ಅಂತರಂಗ
ಅರಿಮೆಯ ಅರಿವಿರಲಿ-14 : ತನ್ನ ಬಣ್ಣಿಸಬೇಡ
- /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 27
https://suddidina.com/wp-content/uploads/2020/04/narcissism_suddidina_article.jpg&description=ಅರಿಮೆಯ ಅರಿವಿರಲಿ-14 : ತನ್ನ ಬಣ್ಣಿಸಬೇಡ', 'pinterestShare', 'width=750,height=350'); return false;" title="Pin This Post">
- Share
- Tweet /home/u584543641/domains/suddidina.com/public_html/wp-content/plugins/mvp-social-buttons/mvp-social-buttons.php on line 72
https://suddidina.com/wp-content/uploads/2020/04/narcissism_suddidina_article.jpg&description=ಅರಿಮೆಯ ಅರಿವಿರಲಿ-14 : ತನ್ನ ಬಣ್ಣಿಸಬೇಡ', 'pinterestShare', 'width=750,height=350'); return false;" title="Pin This Post">
- ಯೋಗೇಶ್ ಮಾಸ್ಟರ್
ಆತ್ಮರತಿಯ ಮತ್ತೊಂದು ಮುಖ್ಯ ಲಕ್ಷಣವೆಂದರೆ ತನ್ನ ಹೊಗಳಿಕೆಯ ಉನ್ಮತ್ತತೆಯಲ್ಲಿ ಮೈಮರೆಯುವುದು. ತನ್ನನ್ನು ಪ್ರದರ್ಶಿಸಿಕೊಳ್ಳುವ ಅಮಲಿನಲ್ಲಿ ಮತ್ತು ಬಣ್ಣಿಸಿಕೊಳ್ಳುವ ಮದದಲ್ಲಿ ಮೈಮರೆಯುವುದು. ಹೆಚ್ಚೆಚ್ಚು ಮಾಡಿಕೊಂಡಷ್ಟೂ ಹೆಚ್ಚೆಚ್ಚು ಮದ. ಯಾವ್ಯಾವ ಸಂದರ್ಭಗಳು ಒದಗುವುದೋ ಅದನ್ನೆಲ್ಲಾ ತನ್ನ ಬಣ್ಣನೆಗೆ ಬಳಸಿಕೊಳ್ಳುವುದು. ಅದಕ್ಕೆ ಖರ್ಚಾಗುವುದೋ? ಆಗಲಿ. ಒಟ್ಟಾರೆ ತನ್ನ ಬಣ್ಣನೆ ವರ್ಣನೆ ಪ್ರದರ್ಶನವಾಗಬೇಕು.
ದೇವಸ್ಥಾನಕ್ಕೆ ಫ್ಯಾನ್ ಹಾಕಿಸಿದರಾ? ಅದ್ಯಾವುದೋ ಆಶ್ರಮಕ್ಕೆ ಅಲಮಾರಿ ಕೊಟ್ಟರಾ? ಇನ್ಯಾವುದೋ ಗುಡಿಗೆ ಗಂಟೆ ದಾನವಿತ್ತರಾ? ಅದರ ಮೇಲೆಲ್ಲಾ ಅವರ ಹೆಸರಿರಬೇಕು. ಕೆಲವೊಮ್ಮೆ ಯಾರದೋ ಸ್ಮರಣೆಯಿಂದ ಕೊಡುತ್ತಿದ್ದು, ಅವರ ಹೆಸರೂ ಸೇರಿದಂತೆ ಕೊಟ್ಟವರ ಹೆಸರೂ, ಅವರ ಹೆಂಡರು ಮಕ್ಕಳ ಹೆಸರೂ ಉಲ್ಲೇಖಿತವಾಗಿರಬೇಕು. ಇದು ಆತ್ಮತೃಪ್ತಿಯ ವಿಷಯವಲ್ಲ. ಅರಿಮೆಯ ತೃಪ್ತಿ. ನಾರ್ಸಿಸಂ ಎಂಬ ಮಾನಸಿಕ ಸಮಸ್ಯೆಯು ಮನಸ್ಸಿಗೆ ಹಾತೊರೆಯುವಂತೆ ಮಾಡುವ ಬಯಕೆ. ಯಾವುದೇ ಅರಿಮೆಯನ್ನು ನಿವಾರಿಸಿಕೊಳ್ಳಲು ಮಾಡಬೇಕಾದ ಮೊದಲನೆಯ ಕೆಲಸವೆಂದರೆ, ಅದನ್ನು ತಮ್ಮಲ್ಲಿ ಗುರುತಿಸಿಕೊಳ್ಳುವುದು ಮತ್ತು ಅದು ಮತ್ತೆ ತಲೆ ಎತ್ತದಂತೆ ಬಹಳ ಎಚ್ಚರದಿಂದ ಕೆಲಸ ಮಾಡುವುದು. ಪ್ರಜ್ಞಾಪೂರ್ವಕವಾಗಿ ವರ್ತಿಸುವುದು.
“ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎನ್ನುವ ಬಸವಣ್ಣ ಆತ್ಮರತಿಯ ಅರಿಮೆಯನ್ನು ನಿವಾರಿಸಿಕೊಳ್ಳಲು ಅರಿವಿನ ದಾರಿ ತೋರುತ್ತಾರೆ. ತನ್ನನ್ನು ಬಣ್ಣಿಸಿಕೊಳ್ಳುವುದೊಂದು ವಿಧಾನವಾದರೆ, ಮತ್ತೊಬ್ಬರನ್ನು ಹಳಿಯುತ್ತಾ ತಾನೆಷ್ಟು ಉತ್ತಮನು ಎಂದು ಪ್ರದರ್ಶಿಸಿಕೊಳ್ಳುವುದು ಮತ್ತೊಂದು ವಿಧಾನ. ತನ್ನ ಬಣ್ಣಿಸಿಕೊಂಡು ಇದಿರಿರುವವರನ್ನು ಹಳಿಯುವುದಕ್ಕೆ ಮನೆಯಲ್ಲಿ ಮಕ್ಕಳಿಗೆ ಬಹಳಷ್ಟು ಪೋಷಕರೇ ಮಾದರಿಯಾಗುತ್ತಾರೆ.
ತಾವು ಸಣ್ಣವರಿದ್ದಾಗ ಅದೆಷ್ಟು ಕಷ್ಟಪಟ್ಟೆವು. ನಮಗೆ ಕೇಳಿದ್ದೆಲ್ಲಾ ಸಿಗುತ್ತಿರಲಿಲ್ಲ. ನಿಮಗೆ ಎಲ್ಲಾ ಸಿಗುತ್ತಿದೆ. ನಿಮಗೆ ಕಷ್ಟ ಅರ್ಥವಾಗಲ್ಲ. ನಾವು ಅಷ್ಟು ದೂರ ನಡೆದುಕೊಂಡು ಹೋಗುತ್ತಿದ್ದೆವು. ನಿಮಗೆ ಈಗ ವಾಹನ ಸೌಕರ್ಯವಿದೆ. ನಮಗೆ ಹೊಟ್ಟೆಗೆ ಸರಿಯಾಗಿ ದೊರಕುತ್ತಿರಲಿಲ್ಲ. ನಿಮಗೆ ಕೇಳಿದ್ದು ಕೇಳಿದ್ದೆಲ್ಲಾ ಸಿಗುತ್ತದೆ. ನಿಮಗೆ ಹೊಟ್ಟೆ ತುಂಬಾ ಸಿಗತ್ತಲ್ಲಾ ಅದಕ್ಕೇ ಕೊಬ್ಬು. ನಮಗೆ ಒಂದು ಪುಸ್ತಕ ಬೇಕಾದರೆ ಅದೆಷ್ಟು ಕಾಡಿಬೇಡಿ ಪಡೆಯಬೇಕಿತ್ತು. ನೀವು ಅದೆಷ್ಟು ವ್ಯರ್ಥ ಮಾಡುತ್ತೀರಿ. ಇಲ್ಲಿ ಪೋಷಕರು ತಮ್ಮನ್ನು ಬಣ್ಣಿಸಿಕೊಂಡು, ಮಕ್ಕಳನ್ನು ಹಳಿದುಕೊಂಡು ಮಾಡುತ್ತಿರುವುದೇನು? ಮಕ್ಕಳ ಮುಂದೆ ಪೋಷಕರ ಆತ್ಮರತಿಯ ಪ್ರದರ್ಶನ.
ಕಪಟತನ ಕದವಿಕ್ಕಿಕೊಳ್ಳದು
ಆತ್ಮರತಿಯ ವೇದಿಕೆ ಯಾವುದಾದರೂ ಆಗಬಹುದು. ದೇಗುಲ, ಅನಾಥಾಶ್ರಮ, ಸಾಮಾಜಿಕ ಸಂಸ್ಥೆಗಳು, ಆಧ್ಯಾತ್ಮಿಕ ಆಶ್ರಮಗಳು, ಧಾರ್ಮಿಕ ಕೇಂದ್ರಗಳು; ಹೀಗೆ.
ಆತ್ಮರತಿಯ ಈ ಅರಿಮೆಯ ಬಗ್ಗೆ ಎಚ್ಚರವಹಿಸಲು ಯೇಸು ನೀಡುವ ಎಚ್ಚರಿಕೆ ಬಹಳ ಸ್ಪಷ್ಟವಾಗಿದೆ.
“ನೀನು ದಾನಧರ್ಮ ಮಾಡುವಾಗ ತುತ್ತೂರಿ ಊದಿಸಬೇಡಿ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ.”
“ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು.”
ತಾನೆಷ್ಟು ಪರಮ ಭಕ್ತ ಎಂದು ಹೊರಗೆ ತೋರಿಸಿಕೊಳ್ಳುವುದು ಭಕ್ತಿಯಲ್ಲ ಆತ್ಮರತಿ ಎನ್ನುವುದು ಯೇಸುವಿನ ಧೋರಣೆ. ಈ ಅರಿಮೆಯನ್ನು ಗುರುತಿಸುತ್ತಾ ಮುಂದುವರಿಸುವ ಬಸವಣ್ಣ, ಮಾಡಿ ಕೆಟ್ಟರು ಮನವಿಲ್ಲದೆ. ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ” ಮಾಡುವ ಮತ್ತು ನೀಡುವುದು ಎರಡೂ ತನ್ನ ಆತ್ಮರತಿಯ ತೃಪ್ತಿಗೇ ಹೊರತು ಆತ್ಮತೃಪ್ತಿಗಲ್ಲ. ಮಾಡುವ ನೀಡುವ ನಿಜಗುಣವುಳ್ಳವನು ಡಂಗೂರವನ್ನು ಸಾರುವುದೇನೂ ಬೇಕಾಗಿಲ್ಲ ಎಂಬುದು ಬಸವಣ್ಣನವರ ಸ್ಪಷ್ಟತೆ.
ಯೇಸು ಹೇಳುವಂತೆ ಕಪಟತನವು ಕದವಿಕ್ಕಿಕೊಳ್ಳದು. ಹೊರಗೆ ಆಡಂಬರಕ್ಕೆ ತನ್ನ ಪ್ರದರ್ಶನ ಮಾಡಬೇಕು. ಅದು ದಾನವೋ, ಪ್ರಾರ್ಥನೆಯೋ, ಪೂಜೆಯೋ ಎಂತದ್ದೋ. ಈಗ ಕರೋನಾ ಲಾಕ್ ಡೌನ್ ಸಮಯದಲ್ಲಿಯೂ ಕೂಡಾ ಅದೆಷ್ಟು ಜನರು ತಮ್ಮ ಪಾಡಿಗೆ ತಾವು ಆಹಾರ ವಿತರಣೆ ಅಥವಾ ದೈನಂದಿನ ಜೀವನಕ್ಕೆ ಅಗತ್ಯವಿರುವುದರ ವಿತರಣೆಗಳನ್ನು ಉಚಿತವಾಗಿ ತಮ್ಮ ಸಾಮಾಜಿಕ ಕರ್ತವ್ಯದಂತೆ ಆತ್ಮತೃಪ್ತಿಗಾಗಿ ಮಾಡುತ್ತಿದ್ದಾರೆ. ಹಾಗೆಯೇ ಒಂದಿಷ್ಟು, ಒಂದು ದಿನ ಎಲ್ಲೋ ಒಂದಷ್ಟು ಮಾಡಿ ಅದರ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಂಡು ವರ್ಷವಿಡೀ ವಾಟ್ಸಪ್ ಮತ್ತು ಫೇಸ್ಬುಕ್ಕಿನಲ್ಲಿ ಎಲ್ಲರಿಗೂ ತೋರಿಸಿಕೊಂಡು ಪ್ರಶಂಸೆಯ ಹಸಿವಿಗೆ ಉಣಬಡಿಸಿಕೊಳ್ಳುತ್ತಿರುವುದೂ ಕೂಡಾ ಬೇಕಾದಷ್ಟಿದೆ.
ಕ್ರೂರ ಕರುಣೆ
ಕೆಲವರಿಗೆ ಅವರಾತ್ಮರತಿಯ ತೃಪ್ತಿಗೆ ಅನಾಥಾಶ್ರಮಗಳ ಅಥವಾ ವೃದ್ಧಾಶ್ರಮಗಳೂ ಕೂಡಾ ಆತ್ಮರತಿಯ ವೇದಿಕೆಗಳಾಗುತ್ತವೆ. ಮೊದಲನೆಯದಾಗಿ ಅದನ್ನು ಅನಾಥಾಶ್ರಮ ಎನ್ನುವುದೇ ಒಂದು ವ್ಯಂಗ್ಯ ಮತ್ತು ಕ್ರೂರ. ಆ ಗೂಡಿನಲ್ಲಿರುವವರನ್ನು ತಾವು “ಅನಾಥ ಅನಾಥ” ಎಂಬ ಪ್ರಜ್ಞೆಯನ್ನು ಸದಾ ಜಾಗೃತವಾಗಿಡುವ ಫಲಕಗಳು ಅವು. ಅಲ್ಲಿಗೆ ಹೋಗಿ ಸಮಾರಂಭದಂತೆ ಒಂದು ಕಾರ್ಯಕ್ರಮ ಮಾಡಿ, ವೇದಿಕೆಯ ಮೇಲೆ ದಾನಿಗಳನ್ನು ಇನ್ನಿಲ್ಲದಂತೆ ಹಾಡಿ ಹೊಗಳಿ, ಅವರು ಉಬ್ಬಿ, ಕೊಡುವ ಕೈ ಮೇಲೆ ಎಂಬ ಭಾವದಿಂದ ಮೈಮರೆತು, ತಮ್ಮ ಮುಂದೆ ಕುಳಿತಿರುವ ಅನಾಥರು, ವೃದ್ಧರು, ಮಕ್ಕಳು ತಾವು ಯಾರದೋ ಅಧೀನದಲ್ಲಿ, ಕೃಪೆಯಲ್ಲಿ ಬದುಕುತ್ತಿದ್ದೇವೆ ಎಂಬ ಕೀಳರಿಮೆಯಲ್ಲಿ ಮುಖಬಾಡಿಸಿಕೊಂಡು ಕುಳಿತಿದ್ದು ಯಾವ ಸಾರ್ಥಕ್ಯಕ್ಕೆ?
ಅನಾಥಾಲಯದಿಂದಲೋ, ಹೆಣ್ಣು ಮಕ್ಕಳಿರುವ ಸೇವಾಶ್ರಮದಿಂದಲೋ ಯಾರನ್ನಾದರೂ ಮದುವೆಯಾಗುವುದು ಇನ್ನೂ ದೊಡ್ಡ ತುತ್ತೂರಿ. ‘ಆ ಹೆಣ್ಣು ಮಗುವಿಗೆ ಬಾಳು ಕೊಡುತ್ತಿರುವ ತಾನೊಬ್ಬ ಬಹು ದೊಡ್ಡ ಉದಾರಿ’ ಎಂದು ಪತ್ರಿಕೆಯಲ್ಲಿ ಪ್ರಕಟಿಸಿಕೊಳ್ಳುವಷ್ಟು ಆತ್ಮರತಿ. ಯಾರು ಯಾರಿಗೆ ಬಾಳು ಕೊಡುವುದು? ವಿಧವೆ ಎಂದು ಕರೆಯುವುದೂ, ಅನಾಥರೆಂದೂ ಕರೆಯುವುದೂ ಕೂಡಾ ಒಂದು ಅಮಾನವೀಯವೇ ಆಗಿರುವಾಗ, ಅವರನ್ನು ಮದುವೆಯಾಗಿ ಬಾಳು ಕೊಡುತ್ತೇನೆ ಎಂದು ಘೋಷಿಸಿಕೊಳ್ಳುವುದು ಆ ಹೆಣ್ಣುಮಗುವನ್ನು ದೈನೇಸಿಯಾಗಿಯೇ ಇಡುವ ಬಗೆ. ಆತ್ಮರತಿಯ ಅರಿಮೆಯುಳ್ಳವರಿಗೆ ಇಂಥಾ ಕ್ರೂರ ಕಾರುಣ್ಯವು ಮತ್ತು ಪ್ರದರ್ಶಕ ಔದಾರ್ಯವು ಸಾಮಾನ್ಯ.
ವಿಧವೆಯ ಅಥವಾ ಯಾವುದೇ ಹೆಣ್ಣುಮಗುವಿನೊಂದಿಗಿನ ಮದುವೆ ಆ ಭಾವವೇ ಇಲ್ಲದೇ ಬರಿಯ ವ್ಯಕ್ತಿಗತವಾಗಿ ಆಪ್ತ ಸಂಗತಿಯಾಗಬಾರದೇ! ಕೆಲವರು ಕೊಡುವ ಕಾರಣವೇನೆಂದರೆ, ಇವು ಇತರರಿಗೆ ಪ್ರೇರಣೆಯಾಗುವುದು ಎಂದು. ಒಬ್ಬನ ಆತ್ಮರತಿಯು ಇನ್ನೊಬ್ಬನ ಆತ್ಮರತಿಯ ಪ್ರದರ್ಶನಕ್ಕೆ ದಾರಿಯಾಗುವುದು ಅಷ್ಟೇ. ಏಕೆಂದರೆ, ಪ್ರಾಮಾಣಿಕ ಮನಸ್ಸುಳ್ಳವನಿಗೆ ಈ ಪ್ರೇರಣೆಗಳೇನೂ ಬೇಕಾಗಿಲ್ಲ. ಆತನ ಆತ್ಮಸಾಕ್ಷಿ ಮತ್ತು ಸ್ವಪ್ರೇರಣೆಯೇ ಸಾಕಾಗಿರುತ್ತದೆ.
ಸಾಮೂಹಿಕ ರತಿಕ್ರೀಡೆ
ಎಷ್ಟೋ ಬಾರಿ ನಮ್ಮ ದೇಶದಲ್ಲಿಯೂ ಸೇರಿದಂತೆ ವಿವಿಧ ಸಮಾಜಗಳಲ್ಲಿ ಯಾವುದಕ್ಕೆ ನಾಚಿಕೊಳ್ಳಬೇಕೋ ಅದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಯಾವುದಕ್ಕೆ ಹೆಮ್ಮೆಪಟ್ಟುಕೊಳ್ಳಬೇಕೋ ಅದಕ್ಕೆ ನಾಚಿಕೊಳ್ಳುತ್ತಾರೆ.
ಸಮೂಹ ಆತ್ಮರತಿ ಅಥವಾ (Collective narcissism or group narcissism)
ಅಂತ ಒಂದಿದೆ. ಅದರದೇನಪ್ಪಾ ಲಕ್ಷಣ ಅಂದರೆ, ವ್ಯಕ್ತಿಗತವಾದ ಆತ್ಮರತಿಯು ಸಮುದಾಯ ಗುರುತಿನಲ್ಲಿ ಅಥವಾ ಸಂಕಲಿತವಾಗಿರುವ ವಿಷಯದಲ್ಲಿ ವಿಲೀನಗೊಳಿಸಿಕೊಂಡಿರುವುದು. ಆ ಸಮುದಾಯವನ್ನು ಅಥವ ಸಮೂಹವನ್ನು ಅಥವಾ ಸಂಸ್ಥೆಯನ್ನು ಯಾರಾದರೂ ಏನಾದರೂ ನಕಾರಾತ್ಮಕವಾಗಿ ಅಂದರೆ ವೈಯಕ್ತಿಕವಾಗಿ ತನಗೇ ಏನಾದರೂ ಆದಂತೆ ಭಾಸವಾಗುವುದು.
ಅದೇ ರೀತಿಯಲ್ಲಿ ತಾನು ಆ ಸಮೂಹದವನು ಎಂದು ಹೆಮ್ಮೆ ಪಡುವುದು. ಅದೇ ರೀತಿಯಲ್ಲಿ ಅದಕ್ಕೇನಾದರೂ ಪ್ರಶಂಸೆಯು ದೊರಕಿದರೆ ವಿಪರೀತವಾಗಿ ತಾನು ಹೆಮ್ಮೆ ಪಡುವುದು. ಇದು ಹಲವು ವೇಷಗಳನ್ನು ಹಾಕಿಕೊಂಡು ಬರುತ್ತದೆ. ಧರ್ಮ, ಸಂಸ್ಕೃತಿ, ಜಾತಿ, ಸಂಘ, ಸಂಸ್ಥೆ; ಹೀಗೆ. ಧಾರ್ಮಿಕತೆಯ ಸಂಘರ್ಷವೇ ಬಹಳ ಪ್ರಧಾನ ಕಿರುಕುಳವಾಗಿರುವ ಈ ಸಮಯದಲ್ಲಿ ಧಾರ್ಮಿಕ ಸಮುದಾಯಗಳ ವಿಚಾರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.
ನಾನು ಇಂತಹ ಧರ್ಮದಲ್ಲಿ ಗುರುತಿಸಿಕೊಂಡೆನೆಂದರೆ, ಆ ಧರ್ಮವು ಅತ್ಯಂತ ಶ್ರೇಷ್ಟವೆಂದೂ, ಅದರಲ್ಲಿ ಯಾವುದೇ ಬಗೆಯ ನ್ಯೂನ್ಯತೆಗಳಿರುವುದಿಲ್ಲವೆಂದೂ, ಅದರ ವಿಚಾರಗಳೇ ಅಂತಿಮವೆಂದೂ, ಅದನ್ನು ವಿರೋಧಿಸುವವರು ಅಥವಾ ವಿಮರ್ಶಿಸುವವರು ನಮ್ಮ ಶತ್ರುಗಳೆಂದು ಭಾವಿಸುವುದು ಸಮೂಹರತಿಯ ಅರಿಮೆಯ ವ್ಯಾಪ್ತಿಗೆ ಒಳಗಾಗುತ್ತದೆ.
ಎಷ್ಟೋ ಬಾರಿ ಆ ಧರ್ಮವು ತಾನು ಹುಟ್ಟಿದ ಸಂದರ್ಭದ ಸಾಮಾಜಿಕ ವ್ಯವಸ್ಥೆಗೆ ಮತ್ತು ಆಗಿನ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ತನ್ನ ರೂಪುರೇಷೆಗಳನ್ನು ತೀರ್ಮಾನಿಸಿಕೊಂಡಿರುತ್ತದೆ. ಹಿಂದೂ ಧರ್ಮದ ಹೊರತಾಗಿ ವಿಶ್ವದ ಇತರ ಸ್ಥಾಪಿತ ಧರ್ಮಗಳೆಲ್ಲವೂ ಕೂಡಾ ಸಮಾಜೋಧಾರ್ಮಿಕದ ಆಂದೋಲನದ ಪ್ರತಿಫಲಗಳೇ ಆಗಿವೆ. ಹಾಗಾಗಿ ಅವುಗಳನ್ನು ಈ ಕಾಲ ಘಟ್ಟದಲ್ಲಿ ನಿಲುಕಿಸಿಕೊಳ್ಳುವಾಗ ಕೆಲವು ಅಭಿಪ್ರಾಯ ಬೇಧಗಳು ಮತ್ತು ತಾಂತ್ರಿಕ ವ್ಯತ್ಯಾಸಗಳು ಬಹಳ ಸಹಜವಾಗಿರುತ್ತವೆ.
ಇನ್ನು ಹಿಂದೂ ಧರ್ಮವು ವಿಶಾಲ ಭೌಗೋಳಿಕ ಪರಿಸರದಲ್ಲಿ ವಿಕಾಸವಾದ ಜೀವನ ಪದ್ಧತಿಯೇ ಹೊರತು ಯಾವುದೊಂದು ಉದ್ದೇಶದ ಹಿನ್ನೆಲೆಯಲ್ಲಿ ಸ್ಥಾಪಿತವಾದದ್ದೇ ಅಲ್ಲ. ಇಲ್ಲೇ ಸಮಸ್ಯೆ ಇರುವುದು. ವ್ಯಕ್ತಿಗತವಾಗಿ ಸಂಮೋಹಿತಗೊಂಡು ವ್ಯಕ್ತಿಗಳು ಆಯಾ ಧಾರ್ಮಿಕತೆಯಲ್ಲಿ ಮೈಮರೆಯುವುದರಿಂದ ಧರ್ಮವು ದಾರಿಯಾಗದೇ ಗುರಿಯಾಗಿ ಪರಿಣಮಿಸಿ ಒಂದು ಅರಿಮೆಯಾಗಿ ಪರಿಣಮಿಸುತ್ತದೆ.
ತನ್ನ ಧರ್ಮವೇ ಅಂತಿಮವೆಂದೂ, ಶ್ರೇಷ್ಟವೆಂದೂ ಎತ್ತಿ ಹಿಡಿಯಲು ಎಲ್ಲಾ ಧರ್ಮಿಯರೂ ಹೋರಾಡುವಾಗ ಸಂಘರ್ಷಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೇ ನಿನ್ನ ಧರ್ಮವು ನನ್ನ ಧರ್ಮಕ್ಕಿಂತ ಕನಿಷ್ಟ ಎಂದು ನಿರೂಪಿಸಲು ತನ್ನ ವಿರೋಧಿ ಧರ್ಮವೆಂದು ಯಾವುದನ್ನು ಭಾವಿಸಿರುತ್ತಾರೋ ಅದರ ಹುಳುಕುಗಳನ್ನು ಎತ್ತಿ ಹಿಡಿಯುವುದು, ಆಯಾ ಧಾರ್ಮಿಕ ವ್ಯಕ್ತಿಗಳ ತೇಜೋವಧೆ ಮಾಡಲು ಯತ್ನಿಸುವುದು, ಆ ಮೂಲಕ ವಿರೋಧಿಗಳನ್ನು ಕೆರಳಿಸುವುದು ಇತ್ಯಾದಿಗಳಾಗುತ್ತವೆ. ಇದರಿಂದ ಸಾಂಪ್ರದಾಯಿಕ ವಿರೋಧಿಗಳು ರೂಪುಗೊಳ್ಳುತ್ತವೆ.
ಆಗ ರಾಜಕೀಯ, ಸಾಮಾಜಿಕ ಸ್ಥಾನಮಾನವೇ ಮೊದಲಾಗಿ ಸಾಂಸ್ಕೃತಿಕ ಅಸಹನೆಗಳೂ ಉಂಟಾಗಿ ಸಾಮಾಜಿಕ ಸಂಘರ್ಷಗಳು ಉಂಟಾಗಿ ಜೀವಗಳು ಮೌಲ್ಯರಹಿತವಾಗುತ್ತವೆ.ಆಗ ನಡೆದ ಕ್ರೈಸ್ತರ ಮತ್ತು ಮುಸಲ್ಮಾರದ ಕ್ರುಸೇಡ್ ಯುದ್ಧಗಳು, ಇಸ್ರೇಲ್ ಮತ್ತು ಪ್ಯಾಲೆಸ್ತಿನನಲ್ಲಿ ಮುಸಲ್ಮಾನರ ಮತ್ತು ಯಹೂದಿಗಳ ಸಂಘರ್ಷ, ಪ್ರಾಚೀನ ಭಾರತದಲ್ಲಿ ವೈದಿಕರ ಮತ್ತು ಬೌದ್ಧಾನುಯಾಯಿಗಳ ಸಂಘರ್ಷ, ಪ್ರಸ್ತುತ ಭಾರತದಲ್ಲಿ ಹಿಂದೂ ಮುಸ್ಲೀಮರ ಸಂಘರ್ಷಗಳು, ಆರ್ಯ ರಕ್ತೋನ್ಮಾದದಲ್ಲಿ ಯಹೂದಿಗಳ ಮೇಲೆ ನಾಜಿಗಳ ದ್ವೇಷ, ರೊಹಿಂಗ್ಯಾದಲ್ಲಿ ಮುಸಲ್ಮಾನರ ಮೇಲೆ ಬೌದ್ಧರ ಆಕ್ರಮಣ, ತಮಿಳುನಾಡಿನಲ್ಲಿ ಶೈವ ಮತ್ತು ವೈಷ್ಣವ ಸಂಘರ್ಷ, ಪ್ರಾಚೀನ ಕರ್ನಾಟಕದಲ್ಲಿ ಜೈನ ಮತ್ತು ಶೈವರ ಸಂಘರ್ಷ; ಹೀಗೆ ಒಂದೆರಡು ಉದಾಹರಣೆಗಳಲ್ಲ.
ತಮ್ಮ ಶ್ರೇಷ್ಟತೆಯು ತಮ್ಮ ವಿರೋಧಿಗಳ ದ್ವೇಷದ ಆಧಾರದ ಮೇಲೆಯೇ ಅವಲಂಬಿತವಾಗಿರುವುದು ಸಮೂಹ ರತಿಯ ಪರಮಾವಧಿ. ಪರಸ್ಪರ ವ್ಯಕ್ತಿಗತ ಪರಿಚಯವೇ ಇಲ್ಲದವರು, ಪರಸ್ಪರ ಯಾವುದೇ ದ್ವೇಷ ಮತ್ತು ಸಂಘರ್ಷಗಳು ಇರದಿದ್ದರೂ ಸಮುದಾಯ, ಮತ, ಧರ್ಮ, ಸಂಸ್ಕೃತಿ, ಬುಡಕಟ್ಟು ಮತ್ತು ಜನಾಂಗಗಳು ಎಂಬ ಕಾರಣಕ್ಕಾಗಿ ವಿರೋಧಿಸುವುದು ಮತ್ತು ದಾಳಿಗಳನ್ನು ಮಾಡುವುದು ಸಮುದಾಯದಲ್ಲಿ ಉಲ್ಬಣಗೊಂಡಿರುವ ಮನೋರೋಗದ ಲಕ್ಷಣ. ನೆಮ್ಮದಿಯ ಜೀವನಕ್ಕೆ, ಬದುಕಿನ ವ್ಯವಹಾರಕ್ಕೆ ಬೇಡದೇ ಇರುವುದೆಲ್ಲವೂ ದ್ವೇಷಿಸುವುದಕ್ಕೆ ಕಾರಣವಾಗಿ ಪರಿಣಮಿಸುತ್ತದೆ.
ವ್ಯಕ್ತಿಗತವಾದಂತಹ ದೌರ್ಬಲ್ಯವನ್ನು, ಅಪರಾಧಗಳನ್ನು ಸಮುದಾಯದ ತಲೆಗೆ ಕಟ್ಟಿ ದ್ವೇಷಿಸುವಂತಹ ಮನಸ್ಥಿತಿ ಬೆಳೆದಿರುತ್ತದೆ. ಯಾರಾದರೊಬ್ಬ ಮುಸಲ್ಮಾನ ಕ್ಯಾಬ್ ಡ್ರೈವರ್ ನಿಮ್ಮೊಡನೆ ಸರಿಯಾಗಿ ಚಿಲ್ಲರೆ ಕೊಡದೇ ಹೊರಟುಹೋದಾಗ ಮುಸಲ್ಮಾನರೇ ಹೀಗೆ ಮೋಸಗಾರರು ಎಂಬ ಮಾತು ಮೊದಲು ಹೊರಟರೆ, ಅಥವಾ ಬ್ರಾಹ್ಮಣ ಪತ್ರಕರ್ತನೊಬ್ಬ ತನ್ನ ಶ್ರೇಷ್ಟತೆಯ ವ್ಯಸನವನ್ನು ಪತ್ರಿಕೆಯಲ್ಲಿಯೋ ಅಥವಾ ಮಾಧ್ಯಮಗಳಲ್ಲಿಯೋ ಕಾರಿಕೊಂಡಾಗ ಬ್ರಾಹ್ಮಣರೆಲ್ಲರೂ ಹೀಗೇ ಎಂದು ಅಭಿಪ್ರಾಯಕ್ಕೆ ಬಂದರೆ ಅಲ್ಲಿಗೆ ಸಮೂಹ ಆತ್ಮರತಿಯ ಅರಿಮೆಯಲ್ಲಿ ಸಿಕ್ಕಿದ್ದೇವೆಂದು ಅರ್ಥ.
ವ್ಯಕ್ತಿಗಳೇ ಇಂತಹ
ಮನೋರೋಗಗಳಲ್ಲಿರುವವರು. ಅವರು ಯಾವ ಜಾತಿಯಲ್ಲಿದ್ದರೂ, ಧರ್ಮದಲ್ಲಿದ್ದರೂ ಅವುಗಳ ಲಾಂಛನದಡಿಯಲ್ಲಿ ತಮ್ಮ ಅರಿಮೆಗಳ ಪ್ರದರ್ಶನ ಮಾಡುತ್ತಿರುತ್ತಾರೆ. ಅವನು ಮುಸಲ್ಮಾನನಾಗಿದ್ದರೆ ಇಸ್ಲಾಂ ಶ್ರೇಷ್ಟತೆಯ ಗೀಳು, ಹಿಂದೂ ಆಗಿದ್ದರೆ ಹಿಂದೂ ಶ್ರೇಷ್ಟತೆಯ ಗೀಳು ಅಷ್ಟೇ. ಈ ಗೀಳಿನ ಅಥವಾ ವ್ಯಸನದ, ಅರಿಮೆಯ ಸಮಸ್ಯೆ ಧರ್ಮಗಳದ್ದೋ, ಸಂಸ್ಕೃತಿಗಳದ್ದೋ ಅಲ್ಲ. ವ್ಯಕ್ತಿಗಳದ್ದು. ಅವನಿಗಿರುವ ಸಮಸ್ಯೆ Collective narcissism or group narcissism. ಆದರೆ ಎಡವಟ್ಟಾಗುವುದು ಎಲ್ಲಿ ಗೊತ್ತೇ? ಸಮಾನ ಮನಸ್ಕರು ಸಮೂಹಗಳನ್ನು ಮಾಡಿಕೊಂಡು ಅವರ ಅಭಿರುಚಿ, ಆಸಕ್ತಿ ಇತ್ಯಾದಿಗಳನ್ನು ಗಟ್ಟಿಗೊಳಿಸಿಕೊಳ್ಳುವಂತೆ, ಈ ಸಮೂಹ ರತಿಯ ಅರಿಮೆಯ ಮನಸ್ಥಿತಿಯವರೂ ಕೂಡಾ ಆಯಾ ಜಾತಿ, ಧರ್ಮ ಇತ್ಯಾದಿಗಳ ಲಾಂಛನಗಳಲ್ಲಿ ಶ್ರೇಷ್ಟತೆಯ ವ್ಯಸನವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುತ್ತಾರೆ.
ಅದರ ಜಾಲದಲ್ಲಿ ಸಿಕ್ಕವರೆಲ್ಲರೂ ಮತ್ತೆ ಮತ್ತೆ ತಮ್ಮ ಧರ್ಮಾಂಧತೆಗೆ ಅಥವಾ ಜಾತಿವಾದಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾ ಹೋಗುತ್ತಾರೆ. ಭಾರತದಲ್ಲಿ ಜಾತಿಯ ವಿಷಯದಲ್ಲಿಯೂ ಈ ಸಾಮುದಾಯಿಕ ಮಾನಸಿಕ ಸಮಸ್ಯೆ ಬಹಳ ಗಾಢವಾಗಿದೆ. ಯಾವುದೇ ವ್ಯಕ್ತಿಯು ತನ್ನ ಜಾತಿಯ ಹೆಸರನ್ನು ತನ್ನ ಹೆಸರಿನ ಜೊತೆಗೆ ಹೆಮ್ಮೆಯಿಂದ ತಗುಲಿಹಾಕಿಕೊಳ್ಳುವನೋ, ಅಥವಾ ಅಪ್ರಾಯೋಗಿಕವಾಗಿದ್ದರೂ, ಅವೈಚಾರಿಕವಾಗಿದ್ದರೂ, ಅವೈಜ್ಞಾನಿಕವಾಗಿದ್ದರೂ, ಅಪ್ರಸ್ತುತವಾಗಿದ್ದರೂ ಜಾತಿಯ ಆಚರಣೆಗಳನ್ನು ಜೀವಂತವಾಗಿ ಇಡಲೇಬೇಕು ಎಂದು ಪ್ರಯತ್ನಿಸುತ್ತಾ, ಸಾಮಾಜಿಕ ಮತ್ತು ವೈಯಕ್ತಿಕವಾದ ಮಾನಸ ಸಂಬಂಧಗಳನ್ನು ಕಡೆಗಣಿಸುತ್ತಾನೆಂದರೆ ಅವನಿಗೆ ಈ ಮನೋರೋಗವಿದೆ ಎಂದೇ ಅರ್ಥ.
ಇದೇ ರೀತಿಯಲ್ಲಿ ಸಂಸ್ಕೃತಿಯಲ್ಲಿ ಉನ್ಮತ್ತತೆಯಿಂದ ಗುರುತಿಸಿಕೊಳ್ಳುವಂತಹ ಅರಿಮೆಯೂ ಕೂಡಾ ಇದರ ಒಂದು ಭಾಗವಾಗಿದೆ. ಗಮನಿಸಿ, ಇಂತವರೆಲ್ಲಾ ಒಟ್ಟೊಟ್ಟಿಗೆ ಗುಂಪುಗೂಡಿಕೊಂಡು ನಮ್ಮದೇ ಶ್ರೇಷ್ಟ, ಮತ್ತೊಬ್ಬರದು ಕನಿಷ್ಟ, ನಾವು ಏನಾದರೂ ನಮ್ಮದನ್ನು ಬಿಡಬಾರದು. ಹೀಗೆಲ್ಲಾ ಮಾತಾಡಿಕೊಂಡು ಸಂತೋಷಪಡುವುದು ಸಾಮೂಹಿಕ ರತಿಕ್ರೀಡೆಯಂತೆ.
ಜಗತ್ತಿನಲ್ಲಿಯೇ ನಮ್ಮಷ್ಟು ಶ್ರೇಷ್ಟ ಸಂಸ್ಕೃತಿ ಯಾವುದೂ ಇಲ್ಲ, ನಮ್ಮದೇ ಅತ್ಯಂತ ಪುರಾತನ, ನಮ್ಮದೇ ಈಗಲೂ ಪ್ರಸ್ತುತ, ಇತರ ಎಲ್ಲಾ ಸಂಸ್ಕೃತಿಗಳ ನಮ್ಮದಕ್ಕಿಂತ ಕೀಳು; ಈ ಬಗೆಯ ವ್ಯಸನವು ಅಥವಾ ಶ್ರೇಷ್ಟತೆಯ ಗೀಳು ಕೂಡಾ ಈ ಕಾಂಪ್ಲೆಂಕ್ಸ್ನ ಒಂದು ಭಾಗವಾಗಿದೆ.
ಒಳಕುದಿ
ಹಾಗಾದರೆ ನಮ್ಮದರ ಬಗ್ಗೆ ನಮಗೆ ಹೆಮ್ಮೆ, ಅಭಿಮಾನ ಬೇಡವೇ? ಬೇಕು. ಅದು ಆರೋಗ್ಯಕರವಾಗಿರುವುದು ಯಾವಾಗೆಂದರೆ, ನಮ್ಮಂತದ್ದೇ ಹಲವು ಸಂಸ್ಕೃತಿಗಳು, ಧರ್ಮಗಳು ಜಗತ್ತಿನಲ್ಲಿ ಅಸ್ತಿತ್ವದಲ್ಲಿವೆ. ಅವುಗಳಿಗೆ ಅವುಗಳದೇ ಆದಂತಹ ಮೌಲ್ಯವಿದೆ. ನಾವು ಅನುಸರಿಸುತ್ತಿರುವಂತೆ ಅವುಗಳನ್ನು ಕೂಡಾ ನಮ್ಮಂತಹ ಜೀವಿಗಳೇ ಅನುಸರಿಸುತ್ತಿದ್ದಾರೆ. ನಮ್ಮದು ಮತ್ತು ಅವರದರಲ್ಲಿ ಕೂಡುವಿಕೆಯ ಅಂಶಗಳಾವುವು? ಭಿನ್ನವಿರುವ ಅಂಶಗಳಾವುವು; ಇತ್ಯಾದಿಗಳೆಲ್ಲಾ ನಮ್ಮ ಅಧ್ಯಯನದ ಅಥವಾ ಅರಿವಿನ ವಿಷಯಗಳಾಗಿ ಒದಗಿದರೆ ಆರೋಗ್ಯಕರವಾದ ಸಾಂಸ್ಕೃತಿಕ ಅಥವಾ ಧಾರ್ಮಿಕವಾದ ವಾತಾವರಣವು ಸಮಾಜದಲ್ಲಿ ಉಂಟಾಗುತ್ತದೆ.
ನಮ್ಮ ಸಂಸ್ಕೃತಿ ಅಥವಾ ಧರ್ಮದ ಮಾನ್ಯತೆಯು ಅಥವಾ ಶ್ರೇಷ್ಟತೆಯು ಮತ್ತೊಂದು ಯಾವುದೋ ಒಂದರ ಜೊತೆಗಿನ ಪೈಪೋಟಿಯಂತಾಗಿರಬಾರದು. ಅಥವಾ ಅದನ್ನು ದ್ವೇಷಿಸುವ ಮಾನದಂಡದಲ್ಲಿ ನಮ್ಮದರ ಶ್ರೇಷ್ಟತನವು ತಲೆಯೆತ್ತುವಂತಹ ಮನಸ್ಥಿತಿಯು ಇರಕೂಡದು. ಅಷ್ಟೇ!
ಒಟ್ಟಾರೆ ವ್ಯಕ್ತಿವ್ಯಕ್ತಿಯ ಮನಸ್ಥಿತಿಗಳು ಆರೋಗ್ಯದಿಂದಿದ್ದರೆ ಸಮಾಜವು ಆರೋಗ್ಯವಾಗಿರುತ್ತದೆ. ಏಕೆಂದರೆ ವ್ಯಕ್ತಿವ್ಯಕ್ತಿಗಳಿಂದ ಕುಟುಂಬ, ಕುಟುಂಬಗಳಿಂದ ಸಮಾಜ.
ಇತರ ಧರ್ಮೀಯರನ್ನು, ಸಂಸ್ಕೃತಿ, ಆಚಾರ ವಿಚಾರಗಳನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುವಂತಹ ಮನಸ್ಥಿತಿಯೂ ಕೂಡಾ ಆರೋಗ್ಯಕರವೇನಲ್ಲ. ಏಕೆಂದರೆ ಇದು ಒಳ ಕುದಿಯಾಗಿರುತ್ತದೆ. ಈ ಒಳಕುದಿ ಸ್ವೀಕರಿಸಿರುವುದಿಲ್ಲ. ಸಹಿಸಿಕೊಂಡಿರುತ್ತದೆ ಅಷ್ಟೇ. ಯಾವಾಗ ಅವರ ಸಹನಾ ಶಕ್ತಿ ಬಲ ಕಳೆದುಕೊಳ್ಳುತ್ತದೆಯೋ ಆಗ ಸ್ಫೋಟಗೊಳ್ಳುತ್ತದೆ. ಸಮಾಜದ ಧರ್ಮಗಳಲ್ಲಿ, ಸಂಸ್ಕೃತಿಗಳಲ್ಲಿ ಮಾತ್ರವಲ್ಲ ಸಹಿಸಿಕೊಂಡಿರುವ ಈ ಒಳಕುದಿಯ ಸಂಘರ್ಷ. ಮನೆಗಳಲ್ಲಿಯೂ ಕೂಡಾ. ಗಂಡ ಹೆಂಡತಿಯನ್ನು ಅಥವಾ ಹೆಂಡತಿ ಗಂಡನನ್ನು, ಮಕ್ಕಳು ಪೋಷಕರನ್ನು, ಪೋಷಕರು ಮಕ್ಕಳನ್ನು ಮತ್ತು ಇತರ ಸದಸ್ಯರನ್ನು ಅವರವರ ಸ್ವಭಾವ, ಅಭಿರುಚಿ, ವ್ಯಕ್ತಿತ್ವದಂತೆ ಸ್ವೀಕರಿಸಿರುವುದಿಲ್ಲ. ಹೇಗೋ ಸಹಿಸಿಕೊಂಡಿರುತ್ತಾರೆ.
ಸಹಿಸಿಕೊಳ್ಳುವುದಕ್ಕೂ ಸ್ವೀಕರಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಸಹಿಸಿಕೊಳ್ಳುವುದು ಎಂದರೆ ಅಸಹನೆ ಇದೆ, ಒಪ್ಪಿಗೆ ಇಲ್ಲ, ಆದರೆ ವಾತಾವರಣವು ಕೆಡಬಾರದು ಎಂದೋ ಅಥವಾ ಇನ್ನಾವುದಾದರೂ ಕಾರಣಕ್ಕೆ ಸಂಘರ್ಷಗಳಾಗಬಾರದು ಎಂದೋ ‘ಅಡ್ಜೆಸ್ಟ್’ ಮಾಡಿಕೊಳ್ಳುವುದು. ಹೊಂದಾಣಿಕೆ ಮಾಡಿಕೊಳ್ಳುವುದು. ಅಡ್ಜೆಸ್ಟ್ ಮಾಡಿಕೊಳ್ಳುವವರು ತಮ್ಮ ಬಲ ಮೇಲಾದಾಗ ರಿಜೆಕ್ಟ್ ಮಾಡುವುದರಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ. ಅಡ್ಜೆಸ್ಟ್ಮೆಂಟ್ ಎಂದರೆ ಒತ್ತಡದಲ್ಲಿರುವ ಬಂಧನವೇ.
ಆದರೆ ಅಕ್ಸೆಪ್ಟ್ ಮಾಡಿರುವವರು ಅವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಿಲ್ಲ. ತಮ್ಮ ಆತ್ಮರತಿಯ ಅರಿಮೆಗೆ ಅನುಗುಣವಾಗಿ ಅವರು ವರ್ತಿಸಬೇಕೆಂದು ಕಾಯುವುದಿಲ್ಲ. ಅವರು ಇರುವುದೇ ಹಾಗೆ. ನಾನು ಇರುವುದೇ ಹೀಗೆ. ಪರಸ್ಪರ ನಿರೀಕ್ಷೆಗಳಿಲ್ಲದೇ ಅನುಬಂಧದಲ್ಲಿರುವುದು. ಕೂಡುವಂತಹ ಚುಕ್ಕಿಗಳಿಗೆ ಗೆರೆಗಳನ್ನು ಎಳೆದು ರಂಗೋಲಿ ಬಿಡಿಸುವುದು. ಆತ್ಮರತಿಯ ಅರಿಮೆಯೆಂದ ಬಿಡುಗಡೆ ಎಂದರೆ ಮಿಲನ. ಆತ್ಮರತಿಯ ಅರಿಮೆಯಲ್ಲಿರುವುದು ಎಂದರೆ ಕಾರಾಗೃಹಗಳೊಂದಿಗೆ ನಡೆದಾಡುತ್ತಿರುವುದು. ಯಾರೂ ಯಾರನ್ನೂ ಸಂಧಿಸರು, ಬೆರೆಯರು.
ಅದಕ್ಕೆ ಬಸವಣ್ಣನವರ ಸರಳ ಸೂತ್ರ “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ.” ಅರಿಮೆಯಿಂದ ಹೊರಗೆ ಬರುವುದು ವ್ಯಕ್ತಿಯು ತನ್ನ ಮನೋರೋಗದಿಂದ ಮುಕ್ತನಾಗುವುದು ಅಂತರಂಗ ಶುದ್ಧಿ. ವ್ಯಕ್ತಿಗತವಾಗಿ ಮಾನಸಿಕವಾಗಿ ಆರೋಗ್ಯವಾಗಿರುವವರಿಂದ ಆರೋಗ್ಯಕರ ಸಮಾಜವೇ ನಿರ್ಮಾಣವಾಗುತ್ತದೆ. ಇದು ಬಹಿರಂಗ ಶುದ್ಧಿ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ
~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.
ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.
ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.
ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.
ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.
ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.
ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.
ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.
ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.
ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.
ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.
ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.
ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ
~ಗೋವರ್ಧನ ನವಿಲೇಹಾಳು
ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.
ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .
ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.
ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.
ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.
ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.
ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.
ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.
ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.
ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು
ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ
ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.
ಖರ್ಗೋನ್ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.
ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

-
ದಿನದ ಸುದ್ದಿ7 days agoಎಸ್ ಎಸ್ ಎಲ್ ಸಿ ಫಲಿತಾಂಶ | ಭರತ್ ಜಿ ರಾಜ್ಯಕ್ಕೆ ಪ್ರಥಮ ; ನನ್ನ ಕ್ಷೇತ್ರದ ವಿದ್ಯಾರ್ಥಿ ಸಾಧನೆಗೆ ಸಲ್ಯೂಟ್ ಶಾಸಕ ಕೆ.ಎಸ್.ಬಸವಂತಪ್ಪ ಹರ್ಷ
-
ದಿನದ ಸುದ್ದಿ7 days agoಏ 25 ರಂದು ಅಗ್ರಿಕಲ್ಚರ್ ಪ್ರಾಕ್ಟಿಕಲ್ ಪರೀಕ್ಷೆಗೆ ಉಚಿತ ತರಬೇತಿ
-
ದಿನದ ಸುದ್ದಿ7 days agoಚನ್ನಗಿರಿ | ಎಸ್ ಎಸ್ ಎಲ್ ಸಿ ಫಲಿತಾಂಶ ; ಕಬ್ಬಳ ಶಾಲೆಯ ವಿದ್ಯಾರ್ಥಿ ಭರತ್ ಜಿ ರಾಜ್ಯಕ್ಕೆ ಟಾಪರ್
-
ದಿನದ ಸುದ್ದಿ4 days agoಕ್ಷೇತ್ರ ಪುನರ್ವಿಂಗಡಣೆ ಮಸೂದೆ ; ಬಿಜೆಪಿ ಷಡ್ಯಂತ್ರ ಬಯಲು : ಕವಿತಾ ಚಂದ್ರಶೇಖರ್ ಕಿಡಿ
-
ದಿನದ ಸುದ್ದಿ4 days agoಎಸ್ಎಸ್ಎಲ್ಸಿ ಫಲಿತಾಂಶ| ಗುರುಕುಲ ಶಾಲೆಯ ವಿದ್ಯಾರ್ಥಿಗಳ ಭರ್ಜರಿ ಸಾಧನೆ; ಶೇ. 98 ಅಂಕಗಳೊಂದಿಗೆ ಮದಿಹಾ ಅಗ್ರಸ್ಥಾನ



