ಅಂತರಂಗ
ಅರಿಮೆಯ ಅರಿವಿರಲಿ-8 : ಶೀಲ ಅಶ್ಲೀಲ
- ಯೋಗೇಶ್ ಮಾಸ್ಟರ್
ಶೀಲದ ಗೀಳಿನ ಸಿನಿಮಾಗಳು
ಶೀಲ ಅಶ್ಲೀಲದರಿಮೆ (Madonna/Whore Complex)ನಮ್ಮ ಭಾರತೀಯ ಸಿನಿಮಾಗಳಲ್ಲಿ ಚೆನ್ನಾಗಿ ಅರ್ಥವಾಗುತ್ತದೆ. ಪಾಪ, ಅವರಾದರೋ ಹೊಸದನ್ನೇನೂ ಸೃಷ್ಟಿಸಿ ತೋರುವುದಲ್ಲ. ಸಮಾಜದಲ್ಲಿ ಸಾಮಾನ್ಯವಾಗಿರುವ ಮನಸ್ಥಿತಿಯನ್ನೇ ವಿಜೃಂಭಿಸಿ ತೋರಿಸುತ್ತಾರೆ. ಆಗ ಸಮಾಜವೂ ಅದನ್ನು ಮೆಚ್ಚುವುದು ಮಾತ್ರವಲ್ಲದೇ ತನ್ನ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಿಕೊಳ್ಳುತ್ತದೆ.
“ಹೆಣ್ಣಿನ ಬಾಳು ಹಣ್ಣಿನ ಹೋಳು, ಜಾರಿದರೊಮ್ಮೆ ಮಣ್ಣಿನ ಧೂಳು” ಎಂದು ಹಾಡುವ ಹೆಣ್ಣು ತನ್ನ ಶೀಲವನ್ನು ಎಷ್ಟು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಬಹಳ ಸೂಕ್ಷ್ಮವಾಗಿರುವ ಗಾಜಿನ ವಸ್ತುವಂತೆ ಶೀಲ ಎನ್ನುವುದು. ಒಮ್ಮೆ ಬಿತ್ತೋ, ಒಡೆದು ಹೋಯಿತೋ, ಮುಗಿಯಿತು. ಅದಿನ್ನು ಬಿಸಾಡಬೇಕು. ತ್ರಿವೇಣಿಯವರ ಶರಪಂಜರದಲ್ಲಿ ಕಾವೇರಿಗೆ ಆವರಿಸಿದ್ದ ಸಮಸ್ಯೆ ಇದೆಯೇ. ಅಂದೆಂದೋ ಅಲ್ಲೆಲ್ಲೋ ಯಾರೊಂದಿಗೋ ಕಲೆತಿದ್ದ ವಿಷಯವನ್ನು ಯಾರೊಂದಿಗೂ ಹೇಳಿಕೊಳ್ಳದೇ ಹೋಗಿದ್ದಳು. ಯಾರಿಗೂ ಅದು ಗೊತ್ತಿಲ್ಲದಿದ್ದರೂ ಅವಳಿಗೇ ಅದನ್ನು ಸಮ್ಮತಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅದೇ ಮನೋರೋಗದಲ್ಲಿ ಬಳಲುವ ಅವಳು ಸಾಮಾಜಿಕ ಮತ್ತು ಕೌಟುಂಬಿಕ ಸಂಘರ್ಷಗಳಿಂದ ಸಮಸ್ಯೆ ಬಗೆಹರಿಯದೇ ಮತ್ತೆ ಮನೋರೋಗಿಯಾಗಿಯೇ ಉಳಿದುಬಿಡುತ್ತಾಳೆ.
ಈಗಾದರೂ ಅತ್ಯಾಚಾರಕ್ಕೊಳಗಾದ ಹೆಣ್ಣಿನ ನೋವು ಮತ್ತು ಅತ್ಯಾಚಾರಿಯ ದೌರ್ಜನ್ಯ ಮತ್ತು ಕ್ರೌರ್ಯವನ್ನು ನಾವು ಗುರುತಿಸುತ್ತಿದ್ದೇವೆ. ಆದರೆ ಈ ಮೊದಲು ನಮ್ಮ ಸಿನಿಮಾಗಳಲ್ಲಿ ಕ್ರೌರ್ಯ ಮತ್ತು ನೋವಿಗಿಂತಲೂ ಕೇಂದ್ರೀಕರಿಸುತ್ತಿದ್ದದ್ದು ಶೀಲವನ್ನು ಕಳೆದುಕೊಂಡಳು ಎಂಬ ವಿಷಯದ ಕುರಿತು. ಮಕ್ಕಳ ಸೈನ್ಯ ಸಿನಿಮಾದಲ್ಲಿ ನಾಯಕ ಮತ್ತು ನಾಯಕಿಗೆ ಅನೇಕ ಮಕ್ಕಳಿರುತ್ತಾರೆ. ಚಿತ್ರದಲ್ಲಿ ತೋರುವಂತೆ ಆತ ವಿಧುರ ಮತ್ತು ಆಕೆ ವಿಧವೆ. ಅವರಿಬ್ಬರೂ ಪ್ರೀತಿಸುತ್ತಾರೆ. ಅವರಿಬ್ಬರಿಗೂ ಇದ್ದ ಸಮಸ್ಯೆ ಮಕ್ಕಳ ಸಾಮರಸ್ಯ. ಅದೆಲ್ಲಾ ಸರಿ ಹೋಗುತ್ತದೆ. ಕೊನೆಗೆ ಅವರಿಬ್ಬರೂ ಮದುವೆಯಾಗುತ್ತಾರೆ.
ಆದರೆ, ಇಲ್ಲಿ ಶೀಲ ಅಶ್ಲೀಲದ ಅರಿಮೆ ತಲೆ ಎತ್ತುತ್ತದೆ. ನಾಯಕಿ ವಿಧವೆಯಾಗಿದ್ದರೆ ಮತ್ತು ಹಲವು ಮಕ್ಕಳ ತಾಯಿ ಎಂದರೆ ಹಿಂದಿನ ಗಂಡನ ಜೊತೆ ಮಲಗಿರುವಾಕೆ. ಈಗ ನಾಯಕನಿಗೆ ಆಕೆ ಕನ್ಯೆಯಲ್ಲ. ಹಾಗಾಗಿ ಕತೆಯಲ್ಲಿ ಒಂದು ಟ್ವಿಸ್ಟ್. ಏನೆಂದರೆ ಆ ಮಕ್ಕಳೆಲ್ಲಾ ಅವಳ ಮಕ್ಕಳಲ್ಲ. ಅವಳ ಅಕ್ಕನದು. ಅವಳು ಅಪಘಾತವೊಂದರಲ್ಲಿ ಸತ್ತಿರುತ್ತಾಳೆ. ಹೀಗೆ ನಾಯಕಿಯನ್ನು ಶೀಲವಂತೆಯಾಗಿ ಉಳಿಸಿದ್ದಾಯಿತು. ಒಂದೆರಡಲ್ಲ, ಇಂತಹ ಉದಾಹರಣೆಗಳು ಸಾಲುಸಾಲು. ಒಬ್ಬಳು ಅತ್ಯಾಚಾರಕ್ಕೆ ಒಳಗಾದರೆ ಅಥವಾ ಪ್ರೀತಿಸಿ, ಮಲಗಿ, ಗರ್ಭಧರಿಸಿದರೆ ಅವಳು ಕಡ್ಡಾಯವಾಗಿ ಕೆರೆನೋ ಬಾವಿಯನ್ನೋ ನೋಡಿಕೊಳ್ಳಲೇ ಬೇಕು.
ಮೊದಲೇ ಹೇಳಿದಂತೆ ಇದು ಸಿನಿಮಾದವರ ಸಮಸ್ಯೆಯಲ್ಲ. ಸಮಾಜದಲ್ಲಿ ವ್ಯಾಪಕವಾಗಿದ್ದಂತಹ ಮನಸ್ಥಿತಿಯನ್ನು ಅವರು ಗಟ್ಟಿಗೊಳಿಸುತ್ತಾರೆ. ಇಲ್ಲವಾದರೆ ಅವರ ಸಿನಿಮಾವನ್ನು ಜನ ತಿರಸ್ಕರಿಸುತ್ತಾರೆ. ಮುತ್ತು ಒಂದು ಮುತ್ತು ಎಂಬ ಸಿನಿಮಾ. ಎಂ ಕೆ ಇಂದಿರಾ ಅವರ ಕಾದಂಬರಿ ಆಧಾರಿತ. ಅನಂತನಾಗ್ ನಾಯಕ, ರೂಪಾ ಚಕ್ರವರ್ತಿ ನಾಯಕಿ. ಆ ಸಿನಿಮಾದಲ್ಲಿ ಒಳ್ಳೆಯ ಹಾಡುಗಳಿದ್ದವು, ನಾಯಕ ನಾಯಕಿ ಎಲ್ಲರೂ ಚೆನ್ನಾಗಿ ಅಭಿನಯಿಸಿದ್ದರು. ಆದರೆ ಸಿನಿಮಾ ಸೋತಿತು. ಏಕೆಂದರೆ, ನಾಯಕಿ ಒಬ್ಬಳು ಮೂಗಿ. ಅವಳು ಎಲ್ಲೋ ಬೆಳೆಯುತ್ತಿರುತ್ತಾಳೆ. ನಾಯಕ ನೋಡುತ್ತಾನೆ ಪ್ರೀತಿಸುತ್ತಾರೆ. ಮದುವೆಯಾಗಬೇಕೆಂದು ಬಯಸುತ್ತಾರೆ. ನಾಯಕಿಯ ತಾಯಿಯೂ ವಿರೋಧಿಸುತ್ತಾರೆ. ನಾಯಕನ ತಂದೆಯೂ ವಿರೋಧಿಸುತ್ತಾರೆ. ಕಾರಣ ಹೇಳಿರುವುದಿಲ್ಲ.
ನಾಯಕ ಮತ್ತು ನಾಯಕಿ ಎಲ್ಲರ ವಿರೋಧವನ್ನು ಮೀರಿ ದೇವಸ್ಥಾನದಲ್ಲಿ ಮದುವೆಯಾಗುವಾಗ ತಂದೆ ಓಡೋಡಿ ಬರುತ್ತಾನೆ. ಮದುವೆಯನ್ನು ನಿಲ್ಲಿಸಲು ಆದರೆ ಕೈಗೆ ಅಕ್ಷತೆ ಕೊಟ್ಟುಬಿಡುತ್ತಾರೆ. ಅವನು ಹಾಕಿಬಿಡುತ್ತಾನೆ.ಮದುವೆಯಾಗಿಬಿಡುತ್ತದೆ. ವಿಷಯ ತಿಳಿಯುತ್ತದೆ. ಏನೆಂದರೆ, ಅವರಿಬ್ಬರೂ ಒಂದೇ ತಂದೆಯ, ಆದರೆ ಬೇರೆ ಬೇರೆ ತಾಯಿಯ ಮಕ್ಕಳು. ಬೇರೆ ಬೇರೆ ಕಡೆ ಬೆಳೆದಿರುತ್ತಾರೆ. ಮಾನವ ಸಂಬಂಧದಲ್ಲಿ ನೋಡಿದರೆ ಅವರಿಬ್ಬರೂ ಅಣ್ಣ ತಂಗಿಯರಾಗಬೇಕು. ಸಿನಿಮಾ ಗೆಲ್ಲಲಿಲ್ಲ. ಸಿನಿಮಾ ಮಾತ್ರವಲ್ಲ. ಅದು ಬಹಳ ಜನಪ್ರಿಯ ಮತ್ತು ನೇರ ಮಾಧ್ಯಮವಾದ್ದರಿಂದ ಉದಾಹರಣೆಯಾಗಿ ತೆಗೆದುಕೊಂಡೆ. ಇತರ ಕಲೆಗಳು ಮತ್ತು ಜನಪದವೂ ಸೇರಿದಂತೆ ಇತರ ಸಾಹಿತ್ಯವೂ ಕೂಡಾ ಶೀಲ ಅಶ್ಲೀಲಗಳಲ್ಲಿ ಮಿಂದೆದ್ದಿವೆ.
ಶೀಲ ಅಶ್ಲೀಲ
ಶೀಲ ಅಶ್ಲೀಲದ ಅರಿಮೆ ಸಾಮಾನ್ಯವಾಗಿ ಗಂಡಸರಲ್ಲಿಯೇ ಕಾಣುವುದು. ಅಥವಾ ಅವರಿಂದಲೇ ಪ್ರಾರಂಭವಾಗಿರುವುದು. ಗಂಡಸರು ಹೆಣ್ಣನ್ನು ಒಂದೋ ಶೀಲವಂತೆ ಅಥವಾ ಪತಿವ್ರತೆಯಾಗಿಯೇ ನೋಡಲು ಇಷ್ಟಪಡುವರು. ಇವರಿಗೆ ತನ್ನ ಹೆಣ್ಣು ಯಾರೊಂದಿಗೂ ಹಾಸುಗೆಯನ್ನು ಹಂಚಿಕೊಂಡಿರುವುದನ್ನು ಕಲ್ಪಿಸಿಕೊಳ್ಳಲೇ ಸಾಧ್ಯವಿಲ್ಲ. ಮದುವೆಯಾಗುವಾಗ ತಾನು ಮದುವೆಯಾಗುವ ಹೆಣ್ಣಿನ ಕನ್ಯಾಪೆÇರೆ ಹರಿದಿರಬಾರದು ಎಂದು ಆಶಿಸುವವರು ಇವರಂತವರೇ. ಅವರ ಮನಸ್ಸಿನಲ್ಲಿ ಪರಿಶುದ್ಧವಾಗಿರುವ ಅಥವಾ ಶೀಲವಂತೆಯಾಗಿರುವ ಹೆಣ್ಣಿನ ಚಿತ್ರಣವಿರುತ್ತದೆ. ಆ ವರ್ತನೆಗಳನ್ನು ಪ್ರದರ್ಶಿಸಿದರೆ, ಅವರ ಮಾನದಂಡಗಳ ಪ್ರಕಾರ ನಡೆದುಕೊಂಡರೆ ಅವರಿಗೆ ಸಮಾಧಾನವಿರುತ್ತದೆ. ಅದರಲ್ಲಿ ಏನೇನೆಲ್ಲಾ ಇರಬಹುದು. ತನ್ನ ಹೆಂಡತಿ ಅಥವಾ ತಮ್ಮ ಮನೆಯ ಹೆಣ್ಣು ಮಕ್ಕಳು ಯಾವ ಗಂಡಸರ ಜೊತೆಗೆ ಕೈ ಕುಲುಕಬಾರದು, ಗಾಡಿಯಲ್ಲಿ ಹಿಂದೆ ಕುಳಿತುಕೊಂಡು ಹೋಗಬಾರದು, ನಗುನಗುತ್ತಾ ಗಂಡಸರ ಜೊತೆ ಮಾತಾಡಬಾರದು; ಇತ್ಯಾದಿಗಳೂ ಕೂಡ.
ಶೀಲ ಅಶ್ಲೀಲವನ್ನು ಇನ್ನೂ ಸ್ವಲ್ಪ ನಿಖರವಾಗಿ ಸುಶೀಲ ದುಶ್ಶೀಲವೆಂದೂ ಕರೆಯಬಹುದು.
ಸಾಮಾನ್ಯವಾಗಿ ಶೀಲಾಧಾರಿತ ನಿಬಂಧನೆಗಳು ಆ ವ್ಯಕ್ತಿಯ ಪ್ರಾದೇಶಿಕ ಸಂಸ್ಕೃತಿಯನ್ನು ಅಥವಾ ವ್ಯಕ್ತಿಯು ಬೆಳೆದುಬಂದಿರುವ ಸಮಾಜೋಧಾರ್ಮಿಕ ಸಂಸ್ಕೃತಿಯನ್ನೂ ಅವಲಂಬಿಸಿರಬಹುದು. ಶೀಲೆ ದುಶ್ಶೀಲೆಯ ಅರಿಮೆ ಇರುವಂತಹ ರಾಜಾಸ್ತಾನದ ಪುರುಷನಿಗೆ ತಲೆಯ ಮೇಲೆ ಸೆರಗಿಲ್ಲದೆ ಓಡಾಡುವ ಹೆಣ್ಣು ಮಗಳು, ಇದೇ ಬಗೆಯ ಕಾಂಪ್ಲೆಕ್ಸ್ ಇರುವ ಮುಸಲ್ಮಾನ ಪುರುಷನಿಗೆ ದೇಹದ ಉಬ್ಬುತಗ್ಗುಗಳು ಕಾಣುವಂತೆ ಬಟ್ಟೆ ಧರಿಸಿರುವ ಹೆಣ್ಣು ದುಶ್ಶೀಲೆಯಾಗಿ ಕಾಣಬಹುದು. ಹಿಂದೂ ಸನಾತನ ಸಂಪ್ರದಾಯಸ್ಥನಿಗೆ ಸ್ಕರ್ಟ್ ಹಾಕಿರುವ ಹೆಣ್ಣುಮಗು ದುಶ್ಶೀಲೆಯಾಗಿಯೂ, ಸೀರೆ ಉಟ್ಟು ಮೈತುಂಬಾ ಸೆರಗನ್ನು ಹೊದ್ದವಳು ಸುಶೀಲೆಯಾಗಿಯೂ ತೋರುವಳು.
ಹೀಗೆ ಅವರವರ ಧಾರ್ಮಿಕತೆ, ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆಗಳ ವಿನ್ಯಾಸಗಳೂ ಅವರ ಅರಿಮೆಗಳಲ್ಲಿ ಹೊಕ್ಕಿರುತ್ತವೆ. ಹಿಂದಿನ ಸಿನಿಮಾಗಳನ್ನು ನೆನಪಿಸಿಕೊಳ್ಳಿ. ಅವಳು ಶೀಲವಂತೆಯಾಗಿರಬೇಕೆಂದರೆ ಸೀರೆಯುಟ್ಟಿರಬೇಕು, ಮೈ ತುಂಬಾ ಸೆರಗು ಹೊದ್ದಿರಬೇಕು, ಹಣೆಯಲ್ಲಿ ಕುಂಕುಮವಿರಬೇಕು. ದೊಡ್ಡವರಿಗೆ ಗೌರವ ಕೊಡಬೇಕು. ಅವಳು ಖಂಡಿತ ದೈವಭಕ್ತೆಯಾಗಿರಬೇಕು. ಅವಳು ದುಶ್ಶೀಲೆಯಾಗಿದ್ದರೆ, ಪಾಶ್ಚಾತ್ಯ ಉಡುಪು ತೊಟ್ಟಿರುತ್ತಾಳೆ. ಹಣೆಯಲ್ಲಿ ಕುಂಕುಮವಿರುವುದಿಲ್ಲ. ಕೇರ್ ಫ್ರೀ ಆಗಿರುತ್ತಾಳೆ; ಇತ್ಯಾದಿ.
ಒಟ್ಟಾರೆ ಸುಶೀಲೆ ದುಶ್ಶೀಲೆಗಳ ಅರಿಮೆಯವರು ಹೆಣ್ಣನ್ನು ಯಾವಾಗಲೂ ವಿಪರೀತವಾದ ದೃಷ್ಟಿಕೋನಗಳಲ್ಲೇ ನೋಡುತ್ತಿರುತ್ತಾರೆ.ತಮ್ಮ ಸಂಪರ್ಕದ ಹೆಣ್ಣಿನ ಜೊತೆಗೆ ಯಾವುದೇ ರೀತಿಯ ಭಾವನಾತ್ಮಕ ಸಂಬಂಧ ಮತ್ತು ಲೈಂಗಿಕ ಸಂಬಂಧಗಳನ್ನು ಹೊಂದುವುದರಲ್ಲಿಯೂ ಈ ಅರಿಮೆ ಅವರನ್ನು ಬಹಳವಾಗಿ ಕಾಡುತ್ತಿರುತ್ತದೆ. ಈ ಅರಿಮೆಯಿಂದ ಬಳಲುತ್ತಿರುವವರ ವರ್ತನೆಯು ತಮ್ಮ ಹೆಣ್ಣುಗಳನ್ನು ಅನುಮಾಸ್ಪದವಾಗಿ ನೋಡುತ್ತಿರುವಂತೆಯೂ ಕಾಣುತ್ತದೆ. ಹೌದು ಕೂಡಾ. ಈ ಅರಿಮೆಯುಳ್ಳವರು ತಮ್ಮ ಹೆಣ್ಣು ಇನ್ನೊಬ್ಬ ಗಂಡಸರೊಂದಿಗೆ ಸಲುಗೆಯಿಂದ ವರ್ತಿಸಿದರೆ ಅವರು ಆ ಗಂಡಸನ್ನು ಬೈಯುವುದಿಲ್ಲ. ತಮ್ಮ ಹೆಂಗಸನ್ನೇ ಬೈಯುತ್ತಾರೆ, ಆಕ್ಷೇಪಿಸುತ್ತಾರೆ. ಹೆಣ್ಣಾದವಳು ಸರಿಯಾಗಿ ಇರಬೇಕು ಎಂದು. ತನ್ನ ಶೀಲವನ್ನು ಕಾಪಾಡಿಕೊಳ್ಳುವುದು ಅವಳದೇ ಹೊಣೆಗಾರಿಕೆ ಎಂದು ನಿರೀಕ್ಷಿಸುತ್ತಾನೆ.
ಶೀಲಪ್ರಮಾಣ
ಈ ಅರಿಮೆಯ ಗಂಡಸು ಸೌಂದರ್ಯವೋ ಅಥವಾ ಪ್ರತಿಭೆಯೋ ಅಥವಾ ಚಟುವಟಿಕೆಗಳೋ; ಯಾವುದೋ ರೀತಿಯಲ್ಲಿ ತನಗೆ ಆಕರ್ಷಕವಾದಂತಹ ಹೆಣ್ಣಿಗೆ ಮಾರು ಹೋಗುತ್ತಾನೆ. ಆದರೆ ಆ ಆಕರ್ಷಣೆ ಅವನಲ್ಲಿ ಬಹುಕಾಲ ನಿಲ್ಲದು. ಅವನು ಅವಳ ಸುಶೀಲ ಮತ್ತು ದುಶ್ಶೀಲಗಳ ಮಾನದಂಡದಲ್ಲಿಯೇ ಅಳೆಯಲು ಪ್ರಾರಂಭಿಸಿ ನಂತರ ಅವನಿಂದ ಗುಣಪ್ರಮಾಣಪತ್ರವನ್ನು ಪಡೆಯದಿದ್ದರೆ ಸಂಘರ್ಷ ಪ್ರಾರಂಭವಾಗುತ್ತದೆ.ಇದು ಗಂಡಸಿನ ಸಮಸ್ಯೆ ಎಂದು ನಿರಾಳವಾಗಲು ಆಗದು. ಈ ಅರಿಮೆ ಹೆಂಗಸರಲ್ಲಿಯೂ ಇರುತ್ತದೆ. ತಮ್ಮಂತದೇ ಹೆಣ್ಣು ಸುಶೀಲೆಯೋ ದುಶ್ಶೀಲೆಯೋ ಎಂದು ಆಲೋಚಿಸುತ್ತಿರುತ್ತಿರುತ್ತಾರೆ. ಅವರ ಮಾನದಂಡದ ಪ್ರಕಾರ ಇರದ ಹೆಣ್ಣು ಮಕ್ಕಳನ್ನು ತಿರಸ್ಕರಿಸುತ್ತಾರೆ. ನಿಂದಿಸುತ್ತಾರೆ. ಅನುಮಾನದಿಂದ ನೋಡುತ್ತಾರೆ. ಅಷ್ಟೆಲ್ಲಾ ಏಕೆ? ಹೆಂಗಸರನೇಕರು ಇತರ ಹೆಂಗಸರು ತುಂಡು ಬಟ್ಟೆಯನ್ನು ಧರಿಸುವುದು, ಅಥವಾ ಮೈ ಕಾಣುವಂತ ವಿನ್ಯಾಸವಿರುವ ವಸ್ತ್ರವನ್ನು ಧರಿಸುವುದನ್ನೂ ಕೂಡಾ ಸಹಿಸುವುದಿಲ್ಲ. ಅವರಿಗೆ ಅಂತವನ್ನು ಕಾಣುವುದು ತೀರಾ ಮುಜುಗರ.
ಆದ್ದರಿಂದಲೇ ವಸ್ತ್ರಸಂಹಿತೆಯನ್ನು ಸಂಸ್ಕೃತಿಯ ಅಥವಾ ಧಾರ್ಮಿಕತೆಯ ಭಾಗವನ್ನಾಗಿಸಿಕೊಂಡು ಅದನ್ನು ಎತ್ತಿ ಹಿಡಿಯುತ್ತಾ ತಮ್ಮ ತಿರಸ್ಕಾರವನ್ನು ವ್ಯಕ್ತಪಡಿಸುತ್ತಿರುತ್ತಾರೆ. ಈ ಅರಿಮೆಯ ಅಸಹನೆಯು ಯಾವ ಯಾವ ವಿಪರೀತಗಳನ್ನು ಮುಟ್ಟುವುದೋ ಹೇಳಲಾಗದು. ಈ ಅರಿಮೆಯಿಂದಲೇ ಅನೇಕಾನೇಕ ಬೈಗುಳಗಳು ಹೆಣ್ಣನ್ನು ಕೇಂದ್ರೀಕರಿಸಿರುವವು. ಇಂಗ್ಲೀಶಲ್ಲಿ ಬಿಚ್, ವೋರ್ ಇಂದ ಹಿಡಿದು ಕನ್ನಡದ ಸೂಳೆ, ಬೋಳಿಮಗನೇ, ಸೂಳೆಮುಂಡೆ, ಹಾದರಗಿತ್ತಿ, ಚಿನ್ನಾಲಿ, ಚಂಬೇಲಿ; ಇನ್ನೂ ಅನೇಕಾನೇಕ ಪದಗಳು ಹುಟ್ಟಿರುವವು.
ಒಟ್ಟಾರೆ ಸುಶೀಲ ದುಶ್ಶೀಲದ ಅರಿಮೆಯ ಬಲಿಪಶು ಹೆಣ್ಣು. ಅದು ಹೆಣ್ಣಿಗಿರಲಿ ಗಂಡಿಗಿರಲಿ. ಗಂಡು ತಪ್ಪು ಮಾಡಿದರೂ ಅವನನ್ನು ಬೈಯುವುದು ಹೆಣ್ಣಿನ ಮೂಲದಿಂದಲೇ. ಗಂಡಸರು ಜಗಳವಾಡುವಾಗಲೂ ಪರಸ್ಪರ ತಾಯಿ, ಹೆಂಡತಿ, ಸೋದರಿಯರನ್ನು ಲೈಂಗಿಕ ಸಂಬಂಧದ ಬೈಗುಳಗಳಲ್ಲಿ ಬಳಸಿಕೊಳ್ಳುವುದು ಈ ಅರಿಮೆಯ ಅಭಿವ್ಯಕ್ತಿಯೇ. ಎಷ್ಟೋ ಗಂಡಸರು ವಿಧವೆಯರ ಮತ್ತು ವಿಚ್ಛೇದಿತರ ವಿವಾಹಗಳನ್ನು ಪುರಸ್ಕರಿಸುತ್ತಾರೆ. ಬೆಂಬಲಿಸುತ್ತಾರೆ. ಆದರೆ ತಾವು ಮಾತ್ರ ಅಂತಹ ವಿವಾಹಗಳನ್ನು ಮಾಡಿಕೊಳ್ಳಲು ಬಯಸುವುದಿಲ್ಲ. ತಮ್ಮ ಹೆಣ್ಣು ಕನ್ಯೆಯೇ ಆಗಿರಬೇಕೆಂದು ಬಯಸುತ್ತಾರೆ. ತಮ್ಮ ಹೆಣ್ಣು ಬೇರೆ ಪುರುಷನೊಂದಿಗೆ ಮಲಗಿಕೊಂಡಿರುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ.
ಹಾಗೆಯೇ ಕೆಲವು ಕೆಟಗೆರಿ ಪುರುಷರು ತಮಗೆ ಯಾವುದೇ ಹೆಣ್ಣು ನಿರಾಯಾಸವಾಗಿ ತಮ್ಮ ಲೈಂಗಿಕ ವಾಂಛೆಗೆ ಬಳಕೆಯಾಗುವುದನ್ನು ಬಯಸುತ್ತಾರೆ ಮತ್ತು ಸುಖಿಸುತ್ತಾರೆ. ಆದರೆ, ತಮ್ಮ ಮನೆಯ ಹೆಣ್ಣುಮಕ್ಕಳು ಆ ರೀತಿಯಲ್ಲಿ ಎಲ್ಲಿ ಬಳಕೆಯಾಗಿಬಿಡುತ್ತಾರೋ ಎಂಬ ಅನುಮಾನ ಮತ್ತು ಭಯದಿಂದ ಅತಿಯಾದ ಗಮನವನ್ನು ಕೊಡುತ್ತಾರೆ. ಇದರಿಂದ ಅವರ ಮನೆಯ ಹೆಣ್ಣು ಮಕ್ಕಳಿಗೆ ಹಿಂಸೆಯಾಗುತ್ತಿರುತ್ತದೆ. ತಮ್ಮನ್ನು ಅನುಮಾನಿಸುತ್ತಾರೆ ಮತ್ತು ಅಪಮಾನಿಸುತ್ತಾರೆ ಎಂದು ಅನ್ನಿಸುತ್ತಿರುತ್ತದೆ. ಇದರಿಂದ ಸಂಬಂಧಗಳು ಸಡಿಲಗೊಳ್ಳುತ್ತವೆ ಹಾಗೂ ಹಳಸತೊಡಗುತ್ತವೆ.
ಆತ್ಮಾವಲೋಕನ ಮಾಡಿಕೊಂಡಾಗ ತಮ್ಮಲ್ಲಿ ಇಂತಹ ಅರಿಮೆಯನ್ನು ಕಂಡುಕೊಂಡರೆ ಎಚ್ಚೆತ್ತುಕೊಂಡು ಅದೊಂದು ತಮ್ಮಲ್ಲಿರುವ ಮಾನಸಿಕ ಸಮಸ್ಯೆ ಎಂದು ತಿಳಿದು ಪ್ರಜ್ಞಾವಂತಿಕೆಯಿಂದ ವರ್ತಿಸತೊಡಗಿದರೆ ಸಂಬಂಧಗಳು ಮೌಲ್ಯವನ್ನು ಪಡೆಯುತ್ತವೆ. ಇಲ್ಲದಿದ್ದರೆ ತಾವೂ ನೆಮ್ಮದಿಯಾಗಿರರು, ತಮ್ಮ ಸಂಗಾತಿಗಳನ್ನೂ ನೆಮ್ಮದಿಯಾಗಿರಲು ಬಿಡರು.ಮಡಿ ಮೈಲಿಗೆಯಂತಹ ವ್ಯಸನವೇ ಈ ಶೀಲ ಅಶ್ಲೀಲದ ಅರಿಮೆಯು. ಕರೋನ ವೈರಸ್ಸಿನ ಸಂದರ್ಭದಲ್ಲಿ ಸ್ವಾಮೀಜಿಗಳು ಸೇರಿದಂತೆ ಅನೇಕರು ಮಡಿ ಮೈಲಿಗೆಯನ್ನು ಸ್ವಚ್ಛತೆ ಶುದ್ಧತೆಯ ಕಾರಣಗಳಿಂದ ಸಮರ್ಥಿಸಿಕೊಳ್ಳಲು ಮುಂದಾದರು. ಅಂತೆಯೇ ಶೀಲ ಅಶ್ಲೀಲವನ್ನು ವ್ಯಕ್ತಿಗಳು ಪ್ರಾಮಾಣಿಕತೆ ಮತ್ತು ಬದ್ಧತೆಗೆ ಅನ್ವಯಿಸಿಕೊಳ್ಳಲು ಯತ್ನಿಸುತ್ತಾರೆ.
ಸತ್ಯಕಾಮ ಜಾಬಾಲಿ
ಛಾಂದೋಗ್ಯೋಪನಿಷತ್ತಿನಲ್ಲಿ ಗೌತಮ ಋಷಿಯ ಗುರುಕುಲಕ್ಕೆ ಸತ್ಯಕಾಮನೆಂಬ ಬಾಲಕ ಬರುತ್ತಾನೆ. ಅವನಿಗೆ ಅಲ್ಲಿ ಶಿಕ್ಷಣ ಪಡೆಯಬೇಕೆಂಬ ಬಯಕೆ. ವಾಡಿಕೆಯಂತೆ ನಿನ್ನ ತಂದೆ ಯಾರು? ನೀನು ಯಾವ ಗೋತ್ರದವನು? ಎಂದು ಗುರು ಪ್ರಶ್ನಿಸುತ್ತಾನೆ. ಬ್ರಾಹ್ಮಣರಿಗೆ ವಿದ್ಯಾಭ್ಯಾಸದ ಅರ್ಹತೆ ಎಂಬ ವ್ಯವಸ್ಥೆಯ ಕಾಲವದು. ಬಾಲಕ ಸತ್ಯಕಾಮನಿಗೆ ತಿಳಿದಿರುವುದಿಲ್ಲ. ತಾಯಿಯಾದ ಜಾಬಾಲಿಯನ್ನು ಕೇಳಿ ತಿಳಿದುಕೊಂಡು ಬಂದು ಉತ್ತರಿಸುತ್ತಾನೆ.
“ನನ್ನ ತಾಯಿ ದಾಸಿಯಾಗಿದ್ದಳು. ಹಲವರ ಬಳಿ ಸೇವೆ ಮಾಡುತ್ತಿದ್ದಳು. ಆಗ ಯಾರಿಗೋ ಹುಟ್ಟಿರುವ ಮಗ ನಾನು. ಹಾಗಾಗಿ ನನಗೆ ತಂದೆ ಯಾರೆಂದು ಗೊತ್ತಿಲ್ಲ. ನನಗೆ ಗೋತ್ರವಿಲ್ಲ. ನನ್ನ ತಾಯಿ ಜಬಾಲಿ. ನಾನು ಸತ್ಯಕಾಮ ಜಾಬಾಲಿ” ಎಂದು ಉತ್ತರಿಸುತ್ತಾನೆ.ಗೌತಮ ಶೀಲ ಅಶ್ಲೀಲಗಳ ಅರಿಮೆ ಇಲ್ಲದ ಅರಿವಿರುವವನು. “ಸತ್ಯವನ್ನು ನುಡಿವವನೇ ಬ್ರಾಹ್ಮಣ. ನೀನಿಲ್ಲಿ ವಿದ್ಯಾಭ್ಯಾಸ ಪಡೆಯಲು ಯೋಗ್ಯ” ಎಂದು ಅವನನ್ನು ಸ್ವೀಕರಿಸುತ್ತಾನೆ. ಬ್ರಾಹ್ಮಣ್ಯವನ್ನು ಜಾತಿಯ ಸಂಕೋಲೆಯಿಂದ ಬಿಡಿಸಿ ನೀತಿಯ ಮೌಲ್ಯ ನೀಡುತ್ತಾನೆ.
ಶೀಲ ಅಶ್ಲೀಲಗಳ ಅರಿಮೆಯನ್ನು ಮೀರಿವ ಪ್ರತಿಮೆಗಳು ಸತ್ಯಕಾಮ, ಜಬಾಲಿ ಮತ್ತು ಗೌತಮ. ತಾಯಿಗೆ ಶೀಲವನ್ನು ಮೀರಿದ ತನ್ನ ವಾಸ್ತವವನ್ನು ಒಪ್ಪಿಕೊಳ್ಳುವ ಅರಿವಿದೆ. ಮಗನಿಗೂ ತನ್ನ ಹುಟ್ಟಿನ ಪಾವಿತ್ರ್ಯತೆ ಬಗ್ಗೆ ಯಾವ ಅರಿಮೆ ಇಲ್ಲದೇ ತಾಯಿಯನ್ನು ತಾಯಂದಷ್ಟೇ ಸ್ವೀಕರಿಸುವ ಅರಿವಿದೆ. ಗುರುವಿಗೆ ಸಾಂಪ್ರದಾಯಕ ಅರಿಮೆಯನ್ನು ಮೀರಿ ವ್ಯಕ್ತಿಗತವಾದ ಧೈರ್ಯ ಮತ್ತು ಸತ್ಯವನ್ನು ಮನ್ನಿಸುವ ಅರಿವಿದೆ.
ಅರಿಮೆಗಳನ್ನು ಮೀರಲು ಅರಿವೊಂದು ಸಾಧನ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ21 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


