ಅಂತರಂಗ
ಅರಿಮೆಯ ಅರಿವಿರಲಿ-52 : ಮಗುತನದಿಂದ ತನ್ನತನ
- ಯೋಗೇಶ್ ಮಾಸ್ಟರ್
ಅಹಂಕಾರವನ್ನೇ ಆತ್ಮಗೌರವ ಅಥವಾ ಸ್ವಾಭಿಮಾನವನ್ನಾಗಿ ಭಾವಿಸುವುದು ತನ್ನತನದ ಮೌಲ್ಯವನ್ನು ಗಟ್ಟಿಗೊಳಿಸುವುದೇನಲ್ಲ. ಬದಲಾಗಿ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸುತ್ತಾ ಹೋಗುವುದು. ಆದರೆ ತನ್ನತನದ ಪರಿಕಲ್ಪನೆ ಮತ್ತು ಸ್ವಾಭಿಮಾನದ ಘನತೆಯನ್ನು ನಾವು ಅರಿತುಕೊಳ್ಳುವುದರ ಜೊತೆಗೆ ಮಕ್ಕಳಿಗೆ ಪ್ರಾರಂಭದಿಂದಲೇ ರೂಢಿಗೊಳಿಸಿದರೆ, ಅಥವಾ ಅದರ ಬಗ್ಗೆ ಅರಿವು ಮೂಡಿಸಿದರೆ ಆತ್ಮಗೌರವದ ಬದುಕನ್ನು ಕಟ್ಟಿಕೊಳ್ಳಬಲ್ಲರು.
ಧೈರ್ಯ, ಹಟಮಾರಿತನ, ವಿನಯ, ಸಂಕೋಚ, ನಿಸ್ಸಂಕೋಚ, ಭಯ, ಮೌನ, ಮಾತು, ಕೆಲಸ, ನಿರ್ಗೆಲಸ; ಹೀಗೆ ಎಲ್ಲರೂ ಅಗತ್ಯವಿರುವಷ್ಟು ಹೊಂದಬಹುದು ಮತ್ತು ಉಪಯೋಗಿಸಬಹುದು.
ಇದನ್ನು ಬಹಳ ಗಂಭೀರವಾಗಿ ಗಮನಿಸೋಣ. ಯಾರೊಬ್ಬ ಎಲ್ಲದಕ್ಕೂ ಸಂಕೋಚ ಪಡುತ್ತಾನೋ ಅಥವಾ ಎಲ್ಲದಕ್ಕೂ ನಿರ್ಲಜ್ಜೆಯಿಂದ ಮುಂದಾಗುತ್ತಾನೋ, ಅವನಲ್ಲಿ ಮಾನಸಿಕ ಸಮಸ್ಯೆ ಇದೆ ಎಂದೇ ಅರ್ಥ.
ಅದೇ ಒಬ್ಬ ವ್ಯಕ್ತಿ ಕೆಲವೊಂದು ವಿಷಯಕ್ಕೆ ಸಹಜವಾಗಿ ನಾಚಿಕೆಪಟ್ಟುಕೊಳ್ಳುತ್ತಾನೆ. ಅಗತ್ಯವಿರುವ ಕೆಲವು ವಿಷಯಗಳಿಗೆ ಸಂಕೋಚವಿಲ್ಲದೇ ಮುಂದಾಗುತ್ತಾನೆ ಎಂದರೆ ಅವನು ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತಿರುವ ಲಕ್ಷಣವನ್ನು ತೋರುತ್ತಿದ್ದಾನೆಂದು ಅರ್ಥ.
ಆತ್ಮಗೌರವ ಅಥವಾ ಸೆಲ್ಫ್ ಎಸ್ಟೀಮ್ ಎಂಬುದು ವ್ಯಕ್ತಿತ್ವ ವಿಕಾಸ, ಸಾಮಾಜಿಕ ಮನಶಾಸ್ತ್ರ, ಚಿಕಿತ್ಸಕ (ಕ್ಲಿನಿಕಲ್) ಮನಶಾಸ್ತ್ರ, ಪುರೋಗಾಮಿತ್ವ (ಡೆವಲಪ್ ಮೆಂಟಲ್) ಮನಶಾಸ್ತ್ರ; ಹೀಗೆ ಹಲವು ಶಾಖೆಗಳಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.
ಇದು ತನ್ನತನದ ಪರಿಕಲ್ಪನೆಯ ಮೇಲೆಯೇ ಅವಲಂಬಿತವಾಗಿದ್ದು ರೋಸೆನ್ಬರ್ಗ್ (1965) ಎಂಬ ಮನಶಾಸ್ತ್ರಜ್ಞ ಹೇಳುವಂತೆ, ಸ್ವಾಭಿಮಾನ ಎಂದರೆ ಒಬ್ಬ ವ್ಯಕ್ತಿಯ ಸಮಗ್ರವಾದ ತನ್ನತನದ ಸಕಾರಾತ್ಮಕ ಮೌಲ್ಯಮಾಪನ. ಜೊತೆಗೆ ತನ್ನನ್ನು ತಾನು ಗೌರವಿಸಿಕೊಳ್ಳುವುದು ಮತ್ತು ತನ್ನನ್ನು ಸತ್ವಪೂರ್ಣ ವ್ಯಕ್ತಿ ಎಂದು ಪರಿಗಣಿಸಿಕೊಳ್ಳುವುದು.
ಮಗುತನದ ಹಂತಗಳು
ಮಗುವಿನ ಬಾಲ್ಯದಲ್ಲಿಯೇ ಗೌರವಪೂರ್ಣವಾದ ತನ್ನತನದ ಭಾವವನ್ನು ರೂಪುಗೊಳಿಸುವ ಜವಾಬ್ದಾರಿಯನ್ನು ಮಗುವನ್ನು ನೋಡಿಕೊಳ್ಳುವ ಹಿರಿಯರು ಹೊರಬೇಕು.
ಸೊನ್ನೆ ವರ್ಷದಿಂದ ಎರಡು ವರ್ಷಗಳ ವರೆಗೆ
1. ಮಗುವು ಸತತವಾದ ಗಮನವನ್ನು ಪಡೆಯುತ್ತಿದ್ದರೆ, ಅದಕ್ಕೆ ಪ್ರೀತಿಯಿಂದ ಕೂಡಿರುವ ಸಂಬಂಧದ ಅನುಭವವಾಗುತ್ತಿದ್ದರೆ, ಆ ಮಗುವು ಸಕಾರಾತ್ಮಕವಾದ ತನ್ನತನದ ಭಾವವನ್ನು ಹೊಂದುತ್ತದೆ.
2. ಮಗುವು ತನಗಾಗುತ್ತಿರುವ ಅನುಭವದ ಆಧಾರದಲ್ಲಿ ಆದ್ಯತೆಗಳನ್ನು ಕಂಡುಕೊಳ್ಳುತ್ತದೆ. ಯಾವುದು ಮೊದಲು ಮುಖ್ಯ, ಬೇಕಾದದ್ದು, ಹಿತ ನೀಡುವಂತದ್ದು; ಇಂತಹ ಅನುಭವಗಳನ್ನು ಆಧರಿಸಿರುವ ಆ ಆದ್ಯತೆಗಳಿಂದ ತನ್ನತನದ ಸಹಜವಾದ ಪ್ರಜ್ಞೆಯನ್ನು ರೂಪಿಸಿಕೊಳ್ಳುತ್ತದೆ.
3. ಅಂಬೆಗಾಲಿಡುವ ಶಿಶುವಿನ ಇತಿಮಿತಿಯನ್ನು ನಿಯಂತ್ರಿಸುವ ಕಟ್ಟಳೆ ಸುರಕ್ಷಿತ ಭಾವವನ್ನು ಒದಗಿಸುತ್ತದೆ. ಆದರೆ ಆ ಕಟ್ಟಳೆ ಮೃದುವಾಗಿಯೂ ಮತ್ತು ದೃಢವಾಗಿಯೂ ಇರಬೇಕು. ಉದಾಹರಣೆಗೆ, “ನೀನು ಗೇಟಿನ ಆಚೆ ಹೋಗಬಾರದು. ಹಾಗೆ ಹೋಗಲು ನಾನು ಬಿಡುವುದಿಲ್ಲ. ಅಲ್ಲಿ ಗಾಡಿಗಳು ಬರುತ್ತವೆ. ಅಪಾಯವಿದೆ” ಎಂಬ ನಿಯಂತ್ರಣವು ಇರಬೇಕು.
ಆದರೆ ಅದು, “ಹೋಗಬಾರದು ಎಂದರೆ ಹೋಗಬಾರದು. ಹೋದರೆ ಏಟು ಕೊಡ್ತೀನಿ. ಹೇಳಿದಷ್ಟು ಕೇಳು” ಎನ್ನುವ ಮಾತಿನ ಬಗೆಯು ಸಕಾರಾತ್ಮಕವಾದ ತನ್ನತನವನ್ನು ರೂಪಿಸುವ ಬದಲು ಅರಿಮೆಯನ್ನು ಹುಟ್ಟಿಸುವ ಅಥವಾ ದೌರ್ಬಲ್ಯಕ್ಕೆ ಎಡೆಮಾಡುವಂತಹ ನಕಾರಾತ್ಮಕ ಗುಣಗಳನ್ನು ರೂಢಿಸುತ್ತದೆ.
4. ಮಗುವು ಎರಡು ವರ್ಷದ ಹೊತ್ತಿಗೆ ಭಾವವನ್ನು ಮತ್ತು ಭಾಷೆಯನ್ನು ಗ್ರಹಿಸಲು ಆರಂಭಿಸಿದ್ದು ನಾನು ಎಂಬ ಭಾವವು ರೂಪುಗೊಳ್ಳುತ್ತಿರುತ್ತದೆ. ಅಲ್ಲಿಗೆ ತನ್ನತನದ ಸಂರಚನೆ ಪ್ರಾರಂಭವಾಯಿತೆಂದೇ ಅರ್ಥ. ಮಗುವಿನ ಗಿಲಕಿಯನ್ನೋ ಅಥವಾ ಅದು ನಿತ್ಯ ಬಳಸುವ ವಸ್ತುವನ್ನೋ ತೋರಿ, “ಇದು ಯಾರಿಗೆ ಬೇಕು?” “ಇದು ಯಾರದು?” ಎಂದರೆ, ನನಗೆ, ನನ್ನದು ಎಂಬ ಭಾವವನ್ನು ವ್ಯಕ್ತಪಡಿಸಲು ಅದಕ್ಕೆ ಸಾಧ್ಯವಾಗುತ್ತದೆ. ಅವುಗಳೆಲ್ಲಾ ತನ್ನತನದ ಆರಂಭಿಕ ಪ್ರಕಟಣೆಗಳೇ.
ಮೂರರಿಂದ ನಾಲ್ಕರವರೆಗೆ
1. ಮೂರು ಮತ್ತು ನಾಲ್ಕುವರ್ಷದ ಮಗುವು ತನ್ನನ್ನು ತಾನು ಪ್ರತ್ಯೇಕ ಮತ್ತು ಭಿನ್ನ ವ್ಯಕ್ತಿಗಳೆಂದು ನೋಡಿಕೊಳ್ಳಲು ಪ್ರಾರಂಭಿಸುತ್ತದೆ. ಅದಕ್ಕಾಗಿ ಪ್ರತ್ಯೇಕವಾಗಿರುವ ವಸ್ತುಗಳು, ಉಡುಪುಗಳು, ಬಂದವರು ಮಾತಾಡಿಸುವ ರೀತಿ; ಇವೆಲ್ಲವೂ ಬೇರೆ ಹಿರಿಯರದ್ದಕ್ಕಿಂತ ಭಿನ್ನ ಎಂಬುದನ್ನು ಗುರುತಿಸುತ್ತವೆ.
ತಮ್ಮದು ಯಾವುದು, ಇತರರದು ಯಾವುದು ಎಂದು ವಸ್ತುಗಳನ್ನು ಮಾತ್ರ ಗುರುತಿಸುವುದಲ್ಲ. ವ್ಯಕ್ತಿತ್ವವನ್ನೂ ಕೂಡಾ ಕಂಡುಕೊಳ್ಳುತ್ತಿರುತ್ತವೆ. ಆದರೆ ಅದಿನ್ನೂ ಬಿರಿಯುವ ಹಂತದಲ್ಲಿದ್ದರೂ ಪ್ರಕ್ರಿಯೆ ಅದಾಗಲೇ ಪ್ರಾರಂಭವಾಗಿದೆ ಎಂದೇ ಅರ್ಥ.
2. ತನ್ನತನದ ಬಗ್ಗೆ ಇರುವ ಅರಿವು ಬಹುಪಾಲು ಶಾಬ್ಧಿಕ ವರ್ಣನೆಯಾಗಿರುತ್ತದೆ. ತಾನು ಹೇಗೆ ಇದ್ದೇನೆ? ತಾನು ಏನು ಮಾಡುತ್ತೇನೆ? ತನಗೆ ಏನು ಬೇಕು? ಈ ರೀತಿ. ಆದರೆ ಅದು ನಾನು ಹೀಗೆ ಇರುವುದು, ನನಗೆ ಹೀಗಿರಬೇಕು; ಈ ರೀತಿಯ ಹಕ್ಕು ಅಥವಾ ಅಧಿಕಾರದ ತಳಹದಿಯದ್ದಾಗಿದ್ದು ತೀರ್ಮಾನ ತೆಗೆದುಕೊಳ್ಳುವಂತದ್ದಾಗಿರುವುದಿಲ್ಲ.
3. ಶಾಲೆಗೆ ಅಥವಾ ಬಾಲವಾಡಿಗೆ ಹೋಗ ವಯಸ್ಸಿಗೆ ಬರುವ ಮಕ್ಕಳಾಗಲೇ ಸ್ವತಂತ್ರವಾಗಿ ತಾವೇನು ಮಾಡಬಲ್ಲೆವು ಎಂಬುದರ ಬಗ್ಗೆ ಕುತೂಹಲವನ್ನು ಹೊಂದಿರುತ್ತಾರೆ ಮತ್ತು ಅವುಗಳ ಪ್ರಯೋಗಿಸಲು ಹಾತೊರೆಯುತ್ತಿರುತ್ತಾರೆ. ಅಂತಹ ಸಮಯದಲ್ಲಿ ತನ್ನತನದ ಸಾಮರ್ಥ್ಯ ಮತ್ತು ಚಿತ್ರಣವನ್ನು ಗುರುತಿಸಿಕೊಳ್ಳುವ ಆರಂಭವಾಗಿರುತ್ತದೆ.
ಬಹಳಷ್ಟು ಪೋಷಕರು ಅದನ್ನು ನಿಯಂತ್ರಿಸಲು ಹಾತೊರೆಯುತ್ತಾರೆ. ಗಮನಿಸಬೇಕು, ನಿಯಂತ್ರಣದಲ್ಲೂ ಇಡಬೇಕು. ಆದರೆ ಆ ನಿಯಂತ್ರಣವು ಸಕಾರಣವಾಗಿರಬೇಕು. ನನಗೆ ಇಷ್ಟವಿಲ್ಲ ಮಾಡಬೇಡ. ಸುಮ್ಮನೆ ಅದೆಲ್ಲಾ ಯಾಕೆ? ಈಗ ಸುಮ್ಮನೆ ಕೂತ್ಕೊಂಡಿದ್ರೆ ಸರಿ ಹೋಯ್ತು. ನನಗೆ ಮುಂಚೆನೇ ತಲೆ ಸರಿ ಇಲ್ಲ, ಇನ್ನು ನೀನು ಬೇರೆ ರೇಗಿಸಬೇಡ; ಈ ಬಗೆಯ ಹಲವು ಕಾರಣಗಳಿಂದ ಮಕ್ಕಳನ್ನು ನಿಯಂತ್ರಿಸಲು ಹೋಗಬಾರದು.
4. ಬಹಳಷ್ಟು ಪೋಷಕರು ತಮ್ಮ ದೌರ್ಬಲ್ಯದ ಕಾರಣದಿಂದ ಮಕ್ಕಳ ಸಾಮರ್ಥ್ಯವನ್ನು ಕಡೆಗಣಿಸುತ್ತಾರೆ. ತಮಗಿರುವ ದುರ್ಬಲ ತನ್ನತನದ ಚಿತ್ರಣದಿಂದಾಗಿ ಮಕ್ಕಳು ರೂಪಿಸಿಕೊಳ್ಳಬಹುದಾದ ಬಲವಾದ ಮತ್ತು ಸುಂದರವಾದ ಮಗುತನದ ಚಿತ್ರಣವನ್ನು ಹಾಳುಗೆಡವುತ್ತಾರೆ.
ಐದರಿಂದ ಆರರವರೆಗೆ
1. ಗುತನವು ವಿಸ್ತಾರಗೊಳ್ಳುವ, ಬದಲಾಗುವ ಹಂತವಿದು. ಸ್ಥಿತ್ಯಂತರದ ಮಜಲಿದು ‘ನಾನು’ ಇಂದ ‘ನಾವು’, ‘ನನ್ನ’ ಇಂದ ‘ನಮ್ಮ’. ನಮ್ಮ ಅಗತ್ಯಗಳೇನು, ನಾವು ಎಂಬ ಗುಂಪಿಗೆ ಏನು ಬೇಕು, ಅದು ಹೇಗಿರಬೇಕು ಎಂಬ ಆಸಕ್ತಿಗಳು ಮೊಳೆಯುವುದು ಈ ವಯಸ್ಸುಗಳಲ್ಲಿ.
2. ಬಾಲವಾಡಿಯಲ್ಲಿ ಮಕ್ಕಳಿಗೆ ತಮಗೆ ಏನು ಬೇಕು, ಯಾವುದನ್ನು ಆಸೆ ಪಡುತ್ತೇವೆ, ಭಾವಿಸುವುದು ಎಂದರೇನು ಎಂದೆಲ್ಲಾ ಸಂವಹನದ ಮೂಲಕ ಮನದಟ್ಟು ಮಾಡುತ್ತಾರೆ.
3. ಐದಾರು ವರ್ಷದ ಮಕ್ಕಳು ಭಾಷೆಯಲ್ಲಿ ತಮ್ಮನ್ನೂ ಮತ್ತು ತಮ್ಮವರ ಸಂಬಂಧ ಮತ್ತು ಗುರುತುಗಳನ್ನೂ ವಿವರಿಸುವಷ್ಟರ ಮಟ್ಟಿಗೆ ಮುಂದುವರೆದಿರುತ್ತಾರೆ.
ಬಾಲ್ಯಾವಸ್ಥೆಯ ಮಧ್ಯಕಾಲ
ಬಾಲ್ಯದ ಮಧ್ಯಕಾಲ ಎನ್ನಬಹುದಾದ ಏಳರಿಂದ ಹನ್ನೊಂದು ವರ್ಷದ ಅವಧಿಯಲ್ಲಿ ಸಾಮಾಜಿಕವಾಗಿ ತಮ್ಮನ್ನು ಮಕ್ಕಳು ಗುರುತಿಸಿಕೊಳ್ಳಲಾರಂಭಿಸುತ್ತಾರೆ. ಇತರರೊಂದಿಗೆ ಹೇಗಿರಬೇಕು, ಅವರೊಂದಿಗೆ ಹೇಗೆ ಹೊಂದಿಕೊಳ್ಳಬೇಕು ಎಂಬ ಸಾಮರ್ಥ್ಯವೂ ಈ ಹಂತಕ್ಕಾಗಲೇ ರೂಢಿಯಾಗತೊಡಗುತ್ತಿರುತ್ತದೆ. ತಮ್ಮನ್ನು ಇತರರು ಹೇಗೆ ಕಾಣುತ್ತಾರೆ ಎಂದೂ ಅವರು ಗಮನಿಸುತ್ತಿರುತ್ತಾರೆ.
ಹಾಗೆಯೇ ಇತರರ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಮನೆಯವರಲ್ಲದ ಇತರರ ಬಗ್ಗೆ ಆಸಕ್ತಿ ತೋರುತ್ತಾರೆ. ಕೆಲವರನ್ನು ಇಷ್ಟಪಡುವುದಿಲ್ಲ. ಕೆಲವರನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಹಂತದಲ್ಲಿ ಸಾಮಾನ್ಯವಾಗಿ ತಮ್ಮನ್ನು ಇತರರೊಂದಿಗೆ ಮತ್ತು ತಮ್ಮ ಸ್ಥಿತಿಗತಿಗಳನ್ನು ಇತರರ ಸ್ಥಿತಿಗತಿಗಳೊಂದಿಗೆ ಹೋಲಿಸಿಕೊಂಡು ನೋಡುವ ಸಾಮರ್ಥ್ಯವೂ ಈ ಮಧ್ಯಕಾಲದ ಬಾಲ್ಯದಲ್ಲಿ ಬೆಳವಣಿಗೆಯಾಗುತ್ತದೆ.
ಮುಂದೆ ವಯಸ್ಕರಾಗುವ ಮಕ್ಕಳ ಗ್ರಹಿಕೆ ಮತ್ತು ಅನುಭವಗಳ ಈ ಹಂತವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಹಂತದ ಮಗುತನವು ಎಚ್ಚರಿಕೆಯಿಂದ ರೂಪುಗೊಂಡರೆ ಮುಂದೆ ವ್ಯಕ್ತಿಯ ತನ್ನತನವೂ ಅದಕ್ಕೆ ಪೂರಕವಾಗಿ ರೂಪುಗೊಳ್ಳುತ್ತದೆ. ಮಗುತನವೇ ವ್ಯಕ್ತಿಯ ತನ್ನತನವಾಗಿ ರೂಪಾಂತರಗೊಳ್ಳುವುದೆಂಬ ಸ್ಪಷ್ಟ ಅರಿವು ಮಗುವನ್ನು ಪಾಲಿಸುವ ಹಿರಿಯರಿಗೆ ಇರಬೇಕು.
ಮಗುತನದ ರೂಪಾಂತರ
ಮಗುತನವು ತನ್ನತನವಾಗಿ ಸಹಜವಾಗಿ ರೂಪಾಂತರಗೊಳ್ಳುತ್ತಿದ್ದರೆ ಕೆಲವು ಲಕ್ಷಣಗಳನ್ನು ಗುರುತಿಸಬಹುದು.
1. ಹೆಚ್ಚು ಸಮತೋಲದ ಮನಸ್ಥಿತಿಯನ್ನು ಹೊಂದಿರುತ್ತಾರೆ. ತಮ್ಮ ಬಗ್ಗೆ ವಿವರಿಸಿಕೊಳ್ಳುವುದು ಕಡಿಮೆಯಾಗಿರುತ್ತದೆ. ಕೆಲವೊಮ್ಮೆ ವಿವರಿಸಿಕೊಳ್ಳಲೇ ಹೋಗುವುದಿಲ್ಲ. ಕೆಲವರು ಎಷ್ಟೋ ದೊಡ್ಡವರಾಗಿರುತ್ತಾರೆ. ದೊಡ್ಡದೊಡ್ಡ ಲೇಖಕರು, ಸಂಗೀತಗಾರರು, ಕಲಾವಿದರಾಗಿರುತ್ತಾರೆ. ಕೆಲವೊಮ್ಮೆ ಸಾಮಾನ್ಯ ಮನೆವಾರ್ತೆಯ ಮಹಿಳೆಯೋ, ಉದ್ಯೋಗಸ್ಥ ಪುರುಷನೋ ಆಗಿರುತ್ತಾರೆ.
ಆದರೆ ಅವರು ಬಾಯಿ ಬಿಟ್ಟರೇನೇ ತಮ್ಮ ಬಗ್ಗೆ ವಿವರಣೆ. ಇದು ಎಷ್ಟೋ ಬಾರಿ ಸಂದರ್ಭಾನುಸಾರವಾಗಿರುವುದೇ ಇಲ್ಲ. ವರ್ತಮಾನದ ಸಂಗತಿಗಳನ್ನು ತಮ್ಮ ಭೂತಕಾಲದ ಅನುಭವಗಳಿಗೆ ಮತ್ತು ತಮ್ಮ ಮನೆಯವರ ಕುರಿತಾದ ವಿಷಯಗಳಿಗೆ ಕೊಂಡಿ ಬೆಸೆಯುತ್ತಾರೆ.
ಹೇಳ್ತಾರೆ, ಹೇಳ್ತಾರೆ, ಹೇಳ್ತಾನೇ ಇರ್ತಾರೆ; ತಮ್ಮ ತಂದೆ ತಾಯಿ, ಅದ್ಯಾವುದೋ ಅಂಗಡಿ, ಅಲ್ಲಿ ಸಾಮಾನುಗಳನ್ನು ತರುತ್ತಿದ್ದದ್ದು, ತಮ್ಮ ಗುರುಗಳು, ತಾವು ಮದುವೆಯಾದಾಗ ಏನಾಯ್ತು; ಯಾವ ವಿಷಯವಾದರೂ ಪ್ರಸ್ತುತ ವಿಷಯಕ್ಕೆ ತಗುಲಿಕೊಳ್ಳಬಹುದು. ಕೇಳುವವರಿಗೆ ಅವುಗಳನ್ನು ಕೇಳುವ ಯಾವ ಅಗತ್ಯವೂ ಇರುವುದಿಲ್ಲ. ಆದರೂ ಕೇಳಲೇಬೇಕಾಗುತ್ತದೆ.
“ಓ, ಹಾಗಾ? ಸರಿ, ಆಮೇಲೆ?” ಇತ್ಯಾದಿ ತಾವು ಕೇಳುತ್ತಿದ್ದೇವೆಂಬ ಸೂಚನೆ ನೀಡಲು ಹುಸಿ ಆಸಕ್ತಿ ತೋರುತ್ತಿರುತ್ತಾರೆ. ಕೇಳುಗರಿಗೆ ಅವರ ಮಾತನ್ನು ಎಲ್ಲಿ ತುಂಡರಿಸಬೇಕೆಂದೂ ತಿಳಿಯುವುದಿಲ್ಲ. ಕೆಲವೊಮ್ಮೆ ತೀರಾ ಅನಾಮತ್ತಾಗಿ ಮಾತಿನ ಸರಣಿಯನ್ನು ತುಂಡರಿಸಿ ಮುಂದೆ ಹೋಗಬೇಕಾಗುತ್ತದೆ.
ಒಂದು ವೇಳೆ ಹಾಗೆ ಮಾತಾಡುತ್ತಿರುವವರೊಡನೆ ಸ್ನೇಹ ಮತ್ತು ಸಲುಗೆ ಇದ್ದಲ್ಲಿ “ಮಾತು ನಿಲ್ಲಿಸು” ಎಂದು ನೇರವಾಗಿ ಹೇಳಬಹುದಾಗಿರುತ್ತದೆ. ಇಲ್ಲವಾದರೆ, ಯಾರಿಗಾದರೂ ‘ನನಗೆ ಫೋನ್ ಮಾಡು’ ಎಂದು ಮೆಸೇಜ್ ಮಾಡಿ, ಫೋನ್ ಬಂದಾದ ಮೇಲೆ, ‘ಓ, ಅರ್ಜೆಂಟ್ ಕಾಲ್. ನನಗೆ ಏನೋ ಕೆಲಸವಿದೆ. ಮತ್ತೆ ಸಿಗೋಣ. ನೀವು ಹೇಳುತ್ತಿದ್ದದ್ದು ತುಂಬಾ ಇಂಟರೆಸ್ಟಿಂಗ್’ ಅಂತ ರೀಲ್ ಬಿಟ್ಟು ಓಡುತ್ತಾರೆ.
ಅವರಿಗೆ ಅವರ ಬದುಕು, ಸಂಬಂಧಗಳು, ನೋವು ನಲಿವುಗಳು, ನೆನಪುಗಳು, ಹೆಮ್ಮೆ ಅಪಮಾನಗಳೆಲ್ಲಾ ನಿಜಕ್ಕೂ ಆಪ್ತವೂ, ಮಹತ್ತರವೂ ಆಗಿರುತ್ತದೆ. ಆದರೆ, ಸಮಯಾಸಮಯದ ಪ್ರಜ್ಞೆ ಇಲ್ಲದೇ ಹೇಳುವುದರಿಂದ ಅವು ತಮ್ಮ ಮಹತ್ವವನ್ನು ಕಳೆದುಕೊಳ್ಳುತ್ತವೆ. ಇನ್ನೂ ಕೆಲವೊಮ್ಮೆ ನಿಷ್ಟುರವಾಗಿಯೇ ಗಮನಿಸಬೇಕು. ನಮಗೆ ನಮ್ಮ ಅನುಭವಗಳಾಗಲಿ, ನೆನಪುಗಳಾಗಲಿ ಮುಖ್ಯವೂ ಮಹತ್ವದ್ದೂ ಆಗಿರುತ್ತದೆ.
ಆದರೆ ನನ್ನೆದುರಿನ ವ್ಯಕ್ತಿಗೇನಾಗಬೇಕು ಅವುಗಳನ್ನು ಕಟ್ಟಿಕೊಂಡು? ಸಂದರ್ಭಾನುಸಾರವೋ ಅಥವಾ ಕೋರಿಕೆಯ ಮೇರೆಗೋ ಅಥವಾ ಉದಾಹರಣೆಯ ಸಲುವಾಗಿಯೋ ಹಂಚಿಕೊಳ್ಳಬೇಕು. ಅದೂ ಚಿಕ್ಕದಾಗಿ. ಇಲ್ಲದಿದ್ದರೆ ಆ ವ್ಯಕ್ತಿಗಳು ಫೋನ್ ಮಾಡಿದರೆ ಇತರರು ಕರೆ ಸ್ವೀಕರಿಸಲು ಹೆದರುತ್ತಾರೆ, ಏಕೆಂದರೆ, ‘ಒಂದೆರಡು ನಿಮಿಷ ಮಾತಾಡಬಹುದಾ?’ ಎಂದೂ ಕೇಳುವುದಿಲ್ಲ. ಸುಮ್ಮನೆ ಮಾತಾಡಲು ಪ್ರಾರಂಭಿಸಿ ಅದು ಗಂಟೆಗಟ್ಟಲೆ ಹೋಗುತ್ತದೆ. ಕರೆ ಸ್ವೀಕರಿಸಿದವರ ಸಮಯ ಭಯಂಕರವಾಗಿ ಹಾಳಾಗಿರುತ್ತದೆ. ಸಮಯ ವ್ಯರ್ಥವಾಯಿತೆಂದರೆ ಅಷ್ಟು ಜೀವನವೇ ವ್ಯರ್ಥವಾಯಿತೆಂದು.
ಹುಟ್ಟು ಮತ್ತು ಸಾವಿನ ನಡುವಿನ ಅವಧಿ ಬದುಕು. ಹಾಗಾಗಿ ಬದುಕು ಮತ್ತು ಸಮಯ ಎರಡೂ ಸಮಾನಾರ್ಥಕ ಪದಗಳು. ಸಮಯವನ್ನು ಕೊಟ್ಟರೆಂದರೆ ಅವರ ಜೀವನದ ಒಂದು ಭಾಗವನ್ನೇ ಕೊಟ್ಟಿದ್ದಾರೆಂದು ಅರ್ಥ. ಹಾಗಾಗಿ ನಾವು ನಮ್ಮ ಸಮಯವನ್ನೂ ಮತ್ತು ಇತರರ ಸಮಯವನ್ನೂ ಗೌರವಿಸುವುದರ ಮೂಲಕ ಜೀವನಪ್ರೀತಿಯನ್ನು ಅಭಿವ್ಯಕ್ತಿಸಬೇಕು.
ಮಗುತನವು ಸ್ವಾಸ್ಥ್ಯಪೂರ್ಣವಾದ ತನ್ನತನಕ್ಕೆ ಬದಲಾಗಿರುವುದರ ಸ್ಪಷ್ಟ ಲಕ್ಷಣವೇ ತನ್ನ ಸಮಯ ಮತ್ತು ಇತರರ ಸಮಯವನ್ನು ಜೀವನದ ಮೌಲಿಕ ಕ್ಷಣಗಳನ್ನಾಗಿ ರೂಪಿಸಿಕೊಳ್ಳುವುದು.
ಮಗುವು ತನ್ನ ಬಾಲ್ಯದಲ್ಲಿಯೇನಾದರೂ ತನ್ನ ತಾನು ವಿವರಿಸಿಕೊಂಡು ಸುಧೀರ್ಘವಾಗಿ ಮಾತಾಡುತ್ತಲೇ ಇರುವ ಲಕ್ಷಣಗಳನ್ನು ತೋರಿದರೆ ಎಚ್ಚರವಹಿಸಬೇಕು. ಅವರ ಮಗುತನವು ತನ್ನತನಕ್ಕೆ ರೂಪಾಂತರಗೊಳ್ಳುವ ಅವಧಿಯಲ್ಲಿಯೇ ಅವರಿಗೆ ಅದರ ರೂಢಿ ತಪ್ಪಿಸಬೇಕು.
2. ಭ್ರಾಮಕವಾದ ಆದರ್ಶದ ತನ್ನತನದ ಪ್ರತಿಮೆಗೂ ಮತ್ತು ತನ್ನ ನಿಜವಾಗಿರುವ ತನ್ನತನಕ್ಕೂ ಇರುವ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ತಿಳಿಯುತ್ತಾರೆ.
ತಾನು, ತನ್ನ ಸಾಮರ್ಥ್ಯ, ದೌರ್ಬಲ್ಯ, ಸಂಪನ್ಮೂಲಗಳು, ಸಾಧ್ಯತೆಗಳು; ಇತ್ಯಾದಿಗಳನ್ನು ಅರಿತುಕೊಂಡು ಅವುಗಳ ಆಧಾರದಲ್ಲಿ ತನ್ನ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ವಿಸ್ತರಿಸಿಕೊಂಡು ಹೋಗುವುದು ತನ್ನತನದ ಸಾಕ್ಷಾತ್ಕಾರವಾಗಿರುವವರಿಗೆ ಸಾಧ್ಯ. ಇಲ್ಲವಾದರೆ ಭ್ರಾಮಕವಾದ ಆದರ್ಶದ ಅಥವಾ ಹಗಲುಗನಸಿನ ಗೋಪುರಗಳಲ್ಲಿ ತಮ್ಮನ್ನು ಕಂಡುಕೊಂಡು ವಾಸ್ತವದ ಬದುಕಿನಲ್ಲಿ ಅವರು ತಮ್ಮತನವನ್ನು ಕಾಣುವುದೇ ಇಲ್ಲ.
3. ತನ್ನ ಸಾಮರ್ಥ್ಯವನ್ನು ಮುಂದಿಡುವುದು, ತಾನು ಹೇಗಿದ್ದೇನೆಂದು ಮುಂದಿಡುವುದಲ್ಲ.
ಕೆಲವು ವ್ಯಕ್ತಿಗಳನ್ನು ಗಮನಿಸಿ. ತಾನೆಷ್ಟು ಭಾವುಕವಾದ ವ್ಯಕ್ತಿ, ತಾನೆಷ್ಟು ಮರುಗುತ್ತೇನೆ, ತನಗೆ ಖುಷಿಯಾದರೆ ಹೇಗೆ ವರ್ತಿಸುತ್ತೇನೆ, ತನಗೆ ಅಪಮಾನವಾದರೆ ಹೇಗೆ ತಡೆದುಕೊಳ್ಳಲಾರದೇ ತಳಮಳಿಸುತ್ತೇನೆ, ತಾನು ಹೇಗೆ ವ್ಯಕ್ತಿಗಳನ್ನು ಹಚ್ಚಿಕೊಳ್ಳುತ್ತೇನೆ; ಇಂತಹ ತಮ್ಮ ವರ್ತನೆಗಳ ಬಗ್ಗೆಯೇ ಮಾತಾಡುತ್ತಾರೆ.
ಅದನ್ನೇ ಹೇಳುತ್ತಿರುತ್ತಾರೆ. ಆದರೆ, ಅವರ ತನ್ನತನವು ಸರಿಯಾಗಿ ರೂಪಾಂತರವಾಗಿದ್ದ ಪಕ್ಷದಲ್ಲಿ, ‘ತಾನು ಯಾವ ಕೆಲಸ ಮಾಡಬಲ್ಲೆ? ತನ್ನ ಸಾಮರ್ಥ್ಯವೇನು? ತಮ್ಮ ಸಾಮರ್ಥ್ಯ ಮತ್ತು ಕೌಶಲ್ಯ ಕೇಳುಗರ ಯಾವ ಕೆಲಸಕ್ಕೆ ಉಪಯೋಗಕ್ಕೆ ಬರಬಲ್ಲದು? ಇತ್ಯಾದಿಗಳನ್ನು ತಮ್ಮ ಕೇಳುಗರಿಗೆ ಮನವರಿಕೆ ಮಾಡಿಕೊಡುತ್ತಾರೆ.
ನಾನು ಹೇಗೆ ವರ್ತಿಸುತ್ತಿದ್ದೇನೆ, ನನ್ನ ಅಂಟಿಕೆ, ವ್ಯಾಮೋಹಗಳೇನು ಎಂದು ನನಗೆ ನನ್ನತನವನ್ನು ರೂಪಿಸಿಕೊಳ್ಳುವ ಅಥವಾ ಬದಲಿಸಿಕೊಳ್ಳುವ ದಿಕ್ಕಿನಲ್ಲಿ ಬೇಕಾಗಿರುವುದು. ಇತರರಿಗೆ ಅದನ್ನು ವಿವರಿಸುವ ಅಗತ್ಯವಿಲ್ಲ. ಅವರಿಗೆ ತಿಳಿಯಬೇಕಾಗಿರುವುದು ತನ್ನ ಸಾಮರ್ಥ್ಯ. ಉಳಿದದ್ದು ಅವರೇ ನೋಡುತ್ತಾರಲ್ಲಾ, ಅನುಭವಿಸುತ್ತಾರಲ್ಲಾ!
4. ತನ್ನತನದಲ್ಲಿ ಮೂಡುವ ವ್ಯಕ್ತಿಗತವಾದ ಭಾವ
ನಾನು ಎಂಬ ಭಾವವು ತನ್ನತನ ಎಂಬ ಅರಿವಿನ ಜೊತೆಗೆ ಒಂದಾಗಿ ಕೆಲಸ ಮಾಡುವುದು. ಇದರಿಂದ ವ್ಯಕ್ತಿಗತವಾಗಿ ಮತ್ತು ಸಾಮಾಜಿಕವಾಗಿ ಸಂಬಂಧಗಳನ್ನು ಕುರಿತು ಗೊಂದಲಗಳನ್ನು ಸೃಷ್ಟಿಸಿಕೊಳ್ಳದೇ ಹದವಾದ ಮತ್ತು ಮಧುರವಾದ ವಾತಾವರಣವನ್ನು ತಮಗೂ ಸೃಷ್ಟಿಸಿಕೊಳ್ಳಲು ಸಾಧ್ಯ, ಇತರರಿಗೂ ಆ ಅನುಭವ ನೀಡಲು ಸಾಧ್ಯ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕತೆ | ಮಾಯಮ್ಮ
~ತೆಲುಗು ಮೂಲ: ಡಾ.ವೇಂಪಲ್ಲಿ ಗಂಗಾಧರ್,ಕನ್ನಡಕ್ಕೆ: ಡಾ.ಶಿವಕುಮಾರ್ ಕಂಪ್ಲಿ
ʼಆಗಸದ ತುಂಬಾ ಕಪ್ಪನೆಯ ದಟ್ಟ ಮೋಡಗಳು ಕವಿದುಕೊಂಡಿವೆ. ಮೋಡ ಮೋಡಗಳು ಬಸೆದುಕೊಂಡು ಗುಡುಗು ರ್ಜಿಸುತ್ತಿದೆ. ಗುಡುಗು ಗುಡುಗುಗಳನ್ನು ಹೊತ್ತಿಕೊಂಡು ಮಿಂಚುಗಳು ಮಿನುಗುತ್ತಿವೆ. ಮಿಂಚು ಮಿಂಚುಗಳು ಹೊಸೆದುಕೊಂಡು ಬೆಂಕಿಸುರಿಸುತ್ತಿವೆ.ಆ ಸೆಕೆಗೆ ಕಪ್ಪುಮೋಡ ಕದಲಿಹೋಗುತ್ತಿದೆ. ಹೊಡೆದುಕೊಂಡು ಹೋಗುತ್ತಿದೆ. ಹೊಗೆಯನ್ನು ತಗಲಿಸಿಕೊಂಡು ಬೋಂಕನೆ ಸರಿಯುತ್ತಿದೆ. ನಕ್ಕನ್ ಕರೇಮೋಡ. ಈ ಗಡ್ಡೆಮ್ಯಾಕೆ ಸುರಿಬೇಕಂದರೆ ಈ ಮಾಡಗಳಿಗೆ ಏನು ಮಾಡಬೇಕೋ. ನಮ್ಮ ನೆತ್ತಿಯ ಮೇಲೆ ಬರವನ್ನು ಹಾಕಿ ಎಲ್ಲಿಗೋ ಮಳೆಗಳನ್ನ ಓಡಿಸಿಬಿಡುತ್ತವೆ. ಈ ಮಾಡಗಳಿಗೆ ಅದೇಟು ತೀಟಿ…” ವೀರಶಿವ ಬೈದುಕೊಳ್ಳುತಿದ್ದಾನೆ ಮಾಯಮ್ಮನ ಗುಡಿಯ ಪಡಸಾಲೆಯೊಳಗೆ ಉದ್ದಕೆ ಮಲಗಿಕೊಂಡು.
ಕಪ್ಪನೆಯ ಶರೀರ. ಮಾಸಿದ ಗಡ್ಡ. ಹರಿದುಹೋಗಿರುವ ಬಟ್ಟೆಗಳು. ಕೈಯೊಳಗೊಂದು ಬಿದುರು ಕೋಲು. ಹೆಗಲ ಮೇಲೊಂದು ಜೋಳಿಗೆ. ಧೂಳ ಕಾಲಿನ ಮೇಲೊಂದು ಕುರ ಅದಕ್ಕೆ ಮುತ್ತಿಕೊಳ್ಳುತ್ತಿರುವ ನೊಣದ ಹಿಂಡು, ಇವು ತಿಕ್ಕ ಶಿವನ ಆಕಾರ. ಯಾವಾಗಲೂ ಮಾಯವ್ವನ ಗುಡಿಯ ಹತ್ತಿರವೇ ಇರುತಾನೆ. ಹೊಟ್ಟೆ ಹಸಿದಾಗ ಮಾತ್ರವೇ ಎದ್ದು ಹಳ್ಳಿಗಳ ಒಳಗೆ ಬಂದು ಯಾರೋ ಒಬ್ಬರ ಮನಿಯೊಳಗೆ ಕುಂತು ಅಷ್ಟು ಜೋಳಿಗಿಯೊಳಗೆ ಹಾಕಿಸಿಕೊಂಡು ಹೋಗಿ ಆ ಗುಡಿಯ ಒಳಗೇ ಕುಂತು ತಿನ್ನುತ್ತಾನೆ. ಕಾಲುವೆಯೊಳಗೆ ಹರಿವ ನೀರನ್ನು ಬಾಯಿಗಚ್ಚಿಕೊಂಡೇ ಕುಡಿತಾನೆ. ಹಂಗೇ ಆತನ ಬದುಕೆಲ್ಲಾ ಕಳೆದು ಹೋಗುತ್ತಿದೆ.
ಆಕಾಶವೆಂದರೆ ಕೋಪ. ಮೋಡಗಳೆಂದರೆ ಕೋಪ. ಬೆಳೆಗಳೆಂದರೆ ಕೋಪ. ವ್ಯವಸಾಯವೆಂದರೆ ಕೋಪ. ನಂಬಿಕೊಂಡ ದೇವರೆಂದರೆ ಕೋಪ. ಅದುಕ್ಕೇ ಮಾಯವ್ವ ತಾಯಿಗೆ ಅರಿಷಿಣ ಕುಂಕುಮದ ಬದಲು ಮಸಿಬಳಿಯುತ್ತಾನೆ. ಆ ಗುಡಿ ಹತ್ರ ಆ ತಾಯಿಗೆ ಪೂಜೆಗಳಿಲ್ಲ ಪುನಸ್ಕಾರಗಳಿಲ್ಲ. ದೇವರ ವಿಗ್ರಹವೂ ಕೊಂಚ ಮುಕ್ಕಾಗಿದೆ. ಬಾವಲಿಗಳು ಸೇರಿಕೊಂಡಿವೆ. ಹೊಲಸು ನಾತ ಹೊಡೆಯುತ್ತದೆ. ಅಂತಹ ಗುಡಿಯಲ್ಲೇ ತಿಕ್ಕ ಶಿವಪ್ಪ. ಆ ತಾಯಿಗೆ ಬಾಯಿಗೆ ಬಂದಂಗೆ ಬೈಯುತ್ತಾ ಇರುತ್ತಾನೆ.
ತಿಕ್ಕ ಶಿವಪ್ಪನೆಂದರೆ ನಮ್ಮ ಹಳ್ಳಿಯೊಳಗೆ ಎಲ್ಲರಿಗೂ ಅಭಿಮಾನ. ದೊಡ್ಡ ದೊಡ್ಡವರೆಲ್ಲಾ ಕೈಯೆತ್ತಿ ಮುಗಿಯುತ್ತಾರೆ.
ಆತ್ಮೀಯತೆಯಿಂದ ಆದರಿಸುತ್ತಾರೆ. ಅತ ಬಂದು ಕೇಳಬೇಕೇ ವಿನಃ ಆಸ್ತಿಗಳನ್ನಾದರೂ ಕೊಟ್ಟುಬಿಡುತ್ತಾರೆ. ಆತನಿಗಿರುವ ಹೆಸರು ಅಂತಾದ್ದು. ತಿಕ್ಕ ಶಿವನೆನ್ನೋ ಹೆಸರು ಕೂಡಾ ಅಮಾಯಕವಾಗಿ ಮಕ್ಕಳು ಮಾತಾಡಿಕೊಳ್ಳೋದು. ʼವೀರ ಶಿವʼ ಅಂತಾ ಬಾಯತುಂಬಾ ಕರೆಯಬೇಕೆಂದರೆ ಎಲ್ಲರಿಗೂ ಪರಮಾನ್ನ ತಿನ್ನುವಷ್ಟು ಇಷ್ಟ. ಆಗ… ಆಗ್ಯಾವಾಗಲೋ.. ನಾನು ಸಣ್ಣವನಿದ್ದಾಗಿನ ದಿನದೊಳಗೆ ವೀರ ಶಿವನ ಸಾಹಸಗಳ ಕುರಿತು ಕತೆ ಕತೆಗಳಾಗಿ ಹೇಳುತಿದ್ದರು. ಆ ಕಥೆಗಳೆಲ್ಲವೂ ಜ್ಞಾಪಕಕ್ಕೆಬರುತ್ತಿವೆ…
***
ದಿನಾ ರಾತ್ರಿ ಹೊತ್ತಿಗೆ ದೊಡ್ಡ ಹುಲಿ ಬರುತಾತೆಂದು ಹಳ್ಳಿಯ ಜನ ಭಯಬೀಳುತಿದ್ದರೆ ಆ ವಿಷಯವು ಚಿಕ್ಕ ವೀರಶಿವನಿಗೆ ಒಂದು ದಿನ ತನ್ನ ಜೊತೆಗಾರರನ್ನು ಹಿಂದಾಕಿಕೊಂಡು ಬೆಟ್ಟದ ಮಲ್ಲಪ್ಪನ ಗುಡ್ಡದ ಬಯಲಿಗೆ ಹೊಂಟನು. ಕಣವಿಹಳ್ಳಿ ಅಡವಿಯೊಳಗಿಂದ ದಾಟಿಕೊಂಡು ಕುಮಾರನ ಹಳ್ಳಿ ದಿಕ್ಕಿಗೆ ತಿರುಗಿದನು.ಏಳು ಮೆಟ್ಟಿನ ಹುಲಿಬೇಟೆಗೆಂದು ತಿಳಿದರೆ ಯಾರೂ ಹಿಂದೆ ಬರಲಾರರೆಂದು ಮೊಲದ ಬೇಟಿಗೆ ಹೋಗಾನ ರ್ರಿ ಅಂತ ನಂಬಿಸಿದ್ದನು. ನಡು ರಾತ್ರಿತಂಕಾ ಮಲ್ಲಪ್ಪನ ಗುಡ್ಡಕ್ಕೆ ಸೇರಿಕೊಂಡು ಅಲ್ಲಿಂದ ಅಡ್ಡದಾರಿಗುಂಟಾ ಮಲ್ಲಪ್ಪನ ಗುಡ್ಡದ ಬಯಲ ಕಡೆಗೆ ಸೇರಿದರು.
ಕೈಯೊಳಗಿನ ನಾಡ ಬಂದೂಕು ಹಸಿದ ಕಣ್ಣು ಬಿಡುತ್ತಿದೆ. ಬಂಡೆಗಲ್ಲಿನ ಮೇಲೇರಿ ಕೆಳಗೆ ನೋಡುತಿದ್ದಾನೆ ವೀರಶಿವ. ಸಣ್ಣಗೆ ಪೊದೆಯೊಳಗಿನ ಎಲೆಗಳು ಅಲುಗಿದಂಗಾಯಿತು. ಜೊತೆಗಾರರು ಬೆದರಿ ಗುಡ್ಡದ ಮೇಲಕ್ಕೆ ಏರತೊಡಗಿದರು. ವೀರ ಶಿವ ತುಪಾಕಿಯನ್ನು ಸರಿಮಾಡಿಕೊಂಡನು. ಗುರಿ ಕುದುರಿತು. ನೋಟದೊಳಗೆ ಏನೋ ಅನುಮಾನ ಕಾಣಿಸಿತು. ತಡೆದನು. ಲಾಟೀನಿನ ಬುಡ್ಡಿ ದೀಪವನ್ನ ಸ್ವಲ್ಪ ಮೇಲೆತ್ತಿರೆಂದು ಹಿಡಿದುಕೊಳ್ಳಿರೆಂದು ಹೇಳಿದನು. ಪರೀಕ್ಷೆಯಿಂದ ಮರದ ಕಡೆಗೆ ನೋಡಿದನು. ಬಂಡೆ ಇಳಿಯಲು ಪ್ರಾರಂಭಿಸಿದನು. ಎಲ್ಲರೂ ಬ್ಯಾಡಾ ಅಂದರು. ಆದರೂ ಕೇಳದಂತೆ ಹೆಜ್ಜೆಯ ಸಪ್ಪಳ ಕೇಳದಂತೆ ಮರಗಳ ಕೆಳಗೆ ಹೋಗಿ ಸ್ವಲ್ಪ ಬಗ್ಗಿಕೊಂಡು ಎರಡು ಕೈಗಳಿಂದ ಅವಚಿಕೊಂಡನು. ದಾರಿ ಬಳಿ ಜಿಂಕೆ ಮರಿ ಕೊಸರಾಡುತ್ತಿದೆ. ಆಕಡಿಗೆ ಈ ಕಡಿಗೆ ಅದು ತಪ್ಪಿಸಿಕೊಳ್ಳಬೇಕೆಂದು ಕೊಸರಾಡುವುದನ್ನು ನೋಡಿ ಕೈಯೊಳಗಿದ್ದ ಹಗ್ಗದಿಂದ ಅದರ ಎರಡು ಕಾಲು ಕಟ್ಟಿ ಅಲ್ಲೇ ವಗೆದನು. ಅದು ಅರಚುತ್ತಲೇ ಇದೆ. ಅಲ್ಲಿಂದ ಚಕ ಚಕನೇ ಗುಡ್ಡದ ಬಂಡೆಯನ್ನೇರಿದನು. ನಾಡ ಬಂದೂಕನ್ನು ಕೈಯೊಳಗೆ ತೆಗೆದುಕೊಂಡನು. ಜಿಂಕೆ ಮರಿಯ ಕಡೆಗೆ ಗುರಿ ಇಟ್ಟುಕೊಂಡು ಹೊಂಚಿಕೊಂಡು ಕುಳಿತನು. ಆ ಜಿಂಕೆ ಮರಿ ಅಡವಿಯೆಲ್ಲಾ ಅದುರುವಂತೆ ಮೊರೆಯುತ್ತಲೇ ಇದೆ.
ಲಾಟೀನು ಬುಡ್ಡಿಯ ಬೆಳಕನ್ನು ಇಳಿಸಿದನು. ಜೊತೆಗೆ ಬಂದವರೆಲ್ಲಾ ಬೆದರಿ ಮುದುರಿಕೊಂಡು ಏನು ನಡೆಯುತ್ತಿದಿಯೋ ಏನೋ ಎಂದು ನೋಡುತಿದ್ದಾರೆ. ಬಂದೂಕು ಜಿಂಕೆ ಮರಿಯ ಕಡೆಗೇ ಇದೆ. ಜಿಂಕೆಯ ಕೂಗು ಹೆಚ್ಚಾಯಿತು. ಒಂದೇ ಸಾರಿಗೆ ಸಾವಿನ ಕೂಗು ಕೂಗಿತು. ವೀರಶಿವನ ಕೈಯೊಳಗಿನ ಬಂದೂಕು ರ್ಜಿಸಿತು. ತೋಟ ತೂರಿ ನುಗ್ಗಿಹೊರಟಿತು. ಹುಲಿ ಎಗರಿಬಿತ್ತು. ಹುಲಿ…ಹುಲಿ… ಜಿಂಕೆಗಾಗಿ ಬಂದಿತ್ತು. ವೀರಶಿವನ ಗುರಿ ಗೆದ್ದಿತು. ಆ ಕ್ಷಣದಲ್ಲೇ ಹಗ್ಗದ ಮೊಲಕು ಬಿಡಿಸಿಕೊಂಡ ಜಿಂಕೆ ಅಷ್ಟೇ ಹೆದರಿಕೆಯಲ್ಲಿ ಜಿಗಿದು ಹಾರಿ ಪೊದೆಯೊಳಗೆ ತೂರಿಹೋಯಿತು. ಗುಡ್ಡ ನಾಲ್ಕು ಹೆಜ್ಜೆ ಇಳಿದು ಮತ್ತೆ ಬಂದೂಕನ್ನು ಸರಿಪಡಿಸಿಕೊಂಡು ಕೆಳಗೆ ಬಿದ್ದು ವಿಲವಿಲನೇ ವದ್ದಾಡುತಿದ್ದ ಹುಲಿಯನ್ನು ಗುರಿಯಿಟ್ಟು ಮತ್ತೆ ಹೊಡೆದನು. ಅದು ರ್ಜಿಸುತ್ತಾ ವದ್ದಾಡಿ ಸತ್ತಿತು. ಇದನ್ನೆಲ್ಲಾ ಗದಗದನೇ ನಡುಗುತ್ತಾ ನೋಡುತಿದ್ದ ಜೊತೆಗಾರರೆಲ್ಲಾ ಅಂಗೇ ಕೇಕೆ ಹಾಕಿದರು. ಇದು ಪರಶಿವನ ಬೇಟೆಯ ಕಥೆ.
ಹುಲಿಯನ್ನು ಹೊಡೆದನೆಂದು ಊರೆಲ್ಲಾ ತಿಳಿದಮೇಲೆ ಎತ್ತನ ಬಂಡಿಯಮೇಲೆ ಸತ್ತ ಹುಲಿಯನ್ನೂ, ವೀರ ಶಿವನನ್ನೂ ಕೂರಿಸಿ ಮೆರವಣಿಗೆ ಮಾಡಿದರು ಊರಜನ. ಸುತ್ತು ಮುತ್ತಲ ಅರವತ್ತು ಹಳ್ಳಿಗಳವರೂ ಬಂದು ಹಬ್ಬ ಮಾಡಿದರು.ಆ ಹುಲಿ ರ್ಮ ತೆಗೆದು ರ್ಪದಿಂದ ಪರಶಿವನ ಮನೆಗೆ ನೇತು ಹಾಕಿದರು.ಹುಲಿಯುಗುರು ತೆಗೆದು ಬಂಗಾರದ ಸರಕ್ಕೆ ಹಾಕಿಕೊಂಡರು.
***
ಪರಶಿವನ ವಿವಾಹ ನಿಶ್ಚಯವಾಯಿತು. ಕರವಾಗಿ ಮಾವನಿಗೆ ಕೊಮಾರನ ಹಳ್ಳಿ ತಾಂಡಾದ ಬಳಿಯ ಬೆದ್ದಲು ಭೂಮಿಯನ್ನು ನೀಡಿದನು. ವಿವಾಹದ ದಿನ ವಧು ಪರ್ವತಿಗೆ ಏಳು ಗಜದ ರೇಷಿಮೆ ಸೀರಿ,ಝರಿ ರವಿಕೆ, ಬಂಗಾರದ ಬಳೆಗಳು,ಮೂಗು ನತ್ತು,ಬುಗುಡಿ,ಬೆಂಡೋಲಿ,ತೀಕಿ,ನಾಗರ,ಬೆಳ್ಳಿ ಡಾಬು, ಏಳುವರಹದ ವಡವೆಗಳು ಎಲ್ಲಾ ಪರಶಿವನೇ ಕನ್ನೆಗೆ ಇತ್ತನು.
“ ಬರಗಾಲವು ಕಿತ್ತು ತಿನ್ನುವಾಗ ಇದೇನಪೋ ಮದುವಿ” ಎಂದರು ಸರೀಕರು.
“ ನಮ್ಮೂರ ಗೌಡಪ್ಪನ ಮದುವಿ ನಾವು ಘನವಾಗೇ ಮಾಡಿಕೊಳ್ಳತೀವಿ” ಅಂದು ಆಕಾಸದಂಗ ಹಂದರ ಹಾಕಿ,ಊರೆಲ್ಲಾ ರಂಗೋಲಿ ಬಿಟ್ಟು,ದೊಡ್ಡ ಊರ ಹಬ್ಬದಂತೆ ಹನ್ನೆರಡು ದಿನಗಳ ಮದುವಿ ಮಾಡಿದರು. ಸುತ್ತು ಹಳ್ಳಿಗಳೂ ಸಂಭ್ರಮದಿಂದ ಕುಣಿದವು.
ಮದುವಿ ಹೆಣ್ಣು ಪರ್ವತಿ ಅದೆಷ್ಟು ಅದೃಷ್ಟವಂತಳೋ..!? ಎಂದು ಊರೆಲ್ಲಾ ಗಲಗಲನೇ ಅಂದುಕೊಂಡರು. ಅದೇನು ಗಾಚಾರನೋ…ಆಯಮ್ಮನು ಊರೊಳಗೆ ಕಾಲಿಟ್ಟೊಡನೆಯೇ ಬರವು ಬೆನ್ನುಬಿದ್ದಿತು. ಮನಿ ಮನಿಗೆ ಅರಿಷ್ಟವು ಬಡಿಯಿತು. ಬಾವಿಗಳೆಲ್ಲಾ ಒಣಗಿ ಹೋಗಿ, ಹಳ್ಳಗಳೆಲ್ಲಾ ಇಂಗಿ ಹೋಗಿ, ಊರು ನಂಬಿದ ಚಿನ್ನದ ಹಗರಿ ಎಂಬ ಕಿರು ನದಿಯು ಒಣಗಲು ಶುರುವಾಗಿದೆ. ಅವ್ವನ ಜಾತ್ರೆಯ ದಿನ ಮಾಯವ್ವನಿಗೆ ಬೋನಗಳ ಎಡೆ ಇಟ್ಟರು,ಅಂಗಳದಲ್ಲಿ ಕುರಿಕೋಣ,ಆಡು ಕೋಳಿಗಳೆಂಬೋ ನೂರಾರು ಜೀವಿಗಳ ರಕ್ತದ ಮುಖಗಳನ್ನ ಚಲ್ಲಿ, ಬಂಡಿಗಳ ಕಟ್ಟಿ, ಸಿಡಿಗೆ ತೋರಣಗಳನ್ನು ಕಟ್ಟಿಸಿದ್ದಾರೆ. ಗುಡಿಯಲ್ಲಿ ತಾಯಿಮರ್ತಿಗೆ ಬೆಳ್ಳಿಯ ಮುಖ,ಕಣ್ಣು,ಕೋರೆಗಳ ಮಾಡಿ ಇಟ್ಟಿದ್ದಾರೆ. ಜಾತ್ರಿಯ ಪೂಜಿ ಜೋರಾಗಿ ನಡೆಯುತ್ತಿದ್ದಾಗಲೇ ತಳವಾರ ಲಕ್ಷ್ಮಿಯ ಮೈಮ್ಯಾಲೆ ಆ ಮಾಯವ್ವ ತಾಯಿ ಮೈದುಂಬಿ ಬಂದಳು…
“ಅಲಲಲಲ ಮಕ್ಕಳೇ…ನಾನು ಯಾರು!?
ಈ ಭೂಮಿ ಆಕಾಶ ಹುಟ್ಟಿದಾಗಿಂದಲೂ…
ಮಹಾಶಕ್ತಿ; ಲೋಕ ಮಾತೆ
ಆದಿಶಕ್ತಿ ; ಲೋಕ ಮಾತೆ
ಕಾಲ ಮೀರಿದವಳು ಗುಡುಗು,ಸಿಡಿಲು,ಗಾಳಿ,ಮಳೆ,ಮುಗಿಲು..
ಈಗ ಒಂದು ಪಕ್ಷಿಯಾಗಿ ಹುಟ್ಟಿ…
ಕೂರಬೇಕೆಂಬ ತಾವು ಸಿಗದಾಗಿ…..
ಕಲ ಕಲನೆ ಗಾಳಿ ಗಾಳಿಯಾಗಿ ಅಂತರ ಅಂತರವಾಗಿ ಆಡುತ್ತಾ…
ಮಹಾ ಬಲಿದಾನವನ್ನ ಕೋರುತ್ತಿದೆ….” ಎಂದು ಹೇಳಿ ದೇವಾಲಯದ ಸುತ್ತಾ ಕಾರ ಮತ್ತು ಮಣ್ಣು ಚಲ್ಲುತ್ತಾ ತಿರುಗಿದಳು. ಜಾತರೆಯು ಪರ್ತಿಯಾಯಿತು. ಆದರೆ ಆ ತಾಯಿ ಶಾಂತಿಯಾಗಲಿಲ್ಲವೆಂದು ತಿಳಿದುಹೋಯಿತು.
ಹಸಿರು ಮರಗಿಡಗಳು ಒಣಗಿ ಹೋಗಿವೆ. ಎಲ್ಲಿಯೂ ಕೂಡಾ ಹನಿ ನೀರಿರದ ಪರಿಸ್ಥಿತಿ. ಬರಗಾಲ …ಬರಗಾಲಕ್ಕೆ ಕಾರಣ ಆಯಮ್ಮ ಪರ್ವತಿಯೇ…
“ಎಲ್ಲಿಂದಲೋ ಇಲ್ಲಿಗೆ ಸೊಸೆಯಾಗಿ ಬಂದಳು.ಇದೆಲ್ಲವೂ ಆಯಮ್ಮನ ಕಾಲ್ಗುಣವೇ ಎಂದು ಕೆಲವರು ಹೇಳಿದರೆ, ಅದೇನಿಲ್ಲ ಬರಕ್ಕೆ ಕಾರಣ ಆಯಮ್ಮನದೇಗಾಗುತ್ತದೆ ಎಂದು ಕೆಲವರು ಹೇಳಿದರು. ಅದೇನಲ್ಲ ಆಕೆ ಅರಿಷ್ಟ ಊರಿಗೆ ಶಾಪವಾಗಿದ್ದಾಳೆ ಎನ್ನಲು ಪ್ರಾರಂಭಿಸಿದರು. ಆಕೆಯ ಇಂತಹ ಮುಳ್ಳು ಮೊನೆಯ ಮಾತುಗಳನ್ನು ಭರಿಸದಾದಳು.ತನ್ನೊಳಗೆ ತಾನು ಕುಗ್ಗಿ ಕುಗ್ಗಿ ಅಳತೊಡಗಿದಳು. ತನ್ನ ಅರಿಷ್ಟದ ಕಾರಣದಿಂದಾಗಿಯೇ ಊರು ಬಂಜರು ನೆಲವಾಗುತ್ತಿದೆ ಎಂದು ಅಂದುಕೊಂಡಳು.
ಪರಶಿವನು ಸಮಾಧಾನಿಸಿದರೂ ಕೇಳಲಿಲ್ಲ.
ಗಂಡ ಹೊಲದ ಕಡೆಗೆ ಹೋದಾಗ ಆ ನಡು ಮದ್ಯಾನ್ಹದಲ್ಲಿ ಕಣಗಿಲೆಯ ಹೂಗಳನ್ನು ಬಟ್ಟಲತುಂಬಾ ಬಿಡಿಸಿಕೊಂಡು ಬಂದು ಅರೆದು ಮನಸಿನೊಳಗೆ ಆ ಮಾಯಮ್ಮ ತಾಯಿಗೆ ಅಡ್ಡ ಬಿದ್ದು ಹರಕೆ ಮಾಡಿಕೊಂಡಳು. “ ಊರು ಜನರ ಕಷ್ಟಗಳು ಕೊನಿಯಾಗಲಿ,ಕಣ್ಣೀರು ಬತ್ತಿ ಹೋಗಲಿ, ನೀರು ನೀರ ಸೆಲೆ ಹರಿದುಬರಲಿ…ಮಳೆ ಸುರಿದು ಸುರಿದೂ ನೆಲವೆಲ್ಲಾ ತೊಯ್ದು ಹಸಿರಾಗಲಿ. ಕರೆಗಳೆಲ್ಲಾ ತುಂಬಿಕೊಳ್ಳಲಿ…ಬೆಳೆ ಬೆಳೆದು ಸುಗ್ಗಿಯಾಗಲಿ… ಬರಗಾಲ ಹೋಗಲಿ… ಚಿನ್ನದ ಹಗರಿ ನದಿ ಮತ್ತೆ ಹರಿದಾಡಲಿ…. ತಾಯಿ ನನ್ನ ಆತ್ಮ ಬಲಿದಾನವನ್ನು ತೆಗೆದುಕೋ. ತಗೆದು ಕೋ ತಾಯಿ. ಎಂದು ಬಟ್ಟಲನ್ನು ಎತ್ತಿಕೊಂಡು ಗಟ ಗಟನೆ ಗಂಟಲಿಗೆ ಹಾಕಿಕೊಂಡಳು. ಕುಡಿದ ಕೆಲವೇ ಕ್ಷಣಗಳಲ್ಲಿ ಉಸಿರು ನಿಂತಿತು. ಕಾಲು ಕೈಗಳು ತಣ್ಣಗಾದವು.
ಚೆಂಜೆಗೆ ವೀರಶಿವನು ಬಂದು ನೋಡೋ ವೇಳೆಗೆ ಆಯಮ್ಮನ ಶರೀರವು ಕಪ್ಪಾಗಿ ಹೋಗಿತ್ತು.ಇನ್ನ ಯಾರೇನು ಮಾಡುತ್ತಾರೆ? ಪರಶಿವನ ದುಃಖವನ್ನು ಪದಗಳು ಹಿಡಿಯಲಾಗಲಿಲ್ಲ. ಬಿದ್ದು ಬಿದ್ದು ಅತ್ತನು. ಬಂಗಾರದಂತಹ ಹುಡುಗಿ ಮದುವಿ ಆಗಿ ಆರು ತಿಂಗಳು ಕಳೆಯಲಿಲ್ಲವಲ್ಲೋ…ಊರಿಗಾಗಿ ಪ್ರಾಣವನ್ನೇ ಕಳಕೊಂಡಳು ಎಂದು ಜನರೆಲ್ಲರೂ ಅಂದುಕೊಂಡರು. ಆಕೆಯನ್ನು ಚಿನ್ನದ ಹಗರಿ ನದಿ ದಡದಲ್ಲೇ ಹೂತರು. ಇನ್ನ ಆ ದಿನದಿಂದಲೇ ವೀರ ಶಿವನು ಆ ಮನೆಗೆ ಹೋಗದೆ ತೋಟದ ಬಳಿಯೇ ಇರತೊಡಗಿದನು. ಮನೆ ಬಳಿಗೆ ಹೋದರೆ ತನ್ನ ಪರ್ವತಿಯೇ ಗರ್ತಿಗೆ ಬರುತ್ತಾಳೆಂದು ಹೋಗುವುದನ್ನು ಬಿಟ್ಟು ಬಿಟ್ಟನು. ಮತ್ತೆ ಮದುವೆ ಮಾಡಿಕೊ ಎಂದು ಯಾರೇಳಿದರೂ ಕೇಳದಾದನು.
ನೀರಿನ ಪರಿಸ್ಥಿತಿ ಇನ್ನಾ ಅದ್ವಾನವಾಯಿತು. ಎಲ್ಲೆಲ್ಲಿಂದಲೋ ಗುಂಡೆಯೊಳಗಿನ ಗಬ್ಬು ನೀರನ್ನು ಕೂಡಾ ದೇವಿಕೊಂಡು ತರುತಿದ್ದಾರೆ.
***
ದಿನಗಳು ಕಳೆದು ಹೋಗುತ್ತಿದ್ದಂತೆ ಊರಿಗೆ ಪರ್ಲಬ್ಬವು ಬಂದಿತು.ಊರಿನೊಳಗೆ ಯಾವ ಸಂಭ್ರಮವೂ ಇಲ್ಲ. ಆಗ ಪರಶಿವನೇ ಮುಂದೆ ಬಂದು ಚಾವಡಿಯ ಬಳಿ ಸಮಾವೇಶ ನಡೆಸಿದನು. ನಾವಿರುವ ಊರೊಳಗೆ ಬರಗಾಲ ಹೋಗಬೇಕೆಂದರೆ ಅಲಾಯಿ ಹಬ್ಬವನ್ನು ಮಾಡಬೇಕು. ಬರಗಾಲ ಹೋಗಲು, ಮಳೆಹನಿ ಸುರಿಯಲು,ನಾವು ಊರಲ್ಲಿ ಪೀರ ದೇವರ ಅಲೆಗುಣಿ ತೋಡಬೇಕು.ಪೀರಲು ದೇವರನ್ನು ಕೂಡಿಸಿ, ಕತ್ತಲ ರಾತ್ರಿಯ ಅಲೆ ಕುಣಿಯ ಕೆಂಡದ ಕರ್ಯವು ಜರುಗಿಸಬೇಕು ಎಂದನು. ರ್ಮಕ್ಕಾಗಿ ಬಲಿದಾನವಾದ ಹಸನ ಹುಸೇನರಂತೆ ನಮ್ಮೂರಿನ ಒಳ್ಳೇದಕ್ಕಾಗಿಯೇ ಬಲಿದಾನವಾದ ಊರ ಪರ್ವತವ್ವನನ್ನು ನೆನೆದು ಯಾರಿಂದಲಾದರೂ ಊರಿಗೆ ಒಳ್ಳೆಯದಾದರೆ ಸಾಕು ಎಂದು ಊರಿನ ಹಿರಿಯರು ಹಾಗೇ ಆಗಲಿ ಎಂದು ಒಪ್ಪಿಕೊಂಡರು.
ಅಮಾಸಿ ಆದ ಮರುದಿನ ಅಲೆ ಕುಣಿ ತೋಡಿದರು. ಸುತ್ತಿಟ್ಟ ಪಂಜಾ ದೇವರುಗಳನ್ನು ಪೂಜೆಗಿಟ್ಟರು. ಹುಲಿಗಳು ಊರತುಂಬಾ ಕುಣಿಯತೊಡಗಿದವು. ಅಳ್ಳಳ್ಳಿ ಬುವ್ವಗಳು ಸೊಂಟಕ್ಕೆ ಗಂಟೆಯ ಪಟಗಾಣಿ ಕಟ್ಟಿಕೊಂಡು ಚಡ್ಡು ಹಿಡಿದು ಹೊರಟರು. ಮಸೂತಿಗೆ ಜನ ಬಂದು ಬಂದು ಸಕ್ಕರಿ ಓದಕಿ ಓದಿಸಿ ಸಿಹಿ ಪಡೆದು ಲಾಡಿ ಕಟ್ಟಿಕೊಂಡು ಹೊರಟರು.ಮಸೂತಿ ದೇವರುಗಳು ಊರೊಳಗೆ ಹೊರಟು ಎಲ್ಲಾ ದೇವರುಗಳನ್ನು ಬೇಟಿ ಮಾಡತೊಡಗಿದವು. ತಂಗಿ ಮಯಮ್ಮನ ಗುಡಿ ಹತ್ತಿರ ಬಂದು ಎರಡೂ ದೈವಗಳು ಅಪ್ಪಿಕೊಂಡು ಅತ್ತವು. ಬಿಡಿಸಿಕೊಂಡು ಬಿಡು ಊರಿಗೆ ಒಳಿತಾಗಲಿ ಎಂದು ಬಿಡಿಸಿಕೊಂಡು ಎರಡು ದಿಕ್ಕಿಗೆ ತಿರುಗಿದವು. ಕತ್ತಲ ರಾತ್ರಿಯ ದಿನ ಕಡಿದು ತಂದ ಮರದ ಬಡ್ಡೆಗಳು ಹೊತ್ತಿಕೊಂಡವು. ಕೆಂಪನೆಯ ಕೆಂಡದ ಕೆನ್ನಾಲಿಗೆಗಳು ಎದ್ದವು. ಜನ ಉಪ್ಪು ಹಿಡಿದು ಕಟ್ಟಿಗೆಗಳನ್ನು ಹೊತ್ತು ತಂದು ಕ್ವಾವ್ ಸೇನ್ ಬಾವ್ ಸೇನ್ ಎಂದು ಕುಣಿಗೆ ಹಾಕಿ ಉರಿ ಹೆಚ್ಚು ಮಾಡಿ ಸುತ್ತಿ ಸುತ್ತಿ ಹೊರಟರು.ಅಲೆ ಕುಣಿಯ ಕೆಂಡದ ಹಾಸಿಗೆಯೇನೋ ತಯಾರಾಯಿತು ಆದರೆ ಅದರಲ್ಲಿ ನಡೆಯುವವರು ಯಾರು? ಯಾವಾಗಲೂ ನಡೆಯೋ ಪೀರಣ್ಣ ಮಾವ ಮಂಚ ಹಿಡಿದಿದ್ದಾನೆ. ಮಗ ಜಮಾಲ ಕಮ್ಮಾರ ಹುಡುಗಿ ಕಾಂತಮ್ಮನನ್ನು ಎಬಿಸಿಗೊಂಡು ಊರು ಬಿಟ್ಟು ಓಡಿದ್ದಾನೆ.
ಕುಣಿ ಉರಿಯುತ್ತಲೇ ಇದೆ. ಆಗ ಪರಶಿವನೇ ಮುಂದಕ್ಕೆ ಬಂದನು. ಕೈಯೊಳಗೆ ದೊಡ್ಡ ಪೀರದೇವರ ಪಂಜಾವನ್ನು ಹಿಡಿದುಕೊಂಡು ಕುಣಿಯೊಳಗೆ ಹೆಜ್ಜೆ ಇಟ್ಟನು. ಹೆಜ್ಜೆ ಕದಲಲು ಕೆಂಡಗಳು ಹೂತು ಬಿಡುವಂತೆ ಎಗರಿ ಎಗರಿ ಬೀಳುತ್ತಿವೆ.ಅಲೆ ಕುಣಿಯ ತುಂಬಾ ಜನ…ತಾಗಿ ಕೊಳ್ಳುತ್ತಾ…ದಬ್ಬಿಕೊಳ್ಳುತ್ತಾ ನೋಡಲಿಕ್ಕೆ ಮೇಲೆ ಮೇಲೆ ಬೀಳುತಿದ್ದಾರೆ.
ಆ ಕಡೆಯಿಂದ ಈ ಕಡೆಗೆ , ಈ ಕಡೆಯಿಂದ ಆ ಕಡೆಗೆ ಮೂರು ಸಲ ಕೆಂಡದೊಳಗೆ ನಡೆದು ಪೀರದೇವರನ್ನು ಗದ್ದುಗೆ ಮೇಲಿಟ್ಟು ಕಣ್ಣು ತಿರುಗಿ ಕುಸಿದು ಬಿದ್ದನು ಪರಶಿವ.
“ ಅಭ್ಯಾಸವಿಲ್ಲದ ಕೆಲಸವನ್ನು ಯಾಕೆ ಮಾಡಬೇಕಪ್ಪಾ ಸ್ವಾಮಿ” ಎಂದನು ಪಕ್ಕದಲ್ಲಿದ್ದ ಹಿರಿಯ ಕತ್ಲಪ್ಪ.
“ ಈ ಬರಗಾಲ ನೋಡಲಾಗದೇ ಬಂದೆ ಕಣಜ್ಜೋ..” ಎಂದನು ವೀರ ಶಿವ ಬಿಗಿದ ಪಾದಗಳನ್ನು ನೋಡಿಕೊಳ್ಳುತ್ತಾ.
ಆದರೂ ಮಳೆರಾಯ ತಿರುಗಿ ನೋಡುತ್ತಿಲ್ಲ. ಹನಿ ಬೀಳುತ್ತಿಲ್ಲ. ಮಾಡಗಳೆಲ್ಲಾ ಮೊಂಡು ಬಿದ್ದುಬಿಟ್ಟಂಗದೆ.
ಅಲೆ ಕುಣಿಯ ಕೆಂಡ ಚೆಲ್ಲಾಡಿ ದೇವರು ಹೊರಟ ಬಳಿಕ ಆ ಬೂದಿಯನ್ನು ವಿಭೂತಿಯಾಗಿ ಬಳಸಲಿಕ್ಕೆ ,ಆಧಾರವಾಗಿ ಇಟ್ಟುಕೊಳ್ಳಲಿಕ್ಕೆ ಜನರು ಪೈಪೋಟಿಗೆ ಬಿದ್ದಿದ್ದಾರೆ. ಆ ಬೂದಿ ಇದ್ದರೆ ಮನೆಯೊಳಗೆ ದೆವ್ವಗಳ ಕಾಟ ಬರೋದಿಲ್ಲ. ಹತ್ತಿರ ಸುಳಿಯಲಾರವು ಎಂಬುದು ಅವರ ನಂಬಿಕೆ. ಉಳಿದ ಬೂದಿಯನ್ನ ಜನರು ಆಕಾಶಕ್ಕೆ ತೂರಿದರು. ಮಳೆರಾಯನಿಗೆ ಬಾರಪ್ಪೋ ಸ್ವಾಮಿ ಎಂದು ಕೈ ಮುಗಿದರು. ಆದರೂ ಆಕಾಶರಾಯ ಕರಗಲಿಲ್ಲ.
ಜನ ಗುಳೇ ಹೋಗಲು ಶುರು ಮಾಡಿದರು. ನೀರಿಲ್ಲದ ಊರಲ್ಲಿ ಬಿದ್ದು ಸಾಯುವುದಕ್ಕಿಂತಾ ಎಲ್ಯಾನ ಕಾಡಲ್ಲಾದರೂ ಗಡ್ಡೆ ಗೆಣಸು ತಿಂದು ಇರೋದೇ ಪಾಡೆಂದು ಊರ ಜನರು ಮನೆಗಳ ತೊರೆದು ಹೋಗುತಿದ್ದಾರೆ. ಇಷ್ಟು ಕಾಲ ನಂಬಿಕೊಂಡಿದ್ದ ನೆಲವನ್ನು ಬಿಟ್ಟು ಕೊಟ್ಟು ದೇಸಾಂತರ ಹೋಗುತ್ತಿರುವವರ ನೋಡಿದಾಗ ಪರಶಿವನಿಗೆ ನೋವಾಗುತ್ತಿದೆ.
ಆದರೂ ಪಾಪ ಆತನೇನು ಮಾಡುತ್ತಾನೆ. ಕರುಣ ರಸವನ್ನು ಹೊಮ್ಮಿಸುವ ಭಕ್ತ ಕುಮಾರವ್ಯಾಸನ ಕಥೆ ಹೇಳಿಸಿದರೆ ಆ ಮಾಡಗಳು ಕರಗಿ ಕರುಣಿಸುತ್ತವೆಂದು ಯಾರೋ ಹಿರಿಯ ಹೇಳಿದರೆ ಆಗಲಿ ಬಿಡೆಂದು ಶಿವಮೊಗ್ಗದ ಕಡೆಯಿಂದ ಕಲಾ ಕಾರರನ್ನು ಕರೆಕಳಿಸಿದನು. ರಾತ್ರಿಯೆಲ್ಲಾ ಮಾಯವ್ವ ತಾಯಿಗೆ ಕಾವ್ಯದ ರಸವನ್ನು ಉಣಿಸತೊಡಗಿದನು.
ಅಳಿದುಳಿದವರು ಕೂಡಿ ಮಳೆಯ ಹಾಡುಗಳ ಹಾಡುತಿದ್ದಾರೆ.
“ ಯಾತಕ್ಕೆ ಮಳೆ ಹೋದವೋ ಶಿವ ಶಿವಾ
ಲೋಕ ತಲ್ಲಣಿಸುತಾವೋ ಶಿವ ಶಿವಾ…
ಬೇಕಿಲ್ಲಾದಿದ್ದರೆ ಬೆಂಕಿಯ ಮಳೆ ಸುರಿದು
ಉರಿಸಿ ಕೊಲ್ಲಲು ಬಾರದೇ.
ಹೊಟ್ಟೆಗೆ ಅನ್ನ ಇಲ್ಲದಲೆ
ನಡೆದರೆ ಜೋಲಿ ಹೊಡೆಯುತಲೆ
ಪಟ್ಟದಾನೆಯಂತ ಸ್ತ್ರೀಯಾರು ಸೊರಗಿ
ಸೀರೆ ನಿಲ್ಲೋದಿಲ್ಲ ಸೊಂಟಾದ ಮೇಲೆ.
ಹಸುಗೂಸು ಹಸುವಿಗೆ ತಾಲದೆಲೆ
ಅಳುತಾವೆ ರೊಟ್ಟಿ ಕೇಳುತಲೇ
ಹಡೆದ ಬಾಣಂತಿಗೆ ಅನ್ನವು ಇಲ್ಲದಲೆ
ಏರುತಾವೆ ಮೊಳಕೈಗೆ ಬಳೆ.
ಒಕ್ಕಾಲು ಮಕ್ಕಳಂತೆ
ಅವರಿನ್ನು ಮಕ್ಕಳನು ಮಾರುಂಡರು
ಮಕ್ಕಳನು ಮಾರುಂಡು ರೊಕ್ಕವನು ಮಾಡುತಾರೆ
ಮುಕ್ಕಣ್ಣ ಮಳೆ ಕರುಣಿಸೋ..
ಸ್ತ್ರೀಯರು ಅಳುತ್ತಿದ್ದಾರೆ. ಹಳ್ಳಿ ಜನರು ಮುತ್ತಿಕೊಳ್ಳುತಿದ್ದಾರೆ. ಬಂಗಾರದಂತ ಮಕ್ಕಳನ್ನು ಮಾರುವುದೇಗೆ ಎಂದು , ಅಂತ ಘಳಿಗೆ ತಂದ ಮಳೆರಾಯನಿಗೆ ತಾಯಂದಿರು ಬರಕ್ಕೆ ಶಪಿಸುತಿದ್ದಾರೆ. ಇದನ್ನು ಕಂಡ ಪರಶಿವನಿಗೆ ಬಾಯಿ ಕಟ್ಟಿತು. ಕಾಲು, ಕೈಗಳು ಬಿಗಿಯಲಾರಂಭಿಸಿದವು. ನಾಟಿ ವೈದ್ಯರು ಬಂದು ಹಸಿರು ಸೊಪ್ಪಿನ ರಸ ಹಿಂಡಿ ಕೂಡಿಸಿದರು. ಹಾಡು ಕಾವ್ಯಗಳು ಮಧ್ಯದಲ್ಲೇ ನಿಂತು ಹೋದವು.
ಆ ದಿನ ಮೊದ ಮೊದಲು ಪರಶಿವನಿಗೆ ಸ್ವಲ್ಪ ಸ್ವಲ್ಪ ಮತಿ ತಪ್ಪುವುದು ಶುರುವಾಯಿತು. ಹುಚ್ಚು ಹುಚ್ಚಾಗಿ ಮಾತಾಡುವುದು…. ವಿಚಿತ್ರವಾಗಿ ನಗುವುದು..ಅಳುವುದು….ಆಕಾಶಕ್ಕೆ ತಿರುಗಿ ಉಗಿವುದು… ಈ ರ್ತನೆಯನ್ನು ನೋಡಿದವರಿಗೆ ಮನವೆಲ್ಲಾ ನೊಂದಿತು.
ಬಂಗಾರದಂತಹ ಮನೆಯ ನಡುಗಂಬ ಕುಸಿದು ಬಿದ್ದಾಗ, ಭೂಮಿಗಳೆಲ್ಲಾ ಪಾಳು ಬಿದ್ದಾಗ ವೀರಶಿವನನ್ನು ನೋಡಿಕೊಳ್ಳರ್ಯಾರೂ ಇಲ್ಲದಾದರು. ಕಾಲದೊಂದಿಗೆ ಆತನ ವಯಸ್ಸೂ ಕರಗಿ ಹೋಗುತ್ತಿದೆ. ಪ್ರಾಯ ಹಾರಿ ಹೋಗಿದೆ.
ಮನುಷ್ಯನೇನೂ ಕುಗ್ಗಲಿಲ್ಲ ಆದರೂ ಆಗಾಗ ಬಿದಿರುಕೋಲು ಹಿಡಕೊಂಡು ಊರೊಳಗೆ ಕಾಣಿಸುತಿರುತ್ತಲೇ ಇರುತ್ತಾನೆ. ಆದರೂ ಆ ಮನುಷ್ಯ ಸುಮ್ಮನಿರುತಾನಾ…
***
ಬೆಳಗಾದಗಿಂದಲೂ ಬೆಳ್ಳನೆಯ ಮೋಡಗಳನ್ನು ಬೈಯುತ್ತಲೇ ಇದ್ದವನು ಈಗ ಹೊರಟಿದ್ದಾನೆ.ವೀರಾಪುರದ ಬಳಿಯ ಕಾಕಿ ಚಣ್ಣದ ಎಲ್ಲಜ್ಜನನ್ನು ಕಲೆತು ಅಂಜನ ಹಾಕಿ ನೋಡು ಎಂದನು. ಚಿನ್ನದ ಹಗರಿ ನದಿ ಕತೆಯೇನೋ. ಆತ ನೋಡಿ ಹೇಳಿದನು.” ನೆಲದ ಕೆಳಗಿನಿಂದ ಆಕಾಶದ ಮೋಡದ ತನಕ ಅರಿಷ್ಟವು ಸುತ್ತಿಕೊಂಡಿದೆ. ದೊಡ್ಡ ಬಲಿದಾನ ನಡೆಯದ ಹೊರತು ಇದು ಹೋಗದು. “ ಹೌದೌದು. ಹುಣ್ಣಿಮೆ ದಿನವೂ ಮಾಯವ್ವ ತಾಯಿ ಮೈದುಂಬಿ ಇದೇ ಮಾತೇಳಿದಳು.” ಎನ್ನುತ್ತಾ ಜೋರು ಜೋರಾಗಿ ನಡೆದು ಮಾಯಮ್ಮ ದೇವಿ ಗುಡಿಯ ಬಳಿಗೆ ಬಂದನು. ವಿಗ್ರಹಕ್ಕೆ ಹತ್ತಿದ ಮಸಿಗುಡ್ಡೆಯನ್ನು ತೆಗೆದು ಹಾಕಿದನು. ಹರಿಷಿಣ ಕುಂಕುಮಗಳನ್ನು ಹಚ್ಚಿ ಹೂಗಳನ್ನು ಏರಿಸಿ ಪೂಜೆಗಳನ್ನು ಮಾಡಿದನು. ಗುಡಿಯೊಳಗೆ ಸೇರಿಕೊಂಡ ಬಾವಲಿಗಳನ್ನು ಓಡಿಸಿದನು. ಕಸಕಡ್ಡಿ ,ಮಲಿನಗಳನ್ನೆಲ್ಲಾ ತೆಗೆದು ದಿಬ್ಬದ ಮೇಲೆ ಒಗೆದನು. ಬಾಯಿಗೆ ಬಂದ ಮಂತ್ರಗಳೇನೋ ಆ ತಾಯಿಯ ಮುಂದೆ ಕೂತು ಹೇಳಿದನು. ಹಾಡಿದನು. ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿದನು. ಅತ್ತನು. ರಾತ್ರಿಯೆಲ್ಲಾ ಆ ತಾಯಿಯ ವಿಗ್ರಹದ ಬಳಿಯೇ ಕೂತು ಪ್ರರ್ಥಿಸಿದನು. ಬೆಳ್ಳಿ ಮೂಡುವ ವೇಳೆಗೆ ಯಾವುದೋ ರಹಸ್ಯವನ್ನು ಕಂಡು ಹಿಡಿದವನಂತೆ ಪರಶಿವನ ಸಂಭ್ರಮದಿಂದ ಊರಿನೊಳಗೆ ಬಂದನು.
“ ಇನ್ನ ಇರಲ್ಲ ಬಿಡು… ಈ ಬರಗಾಲವನ್ನ ಅವ್ನವೌನ್ ಅದರ ಹೆಣ ನೋಡ್ತಾನಿ” ಎಂದು ಊರೆಲ್ಲಾ ತಿರುಗುತ್ತಾ ಹೇಳಿದನು. ಜನರೆಲ್ಲಾ ಈ ಹುಚ್ಚು ಮಾತುಗಳನ್ನ ಆಶ್ರ್ಯದಿಂದ ಕೇಳಿದರು.
ಬಿದಿರು ಕೋಲನ್ನು ಪಕ್ಕಕ್ಕೆ ಬಿಸಾಕಿ ಮಾಯಮ್ಮ ತಾಯಿ ದೇವರ ಗುಡಿ ಮುಂದೆ ಆ ದೇವಿಗೆ ಧಿಡನಮಸ್ಕಾರ ಮಾಡಿದನು. ಅಂಗೇ ಹೊರ ಹೊಂಟನು… ಎಲ್ಲಿಗೆ ಸಿದ್ದಯ್ಯನ ಗುಡ್ಡದ ಮೇಲಕ್ಕೆ. ರ್ಮಾನುಷವಾಗಿ ಒಣಗಿ ಬೀಳು ಬಿದ್ದಿರುವ ಭೂಮಿಗಳು. ಕೆಂಪು ಧೂಳಿನಿಂದ ಸುತ್ತೂ ತಿರುಗಿ ಬರುತ್ತಲಿದೆ. ಏನು ಧೂಳಿನ ದೆವ್ವ ಗಾಳಿ. ಹಾಗೇ ಮುಂದಕ್ಕೆ ಸಾಗಿದನು. ಒಣಗಿದ ಕೆರೆಯ ಬಳಿ ನಿಂತು ಸುತ್ತೂ ಮಾಯಮ್ಮ ತಾಯಿಯನ್ನ ಬಿಡದಂತೆ ಕಂಡನು. ದುಃಖಿಸಿದನು. ದೂರದಲ್ಲಿ ಊರ ಜನರು ಓಡುತ್ತಾ ಇತ್ತ ಕಡೆಗೇ ಬರುತಿದ್ದಾರೆ.
ರಾತ್ರಿಯೆಲ್ಲಾ ಕುಳಿತು ಮಸೆದು ಇಟ್ಟ ರ್ಧಚಂದ್ರಾಕಾರದ ಗಂಡು ಗೊಡಲಿಗೆ ಮುತ್ತಿಟ್ಟನು. ನೆಲದ ಮಣ್ಣನ್ನು ತೆಗೆದುಕೊಂಡು ಕಣ್ಣಿಗೆ ತೀಡಿಕೊಂಡನು. “ ನಮಗೇಕೆ ತಾಯಿ ಈ ನರಕ. ಆ ಕಡಿಗೆ ಎಲ್ಲರನ್ನ ಸಾಯಿಸಾದರೂ ಸಾಯಿಸು. ಇಲ್ಲದಿದ್ದರೆ ಎಲ್ಲರಿಗನ್ನಾ ಹೊಟ್ಟೆತುಂಬಿಸು. ನಡುವಿನ ಈ ಬರಗಾಲವೇಕೆ” ಕೈಯೊಳಗೆ ಉಳಿದ ಮಣ್ಣನ್ನು ನೆಲಕ್ಕೆ ಹಾಕಿದನು.
“ ನನ್ನ ಪ್ರಾಣ ತಗಂಡನ್ನಾ ಶಾಂತವಾಗಿ ನಾಲ್ಕು ಚುಕ್ಕೆಗಳ ಕಣ್ಣೀರ ಹನಿಸು… ಎನ್ನುತ್ತಾ ಕೈಯೊಳಗಿನ ಗಂಡಗೊಡಲಿಯನ್ನ ಬಲವಾಗಿ ಗಿರ ಗಿರನೇ ತಿರುಗಿಸಿ ಮುಗಿಲ ಕಡೆಗೆ ಎಸೆದನು ಅದು ತಿರುಗುತ್ತಾ ತಿರುಗುತ್ತಾ ಕೆಳಕ್ಕೆ ಬರುತ್ತಿದೆ…ಬರುತ್ತಿದೆ..ಬರೋ ಕಡೆಗೇ ಶಿರ ಬಾಗಿಸಿದನು ವೀರ ಶಿವ. ತಲೆ ಬಾಗಿಸಿದವನನ್ನ ಪಕ್ಕಕ್ಕೆ ಎಳೆದುಕೊಂಡರು ಊರ ಜನರು.
“ ಬಿಡ್ರೋ… ಬಿಡ್ರೋ…” ಅಂತ ಬಿಡಿಸಿಕೊಂಡನು ವೀರಶಿವ.
ಮೇಲಿಂದ ಬೀಳುತಿದ್ದ ಗಂಡು ಗೊಡಲಿ ನೆಲದ ಮಣ್ಣಲ್ಲಿ ನಾಟಿಕೊಂಡಿತು.
“ ಏನು ಸ್ವಾಮಿ ಹಿಂಗ ಮಾಡಿದಿರಿ” ಜನರೊಳಗಿನ ಯಾರೋ ಕೇಳಿದರು.
“ ಸಾಯಲು ಬಿಡ್ರಿ ನನ್ನನ್ನು ಸಾಯಲು ಬಿಡ್ರಿ” ನಿಮಗೆ ಮಳೆ ರ್ತಾವು. ನೀವು ಸುಖವಾಗಿರುತ್ತೀರಿ..” ದುಃಖದಿಂದಲೇ ಹೇಳುತಿದ್ದಾನೆ.
“ ಸತ್ತರೇ ಮಳೆ ಬರುತಾದ ಅಂದ್ರ ದಿನಕ್ಕೊಬ್ಬರು ಸಾಯುತಿಲ್ಲವೇ ಸ್ವಾಮಿ. ಸಾವೇ ಸಮಾಧಾನವಾ…” ಎಂದು ಹೇಳಿದ ಜನರೊಳಗಿನ ಹಿರೀಕ.
“ ಮಾಯಮ್ಮ ತಾಯಿಗೆ ಕರುಣೆ ಹುಟ್ಟಿದರೆ ಈಗಲೇ ಮಳೆ ಬರುತ್ತದೆ. ನಾವ್ಯಾಕೆ ಪ್ರಾಣ ಕಳಕೋ ಬೇಕು. ಯಾರದೋ ಹೆಣ್ಣು ಧ್ವನಿ ಕೇಳುತ್ತಿದೆ.
ಓ… ತನೇನು ಮಾಡುತಿದ್ದೇನೆ. ಯಾಕೆ ಹೀಗೆ ರ್ತಿಸುತಿದ್ದೇನೆ. ಇಲ್ಲ. ನಾನು ಜನರಿಗಾಗಿ ವೀರಶಿವನಾಗಿಯೇ ಬದುಕಬೇಕು. ಜನರಿಗಾಗಿ ಬದುಕಬೇಕು. ಊರಿಗಾಗಿ ಬದುಕಬೇಕು. ಕಾಲ ಕೆಳಗೆ ತಣ್ಣನೆಯ ತಂಪು…ತಣ್ಣಗೆ ತಂಪಾದ ಸಣ್ಣನೆಯ ಅನುಭವ… ನೀರ ತೇವ…ಭೂಮಿ ಬಿರಿಯಿತು. ಭೂಮಿ ಉರಿಯಿತು. ಮುಗಿಲು ಬೆದರಿತು.
ಕವಿದುಕೊಂಡ ಕಪ್ಪು ಮೋಡಗಳು ಒಂದಕ್ಕೊಂದು ತಿವಿದುಕೊಂಡು ಅಪ್ಪಳಿಸಿದವು. ಮಿಂಚು ಮಿಂಚು ಹೆಣೆದುಕೊಂಡು ಬೆಂಕಿ ಬೆಳಗಿದವು. ಗುಡುಗು ಸಿಡಿಲು ಸಿಡಿದುಕೊಂಡು ಬೆಂಕಿ ಉಗಿದವು. ಆ ಬಿಸಿಗೆ ಕಪ್ಪು ಮೋಡಗಳು ಕದಲಿ ಕೆಳಗಿಳಿದವು. ಎಲ್ಲಿದ್ದವೋ ಅಲ್ಲೇ. ಎಲ್ಲಿ ನಿಂತ ಮೋಡ ಅಲ್ಲೇ ಹೃದಯವನ್ನು ತೆರೆದು ಕಣ್ಣೀರು ಸುರಿಸಿದಂತಹ ಹನಿಗಳು.
ಒಂದರ ನಂತರ ಒಂದು ನೆಲಕ್ಕೆ ಹಾರಿ ಹಾರಿ ಬರುತ್ತಲಿವೆ ಮಳೆ…ಮಳೆ..ಸುರಿಯುತ್ತಲೇ ಹೋಯಿತು. ಹಗಲೂ ಇರುಳು. ಹೊಳೆಗಳು ತುಂಬಿ ಹೊರಳತೊಡಗಿದವು.
ತಗ್ಗು ಹಳ್ಳ ದಿನ್ನೆಗಳೆಲ್ಲಾ ನೀರು…ನೀರು …ನೀರು.
ಎತ್ತ ನೋಡಿದರೂ ನೀರು… ಕರೆ ಕೋಡಿ ಬೀಳುತ್ತಿದೆ.
ತಾಯಿ ಮಹಾತಾಯಿ.ಮಾಯಮ್ಮ ತಾಯಿ ಹರಿಯುತ್ತಿದ್ದಾಳೆ.
ಚಿನ್ನದ ಹಗರಿಯಾಗಿ ಹರಿಯುತಿದ್ದಾಳೆ. ಪ್ರವಾಹವಾಗಿ ಉಕ್ಕುತಿದ್ದಾಳೆ.
ಹಸಿರಾಗಿ ನಗುತ್ತಾ ಹಾಡುತಿದ್ದಾಳೆ.
ಒಣಗಿದ ಬೇರುಗಳಿಗೆ ಉಸಿರು ಬಂದಿತು.
ಬಾಡಿದ ಎಲೆಗಳಿಗೆ ಪ್ರಾಣ ಬಂದಿದೆ… ಬಂದಿದೆ …ಬಂದಿದೆ.
ಊರಿಗೆ ಉಸಿರು ಬಂದಿದೆ. ಊರು ಹಸಿರ ಮರವಾಗಿದೆ.
ಪಕ್ಷಿಗಳ ಗೂಡಾಗಿದೆ…ಸುಗ್ಗಿಯ ನೆಲವಾಗಿದೆ… ಹಾಡುಗಳ ಕಣವಾಗಿದೆ…ಜಾತ್ರೆಯ ನದಿಯಾಗಿದೆ….ಮಾಯಮ್ಮ ತಾಯಿಯ ಬೆಳ್ಳಿ ಮುಖವಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಆತ್ಮಕತೆ | ಕೃಷ್ಣಪ್ಪನವರ ನಿಧನ : (09.06.1938 – 30.04.1997)
~ ರುದ್ರಪ್ಪ ಹನಗವಾಡಿ
ಭದ್ರಾವತಿಯಿಂದ ಬೆಂಗಳೂರಿಗೆ ಬಂದ ಕೃಷ್ಣಪ್ಪನವರು ಬಹುಜನ ಸಮಾಜ ಪಕ್ಷದ ಕೆಲಸ ನಿರ್ವಹಿಸುತ್ತಿದ್ದರೂ ಅವರ ರಕ್ತಮಾಂಸ ಬಸಿದು ಕಟ್ಟಿದ ಮೂಲಸಂಘಟನೆ ಡಿಎಸ್ಎಸ್ ಹಲವು ಗುಂಪುಗಳಾಗಿ ಒಬ್ಬರಿಗೊಬ್ಬರು ಅನುಮಾನಗಳಿಂದ ದೂರದೂರವಾಗಿದ್ದರು. ಇವರ ಜೊತೆ ಆತ್ಮೀಯ ಹೋರಾಟಗಾರರಾಗಿದ್ದ ಅನೇಕರು ಮಾತಿಲ್ಲದೆ ಅವರವರೇ ಕೊರಗುತ್ತಿದ್ದರು.
ಶಿವಮೊಗ್ಗ ಭದ್ರಾವತಿಯಲ್ಲಿ ಕೃಷ್ಣಪ್ಪನವರಿಗೆ ಎಲ್ಲಾ ಜಾತಿಯ, ಸಾಹಿತ್ಯ ಮತ್ತು ಸಾಂಸ್ಕೃತಿಕ ನಾಯಕರ ಬೆಂಬಲ, ಡಿಎಸ್ಎಸ್ ನ ಎಲ್ಲ ಹೋರಾಟಗಾರರಿಗೂ ಸಿಗುತ್ತಿತ್ತು. ಬೆಂಗಳೂರಿಗೆ ಬಂದ ನಂತರ ಆದ ಬೆಳವಣಿಗೆಗಳ ಬಗ್ಗೆ ಒಂದು ರೀತಿಯ ವಿಷಾದ ತುಂಬಿದ ಭಾವ ಕೃಷ್ಣಪ್ಪನವರಲ್ಲಿ ತುಂಬಿತ್ತು. ಆದರೂ ಅವರು ಮತ್ತೆ ಇದನ್ನು ಪುನಶ್ಚೇತನಗೊಳಿಸುವ ಕರ್ಯದಲ್ಲಿ ಹಗಲು ರಾತ್ರಿ ರಾಜ್ಯದ ವಿವಿಧೆಡೆಗೆ ಪ್ರಯಾಣ ಮಾಡುತ್ತ ವಿವಿಧ ಜಿಲ್ಲೆಗಳಿಗೆ ಹೋಗಿ ಡಿಎಸ್ ಎಸ್ ಸಂಘಟನೆಯ ಕರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಅವರು ಡಿಎಸ್ಎಸ್ ಸಂಘಟನೆಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾಡಿದ ನಿರಾಶಾ ಕಾಲದಲ್ಲಿಯೇ ಛಲಬಿಡದ ವಿಕ್ರಮನಂತೆ ದಲಿತರನ್ನೆಲ್ಲ ಪುನಃ ಸಂಘಟಿಸಿ ಪುನಶ್ಚೇತನ ಗೊಳಿಸುವ ಬಗ್ಗೆ ಅವರ ಸಹಪಾಠಿ ಆರ್. ನಾಗರಾಜ್, ಅರ್ಕೇಶ್ ಮತ್ತು ನಾನು ಅವರ ಮನೆಯಲ್ಲಿ ಸೇರಿದಾಗ ಚರ್ಚಿಸುತ್ತಿದ್ದರು. ಮೈಸೂರಿನ ಮಹಾದೇವ ಬೆಂಗಳೂರಿನ ಸಿದ್ಧಲಿಂಗಯ್ಯ ಇವರುಗಳ ಸಂಬಂಧ ಬಹಳ ದೂರ ಸರಿದಿತ್ತು. ಅದನ್ನು ಪುನಃ ಪುನಶ್ಚೇತನಗೊಳಿಸುವುದಕ್ಕೆ ಬೇಕಾದ ಶ್ರಮ ಹಾಕಲು ಮಹಾದೇವನಿಗಾಗಲೀ, ಸಿದ್ಧಲಿಂಗಯ್ಯನಿಗಾಗಲೀ ಇರಲಿಲ್ಲ. ಹಾಗಾಗಿ ಮತ್ತೆ ಏಕಾಂಗಿಯಾಗಿಯೇ ಎಲ್ಲಾಕಡೆ ಇವರೊಬ್ಬರೇ ತಿರುಗಾಡಿ ಸಂಘಟಿಸಲು ಶ್ರಮಿಸುತ್ತಿದ್ದರು.
ಈ ಯೋಜನೆಯ ಭಾಗವಾಗಿ ಆಯೋಜಿಸಿದ್ದ ಅಂಬೇಡ್ಕರ್ ರ್ಯಾಲಿಯಲ್ಲಿ ಭಾಗವಹಿಸಲು, ಗದಗ ಜಿಲ್ಲಾ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಿದ ಸಭೆಗೆ ಹೋಗಿದ್ದರು. ನಾನು ಯಲಹಂಕ ಆಫೀಸಿನ ಕೆಲಸ ಮುಗಿಸಿ ಮಧ್ಯಾಹ್ನ ಊಟಕ್ಕೆ ಅವರ ಮನೆಗೆ ಹೋದಾಗ ಮೇಷ್ಟರು ಗದಗ್ಗೆ ಹೋದ ಸುದ್ದಿ ತಿಳಿದಿತ್ತು. ಗದಗ್ನಲ್ಲಿ ಕೃಷ್ಣಪ್ಪನವರ ತಂಗಿಯ ಮಗಳು ಮೈತ್ರ್ರಾ ಕೂಡಾ ಇದ್ದುದು, ಮೈತ್ರಾಳ ಗಂಡ ಬ್ಯಾಂಕ್ವೊಂದರಲ್ಲಿ ಉದ್ಯೋಗಿಯಾಗಿದ್ದು, ಸಂಘಟನೆಯ ಜೊತೆ ಅವರನ್ನೆಲ್ಲಾ ನೋಡಿಕೊಂಡು ಬರುವರೆಂದು ಮಾತಾಡಿಕೊಂಡು ನಾನು ಮಧ್ಯಾಹ್ನ ಊಟ ಮುಗಿಸಿಕೊಂಡು ಮತ್ತೆ ಆಫೀಸಿಗೆ ಹೋಗಿದ್ದೆ. ಆದರೆ ಸಂಜೆ 5ರ ವೇಳೆಗೆ ಕೃಷ್ಣಪ್ಪನವರು ಗದಗ್ನಲ್ಲಿ ಹುಷಾರಿಲ್ಲದೆ ಆಸ್ಪತ್ರೆಯಲ್ಲಿರುವುದಾಗಿಯೂ ಗದಗ್ನಿಂದ ಫೋನ್ ಬಂದಿರುವುದಾಗಿಯೂ ನನ್ನ ಆಫೀಸಿಗೆ ಮಗಳು ಶಾಲಿನಿ ಫೋನ್ ಮಾಡಿದ್ದಳು. ಇಂದಿರಾ ಆಫೀಸ್ ಮುಗಿಸಿ ಮನೆಗೆ ಬರುವ ವೇಳೆಗೆ ನನ್ನ ಹೆಂಡತಿ ಗಾಯತ್ರಿಗೂ ಫೋನ್ ಮಾಡಿ ತಿಳಿಸಿದೆ. ಅರ್ಜೆಂಟಾಗಿ ನಾವು ಎಲ್ಲರೂ ಗದಗ್ಗೆ ಹೋಗಿ ಮೇಷ್ಟçರನ್ನ ಕರೆದುಕೊಂಡು ಬಂದು ಇಲ್ಲಿಯೇ ಶುಶ್ರೂಷೆ ಕೊಡಿಸುವ ಎಂದು ಮಾತಾಡಿಕೊಂಡು ರಾತ್ರಿಯೇ ಬೆಂಗಳೂರಿನಿಂದ ಹೊರಟು ಮಧ್ಯೆ ರಾತ್ರಿ ನಮ್ಮೂರ ಬಳಿ ನಿಂತು ನಮ್ಮ ಊರಿನವರಿಗೂ ವಿಷಯ ತಿಳಿಸಿ ಬೆಳಿಗ್ಗೆ 7 ಘಂಟೆಗೆ ಗದಗ ತಲುಪಿದೆವು.
ಬೆಂಗಳೂರು ಬಿಟ್ಟು ಹೊರಟಾಗ ಅವರ ಆರೋಗ್ಯದಲ್ಲಿನ ಸಮಸ್ಯೆ ಸ್ಪಷ್ಟವಾಗಿ ಏನೆಂದು ತಿಳಿಯದಿದ್ದರೂ-ಅವರ ಬಿಡುವಿಲ್ಲದ ತಿರುಗಾಟಕ್ಕೆ ತಡೆಹಾಕಿ ಆರೋಗ್ಯದ ಕಡೆ ಗಮನ ನೀಡಲು ಏನೆಲ್ಲ ಕ್ರಮ ಜರುಗಿಸಬೇಕೆಂದು ನನ್ನ ಹೆಂಡತಿ ಗಾಯತ್ರಿ ಇಂದಿರಾಗೆ ಸಲಹೆ ನೀಡುತ್ತಿದ್ದಳು. ಕೃಷ್ಣಪ್ಪನವರ ಆರೋಗ್ಯ ಕೆಡಿಸುವಂತಹ ಅಭ್ಯಾಸಗಳು ಅವರಿಗೆ ಮೊದಲಿನಿಂದಲೂ ಇರಲಿಲ್ಲ. ಡಿಎಸ್ಎಸ್ನ ಸಮಾವೇಶಗಳಲ್ಲೂ ಕೂಡ ಎಲ್ಲರಿಗೂ ಸ್ವಚ್ಛತೆ, ವ್ಯಾಯಾಮ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರಭಾವಿಸುತ್ತಿದ್ದರು. ಕೊಳಕುತನ, ಸೋಮಾರಿತನ ಬಾಲ್ಯದಿಂದಲೂ ಕೃಷ್ಣಪ್ಪನವರ ಬಳಿ ಸುಳಿದಿರಲಿಲ್ಲ. ಊಟ ಉಪಚಾರಗಳಲ್ಲೂ ಶಿಸ್ತುಬದ್ದರಾಗಿದ್ದು ಅವರಿಗೆ ಅನಾರೋಗ್ಯ ಎಂಬ ಮಾತು ಕೇಳಿರಲಿಲ್ಲ. ಈ ಕಾರಣದಿಂದ ಏನಾದರೂ ಆಗಿರಲಿ ಬಂದ ನಂತರ ಅವರನ್ನು ಹೆಚ್ಚು ತಿರುಗಾಡಲು ಬಿಡಬಾರದೆಂಬ ತೀರ್ಮಾನ ಮಾಡಿಕೊಂಡು ನಾವೆಲ್ಲ ಗದಗ್ ಕಡೆ ಹೊರಟಿದ್ದೆವು.
ಹೋದಾಕ್ಷಣ ಅವರನ್ನು ಐಸಿಯುನಲ್ಲಿ ನಾವು ಮೂವರೂ ಹೋಗಿ ನೋಡಿದೆವು. ಕಣ್ಣು ಬಿಟ್ಟು ನೋಡಿದ್ದನ್ನು ಬಿಟ್ಟರೆ ಬೇರೇನೂ ಮಾತಾಡಲಿಲ್ಲ. ಇಂತಹ ಪರಿಸ್ಥಿತಿಯನ್ನು ನಾವ್ಯಾರು ನಿರೀಕ್ಷಿಸಿರಲಿಲ್ಲ. ದಾರಿಯುದ್ದಕ್ಕೂ ಯೋಚಿಸಿಕೊಂಡು ಬಂದದ್ದಕ್ಕೂ ಇಲ್ಲಿನ ಪರಿಸ್ಥಿತಿ ನೋಡಿ ನಾವೆಲ್ಲಾ ಗರಬಡಿದಂತಾಗಿ ಕೂತಿದ್ದೆವು. ಗಾಯತ್ರಿ, ಇಂದಿರಾ ಮಾತಾಡದೆ ಉಸಿರಾಡುತ್ತಿದ್ದರು. ಮತ್ತೆ 10-15 ನಿಮಿಷಗಳಲ್ಲಿ ಪರಿಸ್ಥಿತಿ ಹದಗೆಡುತ್ತಿದೆ ಎಂದು ವಾರ್ಡ್ ಬಾಯ್ ಹೇಳಿದಾಗ ನಾವೆಲ್ಲ ಒಳಗೆ ಹೋದೆವು. ಬಂದ ಡಾಕ್ಟರ್ ನಮ್ಮನ್ನೆಲ್ಲ ಮತ್ತೆ ಹೊರಹೋಗಲು ಹೇಳಿ ಶುಶ್ರೂಷೆ ಮಾಡುತ್ತಿದ್ದರು. ಏನಾಯಿತು, ಹೇಗಾಯಿತು ಎಂದು ನಾವುಗಳೆಲ್ಲ ಸಾವರಿಸಿಕೊಳ್ಳುತ್ತಿರುವಾಗಲೇ ಮೇಷ್ಟರು ಕೊನೆಯುಸಿರೆಳೆದಿದ್ದರು. ಅಂದು ದಿನಾಂಕ 30-4-1997 ಬೆಳಗಿನ 8.30 ಇರಬಹುದು. ನಾವು ಬಂದು ನೋಡಿ ನಂತರ ಫ್ರೆಶ್ ಆಗಿ ನಂತರ ಏನು ಮಾಡುವುದು ಎಂದು ಯೋಚಿಸುವ ಮುನ್ನ ಇದೆಲ್ಲ ಆಗಿ ಹೋಗಿತ್ತು.
ಈಚೆ ಬಂದ ನನಗೆ ಸಾವನ್ನ ಹೀಗೆ ನೇರವಾಗಿ ಎದುರಿಸಿದ ಸಂದರ್ಭಗಳು ಇರಲಿಲ್ಲ. ಮುಂದಿನ ವಿಚಾರವನ್ನು ಯೋಚನೆ ಮಾಡುತ್ತಲೇ ಹತ್ತಿರದಲ್ಲಿದ್ದ ಟೆಲಿಫೋನ್ ಬೂತ್ನಿಂದ ಮೈಸೂರಿನಲ್ಲಿದ್ದ ಮಗಳು ಸೀಮಾ ಮತ್ತು ಬೆಂಗಳೂರಿನಲ್ಲಿದ್ದ ಶಾಲುಗೆ ಹಾಗೂ ಬೆಂಗಳೂರಿನ ವಿಧಾನಸೌಧದಲ್ಲಿ ಪಿಎಸ್ ಆಗಿದ್ದ ಬಸವಣ್ಯಪ್ಪನಿಗೆ ತಿಳಿಸಿ ಎಲ್ಲಾ ಡಿಎಸ್ಎಸ್ ಸ್ನೇಹಿತರಿಗೆ ತಿಳಿಸಲು ಹೇಳಿದೆ. ಹರಿಹರದಲ್ಲಿನ ಮೇಷ್ಟರ ತಮ್ಮಂದಿರಿಗೆ ಸುದ್ದಿ ತಿಳಿಸಿ ಬಂದೆ. ಸಿರಸಿಯಲ್ಲಿದ್ದ ಮೇಷ್ಟರ ಇನ್ನೊಬ್ಬ ತಮ್ಮ ಮಾರುತಿಗೆ ತಿಳಿಸಿ ಮೇಷ್ಟರ ಪಾರ್ಥಿವ ಶರೀರವನ್ನು ಹರಿಹರಕ್ಕೆ ತೆಗೆದುಕೊಂಡು ಹೋಗುವ ಬಗ್ಗೆ ವ್ಯವಸ್ಥೆ ಮಾಡಿದೆ. ಆಸ್ಪತ್ರೆಯ ರೀತಿನೀತಿಗಳನ್ನು ಮುಗಿಸಿ-ಸಮಾಧಿಯಾಗುವುದು ಇನ್ನೂ ಒಂದು ದಿನ ತಡವಾಗುವುದರಿಂದ ದೇಹಕ್ಕೆ ಬೇಕಾದ ರೀತಿಯಲ್ಲಿ ಇಂಜೆಕ್ಷನ್ ಕೊಡಿಸಿ ಸುಮಾರು 3-4 ಗಂಟೆಗೆ ಗದಗ ಬಿಟ್ಟು ಹರಿಹರ ಟೌನ್ನಲ್ಲಿದ್ದ ಮೇಷ್ಟರ ಮನೆಗೆ ಸಂಜೆ 7 ಗಂಟೆಯ ಸಮಯಕ್ಕೆ ತಲುಪಿದ್ದೆವು.
ರಾತ್ರಿ ಭಜನೆ ಮಾಡಲು ವ್ಯವಸ್ಥೆ ಮಾಡಿ ನಂತರ ಮೇಷ್ಟರ ಸಂಸ್ಕಾರ ಎಲ್ಲಿ ಏನು ಎಂದು ಅವರ ತಮ್ಮಂದಿರು ತಂಗಿಯರ ಜೊತೆ ಮಾತಾಡಿದಾಗ ಅದೆಲ್ಲ ತುಂಗಭದ್ರಾ ನದಿಯ ದಡದಲ್ಲಿ ಮಾಡುವುದು ಎಂದು ತಿಳಿಸಿದರು. ಈ ಬಗ್ಗೆ ದುಃಖದಲ್ಲಿ ಮುಳುಗಿದ್ದ ಇಂದಿರಾ ಜೊತೆ ಏನೂ ಮಾತಾಡುವ ಸ್ಥಿತಿಯಲ್ಲಿರಲಿಲ್ಲ. ಇದೇ ಚಿಂತೆಯಲ್ಲಿ ನಾನು ಮೂರು ಕಿ.ಮೀ. ದೂರದ ನಮ್ಮ ಊರಿಗೆ ಬಂದಿಳಿದೆ. ರಾತ್ರಿಯಲ್ಲಿ ನಿದ್ದೆ ಬಾರದೆ ಒದ್ದಾಡಿದೆ. ಹರಿಹರ ತುಂಗಾ ನದಿ ದಡದಲ್ಲಿ ಸಂಸ್ಕಾರ ಮಾಡುವ ಅವರ ನಿರ್ಧಾರವನ್ನು ತಿಳಿದು ಮನಸ್ಸಿಗೆ ಒಂದು ಚಿಂತೆಯಾಯಿತು. ಇಷ್ಟೊಂದು ಹೋರಾಟದ ಜೀವನ ನಡೆಸಿದ ಮನುಷ್ಯನ ನೆನಪು ನಾಳೆಗೆ ಭೌತಿಕವಾಗಿ ಕೊನೆಯಾಗುವ ಬಗ್ಗೆ ಚಿಂತೆಯಾಯಿತು. ನಾನು ನಮ್ಮ ಅಣ್ಣ ಅವ್ವ ಇವರ ಜೊತೆ ಚರ್ಚಿಸಿ-ನಮ್ಮ ತೋಟದ ಜಮೀನಿನಲ್ಲಿ ಸಮಾಧಿ ಮಾಡಿದರೆ ಹೇಗೆ ಎಂದು ಯೋಚಿಸಿ, ಬೆಳಿಗ್ಗೆ ಈ ನನ್ನ ಯೋಚನೆಯನ್ನು ಮೇಷ್ಟರ ತಮ್ಮ ಮಾರುತಿ ಬಳಿ ಚರ್ಚಿಸಿ ನಂತರ ಎಲ್ಲ ಅವರ ಸಂಬಂಧಿಗಳಿಗೂ ವಿಚಾರಿಸಿದೆ. ಅವರೆಲ್ಲರೂ ನನ್ನ ಸಲಹೆಗೆ ಒಪ್ಪಿದರು. ಅದರಂತೆ ಎಲ್ಲಾ ಡಿಎಸ್ಎಸ್ನ ಕರ್ಯಕರ್ತರಿಗೆ, ಅಧ್ಯಾಪಕರಿಗೆ, ರಾಜಕಾರಣಿಗಳಿಗೆ ತಿಳಿಸಿದೆವು. ಹರಿಹರದಿಂದ ನಮ್ಮೂರಿನಿಂದಲೇ ತರಿಸಿದ್ದ ಟ್ರಾಕ್ಟರ್ನಲ್ಲಿ ನಮ್ಮ ತೋಟದಲ್ಲಿ ಸುಮಾರು 4 ಗಂಟೆಯ ಸಮಯಕ್ಕೆ 1-5-1997ರಂದು ಕೃಷ್ಣಪ್ಪನವರ ಅಂತಿಮ ಕಾರ್ಯವನ್ನು ಮಾಡಿದೆವು. ಅಂತಿಮ ದರ್ಶನ ಪಡೆಯಲು ರಾಜ್ಯದಾದ್ಯಂತ ಪ್ರಗತಿಪರರು, ಡಿಎಸ್ಎಸ್ ಕರ್ಯಕರ್ತರು, ರಾಜಕಾರಣಿಗಳ ದಂಡೇ ಆಗಮಿಸಿತ್ತು. ಸಮಾಧಿಯಾದ ನಂತರ ಡಿಎಸ್ಎಸ್ನ ಎಲ್ಲಾ ಬಣಗಳ ಕರ್ಯಕರ್ತರೂ ಕೃಷ್ಣಪ್ಪನವರ ಹೋರಾಟದ ಆಶಯಗಳನ್ನು ಈಡೇರಿಸಲು ಅಂದು ಪ್ರಮಾಣ ಮಾಡುವ ಪ್ರತಿಜ್ಞೆ ಮಾಡಿ ನಿರ್ಗಮಿಸಿದ್ದರು.
1997ರಲ್ಲಿ ಕೃಷ್ಣಪ್ಪನವರ ನಿರ್ಗಮನದ ನಂತರ ಕರ್ನಾಟಕದ ದಲಿತ ಹೋರಾಟದ ಸಮಗ್ರ ಚಿತ್ರಣ ಹಲವು ಟಿಸಿಲುಗಳಾಗಿ ಹೊರಹೊಮ್ಮಿದ್ದವು. ನನ್ನ ಸರ್ಕಾರಿ ನೌಕರಿಯ ಜೊತೆ ಎಲ್ಲ ಬಣಗಳಲ್ಲಿ ನನಗೆ ಬಲ್ಲವರಿದ್ದರೂ ಯಾರೊಡನೆ ಒಡನಾಡುವುದು ಎಂಬ ಪ್ರಶ್ನೆ ಮೂಡುತ್ತಿತ್ತು. ಆದರೂ ಯಾರು ಏನೇ ಕರ್ಯಕ್ರಮ ಮಾಡುವಾಗ ಸಹಕಾರ ನೀಡಲು ಕೋರಿದರೆ ಮುಕ್ತ ಮನಸ್ಸಿನಿಂದ ಸಹಾಯ ಮಾಡುತ್ತಿದ್ದೆ.
ಕೃಷ್ಣಪ್ಪನವರ ನಿಧನಾನಂತರ ಬಿಎಸ್ಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಕಾನ್ಷಿರಾಮ್ ಅವರು ಯಲಹಂಕದಲ್ಲಿದ್ದ ಕೃಷ್ಣಪ್ಪನವರ ಮನಗೆ ಬಂದು ಇಂದಿರಾ ಮತ್ತು ಅವರ ಇಬ್ಬರು ಮಕ್ಕಳು ಶಾಲಿನಿ, ಸೀಮಾ ಅವರಿಗೆ ಸಾಂತ್ವನ ಹೇಳಿದರು. ತಕ್ಷಣದ ಅಗತ್ಯಗಳಿಗೆ ಎಂಬ ಕಾರಣದಿಂದಲೋ ಏನೋ ಎರಡು ಲಕ್ಷ ರೂಪಾಯಿಗಳನ್ನು ಇಂದಿರಾ ಅವರ ಕುಟುಂಬಕ್ಕೆ ನೀಡಿದ್ದರು. ಆದರೆ ಇಂದಿರಾ ಅವರು ನನಗೀಗ ಸರ್ಕಾರಿ ನೌಕರಿ ಇರುವ ಕಾರಣ ನೀಡಿ, ಅದನ್ನು ಕೃಷ್ಣಪ್ಪನವರ ಹೆಸರಿನಲ್ಲಿ ಮುಂದೆ ಸ್ಥಾಪಿಸಿದ ಟ್ರಸ್ಟ್ನ ಹೆಸರಿನಲ್ಲಿ ನಡೆಸುವ ಕರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುವುದು ಎಂದು ಹೇಳಿ ಆ ಹಣವನ್ನು ಒಪ್ಪಿಕೊಂಡಿದ್ದರು. ಅದರಂತೆ ಕಾನ್ಷಿರಾಮ್ ಅವರು ನೀಡಿದ ಹಣ, 1997ರಲ್ಲಿ ಸ್ಥಾಪಿಸಿದ ಪ್ರೊ.ಬಿ. ಕೃಷ್ಣಪ್ಪ ಟ್ರಸ್ಟ್ನಲ್ಲಿ ಮೂಲಧನವಾಗಿ ಉಳಿದಿದೆ. ಕೃಷ್ಣಪ್ಪನವರ ಆಶಯದಂತೆ ಕರ್ಯಕ್ರಮಗಳನ್ನು ನಿರ್ವಹಿಸಿಕೊಂಡು ಕಳೆದ 24 ವರ್ಷಗಳಿಂದ ಬರುತ್ತಿದ್ದೇವೆ.
ಕೃಷ್ಣಪ್ಪನವರು ಕಾಲವಾದ ಎರಡು ತಿಂಗಳಲ್ಲಿ ಡಿಎಸ್ಎಸ್ನ ಅವರ ಅನುಯಾಯಿಗಳಲ್ಲಿ ನಾನು ಮತ್ತು ಇಂದಿರಾ ಮನವಿ ಮಾಡಿ ಕೃಷ್ಣಪ್ಪನವರ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸುವ ಬಗ್ಗೆ ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆಯನ್ನು ಅರ್ಕೇಶ್ ಇದ್ದ ಸಿಆರ್ಪಿಎಫ್ನಲ್ಲಿನ ಒಂದು ಸಭಾಂಗಣದಲ್ಲಿ ಕರೆದಿದ್ದೆವು. ಆ ಸಭೆಗೆ ಸಾಕಷ್ಟು ಜನ ಬಾರದಿದ್ದರಿಂದ ಮತ್ತೊಂದು ಬಾರಿ ಎಲ್ಲರಿಗೂ ತಿಳಿಹೇಳಿ 9 ಅಥವಾ 11 ಜನರಿರುವ ಒಂದು ಟ್ರಸ್ಟ್ ಸ್ಥಾಪಿಸುವ ಬಗ್ಗೆ ಮತ್ತೆ ಸಭೆ ಕರೆದೆವು. ಎರಡನೇ ಸಭೆಯಲ್ಲಿ ಬಂದವರ ಅಭಿಪ್ರಾಯ ಪಡೆದು 11 ಜನರಲ್ಲಿ ದಲಿತ ಹೋರಾಟಗಾರರು, ಕೃಷ್ಣಪ್ಪನವರ ಕುಟುಂಬ ಮತ್ತು ಅವರ ಸಹಪಾಠಿಗಳನ್ನು ಸೇರಿದಂತೆ ಟ್ರಸ್ಟ್ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಿದೆವು.
ನಾನು ಮತ್ತು ಇಂದಿರಾ ಮ್ಯಾನೇಜಿಂಗ್ ಟ್ರಸ್ಟಿಗಳು. ಕೃಷ್ಣಪ್ಪನವರ ಸಹಪಾಠಿಗಳಾಗಿದ್ದ ಆರ್. ನಾಗರಾಜ್ ಮತ್ತು ಕೃಷ್ಣಪ್ಪನವರ ಕಿರಿಯ ಸಹೋದರ ಬಿ. ಮಾರುತಿ, ನಮ್ಮ ಸಹೋದರ ಸಿ. ತಿಪ್ಪಣ್ಣ ಮತ್ತು ಉಳಿದಂತೆ ಡಿಎಸ್ಎಸ್ನಲ್ಲ್ಲಿದ್ದ ಕೃಷ್ಣಪ್ಪನವರ ಅನುಯಾಯಿಗಳಾದ ಚಿತ್ರದುರ್ಗದ ಜಯಣ್ಣ, ಶ್ರೀಧರ ಕಲಿವೀರ, ಮಾವಳ್ಳಿ ಶಂಕರ್, ಬಿಎಸ್ಪಿಯಲ್ಲಿದ್ದ ಮಾರಸಂದ್ರದ ಮುನಿಯಪ್ಪನವರ ಹೆಸರುಗಳನ್ನು ಅಂತಿಮಗೊಳಿಸಿದ್ದೆವು. ಎರಡು ಬಾರಿ ಎಲ್ಲರೂ ಸೇರಿ ನೋಂದಾಯಿಸಲು ಸಬ್ ರಿಜಿಸ್ಟಾçರ್ ಆಫೀಸಿಗೆ ಬರುವಂತೆ ದಿನಾಂಕ ನಿಗದಿ ಮಾಡಿದ್ದರೂ ಕೆಲವರು ಕೊನೆಯವರೆಗೂ ಬಾರದ ಕಾರಣ ಬಂದವರಲ್ಲಿ ಏಳು ಜನರಿರುವ ಟ್ರಸ್ಟ್ವೊಂದನ್ನು ದಿನಾಂಕ 28-11-97ರಲ್ಲಿ ಸ್ಥಾಪಿಸಿದೆವು. ಕೃಷ್ಣಪ್ಪನವರ ಆಶಯಗಳನ್ನು ಟ್ರಸ್ಟಿನ ಧ್ಯೇಯೋದ್ದೇಶಗಳಲ್ಲಿ ಉಲ್ಲೇಖಿಸಿ ನೊಂದಾಯಿಸಿದೆವು. ಅಂದಿನಿಂದ ಇಂದಿನವರೆಗೆ ಸುಮಾರು 24 ವರ್ಷಗಳಲ್ಲಿ ರಾಜ್ಯದಾದ್ಯಂತ ದಲಿತ ಹೋರಾಟಗಳಿಗೆ ಒತ್ತಾಸೆಯಾಗಿ, ಸಮಾನತೆ ಸಹೋದರತೆ ಸಾರುವ ಮಾನವೀಯ ಹೋರಾಟಗಳಲ್ಲಿ ಭಾಗವಹಿಸುತ್ತಾ, ಅಂತರ್ಜಾತಿ-ಅಂತರ್ಮತೀಯ ಮತ್ತು ಸರಳ ಮದುವೆಗಳನ್ನು ಮಾಡುತ್ತಾ ಜೊತೆಗೆ, ಕೃಷ್ಣಪ್ಪನವರು ಬರೆದಿದ್ದ ಹೋರಾಟದ ಕವನ ಮತ್ತು ವೈಚಾರಿಕ ಲೇಖನಗಳನ್ನು ಪ್ರಕಟಿಸಿ ಜನರಿಗೆ ತಲುಪಿಸುತ್ತಾ ಇಂದಿಗೂ ಜನಪರ ಚಳುವಳಿಗಳಲ್ಲಿ ಕೃಷ್ಣಪ್ಪ ಟ್ರಸ್ಟ್ ಸಕ್ರಿಯವಾಗಿದೆ. ಟ್ರಸ್ಟ್ನ ಕರ್ಯಕ್ರಮಗಳ ಭಾಗವಾದ ಕೃಷ್ಣಪ್ಪ ಸಮಾಧಿ ಸ್ಥಳ ಉದ್ಘಾಟನೆಗೆ ಬಿಎಸ್ಪಿಯ ಕಾನ್ಷಿರಾಮ್ ಅವರು ಹಿರಿಯ ನ್ಯಾಯವಾದಿ ಮತ್ತು ಮಾಜಿಮಂತ್ರಿಗಳಾಗಿದ್ದ ಎಲ್.ಜಿ. ಹಾವನೂರ ಅವರು, ಮಾಜಿಮಂತ್ರಿಗಳಾಗಿದ್ದ ಕಾಗೋಡು ತಿಮ್ಮಪ್ಪ ಅವರು 1997ರಲ್ಲಿ ಬಂದು ಉದ್ಘಾಟಿಸಿದ್ದರು. ಅಂದಿನಿಂದ ಇಂದಿನವರೆಗೆ ನೂರಾರು ಸಾಹಿತ್ಯ, ಸಂಸ್ಕೃತಿ, ನಾಟಕ, ಹೋರಾಟಗಳ ಸಭೆ ಸಮಾರಂಭಗಳನ್ನು ಕೃಷ್ಣಪ್ಪ ಸಮಾಧಿ ಸ್ಥಳದಲ್ಲಿ ಸಂಘಟಿಸುತ್ತಾ ಬಂದಿದೆ. ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರಾದಿಯಾಗಿ ಜೊತೆಗೆ ನೂರಾರು ದಲಿತ ಹೋರಾಟಗಾರರು, ರಾಜಕಾರಣಿಗಳು ಅನೇಕ ಪ್ರಗತಿಪರರು, ರೈತ ಹೋರಾಟಗಾರರು ಗ್ರಾಮೀಣ ಜನರು ಸಮಾಧಿ ಸ್ಥಳದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆ.
2017ರಲ್ಲಿ ಸಮಾಧಿ ಸ್ಥಳದಲ್ಲಿ ಸರ್ಕಾರದ ಸಹಾಯದಿಂದ ಕೃಷ್ಣಪ್ಪ ಸ್ಮಾರಕ ಭವನ ನಿರ್ಮಿಸಿದ್ದು, ಅಲ್ಲಿ ಲೈಬ್ರರಿ ಮತ್ತು ಸ್ಮರಣಲೋಕವನ್ನು ಕೃಷ್ಣಪ್ಪನವರ ಹೋರಾಟದ ವಿವರಗಳನ್ನು ಒಳಗೊಂಡಂತೆ ಕಲೆ ಹಾಕಿದೆ. ಅನೇಕ ಪ್ರಗತಿಪರ ಕರ್ಯಕ್ರಮಗಳು ಜನಪರ ಗ್ರಾಮೀಣ ಜನರು ಅದರ ಸದುಪಯೋಗ ಪಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ.
ಕೃಷ್ಣಪ್ಪನವರು ತೀರಿದ ಎರಡು ತಿಂಗಳಲ್ಲಿ ಯಲಹಂಕದಲ್ಲಿನ ಪ್ರಗತಿಪರರೊಡನೆ ಜೊತೆಗೂಡಿ ಕೃಷ್ಣಪ್ಪನವರ ಸ್ಮರಣ ಕರ್ಯಕ್ರಮ ಆಯೋಜಿಸಿದ್ದೆವು. ಆ ಸಭೆಗೆ ನಮ್ಮ ನಗರಸಭೆಯ ಸದಸ್ಯರು ಮತ್ತು ಅನೇಕ ಪ್ರಗತಿಪರರು ಕೈಜೋಡಿಸಿದ್ದರು. ಸಭೆಗೆ ಡಿಎಸ್ಎಸ್ ನಾಯಕರು ಮತ್ತು ಅಂದಿನ ವಿಧಾನಸಭಾ ಅಧ್ಯಕ್ಷರಾಗಿದ್ದ ಡಿ. ಮಂಜುನಾಥ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕೃಷ್ಣಪ್ಪನವರ ಹೋರಾಟ ಮತ್ತು ತ್ಯಾಗಗಳ ಬಗ್ಗೆ ನುಡಿನಮನ ಸಲ್ಲಿಸಿದ್ದರು.
ನಮ್ಮ ಊರಿನಿಂದ ಒಂದು ದೊಡ್ಡ ದಂಡೇ ಬ್ಯಾಂಡ್ಸೆಟ್ ಜೊತೆಗೆ ಬಂದಿದ್ದರು. ಈ ಸಂದರ್ಭದಲ್ಲಿ ಬಸವಲಿಂಗಪ್ಪನವರ ಸಮಾಧಿ ಸ್ಥಳದಿಂದ ಯಲಹಂಕದಲ್ಲಿ ನಡೆಸುತ್ತಿದ್ದ ಕೃಷ್ಣಪ್ಪನವರ ಸ್ಮರಣ ಸಮಾರಂಭದವರೆಗೆ ಮೆರವಣಿಗೆ ಮಾಡಿಕೊಂಡು ಬಂದು ಕೃಷ್ಣಪ್ಪನವರ ಬದುಕು, ಹೋರಾಟ, ಡಿಎಸ್ಎಸ್ ಸಂಘಟನೆಯನ್ನು ಸ್ಥಾಪಿಸಿ ಹೋರಾಟ ಮಾಡಿದ ವಿವಿಧ ವಿಷಯಗಳ ಬಗ್ಗೆ ಅಂದಿನ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಮಾತನಾಡಿ ಕೃಷ್ಣಪ್ಪನವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಸಿದ್ಧಾಂತ ಮತ್ತು ಪತ್ರಿಕೋದ್ಯಮ
- ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್
ಇದು ಸುಮಾರು 2002-03ರ ಸಂದರ್ಭ. ಶಿವಮೊಗ್ಗದಲ್ಲಿ ನಾವು ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಕಾಲ. ಒಬ್ಬ ಪತ್ರಕರ್ತ ಮಿತ್ರರೊಂದಿಗೆ ಹೀಗೇ ಚರ್ಚೆ ನಡೆಯುತ್ತಿತ್ತು. ಅವರು ಪತ್ರಿಕೋದ್ಯಮದ ನ್ಯೂಟ್ರಾಲಿಟಿ ಕುರಿತು ಮಾತಾಡುತ್ತಾ, ʼನಾವು ಪತ್ರಕರ್ತರು ನಿಮ್ಮ ರೀತಿ ಯೋಚನೆ ಮಾಡೋದಕ್ಕೆ ಆಗಲ್ಲ. ನಾವು ಯಾವತ್ತೂ ಯಾವುದೇ ಸಿದ್ಧಾಂತಕ್ಕೆ ವಾಲಿಕೊಳ್ಳದೇ ತಟಸ್ಥತೆ ಕಾಪಾಡಬೇಕಾಗುತ್ತದೆʼ ಎಂದು ಹೇಳಿದರು. ʼಅವರ ಜೊತೆ ನಾನು ವಾದಿಸಿದೆ.
ಸರ್, ಸುಳ್ಳನ್ನೇ ಬಂಡವಾಳ ಮಾಡಿಕೊಂಡ ಸಿದ್ಧಾಂತಗಳು ರಾರಾಜಿಸುವಾಗ ಸತ್ಯವನ್ನು ಹುಡುಕಲು ಸಹ ಸಿದ್ಧಾಂತದ ಸಹಾಯ ಬೇಕಾಗುತ್ತದೆ. ಯಾವ ವ್ಯಕ್ತಿಯೂ ಸಿದ್ಧಾಂತದ ಹೊರಗಾಗಿ ಇರಲು ಸಾಧ್ಯವಿಲ್ಲ. ನನಗೆ ಸಿದ್ದಾಂತವೇ ಇಲ್ಲ ಎನ್ನುವ ವ್ಯಕ್ತಿಯನ್ನು ಕೂಡಾ ಅವನಿಗೆ ತಿಳಿದೋ ತಿಳಿಯದೆಯೋ ಒಂದಲ್ಲಾ ಒಂದು ಸಿದ್ದಾಂತ ಇಲ್ಲವೇ ಹಲವು ಸಿದ್ಧಾಂತಗಳು ನಿರ್ದೇಶಿಸುತ್ತಿರುತ್ತವಲ್ಲ.. ʼ ಎಂದ ನನ್ನ ಮಾತಿಗೆ ನಮಗೆ ಪತ್ರಕರ್ತರಿಗೆ ಹಾಗೆ ಯೋಚಿಸಲು ಬರುವುದಿಲ್ಲ. ನೀವು ಎಡ ಪಂಥ ಅಂತೀರಿ, ಅವರು ಬಲಪಂಥ ಅಂತಾರೆ, ನಾವು ಇವೆರಡರ ನಡುವೆ ಸತ್ಯ ಹುಡುಕ್ತೀವಿʼ ಎಂದೆಲ್ಲಾ ಹೇಳಿದರು. ಕೊನೆಗೆ ಯಾರೂ ರಾಜಿಯಾಗಲಿಲ್ಲ.
ಇದಾಗಿ ಹದಿನೈದು ವರ್ಷಗಳ ನಂತರ, 2019ರಲ್ಲಿ ಅದೇ ಪತ್ರಕರ್ತ ಸ್ನೇಹಿತರು ನಮ್ಮ ಜೊತೆ ಕೆಲಸ ಮಾಡುತ್ತಿದ್ದರು. ಅವರು ನರೇಂದ್ರ ಮೋದಿ ಸರ್ಕಾರದ ಆರ್ಥಿಕ ವಂಚನೆಗಳನ್ನು ಅದ್ಭುತ ರೀತಿಯಲ್ಲಿ ಅಂಕಿಅಂಶಗಳ ಸಮೇತ ಬಯಲು ಮಾಡುತ್ತಿದ್ದುದು ಕಂಡು ನನಗೆ ಅಚ್ಚರಿ ಮತ್ತು ಸಂತೋಷವಾಗಿತ್ತು. ಅಂದು ಅವರು ನಿಜಕ್ಕೂ ಸತ್ಯದ ಪರವಾಗಿದ್ದರು. ಆದರೆ ಅವರ ಬರೆಹಗಳನ್ನು ಯಾರಾದರೂ ಬಲಪಂಥೀಯರು ಓದಿದರೆ ಅವರಿಗೆ ಖಂಡಿತಾ ಇವರು ʼಎಡಪಂಥೀಯ ಸಿದ್ಧಾಂತಿʼ, ʼನಗರ ನಕ್ಸಲ್ʼ ಎಂದೆಲ್ಲಾ ಸುಲಭವಾಗಿ ಹಣೆಪಟ್ಟಿ ಕಟ್ಟಬಹುದಿತ್ತು. ಆದರೆ ಆ ಪತ್ರಕರ್ತ ಸ್ನೇಹಿತರು ನಿಜಕ್ಕೂ ಈ ದೇಶದ ಭವಿಷ್ಯದ ಬಗ್ಗೆ ತುಂಬಾ ಆತಂಕಗೊಂಡು, ಕಾಳಜಿಯಿಂದ ಕೆಲಸ ಮಾಡುತ್ತಿದ್ದರು. ಕೊನೆಗೆ ಅವರಿಗೂ ಸಹ ಅವರು ಹಿಂದೆ ಹೇಳಿದ್ದ ರೀತಿಯಲ್ಲಿ ತಟಸ್ಥವಾಗಿ ಪತ್ರಿಕೋದ್ಯಮ ನಡೆಸುವುದು ಸಾಧ್ಯವಿಲ್ಲ ಎಂಬ ಅರಿವಾಗಿರಬಹುದು ಎಂದುಕೊಂಡೆ. ಹೌದು ಪತ್ರಕತ್ರರಾದವರು ಮಾಡಲು ಇರುವ ಬಹಳ ಕೆಲಸಗಳ ನಡುವೆಯೂ ಅವರು ಅದ್ಯತೆಯನ್ನು ಗುರುತಿಸಿಕೊಂಡಿದ್ದರು.
ಪತ್ರಿಕೋದ್ಯಮದ ಬಗ್ಗೆ ಮಾತಾಡುವಾಗ ನಾವು ಒಂದು ಪ್ರಾಥಮಿಕ ಸಂಗತಿಯನ್ನು ತಿಳಿದುಕೊಳ್ಳಬೇಕು. ನಮ್ಮ ದೇಶದಲ್ಲಿ ಪತ್ರಿಕೋದ್ಯಮ ಆರಂಭವಾದ ಸಂದರ್ಭದಲ್ಲಿ ಯಾವೆಲ್ಲಾ ಭಾರತೀಯರು ಪತ್ರಿಕೆಗಳನ್ನು ಹೊರತರುತ್ತಿದ್ದರೋ ಅವರೆಲ್ಲರೂ ಕಟು ಸಿದ್ಧಾಂತಿಗಳಾಗಿದ್ದರು. ಸಾಮ್ರಾಜ್ಯವಾದದ ವಿರುದ್ಧದ ಸಿದ್ದಾಂತ ಅವರೆಲ್ಲರನ್ನು ಮುನ್ನಡೆಸುತ್ತಿತ್ತು. ಬಹುತೇಕ ಅವರೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರು ಇಲ್ಲವೇ ಸ್ವಾಭಿಮಾನ ಚಳವಳಿಯ ಹೋರಾಟಗಾರರು, ನಾಯಕರು ಆಗಿದ್ದರು. ಅಂತಹ ಸ್ಪಷ್ಟ ಸೈದ್ಧಾಂತಿಕ ಬುನಾದಿಯಿಟ್ಟುಕೊಂಡು ಅವರೆಲ್ಲಾ ಬ್ರಿಟಿಷರ ವಿರುದ್ಧ ಪತ್ರಿಕೋದ್ಯಮ ನಡೆಸದಿದ್ದರೆ ಈ ದೇಶದ ಪತ್ರಿಕೋದ್ಯಮದ ಇತಿಹಾಸ ಅತ್ಯಂತ ಟೊಳ್ಳಾದ, ಬೂಸಾ ಇತಿಹಾಸವಾಗುತ್ತಿತ್ತು.
ಕೆಲ ಬ್ರಿಟಿಷ್ ಪತ್ರಕರ್ತರು ಹೇಗೆ ಬ್ರಿಟಿಷ್ ಅಧಿಕಾರಿಗಳ ಬೆಡ್ ರೂಮ್ ಸ್ಟೋರಿಗಳನ್ನು ಚಪ್ಪರಿಸಿಕೊಂಡು ಅದನ್ನೇ ಪತ್ರಿಕೋದ್ಯಮ ಎಂದು ಬೀಗುತ್ತಿದ್ದರೋ ಅಷ್ಟರಲ್ಲೇ ಭಾರತೀಯ ಪತ್ರಿಕೋದ್ಯಮ ಉಳಿದುಬಿಡುತ್ತಿತ್ತು. ಆದರೆ ಹೀಗೆ ಆಗಲು ಬಿಡದೇ ಉದಾತ್ತ ಧ್ಯೇಯಗಳ ಮೂಲಕ ದೇಶದ ಪತ್ರಿಕೋದ್ಯಮ ಬೆಳೆಸಿದ 19ನೆಯ ಶತಮಾನದ ಅಂತಹ ಧೀಮಂತ ಪತ್ರಕರ್ತರು ಹಲವರು. ಸುರೇಂದ್ರ ನಾಥ್ ಬ್ಯಾನರ್ಜಿ (ಬೆಂಗಾಲಿ ಪತ್ರಿಕೆ- 1879) ಪತ್ರಕರ್ತರಾಗಿ ಕೆಲಸ ಮಾಡುತ್ತಲೇ ಸತ್ಯ ಹೇಳಿದ ಕಾರಣಕ್ಕೆ ಬ್ರಿಟಿಷ್ ಸರ್ಕಾರ ಅವರನ್ನು ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯ ಅಡಿ ಜೈಲಿಗಟ್ಟಿತ್ತು. ಸಂವಾದ ಕೌಮುದಿ ಎಂಬ ಪತ್ರಿಕೆ ನಡೆಸುತ್ತಿದ್ದ ರಾಜಾರಾಮ ಮೋಹನ್ ರಾಯ್ ಒಬ್ಬ ಸ್ಪಷ್ಟ ವಿಚಾರವಾದಿಯಾಗಿದ್ದರು.
ಅವರು ಈ ದೇಶದ ಅನಿಷ್ಟಗಳ ಕುರಿತೇ ತಮ್ಮ ಪತ್ರಿಕೆಯಲ್ಲಿ ಬರೆಯುತ್ತಾ ಹೋದರು. ಇದೇ ಕೆಲಸವನ್ನು ಮಹಾರಾಷ್ಟ್ರದಲ್ಲಿ ಮರಾಠಿ ಪತ್ರಿಕೆ ಆರಂಭಿಸಿದ ಜಂಬೇಕರ್ ಮಾಡಿದರು, ಅವರು ತಮ್ಮ ದರ್ಪಣ್ ಪತ್ರಿಕೆಯ ಮೂಲಕ ಸಾಮಾಜಿಕ ಅನಿಷ್ಟಗಳು ಕುರಿತು ಜಾಗೃತಿ ಮೂಡಿಸಿದರು- ಇವರನ್ನು ಮರಾಠಿ ಪತ್ರಿಕೋದ್ಯಮದ ಪಿತಾಮಹ ಎಂದು ಕರೆಯಲಾಗುತ್ತದೆ. ಬಂಗಾಳದಲ್ಲಿ ಹರೀಶ್ಚಂದ್ರ ರಾಯ್ ಎಂಬುವವರು ಬಂಗದರ್ಶನ್ ಎಂಬ ಪತ್ರಿಕೆ ತಂದರು; ಗುಜರಾತಿಯಲ್ಲಿ ʼಬಾಂಬೆ ಸಮಾಚಾರ್ʼ ಪತ್ರಿಕೆ ಆರಂಭಿಸಿದ ಫರ್ದುನ್ಜಿ ಮರ್ಜ್ ಬಾನ್ ಎಂಬುವವರು ಸಹ ಪತ್ರಿಕೆಯ ಮೂಲಕ ಸಮಾಜ ಸುಧಾರಣೆಗೆ ಒತ್ತು ಕೊಟ್ಟರು. ಇನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಬಾಲಗಂಗಾಧರ ತಿಲಕ್ ಕೇಸರಿ ಮತ್ತು ಮರಾಟಾ ಪತ್ರಿಕೆ ಹೊರಡಿಸುತ್ತಿದ್ದರು, ಗಾಂದೀಜಿಯವರು ಆಫ್ರಿಕಾದಲ್ಲಿದ್ದಾಗಲೇ ಇಂಡಿಯನ್ ಒಪಿನಿಯನ್ ಪತ್ರಿಕೆ ನಡೆಸುತ್ತಿದ್ದರೆ, ಭಾರತಕ್ಕೆ ಬಂದ ಮೇಲೆ ಯಂಗ್ ಇಂಡಿಯಾ ಮತ್ತು ಹರಿಜನ್ ಎಂಬ ಪತ್ರಿಕೆಗಳನ್ನು ಹೊರತಂದರು,
ಸುಭಾಷ್ ಚಂದ್ರ ಬೋಸ್ ಅವರು ಸ್ವರಾಜ್ ಪತ್ರಿಕೆಯ ಸಂಪಾದಕರಾಗಿದ್ದರು, ಲಾಲಾ ಲಜಪತ್ ರಾಯ್ ಅವರು ದ ಟ್ರಿಬ್ಯೂನ್ ಎಂಬ ಇಂಗ್ಲಿಷ್ ಪತ್ರಿಕೆ ತಂದರು, ಜೊತೆಗೆ ವಂದೆ ಮಾತರಂ ಎಂಬ ಉರ್ದು ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು- ಇವುಗಳ ಮೂಲಕ ಸ್ವದೇಶಿ ಚಿಂತನೆಯನ್ನು ಅಥವಾ ಸಿದ್ಧಾಂತವನ್ನು ಪ್ರಚುರಪಡಿಸಿದರು, ಹೋಂರೂಲ್ ಚಳವಳಿಯ ಮುಂದಾಳು ಅನಿಬೆಸೆಂಟ್ ಅವರು ನ್ಯೂ ಇಂಡಿಯಾ ಪತ್ರಿಕೆ ತಂದರು, ಇನ್ನು ಮದನ್ ಮೋಹನ್ ಮಾಳವೀಯ ಅವರು ಮೋತಿಲಾಲ್ ನೆಹರೂ ಜೊತೆ ಸೇರಿಕೊಂಡು ದ ಲೀಡರ್ ಎಂಬ ಪತ್ರಿಕೆ ತಂದರೆ, ನಂತರ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯನ್ನೂ ಪುನರುಜ್ಜೀವಗೊಳಿಸಿದರು. ಇನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ʼಅಸ್ಪೃಶ್ಯರಿಗೆ ಈ ದೇಶದಲ್ಲಿ ಪತ್ರಿಕೆಯಿಲ್ಲʼ ಎಂದು ಘೋಷಿಸಿ ಮೊದಲಿಗೆ ಶಾಹು ಮಹಾರಾಜರ ಬೆಂಬಲದಿಂದ ಮೂಕನಾಯಕ ಪತ್ರಿಕೆ (1920) ತಂದರು; ನಂತರ ಬಹಿಷ್ಕೃತ ಭಾರತ (1927), ನಂತರ ಸಮತಾ (1928), ನಂತರ ಜನತಾ (1930) ಹಾಗೂ ಪ್ರಬುದ್ಧ ಭಾರತ (1956) ಪತ್ರಿಕೆಗಳನ್ನು ಹೊರಡಿಸಿ ನಿರಂತರವಾಗಿ ಅವುಗಳಲ್ಲಿ ಬರೆಯುತ್ತಾ ತಾವೊಬ್ಬ ಧೀಮಂತ ಪತ್ರಕರ್ತ ಎಂಬುದನ್ನೂ ನಿರೂಪಿಸಿದ್ದರು.
ಇವರನ್ನೆಲ್ಲಾ ಹೊರಗಿಟ್ಟು ಕೇವಲ ಬ್ರಿಟಿಷರು ತಂದ ಬೆಂಗಾಲ್ ಗೆಜೆಟ್ ನಂತವುಗಳನ್ನು ಮಾತ್ರವೇ ಭಾರತದ ಪತ್ರಿಕೋದ್ಯಮದ ಇತಿಹಾಸ ಎಂದು ಹೇಳಲು ಬರುತ್ತದೆಯೇ? ಈ ದೇಶದ ಪತ್ರಿಕೋದ್ಯಮದ ಇತಿಹಾಸದ ಸೈದ್ಧಾಂತಿಕ ಅಡಿಪಾಯ ಅತ್ಯಂತ ಭದ್ರವಾಗಿತ್ತು ಎಂಬುದಕ್ಕೆ ಇವೆಲ್ಲಾ ಸಾಕ್ಷಿಯಲ್ಲವೆ? ಅಲ್ಲಿ ಎಡಬಿಡಂಗಿತನಕ್ಕೆ, ಸೊ ಕಾಲ್ಡ್ ತಟಸ್ಥತೆಗೆ ಯಾವುದೇ ಅವಕಾಶವಿರಲಿಲ್ಲ. ಈ ದೇಶವನ್ನು ಕಾಡುತ್ತಿದ್ದ ಸಾಮ್ರಾಜ್ಯಶಾಹಿ ಮತ್ತು ಬ್ರಾಹ್ಮಣಶಾಹಿ ಶಕ್ತಿಗಳನ್ನು ನೇರವಾಗಿ ಎದುರಿಸಿಯೇ ಭಾರತದ ಪತ್ರಿಕೋದ್ಯಮ ನಡೆದುಕೊಂಡುಬಂದಿದೆ ಎಂಬುದಕ್ಕೆ ಮೇಲಿನ ಉದಾಹರಣೆಗಳೇ ಸಾಕ್ಷಿ.
ಸ್ವಾತಂತ್ರ್ಯಾನಂತರದಲ್ಲಿ, ನಮ್ಮ ಕರ್ನಾಟಕದಲ್ಲೇ ನಾವು ಯಾರನ್ನೆಲ್ಲಾ ಇಂದು ಧೀಮಂತ ಪತ್ರಕರ್ತರೆಂದು ಪರಿಗಣಿಸಿದ್ದೇವೆಯೋ, ಯಾರನ್ನೆಲ್ಲಾ ಆದರ್ಶ ಎಂದು ನೋಡುತ್ತೇವೆಯೋ ಅವರೆಲ್ಲರೂ ಅತ್ಯಂತ ಸ್ಪಷ್ಟ ಮತ್ತು ದೃಢವಾದ ಸಿದ್ಧಾಂತಿಗಳೇ ಆಗಿದ್ದರು ಎಂಬುದನ್ನು ಮರೆಯಬಾರದು. ಕರ್ನಾಟಕದ ಪತ್ರಿಕೋದ್ಯಮಕ್ಕೇ ಹೊಸ ಮೆರಗು ತಂದು ಸಂಚಲನ ಮೂಡಿಸಿದ ಪಿ. ಲಂಕೇಶ್ ಅವರು ಕಡಿಮೆ ಸಿದ್ಧಾಂತಿಯೇ? ಸ್ಪಷ್ಟ ಸೈದ್ಧಾಂತಿಕ ತಳಹದಿಯ ಪತ್ರಿಕೋದ್ಯಮವೇ ಅವರ ಆಕ್ಟಿವಿಸಂ ಆಗಿತ್ತು ಮಾತ್ರವಲ್ಲ ಪತ್ರಿಕೋದ್ಯಮದ ಮೂಲಕ ಸಾಮಾಜಿಕ ರಾಜಕೀಯ ಬದಲಾವಣೆಯನ್ನೂ ಮಾಡಲು ಸಾಧ್ಯ ಎಂದು ಪಿ ಲಂಕೇಶ್ ಒಂದು ಮಾದರಿಯನ್ನೇ ಸೃಷ್ಟಿಸಿದರು. ಅದು ಸಾಧ್ಯವಾಗಿದ್ದೇ ಅವರ ಕಟಿಬದ್ಧ ಸೈದ್ಧಾಂತಿಕ ನಿಲುವಿನಿಂದ.
ನಾಡು ಕಂಡ ಮತ್ತೊಬ್ಬ ಧೀಮಂತ ಪತ್ರಕರ್ತ ವಡ್ಡರ್ಸೆ ರಘುರಾಮ್ ಶೆಟ್ಟಿ ಕೂಡಾ ಗಟ್ಟಿ ತಾತ್ವಿಕ ನಿಲುವುಗಳ ಮೂಲಕ ನಾಡಿನ ಜನರನ್ನು ತಲುಪಿದರು. ಇನ್ನು 70-80ರ ದಶಕಗಳಲ್ಲಿ ಭಾರತೀಯ ಪತ್ರಿಕೋದ್ಯಮದ ಧೀಮಂತ ಪರಂಪರೆಯಲ್ಲಿ ಸಾಗಿದ ಹಲವಾರು ಕನ್ನಡ ಪತ್ರಿಕೆಗಳಿದ್ದವು- ಸುದ್ದಿ ಸಂಗಾತಿ, ಶೂದ್ರ, ಪಂಚಮ, ಸಮುದಾಯ, ಸಂಕ್ರಮಣ ಮುಂತಾದ ನಿಯತಕಾಲಿಕೆಗಳು ಕನ್ನಡಿಗರ ಅರಿವಿನ ವಿಸ್ತರಣೆಯಲ್ಲಿ ಕಡಿಮೆ ಕೆಲಸ ಮಾಡಿವೆಯೇ? ಹಾಗಾದರೆ ಇವೆಲ್ಲವೂ ಖಚಿತ ಸೈದ್ದಾಂತಿಕತೆಯಿಂದಲೇ ನಡೆಯಲಿಲ್ಲವೇ?
ಇನ್ನು ಕಳೆದ ಕೆಲವು ದಶಕಗಳಲ್ಲಿ, ಅಗ್ನಿ, ಹಾಯ್ ಬೆಂಗಳೂರು, ಗೌರಿ ಲಂಕೇಶ್ ವಾರಪತ್ರಿಗಳೂ ತಮ್ಮ ಛಾಪು ಮೂಡಿಸಿದವು. ಪಿ ಲಂಕೇಶರ ಸ್ಪೂರ್ತಿಯಲ್ಲೇ ದೊಡ್ಡ ದೊಡ್ಡ ಭ್ರಷ್ಟಾಚಾರ ಪ್ರಕರಣಗಳನ್ನು ಅನಾವರಣಗೊಳಿಸಿದವು. ಇದ್ದುದರಲ್ಲಿ ರವಿ ಬೆಳಗರೆ ಎಡಬಿಡಂಗಿಯಾಗಿ ಕ್ರೈಂ, ಸೆಕ್ಸ್ ಗಳನ್ನ ಅಸ್ತ್ರವಾಗಿಸಿಕೊಂಡು ಟ್ಯಾಬ್ಲಾಯ್ಡ್ ಪತ್ರಿಕೋದ್ಯಮವನ್ನು ಹಳ್ಳ ಹಿಡಿಸಿದರೂ ಹಾಯ್ ಬೆಂಗಳೂರು ಸಹ ಅನೇಕ ಬ್ರಷ್ಟಾಚಾರ ಹಗರಣಗಳನ್ನು ಬಯಲು ಮಾಡಿದ್ದು ಸತ್ಯ.
ಯಾವನ್ನು ನಾವು ದಿನಪತ್ರಿಕೆಗಳು ಅಥವಾ ವೃತ್ತ ಪತ್ರಿಕೆಗಳು ಎನ್ನುತ್ತೇವೆಯೋ ಇವುಗಳ ಆದ್ಯತೆ ದಿನನಿತ್ಯದ ಸುದ್ದಿಗಳನ್ನು ಜನರಿಗೆ ತಲುಪುವುದು ಮಾತ್ರವಾಗಿದ್ದ ಕಾರಣ ಬಹಳ ಪತ್ರಿಕೆಗಳಲ್ಲಿ ಸೈದ್ಧಾಂತಿಕತೆ ದೊಡ್ಡ ವಿಷಯವಾಗಲಿಲ್ಲ. ಆದರೆ ಅಂತಹ ಕಡೆಗಳಲ್ಲಿ ಸಹ ದೊಡ್ಡ ದೊಡ್ಡ ಸಿದ್ಧಾಂತಿಗಳು ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದ್ದರು ಮತ್ತು ತಮ್ಮ ಖಚಿತ ಅಭಿಪ್ರಾಯಗಳನ್ನು ಆ ವೇದಿಕೆಗಳ ಮೂಲಕ ಜನರಿಗೆ ತಲುಪಿಸುತ್ತಾ ಬಂದಿದ್ದರೆಂಬುದನ್ನು ನಾವು ಮರೆಯಕೂಡದು.
ಈಗ ಹೇಳಿ, ನಮ್ಮ ಪತ್ರಿಕೋದ್ಯಮಕ್ಕೆ ಸಿದ್ಧಾಂತ ಬೇಡವೆ, ಪತ್ರಕರ್ತರಾಗಿರುವವರು ಸೈದ್ಧಾಂತಿಕ ಸ್ಪಷ್ಟತೆ ಹೊಂದಿರಬಾರದೆ? ಆಕ್ಟಿವಿಸ್ಟುಗಳು ಪತ್ರಕರ್ತರಾಗುವುದು ಅಪರಾಧವೆ? ಪತ್ರಿಕೋದ್ಯಮ ಆಕ್ಟಿವಿಸಂಗೆ ಪೂರಕವಾಗಿರಬಾರದೆ? ಇಂದು ಬ್ರಾಹ್ಮಣ್ಯದ ದಿಗ್ವಿಜಯ ಮತ್ತೊಮ್ಮೆ ನಿಜವಾಗುವ ಕರಾಳ ಛಾಯೆ ಇಡೀ ದೇಶವನ್ನು ಆವರಿಸಿಕೊಂಡಿರುವಾಗ, ಬಾಬಾಸಾಹೇಬರು ಎಚ್ಚರಿಸಿದ್ದ ಆ ʼಪ್ರತಿಕ್ರಾಂತಿʼ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡ ಎಲ್ಲವನ್ನೂ ನೊಣೆಯುತ್ತಿರುವಾಗ, ಅಪರಾಧವೇ ಅಧಿಕಾರವಾಗಿ ದೇಶದ ಪ್ರಮುಖ ಸಂಸ್ಥೆಗಳೆಲ್ಲವನ್ನೂ ನುಂಗಿ ನೀರುಕುಡಿದು ತಮ್ಮ ಅಂಕೆಯಲ್ಲಿ ತಂದುಕೊಂಡು ಇಡೀ ದೇಶದ ಜನರಿಗೆ ಕರಾಳತೆ ದರ್ಶನ ಮಾಡುತ್ತಾ ಭ್ರಷ್ಟಾಚಾರದ ವ್ಯಾಖ್ಯಾನವನ್ನೇ ತಿರುಗುಮರುಗು ಮಾಡುತ್ತಿರುವಾಗ ಸೊ ಕಾಲ್ಡ್ ತಟಸ್ಥತೆಯ ಬದನೇಕಾಯಿಯನ್ನು ನೆಚ್ಚಿಕೊಳ್ಳದೇ ನಿರ್ಧಾರಿತ ಜನಾಂದೋಲನಗಳಿಗೆ ಪೂರಕವಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರಾದವರು ಜೊತೆಗೂಡುವುದು ಬೇಡವೇ?
‘ಬೇಡ’ ಎಂಬ ಅಭಿಪ್ರಾಯ ನಿಮ್ಮದಾಗಿದ್ದರೆ ನಿಮ್ಮ ಬಳಿ ಹೇಳಲು ನನಗೆ ಏನೂ ಉಳಿದಿಲ್ಲ. ನೀವು ನಿಮ್ಮದೇ ಸುಖಾಸನದಲ್ಲಿ ನೆಮ್ಮದಿಯಾಗಿ ಪವಡಿಸಬಹುದು, ನನಗೇನೂ ಅಭ್ಯಂತರವಿಲ್ಲ. (ಬರಹ- ಹರ್ಷಕುಮಾರ್ ಕುಗ್ವೆ, ಪತ್ರಕರ್ತ ಮತ್ತು ಆಕ್ಟಿವಿಸ್ಟ್)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days agoಯಮ ಸ್ವರೂಪಿ ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ ; ಇವಿಷ್ಟನ್ನು ಪಾಲಿಸಿ ಅಪಾಯ ತಡೆಗಟ್ಟಿ
-
ದಿನದ ಸುದ್ದಿ5 days agoಬೆಂಬಲ ಬೆಲೆ | ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭ: ಡಿಸಿ ಗಂಗಾಧರಸ್ವಾಮಿ
-
ದಿನದ ಸುದ್ದಿ4 days agoಪತ್ರಿಕೋದ್ಯಮ ಪದವೀಧರರಿಗೆ ಸಿಹಿ ಸುದ್ದಿ | ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ತರಬೇತಿ ; ಅರ್ಜಿ ಆಹ್ವಾನ
-
ದಿನದ ಸುದ್ದಿ3 days agoಅಂಚೆ ಇಲಾಖೆಯಿಂದ ಸೆಲ್ಪ್ ಬುಕ್ಕಿಂಗ್ ಸೌಲಭ್ಯ
-
ದಿನದ ಸುದ್ದಿ2 days agoಮಹಿಳೆಯರ ಪುನರ್ ವಸತಿ ಯೋಜನೆ | ಅರ್ಜಿ ಆಹ್ವಾನ ; ಅವಧಿ ವಿಸ್ತರಣೆ
-
ದಿನದ ಸುದ್ದಿ2 days agoಕೋಲ್ಸೇತು ನೀತಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ; ಸಂಪನ್ಮೂಲಗಳ ನ್ಯಾಯಯುತ ಬಳಕೆಗೆ ಒತ್ತು
-
ದಿನದ ಸುದ್ದಿ2 days ago2027ರ ಜನಗಣತಿ ನಡೆಸಲು ಬಜೆಟ್ ಅಂಗೀಕಾರ

