Connect with us

ಅಂತರಂಗ

ಅರಿಮೆಯ ಅರಿವಿರಲಿ – 18 : ಅಮೌಲ್ಯದ ಮೌಲ್ಯ ಮಾಪನ

Published

on

Art : GEOFFREY JOHNSON
  • ಯೋಗೇಶ್ ಮಾಸ್ಟರ್

ಬಲಿದಾನದರಿಮೆಯು ಮೊಳೆಯುವುದು ಹೇಗೆ? ಕೆಲವರು ಬಲಿಗಂಬಕ್ಕೆ ತಮ್ಮನ್ನು ತಾವು ಬಲಿಪಶುವನ್ನಾಗಿಸಿಕೊಂಡು ನಡೆದರೆ, ಮತ್ತೆ ಕೆಲವರು ತಮ್ಮನ್ನು ತಾವು ಗೆಲುವ ನಾಯಕರನ್ನಾಗಿಸಿಕೊಂಡು ನಡೆಯುತ್ತಾರೆ. ಏಕೆ ಹೀಗೆ?‌ಬಹಳ ಗಂಭೀರವಾಗಿ ಗಮನಿಸಬೇಕು ಮತ್ತು ಅನುಕಂಪದಿಂದ ವಿಷಯವನ್ನು ಗ್ರಹಿಸಬೇಕು.

ಸಾಮಾನ್ಯವಾಗಿ ಅರಿಮೆಗಳು ಮೊಳೆಯುವುದು ಮತ್ತು ಬೆಳೆಯುವುದು ಬಾಲ್ಯದಲ್ಲಿಯೇ. ಕೆಲವು ಅರಿಮೆಗಳು ಅಂಕುರಿಸಿ ಸಹಜವಾದ ಅರಿವು ಬರುತ್ತಾ ಅಳಿಸಿ ಹೋಗುತ್ತವೆ. ಮತ್ತೆ ಕೆಲವು ಮೊಳೆತು ಬೆಳೆದು ಬಲಿತು ಬೆಳೆ ನೀಡುತ್ತವೆ. ಈ ಬಲಿದಾನದರಿಮೆಯೂ ಕೂಡಾ ಸಾಮಾನ್ಯವಾಗಿ ಬಾಲ್ಯದಲ್ಲಿ ತಂದೆ ತಾಯಿಗಳಿಂದ ಸಿಗುವಂತಹ ಬಳುವಳಿಯೇ. ಕುಟುಂಬದ ಹಿರಿಯರ ದ್ವಂದ್ವ ಮತ್ತು ಮಿಶ್ರವರ್ತನೆಗಳು, ಅವರು ಪ್ರತಿಪಾದಿಸುವ ಮೌಲ್ಯಗಳು ಕಾರಣವಾಗುತ್ತವೆ.

ಸುಮ್ಮನೆ ಹೀಗಂತ ಅಂದುಕೊಳ್ಳಿ; ನಿಮ್ಮ ತಾಯಿಯು ಏನೋ ಓದಬೇಕು ಮತ್ತು ಉದ್ಯೋಗದಲ್ಲಿ ಪ್ರಗತಿ ಕಾಣಬೇಕು ಎಂದು ಕನಸಿರುತ್ತಾರೆ. ಆದರೆ ಅದು ಆಗದೇ ಕನಸನ್ನು ಕನವರಿಸಿಕೊಂಡೇ, ಅದನ್ನು ತಾಂತ್ರಿಕವಾಗಿ ತ್ಯಾಗ ಮಾಡಿದ್ದು ನಿಮಗಾಗಿ ಮನೆಯಲ್ಲಿ ಗೇಯುತ್ತಿರುತ್ತಾರೆ. ಹಾಗೆ ಹೆಣಗುವುದು ಒಂದು ಮೌಲ್ಯವೆಂದು ಬೇರೆ ಭಾವಿಸಿರುತ್ತಾರೆ. ಹೆಣ್ಣಾದವಳು ಈ ಬಗೆಯ ತ್ಯಾಗಗಳಿಗೆ ಅಣಿಯಾಗಿರಲೇ ಬೇಕು ಎಂದು ಭಾವಿಸಿರುತ್ತಾರೆ. ಅದು ಅವರಿಗೆ ಮೌಲ್ಯ. ಸಾಲದಕ್ಕೆ ಹೆಣ್ಣಿಗೆ ಬಿರುದು ಬಾವಲಿಗಳನ್ನಿತ್ತು ಅವಳನ್ನು ತ್ಯಾಗಕ್ಕೆ ಸಜ್ಜುಗೊಳಿಸಿರುತ್ತಾರೆ. ಹೆಣ್ಣು ಸಂಸಾರದ ಕಣ್ಣು. ಅವಳಿಗೆ ಭೂಮಿಯಷ್ಟು ಸಹನೆ. ಅದೂ ಇದೂ ಪರಾಕುಗಳ ಒಂದು ಪಟ್ಟಿ. ಆ ಪಟ್ಟಿಯನ್ನು ಆಕೆಯ ಒಳಮನಸ್ಸು ಬಾಯಿಪಾಠ ಮಾಡಿಕೊಂಡಿದ್ದು ಅದಕ್ಕೆ ತಕ್ಕುದಾಗಿ ನಡೆದುಕೊಳ್ಳಲು ಯತ್ನಿಸುತ್ತಿರುತ್ತಾಳೆ. ಅವಳ ವೈಯಕ್ತಿಕ ಬಯಕೆಗಳೂ ಭುಗಿಲೆದ್ದು ಕುಣಿಯುತ್ತಿರುತ್ತವೆ.

ಈ ಎರಡರ ತಾಕಲಾಟದಲ್ಲಿ ಸ್ವಭಾವತಃ ಮೃದು ಅಥವಾ ದುರ್ಬಲ ಮನಸ್ಕರಾದರೆ ವ್ಯವಸ್ಥೆ ಮತ್ತು ಪರಿಸ್ಥಿತಿಗಳ ಕೈ ಮೇಲಾಗುತ್ತದೆ. ಅವರು ಬಲಿದಾನದರಿಮೆಯ ನೇರ ಬಲಿಪಶುಗಳಾಗಿರುತ್ತಾರೆ. ಈ ಘನವೆತ್ತ ತ್ಯಾಗದ ಪರಂಪರೆಯನ್ನು ನೀವೂ ಕೂಡಾ ಬಹಳ ಶ್ರದ್ಧೆಯಿಂದ ವ್ರತ ಸ್ವೀಕರಿಸುವಂತೆ ಸ್ವೀಕರಿಸಿದ್ದಿರಬಹುದು. ಏಕೆಂದರೆ ಆ ತಾಯಿಯೇ ನಿಮ್ಮ ಪ್ರತಿದಿನದ ಜೀವಂತ ಮಾದರಿ. ಅವರದೇ ಬಿತ್ತನೆ. ಅವರಿಂದಲೇ ಮೊಳಕೆಯೊಡೆಯುವುದು, ಚಿಗುರೊಡೆಯುವುದು, ಟಿಸಿಲೊಡೆಯುವುದು, ಮೊಗ್ಗರಳಿ ಹೂವಾಗುವುದು. ಇದೊಂದು ಉದಾಹರಣೆಯಷ್ಟೇ. ಯಾವುದನ್ನೋ ಮೌಲ್ಯವೆಂದು ಚಿನ್ನದ ಚೌಕಟ್ಟಿನಲ್ಲಿ ಬರೆದಿಟ್ಟಿರುತ್ತದೆಯೋ ಅದು ನಿಮ್ಮ ವ್ಯಕ್ತಿಗತ ಬಯಕೆಯ, ಉತ್ಕಟ ಬಯಕೆಯ ಮರಣಶಾಸನವಾಗಿರಬಹುದು. ಉತ್ಕಟ ಬಯಕೆಗಳ ಮರಣಶಾಸನಗಳೇ ಅರಿಮೆಯ ಲಕ್ಷಣಗಳು.

ತಂದೆ ತಾಯಿಯರ ಎಷ್ಟೋ ತಾಕಲಾಟಗಳನ್ನು, ತೊಳಲಾಟಗಳನ್ನು, ತಿಕ್ಕಲುತನಗಳನ್ನು ಪರಮಶ್ರದ್ಧೆಯಿಂದ ಮಕ್ಕಳು ಎರವಲು ಪಡೆದಿರುತ್ತಾರೆ. ಅಲ್ಲಿಗೆ ಮನೆಯೇ ಒಂದು ಬಲಿಗಂಬ.ಮನೆಯವರೆಲ್ಲರೂ ಬಲಿಪಶುಗಳು ಸ್ವಯಿಚ್ಛೆಯಿಂದ, ಅನಿವಾರ್ಯವಾಗಿ ಅರಿಮೆಯ ಬಲಿಪಶುಗಳು.

ಮೌಲ್ಯಗಳ ಹೇರುವ ಸಮಾಜ

ಮನೆಯೆಂಬ ಬಾಣಲಿಯಿಂದ ಜಿಗಿದು ಬಂದರೆ ನಿಮಗೆ ಹೊರಗೆ ಸಮಾಜವೆಂಬ ಬೆಂಕಿಯಿದೆ. ವ್ಯಕ್ತಿಯೊಬ್ಬನ ಆಂತರಿಕವಾದ ಉತ್ಕಟ ಬಯಕೆಗಳೇನೇ ಇರಲಿ, ಸಾಮಾಜಿಕ ಕಟ್ಟುಪಾಡುಗಳು, ಸಾಂಸ್ಕೃತಿಕ ನಿರೀಕ್ಷೆಗಳು ಅರಿಮೆಗಳನ್ನು ಬಲಪಡಿಸುತ್ತವೆ.
ಉದಾಹರಣೆಗೆ ನಾನೊಬ್ಬ ಜೈನನೋ, ಬ್ರಾಹ್ಮಣನೋ, ಲಿಂಗಾಯತನೋ ಆಗಿದ್ದರೆ ನನ್ನ ವ್ಯಕ್ತಿಗತವಾದ ಬಯಕೆಗಳೇನೇ ಇರಲಿ. ಚಿಕನ್ ಮಂಚೂರಿಯ ತಿನ್ನಬೇಕೆಂದು ಬಯಸಿದರೆ, ಸಮಾಜ ಅದನ್ನು ವಿಚಿತ್ರವಾಗಿ ಅಥವಾ ವಿಲಕ್ಷಣವಾಗಿ ನೋಡುತ್ತದೆ. “ಬಿಡಪ್ಪಾ ಬ್ರಾಹ್ಮಣರು, ಲಿಂಗಾಯತರೆಲ್ಲಾ ತಿನ್ನಕ್ಕೆ ಶುರು ಮಾಡಿದ್ದರಿಂದ ಮಾಂಸದ ಬೆಲೆ ಏರಿತು” ಎಂದು ತಿನ್ನುವುದನ್ನು ಪರೋಕ್ಷವಾಗಿ ವ್ಯಕ್ತಿಯೊಬ್ಬನ ಆಹಾರದ ಬಯಕೆಯನ್ನು ಖಂಡಿಸುತ್ತಾರೆ.

ಬ್ರಾಹ್ಮಣ ಅಥವಾ ಲಿಂಗಾಯತನು ಮಾಂಸ ತಿನ್ನುವುದಕ್ಕೂ ಬೆಲೆ ಏರಿಕೆಗೂ ಏನೂ ಸಂಬಂಧವಿಲ್ಲದಿದ್ದರೂ ಇವನ್ನು ಕೇಳಬೇಕಾಗುತ್ತದೆ. ಬ್ರಾಹ್ಮಣರ ಅಥವಾ ಜೈನರ ಅಥವಾ ಲಿಂಗಾಯತರ ಸಮುದಾಯವೂ, ಬಳಗವೂ ತಮ್ಮಲ್ಲಿರುವ ಮಾಂಸ ತಿನ್ನುವ ವ್ಯಕ್ತಿಯನ್ನು ಪುರಸ್ಕರಿಸುವುದಿಲ್ಲ. ಅವನೊಬ್ಬ ನೇರವಾಗಿ ಅಲ್ಲದಿದ್ದರೂ ಒಂದು ರೀತಿಯಲ್ಲಿ ಜಾತಿಗೆಟ್ಟವ. ಹಾಗಾಗಿ ಅವನು ಕದ್ದು ತಿನ್ನಬೇಕು. ಅಥವಾ ಅವರ ತಿರಸ್ಕಾರಕ್ಕೆ ಒಳಗಾಗದಿರಲು ತಿನ್ನಬಾರದು.

ಹೆಣ್ಣು ಮಗುವೊಂದರ ಹಣೆಯಲ್ಲಿ ಕುಂಕುಮವಿರದಿದ್ದರೆ ನೀನು ಮುಸಲ್ಮಾನಳಾ ಎನ್ನುವುದು, ಗಡ್ಡವಿಟ್ಟುಕೊಂಡು ಮೀಸೆ ತೆಗೆದ ಪುರುಷನಿಗೆ “ಸಲಾಂ ವಾಲೆಕುಂ” ಎನ್ನುವುದು, ದೇವಸ್ಥಾನಕ್ಕೆ ಅಥವಾ ಮಂಗಳಕಾರ್ಯಕ್ಕೆ ಸೀರೆ, ಇತ್ಯಾದಿ ಮಂಗಳದ್ರವ್ಯಗಳಿಂದ ಅಲಂಕೃತವಾಗಿ ಹೋಗಬೇಕೆನ್ನುವುದು, ಮುತ್ತೈದೆಯಾದವಳು ಹೇಗೆಲ್ಲಾ ಇರಬೇಕೆನ್ನುವುದು ಅಥವಾ ವಿಧವೆಯಾದವಳು ಏನೆಲ್ಲಾ ಬಳಸಬಾರದು ಎನ್ನುವುದು; ಹೀಗೇ, ಸಾಲುಸಾಲಾಗಿ ವ್ಯಕ್ತಿಯ ಆಂತರಿಕ ಬಯಕೆಯನ್ನು ಮೀರಿದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ನಿರೀಕ್ಷೆಗಳನ್ನೆಲ್ಲಾ ವ್ಯಕ್ತಿಯು ಮನ್ನಿಸಬೇಕಾದ ಮೌಲ್ಯವೆಂದು ಅವನಲ್ಲಿ ದ್ವಂದ್ವವನ್ನುಂಟು ಮಾಡುತ್ತಾ ಬಲಿದಾನದರಿಮೆಯನ್ನು ಬಲಿಸುತ್ತದೆ.

ದೌರ್ಬಲ್ಯಕ್ಕೆ ಮೌಲ್ಯದ ಕವಚ

ಸರಿ, ಇನ್ನೊಂದು ಬದಿಯಲ್ಲಿಯೂ ಬಲಿದಾನದರಿಮೆಯು ಬಲಿಯುತ್ತಾ ಬಲಗೊಳ್ಳುವುದನ್ನು ಬಗೆಯಬೇಕು. ಕೆಲವರು ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಎದುರಿಸಿ ತಮ್ಮ ಶಕ್ತಿಪ್ರದರ್ಶನ ಮಾಡಿ ತಮ್ಮ ಆಸೆಯನ್ನು ಪ್ರಕಟಗೊಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕೆ ತಮ್ಮ ದೌರ್ಬಲ್ಯಕ್ಕೆ ಮೌಲ್ಯವನ್ನು ಆರೋಪಿಸಿಕೊಂಡು ತಾವು ವಿಧೇಯವಾಗಿ ನಡೆದುಕೊಂಡು ಹೋಗಿಬಿಡುವುದು. ಸುಮ್ಮನೆ ಕೆಲವು ಉದಾಹರಣೆಗಳು ಅಂತ ಹೇಳ್ತೀನಿ. ಆ ಮಾದರಿಯಲ್ಲಿ ಬೇರೆಯದನ್ನು ಗಮನಿಸಿ.

ಶಿಶ್ನದಲ್ಲಿ ನಿಮಿರುವಿಕೆಯ ಸಮಸ್ಯೆ ಇರುವವನು ಅಥವಾ ಷಂಡತನದಿಂದ ಬಳಲುತ್ತಿರುವವನು ತಾನು ಕಾಮವನ್ನು ನಿಗ್ರಹ ಮಾಡಿ ಬ್ರಹ್ಮಚರ್ಯವನ್ನು ಪಾಲನೆ ಮಾಡುತ್ತಿದ್ದೇನೆಂದು ಘೋಷಿಸುತ್ತಾ ಸಂನ್ಯಾಸಿಯಾಗುವುದು. ಅವನ ಸಮಸ್ಯೆಗೆ ಸಂನ್ಯಾಸವೆಂಬ ಆಧ್ಯಾತ್ಮಿಕ ಮೌಲ್ಯದ ಸಮಾಧಾನ. ಅವನು ತನ್ನ ಬಲಿದಾನದರಿಮೆಯನ್ನು ಮೌಲ್ಯಕ್ಕೆ ತಿರುಗಿಸಿಕೊಳ್ಳುವ ಬಗೆ. ತನ್ನಿಂದ ಏನನ್ನೋ ಕಿತ್ತುಕೊಂಡವನಿಗೆ ಎರಡು ತಟ್ಟಿ ವಾಪಸ್ಸು ಕಿತ್ತುಕೊಳ್ಳಲಾಗದವನು ಅವನನ್ನು ಕ್ಷಮಿಸಿದ್ದೇನೆ. ಹೋದರೆ ಹೋಗಲಿ ಎಂಬ ಔದಾರ್ಯವನ್ನು ಪ್ರದರ್ಶಿಸುತ್ತಾ ಮೌಲ್ಯವನ್ನು ಆರೋಪಿಸಿಕೊಳ್ಳುವುದು.

ಪಾಪ, ನಮ್ಮಪ್ಪ ಅಮ್ಮನಿಗೆ ಹೊತ್ತುಹೊತ್ತಿಗೆ ಊಟಕ್ಕೆ ಹವಣಿಸುವುದೇ ದೊಡ್ಡ ಕೆಲಸವಾಗಿರುತ್ತಿತ್ತು. ಇನ್ನು ನನಗೆ ಓದಿಸೋದು, ಇನ್ನೇನೋ ಕಲಿಸೋದು ಹೇಗೆ ಸಾಧ್ಯವಾಗುತ್ತದೆ ಎಂದು ಇನ್ನೊಬ್ಬರನ್ನು ಆರೋಪಿಸುತ್ತಾ ತಮ್ಮನ್ನು ಬಲಿಪಶುವನ್ನಾಗಿಸಿಕೊಂಡು ಕೊರಗುವುದು, ತಮಗೆ ತಾವೇ ಮರುಗುವುದು, ಇತರರಿಂದ ಅನುಕಂಪವನ್ನು ಅಪೇಕ್ಷಿಸುವುದು ಕೂಡಾ ಈ ಅರಿಮೆಯ ಮತ್ತೊಂದು ಮುಖವೇ.

ಅರಿಮೆಗೆ ಪೋಷಕ ಮಾದರಿಗಳು

ಬಲಿದಾನದರಿಮೆಯನ್ನು ಪೋಷಿಸಲು ನಿಮಗೆ ರಾಷ್ಟ್ರೀಯ ನಾಯಕರೂ ಸಿಗುತ್ತಾರೆ. ಆಧ್ಯಾತ್ಮವ್ಯಕ್ತಿಗಳೂ ಸಿಗುತ್ತಾರೆ. ಜೋನ್ ಆಫ್ ಆರ್ಕ್, ಅಸ್ಸಿಸ್ಸಿಯ ಸಂತ ಫ್ರಾನ್ಸಿಸ್, ಗಾಂಧೀಜಿ, ಯೇಸು, ಮದರ್ ಥೆರೆಸಾರೇ ಮೊದಲಾದ ಮಾದರಿಗಳು ಕೂಡಾ ತಮ್ಮನ್ನು ತಾವು ನೋವಿಗೆ ಒಳಪಡಿಸಿಕೊಂಡು ಇತರರ ಸೇವೆಯೇ ತಮ್ಮ ಒಲವು ಎಂಬ ಆದರ್ಶವನ್ನು ಒಡ್ಡಬಲ್ಲವು. ಇಂತಹ ಯಶಸ್ವೀ ಮತ್ತು ಪ್ರಖ್ಯಾತ ಐತಿಹಾಸಿಕ ವ್ಯಕ್ತಿಗಳ ತ್ಯಾಗದ ಮೌಲ್ಯಗಳು ವ್ಯಕ್ತಿಯೊಬ್ಬನ ತ್ಯಾಗದ ಅರಿಮೆಯನ್ನು ಬಲಪಡಿಸುವ ಸಾಧ್ಯತೆಗಳನ್ನು ಅಲ್ಲಗೆಳೆಯಲಾಗುವುದಿಲ್ಲ.

ಬಾಲ್ಯದಲ್ಲಿನ ಪ್ರೀತಿ ವಾತ್ಸಲ್ಯಗಳ ಕೊರತೆ, ದೇಹದ ಆಕಾರವು ಸರಿ ಇಲ್ಲ ಎಂಬ ಭಾವ, ಮನೆಯಲ್ಲಿ ಕಠಿಣವಾಗಿ ತೀರ್ಮಾನಕ್ಕೊಳಗಾಗುತ್ತಿದ್ದರೆ ಬಲಿದಾನದರಿಮೆಯು ಮೊಳೆಯುವ ಸಾಧ್ಯತೆಗಳಿರುತ್ತವೆ. ತಂದೆ ತಾಯಿ ಅಥವಾ ಮನೆಯ ಇತರ ಸದಸ್ಯರಿಂದ, ಶಿಕ್ಷಕರಿಂದ, ಸಾಮಾಜಿಕ ಪರಿಸರದಿಂದ, ಓರಗೆಯವರಿಂದ ಮಗುವು ಭಾವನಾತ್ಮಕವಾಗಿ ತಳಮಳಕೊಳಗಾಗುತ್ತಿದ್ದರೆ, ಒತ್ತಡವನ್ನು ಅನುಭವಿಸುತ್ತಿದ್ದರೆ ಈ ಬಲಿದಾನದರಿಮೆಯ ಉದಯವಾಗುವುದು.

ದೇಹಾಲಸ್ಯವಿರುವಾಗ, ಶರೀರದಲ್ಲಿ ಅಸೌಖ್ಯವಿರುವಾಗ ಹೊಂದುವಂತಹ ಒಪ್ಪಲಾರದಂತಹ ಸಂಬಂಧಗಳು ಕೂಡಾ ಈ ಅರಿಮೆಗೆ ಕಾರಣವಾಗಬಹುದು. ಕೆಲವೊಮ್ಮೆ ತಾವು ನಿರ್ಧಾರ ತೆಗೆದುಕೊಳ್ಳಬೇಕಾದಾಗ ನಿರ್ಧಾರ ತೆಗೆದುಕೊಳ್ಳದೇ ಜವಾಬ್ದಾರಿಯಿಂದ ತಪ್ಪಿಸಿಕೊಂಡಿರುತ್ತಾರೆ. ಆ ನೋವು ಅಥವಾ ಬೇಸರವೂ ಕೂಡಾ ‘ಹೋಗತ್ತ, ನನ್ನ ಬಾಳು ಇಷ್ಟೇ’ ಎಂಬ ಧೋರಣೆಯಲ್ಲಿ ಬಲಿದಾನದರಿಮೆಯನ್ನು ಬೆಳೆಸಿಕೊಳ್ಳುತ್ತಾರೆ.

ಇನ್ನೂ ಕೆಲವರಿಗೆ ತಾವೊಬ್ಬ ಮಹಾನ್ ಮುಗ್ಧ ಜೀವಿ, ಭಾವುಕ ಮತ್ತು ಅನುಕಂಪದ ಜೀವಿಯೆಂದು ತೋರಿಸಿಕೊಳ್ಳುವ ತವಕ. ಈ ಆಂತರಿಕ ತವಕದ ಕೊಡುಗೆಯಾಗಿಯೂ ದೊರಕುವುದು ಈ ಮಾರ್ಟಿರ್ ಕಾಂಪ್ಲೆಕ್ಸ್.ಇನ್ನೂ ಕೆಲವರು ತಮ್ಮ ಹೆಣಗುವಿಕೆಯನ್ನು ಉತ್ಪ್ರೇಕ್ಷಿಸಿ ವೈಭವೀಕರಿಸುತ್ತಾರೆ. ಸುಮ್ಮನೆ ಒಂದು ಉದಾಹರಣೆ. ಬೇಗ ಬೇಗ ಊಟಕ್ಕೆ ಬಡಿಸಲು ಹೋದಾಗ ಕಾಲಿಗೆ ಚೇರು ಬಡಿದು ಒಂದು ಸಣ್ಣ ನೋವಾಗುತ್ತದೆ. ಅಯ್ಯೋ ಪಾಪ ಎಂದು ಉಪಚಾರಕ್ಕೆ ಅರ್ಹವಾಗಿಲ್ಲದ್ದಷ್ಟು ಸಣ್ಣ ನೋವು ಅದು. ಅದಕ್ಕೆ ಅವರು ಚೇರಿಗೆ ಮೊಣಕಾಲು ಬಡಿದು, ತಾವು ಬಿದ್ದು, ತಲೆಯು ನೆಲಕ್ಕೆ ಅಪ್ಪಳಿಸಿ, ಒಂದೈದು ನಿಮಿಷ ಮೂರ್ಚಾವಸ್ಥೆಯಲ್ಲಿದ್ದು ಎದ್ದು ಬಂದರಾದರೆ ಒಂದಷ್ಟು ಉಪಚಾರ, ಕನಿಕರ, ಅಯ್ಯೋ ಪಾಪ ಲಭ್ಯವಾಗುವುದು. ಅದಕ್ಕೆ ಉತ್ಪ್ರೇಕ್ಷೆ. ಅದು ಬರಿಯ ನೋವಿಗೆ ಸೀಮಿತವಲ್ಲ. ಅವರು ಪಡುವ ಶ್ರಮಕ್ಕೆ, ಅಥವಾ ಇತರರು ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುವುದಕ್ಕೆ; ಇತರ ವಿಷಯಗಳಿಗೂ ಸಹ.

ಈ ಅರಿಮೆಯುಳ್ಳವರಿಗೆ ಇತರರ ಉದ್ದೇಶಗಳ ಮೇಲೆ ಅನುಮಾನವೂ ಕೂಡಾ ಸಾಮಾನ್ಯ.
ತಾವು ಸರಿಯಾಗಿಯೇ ಇರಬೇಕೆನ್ನುವುದು ಅವರ ಗೀಳು. ತಮ್ಮ ಕೈಯಲ್ಲಿ ಆಗುತ್ತದೋ ಇಲ್ಲವೋ, ಯಾರಾದರೂ ಕೆಲಸವನ್ನು ಮಾಡಿಕೊಡಲು ಕೇಳಿದರೆ “ಹೂ, ಮಾಡುತ್ತೇನೆ” ಎನ್ನುವುದೇ ಅವರ ಮೊದಲ ಉತ್ತರ.
ಕೆಲವೊಮ್ಮೆ ಅವರಿಗೆ ಅನ್ನಿಸುವುದೇನೆಂದರೆ, ಇತರರು ತನ್ನ ಮನಸ್ಸನ್ನು ತಿಳಿದುಕೊಂಡಿದ್ದಾರೆ ಅಥವಾ ತಿಳಿದುಕೊಳ್ಳುತ್ತಾರೆ ಎಂದು. ಇವರಿಂದ ಸಮಸ್ಯೆಗಳಿಗೆ ಪರಿಹಾರವಂತೂ ಎಂದಿಗೂ ಸಿಗುವುದಿಲ್ಲ. ಏಕೆಂದರೆ ಇವರು ನೋಯುವುದರಲ್ಲೇ ಸಂತೋಷಪಡುವವರು. ಒಂದು ವೇಳೆ ಸಮಸ್ಯೆಗೆ ಪರಿಹಾರ ಸಿಕ್ಕಿಬಿಟ್ಟಿತು ಎಂದಿಟ್ಟುಕೊಳ್ಳಿ, ಅದರ ನೆರಳಾಗಿ ಮತ್ತಷ್ಟು ಸಮಸ್ಯೆಗಳನ್ನು ತರುತ್ತಾರೆ. ಅವರು ಮಹಾನ್ ನಾಟಕಕಾರರು. ಪ್ರಶಂಸೆ ಗಿಟ್ಟಿಸಲು, ಗಮನ ಸೆಳೆಯಲು, ಜನರ ದೃಷ್ಟಿಯನ್ನು ತಮ್ಮ ಕಡೆಗೆ ಸೆಳೆಯಲು ನಟಿಸಲೂ ಸೈ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending