿಕೊಂಡಿರುತ್ತಾರೆ. ಅವರಲ್ಲಿ ಒಬ್ಬಳಿಗೆ ನಿಮೋನಿಯಾ ರೋಗ ಬರುತ್ತದೆ.

ಅವಳಿಗೆ ಔಷಧೋಪಚಾರ ಆಗುತ್ತಿದ್ದರೂ, ಅವಳು ಮಲಗಿದ್ದ ಮಂಚದಿಂದ ಹೊರಗೆ ಒಂದು ಮರವನ್ನು ನೋಡುತ್ತಿರುತ್ತಾಳೆ. ಶಿಶಿರ ಕಾಲದಲ್ಲಿ ಆ ಮರದ ಎಲೆಗಳೆಲ್ಲಾ ದಿನದಿನವೂ ಉದುರುತ್ತಿರುತ್ತವೆ. ಅದನ್ನು ನೋಡುತ್ತಿದ್ದ ಅವಳಿಗೆ ಆ ಮರದ ಎಲೆಗಳೆಲ್ಲ ಉದುರುತ್ತಿರುವ ಹಾಗೆ ತನ್ನ ಬದುಕಿನ ದಿನಗಳೂ ಮುಗಿದುಹೋಗುತ್ತಿವೆ. ಆ ಮರದ ಕೊನೆಯ ಎಲೆ ಉದುರಿದ ಮೇಲೆ ತಾನೂ ಇರುವುದಿಲ್ಲ ಎಂದು ಹೇಳುತ್ತಿರುತ್ತಾಳೆ.

ದಿನವೂ ಅದನ್ನು ಕೇಳುತ್ತಿದ್ದ ಗೆಳತಿಯು ನಿಮೋನಿಯಾ ಬಂದಿರುವ ಗೆಳತಿಯ ಹುಚ್ಚು ಕಲ್ಪನೆಯನ್ನು ಒಪ್ಪದೇ ಸಕಾರಾತ್ಮಕವಾಗಿ ಅವಳಿಗೆ ಯೋಚಿಸಲು ಹಚ್ಚಲು ಯತ್ನಿಸುತ್ತಿರುತ್ತಾಳೆ. ಆದರೆ ಆಗುವುದಿಲ್ಲ. ನಿಮೋನಿಯಾದ ಹುಡುಗಿ ತನ್ನ ಕಲ್ಪನೆಯನ್ನೇ ಬಲಗೊಳಿಸಿಕೊಳ್ಳುತ್ತಿರುತ್ತಾಳೆ. ಒಂದು ದಿನ ಕಿಟಕಿ ತೆರೆದಾಗ ಮರದ ಎಲ್ಲಾ ಎಲೆಗಳು ಉದುರಿಬಿದ್ದಿದ್ದರೂ ಒಂದೇ ಒಂದು ಎಲೆ, ಕೊನೆಯ ಎಲೆ ಪಕ್ಕದ ಕಟ್ಟಡದ ಗೋಡೆಯೊಂದಕ್ಕೆ ತಗುಲಿದ್ದು, ಅದು ಉದುರಿರುವುದೇ ಇಲ್ಲ.

ಅದು ಉದುರುವ ಹೊತ್ತಿಗೆ ತಾನೂ ಸಾಯುತ್ತೇನೆ ಎಂದು ಅವಳ ನಂಬಿಕೆ. ಆದರೆ ಎಷ್ಟೇ ದಿನಗಳು ಕಳೆದರೂ ಅದು ಉದುರುವುದೇ ಇಲ್ಲ. ತಾನು ಬದುಕುತ್ತೇನೆ. ಆ ಎಲೆಯು ಅದನ್ನು ಸೂಚಿಸಲೆಂದೇ ಉದುರುತ್ತಿಲ್ಲ ಎಂದು ಅವಳಿಗೆ ಅನಿಸುತ್ತದೆ. ಅವಳು ಬದುಕುತ್ತಾಳೆ. ಆರೋಗ್ಯಕ್ಕೆ ಮರಳುತ್ತಾಳೆ.

ಆ ಎಲೆ ಉದುರುವುದೇ ಇಲ್ಲ. ಏಕೆಂದರೆ, ಈ ಹುಡುಗಿಯ ಹುಚ್ಚು ಭ್ರಮೆಯನ್ನು ಗೆಳತಿಯಿಂದ ತಿಳಿದ ಮುದುಕ ಕಲಾವಿದನೊಬ್ಬ ಮರದ ಕೊಂಬೆ ಮತ್ತು ಕಟ್ಟಡದ ಗೋಡೆ ಸಂಧಿಸುವಂತಹ ಎಡೆಯಲ್ಲಿ ಒಂದು ಎಲೆಯ ಚಿತ್ರವನ್ನು ಬಿಡಿಸಿರುತ್ತಾನೆ. ದೂರದಿಂದ ನೋಡಲು ಕೊಂಬೆಗೆ ಅಂಟಿಕೊಂಡಿರುವ, ಕಟ್ಟಡದ ಗೋಡೆಗೆ ತಗುಲಿಕೊಂಡಿರುವ ಹಳದಿ ಬಣ್ಣಕ್ಕೆ ತಿರುಗಿರುವ ಎಲೆಯಂತೆ ಕಾಣುತ್ತಿರುತ್ತದೆ. ಅದು ಅವಳ ಭ್ರಮೆಯ ಪ್ರಕಾರವೇ ಅವಳ ಜೀವವನ್ನು ಉಳಿಸಿರುತ್ತದೆ.

ಆದರೆ ದುರದೃಷ್ಟವಶಾತ್, ಆ ಕೊನೆಯ ಎಲೆಯ ಮಾಸ್ಟರ್ ಪೀಸ್ ಮಾಡಿದ್ದ ವೃದ್ಧ ಮತ್ತು ಕುಡುಕ ಕಲಾವಿದ ಮಾಗಿಯ ಚಳಿಯ ರಾತ್ರಿಯಲ್ಲಿ ಚಿತ್ರವನ್ನು ಬರೆದು ತಾನು ಚಳಿಗೆ ಸತ್ತಿರುತ್ತಾನೆ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಮರೆಯಾದ ಅಪೂರ್ವ ಚಿತ್ರಕಲಾ ಪ್ರತಿಭೆ ‘ಶೋಭಾ ಕರಣಿಕ್’

Published

on

ಶೋಭಾ ಕರಣಿಕ್
  • ಡಾ.ಎನ್.ಕೆ.ಪದ್ಮನಾಭ, ಸಹಾಯಕ ಪ್ರಾಧ್ಯಾಪಕರು, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ,ಉಜಿರೆ

ವರು ಬಿಡಿಸುತ್ತಿದ್ದ ರೇಖೆಗಳು ನಮ್ಮ ದೇಶೀ ಸಂಸ್ಕೃತಿಯ ವಕ್ತಾರಿಕೆಯ ಪಾತ್ರ ನಿರ್ವಹಿಸುತ್ತಿದ್ದವು. ಕನ್ನಡದ್ದೇ ಆದ ಕಲಾತ್ಮಕ ಪರಂಪರೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ್ದ ಅವರ ಚಿತ್ರಗಳು ಜೀವಂತಿಕೆಯ ಗುಣಲಕ್ಷಣದೊಂದಿಗೆ ಕಂಗೊಳಿಸುತ್ತಿದ್ದವು.

ಸಾಂಪ್ರದಾಯಿಕ ಚಿತ್ರಶೈಲಿಯನ್ನು ಆಧುನಿಕ ಅಗತ್ಯಗಳಿಗೆ ತಕ್ಕಂತೆ ಮಣಿಸಿ ಪರಂಪರೆಯೊಳಗೇ ಅಡಗಿದ್ದ ಮೌಲಿಕ ಮಾದರಿಗಳನ್ನು ಮನಗಾಣಿಸುವ ಶ್ರದ್ಧೆಯೊಂದಿಗೇ ಅವರು ಚಿತ್ರವಿನ್ಯಾಸ ರೂಪಿಸುತ್ತಿದ್ದರು. ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಮಾಧ್ಯಮಗಳ ಮೂಲಕ ತಮ್ಮ ಚಿತ್ರಗಳನ್ನು ಕಾಣಿಸುತ್ತಿದ್ದರು. ಪರಂಪರೆ ಮತ್ತು ವರ್ತಮಾನವನ್ನು ಬೆಸೆದು ಹೊಸ ಬಗೆಯ ಚಿತ್ರಪ್ರಯೋಗಗಳನ್ನು ನಡೆಸುವ ಹುಮ್ಮಸ್ಸಿನೊಂದಿಗೆ ಚಿತ್ರಕಲಾಯಾನ ಮುಂದುವರೆಸಿದ್ದರು. ಅವರ ಹೆಸರು ಶೋಭಾ ಕರಣಿಕ್.

ಇತ್ತೀಚೆಗಷ್ಟೇ ಅವರ ಚಿತ್ರಕಲಾಯಾನ ನಿಂತಿತು. ಅವರ ನಿಧನವು ವಿನೂತನವಾದ ಪ್ರಯೋಗಶೀಲ ಚಿತ್ರಕಲಾ ಸಾಧ್ಯತೆಗಳನ್ನು ತಡೆದು ನಿಲ್ಲಿಸಿತು. ಪುರಾಣದ ಕಥನ ಪ್ರಸಂಗಗಳಲ್ಲಿ ಉಲ್ಲೇಖಿತ ದೇವರು-ದೇವತೆಗಳ ಅಸ್ಮಿತೆ ಮತ್ತು ದೇಸೀ ಸಂಸ್ಕೃತಿಯನ್ನು ಬಿಂಬಿಸುವ ವಿನ್ಯಾಸಗಳನ್ನು ಸಮನ್ವಯಗೊಳಿಸಿ ಚಿತ್ರಕಲೆಗೆ ಹೊಸ ಆಯಾಮ ತಂದುಕೊಟ್ಟ ಪ್ರತಿಭೆಯಾಗಿ ಶೋಭಾ ಕರಣಿಕ್ ಅವರದ್ದು ವಿಶೇಷ ವ್ಯಕ್ತಿತ್ವವಾಗಿತ್ತು. ಮ್ಯೂರಲ್ ಪೇಂಟಿಂಗ್‌ನಲ್ಲಿ ಅವರಿಗಿದ್ದ ಪರಿಣತಿ, ಉತ್ತರ ಕನ್ನಡದ ಕಾವಿ ಕಲೆಯ ಕುರಿತಾದ ವಿಸ್ತೃತ ಜ್ಞಾನವು ಚಿತ್ರಕಲೆಯನ್ನು ಉನ್ನತೀಕರಿಸುವುದಕ್ಕೆ ಅವರಿಗೆ ನೆರವಾಗಿತ್ತು.

ಕಲೆಯ ಜೊತೆಗಿನ ಅನುಸಂಧಾನದ ಕ್ಷಣಗಳು ಅಪೂರ್ವ. ಒಂದು ನಿರ್ದಿಷ್ಟ ನಿರ್ಣಾಯಕ ಸಂದರ್ಭ, ಸಮಯದಲ್ಲಿ ಕಲೆಯೊಂದು ವ್ಯಕ್ತಿತ್ವವನ್ನು ಪ್ರಭಾವಿಸಿ ಸೃಜನಶೀಲತೆಯ ಹಸಿವನ್ನು ನೆಲೆಗೊಳಿಸುವುದಕ್ಕೆ ಪ್ರೇರಣೆಯಾಗುತ್ತದೆ. ಕಲೆಯ ಪ್ರಭಾವ ಎರಡು ಬಗೆಯದ್ದು. ಸಹೃದಯರನ್ನು ತನ್ನ ಕಲಾತ್ಮಕ ಮಾದರಿಗಳಿಂದ ಸೆಳೆದು ಅವರೊಳಗೆ ವಿಶೇಷ ಅನುಭೂತಿ ಧಾರೆ ಎರೆಯುವಂಥದ್ದು ಒಂದು ಬಗೆಯಾದರೆ ಹೀಗೆ ಸೆಳೆದುಕೊಂಡು ಮತ್ತೆ ಮತ್ತೆ ಪ್ರಭಾವಿಸುತ್ತಾ ಸಹೃದಯರನ್ನೇ ಕಲಾವಿದರನ್ನಾಗಿಸುವ ಸಾಧ್ಯತೆ ಮತ್ತೊಂದು ತೆರನಾದದ್ದು.

ಈ ಕಾರಣಕ್ಕಾಗಿಯೇ ಕಲಾತ್ಮಕ ಸಂಭವನೀಯತೆಯು ಅನನ್ಯವೆನ್ನಿಸಿಕೊಂಡಿದೆ. ಇಂಥ ಅನನ್ಯತೆಯೊಂದಿಗೇ ಶೋಭಾ ಕರಣಿಕ್ ಗುರುತಿಸಿಕೊಂಡಿದ್ದರು. ಅವರು ಓದಿದ್ದು ತಾಂತ್ರಿಕ ವಿಜ್ಞಾನ. ಆದರೆ, ಅವರ ನಿಜದ ಪ್ರತಿಭೆ ಅಭಿವ್ಯಕ್ತವಾದದ್ದು ಚಿತ್ರಕಲೆಯ ಮೂಲಕ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಪರಿಸರದಲ್ಲಿ ಬೆಳೆದ ಶೋಭಾ ಕರಣಿಕ್ ಮೊದಲಿನಿಂದಲೂ ದೇಶೀ ಕಲೆಯ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದರು. ಹೈಸ್ಕೂಲ್ ಓದುತ್ತಿರುವಾಗಲೇ ಕಾವಿಕಲೆಯ ವಿನ್ಯಾಸ ಅವರನ್ನು ಸೆಳೆದಿತ್ತು. ಇವುಗಳನ್ನು ಮತ್ತೆ ಮತ್ತೆ ನೋಡುತ್ತಾ ಹೋದಂತೆಲ್ಲಾ ಕಾವಿ ಕಲೆಯ ಕುರಿತ ಆಕರ್ಷಣೆ ಕಲಿಕೆಯ ಹಂಬಲವಾಗಿ ಮಾರ್ಪಟ್ಟಿತು. ಉತ್ತರ ಕನ್ನಡದ ಟೆಂಪಲ್ ರ‍್ಟ್ ಪ್ರಕಾರದ ಭಾಗವಾಗಿ ಕಾವಿ ಕಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಅವರು ರಚಿಸಿದ್ದ ತರಹೇವಾರಿ ವಿನ್ಯಾಸಗಳು ವಿವಿಧ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಗಮನ ಸೆಳೆದಿದ್ದವು.

ಕಾವಿ ಕಲೆಯೂ ಸೇರಿದಂತೆ ನಮ್ಮ ಸಾಂಪ್ರದಾಯಿಕ ಕಲೆಗಳು ಈ ಹಿಂದಿನ ಕಾಲದ ತಲೆಮಾರನ್ನಷ್ಟೇ ಪ್ರಭಾವಿಸಿದ್ದಲ್ಲದೇ ನಂತರದ ಹೊಸ ಪೀಳಿಗೆಯನ್ನೂ ಆಕರ್ಷಿಸುವ ಗುಣ ಹೊಂದಿವೆ. ಮೂಲ ಅಂತಃಸತ್ವಕ್ಕೆ ಧಕ್ಕೆಯೊದಗದ ಹಾಗೆ ಹೊಸ ಕಾಲದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಂಪ್ರದಾಯಿಕ ಚಿತ್ರಕಲಾ ವಿನ್ಯಾಸಗಳನ್ನು ಮರುರೂಪಿಸಬಹುದು. ಹೊಸ ಕಾಲದಲ್ಲಿ ಅವುಗಳ ಮಹತ್ವವನ್ನು ಮನಗಾಣಿಸಬಹುದು ಎಂಬುದು ಅವರ ಆಶಯವಾಗಿತ್ತು.

ಕಲೆಯೊಂದು ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ದಾಟಿಕೊಳ್ಳುವಾಗ ಪಲ್ಲಟಗಳು ಸಹಜ. ಈ ಪಲ್ಲಟಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂತಹ ಕಲೆಗಳಿಗೆ ಹೊಸಕಾಲದಲ್ಲೂ ಜೀವಂತಿಕೆಯನ್ನು ತಂದುಕೊಡುವ ಪ್ರಯತ್ನದ ಅಗತ್ಯವನ್ನು ಮನಗಾಣಿಸುವುದಕ್ಕಾಗಿಯೇ ಶೋಭಾ ಕರಣಿಕ್ ಅವರು ಚಿತ್ರಕಲಾ ರಚನೆಯ ವೈವಿಧ್ಯಮಯ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದರು.

ಅವರ ನಿಧನದಿಂದ ಈ ಪ್ರಯೋಗಶೀಲ ಹೆಜ್ಜೆಗಳು ನಿಂತಂತಾಗಿವೆ. ಆದರೆ, ಅವರು ಪರಂಪರೆ ಮತ್ತು ವರ್ತಮಾನವನ್ನು ಸಮನ್ವಯಗೊಳಿಸಿ ಸಾಬೀತುಪಡಿಸಿದ ಅಪೂರ್ವ ಚಿತ್ರಕಲಾ ಪ್ರಯೋಗಶೀಲತೆಯ ಜೀವಂತಿಕೆ ಹೊಸ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿರುತ್ತದೆ. ಅವರ ಹೆಸರಿನ ಇನಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಇಂಥ ಸ್ಫೂರ್ತಿಯ ಪ್ರಭೆಯನ್ನು ದಾಟಿಸುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಹೊಸತನದ ಹೊಸ್ತಿಲಲ್ಲಿ..!

Published

on

ಬರಹ : ಮೀನಾಕ್ಷಿ. ಬಿ
  • ಮೀನಾಕ್ಷಿ .ಬಿ, ಎಂ. ಎ ವಿದ್ಯಾರ್ಥಿನಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

ಹೊಸವರ್ಷ ವೆಂಬುದು ಪ್ರತಿಯೊಬ್ಬರ ಬಾಳಲ್ಲಿ ವರ್ಷಕ್ಕೊಮ್ಮೆ ಬರುವ ಹೊಸದಿನಗಳ ಆಗಮನ ಯಾಕೆಂದರೆ ಹೊಸತನವನ್ನು ತರುತ್ತಾ ಇರುವ ಹೊಸವರ್ಷ ಕೂಡ ಒಂದು ಜೀವನದ ಭರವಸೆ, ನಿರೀಕ್ಷೆ ಕನಸುಗಳ ಬಂಡಿಯ ಮೇಲೆ ಸಾಗುವ ಪ್ರಯಾಣ ನಮ್ಮ ಜೀವನ.

ವ್ಯಕ್ತಿಯ ನಂಬಿಕೆಯ ಆಧಾರದ ಮೇಲೆಯೇ ಜೀವನ ಸಾಗುಸುತ್ತಿರುವುದು.ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಕೂಡ ಕಷ್ಟ -ಸುಖ ದುಃಖದ ಸಂಗತಿಗಳು ಇದ್ದೆ ಇರುತ್ತದೆ. ಕೆಲವೊಂದು ಬಾರಿ ಹತಾಶೆಯನ್ನು ಹೊಂದಿ ಜೀವನದಲ್ಲಿ ಜಿಗುಪ್ಸೆ ಒಂದು ಕೆಟ್ಟ ನಿರ್ಧಾರಕ್ಕೆ ಮನಸ್ಸು ದಾರಿ ಮಾಡಿಕೊಡುತ್ತದೆ. ಹಾಗೆಯೇ ಕಷ್ಟ ಇದ್ದಲ್ಲಿ ಸುಖವಿರುವುದುಂಟು ಅನ್ನುವ ಹಾಗೇ ಇವತ್ತಲ್ಲ ನಾಳೆ ಒಳ್ಳೆಯ ದಿನಗಳು ನಮ್ಮ ಜೀವನದಲ್ಲಿ ಬರಬಹುದೆಂಬ ಭರವಸೆ,ಆತ್ಮವಿಶ್ವಾಸವನ್ನು ಇಟ್ಟುಕೊಂಡು ಜೀವನ ನಡೆಸುತ್ತಲೇ ಇದ್ದೇವೆ.

ಈ ವರ್ಷ ಒಳ್ಳೆಯದಾಗಿಲ್ಲ ಅಂದರೆ ಏನು ಮುಂದಿನ ವರ್ಷ ಆದರೂ ನನ್ನ ಬದುಕು ಬದಲಾಗಬಹುದು ಎಂಬ ಹೊಸತನವನ್ನು ನಮ್ಮಲ್ಲಿ ಭರವಸೆ,ನಂಬಿಕೆಯ ಬೇರಿನೊಂದಿಗೆ ಬೆರೆಸಿಕೊಂಡು ಬದುಕಬೇಕು.ನಾಳೆಯ ದಿನಗಳ ಮೇಲಿನ ಅನಿರೀಕ್ಷಿತ ತೀರಿವಿನಿಂದಾಗುವ ಬದುಕಿನಲ್ಲಾಗುವ ಬದಲಾವಣೆ ಹೊಸತನದ ಚಾಪನ್ನು ಮೂಡಿಸುತ್ತದೆ.
ಎಂಥ ಹತಾಶ ಮನಸ್ಥಿತಿಯವರಲ್ಲೂ ಹೊಸವರ್ಷ ಭರವಸೆಯ ಅಭಯ ಹಸ್ತವನ್ನು ಚಾಚುತ್ತದೆ. ಅದೆಲ್ಲಿಂದಲೇ ಆತ್ಮ ವಿಶ್ವಾಸದ ಬೆಳಕಿನ ಕಿಡಿಯೊಂದು ಕಾಣಿಸಿಕೊಳ್ಳುತ್ತದೆ.

ಹೊಸವರ್ಷವೆಂಬುದು ಕೇವಲ ಸಂಭ್ರಮದ ಕಾಲ ಮಾತ್ರವಲ್ಲ. ಕಳೆದ ದಿನಗಳತ್ತ ಹಿಂತಿರುಗಿ ನೋಡುವ ಸಮಯ ಕೂಡ ಹಿಂದಿನ ದಿನಗಳ ಪುಟಗಳನ್ನು ತೆಗೆದು ನೋಡಿದರೆ. ಉತ್ಸಾಹದ ಗಳಿಗೆಗಳು ಮುಂದಿನ ಕೆಲಸಗಳಿಗೆ ಚೈತನ್ಯ, ಉತ್ಸಾಹ ನೀಡಬಲ್ಲದು.ನಮ್ಮ ದಿಕ್ಕಿಲ್ಲದ ದಾರಿಗೆ ಖಚಿತ ದಿಕ್ಕು ದಾರಿಯನ್ನು ತೋರಬಲ್ಲದು.

ಜೀವನದ ಪ್ರಯಾಣಕ್ಕೆ ಒಂದು ನಿಲ್ದಾಣವಾಗಿದೆ. ನಾವು ಕಾಣುವ ಕನಸಗಳು ಕನಸಾಗಿಯೇ ಉಳಿದಿದೆ ಯಾಕೆಂದರೆ ನಮ್ಮಲ್ಲಿನ ಬೇಜವಾಬ್ದಾರಿ, ನಿರ್ಲಕ್ಷತನ ಆಮೇಲೆ ಮಾಡಿದರೆ ಆಯ್ತು ಅನ್ನೋ ಮನೋಭಾವನೆ ಯಾವುದರ ಬಗ್ಗೆಯೂ ಆಸಕ್ತಿ ಕೊಡದೆ ಇರೋದು ಎಲ್ಲವು ನಮ್ಮ ಕನಸಿನ ಜೀವನ ರೂಪಿಸಿಕೊಳ್ಳುವಲ್ಲಿ ಸಫಲರಾಗದೆ ಉಳಿಯಲು ಕಾರಣ.

ಮೊದಲು ಆತ್ಮವಿಶ್ವಾಸ ಬೇಕು ನಾನು ಈ ಕೆಲಸವನ್ನು ಮಾಡುವೆ ಎಂಬ ಒಂದು ನಿರ್ಧಿಷ್ಟ ಗುರಿ ಇರಬೇಕು ಅಂಗಿದ್ರೆ ಅಷ್ಟೇ ಜೀವನದ ಪಯಣದ ಹಾದಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲವಾದಲ್ಲಿ ಸೋಲನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತದೆ. ಮುಂದಿನ ದಿನಗಳ ಆಗಮನದೊಂದಿಗೆ ನಾವು ಕಂಡ ಕನಸನ್ನು ಈಡೇರಿಸಿಕೊಳ್ಳುವ ಸತತ ಪ್ರಯತ್ನದೊಂದಿಗೆ ಬರುವ ದಿನವನ್ನು ಸ್ವಾಗತಿಸಿಕೊಳ್ಳೋಣ.
ಎಲ್ಲರ ಬಾಳಲಿ ಹರುಷ ,ಸಂತೋಷ ಮನೆಮಾಡಲಿ ಎಂದು ಆಶಿಸುತ್ತಾ ಎಲ್ಲರಿಗೂ ಹೊಸವರ್ಷದ ಶುಭಾಶಯಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕಾಮರೂಪದ ಪ್ರಭಾಕರ

Published

on

  • ಪ್ರೊ.ರಹಮತ್ ತರೀಕೆರೆ

ನಾನು ಕೋಲಾರಕ್ಕೆ ಹೋದಾಗೆಲ್ಲ ಎರಡು ಜಾಗಗಳಿಗೆ ತಪ್ಪದೆ ಭೇಟಿ ಕೊಡುತ್ತೇನೆ. ಒಂದು-ಕೆ.ರಾಮಯ್ಯ ಮತ್ತವರ ಸಂಗಾತಿಗಳು ಸೇರಿ ತೇರುಹಳ್ಳಿ ಬೆಟ್ಟದ ಮೇಲೆ ಕಟ್ಟಿರುವ `ಆದಿಮ’ಕ್ಕೆ; ಇನ್ನೊಂದು-`ಕಾಮರೂಪಿ’ ಎಂಬ ಹೆಸರಲ್ಲಿ ಬರೆಯುತ್ತಿದ್ದ ಕನ್ನಡ ಲೇಖಕ ಡಾ. ಎಂ.ಎಸ್. ಪ್ರಭಾಕರ ಅವರಿರುವ ಕಠಾರಿಪಾಳ್ಯದ ಮನೆಗೆ. 50ರ ದಶಕದ ಕೊನೆಯಲ್ಲಿ ಕರ್ನಾಟಕ ಬಿಟ್ಟುಹೋದ ಪ್ರಭಾಕರ, ‘ಹಿಂದೂ’ ಪತ್ರಿಕೆಯ ವರದಿಗಾರರಾಗಿ ಆಫ್ರಿಕಾ ಅಮೇರಿಕ ಬಾಂಗ್ಲಾದೇಶ ಈಶಾನ್ಯ ಭಾರತವನ್ನೆಲ್ಲ ಅಲೆದಾಡಿ, ಕಡೆಗೆ ಕಾಮರೂಪದಲ್ಲಿ (ಅಸ್ಸಾಮಿನ ಪುರಾತನ ಹೆಸರಿದು) ನೆಲೆಸಿಬಿಟ್ಟರು.

`ಕಾಮರೂಪ’ ಶಬ್ದಕ್ಕೆ ಬಯಸಿದ ರೂಪಧಾರಣೆ ಮಾಡುವ ಮಾಯಾವಿ ವಿದ್ಯೆ ಎಂಬರ್ಥವೂ ಇದೆ. ಎಂಬತ್ತರ ಪ್ರಾಯದಲ್ಲಿ ಕರ್ನಾಟಕಕ್ಕೆ ಮರಳಿ ಬಂದಿರುವ ಪ್ರಭಾಕರ ಅವರು, ತಾವು ಹುಟ್ಟಿಬೆಳೆದ ಮನೆಯಲ್ಲಿ ಬಿಡಾರ ಹೂಡಿದ್ದಾರೆ. ಹಿರೀಕರು ಕಟ್ಟಿದ ದೊಡ್ಡಮನೆ. ಮನೆಯೊಳಗೊಂದೇ ಜೀವ; ಮನೆ ತುಂಬ ಪುಸ್ತಕದ ರಾಶಿ (ಹೆಚ್ಚಿನವು ಇಂಗ್ಲೀಶ್ ಬಂಗಾಳಿ ಅಸ್ಸಾಮಿ). ನಟ್ಟನಡುವಿರುವ ಹಾಲಿನ ಮೂಲೆಯಲ್ಲಿ ಬೀದಿಗೆ ಬೆನ್ನುಕೊಟ್ಟಂತೆ ಕೂತು, ಲ್ಯಾಪ್‌ಟಾಪಿನಲ್ಲಿ ಬರೆಯುತ್ತ, ವೆಬ್‌ಸೈಟುಗಳನ್ನು ಜಾಲಾಡುತ್ತ, ಬ್ಲಾಗುಗಳನ್ನೋದುತ್ತ ಪ್ರಭಾಕರ ಕುಳಿತಿರುತ್ತಾರೆ.

ಅವರ ಮನಗೆ ಹೋದಾಗಲೆಲ್ಲ ನನಗೆ ರಾಗಿಮುದ್ದೆ ಸೊಪ್ಪಿನ ಸಾರಿನ ಊಟ ಸಿಗುತ್ತದೆ. ಅವರು ಉಣ್ಣುವುದೊಂದು ಅಪೂರ್ವ ದೃಶ್ಯ. ತಣಿಗೆಯ ನಡುವೆ ಹದವಾಗಿ ಬೆಂದು ಕಂಪು ಬೀರುವ ಗೋಂದಿನಂತಹ ಕೆಂಗಪ್ಪು ಬಣ್ಣದ ಬಿಸಿಮುದ್ದೆಯನ್ನಿಟ್ಟು, ಅದರ ತಲೆಯ ಮೇಲೆ ಶಿಖರವನ್ನು ಹಿಮವು ಅಲಂಕರಿಸುವಂತೆ ಬೆಣ್ಣೆಯ ಚೂರನ್ನಿಡುತ್ತಾರೆ; ಬೆಣ್ಣೆಯು ಮುದ್ದೆ ಕಾವಿಗೆ ಕರಗಿ ಇಡೀ ಚೆಂಡನ್ನು ಆವರಿಸಿ ಅಭಿಷೇಕ ಮಾಡಿಸಿಕೊಂಡ ಮೂರುತಿಯಂತೆ ಥಳಥಳ ಹೊಳೆಯುತ್ತದೆ. ಆಗ ಘಮಿಸುವ ಮುದ್ದೆಯನ್ನು ಚೆನ್ನಾಗಿ ಮಿದ್ದು, ಒಂದು ಬದಿಯಿಂದ ಇಷ್ಟಿಷ್ಟೇ ಮುರಿದು ತುತ್ತು ಮಾಡಿ, ಸೊಪ್ಪಿನ ಗಟ್ಟಿಸಾರಲ್ಲಿ ಹೊರಳಾಡಿಸಿ ಗುಕ್ಕನೆ ನುಂಗಿ ಕಣ್ಮುಚ್ಚಿ ಕೊಳ್ಳುತ್ತಾರೆ. ತರುವಾಯ ಶ್ರೀಯುತರು ಜ್ಞಾನೋದಯವಾದ ಸಿದ್ಧನಂತೆ ಅವರ ಮುಖದಲ್ಲಿ ಪರಮಾನಂದದ ಒಂದು ಕಳೆ ಆವಿರ್ಭವಿಸುತ್ತದೆ. ಇದನ್ನೆಲ್ಲ ಕಾಣುವಾಗ, ಲೋಕವನ್ನೆಲ್ಲ ಸುತ್ತಾಡಿರುವ ಇವರು ಕೋಲಾರಕ್ಕೆ ಮುದ್ದೆಸುಖಕ್ಕಾಗಿಯೆ ಬಂದರೇನೊ ಎಂದು ಶಂಕೆ ಬರುತ್ತದೆ. ಪ್ರಭಾಕರ ಅವರಿಗೆ ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಅನೇಕ ದೂರುಗಳಿವೆ. ಅವುಗಳಲ್ಲಿ ಆಹಾರ ತಯಾರಿಕೆ ಮತ್ತು ಸೇವನೆ ಕುರಿತು ಅದರಲ್ಲಿ ವಿವರಗಳೇ ಇಲ್ಲ ಎಂಬುದೂ ಒಂದು.

ಕನ್ನಡದ ಅತಿಹಿರಿಯ ಮತ್ತು ಹೆಚ್ಚು ಬರೆಯದ ಲೇಖಕರಲ್ಲಿ ಪ್ರಭಾಕರ ಅವರೂ ಒಬ್ಬರು. ನಾನು ಅವರ ‘ಕುದುರೆಮೊಟ್ಟೆ’ ಕಾದಂಬರಿಯನ್ನೂ ‘ಒಂದು ತೊಲ ಪುನುಗು ಮತ್ತು ಇತರ ಕತೆಗಳು’ ಸಂಕಲನವನ್ನೂ ಓದಿದ್ದೆ. ಇವುಗಳಲ್ಲಿ ‘ಕುದುರೆ ಮೊಟ್ಟೆ’ ಈಗಲೂ ಪ್ರಿಯವಾದ ಪುಸ್ತಕ. ಅದರಲ್ಲಿರುವ ಕೆಲವು ಪಾತ್ರಗಳು ಕೊಂಚ ವಿಕ್ಷಿಪ್ತವಾಗಿವೆ; ಅಲ್ಲಿನ ಬಾಳಿನ ಸನ್ನಿವೇಶಗಳೂ ಅನಿರೀಕ್ಷಿತವಾಗಿವೆ. ಆದರೆ ಎಲ್ಲಿಯೂ ಹುಸಿ ಅನಿಸದಂತೆ, ಒಂದೇ ಶಬ್ದ ಅಪವ್ಯಯವಾಗದಂತೆ ಅದನ್ನು ಬರೆಯಲಾಗಿದೆ. ಪಾತ್ರಗಳನ್ನು ತಮ್ಮ ಸಿದ್ಧಾಂತಕ್ಕೆ ತಕ್ಕಂತೆ ಮಣಿಸಿ ಕೈಗೊಂಬೆಯಂತೆ ಆಡಿಸುತ್ತ, ಕೆಲವನ್ನು ಮುದ್ದಾಮಾಗಿ ದುರುಳಗೊಳಿಸಿ ಕಲೆಯ ಜಾಣಮುಸುಕಿನಲ್ಲಿ ಅಡಗಿಸುತ್ತ, ಕೆಲವು ಕಾದಂಬರಿಗಳು ಕನ್ನಡದಲ್ಲಿ ಪ್ರಕಟವಾಗುತ್ತಿವೆ. ಇಂತಹ ಹೊತ್ತಲ್ಲಿ ಅರ್ಧ ಶತಮಾನದ ಹಿಂದೆ ಪ್ರಕಟವಾದ ಈ ಕಾದಂಬರಿ, ಬಾಳನ್ನು ಕುರಿತು ತೋರುವ ಕಕ್ಕುಲಾತಿ ಕಂಡು ಖುಶಿಯಾಗುತ್ತದೆ. ಕತೆಗಾರರಿಗೆ ತಾವು ಸೃಷ್ಟಿಸುವ ಕೆಲವು ಪಾತ್ರಗಳ ಮೇಲೆ ಕೊಂಚ ಭಾವ ಪಕ್ಷಪಾತವಿರುತ್ತದೆ. ಆದರೆ ತಾವು ಸೃಜಿಸುವ ಎಲ್ಲ ಪಾತ್ರಗಳನ್ನು ತಾಯಿಯಂತೆ ನೋಡುವುದು ಬರೆಹದ ನೈತಿಕತೆ. ಈ ಸಂಗತಿ ಕುವೆಂಪು ಮತ್ತು ಟಾಲ್ ಸ್ಟಾಯ್ ಕಾದಂಬರಿ ಓದಿದವರಿಗೆ ಗೊತ್ತಿದೆ.

ಕಾಮವನ್ನು ಇಟ್ಟುಕೊಂಡು ಜೀವನದ ಸತ್ಯಗಳನ್ನು ಶೋಧಿಸುವ ವಿಷಯದಲ್ಲಿ ಕಾಮರೂಪಿಯವರು, ಒಬ್ಬ ಟಿಪಿಕಲ್ ನವ್ಯಲೇಖಕರೇ. ಆದರೆ ನವ್ಯದ ಕೆಲವು ಲೇಖಕರಲ್ಲಿ ಕಾಣುವಂತೆ, ಅದಕ್ಕವರು ಅನಗತ್ಯ ಪ್ರಾಮುಖ್ಯ ಕೊಡುವುದಿಲ್ಲ. ಅದನ್ನು ಚಪ್ಪರಿಸುವುದಿಲ್ಲ. ವೈಭವೀಕರಿಸುವುದಿಲ್ಲ. ಬದಲಿಗೆ, ಮನುಷ್ಯರಾದವರು ಜೀವನದ ಇಕ್ಕಟ್ಟುಗಳಲ್ಲಿ ಸಿಲುಕಿ ಅನಿವಾರ್ಯವಾಗಿ ವರ್ತಿಸುವ ಪರಿಯನ್ನು ತಣ್ಣಗೆ ವ್ಯಂಗ್ಯವಾಗಿ ಚಿತ್ರಿಸುತ್ತಾ ಹೋಗುತ್ತಾರೆ. ಸತ್ಯಕ್ಕಿರುವ ಹಲವು ಮುಖಗಳನ್ನು ಹಿಡಿಯುವಂತಹ ಕುರುಸೋವಾನ ‘ರಶೋಮನ್’ ಸಿನಿಮಾ ನೆನಪಿಸುವ ಈ ಕಾದಂಬರಿ, ಮತ್ತೆಮತ್ತೆ ಓದಬೇಕು ಎನಿಸುವಷ್ಟು ತಾಜಾ ಆಗಿದೆ. ‘ಉಪಪತ್ತಿಯೋಗ’ ಎಂಬುದನ್ನು ಬಿಟ್ಟರೆ, ಉಳಿದಂತೆ ವ್ಯಕ್ತಿವಾದವನ್ನು ಅತಿಯಾಗಿ ಬಿಂಬಿಸುವ ತಂತ್ರದ ಬಿಗಿತದಲ್ಲಿರುವ ಅವರ ಕತೆಗಳು ಅಷ್ಟು ಆಪ್ತವೆನಿಸಿಲ್ಲ.

ನನಗೆ ಪ್ರಭಾಕರ್ ಕುರಿತು ಆಸಕ್ತಿ ಮೂಡಿಸಿದವರು ಮಾರ್ಕ್ಸ್‌ವಾದಿ ಚಿಂತಕ ಕೆ.ರಾಘವೇಂದ್ರರಾವ್ ಅವರು. ಅಮೆರಿಕೆಯ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ಎ.ಕೆ.ರಾಮಾನುಜನರ ಹೊಂದಾಣಿಕೆಯ ಗುಣವನ್ನು ಕಟುವಾಗಿ ವಿಮರ್ಶಿಸುತ್ತ, ಅಲ್ಲಿನ ಶೈಕ್ಷಣಿಕ ಕ್ಷೇತ್ರದಲ್ಲಿರುವ ಬಿಳಿಯರ ಯಜಮಾನಿಕೆಗೆ ಬಾಗದೆ ಹೊರಬಂದ ಪ್ರಭಾಕರ ಅವರ ದಿಟ್ಟ ಸ್ವಭಾವವನ್ನು ಅವರು ತಮ್ಮ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದರು. ಪ್ರಭಾಕರ ಅವರನ್ನು ಭೇಟಿಯಾಗಬೇಕು ಎಂದು ಅನಿಸುತ್ತಿತ್ತು. ಅದರಲ್ಲೂ ಭಾರತದ ಶಾಕ್ತಪೀಠಗಳಲ್ಲಿ ಮುಖ್ಯವಾಗಿರುವ ಅಸ್ಸಾಮಿನ ಕಾಮಾಖ್ಯಕ್ಕೆ ಹೋಗಲು ಯತ್ನಿಸುತ್ತಿದ್ದ ನಾನು, ಅಲ್ಲೇ ಸಮೀಪದ ಗೌಹಾತಿಯಲ್ಲಿರುವ ಅವರನ್ನು ಕಾಣಲು ಹವಣಿಕೆ ಮಾಡಿಕೊಂಡಿದ್ದೆ. ಆದರೆ ಸಾರ್ವಜನಿಕ ವ್ಯಕ್ತಿಯಾಗಲು ನಿರಾಕರಿಸಿ ಅಜ್ಞಾತವಾಗಿಯೇ ಬಾಳುವ ಅವರು ಸುಲಭವಾಗಿ ಸಿಗುತ್ತಿರಲಿಲ್ಲ.

ನನ್ನ ತವಕವನ್ನರಿತಿದ್ದ ಕೆ.ರಾಮಯ್ಯ, ‘ಪ್ರಭಾಕರ್ ಕರ್ನಾಟಕಕ್ಕೆ ಬಂದಿದ್ದಾರೆ. ಬನ್ನಿ’ ಎಂದು ಅವರ ಮನೆಗೆ ಕರೆದುಕೊಂಡು ಹೋದರು. ಮಧ್ಯಾಹ್ನದ ಸುಡುಹೊತ್ತು. ಪ್ರಭಾಕರ ಪ್ರೀತಿಯಿಂದ ಬರಮಾಡಿಕೊಂಡು ನೊರೆ ತುಂಬಿದ ಒಗರು ಬೀರಿನ ಮಗ್ಗನ್ನು ಕೈಗೆ ಕೊಟ್ಟು, ಕಾಮಾಖ್ಯದ ಬಗ್ಗೆಯೂ ತಂತ್ರ ಪಂಥದ ಬಗ್ಗೆಯೂ ಇರುವ ಕೃತಿಗಳನ್ನು ತೋರಿಸುತ್ತ, ಗಂಟೆಗಟ್ಟಳೆ ಮಾತಾಡಿದರು. ಅರಿವಿನ ಕಿಡಿಗಳು ಹಾರುವ ಅದೊಂದು ವಿದ್ವತ್‌ಪೂರ್ಣ ಹರಟೆ.

ನಾನು ಅವರಲ್ಲಿ ಶಿಷ್ಯವೃತ್ತಿ ಸ್ವೀಕರಿಸಿ ಹಲವಾರು ಸಲ ಕೋಲಾರಕ್ಕೆ ಹೋಗಿ ಬಂದಿದ್ದೇನೆ. ಅವರ ಮಾತುಕತೆಗಳಲ್ಲಿ ನನಗೆ ಮುಖ್ಯವಾಗಿ ಕಂಡಿದ್ದು, ಜಾತ್ಯತೀತವಾದ ಮನಸ್ಸು; ಸಣ್ಣಪುಟ್ಟ ಸಂಗತಿಗಳ ಮೇಲೂ ಕಾಳಜಿಯಿಂದ ಸೂಕ್ಷ್ಮವಾಗಿ ಚಿಂತಿಸುವ ಮಾನವೀಯತೆ; ಗತಕಾಲದ ಬಗ್ಗೆ ಹಳಹಳಿಕೆಯಿಲ್ಲದೆ ವರ್ತಮಾನದ ಸಮಸ್ಯೆಗಳನ್ನು ಕುರಿತು ಚಿಂತಿಸುವ ಪ್ರಖರವೂ ನಿಷ್ಠುರವೂ ಆದ ರಾಜಕೀಯ ಪ್ರಜ್ಞೆ. ಸಾರ್ವಜನಿಕ ಬದುಕಿನಲ್ಲಿ ಜಾತಿಪದ್ಧತಿ ಎಲ್ಲೆಮೀರಿ ನಿರತವಾಗಿರುವ ಕುರಿತ ಹೇವರಿಕೆ. ಹಿರಿಯ ಲೇಖಕರಲ್ಲಿ ಸಾಮಾನ್ಯವಾಗಿ ಎರಡು ಸ್ವಭಾವಗಳಿರುತ್ತವೆ. ಒಂದು- ಕಳೆದುಹೋದ ಕಾಲದ ಬಗ್ಗೆ ಭಾವುಕ ಮರುಕಳಿಕೆ. ಎರಡು-ವರ್ತಮಾನದ ಸಾಮಾಜಿಕ ರಾಜಕೀಯ ವೈರುಧ್ಯಗಳನ್ನು ಉದಾರವಾಗಿ ನೋಡುತ್ತ, ಚಿಂತನೆಯ ಮೊನಚನ್ನು ಕಳೆದುಕೊಳ್ಳುವುದು. ಆದರೆ ಆತ್ಮಕ್ಕೆ ಸದಾ ಬೆಂಕಿ ಹತ್ತಿಸಿಕೊಂಡಂತೆ ಉರಿಯುವ ಕೆಲವರಿದ್ದಾರೆ. ಕೋಚೆ, ಕುಸುಮಾಕರ ದೇವರಗೆಣ್ಣೂರ, ಎಂ.ಡಿ. ನಂಜುಂಡಸ್ವಾಮಿ, ನೀಲಗಂಗಯ್ಯ ಪೂಜಾರ, ಕೆ.ರಾಘವೇಂದ್ರರಾವ್, ಅಬ್ಬಿಗೇರಿ ವಿರೂಪಾಕ್ಷಪ್ಪ, ಸಾರಾ ಅಬೂಬಕರ್, ಕಾಮರೂಪಿ ಪ್ರಭಾಕರ-ಇವರೆಲ್ಲ ಇಂತಹವರು. ಈ ಹಿರಿಯರ ಜತೆ ಮಾತಾಡುವಾಗ ಇವರ ಹಠಮಾರಿತನ, ಜಗಳಗಂಟಿತನ, ಆದರ್ಶವಾದ, ನೈತಿಕ ಪ್ರಜ್ಞೆ ಹಾಗೂ ಭಿನ್ನಮತ ಇಷ್ಟವಾಗುತ್ತದೆ.

ಕರ್ನಾಟಕದಿಂದ ಬಹುಕಾಲ ದೂರವಿದ್ದ ಕಾರಣದಿಂದ ಏರ್ಪಟ್ಟಿರುವ ಅಪರಿಚಿತತೆಯಿಂದಲೊ ಅಥವಾ ಕರ್ನಾಟಕದ ಒಳಗೇ ಇದ್ದೂಇದ್ದೂ ನಮಗೆ ಕಾಣದಂತಾಗಿರುವ ವೈರುಧ್ಯಗಳು ‘ಹೊರಗಿನಿಂದ’ ಬಂದಿರುವ ಅವರಿಗೆ ಒಡೆದು ಕಾಣುತ್ತಿರುವುದರಿಂದಲೊ, ಪ್ರಭಾಕರ ಕರ್ನಾಟಕದ ಸಮಕಾಲೀನ ಸಾಂಸ್ಕೃತಿಕ ರಾಜಕಾರಣದ ವೈರುಧ್ಯಗಳ ಬಗ್ಗೆ ತೀಕ್ಷ್ಣವಾದ ಟಿಪ್ಪಣಿ ಮಾಡುತ್ತಿರುತ್ತಾರೆ; ಕನ್ನಡಿಗರ ಸ್ವಭಾವದಲ್ಲೇ ವ್ಯಕ್ತಿನಿಷ್ಠೆಗಾಗಿ ವಿಮರ್ಶೆಯ ನಿಷ್ಠುರತೆ ಬಿಟ್ಟುಕೊಡುವ, ಸಜ್ಜನಿಕೆಯ ಭಾಷೆಯಲ್ಲಿ ವಾಸ್ತವವನ್ನು ಅಡಗಿಸುವ ಪ್ರವೃತ್ತಿಯಿದೆ ಎಂದು ಹೇಳುತ್ತಿರುತ್ತಾರೆ. ಸಂಘಟಕರೊಬ್ಬರು ಕಾರ್ಯಕ್ರಮವೊಂದಕ್ಕೆ ಕರೆಸಿಕೊಂಡು ಪರಿಚಯ ಭಾಷಣದಲ್ಲಿ ತಮ್ಮನ್ನು ಅತಿಯಾಗಿ ಹೊಗಳಿದ್ದನ್ನು ನೆನೆಯುತ್ತ ಅವರೊಮ್ಮೆ ಹೇಳಿದರು: “ಏನ್ ಸ್ವಾಮಿ ಕನ್ನಡಿಗರು? ಎಷ್ಟು ಉದಾರತೆ! ನನ್ನ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ನಾನು ಎಲ್ಲ ಸೇರಿದರೆ ನೂರೈವತ್ತು ಪುಟಗಳನ್ನೂ ಬರೆದಿಲ್ಲ. ಕನ್ನಡಕ್ಕೆ ದೊಡ್ಡ ಕೊಡುಗೆಯನ್ನು ಕೊಟ್ಟಿಲ್ಲ. ಆದರೂ ವಾಚಾಮಗೋಚರ ಹೊಗಳಿಬಿಟ್ಟರು. ಕರ್ನಾಟಕದಲ್ಲಿ ಮಾತಿಗೆ ಬೆಲೆಯೇ ಇದ್ದಂತಿಲ್ಲ.’’

ಇದನ್ನು ಕೇಳುವಾಗ ಈಚೆಗೆ ಕಲ್ಕತ್ತಾದಲ್ಲಿ ನಾನು ಕಂಡ, ಹಿರಿಯ ಲೇಖಕ ರುದ್ರಪ್ರತಾಪ ಸೇನರ ಸನ್ಮಾನ ಕಾರ್ಯಕ್ರಮ ನೆನಪಾಯಿತು. ಸೇನರಿಗೆ 75ವರ್ಷ ತುಂಬಿದ ನೆಪದಲ್ಲಿ ಇರಿಸಿಕೊಂಡಿದ್ದ ಆ ಕಾರ್ಯಕ್ರಮ ಎಷ್ಟು ವಿಮರ್ಶಾತ್ಮಕವಾಗಿತ್ತು ಎಂದರೆ, ಅವರ ಶಿಷ್ಯರು ತಮ್ಮ ಗುರುವಿನ ಜತೆ ಕೋರ್ಟ್ಮಾರ್ಶಲ್ ನಡೆಸುವವರ ಹಾಗೆ ಪ್ರಶ್ನೆ ಕೇಳುತ್ತಿದ್ದರು. ಸೇನರು ಆ ಕಟುತರ ಪ್ರಶ್ನೆಗಳಿಗೆಲ್ಲ ಪ್ರಾಮಾಣಿಕವಾಗಿ ದ್ವಂದ್ವವಿಲ್ಲದೆ ಉತ್ತರಿಸುತ್ತಿದ್ದರು. ಹಿರಿಯರ ತಲೆಗೆ ಅಭಿನಂದನ ಗ್ರಂಥಗಳ ಸರಮಾಲೆಯನ್ನು ತಂದು ಕಟ್ಟಿ, ಎಗ್ಗಿಲದೆ ಹೊಗಳಿ ವೈಭವೀಕರಿಸುವ ಪದ್ಧತಿಯಿರುವ ಕರ್ನಾಟಕದಲ್ಲಿ, ಈ ಪರಿಯ ನಿಷ್ಠುರತೆ ಕಲ್ಪಿಸಿಕೊಳ್ಳುವುದೇ ಕಷ್ಟ.

ತೋರುಗಾಣಿಕೆಯನ್ನು ಸದಾ ನಿರಾಕರಿಸುವ ಪ್ರಭಾಕರ ಅವರಲ್ಲಿ, ಅವರ ಖಂಡಿತವಾದಿ ನಿಲುವಿಗೆ ಅಷ್ಟೊಂದು ತಾಳೆಯಾಗದ ಇನ್ನೊಂದು ಮುಖವಿದೆ. ಅದೆಂದರೆ, ಜೀವನಪ್ರೀತಿಯ ಸಂಕೇತದಂತಿರುವ ತಮಾಶೆ ಮತ್ತು ಪೋಲಿತನ. ಈ ತಮಾಶೆಯ ಗುಣ ಅದ್ಭುತ ನಾಟಕೀಯ ಶೈಲಿಯಾಗಿ ಅವರ ಕಥೆ ಕಾದಂಬರಿಗಳಲ್ಲೆಲ್ಲ ಆವರಿಸಿಕೊಂಡಿದೆ. ತಮಗೆ ಪಾಠ ಹೇಳಿದ ಗುರುಗಳ ವೈಯಕ್ತಿಕ ಬದುಕಿನಲ್ಲಿದ್ದ ಸನಾತನವಾದ ಮತ್ತು ತರಗತಿಗಳಲ್ಲಿ ಕನ್ನಡ ಬಳಸದ ಅವರ ಇಂಗ್ಲಿಷಿನ ವ್ಯಾಮೋಹ ಕುರಿತಂತೆ, ಅವರಲ್ಲಿ ಸ್ವಾರಸ್ಯಕರ ಮಾಹಿತಿಗಳಿವೆ. ಪ್ರಭಾಕರ ಅವರು ಆಪ್ತರ ಎದುರು ತಾವು ಬರೆದಿರುವ ಅಪ್ರಕಟಿತ ಪೋಲಿ ಪದ್ಯಗಳನ್ನು ವಾಚಿಸುವುದುಂಟು. ಬಹುಶಃ ಇದು ಅವರ ಗೆಳೆಯರಾಗಿದ್ದ ಎಚ್.ಎಸ್. ಬಿಳಿಗಿರಿಯವರ ಸಹವಾಸ ಫಲವಿರಬೇಕು.

ಒಂದೇ ವ್ಯಕ್ತಿತ್ವದಲ್ಲಿ ಒಟ್ಟಿಗೇ ಇರಲು ಕಷ್ಟವೆನಿಸಬಹುದಾದ ಇನ್ನೂ ಅನೇಕ ಸಂಗತಿಗಳು ಅವರಲ್ಲಿ ಸಹಜವಾಗಿ ನಿರಾಳವಾಗಿ ಇವೆ. ಉದಾ.ಗೆ, ಬಹುಭಾಷಿಕರಾದ ಅವರ ಮನೆಮಾತು ತಮಿಳುಗನ್ನಡ; ಬರವಣಿಗೆ ಕನ್ನಡ ಮತ್ತು ಇಂಗ್ಲೀಶಿನಲ್ಲಿ; ಸಂಸ್ಕೃತ ಅಸ್ಸಾಮಿ ಬಂಗಾಳಿ ಭಾಷೆಗಳಲ್ಲಿ ದೊಡ್ಡ ವಿದ್ವತ್ತು. (ಅವರ ಅಸ್ಸಾಮಿ ಬಂಗಾಳಿ ತಿಳಿವಳಿಕೆಯಿಂದ ಕನ್ನಡಕ್ಕೆ ಪ್ರಯೋಜನವಿನ್ನೂ ಆಗಿಲ್ಲ). ಪಂಪ ಅವರ ಇಷ್ಟದ ಕವಿ. ಮೂಲತಃ ಇಂಗ್ಲೀಶ್ ಸಾಹಿತ್ಯದ ವಿದ್ಯಾರ್ಥಿಯಾದರೂ ಸಾಹಿತ್ಯಕ್ಕಿಂತ ಹೆಚ್ಚಾಗಿ ಅಂತರಾಷ್ಟ್ರೀಯ ರಾಷ್ಟ್ರೀಯ ರಾಜಕಾರಣದ ಮೇಲೆ ಹೆಚ್ಚು ಬರೆವಣಿಗೆ. ಅದರಲ್ಲೂ ಈಶಾನ್ಯ ಭಾರತದ ರಾಜಕಾರಣ ಭಾಷೆ ಧರ್ಮ ಸಂಸ್ಕೃತಿ ಕುರಿತ ಅವರ ತಿಳಿವಳಿಕೆ ಅಪರೂಪದ್ದು. ಇವನ್ನೆಲ್ಲ ಒಟ್ಟಿಗೆ ಹೇಗೆ ಕಲ್ಪಿಸಿಕೊಳ್ಳುವುದು? ಪ್ರಭಾಕರ ತಮ್ಮ ಕಾದಂಬರಿಯ ಒಂದು ಪಾತ್ರದ ಹಾಗೇ ಬದುಕಿದ್ದಾರೆ.

ಅವರು ಈಚೆಗೆ ಮಾತಾಡುತ್ತ ಕೊಂಚ ದಣಿದ ದನಿಯಲ್ಲಿ “ಸ್ವಾಮಿ, ಕರ್ನಾಟಕ ನನಗೆ ಸಾಕಾಗಿದೆ. ಗೌಹಾಟಿಗೆ ಹೋಗಬೇಕು ಅನಿಸುತ್ತಿದೆ’ ಎಂದು ಗೊಣಗಿದರು. “ಹೋಗಿ. ಆದರೆ ಮತ್ತೆಬನ್ನಿ’’ ಎಂದೆ. ಅವರಲ್ಲಿ ಕೋಲಾರ-ಗೌಹಾತಿಗಳ ನಡುವೆ ವಿಚಿತ್ರವಾದ ಆಕರ್ಷಣೆ ವಿಕರ್ಷಣೆಯಿದೆ. ಇದು ಬಹುಕಾಲ ಬೇರೆಡೆ ಬೆಳೆದ ಮರ ತನ್ನ ಮೂಲನೆಲಕ್ಕೆ ಬಂದು ನಾಟಿಗೊಂಡರೆ ಬೇರೂರುವ ಕಷ್ಟ. ಮರಳಿ ಹುಟ್ಟಿದೂರಿಗೆ ಬರುವಿಕೆ ಬಾಲ್ಯದ ನೆನಪುಗಳನ್ನು ಎಚ್ಚರಿಸಿ ಸುಖ ಕೊಡುತ್ತದೆ; ಆದರೆ ಹೊಚ್ಚ ಹೊಸತೆೆನಿಸುವಷ್ಟು ಬದಲಾಗಿರುವ ಪರಿಸರವು, ಕಾಡುವ ಏಕಾಂಗಿತನವನ್ನೂ ತಂದಿಡುತ್ತದೆ. ಯಾರ ಮರುಕವನ್ನೂ ಬಯಸದೆ ಏಕಾಂತದಲ್ಲಿ ಘನತೆಯಿಂದ ಕೊನೆಯ ದಿನಗಳನ್ನು ಕಳೆಯ ಬಯಸುವ ಇಂತಹ ಹಠಮಾರಿ ಜೀವಗಳು, ಒಳಗೇ ಮೃದ್ವಂಗಿಗಳಾಗಿ ಆಪ್ತಸಂಗಾತಕ್ಕೆ ಹಾತೊರೆಯುತ್ತಿರುತ್ತವೆ.

ಆ ಸಂಗಾತದ ಸ್ವರೂಪ ಎಂತಹುದು ಎಂದು ಸ್ಪಷ್ಟವಾಗುವುದಿಲ್ಲ. ನಾನು ‘ಕಾಮರೂಪಕ್ಕೆ ಯಾವಾಗ ಹೋಗುತ್ತೀರಿ’ ಎಂದು ಕೇಳಿದೆ: ‘ಆದಿಮದ 50ನೇ ಬೆಳುದಿಂಗಳ ಕಾರ್ಯಕ್ರಮ ಮುಗಿಸಿಕೊಂಡು’ ಎಂದರು.
ಪ್ರತಿಯೊಬ್ಬರಿಗೂ ಬಾಳಿನಲ್ಲಿ ಬಹುರೂಪಧಾರಣೆ ಮಾಡಬೇಕಾದ ಒತ್ತಡಗಳು ಎದುರಾಗಬಹುದು. ಆದರೆ ಈ ರೂಪಧಾರಣೆಗೆ ಕಾರಣ, ನಮ್ಮ ಇಚ್ಛಾನಿಚ್ಛೆಗಳು ಮಾತ್ರವಲ್ಲ, ಬಾಳಿನ ಅನೂಹ್ಯ ಒತ್ತಡಗಳು ಸಹ. ಈ ಒತ್ತಡಗಳು ಬರೆಹ ಇಲ್ಲವೇ ಮಾತಿನ ವ್ಯಾಖ್ಯಾನಕ್ಕೆ ಕೆಲವೊಮ್ಮೆ ನಿಲುಕುವಂತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending