ನೆಲದನಿ
ನುಡಿಯ ಒಡಲು – 23 | ಮಾತೃಭಾಷೆ : ಹಾಗಂದರೇನು?
- ಡಾ.ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
…Why not let me speak in
Any language I like? The language Ispeak
Becomes mine, its distortions, its queernesses
All mine, mine alone. It is half-English, half
Indian, funny perhaps, but it is honest,
It is as human as I am human, don’t
You see?…
–Kamala Das
Language is the key to the heart of culture. (Edwards 1985:36)
Language embodies the world view of a culture and is unique to the culture that created it. It reflects values and concepts that are deemed to be the most important by culture. A language describes the culture it comes from. (Noam Chomsky, www.anacleta.homestead.com)
Globally, language is the dynamite of thought. If you kill or render impotent a people’s language, you can as well kill the people, but if you effectively plan and develop a people’s language, you are laying treasures that affect eternity and providing the people with tools of self identity, self actualization and self promotion. (Adegbija 1993:9)
ಮಾತೃಭಾಷೆ ಅಂದರೇನು ಎಂಬುದರ ವ್ಯಾಖ್ಯೆಗಳನ್ನು ಕೊಡುವುದು ನನ್ನ ಉದ್ದೇಶವಲ್ಲ. ಬದಲಿಗೆ, ಇಂತಹ ಪದಗಳು [ಪರಿಕಲ್ಪನೆ] ಹುಟ್ಟಿಸುವ ಸಾಂಸ್ಕೃತಿಕ ಬಿಕ್ಕಟ್ಟುಗಳ ಬಗ್ಗೆ ತಮ್ಮ ಗಮನ ಸೆಳೆಯಲು ಯತ್ನಿಸುತ್ತೇನೆ. ಜನಮಾನಸದಲ್ಲಿ ‘ತಾಯ್ನುಡಿ’ಗೆ ಬದಲಾಗಿ ‘ಮಾತೃಭಾಷೆ’ ಎಂಬ ಪದವೇ ಹೆಚ್ಚು ಬಳಕೆಗೆ ಬಂದಿದೆ. ಆದಾಗ್ಯೂ ನಾನು ಈ ಟಿಪ್ಪಣಿಯಲ್ಲಿ ಇನ್ನೂ ಮುಂದೆ ಮಾತೃಭಾಷೆಗೆ ಬದಲಾಗಿ ‘ತಾಯ್ನುಡಿ’ ಎಂಬ ಪದವನ್ನು ಬಳಸುತ್ತೇನೆ. ಕಾರಣವೇನೆಂದರೆ ಕನ್ನಡದ ನುಡಿಗಟ್ಟುಗಳನ್ನೇ ಸಹಜವಾಗಿ ಬಳಕೆಗೆ ತರುವ ಹೆಬ್ಬಯಕೆ.
ಈ ನಡೆ ಈಗಾಗಲೇ ಬಳಕೆಗೆ ಬಂದಿದೆ. ಈ ಲೇಖನವು ತನ್ನ ಚರ್ಚೆಯ ಮುಖ್ಯ ಭಿತ್ತಿಯನ್ನಾಗಿ ನಾಡು-ನುಡಿ-ಸಂಸ್ಕೃತಿಗಳ ನಡುವಣ ತಿಕ್ಕಾಟ ಹಾಗೂ ಸ್ವನುಡಿ-ಪರನುಡಿಗಳ ನಡುವಣ ಯಾಜಮಾನ್ಯ-ಅಧೀನ ಸಂಬಂಧಗಳನ್ನು ಆಯ್ದುಕೊಂಡಿದೆ. ನಾಗರಿಕತೆಯ ವಿಕಾಸ ಹಾಗೂ ಚರಿತ್ರೆಯ ಚಲನಶೀಲತೆ ಒದಗಿಸುವ ಕುರುಹಗಳ ಆಧಾರದ ಮೇಲೆ, ತಾಯ್ನುಡಿ ಎನ್ನುವುದೇ ಒಂದು ಹುಸಿಕಲ್ಪನೆ [ಮಿಸ್ನಾಮರ್] ಎನ್ನುವ ತಿಳುವಳಿಕೆಯೂ ಮುಂಚೂಣೆಗೆ ಬಂದಿದೆ.
ಬೇರೆ ಬೇರೆ ಸಂಸ್ಕೃತಿಗಳು ವಾಸಿಸುವ ಒಂದು ಸಮುದಾಯದಲ್ಲಿ ‘ತಾಯ್ನುಡಿ’ಯನ್ನು ಗುರುತಿಸುವ ತಾತ್ವಿಕ ನೆಲೆಗಳಾವವು? ಅಂತಹದೊಂದು ಸನ್ನಿವೇಶವನ್ನು ಖಚಿತವಾಗಿ ವ್ಯಾಖ್ಯಾನಿಸಬಹುದಾ? ಹೌದಾದರೆ ಹೇಗೆ? ಸಾಹಿತ್ಯಿಕ-ಭಾಷಿಕ ಚರಿತ್ರೆಗಳನ್ನು ಪರಿಶೀಲಿಸಿ ನೋಡಿದರೆ, ಎಲ್ಲಿಯೂ ಕೂಡ ತಾಯ್ನುಡಿಯನ್ನು ಖಚಿತ ಹಾಗೂ ನಿರ್ದಿಷ್ಟವಾಗಿ ವ್ಯಾಖ್ಯಾನಿಸಿದ್ದು ಕಂಡು ಬಂದಿಲ್ಲ. ಹಾಗಾದರೆ, ಇಂತಹ ಒಂದು ಸಾಂಸ್ಕೃತಿಕ-ಭಾಷಿಕ ಸನ್ನಿವೇಶವನ್ನು ವಿವರಿಸುವದು ಹೇಗೆ?
ಇದಕ್ಕಿರುವ ತಾತ್ವಿಕ ಸಮರ್ಥನೆಗಳೇನು? ತಾಯ್ನುಡಿಗೆ ಬದಲಾಗಿ ನಾಡುನುಡಿ, ಪರಿಸರನುಡಿ, ಮೊದಲನುಡಿ ಮುಂತಾದ ಪರಿಕಲ್ಪನೆಗಳು ಬಳಕೆಯಲ್ಲಿವೆ. ಇಂತಹ ರೂಢಿಗಳನ್ನು ಗಮನಿಸಿದಾಗ ಸ್ಪಷ್ಟವಾಗುವುದೇನೆಂದರೆ, ಈ ಪರಿಕಲ್ಪನೆ ಆಕಸ್ಮಿಕವಾಗಿ ಜಾರಿಗೆ ಬಂದಿದೆ ಎಂದು ಅನ್ನಿಸುತ್ತದೆ. ಇತ್ತೀಚಿನ ರಾಷ್ಟ್ರ-ರಾಷ್ಟ್ರೀಯತೆಯ ಕಲ್ಪನೆಯೊಂದಿಗೆ ತಾಯ್ನುಡಿ ಹಾಗೂ ತಾಯ್ನಾಡು ಎನ್ನುವಂತಹ ಮೌಲ್ಯಗಳು ಪ್ರಾಮುಖ್ಯತೆಯನ್ನು ಪಡಕೊಂಡಿರುವುದು ಗಮನಾರ್ಹ.
ರಾಷ್ಟ್ರೀಯತೆಯನ್ನು ಬೆಳಸುವ ಪ್ರಕ್ರಿಯೆಯಲ್ಲಿ ಭಾಷೆಯು ತನ್ನ ಮೂಲಭೂತ ಸ್ವರೂಪಕ್ಕಿಂತ ಬೇರೆಯೇ ರೂಪವನ್ನು ಪಡಕೊಂಡಿದೆ. ಧರ್ಮ, ಜಾತಿಗಳು ಸ್ವರೂಪವನ್ನೇ ಭಾಷೆಯೂ ಪಡಕೊಂಡಿದೆ [ಆರೋಪಿಸಲಾಗಿದೆ]. ಧರ್ಮ ಹಾಗೂ ಜಾತಿಯೊಂದಗಿನ ನಂಟು ಯಾವಾಗಲೂ ಅಂಧಾನುಕರುಣೆಯಿಂದ ಕೂಡಿರುತ್ತದೆ ಎನ್ನುವ ವಾದಗಳಿವೆ. ಭಾಷೆಗೂ ಇದೇ ಸ್ಥಿತಿ ಒದಗಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಇದು ಹುಟ್ಟಿಸುವ ಸಾಂಸ್ಕೃತಿಕ ಅಪಾಯ ಯಾರನ್ನಾದರೂ ಘಾಸಿಗೊಳಿಸುತ್ತದೆ. ಹಾಗಾದರೆ ಭಾಷೆಯ ಮೂಲ ಸ್ವರೂಪವೇನು? ಅದು ಯಾಕೆ? ಧರ್ಮ, ಜಾತಿ ಹಾಗೂ ಪ್ರಾದೇಶಿಕತೆಯಂತಹ ಮೌಲ್ಯಗಳೊಂದಿಗೆ ಸಮೀಕರಣಗೊಂಡಿದೆ. ಇಂತಹ ಸನ್ನಿವೇಶದ ಹಿಂದಿನ ತಾತ್ವಿಕ ಒತ್ತಡಗಳೇನು? ಇಂತಹ ಹಲವು ಪ್ರಶ್ನೆಗಳು ಸೂಕ್ಷ್ಮಮತಿಗಳನ್ನು ಕಾಡದೆ ಇರಲಾರವು. ‘ತಾಯ್ನುಡಿ’ ಹಾಗೂ ‘ತಾಯ್ನಾಡು’ ಮುಂತಾದ ಮೌಲ್ಯಗಳ ಹೊರಚಾಚು ಏನು? ನಾಡು-ನುಡಿಗಳ ನಡುವೆ ನಂಟು ಬೆಸೆಯುವ ನೆಲೆಗಳಾವವು?
ನಾವು ಭಾರತೀಯರು ಅನ್ನುವ ಭಾವನೆ ಹಿಂದಿನ ಪ್ರೇರಣೆಗಳೇನು? ಅದೇ ನಾವು ಕನ್ನಡಿಗರು ಅನ್ನುವ ಭಾವನೆಗಳ ನೆಲೆಗಳಾವವು? ನಾಡು-ನುಡಿ ಎರಡನ್ನೂ ‘ತಾಯಿ’ಗೆ ಸಮೀಕರಸಿಕೊಂಡು ಆರಾಧಿಸುವ ಬಗೆಯೇ ಒಂದು ರಾಜಕೀಯ ಹುನ್ನಾರದಂತೆ ಕಾಣುತ್ತದೆ. ನಾವು ಭಾರತೀಯರು ಎನ್ನುವುದು ಕೇವಲ ರಾಜಕೀಯ ಒಗ್ಗಟ್ಟಿನ ನಂಬಿಕೆಯಾದರೆ, ಅದನ್ನು ‘ತಾಯ್ನಾಡು’ ಎಂದು ಕರೆಯುವ ಜರೂರು ಏನಿತ್ತು? ಇದು ಕೇವಲ ರಾಜಕೀಯ ಪ್ರೇರಿತ ಮೌಲ್ಯವಾದರೆ, ಇದಕ್ಕೆ ಜನಸಾಮಾನ್ಯರು ಇಷ್ಟೊಂದು ಗೌರವ ತೋರಿಸುವ ಅಗತ್ಯವಿರಲಿಲ್ಲ ಎಂದು ಕಾಣುತ್ತದೆ.
ನಾಡು-ನುಡಿಗಳ ನಡುವೆ ಸಾಂಸ್ಕೃತಿಕ ಹೊಂದಾಣಿಕೆಯ ಕೊರತೆ ಇದ್ದೇ ಇರುತ್ತದೆ. ಇದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಚರಿತ್ರೆಯಲ್ಲಿಯೇ ಸಿಗುತ್ತವೆ. ಕುತೂಹಲದ ಸಂಗತಿ ಏನೆಂದರೆ ನಾಡು ಬಹುತ್ವತೆಯ ಸಂಕೇತವಾದರೆ ನುಡಿ ಏಕತೆಯ ಸಂಕೇತವಾಗಿರುತ್ತದೆ. ವಾಸ್ತವದಲ್ಲಿ ನಾಡು-ನುಡಿಗಳ ನಡುವೆ ನಿರಂತರ ಗುದ್ದಾಟವಿರುತ್ತದೆ. ಇದು ದಿನವೂ ನಮ್ಮ ಕಣ್ಣಿಗೆ ರಾಚುವ ಸತ್ಯ ಉದಾಹರಣೆಗೆ ಮಹಾರಾಷ್ಟ್ರ, ಕರ್ನಾಟಕ, ಗೋವಾ ಮುಂತಾದ ರಾಜ್ಯಗಳಲ್ಲಿ ನಡೆಯುವ ಬೆಳವಣೆಗೆಗಳನ್ನು ನೆನಪಿಸಿಕೊಳ್ಳಬಹುದು.
ಈ ನಾಡು-ನುಡಿಗಳ ನಡುವೆ ಏಕತೆ ಬೆಸೆಯುವ ಕ್ರಮಗಳಲ್ಲೇ ದ್ವಂದ್ವವಿದೆ ಎಂದು ತೋರುತ್ತದೆ. ಕರ್ನಾಟಕ ಅಥವಾ ಮಹಾರಾಷ್ಟ್ರಗಳು ಒಂದೊಂದು ನಾಡಾದರೆ, ಆ ನಾಡುಗಳಲ್ಲಿ ವಾಸಿಸುವ ಎಲ್ಲ ಜನಸಮೂಹದ ತಾಯ್ನುಡಿ ಕನ್ನಡ/ಮರಾಠಿ ಮಾತ್ರವೇ ಅಲ್ಲ ಅನ್ನುವುದು ಗಮನಾರ್ಹ. ಅಂದರೆ ಕನ್ನಡಿಗ-ಕರ್ನಾಟಕ ಹಾಗೂ ಮರಾಠಿಗ- ಮಹಾರಾಷ್ಟ್ರ ಇವರ ನಡುವೆ ಸಾಮರಸ್ಯಕ್ಕಿಂತ ಸಂಘರ್ಷದ ಪರ್ಸಂಟೇಜ್ಯೇ ಜಾಸ್ತಿ ಇದೆ.
ತಾಯ್ನುಡಿ ಕುರಿತು ಸಾಕಷ್ಟು ನಂಬಿಕೆಗಳು ಹುಟ್ಟಿಕೊಂಡಿವೆ. ಅವುಗಳೆಂದರೆ, ತಾಯ್ನುಡಿ ಅದು ಜನಾಂಗಗಳ ಸ್ಮೃತಿಕೋಶವಾಗಿದೆ. ಅವರ ಲೋಕಗ್ರಹಿಕೆಯನ್ನು ರೂಪಿಸಿಕೊಳ್ಳುವ ಹಾಗೂ ಅವರ ಸಂವೇದನಾ ಪ್ರಕ್ರಿಯೆಯನ್ನು ಕಟ್ಟಿಕೊಳ್ಳುವ ಕ್ರಮ ಆ ತಾಯ್ನುಡಿಯಿಂದಲೇ ಸಾಧ್ಯ. ಜಗತ್ತಿನ ಎಲ್ಲ ಬಗೆಯ ತಿಳುವಳಿಕೆಯನ್ನು ಪಡೆಯುವ ಪ್ರಕ್ರಿಯೆಯಲ್ಲಿ ತಾಯ್ನುಡಿ ಬೆಳಕಿಂಡಿಯಾಗಿದೆ. [ಇಂಗ್ಲಿಶ್ ಹಾಗೂ ಸಂಸ್ಕೃತದಂತಹ ಅಧಿಕಾರಸ್ಥ ಭಾಷೆಗಳು ಮಾತ್ರ ಜ್ಞಾನದ ಬೆಳಕಿಂಡಿಗಳು ಎನ್ನುವ ನಂಬಿಕೆಗಳೇ ನೆಲೆಯೂರಿದ್ದವು. ಅಂತಹ ಸನ್ನಿವೇಶದಲ್ಲಿ ಕನ್ನಡದಂತಹ ದೇಶೀ ಭಾಷೆಗಳು ಗೋಡೆಯಾಗಿ ಪರಿಣಮಿಸಿದ್ದೇ ಹೆಚ್ಚು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು].
ಇದು ಸಮುದಾಯದ ಅನುಭವವನ್ನು ಚಾರಿತ್ರಿಕವಾಗಿ, ಪಾರಪಂರಿಕವಾಗಿ ತನ್ನ ಸ್ಮೃತಿಕೋಶಗಳಲ್ಲಿ ಅಂತಸ್ಥಗೊಳಿಸಿರುತ್ತದೆ. ಆಯಾ ಸಂಸ್ಕೃತಿಯ ರಚನೆಗಳು ಆಯಾ ತಾಯ್ನುಡಿಯೊಂದಿಗೆ ಬೆಸೆದುಕೊಂಡಿರುತ್ತವೆ. ಸಾಂಸ್ಕೃತಿಕ ಹಾಗೂ ಸಂವಹನ ರಚನೆಗಳು ಏಕತ್ರಗೊಂಡಿರುತ್ತವೆ. ಭಾಷೆ ಪ್ರತಿಯೊಂದು ಸಮುದಾಯದ ‘ಅನುಭವ’ವನ್ನು ಚಲನಶೀಲಗೊಳಿಸುತ್ತದೆ ಎನ್ನುವ ತಿಳುವಳಿಕೆ ಬಲವಾಗಿರುವುದೇ ಈ ಎಲ್ಲ ನಂಬಿಕೆಗಳಿಗೆ ಕಾರಣ. ಇದೊಂದು ಹುಸಿ ನಂಬಿಕೆ ಎಂದು ನನ್ನ ವಾದವಲ್ಲ. ಏನಂದರೆ ಭಾಷೆ ಹಾಗೂ ಸಂಸ್ಕೃತಿಗಳ ನಡುವಣ ನಂಟು ಆಕಸ್ಮಿಕ ಮತ್ತು ಅನಕೂಲಾತ್ಮಕವಾದದ್ದು ಎನ್ನುವುದು ಕೂಡ ಸತ್ಯ. ಪ್ರತಿಯೊಂದು ಭಾಷೆಯು ಯಾವುದೇ ಆಶಯವನ್ನು ಕಟ್ಟಿಕೊಡುವ ಶಕ್ತಿಯನ್ನು ಹೊಂದಿರುತ್ತದೆ.
ಯಾವುದು ಮನುಷ್ಯನ ಅನುಭವಕ್ಕೆ ಅಥವಾ ಗ್ರಹಿಕೆಗೆ ದಕ್ಕಲಾರದೋ ಅದು ಭಾಷೆಯಲ್ಲಿ ಪ್ರಕಟಗೊಳ್ಳಲಾರದು. ಇದು ಭಾಷೆಗಿರುವ ಮಿತಿಯಲ್ಲ. ಮನುಷ್ಯನ ಗ್ರಹಿಕೆಗಿರುವ ಮಿತಿಯೆನ್ನುವುದು ಗಮನಾರ್ಹ. ಸಾಮನ್ಯವಾಗಿ ಮನುಷ್ಯನ ಅಭಿವ್ಯಕ್ತಿಗೆ ದಕ್ಕದ ಅನುಭವವನ್ನು ಅವನಾಡುವ ಭಾಷೆಗಿರವ ಮಿತಿಯೆಂದು ಆರೋಪಿಸಲಾಗಿದೆ. ಅದೇನೆಂದರೆ ಭಾಷೆ ಮನುಷ್ಯನ ಪ್ರತಿ ಅನುಭವವನ್ನು ವ್ಯಕ್ತಪಡಿಸಲಾರದು ಎಂಬ ಸರಳ ನಂಬಿಕೆವೊಂದು ಜಾರಿಯಲ್ಲಿದೆ.
ಮನುಷ್ಯ ತಾನು ಏನನ್ನು ತನ್ನ ಅನುಭವದ ಭಾಗವನ್ನಾಗಿ ಪಡೆದುಕೊಳ್ಳುತ್ತಾನೋ, ಅದು ಭಾಷೆಯ ಮುಖಾಂತರ ಅನುವಾದಗೊಂಡು ವ್ಯಕ್ತವಾಗುತ್ತದೆ. ಅಮೂರ್ತತೆ ಹಾಗೂ ಮೂರ್ತತೆ ಅನ್ನುವುದು ಭಾಷೆಗೆ ಇರುವ ಸಹಜ ಹಾಗೂ ಅಂತಸ್ಥ ಗುಣವಲ್ಲ. ಇದೊಂದು ಆರೋಪಿತ ಗುಣಮಾತ್ರ. ಒಂದು ಸಾಮಾಜಿಕ ಸನ್ನಿವೇಶದಲ್ಲಿ ಯಾವ ಭಾಷೆಯೊಂದಿಗೆ ಮಗು/ಮನುಷ್ಯ ತನ್ನ ಅನುಭವವನ್ನು ಒಡ್ಡಿಕೊಳ್ಳುತ್ತಾನೋ ಅದು ಅವಳ/ನ ಅನುಭವದ ಪ್ರತಿ ಆಶಯವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿ ಮಾಧ್ಯಮವಾಗುತ್ತದೆ.
ಇದೆಲ್ಲದಕ್ಕಿಂತಲೂ ಹೆಚ್ಚಾಗಿ ತಾಯ್ನುಡಿಯು ಅವಳ/ನ ಸಾಂಸ್ಕೃತಿಕ ಹಾಗೂ ಸೃಜನಶೀಲ ಸಂವೇದನೆಯನ್ನು ಪ್ರತಿನಿಧಿಸುವ ಮಾಧ್ಯಮವೂ ಆಗಿ ದಕ್ಕುತ್ತದೆ. ಹಾಗಾಗಿ ಭಾಷೆ ಮತ್ತು ಮಾನವ ಸಮುದಾಯಗಳ ನಡುವೆ ಒಂದು ಅವಿನಾಭಾವ ನಂಟು ಏರ್ಪಡುವುದೆಂದು ಅನ್ನಿಸುತ್ತದೆ. ಈ ಅನುಭವವು ಭಾಷೆ ಮತ್ತು ಸಮುದಾಯದ ನಿರಂತರ ಸಾತತ್ಯದ ಫಲವೂ ಆಗಿದೆ ಅನ್ನುವುದು ದಿಟ. ಇಂತಹ ವಾದಗಳು ಮಂಡಿಸುವ ಚಿಂತನೆಗಳಿಂದ ಯಾವ ಪ್ರಯೋಜನವು ಇಲ್ಲವೆಂದರೆ, ಇದು ಸಾಂಸ್ಕೃತಿಕ ಗಾಭರಿತನಕ್ಕೆ ಸಾಕಷ್ಟು ಅವಕಾಶ ನೀಡುತ್ತದೆ ಎನ್ನುವುದರಲ್ಲಿ ಸಂದೇಹವೇ ಇಲ್ಲ.
ಲಿಂಗಭೇದ, ವರ್ಗ-ವರ್ಣಭೇದ ಹಾಗೂ ಮುಂತಾದ ತರತಮ ಭೇದಗಳು ಸಾಮಾಜಿಕ ಕಾರಣಗಳಿಂದ ಭಾಷೆಯಲ್ಲಿ ಮಿಳಿತಗೊಂಡಿವೆ. ಭಾಷೆ ಇದೆಲ್ಲವನ್ನೂ ಪ್ರತಿನಿಧಿಸುವ ಕಾರಣ, ಭಾಷೆಗೆ ಇಂತಹದೊಂದು ಗುಣ ಇರುತ್ತದೆ ಎಂಬ ನಂಬಿಕೆ. ಈ ಕಾರಣಗಳಿಂದಲೇ ಸಪೀರ್-ವೂರ್ಫ್ ಅವರು ಮಂಡಿಸುವ “ಭಾಷೆ [ತಾಯ್ನುಡಿ] ಮತ್ತು ಸಂಸ್ಕೃತಿಗಳ ನಡುವೆ ಲೋಕಗ್ರಹಿಕೆ”ಯನ್ನು ರೂಪಿಸುವ ನಂಟಿರುತ್ತದೆ ಎನ್ನುವ ವಾದದಲ್ಲಿ ಮೀತಗಳಿವೆ ಎನ್ನುವುದು ದೃಢಪಟ್ಟಿದೆ.
ಅನುಭಾವ ರೂಪಗೊಳ್ಳುವ ನೆಲೆಗಳು ಕೇವಲ ಭಾಷಿಕ ಸಂವೇದನೆಯಿಂದ ಕೂಡಿದವುಗಳಲ್ಲ. ಅವು ಸಾಮಾಜಿಕ-ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಅಂತಸ್ಥವಾಗಿರುತ್ತವೆ. ಅದಕ್ಕಾಗಿ ಯಾವುದೇ ಭಾಷೆಯ ಸಾಹಿತ್ಯವು ಏಕೀಕೃತ ಅನುಭವದ ಮೊತ್ತವಾಗಿರಲಾರದು. ಅದು ಯಾವಗಲೂ ಬಹುತ್ವತೆಯ ಆಗರವಾಗಿರುತ್ತದೆ. ಅದಕ್ಕಾಗಿಯೇ ಕನ್ನಡ ಸಾಹಿತ್ಯದಲ್ಲಿ ಜೈನ್, ವೈದಿಕ, ಶೂದ್ರ-ದಲಿತ, ಮುಸ್ಲಿಮ್ ಮುಂತಾದ ಬಗೆಯಲ್ಲಿ ಸಂವೇದನೆಯನ್ನು ವಿಭಜಿಸಲಾಗಿದೆ ಎಂದು ತೋರುತ್ತದೆ.
ಇದು ಕೇವಲ ಅಧ್ಯಯನದ ಅನಕೂಲಕ್ಕಾಗಿ ಮಾತ್ರವಲ್ಲ ಅದುವೇ ವಾಸ್ತವವೆಂದು ನಂಬಲಾಗಿದೆ. ಆದರೆ ಈ ಎಲ್ಲ ಬಗೆಯ ಸಂವೇದನೆಯನ್ನು ಅಭಿವ್ಯಕ್ತಿಪಡಿಸುವ ಮಾಧ್ಯಮ ಮಾತ್ರ ಕನ್ನಡವಾಗಿದೆ. ಇಂಗ್ಲಿಶ್ ಭಾಷೆಯಲ್ಲಿ ಬೇರೆ ಸಂಸ್ಕೃತಿಗಳ ಮೂಲದಿಂದ ಬಂದಿರುವ ಸಾಹಿತ್ಯವನ್ನು ಗಮನಿಸದರೆ ಇದು ಸ್ಪಷ್ಟವಾಗುತ್ತದೆ. ಈ ಕಾರಣಗಳ ಪರಿಣಾಮವಾಗಿ, ಪ್ರತಿಯೊಂದು ಭಾಷೆಯಲ್ಲಿ ಭಿನ್ನತೆ, ವೈವಿಧ್ಯತೆ ಹಾಗೂ ಸಾಂಸ್ಕೃತಿಕನಿಷ್ಠ ಪ್ರಜ್ಞೆ ರೂಪಗೊಂಡಿರುತ್ತದೆ. ಒಂದು ಸಮುದಾಯದ ಎಲ್ಲ ಜನ, ಜನಾಂಗ, ವರ್ಗಗಳ ನಡುವೆ ಸಂವಹನ ತೊಡಕು ಉಂಟಾಗಬಾರದು ಎನ್ನುವ ಕಾರಣಕ್ಕೆ ಭಾಷೆಗೆ ಒಂದು ಸಾರ್ವತ್ರಿಕತೆಯನ್ನು ರೂಪಿಸಲಾಗಿದೆ.
ಇದನ್ನೂ ಮೀರಿ ಭಾಷೆಯಲ್ಲಿ ತೊಡಕುಗಳು ಉಳಿದುಕೊಂಡಿರುತ್ತವೆ ಎನ್ನುವುದು ಕುತೂಹಲವನ್ನು ಹುಟ್ಟಿಸುತ್ತದೆ. ಭಾಷೆ ತನ್ನ ವೈವಿಧ್ಯತೆ-ಭಿನ್ನತೆಗಳ ನಡುವೆಯೂ ಸಾರ್ವತ್ರಿಕತೆಯನ್ನು ಕಾಪಾಡುವ ಹಾಗೂ ಸಮನ್ವಯಗೊಳಿಸುವ ಗುದ್ದಾಟಗಳು ನಿರಂತರವಾಗಿರುತ್ತವೆ. ಇಂತಹದೊಂದು ಬೆಳವಣೆಗೆಯೇ ವಿಚಿತ್ರವಾದದ್ದು. ಮತ-ಧರ್ಮಗಳ ಕುರಿತ ಅಂಧಾನುಕರುಣೆ ಸಮಾಜದ ಐಕ್ಯತೆಗೆ ಧಕ್ಕೆ ಉಂಟುಮಾಡಿದಂತೆ, ಭಾಷೆಯೂ ಸಮುದಾಯದ ಒಗ್ಗಟ್ಟಿಗೆ ತೊಡಕಾಗಿದೆ.
ಇದಕ್ಕೆ ಸಾಕಷ್ಟು ಪುರಾವೆಗಳು ನಮ್ಮ ಚರಿತ್ರೆಯಲ್ಲಿಯೇ ಸಿಗುತ್ತವೆ. ಮನುಷ್ಯನ ಸಾಮಾಜಿಕ ಅಸ್ತಿತ್ವದ ಆಧಾರದ ಮೇಲೆ ಭಾಷೆಯ ಅಸ್ತಿತ್ವ ನಿರ್ಧಾರವಾಗುತ್ತದೆ. ಇಂತಹ ಭಾಷಿಕ-ಸಾಮಾಜಿಕ ಆಕೃತಿಗಳು ಸಮುದಾಯದ ಪ್ರಜ್ಞೆಗೆ ಇಂಬು ಕೊಡದೇ, ಸಮುದಾಯವನ್ನು ವಿಭಜಿಸುವುದಕ್ಕೆ ಪ್ರೇರಣೆಯನ್ನು ನೀಡಿವೆ. ಈ ಬೆಳವಣೆಗೆಗಳು ಕನ್ನಡದಂತಹ ಭಾಷೆಯ ಚಹರೆಗಳೂ ಕೂಡ ಅಂಚಿಗೆ ಸರಿಯುತ್ತವೆ ಎಂಬ ಆತಂಕಕ್ಕೆ ಎಡೆಮಾಡಿ ಕೊಟ್ಟಿವೆ.
ಇಂತಹ ಆತಂಕಗಳಿಗೆ ಯಾವುದೇ ವೈಜ್ಞಾನಿಕ ಕಾರಣಗಳಿಲ್ಲ ಎನ್ನುವುದು ದಿಟ. ಆದರೆ, ಇದು ಕೇವಲ ರಾಜಕೀಯ ಪ್ರೇರಿತ ಸಂಘಟನೆಗಳು ಹುಟ್ಟು ಹಾಕುವ ಹುನ್ನಾರ ಮಾತ್ರ. ಇಂತಹ ಭಾಷಾ ರಾಜಕಾರಣದ ಹಿಂದಿನ ಒತ್ತಡ, ಪ್ರೇರಣೆಗಳನ್ನು ತಾತ್ವಿಕವಾಗಿ ವಿಶ್ಲೇಷಿಸಬೇಕಿದೆ. ಜನಸಾಮಾನ್ಯರು ಭಾಷೆಯನ್ನು ಒಂದು ಸಾಂಸ್ಕೃತಿ-ಸಾಮಾಜಿಕ ಮೌಲ್ಯವಾಗಿ ಪರಿಗಣಿಸಿದ್ದೇ ಇಂತಹ ಭಾಷಿಕ ಬಿಕ್ಕಟ್ಟುಗಳಿಗೆ ಕಾರಣ.
ಭಾಷಿಕ ಅಗತ್ಯಗಳು ಕಾಲ-ದೇಶಕ್ಕೆ ಅನುಗುಣವಾಗಿ ಬೇರೆಯಾಗಿರುವುದರಿಂದ, ಕೆಲವು ಆಸಕ್ತ ವರ್ಗಗಳು ತಮಗೆ ಪೂರಕವಾಗುವ ಆಶಯಗಳನ್ನು ತಾಯ್ನುಡಿ, ದೇವನುಡಿ, ರಾಷ್ಟ್ರನುಡಿ ಎಂಬ ಅಭೀಮಾನವನ್ನು ಮೂಡಿಸಲು ಹವಣಿಸುತ್ತವೆ. ಇಂತಹ ಪ್ರಯತ್ನಗಳಿಗೆ ಸಾಂಸ್ಥಿಕ ಬೆಂಬಲ ದೊರೆಯುವುದರಿಂದ, ನಾಡು-ನುಡಿಯ ಕುರಿತ ಅತೀರೇಕದ ಧೋರಣೆಗಳು ಕೂಡ ಸಮುದಾಯ ಹಾಗೂ ಸಂವಿಧಾನದ ಮನ್ನಣೆಯನ್ನು ಪಡೆದುಕೊಳ್ಳುತ್ತವೆ. ಈ ಬಗೆಯ ಭಾಷಿಕ ಆಕೃತಿಗಳು ಪಟ್ಟಭದ್ರ ಹಿತಾಸಕ್ತಿ ಹಾಗೂ ಶಕ್ತಿ ರಾಜಕಾರಣದ ಗುಂಪುಗಳನ್ನು ಕೂಡ ಮೌಲ್ಯೀಕರಣಗೊಳಿಸುತ್ತವೆ.
ವಿಪರ್ಯಾಸ ಏನಂದರೆ ಇಂತಹ ರಾಜಕೀಯ ಪ್ರೇರಿತ ಧೋರಣೆಗಳು ಅನುಭಾವದ ನೆಲೆಗಳನ್ನೂ ಪಡೆದುಕೊಳ್ಳುತ್ತವೆ. ಮುಂದೊಂದು ದಿನ ಇವೇ ಚಿಂತನೆಗಳು ಭಾಷಿಕ ಕ್ರಾಂತಿ ಅಥವಾ ರಾಷ್ಟ್ರೀಯತೆಯ ಚಿಂತನೆಗಳ ಸ್ವರೂಪವನ್ನು ಪಡೆಯುತ್ತವೆ. ನಾಡು-ನುಡಿ ಕುರಿತ ಚಿಂತನೆಗಳು ತೋರಿಕೆಯ ರಾಷ್ಟ್ರೀಯತೆಯನ್ನು ನಟಿಸುತ್ತವೆ ಎಂದು ಕಾಣುತ್ತದೆ. ಈ ತೋರಿಕೆಯ ಭಾಷಾಭಿಮಾನವು ಬೇರೆ ಭಾಷೆಗಳನ್ನು ಅಸಡ್ಡೆಯಿಂದ ಹಾಗೂ ಉಪೇಕ್ಷೆಯಿಂದ ಕಾಣುತ್ತವೆ. ಇದು ಭಾಷಿಕ-ಸಾಂಸ್ಕೃತಿಕ ಅಸಹನೆಗೆ ಕಾರಣವಾಗುತ್ತದೆ. ಇದು ಎಂತಹ ಸಾಂಸ್ಕೃತಿಕ ಅಪಾಯವನ್ನು ಹುಟ್ಟು ಹಾಕಬಹುದೆಂದು ಯಾರಿಗಾದರೂ ಅಚ್ಚರಿಯಾಗುತ್ತದೆ.
ದ್ರಾವಿಡ ನುಡಿಗಳು ಒಂದೇ ನುಡಿ ಕುಲಕ್ಕೆ ಸೇರಿದವುಗಳಾದರೂ – ಈ ಕುಲದ ಬೇರೆ ಬೇರೆ ನುಡಿಗಳ ನಡುವೆ ಯಾಕೆ? ತರತಮ ಭಾವನೆಯನ್ನು ಹುಟ್ಟಿಸಿಕೊಂಡು, ದಾಯಾದಿ ಮತ್ಸರವನ್ನು ಬೆಳಸುತ್ತಾರೆ. ದಾಯಾದಿ ಮತ್ಸರ ಕೇವಲ ಆಸ್ತಿ ಹಂಚಿಕೆಯ ಕುರಿತದ್ದು ಮಾತ್ರವಲ್ಲ. ಅದು ಅಸ್ತಿತ್ವದ ಪ್ರಶ್ನೆಯೂ ಆಗಿರುತ್ತದೆ. ತಮ್ಮ ತಮ್ಮ ಗುರುತುಗಳನ್ನು ಹೆಚ್ಚು ಹೆಚ್ಚು ಗಟ್ಟಿಗೊಳಿಸುವ ಹಂಬಲದಲ್ಲಿರುತ್ತವೆ ಎನ್ನುವುದು ವಿಶೇಷ. ಇಂತಹ ಸ್ಪರ್ಧಾತ್ಮಕ ಧೋರಣೆಯು ಸಂಘರ್ಷಕ್ಕೆ ಎಡೆಮಾಡಿಕೊಡುತ್ತದೆ.
ಈ ಬೆಳವಣೆಗೆಗಳು ತಮ್ಮ ತಮ್ಮ ಕುಲ ಸಂಬಂಧದ ನೆನಪುಗಳನ್ನು ಕೂಡ ಕಮರಿಸುತ್ತವೆ. ಈ ಬಗೆಯ ಭಾಷಿಕ ಹುನ್ನಾರ ನಿರಂತರವಾಗಿ ದ್ರಾವಿಡ ನುಡಿ ಸಮುದಾಯದಲ್ಲಿ ನಡದಿವೆ. ಇದು ಹೆಚ್ಚು ಕನ್ನಡ ಮತ್ತು ತಮಿಳು ನುಡಿಗಳ ನಡುವೆ ನಡದಿದೆ ಎಂದು ಹೇಳಬಹುದು. ಇವು ಕಲ್ಪಿತ ಗಡಿಗಳ ನಿರ್ಮಾಣಕ್ಕೂ ಕುಮ್ಮಕ್ಕು ನಿಡುತ್ತವೆ. ವಿಚಿತ್ರವೆನಂದರೆ, ಬೇರೆ ಕುಲಕ್ಕೆ ಸೇರಿದ ಭಾಷೆಯನ್ನು ಕನ್ನಡ ತನ್ನ ತಲೆಯ ಮೇಲೆ ಹೊತ್ತುಕೊಂಡು ಪೂಜಿಸಿದ ನಿದರ್ಶನಗಳಿಗೇನು ಕೊರತೆಯಿಲ್ಲ.
ಇದಕ್ಕೆ ಕುಮ್ಮಕ್ಕು ನೀಡಿದ ಶಕ್ತಿಗಳು, ತಮ್ಮ ಭಾಷೆಯನ್ನು ದೈವಭಾಷೆ, ಧರ್ಮಭಾಷೆ ಎಂಬ ಮುಂತಾದ ಭ್ರಮೆಗಳನ್ನುಟ್ಟಿಸಿ ತಮ್ಮ ಪ್ರಾಬಲ್ಯವನ್ನು ಮೆರದಿವೆ. ಹಾಗಾಗಿ ದ್ರಾವಿಡ ಕುಲದ ನುಡಿಗಳು ತಮ್ಮ ದಾಯಾದಿ ಮತ್ಸರದಿಂದ ಸಂಸ್ಕೃತದಂತಹ ಭಾಷೆಗಳನ್ನು ಪೂಜ್ಯಭಾವದಿಂದ ಕಾಣುವ ದಾಸ್ಯಕ್ಕೆ ಶರಣಾಗಿರುವುದು ಚಾರಿತ್ರಿಕ ವಿಪರ್ಯಾಸವೇ ಸರಿ.
ಮುಖ್ಯವಾಗಿ ಅಂದಿನ ಅಗತ್ಯದ ಪ್ರಶ್ನೆ ಸಂಸ್ಕೃತವನ್ನು ಜನಪ್ರಿಯಗೊಳಿಸುವದಾಗಿತ್ತು. ಸಂಸ್ಕೃತ ಅದನ್ನು ಆಡುವ ಜನಾಂಗವಿಲ್ಲದ್ದರಿಂದ, ಇದೊಂದು ‘ಮೃತ ಭಾಷೆ’ ಎಂದೆನಿಸಿಕೊಂಡಿದೆ. ಆದಾಗ್ಯೂ ಸಂಸ್ಕೃತ ಭಾಷೆಯನ್ನು ಎಂದೆಂದಿಗೂ ನಮ್ಮ ದೇಶೀ ಭಾಷೆ ಸಂಸ್ಕೃತಿಗಳಿಗೆ ಉಪಯುಕ್ತವಾದ ಉಪಕಾರಿಯಾದ ಭಾಷೆಯನ್ನಾಗಿ ಬಿಂಬಿಸುವ ಹುನ್ನಾರ ನಡೆಯುತ್ತಲೇ ಬಂದಿದೆ.
ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಉದ್ಧಾರಕ್ಕೆ ಶ್ರಮಿಸಿದ ಕೆಲ ಧರ್ಮಗಳು ಈಗ ಚರಿತ್ರೆಯ ನೆನಪು ಮಾತ್ರ. ಸಂಸ್ಕೃತ ಭಾಷೆಯು ಕನ್ನಡದಂತಹ ಪ್ರಾದೇಶಿಕ ಭಾಷೆಗಳಿಗೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸಾಮರ್ಥ್ಯವನ್ನು ಸಿದ್ಧಿಸಿದೆ ಎನ್ನುವ ದೃಢ ನಂಬಿಕೆಗಳು ಬೇರು ಬಿಟ್ಟಿವೆ. ಇಂತಹ ನಂಬಿಕೆಗಳನ್ನು ಸಾಬೀತುಪಡಿಸುವ ಅಧ್ಯಯನಗಳು ಶಲ್ಡನ್ ಪೊಲಾಕ್ರಂತಹ ‘ಪರ’ದೇಶಿ ವಿದ್ವಾಂಸರಿಂದ ನಡದಿವೆ. ವಿಶೇಷವೇನೆಂದರೆ, ಈ ಅಧ್ಯಯನಗಳು ಸಂಸ್ಕೃತ ಭಾಷೆಯು “ಕನ್ನಡ ನುಡಿಗೆ ವಿಶ್ವಾತ್ಮಕ ಚಹರೆಯನ್ನು ತಂದು ಕೊಟ್ಟಿದೆ” ಇದಕ್ಕಾಗಿಯೇ ಸಂಸ್ಕೃತವು ಸ್ಥಳೀಕರಣಗೊಂಡಿದೆ ಎಂಬ ವಾದಗಳನ್ನು ಮಂಡಿಸುತ್ತವೆ.
ಇಂತಹ ವಿಧೇಯಕ ಮಾತುಗಳ ಹಿಂದಿನ ಮರ್ಮವೇನೆಂದರೆ ಸಂಸ್ಕೃತ ತಾನೊಂದು ಪರೊಪಕಾರಿ ಭಾಷೆಯೆಂದು ಗುರುತಿಸಿಕೊಳ್ಳುವ ಭಾಷಾ ರಾಜಕಾರಣವೆಂದೇ ಹೇಳಬೇಕು. ಜಾಗತೀಕರಣ ಸಂದರ್ಭದಲ್ಲಿ ಸಂಸ್ಕೃತವು ಹೇಗೆ ದಕ್ಷಿಣ ಏಶಿಯಾ ದೇಶಗಳಲ್ಲಿ ಹರಡಿಕೊಂಡಿತ್ತು ಅನ್ನುವುದನ್ನು ವಿವರಿಸುವುದಕ್ಕೆ ಈ ಅಧ್ಯಯನಗಳು ಬೆಳಕಿಗೆ ಬಂದಿವೆ. ಇದೊಂದು ತೋರಿಕೆಯ ನಂಬಿಕೆಯಾಗಿತ್ತು.
ಆದರೆ ಅವುಗಳ ಒಳಉದ್ದೇಶ ಮಾತ್ರ ಈ ಭಾಷೆಯು ತನ್ನ ಯಾಜಮಾನ್ಯ ಹಾಗೂ ಪ್ರಾಬಲ್ಯದ ನೆಲೆಗಳನ್ನು ಗುರುತಿಸುವ ಹುನ್ನಾರವೇ ಆಗಿತ್ತು ಅನ್ನುವುದು ಸ್ಪಷ್ಟ. ಈ ಒಳ ಉದ್ದೇಶಗಳು ಸಂಸ್ಕೃತ ಮತ್ತು ಕನ್ನಡದ ನಡುವೆ ಯಾಜಮಾನ್ಯ-ಅಧೀನ ನೆಲೆಯ ಸಂಬಂಧವಿದೆ ಎಂದು ಜಗತ್ತಿಗೆ ಸಾರಿ ಹೇಳಬೇಕಾಗಿತ್ತು. ಇದು ವೈಧಿಕ ಧರ್ಮದ ನಾಜೂಕಿನ ಸಾಂಸ್ಕೃತಿಕ ರಾಜಕಾರಣದ ಮತ್ತೊಂದು ಮುಖವೆಂದೇ ಹೇಳಬೇಕು. ಕನ್ನಡವು ಪ್ರಾಕೃತ, ಪರ್ಷಿಯನ್ ಮುಂತಾದ ಭಾಷೆಗಳ ಪದಸಂಪನ್ಮೂಲವನ್ನು ತನ್ನ ಒಡಲಲ್ಲಿಯೇ ಅಡಗಿಸಿಕೊಂಡಿದೆ.
ಇಂತಹ ಭಾಷಿಕ-ಪ್ರಕ್ರಿಯೆಯನ್ನು ಮರೆಮಾಚಿ, ಯಾವುದೇ ಒಂದು ಪ್ರತಿಷ್ಠಿತ ಧರ್ಮದ ಕಪಿಮುಷ್ಠಿಯಲ್ಲಿರುವ ಸಂಸ್ಕೃತ ಭಾಷೆ ತನ್ನ ಪ್ರಾಮುಖ್ಯತೆ ಪಡದಿದೆ. ಇದು ಭಾಷಿಕ-ಸಾಂಸ್ಕೃತಿಕ ಬಹುತ್ವತೆಯ ಚರಿತ್ರೆಗೆ ಮಾಡಿದ ಅಪಚಾರವೆಂದೇ ಹೇಳಬೇಕು. ಇಂತಹ ನಿದರ್ಶನಗಳು ಭಾರತದ ಚರಿತ್ರೆ ಏಕಪಕ್ಷವಾಗಿದೆ ಅನ್ನುವುದನ್ನು ಖಚಿತಪಡಿಸುತ್ತವೆ. ಇದರಿಂದ ಯಾರಿಗೆ ಹಾನಿಯಾಗುತ್ತದೆ ಎನ್ನುವ ಪ್ರಶ್ನೆ ಎದುರಾದಾಗ, ಉತ್ತರಿಸುವ ಮನಸ್ಸುಗಳು ಹಲವು ಮೂಲಗಳಲ್ಲಿ ಹರಡಿಕೊಳ್ಳುತ್ತವೆ. ಯಾಕೆಂದರೆ, ಚರಿತ್ರೆಯ ಹುನ್ನಾರಗಳನ್ನು ವಿವರಿಸುವ ಆಕೃತಿಗಳು ಬೇರೆ ಬೇರೆ ನೆಲೆಯಿಂದ ಕೂಡಿರುವುದೇ ಇದಕ್ಕೆ ಕಾರಣ.
ಒಂದು ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಹೊಣೆ ಅವರಾಡುವ ಭಾಷೆ ಮೇಲೆ ಇರುತ್ತದೆ ಅನ್ನುವುದು ರುಜುವಾತುಪಟ್ಟಿದೆ. ಇದಕ್ಕೆ ಅನುಕೂಲ ಮಾಡಬೇಕಾದ ಪ್ರಭುತ್ವ ಅಥವಾ ಅಧಿಕಾರ ವರ್ಗ ಎಷ್ಟರ ಮಟ್ಟಿಗೆ ಜನಪರ ಕಾಳಜಿ ವಹಿಸುತ್ತವೆ ಅನ್ನುವುದು ಮುಖ್ಯ. ಪ್ರಭುತ್ವವು ಸಂಸ್ಕೃತ ಭಾಷೆಯ ಪರವಾಗಿ ತಳೆಯುವ ನಿಲುವುಗಳನ್ನು, ಕೊಂಕಣಿ, ತುಳು, ಕೊಡವ ಹಾಗೂ ಉರ್ದುದಂತಹ ಸಾಮನ್ಯ ಜನರ ಭಾಷೆಗಳ ಪರವಾಗಿ ಯಾಕೆ ತಾಳುವುದಿಲ್ಲ ಅನ್ನುವ ಪ್ರಶ್ನೆಗಳು ಸಹಜವಾಗಿಯೇ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪಿಸುವ ಈ ಹೊತ್ತಲ್ಲಿ ಹುಟ್ಟುತ್ತವೆ.
ಯಾರು ಯಾವ ಭಾಷೆಯನ್ನು ಪ್ರತಿನಿಧಿಸುತ್ತಾರೆ ಅನ್ನುವುದು ಗಮನಾರ್ಹ. ಈ ಸಂಸ್ಕೃತ ಭಾಷೆ ಪ್ರತಿನಿಧಿಸುವ ಸಮುದಾಯವು, ಚರಿತ್ರೆಯ ಉದ್ದಕ್ಕೂ ಶೋಷಣೆ, ದೌರ್ಜನ್ಯ, ಸಾಮಾಜಿಕ ಅಸಮಾನತೆಯಂತಹ ಜೀವ ವಿರೋಧಿ ರೂಢಿಗಳನ್ನು ಬಲಪಡಿಸುತ್ತಾ ಬಂದಿದೆ. ಇಂತಹ ಧೋರಣೆಗಳು ಖಾಯಂ ಆಗಿ ಸಂಸ್ಕೃತ ಭಾಷೆಯಲ್ಲಿ ನೆಲೆಯೂರಿವೆ. ಈ ವಾದವನ್ನು ಯಾರು ಕೂಡ ತಳ್ಳಿ ಹಾಕಲಾರರು, ಸಂಸ್ಕೃತ ಭಾಷೆ ಸಾಹಿತ್ಯಿಕ, ಭಾಷಿಕ ಒಟ್ಟಾರೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ ಎಂಬಿತ್ಯಾದಿ ವಾದಗಳು ಜನಸಾಮಾನ್ಯರಲ್ಲಿ ರೂಢಿಯಲ್ಲಿವೆ.
ಇಂತಹ ವಾದಗಳಿಗೆ ಹೆಚ್ಚು ಹೆಚ್ಚು ಕಸಿ ನೀಡುವ ಅಧ್ಯಯನಗಳನ್ನು ಸಂಸ್ಕೃತ ಪರವಾಗಿರುವ ಪಂಡಿತರು ಮಂಡಿಸುತ್ತಿರುವುದು ಗಮನಾರ್ಹ. ಆದರೆ ಈ ಭಾಷೆ ಯಾರ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪ್ರತಿನೀದಿಸುತ್ತದೆ ಅನ್ನುವುದೇ ಮುಖ್ಯ. ಶೂದ್ರ ಸಮುದಾಯಗಳ ಸಂವೇದನೆ ಮತ್ತು ವಿವೇಕವನ್ನು ಹೊರಗಿಟ್ಟು ಸಂಸ್ಕೃತ ಸಾಹಿತ್ಯ ರೂಪಗೊಂಡಿದೆ. ಅಂದರೆ ಶೂದ್ರರ ಯಾವ ಸಾಂಸ್ಕೃತಿಕ ಶ್ರೀಮಂತಿಕೆಯನ್ನೂ ಅದು ಒಳಗೊಂಡಿಲ್ಲ ಎಂದರ್ಥ.
ಇವರು ಇದೇ ಧೋರಣೆಯನ್ನು ಕನ್ನಡ ಸಾಹಿತ್ಯದಲ್ಲಿಯೂ ಪಡಿಮೂಡಿಸಿರುವರು. ಇಂತಹ ಕಣ್ಣಿಗೆ ರಾಚುವ ವಾಸ್ತವಗಳನ್ನು ಮರೆಮಾಚಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ರೂಪಿಸಿರುವ/ಹೊರಟಿರುವ ಸಂಸ್ಕೃತ ಮೋಹಿಗಳು ಅದನ್ನೇ ಕನ್ನಡದ ಅನನ್ಯತೆ ಎಂದು ವಾದಿಸುತ್ತಾರೆ. ಅಶೂದ್ರ [ವೈದಿಕ] ಚಿಂತಕರು ಮಂಡಿಸಿರುವ ವಾದಗಳಿಗೆ ಅತೀಯಾದ ಪ್ರಾಮುಖ್ಯತೆ ಸಿಕ್ಕಿರುವುದೇ ಇದಕ್ಕೆ ಕಾರಣ. ಈ ಬಗೆಯ ತಿಳವಳಿಕೆಯು ತಳಸಮುದಾಯ ಹಾಗೂ ಹಿಂದುಳಿದದವರ ಸಾಂಸ್ಕೃತಿಕ ಅರಿವು ಮತ್ತು ಅದರ ಹೆಚ್ಚುಗಾರಿಕೆಯನ್ನು ಅಮಾನ್ಯಗೊಳಿಸಿದೆ.
ಇಂತಹ ಒಲುಮೆಗಳೇ ಕನ್ನಡದ ಗುರುತುಗಳಾಗಿ ಮೈದಾಳಿರುವುದು ಚಾರಿತ್ರಿಕ ವಿಪರ್ಯಾಸ. ಕರ್ನಾಟಕದ ಬಹುಜನರ ಸಂಸ್ಕೃತಿ ಹಾಗೂ ಸಂವೇದನೆ ಒಳಗೊಳ್ಳದ ಕನ್ನಡ ಅದು ಹೇಗೆ ಕನ್ನಡಿಗರ ತಾಯ್ನುಡಿ ಅಥವಾ ಪರಿಸರ ನುಡಿಯಾಗಿರುವುದಕ್ಕೆ ಸಾಧ್ಯ. ಇಂತಹ ಪ್ರಶ್ನೆಗಳಿಂದಲೇ ನಿಜವಾದ ಕನ್ನಡತನ ಅಂದರೇನು ಅನ್ನುವುದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಬಹುದು. ಶತ-ಶತಮಾನಗಳಿಂದಲೂ ಸಂಸ್ಕೃತವು ವೈದಿಕ-ಅವೈದಿಕ, ಶುದ್ಧ-ಅಶುದ್ಧ, ಮೇಲು-ಕೀಳು ಎಂಬೀತ್ಯಾದಿ ವೈರುಧ್ಯಗಳನ್ನು ಹುಟ್ಟುಹಾಕಿ ಕುಲಗೇಡಿಸುವ ಬೆಜವಾಬ್ದಾರಿಯನ್ನು ಮೆರದಿದ್ದೆ ಹೆಚ್ಚು.
ಯಾವುದೇ ಭಾಷೆಗೆ ವರ್ಗ, ಜಾತಿ, ಪ್ರದೇಶ ಮುಂತಾದ ಗುಣಗಳು ರಕ್ತಗತವಾಗಿ ಬಂದಿರುವುದಿಲ್ಲ. ಆದರೆ, ಸಮುದಾಯದೊಡನೆ ಭಾಷೆಗೆ ಇರುವ ನಂಟು ಇಂತಹ ಎಲ್ಲ ಗುಣಗಳನ್ನು ಒಗ್ಗಿಸಿಕೊಡುತ್ತದೆ ಅಥವಾ ಅಂತರ್ಗತಗೊಳಿಸುತ್ತೆ. ಇದಕ್ಕಾಗಿಯೇ ಮೂಲಭೂತವಾದ, ಕೋಮುವಾದದಂತಹ ಜೀವವಿರೋಧಿ ಗುಣಗಳು ಯಾಕೆ ಸಂಸ್ಕೃತ ಭಾಷೆಗೆ ಅಂಟಿಕೊಂಡಿವೆ ಅಂದರೆ, ಆ ಭಾಷೆಗಿರುವ ಅಂತಹ ಒಂದು ಸಮುದಾಯದ ನಿರಂತರ ಸಹಯೋಗವೇ ಕಾರಣವಾಗಿದೆ. ಭಾಷೆ ಹಾಗೂ ಸಮುದಾಯದ ನಡುವಣ ನಂಟಸ್ತಿಕೆ ರೂಪಗೊಳ್ಳುವ ಬಗೆನೇ ಹೀಗೆ.
ಈ ಕಾರಣಗಳಿಂದಲೇ ಸಂಸ್ಕೃತ ವೈದಿಕರ, ಉರ್ದು ಮುಸ್ಲಿಂರ, ಪಾಲಿ ಬೌದ್ಧರ ಹಾಗೂ ಪ್ರಾಕೃತ ಜೈನರ ಸೊತ್ತಾಗಿ ಬಿಂಬಿತವಾಗಿದೆ. ಯಾವಾಗ ಒಂದು ಭಾಷೆ ಯಾವುದೇ ಧರ್ಮ ಅಥವಾ ಜಾತೀಯ ಭಾಷೆಯಾಗಿ ಗುರುತಿಸಲ್ಪಡುತ್ತದೆಯೋ ಆವಾಗ ಅದಕ್ಕೆ ಸಾಂಸ್ಕೃತಿಕ ಪ್ರತ್ಯೇಕತೆಯನ್ನು ಹುಟ್ಟಿಸುವ ಗುಣವು ಮೈಗುಡುತ್ತದೆ. ಪರಿಣಾಮವಾಗಿ, ಸಂಸ್ಕೃತವು ವೈದಿಕ ಧರ್ಮ ಹುಟ್ಟು ಹಾಕಿದ ಎಲ್ಲ ಬಗೆಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಯಜಮಾನಿಕೆ, ಪ್ರಾಬಲ್ಯ, ಸಾಮಾಜಿಕ ನಿರಾಕರಣೆ, ಅಸಮಾನತೆ ಮತ್ತು ಕೀಳರಿಮೆ ಅಂತಹ ಅಪಮೌಲ್ಯಗಳನ್ನು ಅಂತರ್ಗತಮಾಡಿಕೊಂಡಿದೆ. ಅದಕ್ಕಾಗಿ ಸಂಸ್ಕೃತ ಇವತ್ತಿಗೂ ಸಾಂಸ್ಕೃತಿಕ ಅಪಾಯದ ರೂಪಕವಾಗಿಯೇ ಗೋಚರಿಸುತ್ತದೆ. ಈ ಭಾಷೆ ತನ್ನಷ್ಟಕ್ಕೆ “ಸ್ವಯಂಭೂ” ಎನ್ನುವ ಅಹಂನಲ್ಲೇ ತನ್ನ ಹೆಚ್ಚುಗಾರಿಕೆಯನ್ನು ಮೆರದಿದೆ.
ಇಂತಹ ಭಾಷೆಯ ವಾರಸುದಾರರು ಯಾವುದನ್ನು ತಮ್ಮ ತಾಯ್ನುಡಿ ಎಂದು ಹೇಳಿಕೊಳ್ಳುತಾರೆ ಅನ್ನುವುದು ಕೂಡ ವಿಶೇಷ. ಸಂಸ್ಕೃತ ಯಾವತ್ತು ಕೂಡ ವ್ಯವಹಾರಿಕ ಹಾಗೂ ಸಾರ್ವಜನಿಕ ಅಗತ್ಯಗಳಿಗೆ ಪ್ರಯೋಜನವೇ ಆಗಿ/ಗಲ್ಲ. ಆದರೂ ಈ ಭಾಷಿಕರು ಕನ್ನಡದಂತಹ ಭಾಷೆಗಳನ್ನೇ ಅಸಡ್ಡೆಯಿಂದ ನೋಡುವ ಪ್ರವೃತ್ತಿಯನ್ನು ಬೆಳೆಸಿದ್ದಾರೆ. ಪ್ರಾದೇಶಿಕ ಭಾಷೆಗಳು ತಮ್ಮ ಒಡಲಲ್ಲಿ ಕಾಫಿಟ್ಟುಕೊಂಡ ಸೃಜನಶೀಲ ಪ್ರತಿಭೆ ಹಾಗೂ ಅದರ ವೈವಿಧ್ಯತೆಯನ್ನು ನಾಶಮಾಡಿ, ಸಂಸ್ಕೃತ ತನ್ನ ಸೃಜನಶೀಲತೆಯ ಪ್ರಾಮುಖ್ಯತೆಯನ್ನು ಮೆರದಿದೆ.
ಇಷ್ಟೆಲ್ಲ ಆವಾಂತರಗಳನ್ನು ಹುಟ್ಟು ಹಾಕಿದ ಸಂಸ್ಕೃತಕ್ಕೆ ಪಾಪಪ್ರಜ್ಞೆಯೇ ಇಲ್ಲವಲ್ಲ ಅನ್ನುವುದು ಆಶ್ಚರ್ಯ. ಇಂತಹ ಕೀಳರಿಮೆಯ ನರಳಿಕೆಯಿಂದ ಪ್ರಾದೇಶಿಕ ಭಾಷೆಗಳು ಎಚ್ಚತ್ತುಕೊಳ್ಳುವ ಈ ಹೊತ್ತಿನಲ್ಲಿ ಸಂಸ್ಕೃತ ವಿಶ್ವವಿದ್ಯಾನಿಲಯ ತಲೆ ಎತ್ತಿದೆ. ಸಂಸ್ಕೃತ ತನ್ನ ಅಸ್ತಿತ್ವವನ್ನು ಹೆಚ್ಚು ಹೆಚ್ಚು ಗಟ್ಟಿಪಡಿಸಿಕೊಲ್ಳಲು ಸಾಕಷ್ಟು ಸಮೂಹ ಭಾಷೆಗಳನ್ನು ಬಲಿ ತೆಗೆದುಕೊಂಡಿದೆ. ಸಂಸ್ಕೃತ ಭಾಷೆಯ ವಾರಸುದಾರರು ಇವತ್ತು ತಾವು ವೈಜ್ಞಾನಿಕ ಹಾಗೂ ಆಧುನಿಕತೆಯ ಲಾಭವನ್ನು ಪಡೆಯಲು, ತಮ್ಮ ಸನಾತನ ಧರ್ಮದ ಅಸ್ಮಿತೆಯ ರೂಪಕ ಆಗಿದ್ದ ಸಂಸ್ಕೃತವನ್ನು ಶೂದ್ರ ಸಮುದಾಯಗಳಿಗೆ ಕಲಿಸುವ ಮೂಲಕ ಅದನ್ನು ಸಂಗೋಪಿಸುವ ಜವಾಬ್ದಾರಿಯನ್ನು ಇವರಿಗೆ ವರ್ಗಾಯಿಸಿದ್ದಾರೆ.
ಒಂದು ಕಾಲದಲ್ಲಿ ಸಂಸ್ಕೃತಕ್ಕೆ ಅಸ್ಪೃಶ್ಯರಾಗಿದ್ದ ಶೂದ್ರ ಸಮುದಾಯಗಳಿಗೆ ಸಂಸ್ಕೃತ ಕಲಿಸಬೇಕು ಎನ್ನುವ ಈ ಶಿಫ್ಟ್ ಹಿಂದಿನ ಹುನ್ನಾರ ಸ್ಪಷ್ಟವಾಗಿದೆ. ವೈದಿಕ ಧರ್ಮ ಪಾಲಿಸುತ್ತ ಬಂದ ಎಲ್ಲ ಕಂದಾಚರಗಳನ್ನು ಮರುಸ್ಥಾಪಿಸುವದೇ ಹೊರತು ಬೇರೆನೂ ಅಲ್ಲ. ಕನ್ನಡ ಹಾಗೂ ಕನ್ನಡಿಗರನ್ನೂ ಯಾವುದೇ ರೀತಿಯಲ್ಲಿ ಭಾದಿಸದ ಶಾಸ್ತ್ರೀಯ ಭಾಷಾ ಸ್ಥಾನಮಾನ ತಮಿಳುಗೆ ಸಿಕ್ಕಾಗ, ಅದನ್ನು ವಿರೋಧಿಸಿ ಕನ್ನಡಕ್ಕೂ ಬೇಕೆಂದು ಹೋರಾಟ ಮಾಡಿದ ಚಳವಳಿಗಾರರರಿಗೆ ಏನಾಗಿದೆ? ಇವರಾಕೇ ಸಂಸ್ಕೃತ ವಿಶ್ವವಿದ್ಯಾನಿಲಯ ಸ್ಥಾಪನೆಯನ್ನು ವಿರೋಧಿಸುತ್ತಿಲ್ಲ.
ದೂರದರ್ಶನದಲ್ಲಿ ಪ್ರಸಾರ ಆಗುವ ಉರ್ದು ಕಾರ್ಯಕ್ರಮ/ನ್ಯೂಸ್ನ್ನು ವಿರೋಧಿಸಿದ ಮನಸ್ಸುಗಳು ಯಾಕೆ ಈಗ ತೆಪ್ಪಗಿವೆ. ದಲಿತ-ಹಿಂದುಳಿದ ವರ್ಗಗಳ ಏಳ್ಗೆಗೆ ಅನುವಾಗಲೆಂದು ಜಾರಿಗೊಳ್ಳಿಸಿದ್ದ ಒಂದನೇ ತರಗತಯಿಂದ ಇಂಗ್ಲಿಶು ಭಾಷಾ ಕಲಿಕೆಯನ್ನು ವಿರೋಧಿಸಿದ ಅಪ್ಪಟ ಕನ್ನಡ ಅಭಿಮಾನಿಗಳಿಗೆ ಏನಾಗಿದೆ? ಇದೆಲ್ಲವುಕ್ಕಿಂತ ಹೆಚ್ಚಾಗಿ ಸಂಸ್ಕೃತವು ಭಾಷಿಕ-ಸಾಂಸ್ಕೃತಿಕ-ಸಾಮಾಜಿಕ ಅಸಹನೆಯನ್ನು ಹುಟ್ಟು ಹಾಕಿದೆ. ಈ ಎಲ್ಲ ಮನಸ್ಸುಗಳ ಹಿಂದಿನ ಶಕ್ತಿ ಯಾವುದೆಂದು ಕೇಳಿದರೆ, ಅದು ಸಂಸ್ಕೃತವೆಂದೇ ಹೇಳಬಹುದು.
ಸಂಸ್ಕೃತಕ್ಕೂ ಇಂತಹ ಜನವಿರೋಧಿ ಬೆಳವಣೆಗೆಗಳ ನಡುವೆ ಏನಾದರೂ ತಳುಕು ಇದಿಯೇ ಎಂದೂ ಕೇಳಿದರೆ, ಸಂಸ್ಕೃತವನ್ನು ಕೇವಲ ಒಂದು ಭಾಷೆಯಾಗಿ ನೋಡಿದರೆ ಅದಕ್ಕೆ ಯಾವುದೇ ಜೀವವಿರೋಧಿ ಗುಣವಿಲ್ಲ. ಆದರೆ, ಸಂಸ್ಕೃತವನ್ನು ಒಂದು ಸಮೂಹದ ಭಾಷೆಯಾಗಿ ನೋಡಿದರೆ, ಅದಕ್ಕೆ ಎಲ್ಲಾ ಬಗೆಯ ಗುಣಗಳನ್ನು ರೂಢಿಸಿಕೊಳ್ಳಲು ಸಾಧ್ಯ. ಹಾಗಾಗಿ ಸಂಸ್ಕೃತ ಭಾಷೆಯ ಕೆಳ್ಚಲನೆಯ ಮುಖ್ಯ ಉದ್ದೇಶ ವೈದಿಕಕರಣ ಅಥವಾ ಕೇಸರೀಕರಣವನ್ನು ಮತ್ತೇ ನೆಲೆಯೂರಿಸುವ ಹುನ್ನಾರ ಎಂದು ಯಾಕೆ ಕನ್ನಡಪರ ಹೋರಾಟಗಾರರಿಗೆ ಇನ್ನೂ ಅರ್ಥವಾಗಿಲ್ಲ.
ವೈದಿಕ-ಸಂಸ್ಕೃತದ ಗೀಳು ಅಂಟಿಸಿಕೊಂಡ ಭೈರಪ್ಪನಂಥವರು ಕರ್ನಾಟಕ ಸಂಸ್ಕೃತಿ ಪಾಠವನ್ನು ಹೇಳುವ ಹುಂಬತನಕ್ಕೆ ಏನನ್ನಬೇಕು? ಸಂಸ್ಕೃತ ವಿವಿ ಬೇಕು ಬೇಡ ಎನ್ನುವ ಚರ್ಚೆಯನ್ನು ವಿಜಯ ಕರ್ನಾಟಕ ಪತ್ರಿಕೆಯವರು ಆರಂಭಿಸಿದರು ಅದಕ್ಕೆ ‘ನಿಸ್ಪಕ್ಷಪಾತ ಚರ್ಚೆ’ ಎಂಬ ಹಣೆಪಟ್ಟಿಯನ್ನು ಅಂಟಿಸಿದ್ದರೂ. ಈ ಚರ್ಚೆಯ ಉದ್ಘಾಟನೆಯನ್ನು ಭೈರಪ್ಪನವರೇ ಮಾಡಿದರು. ಇದರಲ್ಲಿ ಪಾಲ್ಗೊಂಡ ಹೆಚ್ಚಿನ ವಿದ್ವಾಂಸರು ನಿಲಯದ ಕಲಾವಿದರೇ ಆಗಿದ್ದರು ಅನ್ನುವುದು ವಿಶೇಷ.
ಈ ಚರ್ಚೆಯಲ್ಲಿ ಪಾಲ್ಗೊಂಡು ಸಂಸ್ಕೃತ ವಿವಿ ಏಕೆ ಬೇಡ ಎಂದೂ ಸಮರ್ಥನೆ ನೀಡಿದ ಪ್ರೊ. ಕೆ. ವಿ. ನಾರಾಯಣ ಮತ್ತು ಪ್ರೊ. ಎಮ್. ಎಮ್. ಕಲಬುರ್ಗಿಯಂತಹ ಚಿಂತಕರನ್ನು ಭಿನ್ನಮತಿಯರೆಂದೂ ಬೀಗಿ ಅದೇ ಭೈರಪ್ಪನವರು ಆ ಚರ್ಚೆಗೆ ಮುಕ್ತಾಯ ಹಾಡಿದ್ದು ಇನ್ನೂ ವಿಶೇಷವಾಗಿತ್ತು. ರಾಜ್ಯದ ಇನ್ನಿತರ ಪತ್ರಿಕೆಗಳಾದ ‘ಸಂವಾದ’ ‘ಲಂಕೇಶ್’ [ಈ ಪತ್ರಿಕೆಯಲ್ಲಿಯೂ ಕೂಡ ಪ್ರೊ.ಲಿಂಗದೇವರು ಹಳೆಮನೆಯವರ ಹೊರತಾಗಿ ಬೇರೆ ಯಾರು ಸಂಸ್ಕೃತ ವಿವಿಗೆ ಪ್ರತಿಕ್ರಿಯಿಸಿದ್ದು ನನಗೆ ಗೊತ್ತಿಲ್ಲ] ‘ವಾರ್ತಭಾರತಿ’ ಹಾಗೂ ‘ಹೊಸತು’ ಇವುಗಳು ತಕ್ಕಮಟ್ಟಿಗೆ ಸಂಸ್ಕೃತ ವಿವಿಯನ್ನು ವಿರೋಧಿಸುವುದಕ್ಕೆ ವೇದಿಕೆ ಆಗಿದ್ದು ಗಮನಾರ್ಹ. ಕನ್ನಡ ಸಾರಸತ್ವಕ್ಕೆ ತಮ್ಮನ್ನು ಮುಡುಪಾಗಿಟ್ಟಂತಹ ಎಷ್ಟೋ ಪತ್ರಿಕೆಗಳು ಸಂಸ್ಕೃತ ವಿವಿ ಸ್ಥಾಪನೆ ಕುರಿತು ಚರ್ಚೆಗೆ ಒಂದು ವೇದಿಕೆ ಒದಗಿಸದಿರುವುದು ನೋವಿನ ಸಂಗತಿ.
ಕನ್ನಡ ಮಾತನಾಡುವ ಮತ್ತು ಕನ್ನಡ ನುಡಿಯನ್ನೇ ನೆಚ್ಚಿರುವ ಸಮುದಾಯಗಳ ಆಶೋತ್ತರಗಳನ್ನು ಕಾಪಾಡುವ ಜವಾಬ್ದಾರಿ ಈ ನಾಡಿನ ಎಲ್ಲ ಬಗೆಯ ಸಮೂಹ ಮಾಧ್ಯಮಕ್ಕೆ ಇದೆ ಎಂದು ನನ್ನ ಬಲವಾದ ನಂಬಿಕೆ. ಯಾಕೆಂದರೆ, ಕರ್ನಾಟಕದ ಹೆಚ್ಚಿನ ಸಮುದಾಯಗಳ ಭಾಷೆ ಕನ್ನಡ. ಕನ್ನಡದ ಏಳ್ಗೆಗೆ ಅಗತ್ಯವಿರುವ ಎಲ್ಲ ಬಗೆಯ ನುಡಿಹಮ್ಮುಗೆ [ಭಾಷಾಯೋಜನೆ] ಅನುಷ್ಠಾನಗೊಳ್ಳಬೇಕು. ಇಂತಹ ಭಾಷಾಯೋಜನೆಗಳು ತಾರತಮ್ಯದ ಧೋರಣೆಗಳನ್ನು ಬಿಟ್ಟು ಮುನ್ನಡೆಯಬೇಕು. ಕಾರಣ ಹಲವಾರು ಬೇರೆ ಬೇರೆ ಸಮೂಹ ಭಾಷೆಗಳು ಕರ್ನಾಟಕದಲ್ಲಿವೆ.
ಈ ಭಾಷೆಗಳಿಗೂ ಕನ್ನಡದಷ್ಟೇ ಪ್ರಾಮುಖ್ಯತೆ ಸಿಗಬೇಕು. ಇಂತಹ ಒಂದು ಔದಾರ್ಯದ ಮನುಸ್ಸು ಪ್ರಭುತ್ವ ಹಾಗೂ ಅದನ್ನು ನಿಭಾಯಿಸುವ ವರ್ಗಕ್ಕೂ ಇರಲೇಬೇಕು. ಇಲ್ಲವಾದರೆ, ಸಂಸ್ಕೃತದಿಂದ ಕನ್ನಡದ ಮೇಲೆ ನಡದಿರುವ ಭಾಷಿಕ ಯಾಜಮಾನ್ಯ ಕನ್ನಡದಿಂದ ಕರ್ನಾಟಕದ ಇತರ ಭಾಷೆಗಳ ಮೇಲಿಯೂ ನಡೆಯುತ್ತದೆ. ಈಗ ಇಂತಹ ಯಾವುದೇ ಯಾಜಮಾನ್ಯ ಪ್ರಭಾವವು ಕನ್ನಡದಿಂದ ಕರ್ನಾಟಕದ ಇತರ ಭಾಷೆಗಳ ಮೇಲೆ ಆಗಿಲ್ಲವೆಂದೂ ನನ್ನ ವಾದವಲ್ಲ. ಆದರೆ ಸಂಸ್ಕೃತ ಕನ್ನಡಕ್ಕೆ ಹೋಲಿಸಿ ನೋಡಿದರೆ, ಕನ್ನಡದಿಂದ ಬೇರೆ ಭಾಷೆಗಳ ಮೇಲೆ ನಡದಿರುವ ಶೋಷಣೆಯ ಪ್ರಮಾಣ ಕಮ್ಮಿಯೆಂದೇ ಹೇಳಬಹುದು.
ನೀರು ಕೆಲವರಿಗೆ ಮಾತ್ರ ತೀರ್ಥವಲ್ಲ. ನೀರು ತೀರ್ಥವಾಗಿ ಮಾರ್ಪಡುವ ದ್ರವವಾದರೇ ಅದು ಎಲ್ಲರಿಗೂ ತೀರ್ಥವೇ. ಹಾಗೆನೇ ಆಯಾ ಸಮುದಾಯದ ತಾಯ್ನುಡಿ ಅವರವರ ಅನುಭವವನ್ನು ಕಟ್ಟಿಕೊಡುವ ಮಾಧ್ಯಮವಾಗಬೇಕು. ಇದರಲ್ಲಿ ಯಾವುದೇ ಬಗೆಯ ತರತಮ ಮಾಡುವ ಹುನ್ನಾರಕ್ಕೆ ಅವಕಾಶ ಇರಕೂಡದು.
ಪ್ರಭುತ್ವ ಹಾಗೂ ನುಡಿಹಮ್ಮುಗೆ [ಭಾಷಾಯೋಜನೆ] ನುಡಿನಡೆ [ಭಾಷಾನೀತಿ] ಯನ್ನು ರೂಪಿಸುವವರು ತಾಯ್ನುಡಿಯಂತಹ ಪರಿಕಲ್ಪನೆಗೆ ಇರುವ ಮೌಲ್ಯವನ್ನು ಮನಗಾಣಬೇಕಿದೆ. ಬಹುಭಾಷಿಕ-ಸಾಂಸ್ಕೃತಿಕ ಸನ್ನಿವೇಶಗಳ ಹೆಚ್ಚುಗಾರಿಕೆ ಏನು ಹಾಗೂ ಅವುಗಳನ್ನು ಯಾಕೆ ಕಾಪಾಡಬೇಕು ಎಂಬುದನ್ನು ಇನ್ನಾದರೂ ಮನವರಿಕೆ ಮಾಡಿಕೊಳ್ಳುವ ಜರೂರು ಇದೆ.
(ಇದು ಸಂಚಯ ತ್ರೈಮಾಸಿಕ ಪತ್ರಿಕೆಯಲ್ಲಿ 2009ರಲ್ಲಿ ಪ್ರಕಟವಾಗಿತ್ತು.)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತತ್ವಪದಗಳು ಸಾರ್ವಕಾಲಿಕ ಬೆಳಕನಿಧಿ: ಕಾ.ತ.ಚಿಕ್ಕಣ್ಣ
ಸುದ್ದಿದಿನ,ಬೆಂಗಳೂರು:ತತ್ವಪದಗಳು ಎಲ್ಲ ಕಾಲಕ್ಕೂ ಸಲ್ಲುವಂತಹ ಬೆಳಕನ್ನು ನೀಡುವ ಸೃಜನಶೀಲ ಸಂರಚನೆಗಳಾಗಿವೆ ಎಂದು ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಶ್ರೀ ಕಾ.ತ.ಚಿಕ್ಕಣ್ಣ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಸರ್ಕಾರದ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ: ಸಾಂಸ್ಕೃತಿಕ ಅನುಸಂಧಾನ’ ವಿಷಯ ಕುರಿತಾದ ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ತತ್ವಪದ ಸಾಹಿತ್ಯ ರೂಪುಗೊಂಡಿದ್ದ ಕಾಲವನ್ನು ಕತ್ತಲಯುಗ ಎಂದು ಕರೆದು ವಿಸ್ಮೃತಿಗೆ ತಳ್ಳಲಾಗಿತ್ತು. ಆದರೆ ಆ ಕತ್ತಲೆಯುಗದಲ್ಲಿಯೇ ಜಗತ್ತಿಗೆ ಮಹೋನ್ನತ ಬೆಳಕು ನೀಡುವ ನುಡಿರತ್ನಗಳು ರಚನೆಗೊಂಡಿದ್ದವು. ತತ್ವಪದಕಾರರು ಪರಂಪರೆಯೊಂದಿಗೆ ಸಂವಾದ ನಡೆಸುತ್ತಾ ವರ್ತಮಾನಕ್ಕೆ ಸೂಕ್ತವಾಗಿ ಅನ್ವಯವಾಗುವ ಹಾಗೂ ಭವಿಷ್ಯಕ್ಕೆ ಬೇಕಾದ ಜಾಗೃತಿಯನ್ನು ನೀಡುವ ಮೂಲಕ ಕನ್ನಡ ಸಂಸ್ಕೃತಿಯಲ್ಲಿ ತಮ್ಮದೇ ಆದ ಮೌಲ್ಯಯುತ ಸ್ಥಾನವನ್ನು ಪಡೆದುಕೊಂಡಿವೆ. ಸಮಾಜದಲ್ಲಿರುವ ಜಾತಿಭೇದ, ಲಿಂಗಭೇದ, ವರ್ಣಭೇದ ಮೊದಲಾದ ವಿಷಕಾರಿ ಮನಸ್ಥಿತಿಗೆ ತತ್ವಪದಕಾರರು ತಮ್ಮ ನುಡಿ-ನಡೆಗಳ ಮೂಲಕ ಚಿಕಿತ್ಸೆ ನೀಡುವ ಮೂಲಕ ಬದುಕಿನ ಸತ್ಯ ಮತ್ತು ಸಾರ್ಥಕತೆಯನ್ನು ಸಾಧಿಸಿತೋರಿದ್ದಾರೆ ಎಂದು ತಿಳಿಸಿದರು.
ವಿಶ್ವಾತ್ಮಕವಾದ ಸಂವೇದನೆಯ ತತ್ವಪದ ಸಾಹಿತ್ಯ
ವಿಚಾರಸಂಕಿರಣವನ್ನು ಉದ್ಘಾಟನೆ ಮಾಡಿದ ಕ್ರಿಸ್ತು ಜಯಂತಿ ವಿವಿಯ ಸಂಸೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಫಾ.ಡಾ.ಮರಿಯಾಲಾಲ್ ಜೋಸೆಫ್ ಅವರು, ಕನ್ನಡದ ತತ್ವಪದಗಳು ಜನಸಾಮಾನ್ಯರ ವೇದಗಳಾಗಿವೆ. ಕನ್ನಡ ಸಾಹಿತ್ಯಕ್ಕೆ ಸಂಗೀತಾತ್ಮಕ ಶಾಸ್ತ್ರೀಯ ಸಂರಚನೆಯ ಜೊತೆಗೆ ವಿಶ್ವಾತ್ಮಕವಾದ ಸಂವೇದನೆಯ ಮೂಲಕ ಮಹತ್ತರವಾದ ಕೊಡುಗೆ ನೀಡಿದ್ದು ತತ್ವಪದ ಸಾಹಿತ್ಯ.
ಮಧ್ಯಯುಗೀನ ಕಾಲದ ಭಕ್ತಿಚಳವಳಿಯ ಭಾಗವಾಗಿ ಮೂಡಿಬಂದ ವಚನ ಸಾಹಿತ್ಯ ಹಾಗೂ ಕೀರ್ತನ ಸಾಹಿತ್ಯಗಳು ಕರ್ನಾಟಕದಲ್ಲಿ ಮೂಡಿಸಿದ ಸಾಂಸ್ಕೃತಿಕ ಚೈತನ್ಯಶೀಲತೆಯನ್ನು ನಂತರದಲ್ಲಿ ಮುಂದುವರೆಸುವ ಮೂಲಕ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದದ್ದು ತತ್ವಪದ ಸಾಹಿತ್ಯವಾಗಿದೆ. ಇಂದಿನ ಆವೇಗದ ಆಧುನಿಕ ಜಗತ್ತಿಗೆ ತತ್ವಪದಕಾರರು ನೀಡಿದ ಅರಿವಿನ ಬೆಳಕು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ನಿಜತ್ವ ಬೆಳಗುವ ದಾರಿದೀಪ ತತ್ವಪದಗಳು-ಪದ್ಮಾಲಯ ನಾಗರಾಜ್: ಪ್ರಧಾನಗೋಷ್ಠಿಯ ಅಧ್ಯಕ್ಷತೆ ವಹಿಸಿ ತತ್ವಪದಗಳ ಸಾಂಸ್ಕೃತಿಕ ಮಹತ್ವ ಕುರಿತು ಮಾತನಾಡಿದ ಅಚಲ ಸಾಧಕರಾದ ಪದ್ಮಾಲಯ ನಾಗರಾಜ್ ಅವರು, ಜಗತ್ತಿನಾದ್ಯಂತ ಇಂದು ನಡೆಯುತ್ತಿರುವ ಅಧಿಕಾರ ಹಾಗೂ ವ್ಯಾಪಾರದಾಹೀ ರಾಜಕೀಯ ಲಂಪಟ, ಆರ್ಥಿಕ ಲಂಪಟ ಹಾಗೂ ಸಾಮಾಜಿಕ ಅಸಮಾನ ಸೃಷ್ಟಿಗಳು ಮಾನವಲೋಕವನ್ನು ಭ್ರಮೆ ಮತ್ತು ಅಸತ್ಯದತ್ತ ಕೊಂಡೊಯ್ಯುತ್ತಿವೆ. ಅವೈಜ್ಞಾನಿಕ ಕಲ್ಪನೆಗಳನ್ನು ಹುಟ್ಟುಹಾಕುತ್ತಾ ವಾಸ್ತವಿಕತೆಯಿಂದ ದೂರಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಿರಂತರ ಆಗುವಿಕೆಯ ಅನಂತವಿಶ್ವದಲ್ಲಿ ನಾವೊಂದು ಬಿಂದುವೆಂಬ ಸತ್ಯದರ್ಶನ ಮಾಡಿಸುವ ಮೂಲಕ ನಿಜತ್ವವನ್ನು ಬೆಳಗುವ ದಾರದೀಪವಾಗಿವೆ ತತ್ವಪದಗಳು ಎಂದು ತಿಳಿಸಿದರು.
‘ತತ್ವಪದಕಾರ್ತಿಯರ ಲೋಕದೃಷ್ಠಿ’ಯನ್ನು ಕುರಿತು ವಿಚಾರಮಂಡನೆ ಮಾಡಿದ ಡಾ.ಶೋಭಾರಾಣಿ ಎನ್. ಅವರು, ‘ತತ್ವಪದಕಾರ್ತಿಯರು ಸಂಸಾರದ ಸಹಯಾನದೊಂದಿಗೇ ಅಧ್ಯಾತ್ಮಿಕ ಸಾಧನೆಯನ್ನು ಮಾಡಬಹುದೆಂದು ಸಾಧಿಸಿತೋರಿದ್ದಾರೆ. ನಿರ್ಭೀತ ನುಡಿಕಾರರು ತತ್ವಪದಕಾರ್ತಿಯರು. ಮಹಿಳಾ ತತ್ವಪದಕಾರರ ಇನ್ನೂ ಎಷ್ಟೋ ತತ್ವಪದಗಳು ಸಂಗ್ರಹವಾಗಬೇಕಿದೆ’ ಎಂದು ಅಭಿಪ್ರಯಪಟ್ಟರು.
‘ಕನ್ನಡ ತತ್ವಪದಗಳು ಮತ್ತು ಬಹುತ್ವ ಭಾರತ’ ಕುರಿತು ಮಾತನಾಡಿದ ರವಿ ಕಂಬಳಿ ಅವರು, ಬಹುಸಂಸ್ಕೃತಿಗಳಿರುವ ಭಾರತದಲ್ಲಿ ಏಕರೂಪೀತನದ ಯಾಜಮಾನ್ಯ ಹೇರುವ ದೌರ್ಜನ್ಯ ಹಾಗೂ ಸಮಸ್ಯೆಗಳಿಗೆ ಪ್ರತಿಕ್ರಿಯೆಯಾಗಿ ಕನ್ನಡ ತತ್ವಪದಕಾರರು ಬಹುತ್ವವನ್ನು ತಮ್ಮ ಸಾಹಿತ್ಯದ ಆಶಯ ಹಾಗೂ ಬದುಕಿನ ಆಚರಣೆಯನ್ನಾಗಿ ಮಾಡಿಕೊಂಡರು. ಮೌಢ್ಯರಹಿತವಾದ ಸಮಸಮಾಜ ಕಲ್ಪನೆ ಅವರದಾಗಿತ್ತು. ತಮಗಿಂತಲೂ ಹಿಂದೆ ಹಲವು ಬಗೆಯ ಬಹುತ್ವದ ಮಾದರಿಗಳನ್ನು ಪ್ರತಿಪಾದಿಸಿದ್ದ ವಚನಕಾರರು ಇವರಿಗೆ ಆದರ್ಶವಾಗಿದ್ದರು ಎಂದು ತಿಳಿಸಿದರು.
ವಿಚಾರಸಂಕಿರಣದ ಭಾಗವಾಗಿ ಹೊರತರಲಾಗಿದ್ದ ‘ಕನ್ನಡ ತತ್ವಪದ ಸಾಹಿತ್ಯ
ಸಾಂಸ್ಕೃತಿಕ ಅನುಸಂಧಾನ-ಸಂಪುಟ 1 ಮತ್ತು 2’ ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಪ್ರಸಿದ್ಧ ಗಾಯಕರಾದ ಶ್ರೀ ಖಾಸೀಂ ಮಲ್ಲಿಗೆ ಮಡುವು ತತ್ವಪದ ಗಾಯನವನ್ನು ಪ್ರಸ್ತುತಪಡಿಸಿದರು. ಪರ್ಯಾಯಗೋಷ್ಠಿಗಳಲ್ಲಿ 6೦ಕ್ಕೂ ಹೆಚ್ಚು ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಡೀನರಾದ ಡಾ.ಗೋಪಕುಮಾರ್ ಎ.ವಿ. ಅವರು ಮುಖ್ಯ ಅತಿಥಿಯಾಗಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಚಾರಸಂಕಿರಣದ ಸಂಯೋಜಕರಾದ ಡಾ.ಕಿರಣಕುಮಾರ್ ಹೆಚ್.ಜಿ ಅವರು ವಂದಿಸಿದರು.
ಕನ್ನಡ ಪ್ರಾಧ್ಯಾಪಕರಾದ ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅವರು ನಿರೂಪಿಸಿದರು. ಕನ್ನಡ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ., ತತ್ವಪದಕಾರರ ಅಧ್ಯಯನ ಕೇಂದ್ರದ ಸಿಬ್ಬಂದಿವರ್ಗದವರಾದ ರಜತಾ ಶೆಟ್ಟಿ ಹಾಗೂ ಸುಪ್ರಿಯಾ ಅವರು ಉಪಸ್ಥಿತರಿದ್ದರು. 200ಕ್ಕೂ ಹೆಚ್ಚು ಅಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಸಂಪಾದಕೀಯ | ಕುಟುಂಬ ಉತ್ತರಾಧಿಕಾರ vs ಬದಲಾವಣೆಯ ಗಾಳಿ: ಉಪಚುನಾವಣೆಯ ಸವಾಲು
-
ದಿನದ ಸುದ್ದಿ3 days agoಸಂಪಾದಕೀಯ | ಚುನಾವಣೆಗಳಲ್ಲಿ ಹಣ ಮತ್ತು ಜಾತಿ
-
ದಿನದ ಸುದ್ದಿ3 days agoಎಸ್ ಎಸ್ ಹಾದಿಯಲ್ಲಿ ಸಮರ್ಥ್ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ
-
ದಿನದ ಸುದ್ದಿ3 days agoಉಪಚುನಾವಣೆ | ಕಾಂಗ್ರೆಸ್ ಗೆ ನಿರೀಕ್ಷೆಗೂ ಮೀರಿ ಜನಬೆಂಬಲ : ಸಿಎಂ ಸಿದ್ದರಾಮಯ್ಯ
-
ಅಂಕಣ2 days agoಸಂಪಾದಕೀಯ | ಯುದ್ಧದ ನರಕ ; ಅಮೆರಿಕಾ-ಇಸ್ರೇಲ್ ಆಕ್ರಮಣ : ಇರಾನ್ ಮೇಲಿನ ಅಮಾನುಷ ಹಲ್ಲೆ
-
ದಿನದ ಸುದ್ದಿ2 days agoಕಾಂಗ್ರೆಸ್ ಸರಕಾರದ ದುರಾಡಳಿತ ; ಆರೋಪ ಪಟ್ಟಿ ಬಿಡುಗಡೆ
-
ದಿನದ ಸುದ್ದಿ2 days agoಕಾಂಗ್ರೆಸ್ ನಿಂದ ಮಾತ್ರ ಜನಪರ ಯೋಜನೆ ನೀಡಲು ಸಾಧ್ಯ: ಡಾ. ಪ್ರಭಾ ಮಲ್ಲಿಕಾರ್ಜುನ

