Connect with us

ಅಂತರಂಗ

ಅರಿಮೆಯ ಅರಿವಿರಲಿ – 18 : ಅಮೌಲ್ಯದ ಮೌಲ್ಯ ಮಾಪನ

Published

on

Art : GEOFFREY JOHNSON
  • ಯೋಗೇಶ್ ಮಾಸ್ಟರ್

ಬಲಿದಾನದರಿಮೆಯು ಮೊಳೆಯುವುದು ಹೇಗೆ? ಕೆಲವರು ಬಲಿಗಂಬಕ್ಕೆ ತಮ್ಮನ್ನು ತಾವು ಬಲಿಪಶುವನ್ನಾಗಿಸಿಕೊಂಡು ನಡೆದರೆ, ಮತ್ತೆ ಕೆಲವರು ತಮ್ಮನ್ನು ತಾವು ಗೆಲುವ ನಾಯಕರನ್ನಾಗಿಸಿಕೊಂಡು ನಡೆಯುತ್ತಾರೆ. ಏಕೆ ಹೀಗೆ?‌ಬಹಳ ಗಂಭೀರವಾಗಿ ಗಮನಿಸಬೇಕು ಮತ್ತು ಅನುಕಂಪದಿಂದ ವಿಷಯವನ್ನು ಗ್ರಹಿಸಬೇಕು.

ಸಾಮಾನ್ಯವಾಗಿ ಅರಿಮೆಗಳು ಮೊಳೆಯುವುದು ಮತ್ತು ಬೆಳೆಯುವುದು ಬಾಲ್ಯದಲ್ಲಿಯೇ. ಕೆಲವು ಅರಿಮೆಗಳು ಅಂಕುರಿಸಿ ಸಹಜವಾದ ಅರಿವು ಬರುತ್ತಾ ಅಳಿಸಿ ಹೋಗುತ್ತವೆ. ಮತ್ತೆ ಕೆಲವು ಮೊಳೆತು ಬೆಳೆದು ಬಲಿತು ಬೆಳೆ ನೀಡುತ್ತವೆ. ಈ ಬಲಿದಾನದರಿಮೆಯೂ ಕೂಡಾ ಸಾಮಾನ್ಯವಾಗಿ ಬಾಲ್ಯದಲ್ಲಿ ತಂದೆ ತಾಯಿಗಳಿಂದ ಸಿಗುವಂತಹ ಬಳುವಳಿಯೇ. ಕುಟುಂಬದ ಹಿರಿಯರ ದ್ವಂದ್ವ ಮತ್ತು ಮಿಶ್ರವರ್ತನೆಗಳು, ಅವರು ಪ್ರತಿಪಾದಿಸುವ ಮೌಲ್ಯಗಳು ಕಾರಣವಾಗುತ್ತವೆ.

ಸುಮ್ಮನೆ ಹೀಗಂತ ಅಂದುಕೊಳ್ಳಿ; ನಿಮ್ಮ ತಾಯಿಯು ಏನೋ ಓದಬೇಕು ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣಬೇಕು ಎಂದು ಕನಸಿರುತ್ತಾರೆ. ಆದರೆ ಅದು ಆಗದೇ ಕನಸನ್ನು ಕನವರಿಸಿಕೊಂಡೇ, ಅದನ್ನು ತಾಂತ್ರಿಕವಾಗಿ ತ್ಯಾಗ ಮಾಡಿದ್ದು ನಿಮಗಾಗಿ ಮನೆಯಲ್ಲಿ ಗೇಯುತ್ತಿರುತ್ತಾರೆ. ಹಾಗೆ ಹೆಣಗುವುದು ಒಂದು ಮೌಲ್ಯವೆಂದು ಬೇರೆ ಭಾವಿಸಿರುತ್ತಾರೆ. ಹೆಣ್ಣಾದವಳು ಈ ಬಗೆಯ ತ್ಯಾಗಗಳಿಗೆ ಅಣಿಯಾಗಿರಲೇ ಬೇಕು ಎಂದು ಭಾವಿಸಿರುತ್ತಾರೆ. ಅದು ಅವರಿಗೆ ಮೌಲ್ಯ. ಸಾಲದಕ್ಕೆ ಹೆಣ್ಣಿಗೆ ಬಿರುದು ಬಾವಲಿಗಳನ್ನಿತ್ತು ಅವಳನ್ನು ತ್ಯಾಗಕ್ಕೆ ಸಜ್ಜುಗೊಳಿಸಿರುತ್ತಾರೆ. ಹೆಣ್ಣು ಸಂಸಾರದ ಕಣ್ಣು. ಅವಳಿಗೆ ಭೂಮಿಯಷ್ಟು ಸಹನೆ. ಅದೂ ಇದೂ ಪರಾಕುಗಳ ಒಂದು ಪಟ್ಟಿ. ಆ ಪಟ್ಟಿಯನ್ನು ಆಕೆಯ ಒಳಮನಸ್ಸು ಬಾಯಿಪಾಠ ಮಾಡಿಕೊಂಡಿದ್ದು ಅದಕ್ಕೆ ತಕ್ಕುದಾಗಿ ನಡೆದುಕೊಳ್ಳಲು ಯತ್ನಿಸುತ್ತಿರುತ್ತಾಳೆ. ಅವಳ ವೈಯಕ್ತಿಕ ಬಯಕೆಗಳೂ ಭುಗಿಲೆದ್ದು ಕುಣಿಯುತ್ತಿರುತ್ತವೆ.

ಈ ಎರಡರ ತಾಕಲಾಟದಲ್ಲಿ ಸ್ವಭಾವತಃ ಮೃದು ಅಥವಾ ದುರ್ಬಲ ಮನಸ್ಕರಾದರೆ ವ್ಯವಸ್ಥೆ ಮತ್ತು ಪರಿಸ್ಥಿತಿಗಳ ಕೈ ಮೇಲಾಗುತ್ತದೆ. ಅವರು ಬಲಿದಾನದರಿಮೆಯ ನೇರ ಬಲಿಪಶುಗಳಾಗಿರುತ್ತಾರೆ. ಈ ಘನವೆತ್ತ ತ್ಯಾಗದ ಪರಂಪರೆಯನ್ನು ನೀವೂ ಕೂಡಾ ಬಹಳ ಶ್ರದ್ಧೆಯಿಂದ ವ್ರತ ಸ್ವೀಕರಿಸುವಂತೆ ಸ್ವೀಕರಿಸಿದ್ದಿರಬಹುದು. ಏಕೆಂದರೆ ಆ ತಾಯಿಯೇ ನಿಮ್ಮ ಪ್ರತಿದಿನದ ಜೀವಂತ ಮಾದರಿ. ಅವರದೇ ಬಿತ್ತನೆ. ಅವರಿಂದಲೇ ಮೊಳಕೆಯೊಡೆಯುವುದು, ಚಿಗುರೊಡೆಯುವುದು, ಟಿಸಿಲೊಡೆಯುವುದು, ಮೊಗ್ಗರಳಿ ಹೂವಾಗುವುದು. ಇದೊಂದು ಉದಾಹರಣೆಯಷ್ಟೇ. ಯಾವುದನ್ನೋ ಮೌಲ್ಯವೆಂದು ಚಿನ್ನದ ಚೌಕಟ್ಟಿನಲ್ಲಿ ಬರೆದಿಟ್ಟಿರುತ್ತದೆಯೋ ಅದು ನಿಮ್ಮ ವ್ಯಕ್ತಿಗತ ಬಯಕೆಯ, ಉತ್ಕಟ ಬಯಕೆಯ ಮರಣಶಾಸನವಾಗಿರಬಹುದು. ಉತ್ಕಟ ಬಯಕೆಗಳ ಮರಣಶಾಸನಗಳೇ ಅರಿಮೆಯ ಲಕ್ಷಣಗಳು.

ತಂದೆ ತಾಯಿಯರ ಎಷ್ಟೋ ತಾಕಲಾಟಗಳನ್ನು, ತೊಳಲಾಟಗಳನ್ನು, ತಿಕ್ಕಲುತನಗಳನ್ನು ಪರಮಶ್ರದ್ಧೆಯಿಂದ ಮಕ್ಕಳು ಎರವಲು ಪಡೆದಿರುತ್ತಾರೆ. ಅಲ್ಲಿಗೆ ಮನೆಯೇ ಒಂದು ಬಲಿಗಂಬ.ಮನೆಯವರೆಲ್ಲರೂ ಬಲಿಪಶುಗಳು ಸ್ವಯಿಚ್ಛೆಯಿಂದ, ಅನಿವಾರ್ಯವಾಗಿ ಅರಿಮೆಯ ಬಲಿಪಶುಗಳು.

ಮೌಲ್ಯಗಳ ಹೇರುವ ಸಮಾಜ

ಮನೆಯೆಂಬ ಬಾಣಲಿಯಿಂದ ಜಿಗಿದು ಬಂದರೆ ನಿಮಗೆ ಹೊರಗೆ ಸಮಾಜವೆಂಬ ಬೆಂಕಿಯಿದೆ. ವ್ಯಕ್ತಿಯೊಬ್ಬನ ಆಂತರಿಕವಾದ ಉತ್ಕಟ ಬಯಕೆಗಳೇನೇ ಇರಲಿ, ಸಾಮಾಜಿಕ ಕಟ್ಟುಪಾಡುಗಳು, ಸಾಂಸ್ಕೃತಿಕ ನಿರೀಕ್ಷೆಗಳು ಅರಿಮೆಗಳನ್ನು ಬಲಪಡಿಸುತ್ತವೆ.
ಉದಾಹರಣೆಗೆ ನಾನೊಬ್ಬ ಜೈನನೋ, ಬ್ರಾಹ್ಮಣನೋ, ಲಿಂಗಾಯತನೋ ಆಗಿದ್ದರೆ ನನ್ನ ವ್ಯಕ್ತಿಗತವಾದ ಬಯಕೆಗಳೇನೇ ಇರಲಿ. ಚಿಕನ್ ಮಂಚೂರಿಯ ತಿನ್ನಬೇಕೆಂದು ಬಯಸಿದರೆ, ಸಮಾಜ ಅದನ್ನು ವಿಚಿತ್ರವಾಗಿ ಅಥವಾ ವಿಲಕ್ಷಣವಾಗಿ ನೋಡುತ್ತದೆ. “ಬಿಡಪ್ಪಾ ಬ್ರಾಹ್ಮಣರು, ಲಿಂಗಾಯತರೆಲ್ಲಾ ತಿನ್ನಕ್ಕೆ ಶುರು ಮಾಡಿದ್ದರಿಂದ ಮಾಂಸದ ಬೆಲೆ ಏರಿತು” ಎಂದು ತಿನ್ನುವುದನ್ನು ಪರೋಕ್ಷವಾಗಿ ವ್ಯಕ್ತಿಯೊಬ್ಬನ ಆಹಾರದ ಬಯಕೆಯನ್ನು ಖಂಡಿಸುತ್ತಾರೆ.

ಬ್ರಾಹ್ಮಣ ಅಥವಾ ಲಿಂಗಾಯತನು ಮಾಂಸ ತಿನ್ನುವುದಕ್ಕೂ ಬೆಲೆ ಏರಿಕೆಗೂ ಏನೂ ಸಂಬಂಧವಿಲ್ಲದಿದ್ದರೂ ಇವನ್ನು ಕೇಳಬೇಕಾಗುತ್ತದೆ. ಬ್ರಾಹ್ಮಣರ ಅಥವಾ ಜೈನರ ಅಥವಾ ಲಿಂಗಾಯತರ ಸಮುದಾಯವೂ, ಬಳಗವೂ ತಮ್ಮಲ್ಲಿರುವ ಮಾಂಸ ತಿನ್ನುವ ವ್ಯಕ್ತಿಯನ್ನು ಪುರಸ್ಕರಿಸುವುದಿಲ್ಲ. ಅವನೊಬ್ಬ ನೇರವಾಗಿ ಅಲ್ಲದಿದ್ದರೂ ಒಂದು ರೀತಿಯಲ್ಲಿ ಜಾತಿಗೆಟ್ಟವ. ಹಾಗಾಗಿ ಅವನು ಕದ್ದು ತಿನ್ನಬೇಕು. ಅಥವಾ ಅವರ ತಿರಸ್ಕಾರಕ್ಕೆ ಒಳಗಾಗದಿರಲು ತಿನ್ನಬಾರದು.

ಹೆಣ್ಣು ಮಗುವೊಂದರ ಹಣೆಯಲ್ಲಿ ಕುಂಕುಮವಿರದಿದ್ದರೆ ನೀನು ಮುಸಲ್ಮಾನಳಾ ಎನ್ನುವುದು, ಗಡ್ಡವಿಟ್ಟುಕೊಂಡು ಮೀಸೆ ತೆಗೆದ ಪುರುಷನಿಗೆ “ಸಲಾಂ ವಾಲೆಕುಂ” ಎನ್ನುವುದು, ದೇವಸ್ಥಾನಕ್ಕೆ ಅಥವಾ ಮಂಗಳಕಾರ್ಯಕ್ಕೆ ಸೀರೆ, ಇತ್ಯಾದಿ ಮಂಗಳದ್ರವ್ಯಗಳಿಂದ ಅಲಂಕೃತವಾಗಿ ಹೋಗಬೇಕೆನ್ನುವುದು, ಮುತ್ತೈದೆಯಾದವಳು ಹೇಗೆಲ್ಲಾ ಇರಬೇಕೆನ್ನುವುದು ಅಥವಾ ವಿಧವೆಯಾದವಳು ಏನೆಲ್ಲಾ ಬಳಸಬಾರದು ಎನ್ನುವುದು; ಹೀಗೇ, ಸಾಲುಸಾಲಾಗಿ ವ್ಯಕ್ತಿಯ ಆಂತರಿಕ ಬಯಕೆಯನ್ನು ಮೀರಿದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ನಿರೀಕ್ಷೆಗಳನ್ನೆಲ್ಲಾ ವ್ಯಕ್ತಿಯು ಮನ್ನಿಸಬೇಕಾದ ಮೌಲ್ಯವೆಂದು ಅವನಲ್ಲಿ ದ್ವಂದ್ವವನ್ನುಂಟು ಮಾಡುತ್ತಾ ಬಲಿದಾನದರಿಮೆಯನ್ನು ಬಲಿಸುತ್ತದೆ.

ದೌರ್ಬಲ್ಯಕ್ಕೆ ಮೌಲ್ಯದ ಕವಚ

ಸರಿ, ಇನ್ನೊಂದು ಬದಿಯಲ್ಲಿಯೂ ಬಲಿದಾನದರಿಮೆಯು ಬಲಿಯುತ್ತಾ ಬಲಗೊಳ್ಳುವುದನ್ನು ಬಗೆಯಬೇಕು. ಕೆಲವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಎದುರಿಸಿ ತಮ್ಮ ಶಕ್ತಿಪ್ರದರ್ಶನ ಮಾಡಿ ತಮ್ಮ ಆಸೆಯನ್ನು ಪ್ರಕಟಗೊಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ತಮ್ಮ ದೌರ್ಬಲ್ಯಕ್ಕೆ ಮೌಲ್ಯವನ್ನು ಆರೋಪಿಸಿಕೊಂಡು ತಾವು ವಿಧೇಯವಾಗಿ ನಡೆದುಕೊಂಡು ಹೋಗಿಬಿಡುವುದು. ಸುಮ್ಮನೆ ಕೆಲವು ಉದಾಹರಣೆಗಳು ಅಂತ ಹೇಳ್ತೀನಿ. ಆ ಮಾದರಿಯಲ್ಲಿ ಬೇರೆಯದನ್ನು ಗಮನಿಸಿ.

ಶಿಶ್ನದಲ್ಲಿ ನಿಮಿರುವಿಕೆಯ ಸಮಸ್ಯೆ ಇರುವವನು ಅಥವಾ ಷಂಡತನದಿಂದ ಬಳಲುತ್ತಿರುವವನು ತಾನು ಕಾಮವನ್ನು ನಿಗ್ರಹ ಮಾಡಿ ಬ್ರಹ್ಮಚರ್ಯವನ್ನು ಪಾಲನೆ ಮಾಡುತ್ತಿದ್ದೇನೆಂದು ಘೋಷಿಸುತ್ತಾ ಸಂನ್ಯಾಸಿಯಾಗುವುದು. ಅವನ ಸಮಸ್ಯೆಗೆ ಸಂನ್ಯಾಸವೆಂಬ ಆಧ್ಯಾತ್ಮಿಕ ಮೌಲ್ಯದ ಸಮಾಧಾನ. ಅವನು ತನ್ನ ಬಲಿದಾನದರಿಮೆಯನ್ನು ಮೌಲ್ಯಕ್ಕೆ ತಿರುಗಿಸಿಕೊಳ್ಳುವ ಬಗೆ. ತನ್ನಿಂದ ಏನನ್ನೋ ಕಿತ್ತುಕೊಂಡವನಿಗೆ ಎರಡು ತಟ್ಟಿ ವಾಪಸ್ಸು ಕಿತ್ತುಕೊಳ್ಳಲಾಗದವನು ಅವನನ್ನು ಕ್ಷಮಿಸಿದ್ದೇನೆ. ಹೋದರೆ ಹೋಗಲಿ ಎಂಬ ಔದಾರ್ಯವನ್ನು ಪ್ರದರ್ಶಿಸುತ್ತಾ ಮೌಲ್ಯವನ್ನು ಆರೋಪಿಸಿಕೊಳ್ಳುವುದು.

ಪಾಪ, ನಮ್ಮಪ್ಪ ಅಮ್ಮನಿಗೆ ಹೊತ್ತುಹೊತ್ತಿಗೆ ಊಟಕ್ಕೆ ಹವಣಿಸುವುದೇ ದೊಡ್ಡ ಕೆಲಸವಾಗಿರುತ್ತಿತ್ತು. ಇನ್ನು ನನಗೆ ಓದಿಸೋದು, ಇನ್ನೇನೋ ಕಲಿಸೋದು ಹೇಗೆ ಸಾಧ್ಯವಾಗುತ್ತದೆ ಎಂದು ಇನ್ನೊಬ್ಬರನ್ನು ಆರೋಪಿಸುತ್ತಾ ತಮ್ಮನ್ನು ಬಲಿಪಶುವನ್ನಾಗಿಸಿಕೊಂಡು ಕೊರಗುವುದು, ತಮಗೆ ತಾವೇ ಮರುಗುವುದು, ಇತರರಿಂದ ಅನುಕಂಪವನ್ನು ಅಪೇಕ್ಷಿಸುವುದು ಕೂಡಾ ಈ ಅರಿಮೆಯ ಮತ್ತೊಂದು ಮುಖವೇ.

ಅರಿಮೆಗೆ ಪೋಷಕ ಮಾದರಿಗಳು

ಬಲಿದಾನದರಿಮೆಯನ್ನು ಪೋಷಿಸಲು ನಿಮಗೆ ರಾಷ್ಟ್ರೀಯ ನಾಯಕರೂ ಸಿಗುತ್ತಾರೆ. ಆಧ್ಯಾತ್ಮವ್ಯಕ್ತಿಗಳೂ ಸಿಗುತ್ತಾರೆ. ಜೋನ್ ಆಫ್ ಆರ್ಕ್, ಅಸ್ಸಿಸ್ಸಿಯ ಸಂತ ಫ್ರಾನ್ಸಿಸ್, ಗಾಂಧೀಜಿ, ಯೇಸು, ಮದರ್ ಥೆರೆಸಾರೇ ಮೊದಲಾದ ಮಾದರಿಗಳು ಕೂಡಾ ತಮ್ಮನ್ನು ತಾವು ನೋವಿಗೆ ಒಳಪಡಿಸಿಕೊಂಡು ಇತರರ ಸೇವೆಯೇ ತಮ್ಮ ಒಲವು ಎಂಬ ಆದರ್ಶವನ್ನು ಒಡ್ಡಬಲ್ಲವು. ಇಂತಹ ಯಶಸ್ವೀ ಮತ್ತು ಪ್ರಖ್ಯಾತ ಐತಿಹಾಸಿಕ ವ್ಯಕ್ತಿಗಳ ತ್ಯಾಗದ ಮೌಲ್ಯಗಳು ವ್ಯಕ್ತಿಯೊಬ್ಬನ ತ್ಯಾಗದ ಅರಿಮೆಯನ್ನು ಬಲಪಡಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ.

ಬಾಲ್ಯದಲ್ಲಿನ ಪ್ರೀತಿ ವಾತ್ಸಲ್ಯಗಳ ಕೊರತೆ, ದೇಹದ ಆಕಾರವು ಸರಿ ಇಲ್ಲ ಎಂಬ ಭಾವ, ಮನೆಯಲ್ಲಿ ಕಠಿಣವಾಗಿ ತೀರ್ಮಾನಕ್ಕೊಳಗಾಗುತ್ತಿದ್ದರೆ ಬಲಿದಾನದರಿಮೆಯು ಮೊಳೆಯುವ ಸಾಧ್ಯತೆಗಳಿರುತ್ತವೆ. ತಂದೆ ತಾಯಿ ಅಥವಾ ಮನೆಯ ಇತರ ಸದಸ್ಯರಿಂದ, ಶಿಕ್ಷಕರಿಂದ, ಸಾಮಾಜಿಕ ಪರಿಸರದಿಂದ, ಓರಗೆಯವರಿಂದ ಮಗುವು ಭಾವನಾತ್ಮಕವಾಗಿ ತಳಮಳಕೊಳಗಾಗುತ್ತಿದ್ದರೆ, ಒತ್ತಡವನ್ನು ಅನುಭವಿಸುತ್ತಿದ್ದರೆ ಈ ಬಲಿದಾನದರಿಮೆಯ ಉದಯವಾಗುವುದು.

ದೇಹಾಲಸ್ಯವಿರುವಾಗ, ಶರೀರದಲ್ಲಿ ಅಸೌಖ್ಯವಿರುವಾಗ ಹೊಂದುವಂತಹ ಒಪ್ಪಲಾರದಂತಹ ಸಂಬಂಧಗಳು ಕೂಡಾ ಈ ಅರಿಮೆಗೆ ಕಾರಣವಾಗಬಹುದು. ಕೆಲವೊಮ್ಮೆ ತಾವು ನಿರ್ಧಾರ ತೆಗೆದುಕೊಳ್ಳಬೇಕಾದಾಗ ನಿರ್ಧಾರ ತೆಗೆದುಕೊಳ್ಳದೇ ಜವಾಬ್ದಾರಿಯಿಂದ ತಪ್ಪಿಸಿಕೊಂಡಿರುತ್ತಾರೆ. ಆ ನೋವು ಅಥವಾ ಬೇಸರವೂ ಕೂಡಾ ‘ಹೋಗತ್ತ, ನನ್ನ ಬಾಳು ಇಷ್ಟೇ’ ಎಂಬ ಧೋರಣೆಯಲ್ಲಿ ಬಲಿದಾನದರಿಮೆಯನ್ನು ಬೆಳೆಸಿಕೊಳ್ಳುತ್ತಾರೆ.

ಇನ್ನೂ ಕೆಲವರಿಗೆ ತಾವೊಬ್ಬ ಮಹಾನ್ ಮುಗ್ಧ ಜೀವಿ, ಭಾವುಕ ಮತ್ತು ಅನುಕಂಪದ ಜೀವಿಯೆಂದು ತೋರಿಸಿಕೊಳ್ಳುವ ತವಕ. ಈ ಆಂತರಿಕ ತವಕದ ಕೊಡುಗೆಯಾಗಿಯೂ ದೊರಕುವುದು ಈ ಮಾರ್ಟಿರ್ ಕಾಂಪ್ಲೆಕ್ಸ್.ಇನ್ನೂ ಕೆಲವರು ತಮ್ಮ ಹೆಣಗುವಿಕೆಯನ್ನು ಉತ್ಪ್ರೇಕ್ಷಿಸಿ ವೈಭವೀಕರಿಸುತ್ತಾರೆ. ಸುಮ್ಮನೆ ಒಂದು ಉದಾಹರಣೆ. ಬೇಗ ಬೇಗ ಊಟಕ್ಕೆ ಬಡಿಸಲು ಹೋದಾಗ ಕಾಲಿಗೆ ಚೇರು ಬಡಿದು ಒಂದು ಸಣ್ಣ ನೋವಾಗುತ್ತದೆ. ಅಯ್ಯೋ ಪಾಪ ಎಂದು ಉಪಚಾರಕ್ಕೆ ಅರ್ಹವಾಗಿಲ್ಲದ್ದಷ್ಟು ಸಣ್ಣ ನೋವು ಅದು. ಅದಕ್ಕೆ ಅವರು ಚೇರಿಗೆ ಮೊಣಕಾಲು ಬಡಿದು, ತಾವು ಬಿದ್ದು, ತಲೆಯು ನೆಲಕ್ಕೆ ಅಪ್ಪಳಿಸಿ, ಒಂದೈದು ನಿಮಿಷ ಮೂರ್ಚಾವಸ್ಥೆಯಲ್ಲಿದ್ದು ಎದ್ದು ಬಂದರಾದರೆ ಒಂದಷ್ಟು ಉಪಚಾರ, ಕನಿಕರ, ಅಯ್ಯೋ ಪಾಪ ಲಭ್ಯವಾಗುವುದು. ಅದಕ್ಕೆ ಉತ್ಪ್ರೇಕ್ಷೆ. ಅದು ಬರಿಯ ನೋವಿಗೆ ಸೀಮಿತವಲ್ಲ. ಅವರು ಪಡುವ ಶ್ರಮಕ್ಕೆ, ಅಥವಾ ಇತರರು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಕ್ಕೆ; ಇತರ ವಿಷಯಗಳಿಗೂ ಸಹ.

ಈ ಅರಿಮೆಯುಳ್ಳವರಿಗೆ ಇತರರ ಉದ್ದೇಶಗಳ ಮೇಲೆ ಅನುಮಾನವೂ ಕೂಡಾ ಸಾಮಾನ್ಯ.
ತಾವು ಸರಿಯಾಗಿಯೇ ಇರಬೇಕೆನ್ನುವುದು ಅವರ ಗೀಳು. ತಮ್ಮ ಕೈಯಲ್ಲಿ ಆಗುತ್ತದೋ ಇಲ್ಲವೋ, ಯಾರಾದರೂ ಕೆಲಸವನ್ನು ಮಾಡಿಕೊಡಲು ಕೇಳಿದರೆ “ಹೂ, ಮಾಡುತ್ತೇನೆ” ಎನ್ನುವುದೇ ಅವರ ಮೊದಲ ಉತ್ತರ.
ಕೆಲವೊಮ್ಮೆ ಅವರಿಗೆ ಅನ್ನಿಸುವುದೇನೆಂದರೆ, ಇತರರು ತನ್ನ ಮನಸ್ಸನ್ನು ತಿಳಿದುಕೊಂಡಿದ್ದಾರೆ ಅಥವಾ ತಿಳಿದುಕೊಳ್ಳುತ್ತಾರೆ ಎಂದು. ಇವರಿಂದ ಸಮಸ್ಯೆಗಳಿಗೆ ಪರಿಹಾರವಂತೂ ಎಂದಿಗೂ ಸಿಗುವುದಿಲ್ಲ. ಏಕೆಂದರೆ ಇವರು ನೋಯುವುದರಲ್ಲೇ ಸಂತೋಷಪಡುವವರು. ಒಂದು ವೇಳೆ ಸಮಸ್ಯೆಗೆ ಪರಿಹಾರ ಸಿಕ್ಕಿಬಿಟ್ಟಿತು ಎಂದಿಟ್ಟುಕೊಳ್ಳಿ, ಅದರ ನೆರಳಾಗಿ ಮತ್ತಷ್ಟು ಸಮಸ್ಯೆಗಳನ್ನು ತರುತ್ತಾರೆ. ಅವರು ಮಹಾನ್ ನಾಟಕಕಾರರು. ಪ್ರಶಂಸೆ ಗಿಟ್ಟಿಸಲು, ಗಮನ ಸೆಳೆಯಲು, ಜನರ ದೃಷ್ಟಿಯನ್ನು ತಮ್ಮ ಕಡೆಗೆ ಸೆಳೆಯಲು ನಟಿಸಲೂ ಸೈ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

ಆತ್ಮಕತೆ | ಅಪ್ಪನ ಮೈಸೂರು ಭೇಟಿ ಸಾವು – ನೋವು

Published

on

  • ರುದ್ರಪ್ಪ ಹನಗವಾಡಿ 

ನಾನು ಮೈಸೂರಿನಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿರುವುದರ ಬಗ್ಗೆ ತಿಳಿದ ನಮ್ಮೂರಲ್ಲಿ ಎಲ್ಲರಿಗೂ ಸಂತೋಷವಾಗಿತ್ತು. ಅತ್ಯಂತ ಸಂತೋಷಗೊಂಡಿದ್ದ ಅಪ್ಪನನ್ನು ನಾನು ಮೈಸೂರಿಗೆ ಕರೆದುಕೊಂಡು ಬಂದು ಒಮ್ಮೆ ತೋರಿಸಬೇಕೆಂದು ಯೋಚಿಸಿದ್ದೆ. ಅಪ್ಪನು ಓಡಾಡಲು ಶಕ್ತಿ ಇದ್ದ ಕಾಲದಲ್ಲಿ ಎಲೆ ವ್ಯಾಪಾರಕ್ಕಾಗಿ ಧಾರವಾಡ, ಕಂಪ್ಲಿ, ಗಂಗಾವತಿ, ಹೊಸಪೇಟೆ, ಹರಿಹರ, ದಾವಣಗೆರೆ ಸಂತೆಗಳಲ್ಲಿ ಓಡಾಡುತ್ತಿದ್ದನು. ಇತ್ತೀಚೆಗೆ ಅವರಿಗೆ ಇದ್ದ ಕೆಮ್ಮು ದಮ್ಮುಗಳಿಂದ ಹೊರ ಊರುಗಳಿಗೆಲ್ಲೂ ಹೋಗುತ್ತಿರಲಿಲ್ಲ. ಅಪ್ಪನ ಹೆಚ್ಚಾದ ವಯಸ್ಸಿನ ಕಾರಣದಿಂದಲೇ ಹರಿಹರದಲ್ಲಿ ಹೈಸ್ಕೂಲಿಗೆ ಸೇರಿದ್ದ ಅಣ್ಣ ತಿಪ್ಪಣ್ಣನನ್ನು ಶಾಲೆ ಬಿಡಿಸಿ ತೋಟದ ಕೆಲಸಕ್ಕೆ ಹಾಕಿಕೊಂಡಿದ್ದ. ಹಾಗಾಗಿ ಈಗೆಲ್ಲ ಸಂತೆಗಳಿಗೆ ಅಣ್ಣನನ್ನೇ ಕಳಿಸುತ್ತಿದ್ದ.

ನಾನು ಮೈಸೂರಿನಲ್ಲಿ ಮತ್ತೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪುನಃ ನನ್ನ ಉಪನ್ಯಾಸಕ ಹುದ್ದೆಯನ್ನು ವಿಶ್ವವಿದ್ಯಾಲಯ ಮುಂದುವರೆಸಿತು. ಈ ನಡುವೆ ಪಾಲ್ ಇ ಸೈಮನ್ಸ್ ಅವರ ಪ್ರಾಜೆಕ್ಟ್ ಪೂರ್ಣಗೊಂಡಿತ್ತು. ಹಾಗಾಗಿ ಅವರು ವಾಪಸ್ ಅಮೇರಿಕೆಗೆ ಹೊರಟುಹೋದರು. ಹೋಗುವ ಮುನ್ನ ತಮ್ಮಲ್ಲಿದ್ದ ರ‍್ಯಾಲೀ ಬೈಸಿಕಲ್ ಮತ್ತು ಆರಾಮವಾಗಿ ಕೂರಲು ತೆಗೆದುಕೊಂಡಿದ್ದ `ಇಸೀ ಚೇರ್’ನ್ನು ನನಗೆ ಇಟ್ಟುಕೊಳ್ಳಲು ಹೇಳಿದರು. ಉಳಿದಂತೆ ತನ್ನೆಲ್ಲ ವಸ್ತುಗಳನ್ನು ಅಚ್ಚುಕಟ್ಟಾಗಿ ಪ್ಯಾಕ್ ಮಾಡಿಕೊಳ್ಳಲು ನಾನು ಸಹಕರಿಸಿದೆ.

ಈ ಸಮಯಕ್ಕಾಗಲೇ ಮಹೇಶ ರಾಜ್ಯಶಾಸ್ತçದಲ್ಲಿ ಎಂ.ಎ. ಮುಗಿಸಿದ್ದ. ಅವನು ಮುಂದೆ ಕಾನೂನು ವ್ಯಾಸಂಗ ಮಾಡಲು ಮೈಸೂರಿನಲ್ಲಿಯೇ ಇರುವ ತೀರ್ಮಾನ ಮಾಡಿದ್ದ. ಹಾಗಾಗಿ ಹಾಲಿ ಇದ್ದ ಮನೆಯನ್ನು ನಾನು ಬಿಟ್ಟು
ಕೆ.ಜಿ. ಕೊಪ್ಪಲಲ್ಲಿ ನಾನು ಅವನೂ ಸೇರಿ ಬಾಡಿಗೆ ಮನೆ ಮಾಡಿದೆವು. ನಂತರದಲ್ಲಿ ನಮ್ಮ ಊರಿನಲ್ಲಿ ಪಿಯುಸಿ ಪಾಸು ಮಾಡಿ ಊರಲ್ಲಿದ್ದ ಬಾರಿಕರ ಮಾಂತೇಶಿ, ಐನೇರ ಮುಕ್ತಾಯಕ್ಕ ಇವರುಗಳು ಕೂಡ ಮೈಸೂರಿಗೆ ಬಂದು ಓದು ಮುಂದುವರೆಸಲು ನನ್ನ ಸಹಾಯ ಕೋರಿದ್ದರು. ನಾನು ಅವರನ್ನೂ ಸಹ ನನ್ನ ಜೊತೆಗೆ ಮೈಸೂರಿಗೆ ಕರೆತಂದು, ಮುಕ್ತಾಯಕ್ಕನಿಗೆ ಸರಸ್ವತಿಪುರಂನಲ್ಲಿ ಸಣ್ಣ ಬಾಡಿಗೆ ಮನೆ ಮಾಡಿಕೊಟ್ಟು ಮಾಂತೇಶಿಗೆ ಮಹಾರಾಜ ಕಾಲೇಜಿನಲ್ಲಿ ಮತ್ತು ಬಿ.ಸಿ.ಎಂ. ಹಾಸ್ಟೆಲ್‌ನಲ್ಲಿ ಸೀಟು ಕೊಡಿಸಿ ಬಿ.ಎ. ಮುಂದುವರೆಸಲು ಅವಕಾಶ ಮಾಡಿಕೊಟ್ಟೆ. ಈ ನಡುವೆ ನಾನು ಊರಿಗೆ ಹೋದಾಗ ನನ್ನ ಅವ್ವನ ತಂಗಿ ಮಗ ಸಿರಿಗೇರಿ ರಾಮಣ್ಣ ಬಿ.ಎ. ಪದವಿ ಕೋರ್ಸು ಮುಗಿಸಿ ಕೆಲವು ವಿಷಯಗಳಲ್ಲಿ ಫೇಲಾಗಿ ತನ್ನ ಊರಿನಲ್ಲಿದ್ದ. ಅವನನ್ನು ಕೂಡ ಮೈಸೂರಿಗೆ ಕರೆದುಕೊಂಡು ಬಂದು ನಾವಿದ್ದ ಮನೆಯಲ್ಲಿಟ್ಟುಕೊಂಡು, ಬಾಕಿ ಉಳಿದ ವಿಷಯಗಳಿಗಾಗಿ ಟ್ಯೂಷನ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿದೆ. ನಂತರ ಬಿ.ಎ. ಪಾಸು ಮಾಡಿಕೊಂಡು ಮುಂದೆ ಕೆ.ಇ.ಬಿ.ಯಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ.

ಕೆ.ಜಿ. ಕೊಪ್ಪಲ ಮನೆಯಲ್ಲಿ ನಾನು ಮಹೇಶ ಅಧಿಕೃತ ಬಾಡಿಗೆದಾರರಾದರೂ ಅನಧಿಕೃತವಾಗಿ ವಿದ್ಯಾರ್ಥಿ ಬಳಗ ಮತ್ತು ನಿರುದ್ಯೋಗಿಗಳ ಬಳಗದ ಸದಸ್ಯರು ಯಾರಾದರೊಬ್ಬರು ಇರುತ್ತಿದ್ದರು. ನಮ್ಮಿಬ್ಬರಿಗೆ ಅಡಿಗೆ ಮಾಡಿಡಲು ಒಪ್ಪಿಕೊಂಡಿದ್ದ ಶಿವಪ್ಪ ಎನ್ನುವ ಅಡಿಗೆಯವನು ನಮ್ಮಲ್ಲಿ ದಿನವೂ ಏರುಪೇರಾಗುತ್ತಿದ್ದ ಸಂಖ್ಯೆ ಮತ್ತು ಹೊಲೆ ಮಾದಿಗರೆಗೆಲ್ಲ ನಾನು ಅಡಿಗೆ ಮಾಡುವುದಿಲ್ಲ ಎಂದು ಹೇಳಿ ಹೊರಟು ಹೋಗಿದ್ದ. ಈ ನಡುವೆ ಹಾಸ್ಟೆಲ್‌ನಲ್ಲಿ ಸೀಟು ಸಿಗುವವರೆಗೆ ಮಾಂತೇಶಿ ಮತ್ತು ರಾಮಣ್ಣನೇ ತೋಚಿದಂತೆ ಅಡುಗೆ ಮಾಡುತ್ತಿದ್ದರು. ಅದನ್ನೇ ಎಲ್ಲರೂ ಹಂಚಿ ಉಣ್ಣುತ್ತಿದ್ದೆವು. ಇದನ್ನೆಲ್ಲ ನೆನಪಿಸಿಕೊಳ್ಳುವ ಸಮಯಕ್ಕೆ ರಾಮಣ್ಣ ಮತ್ತು ಮಾಂತೇಶಿ ಇಬ್ಬರೂ ತೀರಿಕೊಂಡಿದ್ದಾರೆ. ಮುಕ್ತಾಯಕ್ಕ ಹೊಳೆ ದಾಟಿದ ಮನುಷ್ಯ ಸ್ವಭಾವದಂತೆ ಗುರ್ತಿಲ್ಲದವರಂತೆ ದಾವಣಗೆರೆಯಲ್ಲಿ ಅರಾಮ ಇದ್ದಾಳೆ.

ಇದೇ ಸಮಯಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಇಂದಿರಾ ಗಾಂಧಿ ಅವರ ಬಗ್ಗೆ ಅಲಹಾಬಾದ್ ಕೈಕೋರ್ಟ್ ನೀಡಿದ ತೀರ್ಪಿನಂತೆ ಪಾರ್ಲಿಮೆಂಟ್ ಸದಸ್ಯತ್ವವನ್ನು ರದ್ದುಗೊಳಿಸಿದ ಕಾರಣ ದೇಶದಾದ್ಯಂತ ಆಂತರಿಕ ತುರ್ತು ಪರಿಸ್ಥಿತಿ ಘೋಷಣೆಯಿಂದಾಗಿ ಧಾರವಾಡದಲ್ಲಿದ್ದು ಪತ್ರಿಕೆ ನಡೆಸುತ್ತಿದ್ದ ರಾಜಶೇಖರ ಕೋಟಿ ಕೂಡ ಮೈಸೂರಿಗೆ ಬಂದಿದ್ದರು ಹಾಗೂ ನಮ್ಮ ಈ ಬಾಡಿಗೆ ಮನೆಯ ಗೌರವಾನ್ವಿತ ಸದಸ್ಯರಾಗಿದ್ದರು.

ನನಗೆ ಬರುತ್ತಿದ್ದ 600ರೂಗಳ ಸಂಬಳ ಮತ್ತು ಮಹೇಶನ ಊರಿನಿಂದ ಬರುತ್ತಿದ್ದ ಅಕ್ಕಿ ಮತ್ತು ಸಾಂಬಾರು ಪದಾರ್ಥಗಳು ಸೇರಿಕೊಂಡು ಎಲ್ಲರಿಗೂ ಊಟ-ತಿಂಡಿಗಳು ಸಾಧಾರಣವಾಗಿ ನಡೆಯುತ್ತಿದ್ದವು. ಬಿ.ಎ. ಮತ್ತು ಎಂ.ಎ.ಗಳಲ್ಲಿ ಹಾಸ್ಟೆಲ್‌ನಲ್ಲಿನ ಸೊಗಸಾದ ಊಟ ನಂತರ ಪಾಲ್ ಸೈಮನ್ಸ್ ಜೊತೆ ಅಡಿಗೆ ಭಟ್ಟನ ಕೈರುಚಿ ನೋಡಿದ್ದ ನನಗೆ ಇಲ್ಲಿನ ಅನಿಶ್ಚಿತವಾದ ಊಟೋಪಚಾರಗಳನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೇನು? ನಮ್ಮ ಮಿತ್ರ ಬಳಗದ ಬೆಚ್ಚಗಿನ ಸೆಳೆತಗಳು ಇದನ್ನೆಲ್ಲ ಮೀರಿ ಒಬ್ಬರಿಗೊಬ್ಬರು ಸಹಕರಿಸಿಕೊಂಡು ಕಾಲ ಹಾಕುತ್ತಿದ್ದೆವು.
ದಸರಾ ರಜೆ ಬಂದು ಊರಿಗೆ ಹೋದಾಗ ಅಪ್ಪನನ್ನು ಒಮ್ಮೆ ಮೈಸೂರಿಗೆ ಕರೆತಂದು ದಸರಾ ಹಬ್ಬ ಮತ್ತು ನಮ್ಮ ಕಾಲೇಜು ತೋರಿಸಬೇಕೆಂಬ ಆಸೆಯಾಯಿತು. ಈ ಬಾರಿ ದಸರೆಯಲ್ಲಿ ಊರಿಗೆ ಹೋದಾಗ ಸೈಕಲ್ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ನಮ್ಮ ಅಜ್ಜಿ (ಅಪ್ಪನ ತಾಯಿ) ಪಕ್ಕೀರಜ್ಜಿಯ ಹೆಸರಿಗಿದ್ದ ಹಳ್ಳದಾಚೆಗಿನ ಹೊಲದಲ್ಲಿನ ಬೆಳೆ ನೋಡಲು ಹೋಗಿದ್ದೆವು. ಅಣ್ಣ ಸರಿಯಾಗಿ ಕೆಲಸ ಮಾಡದೆ ಎಲ್ಲಾ ಕಡೆ ನಿರೀಕ್ಷಿತ ಉತ್ಪಾದನೆ ಇಲ್ಲವೆಂದು ನನ್ನ ಬಳಿ ಅಪ್ಪ ಅಲವತ್ತುಕೊಂಡಿದ್ದ. ಅವನೂ ಆಗ ತಾನೆ ಓದುವುದನ್ನು ಬಿಟ್ಟು ತೋಟದ ಕೆಲಸಗಳಲ್ಲಿ ತೊಡಗಿದ್ದರಿಂದಲೋ ಏನೋ ವ್ಯವಸಾಯದಲ್ಲಾಗಲೀ, ತೋಟ ಮಾಡುವುದರಲ್ಲಾಗಲೀ, ಅಪ್ಪನ ನಿರೀಕ್ಷಿತ ಮಟ್ಟದ ಕೆಲಸಗಾರನಾಗಿರಲಿಲ್ಲ. ಅದಕ್ಕೆ ನಮ್ಮವ್ವನ ಕಟಿಪಿಟಿಯೂ ಕಾರಣವಾಗಿತ್ತು. ನಮ್ಮ ಸೈಕಲ್ ಸವಾರಿ ಮುಗಿದು ಮನೆಗೆ ಬಂದಾಗ ಮೈಸೂರು ದಸರಾ ನೋಡಲು ಕರೆದುಕೊಂಡು ಹೋಗುವ ತೀರ್ಮಾನ ಅಪ್ಪನಿಗೆ ಹೇಳಿ ಒಪ್ಪಿಸಿದೆ. ನಂತರ ರೈಲಿನಲ್ಲಿ ಮಾರನೇ ದಿನ ಅಪ್ಪನೊಡನೆ ಮೈಸೂರಿಗೆ ಪ್ರಯಾಣ ಬೆಳೆಸಿದೆ.

ಮೈಸೂರು ನಗರ ದಸರಾ ಹಬ್ಬದ ಸಂಭ್ರಮದಲ್ಲಿ ಗಿಜುಗುಡುತ್ತಿತ್ತು. ವಿದ್ಯುತ್ ಅಲಂಕಾರದಿಂದ ಶೃಂಗಾರಗೊಂಡಿದ್ದರಿಂದ ಚಾಮುಂಡೇಶ್ವರಿ ಬೆಟ್ಟ, ಸಂಜೆ ವೇಳೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ನಮ್ಮ ಕಾಲೇಜನ್ನು ಎಲ್ಲಾ ತೋರಿಸಿದೆ. ನಾನು ಈಗ್ಗೆ 2-3 ವರ್ಷಗಳ ಹಿಂದೆ ಇಲ್ಲಿಯೇ ಓದಿ ಈಗ ಅಲ್ಲಿಯೇ ಮೇಷ್ಟರಾಗಿ ಕೆಲಸ ಮಾಡುತ್ತಿರುವುದನ್ನು ಕಣ್ಣಾರೆ ಕಂಡ ಅಪ್ಪ ಖುಷಿಗೊಂಡಿದ್ದ. ಅರಮನೆ, ಚಾಮುಂಡಿ ಬೆಟ್ಟ, ನಮ್ಮ ಕಾಲೇಜು, ಎಲ್ಲ ನೋಡಿದ ಅಪ್ಪ `ನಾನಿನ್ನು ಸತ್ತರೂ ಚಿಂತೆಯಿಲ್ಲ, ನೀನೊಂದು ದಡ ಸೇರಿದೆ’ ಎಂದು ಹೇಳಿ ಪುಳಕಗೊಂಡಿದ್ದ. ಮಾರನೇ ದಿನ ಸಂಜೆ ಕೃಷ್ಣರಾಜ ಸಾಗರ ಅಣೆಕಟ್ಟು ವೀಕ್ಷಣೆಗೆ ಹೋಗುವ ಮಾತಾಡಿದಾಗ ಅವನು ಆಸಕ್ತಿ ತೋರಲಿಲ್ಲ. ಹಾಗಾಗಿ ಅವನನ್ನು ರಾಮನಗರದಲ್ಲಿದ್ದ ಅಕ್ಕನ ಮನೆಗೆ ಬಸ್ಸಿನಲ್ಲಿ ಹತ್ತಿಸಿ ಕಳಿಸಿದೆ.

ದೇಶಾದಾದ್ಯಂತ ತುರ್ತು ಪರಿಸ್ಥಿತಿ, ದೇವರಾಜ ಅರಸರ 20 ಅಂಶದ ಕಾರ್ಯಕ್ರಮಗಳು, ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಜೆಪಿ ಅವರು ಸೇರಿದಂತೆ ವಿರೋಧ ಪಕ್ಷಗಳ ಧುರೀಣರನ್ನು ಬಂಧಿಸಿ ಜೈಲಿನಲ್ಲಿಡುವಂತಾದ ವಿಷಯಗಳ ಚರ್ಚೆ ನಮ್ಮ ಕೆ.ಜಿ.ಕೊಪ್ಪಲ ಮನೆಯಲ್ಲಿ ನಡೆಯುತ್ತಿತ್ತು. ತುರ್ತು ಪರಿಸ್ಥಿತಿಯ ಕಾರಣದಿಂದಾಗಿ ವಿದ್ಯಾರ್ಥಿಗಳಿಂದ ಆಗಾಗ ನಡೆಯುತ್ತಿದ್ದ ಮುಷ್ಕರಗಳಾಗಲಿ, ವಿದ್ಯಾರ್ಥಿ ಸಂಘದ ಚುನಾವಣೆಗಳಾಗಲೀ ನಡೆಯದೆ, ಎಲ್ಲರೂ ಬೆದರಿದಂತೆ, ಸ್ವಯಂ ನಿಯಂತ್ರಿತರಾದವರಂತೆ ಕೆಲಸ ಮಾಡುವ ವಾತಾವರಣ, ಶೈಕ್ಷಣಿಕ ಮತ್ತು ಸರ್ಕಾರಿ ಕಛೇರಿಗಳಲ್ಲಿ ಮೂಡಿದಂತೆ ತೋರುತ್ತಿತ್ತು.

ಅಪ್ಪನನ್ನು ಊರಿಗೆ ಕಳಿಸಿ, ನಂತರದ ದಿನಗಳಲ್ಲಿ ಓದು, ತರಗತಿಗಳ ಪಾಠ ಮತ್ತು ಸಮಾಜವಾದಿ ಯುವಜನ ಸಭಾ, ಲೋಹಿಯಾ, ಅಂಬೇಡ್ಕರ್ ಚಿಂತನೆಗಳ ಕಡೆ ವಾಲಿಕೊಂಡಿದ್ದೆ. ಅಪ್ಪನಿಗೆ 80-85 ವರ್ಷಗಳಾಗಿರಬಹುದು. ಆಗಿದ್ದರೂ ಎಂದೂ ಮನೆಯಲ್ಲಿ ಕೂತು ವಿಶ್ರಾಂತಿ ಪಡೆಯುವ ಪರಿಪಾಟ ಅಪ್ಪನಿಗಿರಲಿಲ್ಲ. ಬೆಳಿಗ್ಗೆ ಎದ್ದು ದನಕರುಗಳ ಕೊಟ್ಟಿಗೆಯ ಕಸವನ್ನು ತಿಪ್ಪೆಗೆ ಹಾಕಿ, ಚಾ ಕುಡಿದು ತೋಟಕ್ಕೆ ಹೋದರೆ ಮತ್ತೆ ಬರುವುದು ರಾತ್ರಿಗೆ, ಬಂದು ಬಿಸಿನೀರಿನಲ್ಲಿ ಸ್ನಾನ ಮಾಡಿ ಊಟ ಮಾಡಿದರೆ ಅವನ ದಿನಚರಿ ಮುಗಿಯುತ್ತಿತ್ತು. ಯಾರಾದರೂ ಊರಿನಿಂದಲೋ ಇಲ್ಲ ನಮ್ಮ ಚಿಕ್ಕಪ್ಪಂದಿರಾಗಿದ್ದ ನಾಗಪ್ಪ, ಮಹಾದೇವಪ್ಪ ಮತ್ತು ಭೀಮಪ್ಪ ಇವರುಗಳು ಏನಾದರೂ ಮಾತಾಡೋ ನೆಪದಲ್ಲಿ ಸಂಜೆ ಸೇರಿಕೊಂಡರೆ ಸಾರಾಯಿ ಸಮಾರಾಧನೆ ಆಗಿ ಊಟ ಮಾಡುತ್ತಿದ್ದರು. ಇಲ್ಲ ಊರಲ್ಲಿನ ಲಿಂಗಾಯತ ಸ್ನೇಹಿತರಲ್ಲಿ ವಾರಕ್ಕೋ 15ದಿನಗಳಿಗೊಮ್ಮೆಯೋ ಗೌಪ್ಯವಾಗಿ ನಮ್ಮಲ್ಲಿನ ಕೋಣೆಯೊಂದರಲ್ಲಿ ಕೂತು ಪಾರ್ಟಿ ಮಾಡುತ್ತಿದ್ದರು. ಅವ್ವ ಲೊಟಗುಡುತ್ತಾ ಜೋಳದ ಹಪ್ಪಳವನ್ನೋ ಇಲ್ಲ ಮನೆಯಲ್ಲಿದ್ದ ಮೊಟ್ಟೆಗಳನ್ನು ಹುರಿದು ಅವರ ಪಾರ್ಟಿಗೆ ನೆಂಚಿಗೆ ಮಾಡಿ ಕೊಡುತ್ತಿದ್ದಳು.

ಅಪ್ಪನ ಅಣ್ಣ ರಂಗಪ್ಪಜ್ಜ ಇದ್ದು, ಅವನು ಮದುವೆಯಾಗಿ, ಮಕ್ಕಳು ಮನಿ ಎಂತೆಲ್ಲಾ ಆದ ಮೇಲೆ ಖಾವಿ ಧರಿಸಿ ಸಾಧುವಾಗಿದ್ದ. ಅವನು ಊರ ಹೊರಗಿನ ಗೋಮಾಳದಲ್ಲಿ ನಮ್ಮಜ್ಜಿ ಫಕ್ಕೀರಜ್ಜಿಯನ್ನು ಸಮಾಧಿ ಮಾಡಿದ್ದು. ಅಲ್ಲಿಯೇ ಒಂದು ವಿಶಾಲ ಗುಡಿಸಲು ಕಟ್ಟಿಕೊಂಡು, ದಿನವೂ ಅಜ್ಜಿಯ ಸಮಾಧಿಯನ್ನು ಪೂಜೆ ಮಾಡಿಕೊಂಡು, ನಮ್ಮ ಊರಿನ ಲಿಂಗಾಯತರ ಮನೆಯಿಂದ ಕಂತೆ ಭಿಕ್ಷೆ ಎತ್ತಿ ಅದರಲ್ಲಿಯೇ ಊಟ ಮಾಡಿಕೊಂಡಿದ್ದ. ಕ್ರಮೇಣ ಎಲ್ಲ ಜನರೂ ಸಾಧು ರಂಗಜ್ಜನ ಮಠ ಎಂದು ಗುರುತಿಸುತ್ತಿದ್ದರು. ಊರಿನ ಲಿಂಗಾಯತರು ಮತ್ತು ಇತರೆ ಜಾತಿಯ ಪ್ರಮುಖರೆಲ್ಲ ಶ್ರಾವಣಮಾಸದಲ್ಲಿ ದೇವಿಪುರಾಣವನ್ನೋ, ಭಜನೆಯನ್ನೋ ಮಾಡುತ್ತಾ ಕೊನೆಯಲ್ಲಿ ಕರಿಯ ಕೊಳವೆಯಂತಹ ವುದರಲ್ಲಿ ಸಾಂಬ್ರಾಣಿಯಂತಹದನ್ನು ನಾದಿ ಚಿಲುಮೆಯಲ್ಲಿ ತುಂಬಿ ಒಂದು ತುದಿಯಲ್ಲಿ ಬಟ್ಟೆಯನ್ನು ಸುತ್ತಿ ಎಡಗೈಯಲ್ಲಿ ಒಂದು ವಿಶೇಷ ಸ್ಟೈಲ್‌ನಲ್ಲಿ ಹಿಡಿದು ಜೋರಾಗಿ ದಮ್ಮು ಎಳೆಯುತ್ತಿದ್ದರು. ಬಲಕ್ಕೊ ಎಡಕ್ಕೊ ಕೂತವನೊಬ್ಬನು ಕಡ್ಡಿ ಗೀರಿ ಬೆಂಕಿ ಹಚ್ಚಿದರೆ ಉಸಿರು ಬಿಗಿ ಹಿಡಿದು ಎಳದಾಗ ರೈಲ್ವೆ ಉಗಿ ಬಂಡಿ ಹೊಗೆ ಉಗುಳಿದಂತೆ, ಮೂಗು ಬಾಯಿಯಿಂದ ಪುಂಖಾನುಪುಂಖವಾಗಿ ಹೊಗೆ ಹೊರಬರುತ್ತಿತ್ತು. ಹಾಗೆ ಎಳೆದವನು ಮತ್ತೊಬ್ಬನಿಗೆ ಭಯ ಮಿಶ್ರಿತ ಭಕ್ತಿಯಿಂದ ನಮಸ್ಕರಿಸಿ `ಗುರುವೇ ತಿಪ್ಪೇಶಾ’ ಎಂಬ ಉದ್ಘಾರದೊಂದಿಗೆ ಕೊಡುತ್ತಿದ್ದನು. ಆತನೂ ಸೇದಿ ಭಗವಂತನ ಕೃಪೆ, ದೇವಿಯ ಮಹಾತ್ಮೆ ಎಂದೇನೇನೋ ಮಾತಾಡಿಕೊಳ್ಳುತ್ತಿದ್ದರು. ಈ ಪಾರ್ಟಿಯಲ್ಲಿ ಅಪ್ಪನೂ ಆಗಾಗ ಅಲ್ಲಿ ಸೇರಿಕೊಳ್ಳುತ್ತಿದ್ದನು. ನಾವೆಲ್ಲ ಕೆಲವು ಹುಡುಗರು ನಮ್ಮ ಕೇರಿಯಿಂದ ಪ್ರಸಾದದ ಆಸೆಗಾಗಿ ಅಲ್ಲಿಗೆ ಹೋಗುತ್ತಿದ್ದೆವು. ಏಕೆಂದರೆ ಪ್ರತಿ ಭಜನೆ ಮುಗಿದಾಕ್ಷಣ ಪೂಜೆಗಾಗಿ ಒಡೆದ ತೆಂಗಿನ ಕಾಯಿಯ ಹಸಿ ಕೊಬ್ಬರಿಯ ಚೂರುಗಳು, ಜೊತೆಗೆ ಕತ್ತರಿಸಿದ ಬಾಳೆಯ ಹಣ್ಣು ಮಂಡಕ್ಕಿ ಕಾರ ಎಲ್ಲ ಸೇರಿಸಿ ಎಲ್ಲರಿಗೂ ಹಂಚುತ್ತಿದ್ದರು.

ಮಠದ ರಂಗಪ್ಪಜ್ಜ ನಮಗೆ ಸ್ವಂತ ಅಪ್ಪನ ಅಣ್ಣ, ದೊಡ್ಡಪ್ಪನಾಗಿದ್ದವರು ಎನ್ನುವ ವಿಷಯ ನಮಗಾರಿಗೂ ನಮ್ಮ ಬಾಲ್ಯ ಕಳೆಯುವವರೆಗೂ ಗೊತ್ತೇ ಇರಲಿಲ್ಲ. ನಾನು ಮತ್ತೆ ನಮ್ಮ ಕೇರಿಯ ಕಡೆಮನೆ ತಿಪ್ಪಣ್ಣ, ಕರಿಬಸಪ್ಪ, ಕುಬೇರ ಜೋಗಪ್ಪ ತುಂಗಣ್ಣ ಸಂಜೆ 4-5 ಗಂಟೆಯ ಸಮಯಕ್ಕೆ ಮಠದ ಕಡೆಗೆ ಹೋಗಿ ಅಲ್ಲಿಯೇ ಇದ್ದ ಬಾವಿಯಿಂದ ನೀರು ಸೇದಿ ಮಠದಲ್ಲಿನ ಗಿಡಬಳ್ಳಿಗಳಿಗೆ ಹೊಯ್ಯುತ್ತಿದ್ದವು. ನೀರು ಸೇದಿ ಹಾಕಿದ ನಾಟಕ ಮುಗಿದ ಮೇಲೆ ಎಲ್ಲರಿಗೂ ಅಲ್ಲಿದ್ದ ಮಣ್ಣಿನ ಮುಚ್ಚಳಗಳಲ್ಲಿ ಊರಲ್ಲಿನ ಕಂತೆ ಭಿಕ್ಷೆಯಲ್ಲಿ ತಂದ ರೊಟ್ಟಿ ಮತ್ತು ಎಲ್ಲರ ಮನೆಯ ಸಾರನ್ನು ಒಂದೇ ಮಡಕೆಯಲ್ಲಿ ಕುದಿಸಿಟ್ಟದ್ದನ್ನು ಬಡಿಸುತ್ತಿದ್ದರು. ಅದನ್ನೆಲ್ಲ ನಾವು ತುಂಬಾ ಖುಷಿಯಿಂದ ಉಣ್ಣುತ್ತಿದ್ದೆವು. ನಂತರ ಎಲ್ಲ ಮಣ್ಣಿನ ಮುಚ್ಚಳದಂತಿದ್ದ ತಟ್ಟೆಯನ್ನು ತೊಳೆದಿಟ್ಟು ಅವರ ಕಾಲಿಗೆ ನಮಸ್ಕರಿಸಿ ಮನೆಗೆ ಹೋಗುತ್ತಿದ್ದೆವು. ನಮ್ಮಲ್ಲೆಲ್ಲ ದೊಡ್ಡವನಾಗಿದ್ದ ಕಡೆಮನೆ ತಿಪ್ಪಣ್ಣನೇ ನಮ್ಮ ಎಲ್ಲರನ್ನೂ ಕೂಡಿಸಿ ಕರೆದುಕೊಂಡು ಹೋಗುತ್ತಿದ್ದ. ಎಲ್ಲರಿಗೂ ಬೇರೆ ಬೇರೆ ನೀಡಿದ ಮೇಲೆ ಮಠದೊಳಗೆ ಅಜ್ಜ ಹೋಗುತ್ತಿದ್ದರು. ನಮಗೆ ನೀಡಿದ ರೊಟ್ಟಿಯಲ್ಲಿ ಕಡೆಮನೆ ತಿಪ್ಪಣ್ಣನಿಗೆ ಹೆಚ್ಚುವರಿಯಾಗಿ ತನಗೆ ಕೊಡುವುದರ ಬಗ್ಗೆ ಬಂದವರಿಗೆಲ್ಲ ಮೊದಲೇ ಕೊಡುವಂತೆ ತಾಕೀತು ಮಾಡಿರುತ್ತಿದ್ದ. ಕೆಲವು ಸಮಯ ತಟ್ಟೆಗಳು ಕಡಿಮೆ ಇದ್ದುದರಿಂದ ಒಂದೇ ತಟ್ಟೆಯಲ್ಲಿ ಇಬ್ಬರು ಅಥವಾ ಮೂವರು ಕೂತು ಉಣ್ಣುವುದಾದರೆ, ನಮಗೆ ಸಾಕೆಂದು ಮೊದಲೇ ಎದ್ದು ಅವನಿಗೆ ಹೆಚ್ಚಿನ ರೊಟ್ಟಿ ಉಣ್ಣಲು ಅವಕಾಶ ಮಾಡಿಕೊಡಬೇಕಾಗಿತ್ತು. ಹಾಗೆ ಮಾಡದಿದ್ದರೆ ನಾಳೆ ಮತ್ತೆ ನಿಮ್ಮನ್ನು ಇಲ್ಲಿಗೆ ಕರೆತರುವುದಿಲ್ಲ ಎನ್ನೋ ಧಮಕಿ ಹಾಕುತ್ತಿದ್ದ. ಅವನು ನಮ್ಮೆಲ್ಲರಿಗಿಂತಲೂ 2-3 ವರ್ಷಕ್ಕೂ ಹಿರಿಯವನು, ನಮ್ಮ ಚಿಕ್ಕಪ್ಪ ಭೀಮಪ್ಪನ ಮಗನಾಗಿದ್ದ ಅವರಿಗೆ ಮನೆಯಲ್ಲಿ ಆರೇಳು ಹೆಣ್ಣು ಮಕ್ಕಳ ನಂತರ ಹುಟ್ಟಿದ ಕಾರಣ ಇವನಿಗೆ ಯಾವ ಕೆಲಸವನ್ನೂ ಹೇಳುತ್ತಿರಲಿಲ್ಲ. ವಿಶೇಷವಾಗಿ ಬುಗುರಿ, ಚಿನ್ನಿ ದಾಂಡು, ಕೀಳಾಪಟ್ಟಿ ಆಟಗಳಲ್ಲಿ ನಮಗೆ ಗುರುವಾಗಿದ್ದವನು. ಆದರೆ ಊರ ಎಲ್ಲರ ದೃಷ್ಟಿಯಲ್ಲಿ ದಂಡಪಿಂಡ ಎಂಬಂತೆ ಅವನನ್ನು ಅವರ ಮನೆಯವರೂ ಸೇರಿದಂತೆ ಊರಿನಲ್ಲಿ ಜನ ಪರಿಗಣಿಸಿದ್ದರು. ಆದರೀಗ ಒಂದು ದಂಡನ್ನೇ ಕಟ್ಟುವಷ್ಟು ಮಕ್ಕಳನ್ನು, ಮೊಮ್ಮಕ್ಕಳನ್ನು ಪಡೆದು ದುಡಿಮೆ ಮಾಡಿಕೊಂಡು ಹಾಯಾಗಿದ್ದಾನೆ. ಊರಲ್ಲಿರುವಾಗಲೆಲ್ಲ ನನ್ನನ್ನು ಸೆಳೆದುಕೊಂಡಿದ್ದ ಅವನು ನಂತರದ ದಿನಗಳಲ್ಲಿ ಸಣ್ಣ ವ್ಯತ್ಯಾಸದಿಂದ ದೂರವಾಗಿದ್ದಾನೆ. ಈಗ ಮತ್ತೆ ಕರೆದು ಮಾತಾಡಿಸಬೇಕೆಂದು ನೆನಪಾದಾಗ ಅನ್ನಿಸುತ್ತಿದೆ.

ಅಜ್ಜನ ಗುಡಿಸಲು ಅರ್ಥಾತ್ ಮಠ ಸುಮಾರು ಅರ್ಧ ಎಕರೆಯಲ್ಲಿ ಸುತ್ತ ಬೇಲಿಯ ಮಧ್ಯದಲ್ಲಿನ ಅಜ್ಜಿ ಸಮಾದಿಗೆ ಮತ್ತು ಅಜ್ಜಯ್ಯ ಇರುವಿಕೆಗೆ ತೆಂಗಿನ ಗರಿ ಮತ್ತು ಭತ್ತದ ಹುಲ್ಲಿನ ಮುಚ್ಚಳಿಕೆಯಿಂದ ಗಾಳಿ ಬಿಸಿಲು ಮಳೆಗಳಿಂದ ರಕ್ಷಣೆ ಪಡೆದಿತ್ತು. ಆಗಾಗ ಅಜ್ಜಯ್ಯ ಮಠ ಕಟ್ಟುತ್ತೇನೆಂದು ಹಣ ಸಂಗ್ರಹದಲ್ಲಿ ತೊಡಗಿದ್ದರೆಂದು, ಅಪ್ಪ ಮನೆಯಲ್ಲಿ ಮಾತಾಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ದೊಡ್ಡಪ್ಪ ಮನೆಗೆ ಬಂದರೆ ಅವರಿಗೆ ವಿಶೇಷವಾಗಿ ಪಾದಪೂಜೆ ಮಾಡಿ ಆ ನೀರನ್ನೆಲ್ಲ ಮನೆಯ ಎಲ್ಲ ದಿಕ್ಕುಗಳಿಗೂ ಪ್ರೋಕ್ಷಿಸುತ್ತಿದ್ದರು. ಹಾಗೆ ನಮ್ಮಲ್ಲಿನ ಇತರೆ ನಾಲ್ಕು ಚಲವಾದಿ ಮನೆತನದವರೂ ಕರೆದು ಪಾದಪೂಜೆ ಮಾಡುತ್ತಿದ್ದರು. ನಮ್ಮೂರ ಹತ್ತಿರದ ಕಡ್ಲಬಾಳ ಊರಿನ ತೇರಿಗೆ ಮತ್ತು ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿಯ ರಥೋತ್ಸವಕ್ಕೆ ಹೋಗಿ ವಾರಗಟ್ಟಲೇ ಅಲ್ಲಿದ್ದು, ಅನೇಕ ಇತರೆ ಸಾಧು ಸಂತರ ಸಂಗಡದಲ್ಲಿ ಭಜನೆ ಮತ್ತು ಗಾಂಜಾ ಸೇವನೆ ಮಾಡುತ್ತಿದ್ದುದರ ಬಗ್ಗೆ ಅವರ ಜೊತೆ ಹೋಗಿ ಬಂದವರು ಆಗಾಗ ಮಾತಾಡಿಕೊಳ್ಳುತ್ತಿದ್ದರು.

ಈ ರೀತಿಯಲ್ಲಿ ಇದ್ದ ದೊಡ್ಡಪ್ಪ ನಾನು ಸಾಗರದ ಹೈಸ್ಕೂಲಿನಲ್ಲಿ ಓದುವ ಸಮಯದಲ್ಲಿ ಒಂದೆರಡು ದಿನಗಳ ಅಸ್ವಸ್ಥತೆಯಿಂದ ಹರಿಹರದ ಹತ್ತಿರವಿರುವ ಗುತ್ತೂರಿನ ಗುರು ಬಸಜ್ಜನ ಮಠದಲ್ಲಿ ತೀರಿಹೋಗಿದ್ದರು. ಅಲ್ಲಿಯ ಮಠದಲ್ಲಿಯೇ ಅವರ ಸಮಾಧಿ ಮಾಡಿದ್ದಾರೆ. ಅದೇ ಮಠದಲ್ಲಿ ನನ್ನ ಗುರುಗಳಾಗಿದ್ದ
ಪ್ರೊ. ಬಿ. ಕೃಷ್ಣಪ್ಪನವರು ಮತ್ತವರ ತಂಗಿ ಹಾಲಮ್ಮ ತಮ್ಮ ಬಾಲ್ಯದ ದಿನಗಳಲ್ಲಿ ಗಿಡಗಳಿಗೆ ನೀರು ಹಾಕುವುದು, ಹೂ ಕೀಳುವ ಸೇವೆ ಮಾಡುತ್ತಿದ್ದರು ಎಂಬುದನ್ನು ಕೃಷ್ಣಪ್ಪನವರ ತಂಗಿ ಹಾಲಜ್ಜಿ ಆಗಾಗ ನಮ್ಮೂರಿಗೆ ಬಂದಾಗ ಜ್ಞಾಪಿಸಿಕೊಳ್ಳುತ್ತಿದ್ದರು. ಅಪ್ಪನ ಅಣ್ಣ ಈ ರೀತಿಯ ಜೀವನ ಸಾಗಿಸುತ್ತಾ ಕಾಲವಾದರೆ ಅಪ್ಪ ಒಂದಲ್ಲವೆಂದರೂ ಎರಡು ಮದುವೆಯಾಗಿ, ಮ್ಯಾಳ ಮಾಡುತ್ತಾ ಅವರೆಲ್ಲರಿಗೂ ನಾಯಕನಾಗಿ, ಮಾಡಿದ ಹೊಲಮನಿ ಕೆಲಸಗಳಲ್ಲಿ ಸೈ ಎನಿಸಿಕೊಂಡು, ನಾನು ಎಂ.ಎ. ಮಾಡಿ ಅಧ್ಯಾಪಕನಾಗಿರುವವರೆಗೆ ಬದುಕಿದ್ದೇ ಒಂದು ಪವಾಡ. ಸದಾ ಕೆಲಸದಲ್ಲಿ ತೊಡಗಿರುತ್ತಿದ್ದ ಅಪ್ಪ ಸಣ್ಣಪುಟ್ಟ ಖಾಯಿಲೆಗಳಿಗೆ ಜಗ್ಗುತ್ತಿರಲಿಲ್ಲ ಯವ್ವನದ ಕಾಲಘಟ್ಟದಲ್ಲಿ ಎಲೆ ಅಡಿಕೆ ತಂಬಾಕು ಬೀಡಿ ಸೇದುತ್ತಿದ್ದ ಅಪ್ಪ ನಂತರದ ದಿನಗಳಲ್ಲಿ ಕೆಮ್ಮು ದಮ್ಮುಗಳ ಕಾಟದಿಂದ ಅವನ್ನೆಲ್ಲ ಬಿಟ್ಟು ಬಿಟ್ಟಿದ್ದನು. ನಾನು ಕೆಲಸಕ್ಕೆ ಸೇರಿ ಊರಿಗೆ ಹೋದಾಗ ಅವ್ವನಿಗೆ, ಓಬಜ್ಜನಿಗೆ, ಅಪ್ಪನಿಗೆ ವಿಶೇಷವಾಗಿ ಸಣ್ಣ ಮೊತ್ತದ ಹಣ ಕೊಡಲು ಹೋದಾಗಲೆಲ್ಲ `ನನಗ್ಯಾಕೆ ಕೊಡುತ್ತೀ, ನಿಮ್ಮವ್ವನಿಗೇ ಕೊಡು’ ಎಂದು ಹೇಳಿ ಸುಮ್ಮನಾಗುತ್ತಿದ್ದ. ಇಂತಹ ಅಪ್ಪನನ್ನು ನಾನು ಅಧ್ಯಾಪಕನಾಗಿ ಕೆಲಸಕ್ಕೆ ಸೇರಿದ ಒಂದು ವರ್ಷ ತುಂಬಿದ ದಿನ (4.12.1975)ರಲ್ಲಿ ನಾನು ಎರಡನೇ ಬಿ.ಎ. ಕ್ಲಾಸ್ ರೂಮ್‌ನಲ್ಲಿ ಪಾಠ ಮಾಡುವಾಗ ತಂತಿ ಸಂದೇಶದಲ್ಲಿ ಅಪ್ಪ ತೀರಿದ ಸುದ್ದಿ ಹೊತ್ತು ತಂದಿತ್ತು. ಅಂದಿಗೆ ಸಂಬಳ ಬಂದು 4 ದಿನಗಳಾಗಿದ್ದರೂ ಎಲ್ಲಾ ಬಟವಾಡೆ ಮಾಡಿ ನನ್ನಲ್ಲಿ 50ರೂಗಳು ಮಾತ್ರ ಜೇಬಿನಲ್ಲಿದ್ದವು. ನೇರ ರಮಾವಿಲಾಸ್ ರಸ್ತೆಯಲ್ಲಿದ್ದ ಮಯೂರ ಪ್ರಿಂರ‍್ಸ್ನಲ್ಲಿಗೆ ಹೋಗಿ ಪಿ. ಮಲ್ಲೇಶ್ ಅವರಿಂದ 100 ರೂಗಳ ಸಾಲ ಪಡೆದು ನಾನು ಮತ್ತು ನನ್ನ ಕಾಲೇಜಿನಲ್ಲಿಯೇ ಓದುತ್ತಿದ್ದ ನಮ್ಮೂರಿನ ಹುಡುಗ ಮಾಂತೇಶಿಯನ್ನು ಕರೆದುಕೊಂಡು ರಾತ್ರಿಯ ಬಸ್ ಹತ್ತಿ ಬೆಳಗಿನ ಜಾವಕ್ಕೆ ಊರಿಗೆ ಬಂದು ಸೇರಿದೆ. ಅಪ್ಪನ ಸೋತ ಮುಖನೋಡಿ ನಾನು ತೀವ್ರ ಮೌನಕ್ಕೆ ಜಾರಿದೆ. ಎಂದೂ ಏನಲೇ ಎಂದು ಗದರಿಸದೆ ತನ್ನೆಲ್ಲ ಶಕ್ತಿ ಮೀರಿದ ದುಡಿಮೆಯಿಂದ, ಪ್ರೀತಿಯಿಂದ ನಮ್ಮನ್ನು ಸಾಕಿದ ಅಪ್ಪ, ಅವನ ಜೀವನದ ಹೋರಾಟಕ್ಕೆ ಅಂತ್ಯ ಹಾಡಿದ್ದ. ನಮ್ಮೆಲ್ಲರನ್ನು ತಿದ್ದಿ ಬೆಳೆಸಿ ಬದುಕಲು ನಮಗೆ ಅನುವು ಮಾಡಿ ಇಹಲೋಕದ ವ್ಯಾಪಾರ ಮುಗಿಸಿದ್ದ ಅಪ್ಪನ ನೆನಪು ನನ್ನ ಮನಸ್ಸಿನಾಳದಲ್ಲಿ ದಿನವೂ ಸ್ಫೂರ್ತಿಯಾಗಿ, ಸಾಮಾನ್ಯ ನ್ಯಾಯದ ದೊಂದಿಯಾಗಿ ಅನುರಣಿಸುತ್ತಿರುತ್ತಾನೆ.

ನಾನು ಕೆ.ಜಿ. ಕೊಪ್ಪಲಿನ ಮನೆಯಿಂದ ಮಹಾರಾಜ ಕಾಲೇಜಿಗೆ ಹೋಗಿ ಬರುತ್ತಿದ್ದೆ. ಬಿಡುವಿನ ವೇಳೆಯಲ್ಲಿ ನಾನು ಮಹೇಶ ಇತರೆ ಸ್ನೇಹಿತರು ಜೆಪಿ ಚಳುವಳಿ ನವನಿರ್ಮಾಣ ಕ್ರಾಂತಿ, ಜಾತಿ ವಿನಾಶ ಸಮ್ಮೇಳನ, ಬೂಸಾ ಚಳುವಳಿಗಳಲ್ಲಿ ಭಾಗವಹಿಸಿದ್ದೆವು. ಈ ಎಲ್ಲ ಸಂಘಟನೆಗಳ ಮೂಲ ಹೋರಾಟಗಾರರು ಮೈಸೂರಿನಲ್ಲಿದ್ದ ಎಂ.ಡಿ. ನಂಜುಂಡಸ್ವಾಮಿ, ಪಿ. ಮಲ್ಲೇಶ್, ಕೆ. ರಾಮದಾಸ್, ಮಾದೇವ, ಭಕ್ತ, ರಾಜಶೇಖರ ಕೋಟಿ, ರಾಮದೇವ ರಾಕೆ, ನಂಜುಂಡೇ ಗೌಡ, ಗೋವಿಂದಯ್ಯ, ಶಂಕರಲಿಂಗಪ್ಪ, ಗೊಟ್ಟಿಗೆರೆ ಶಿವರಾಜು, ಇಂದೂಧರ ಹೊನ್ನಾಪುರ, ದೇವನೂರ ಶಿವಮಲ್ಲು, ವಿಶ್ವವಿದ್ಯಾಲಯದ ಗಂಗೋತ್ರಿಯಿಂದ ಪ್ರೊ. ರಾಮಲಿಂಗಂ, ಕೆ.ಎಂ. ಜಯರಾಮಯ್ಯ, ಹೊರೆಯಾಲ ದೊರೆಸ್ವಾಮಿ, ಚಂದ್ರಶೇಖರ ತಾಳ್ಯ, ಎಲ್ಲರೂ ಇದೇ ಪೂರ್ಣಾವಧಿ ಕೆಲಸವೆಂಬಂತೆ ತೊಡಗಿಸಿಕೊಂಡಿದ್ದರು. ಹಾಗೆಯೇ ರಾಷ್ಟ್ರ ಮತ್ತು ರಾಜ್ಯ ಸರ್ಕಾರಗಳಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ `ಮ್ಯಾನ್ ಕೈಂಡ್’, `ಬಂಡಾಯ’, `ಶೋಷಿತ’, `ನರ’, `ಪಂಚಮ’ ಎಂಬ ಅಕಾಲಿಕ ಪತ್ರಿಕೆಗಳನ್ನು ಅಸಾಧ್ಯ ಹಣಕಾಸಿನ ತೊಂದರೆಗಳ ನಡುವೆಯೂ ಹೊರ ತರುತ್ತಿದ್ದರು.

ಆ ದಿನಗಳಲ್ಲಿ ಇಂತಹದೇ ಪತ್ರಿಕೆಯಲ್ಲಿ ನಮ್ಮೂರಿನಲ್ಲಿ ನಡೆದ ಹಿಂದುಳಿದ ಜಾತಿಯ ಹುಡುಗಿಯೊಬ್ಬಳನ್ನು ಲಿಂಗಾಯತರ ಹುಡುಗನೊಬ್ಬ ಕೆಣಕಿದ ಬಗ್ಗೆ ನಾನು ಊರಿಗೆ ಹೋದಾಗ ತಿಳಿಯಿತು. ಈ ಕೃತ್ಯ ಎಸಗಿದವನನ್ನು ಯಾರೂ ವಿಚಾರಿಸುವಂತಿರಲಿಲ್ಲ. ಹುಡುಗಿಯ ಕಡೆಯವರು ಯಾರೂ ಅದನ್ನು ಪ್ರಶ್ನಿಸಲೂ ಇಲ್ಲ. ಇದೆಲ್ಲ ಗೊತ್ತಾದ ನಾನು ನರ ಬಂಡಾಯದ ಪತ್ರಿಕೆಗೆ ಬರೆದು ಪ್ರಕಟಿಸಿದ್ದೆ. ಆ ಪ್ರತಿಗಳನ್ನು ಮಾಂತೇಶಿ ಊರಿಗೆ ತೆಗೆದುಕೊಂಡು ಹೋಗಿ ಊರಲ್ಲೆಲ್ಲಾ ಹಂಚಿದನು. ವಿಷಯ ತಿಳಿದ ಊರಿನ ಪ್ರಮುಖರು, ಈ ರುದ್ರಪ್ಪ ಊರ ಮಾನ ಹರಾಜು ಹಾಕಿದ ಎಂದೆಲ್ಲ ಕೂಗಾಡಿದ್ದರು.

`ಅವನು ಊರಿಗೆ ಬರಲಿ ವಿಚಾರಿಸುತ್ತೇವೆ’ ಎಂದೆಲ್ಲಾ ಕೂಗಾಡಿದರು. ನಾನು ತಿಂಗಳೊಪ್ಪತ್ತಿನಲ್ಲಿ ಊರಿಗೆ ಹೋದಾಗ ಯಾರೂ ಆ ಬಗ್ಗೆ ಮಾತಾಡಲಿಲ್ಲ. ಮುಖ್ಯ ಕಾರಣ ಬರೆದುದೆಲ್ಲ ನಿಜವಾದ ಘಟನೆಯಾಗಿತ್ತು. ಮತ್ತೆ ಹೆಚ್ಚು ಕೆದಕಿದರೆ ತಮಗೆ ಇದು ಅವಮಾನದ ಘಟನೆಯ ಮರು ಪ್ರಸ್ತಾಪವಾಗಿ ವಿಪರೀತಕ್ಕೆ ಹೋಗಬಹುದೆಂದು ಸುಮ್ಮನಾಗಿದ್ದರು. ಹೀಗೆ ನಾನು ಮೈಸೂರಲ್ಲಿದ್ದಾಗ ಊರ ಘಟನೆಗಳಿಗೆ ಸ್ಪಂದಿಸುತ್ತಾ ಇರುವುದು ಮೈಸೂರಿನಲ್ಲಿದ್ದ ಪ್ರಗತಿಪರ ಸಂಘಟನೆಗಳ ಮತ್ತು ವಿಚಾರವಂತರ ಒಡನಾಟವೇ ಅದಕ್ಕೆ ಕಾರಣವಾಗಿತ್ತು ಎಂಬುದನ್ನ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಮುಂದುವರಿಯುವುದು

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ

Published

on

ಸುದ್ದಿದಿನ,ದಾವಣಗೆರೆ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಕ ಸಾ ಪ ಮಾಜಿ ಅಧ್ಯಕ್ಷ ಪ್ರೊ . ಎಸ್ ಬಿ ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿನಿಧಿ ಪುಸ್ತಕ ಬಹುಮಾನ ಪ್ರಶಸ್ತಿಯನ್ನು ತರಳಬಾಳು ಬಡಾವಣೆಯ ಅವರ ನಿವಾಸದಲ್ಲಿ ಜಿಲ್ಲಾ ಕ ಸಾ ಪ ಅಧ್ಯಕ್ಷ ಬಿ ವಾಮದೇವಪ್ಪ ಮತ್ತು ಪದಾಧಿಕಾರಿಗಳು ಇಂದು ಪ್ರದಾನ ಮಾಡಿ ಗೌರವಿಸಿದರು.

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು  ಅನುವಾದ ಸಾಹಿತ್ಯಕ್ಕಾಗಿ ನೀಡುವ 2023ರ ‘ಶ್ರೀಮತಿ ಭಾರತಿ ಮೋಹನ ಕೋಟಿ ದತ್ತಿ ಪಶಸ್ತಿ’ ಗೆ  ಪ್ರೊ. ಎಸ್.ಬಿ.ರಂಗನಾಥ್  ಅನುವಾದಿಸಿದ ಖ್ಯಾತ ಲೇಖಕ ಶಶಿ ತರೂರು ಅವರ ‘ಕಗ್ಗತ್ತಲ ಕಾಲ’ ಕೃತಿಯು ಆಯ್ಕೆಯಾಗಿತ್ತು. ಶಶಿ ತರೂರ್ ಅವರ ಇಂಗ್ಲಿಷ್ An Era of Darkness ಎಂಬ ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಇದನ್ನು ಪ್ರೊ. ರಂಗನಾಥ್ ಅವರು ಕೊರೊನಾ ಕಾಲದ ಲಾಕ್ ಡೌನ್‌ ಸಂದರ್ಭದಲ್ಲಿ ಕನ್ನಡಕ್ಕೆ ಅನುವಾದಿಸಿದ್ದರು. 2022ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ಕೃತಿಯನ್ನು ಪ್ರಕಟಿಸಿತ್ತು.

ಪ್ರೊ. ರಂಗನಾಥ್ ಇದುವರೆಗೂ ‘ಪ್ರಜಾವಾಣಿ ‘ ಯ ಅಂಕಣ ಬರಹಗಳ ಸಂಗ್ರಹ ‘ಎಲೆಲೆ ಮಧುಬಾಲೆ’, ‘ಕಚಗುಳಿ(ಗೆ) ಕಾಲ’ ಸೇರಿದಂತೆ ಹತ್ತು ಕೃತಿಗಳ ಲೇಖಕರು. ಬಂಗಾಳಿಯ ಪ್ರಸಿದ್ಧ ಕಾದಂಬರಿಗಳಾದ ‘ಭುವನ್ ಸೋಮ್’ , ‘ಪ್ರತಿದ್ವಂದಿ’ ಮುಂತಾದ ಏಳು ಕೃತಿಗಳನ್ನು ಅನುವಾದಿಸಿದ್ದಾರೆ.  ಇವರ ‘ ಟಿಪ್ಪು ಸುಲ್ತಾನನ ಖಡ್ಗ’ ಕೃತಿಯು ಮೂರು ಮುದ್ರಣಗಳನ್ನು ಕಂಡಿದೆ. ಇತ್ತೀಚೆಗೆ ಅನುವಾದಿಸಿದ ನಿವೃತ್ತ ಐ ಎ ಎಸ್ ಅಧಿಕಾರಿ ಎಂ ಮದನಗೋಪಾಲ್ ಅವರ ‘ಕಾಮನ ಬಿಲ್ಲನು ಬಂಬತ್ತಿ’ ಕೃತಿಯು ರಾಯಚೂರಿನಲ್ಲಿ ಲೋಕಾರ್ಪಣೆಗೊಂಡಿತ್ತು.

ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಪ್ರೊ.ಎಸ್.ಬಿ.ರಂಗನಾಥ್ ಅವರು ತಮ್ಮ ತೀವ್ರ ಅನಾರೋಗ್ಯದ ಕಾರಣದಿಂದ ಹಾಜರಿರಲು ಸಾಧ್ಯವಾಗಿರಲಿಲ್ಲ. ಈಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ನಿರ್ದೇಶನದ ಮೇರೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಎಸ್.ಬಿ.ರಂಗನಾಥ್ ಅವರ ನಿವಾಸಕ್ಕೆ ತೆರಳಿ ಅವರಿಗೆ ಪ್ರಶಸ್ತಿ ಫಲಕ ಮತ್ತು ಹತ್ತು ಸಾವಿರ ನಗದನ್ನು  ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪರಿಷತ್ತಿನ ಪದಾಧಿಕಾರಿಗಳಾದ ರಾಘವೇಂದ್ರ ನಾಯರ್, ಎಸ್ ಎಂ ಮಲ್ಲಮ್ಮ, ರುದ್ರಾಕ್ಷಿ ಬಾಯಿ ಪುಟ್ಟನಾಯಕ್, ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಕಾರ್ಯದರ್ಶಿಗಳಾದ ನಾಗರಾಜ ಸಿರಿಗೆರೆ, ದಾಗಿನಕಟ್ಟೆ ಪರಮೇಶ್ವರಪ್ಪ, ನಿರ್ದೇಶಕರಾದ ಷಡಾಕ್ಷರಪ್ಪ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ

Published

on

ಸುದ್ದಿದಿನ,ಭದ್ರಾವತಿ: ಆಕಾಶವಾಣಿ ಭದ್ರಾವತಿ ಕೇಂದ್ರದ 60ನೇ ವರ್ಷದ ವಜ್ರಮಹೋತ್ಸವದ ಅಂಗವಾಗಿ ಶಿವಮೊಗ್ಗದ ಕುವೆಂಪು ವಿ.ವಿ.ಯ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ಸಹಯೋಗದಲ್ಲಿ ವಿಶ್ವ ಮಾನವ ಡಾ. ಅಂಬೇಡ್ಕರ್ ಅವರ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿಯನ್ನು ಪ್ರಸಾರ ಮಾಡಲಿದ್ದು, ಜೂನ್ 11 ರಂದು ಬೆಳಗ್ಗೆ 7.15 ಕ್ಕೆ ಕುವೆಂಪು ವಿವಿಯ ಕುಲಪತಿ ಡಾ. ಶರತ್ ಅನಂತಮೂರ್ತಿ ಅವರ ಮುನ್ನುಡಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಈ ಸರಣಿಯಲ್ಲಿ ಒಟ್ಟು 52 ಕಾರ್ಯಕ್ರಮಗಳಿದ್ದು, ಪ್ರತೀ ಮಂಗಳವಾರ ಬೆಳಗ್ಗೆ 7.15 ಕ್ಕೆ ಪ್ರಸಾರ ಮಾಡಲಿದೆ. ಪ್ರಭಾವಿತ ಮಹನೀಯರ ಅನಿಸಿಕೆಯನ್ನು ಹಂಚಿಕೊಳ್ಳುವುದರೊಟ್ಟಿಗೆ ದೇಶವಿದೇಶದ ಕೇಳುಗರು ತಮ್ಮ ಮೇಲೆ ಅಂಬೇಡ್ಕರ್ ಅವರ ಪ್ರಭಾವನ್ನೂ ಆಕಾಶವಾಣಿಯಲ್ಲಿ ಹಂಚಿಕೊಳ್ಳಲು ವಾಟ್ಸ್ ಆಪ್ ಮೂಲಕ ಅವಕಾಶ ಕಲ್ಪಿಸಿದೆ.

ಕಾರ್ಯಕ್ರಮವು FM 103.05 ಹಾಗೂ MW 675 khz ನಲ್ಲಿ ಕೇಳುವುದರೊಟ್ಟಿಗೆ ಜಗತ್ತಿನಾದ್ಯಂತ Akashavani Bhadravathi live streaming ಮತ್ತು prasarbharati news on air app ನಲ್ಲಿ ಪ್ರಸಾರ ಸಮಯದಲ್ಲಿ ಹಾಗೂ Akashavani Bhadravati YouTube ನಲ್ಲಿ ಪ್ರಸಾರದ ನಂತವೂ ಕೇಳಬಹುದು ಎಂದು ಕಾರ್ಯಕ್ರಮದ ಮುಖ್ಯಸ್ಥ ಎಸ್.ಆರ್. ಭಟ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending