ಬಹಿರಂಗ
ಅವಳು ಲುಬೈನಾ
- ಯೋಗೇಶ್ ಮಾಸ್ಟರ್
ಹಿಜಾಬು ಅವಳ ಸೌಂದರ್ಯವನ್ನು ಅವಿಸಿಟ್ಟಿರಲಿಲ್ಲ. ಬದಲಾಗಿ ಚೊಕ್ಕವಾಗಿ ಅಚ್ಚುಕಟ್ಟಾಗಿಸಿಟ್ಟಿತ್ತು. ಬಟ್ಟೆಯ ತೆರೆಯೊಡ್ಡುತ್ತಿದ್ದ ಕುತೂಹಲದ ಅಡಗುಕಟ್ಟೆಯ ಹಿಂದಿನಿಂದ ಅವಳ ಕಣ್ಣುಗಳೇ ನಗುತ್ತಿದ್ದವು. ಗೆಳತಿ ಮತ್ತು ಸಹಧರ್ಮೀಯಳಾಗಿದ್ದ ಆಸ್ಮಾ ಜೊತೆಗೇನೇ ಬರುತ್ತಿದ್ದದ್ದು, ಹೋಗುತ್ತಿದ್ದದ್ದು.
“ಯೋಗಿ” ಅಂತ ಅವಳು ಕರೆದಾಗೆಲ್ಲಾ ಅದು ಹೋಗಿ ಅಂತಾನೇ ಕೇಳಿಸುತ್ತಿದ್ದದ್ದು. ಅದನ್ನು ಅವಳಿಗೆ ಹೇಳಿದೆ ಒಮ್ಮೆ. “ಹೇ, ನಾನು ಸರಿಯಾಗೇ ಕರೆಯುತ್ತೇನಲ್ಲಾ?” ಎಂದು ಆಸ್ಮಾಳ ಕಡೆಗೆ ನೋಡಿ ಕೇಳಿ ಮತ್ತೆ ನನ್ನ ಕಡೆ ತಿರುಗಿ, “ಯೋಗಿ” ಎಂದಳು.
ನನಗೆ ‘ಹೋಗಿ’ ಎಂದೇ ಕೇಳಿಸಿತು. ಆಸ್ಮಾ ಸರಿಯಾಗಿ ಹೇಳಿದಳು “ಅವನಿಗೆ ಹಾಗೆ ಕೇಳಿಸಿರತ್ತೆ.” ಹಾಗೆ ನೋಡಲು ಹೋದರೆ ಆಸ್ಮಾ ಇಡೀ ತರಗತಿಯಲ್ಲಿ ಜೋರು ಜೋರಾಗಿ ಮಾತಾಡಿಕೊಂಡು, ನಗಾಡಿಕೊಂಡು ಇರುವವಳು. ಲುಬೈನಾ ಹಿಂಜರಿಕೆ ಮತ್ತು ಮುಚ್ಚುಮರೆ ಇಲ್ಲದೆ ಮಾತಾಡುವವಳಾದರೂ ಅಗತ್ಯವಿದ್ದರೆ ಮಾತ್ರ ಮುಂದಾಗುವವಳು. ಈ ಆಸ್ಮಾ ಇದ್ದಾಳಲ್ಲಾ, ಒಂದು ತರ ರೌಡಿ. ಮನೆಯಿಂದ ಬುರುಕಾ ಹಾಕಿಕೊಂಡು ಬರುತ್ತಾಳೆ.
ಕ್ಯಾಂಪಸ್ಸಿಗೆ ಬಂದ ಮೇಲೆ ಬುರುಕಾ ಬಿಚ್ಚಿಟ್ಟು, ತಲೆಗವಸು ಹಾಕಿಕೊಂಡು ಇಡೀ ದಿನ ಇರುತ್ತಾಳೆ. ಮನೆಗೆ ಹೋಗುವಾಗ ಮತ್ತೆ ಬುರುಕಾ ಹಾಕಿಕೊಂಡು ಮರಳುತ್ತಾಳೆ. ಇಬ್ಬರೂ ಎಲ್ಲರ ಜೊತೆಗೂ ಎಲ್ಲರಂತೆಯೇ ಮಾತಾಡುತ್ತಿದ್ದರು, ಊಟ ಹಂಚಿಕೊಳ್ಳುತ್ತಿದ್ದರು. ಸುಮಂಗಲಿ ಮನೆಯ ಚಿತ್ರಾನ್ನ, ಪಲ್ಲವಿ ಮನೆಯ ಪುಳಿಯೋಗರೆ, ಪರಿಮಳ ಮನೆಯ ತಂಬುಳಿ, ಗಿರೀಶ್ ಮನೆಯ ಚಪಾತಿ ಪಲ್ಯ, ನಮ್ಮ ಮನೆಯ ಇಡ್ಲಿ ಸಾಂಬಾರ್ ಅಂದರೆ ಇಬ್ಬರೂ ಖುಷಿಖುಷಿಯಾಗಿ ತಿನ್ನುತ್ತಿದ್ದರು.
ಅದರಲ್ಲೂ ಪುಳಿಯೋಗರೆ ಮತ್ತು ಮಜ್ಜಿಗೆ ಹುಳಿ ಎಂದರೆ ಇವರಿಬ್ಬರೂ ಲೊಟ್ಟೆ ಹಾಕಿಕೊಂಡು ತಿನ್ನುತ್ತಿದ್ದರು. ತರುವವರು ಕೂಡಾ ಇವರಿಗೆಂದೇ ಹೆಚ್ಚಾಗಿ ತರುತ್ತಿದ್ದರು. ಇವರೂ ಕೂಡಾ ವಿಶೇಷವಾಗಿ ಬಿರಿಯಾನಿ, ಪಾಯಸ ಮಾಡಿದಾಗ ನಮಗೆಲ್ಲರಿಗೆಂದು ದೊಡ್ಡ ಕ್ಯಾರಿಯರ್ ಬಾಕ್ಸುಗಳಲ್ಲೇ ತಂದುಬಿಡುತ್ತಿದ್ದರು. ಮಾಂಸಾಹಾರ ಮತ್ತು ಸಸ್ಯಾಹಾರದ ಊಟಗಳೆರಡೂ ಬಂದಾಗಲೂ ಊಟಕ್ಕೆ ಕುಳಿತುಕೊಳ್ಳುವ ವರ್ತುಲ ಮಾತ್ರ ಒಂದೇ ಇರುತ್ತಿತ್ತು. ಆದರೆ ಡಬ್ಬ ಮಾತ್ರ ಕೆಲವರನ್ನು ಹಾದು ಹೋಗುತ್ತಿತ್ತು ಅಷ್ಟೇ.
ಲುಬೈನಾ ಮತ್ತು ಆಸ್ಮಾ ಇಬ್ಬರೂ ಹುಡುಗಿಯರ ಜೊತೆಯಲ್ಲೇ ಅವರವರು ಇದ್ದಾಗ, ತಲೆಗವಸನ್ನು ತೆಗೆದು, ಕೂದಲನ್ನು ಬಾಚಿಕೊಂಡು, ನೀಟಾಗಿ ಪಿನ್ ಹಾಕಿಕೊಂಡು ಮತ್ತೆ ತಲೆಗೆ ಬಟ್ಟೆಯನ್ನು ಸರಿಯಾಗಿ ಹಾಕಿಕೊಳ್ಳುತ್ತಿದ್ದರು.
ಲುಬೈನಾ ಮತ್ತು ಆಸ್ಮಾಳ ತಂದೆ, ತಾಯಿಗಳೋ, ಅಣ್ಣಂದಿರೋ ಬಂದಾಗ ಹುಡುಗಿಯರೆಲ್ಲಾ ಗುಂಪುಗಟ್ಟಿ ಮಾತಾಡಿಸುತ್ತಿದ್ದರು. ಅವರೂ ಬಲೇ ನಗುಮುಖದಿಂದ ಎಲ್ಲರನ್ನೂ ಮಾತಾಡಿಸಿ, ಚೆನ್ನಾಗಿ ಓದಿ ಅಂತ ಹೇಳಿ ಹೋಗುತ್ತಿದ್ದರು.
ಅದರಲ್ಲೂ ಲುಬೈನಾಳ ತಂದೆಯಂತೂ; ಮುಖವೋ ಪೂರ್ಣ ಚಂದಿರ, ನಗುವೋ ಬೆಳದಿಂಗಳು, ಇನ್ನು ಮಾತಂತೂ ತಿಂಗಳ ತಂಪು. ಅವರು ನಿದ್ರಿಸುವಾಗಲೂ ಮುಗುಳುನಗುವಿನ ಮುಖದಲ್ಲೇ ಇರುತ್ತಾರೆ ಎಂಬುದು ನನ್ನ ಖಚಿತ ಅನಿಸಿಕೆ.
ಅದೊಂದು ದಿನ ಹುಡುಗಿಯರ ಗುಂಪಿನಲ್ಲಿ ಮಾತಾಡುವಾಗ ಲುಬೈನಾಳ ತಾಯಿ ಲೋಕಾಭಿರಾಮವಾಗಿ ಮಾತಾಡುತ್ತಾ “ನಮ್ಮ ಲುಬೈನಾ ನೋಡಲು ಡಿಟ್ಟೋ ಅವಳ ತಂದೆಯ ಹಾಗೆ, ಬುದ್ಧಿ ಮತ್ತು ಆಡುವುದೆಲ್ಲಾ ನನ್ನ ಹಾಗೆ” ಎನ್ನುತ್ತಿದ್ದರು.
ಆಹಾ, ಎಂಥಾ ಒಳ್ಳೆಯ ಸಂಯೋಜನೆ ಎನಿಸಿ, “ಆಂಟೀ, ಒಳ್ಳೆಯ ಕಾಂಬಿನೇಶನ್” ಎಂದುಬಿಟ್ಟೆ. ಅವರೋ, ಪಾಪ ಏನೂ ಹೇಳಲು ತೋಚದೇ “ಆಹಾ?” ಎಂದಷ್ಟೇ ಅಂದರು. ಅವರಿಗೆ ಮುಜುಗರವಾಯಿತೋ ಏನೋ ಎಂದು ನನಗೆ ಮುಜುಗರವಾಗತೊಡಗಿತು.
ಮರುದಿನ ಲುಬೈನಾಗೆ ಕೇಳಿದೆ.
“ನಿಮ್ಮ ಅಮ್ಮ ಏನಾದರೂ ಬೇಜಾರು ಮಾಡಿಕೊಂಡರಾ?”
“ಯಾಕೆ?”
“ನಾನು ನಿನ್ನೆ ಹಾಗೆಂದಿದ್ದಕ್ಕೆ.”
“ಇಲ್ಲ. ಅದು ಅವರ ಕಿವಿಗೆ ಸರಿಯಾಗಿ ಹೋಗಿರೋದೇ ಇಲ್ಲ” ಎಂದು ನಕ್ಕ ಲುಬೈನಾ ಆರಾಮವಾಗಿದ್ದದ್ದು ನೋಡಿ ಸಮಾಧಾನವಾಯಿತು. ಅಂದಿನಿಂದ ಅವಳ ಕಂಡಷ್ಟು ಮುಖವನ್ನು ನೋಡುವಾಗೆಲ್ಲಾ ಅವಳ ತಂದೆಯ ಕಾಣುವಷ್ಟು ಮುಖವು ನೆನಪಿಗೆ ಬರುತ್ತಿತ್ತು. ಮೀಸೆ, ಗಡ್ಡ ಅಳಿಸುತ್ತಿದ್ದೆ. ಆ ಬಿಳಿಯಾದ ಪುಡಿಗೂದಲಿನ ತಲೆಯ ಮೇಲೆ ಉದ್ದನೆಯ ಕಪ್ಪು ಕೇಶರಾಶಿಯನ್ನು ಕಲ್ಪಿಸಿಕೊಳ್ಳುತ್ತಿದ್ದೆ.
“ಅದೇನು ಹಾಗೆ ನೋಡ್ತಿದ್ದೀಯಾ?” ಎಂದು ಕೇಳಿದಳು ಲುಬೈನಾ.
“ನಿಮ್ಮಪ್ಪನ ಮುಖವನ್ನು ಜ್ಞಾಪಿಸಿಕೊಳ್ತಿದ್ದೀನಿ” ಎಂದೆ.
ಅವಳು ನಕ್ಕು, “ನಿನ್ನ ತಲೆ” ಎಂದಳಷ್ಟೇ.
ಇಂಗ್ಲೀಷ್ ಬರದಿದ್ದ ನನಗೆ ಇತರ ಹುಡುಗಿಯರಲ್ಲಾ ಅವರವರ ಪಾಠವನ್ನು ಹೇಳಿಕೊಡುತ್ತಿದ್ದರು. ಆದರೆ ಲುಬೈನಾ ಮಾತ್ರ “ಇಂಗ್ಲೀಷ್ ಕಲಿ ಯೋಗಿ. ತುಂಬಾ ಇಂಪಾರ್ಟೆಂಟ್. ನೀನು ಮೊದಲು ಪಾರ್ಟ್ಸ್ ಆಫ್ ದ ಸ್ಪೀಚ್ ಕಲಿ. ಆಮೇಲೆ ಟೆನ್ಸ್ ಕಲಿ.
ಇಷ್ಟಾದರೆ ಟೆನ್ಶನ್ ಬೇಡ. ಇಂಗ್ಲೀಷ್ ಕಲಿತೆ ಎಂದೇ ಅರ್ಥ” ಎಂದವಳು ನನಗೆ, ಗಿರೀಶನಿಗೆ ಮತ್ತು ಕನ್ನಡ ಮೀಡಿಯಂನಿಂದ ಬಂದಿರುವ ಇತರ ಹುಡುಗ ಹುಡುಗಿಯರಿಗೆ ತಾನೇ ಮುಂದಾಗಿ ಇಂಗ್ಲೀಷ್ ಗ್ರಾಮರ್ ಕಲಿಸಲು ದಿನದ ಅರ್ಧ ಅಥವಾ ಮುಕ್ಕಾಲು ಗಂಟೆಯನ್ನು ಮೀಸಲಿಡುತ್ತಿದ್ದಳು.
ಅಂದೊಮ್ಮೆ, ನನ್ನ ಕಸಿನ್ ಒಬ್ಬ ತಾನು ಪ್ರೀತಿಸುವ ಹುಡುಗಿಯ ಬಗ್ಗೆ ಕಸಿನ್ಗಳ ಅಸೋಸಿಯೇಶನ್ನಿನಲ್ಲಿ ಹೇಳಿಕೊಳ್ಳುತ್ತಿದ್ದ. ಅವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರಂತೆ, ಅವಳ ಮನೆಯವರಿಗೆ ಗೊತ್ತಾಯಿತಂತೆ, ಅವಳ ಅಣ್ಣ ಬಂದು ಅವಾಜ್ ಹಾಕಿ ಹೋದನಂತೆ. ಇವನು ಮತ್ತು ಅವಳು ಬೇಜಾರು ಮಾಡ್ಕೊಂಡರಂತೆ; ಹೀಗೇ ಸಾಗಿತ್ತು ಅವರು ಕಟ್ಟಿಕೊಡುತ್ತಿದ್ದ ಚಿತ್ರಣ.
“ಯೋಗಿ, ನಿನ್ನ ಲವ್ ಯಾರೋ?” ಗುಂಪಿನಿಂದ ಪ್ರಶ್ನೆಯೊಂದು ಬಂದಿತು.
ಹಾಗೆಂದ ಕೂಡಲೇ ಲುಬೈನಾ ಮುಖ ಕಣ್ಮುಂದೆ ಬಂದಿತು.
“ಯಾರೂ ಇಲ್ಲ” ಎಂದು ನಕ್ಕೆ.
“ತಿಕಾ ಮುಚ್ಚು. ಯಾರೋ ಇರ್ಬೇಕು. ಅದಕ್ಕೇ ಕಿಸಿತಾಯಿದ್ದೀಯ” ಎಂದ ನನ್ನ ಕಸಿನ್.
“ಇಲ್ಲ. ಯಾರೂ ಇಲ್ಲ. ಎಲ್ಲರೂ ನನ್ನ ಫ್ರೆಂಡ್ಸ್ ಅಷ್ಟೇ. ಎಲ್ಲರ ಜೊತೆಗೂ ನಾನು ಚೆನ್ನಾಗಿದ್ದೀನಿ” ಎನ್ನುತ್ತಿದ್ದರೂ ಕಣ್ಮುಂದೆ ಬರುತ್ತಿದ್ದ ಲುಬೈನಾ ಮುಖ ನನ್ನ ಮುಖವನ್ನು ಅರಳಿಸಿತ್ತು ಮತ್ತು ನಗುವನ್ನು ಸೂಸಿತ್ತು.
“ಮತ್ತೆ ಯಾಕೆ ಒಂದು ಥರಾ ಫಿಲಾಸಫರ್ ಸ್ಮೈಲ್ ಕೊಡ್ತಿದ್ದೀಯಾ?” ಅಂತ ಒಬ್ಬ ಕಸಿನ್ ಹೇಳಿದರೆ, ಮತ್ತೊಬ್ಬ ಕಸಿನ್ ಹೇಳಿದಳು.
“ಅದು ಫಿಲಾಸಫರ್ ಸ್ಮೈಲ್ ಅಲ್ವೋ. ಒನ್ ವೇ ಲವ್ವರ್ ಸ್ಮೈಲ್. ಅವನು ಇನ್ನೂ ಪ್ರೊಪೋಸ್ ಮಾಡಿಲ್ಲಾಂತ ಕಾಣತ್ತೆ. ಅದೇನಾರ ಸಕ್ಸಸ್ ಆದರೆ ಹೇಳ್ತಾನೆ. ಹೇಳಲೇ ಬೇಕು. ನಾವಲ್ಲದೇ ಇನ್ಯಾರು ದಿಕ್ಕು.”
ನನಗೂ ಅವಳು ಹೇಳುತ್ತಿರುವುದು ಸರಿ ಎನ್ನಿಸಿತು.
ಅಂದಾದ ಮೇಲೆ ಕ್ಲಾಸಿನಲ್ಲಿ ಪಾಠ ಮಾಡುವಾಗ ತನ್ನ ಪಾಡಿಗೆ ತಾನು ಪಾಠದ ಕಡೆಗೆ ಚಿತ್ತ ನೆಟ್ಟಿರುತ್ತಿದ್ದ ಲುಬೈನಾ ಕಡೆಗೆ ಆಗಾಗ ನೋಡುತ್ತಿದ್ದೆ. “ಇದೆಂತದೋ ಲವ್ವು… ಮಾಡಲೀ ಬಿಡಲಿ, ಅವರೊಂದಿಗೆ ಹೇಳಲಿ ಬಿಡಲಿ, ಅವರಿಗೆ ತಿಳಿಯಲಿ ಬಿಡಲಿ. ನಾವು ಮಾಡುತ್ತಿದ್ದೇವೆಂದು ಭಾವಿಸಿದರೇನೇ ಅದೆಷ್ಟು ಮಧುರವಾಗಿರುತ್ತದೆ. ನಾನು ಪ್ರೀತಿಸುತ್ತಿದ್ದೇನೆ ಎಂಬ ಭಾವವೇ ಅದೆಂತಾ ಆಪ್ಯಾಯಮಾನ! ಒಳಗೊಳಗಿಂದ ನಗು ಉಕ್ಕಿ ಬರುತ್ತದೆ.
ನಮ್ಮ ಪಕ್ಕದವರ ಕ್ರಿಯೆಗೆ ಕೊಡುವ ಪ್ರತಿಕ್ರಿಯೆ ಕೂಡಾ ಅದೆಷ್ಟು ನವಿರಾಗಿರುತ್ತದೆ! ಹೊಟ್ಟೆಯೊಳಗೆಲ್ಲಾ ತುಂಬಿಕೊಳ್ಳುತ್ತಿದ್ದ ನವಿರಾದ, ಮೆಲುವಾದ ನಗುವನ್ನು ಬಾಯಿಂದ ಪುಫ್ ಎಂದು ನಿಟ್ಟುಸಿರಂತೆ ಬಿಡುವುದೂ ಪ್ರೇಮದ ಉದ್ಗಾರವೇ. ಹೌದು, ಪ್ರೇಮವೆಂಬುದನ್ನು ಮಾಡುವಂತಹದ್ದಲ್ಲ. ಭಾವಿಸುವುದು. ಅನುಭವಿಸುವುದು. ತರಂಗಗಳಂತೆ ನಾವಿರುವ ಕಡೆಯಲ್ಲೆಲ್ಲಾ ಹರಡಿಸುತ್ತಿರುವುದು. ಖುಷಿಖುಷಿಯಾಗಿರುತ್ತದೆ. ಬಹುಶಃ ಪ್ರೇಮವೆಂದರೆ ಆನಂದವೇ ಇರಬೇಕು.
ಅಥವಾ ಆನಂದದ ಮತ್ತೊಂದು ಮಧುರವಾದ ಮಗ್ಗುಲು ಈ ಪ್ರೇಮವೇ! ಒಟ್ಟಾರೆ, ಐ ಲವ್ ಯೂ ಲುಬೈನಾ ಎನ್ನುವುದನ್ನು ಅವಳು ಕೇಳಿಸಿಕೊಳ್ಳದಿದ್ದರೂ, ಬಾರಿ ಬಾರಿ ಹೇಳಿಕೊಳ್ಳುವುದರಲ್ಲೇ ರೋಮಾಂಚನ ಉಂಟಾಗುತ್ತದೆ. ಆಶ್ಚರ್ಯವೆಂದರೆ ಆ ರೋಮಾಂಚನವು ದಿನದಿನಕ್ಕೂ ಹೆಚ್ಚಿನ ಆನಂದವನ್ನು ತರುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ನಿಜ ನಿದ್ರೆ ಬರುವುದಿಲ್ಲ. ಹಾಸುಗೆ ಮೇಲೆ ಮಲಗಿಕೊಂಡು ಕತ್ತಲಲ್ಲಿ ಆನಂದದಿಂದ ಪುಳಕಿತವಾಗುತ್ತಿರುವುದು, ಅಮ್ಮ, “ಏನೋ ಅದು ತಿಕ್ಲುತಿಕ್ಲಾಗಿ ಒಬ್ನೇ ನಕ್ಕೊಳ್ತಿದ್ದೀಯಾ?” ಎಂದು ಕೇಳುವಷ್ಟು.
ಅವತ್ತು ಕಾಲೇಜಿಗೆ ತುಂಬಾ ಬೇಗನೇ ಹೋಗಿದ್ದೆ.
“ಏ ಯೋಗಿ. ಪ್ಲೀಸ್ ಬಾರೋ ಇಲ್ಲಿ” ಎಂದು ಆತುರಾತುರವಾಗಿ ಆಸ್ಮಾ ಕರೆದಳು. ಏನೆಂದು ಕೇಳಿದರೆ, “ಲುಬೈನಾಗೆ ಸ್ವಲ್ಪ ಜ್ವರ ಬಂದಿರೋ ಹಾಗಿದೆ. ಆಫೀಸ್ ರೂಮಲ್ಲಿ ಟ್ಯಾಬ್ಲೆಟ್ಸ್ ಏನಾದ್ರೂ ಇದ್ರೆ ಕೇಳಿ ತಗಂಡು ಬಾ. ಅಲ್ಲಿಲ್ಲಾಂದ್ರೆ ಮೆಡಿಕಲ್ ಷಾಪಿಗೆ ಹೋಗಿ ಬರ್ತೀಯಾ?” ಎಂದು ಕೇಳಿದಳು. ನಾನು ಕೂಡಲೇ ಹೋದೆ ಆಫೀಸ್ ರೂಮಿನಲ್ಲೇ ಮಾತ್ರೆ ಸಿಕ್ಕಿತು. ತಕ್ಷಣವೇ ತಂದೆ.
ಆಸ್ಮಾ ಅವಳಿಗೆ ಮಾತ್ರೆ ನುಂಗಿಸಿ, ಅವಳದೂ ಮತ್ತು ತನ್ನ ಅಸೈನ್ಮೆಂಟುಗಳನ್ನು ತೆಗೆದುಕೊಂಡು, “ಯೋಗಿ, ಇವಳನ್ನು ನೋಡಿಕೊಂಡು ನೀನು ಇಲ್ಲೇ ಇರು. ನಾನು ಅಸೈನ್ಮೆಂಟ್ ಸೈನ್ ಹಾಕಿಸ್ಕೊಂಡು ಬರ್ತೀನಿ” ಎಂದು ಸ್ಟಾಫ್ ರೂಂ ಕಡೆಗೆ ಹೋದಳು.
ಇಡೀ ತರಗತಿಯಲ್ಲಿ ನಾನು ಮತ್ತು ಲುಬೈನಾ ಇಬ್ಬರೇ!
ಇಂತದ್ದೊಂದು ಏಕಾಂತವೇ ಇದುವರೆಗೂ ಸಿಕ್ಕಿರಲಿಲ್ಲ.
ಜ್ವರದಿಂದ ಬಾಡಿದ ಅವಳ ಮುಖವನ್ನು ನೋಡುತ್ತಾ ಮೆಲ್ಲನೆ ನಕ್ಕೆ. “ಲುಬೈನಾ, ನೀನು ಇವತ್ತು ಕಾಲೇಜಿಗೆ ಬರಬಾರದಿತ್ತು. ಮನೇಲೇ ಇದ್ದು ರೆಸ್ಟ್ ತಗೋಬೇಕಿತ್ತು” ಎಂದೆ.
“ಟೆಸ್ಟ್ ಇದೆಯಲ್ಲಾ ಅದಕ್ಕೇ ಬಂದೆ” ಎಂದ ಲುಬೈನಾ ಪದೇ ಪದೇ ಬಾಗಿಲ ಕಡೆಗೆ ನೋಡುತ್ತಾ, “ಯೋಗಿ, ನಾನು ನಿನಗೊಂದು ಮಾತು ಹೇಳಬೇಕು” ಎನ್ನುತ್ತಾ ಹತ್ತಿರವೇ ಕುಳಿತಿದ್ದ ನನ್ನ ಬಲಗೈಯನ್ನು ತನ್ನೆರಡೂ ಕೈಗಳಲ್ಲಿ ತಟ್ಟನೆ ಬಾಚಿ ಹಿಡಿದುಕೊಂಡಳು.
“ಅರೆ!”
ಇದೇನಾ ಪ್ರೇಮದ ಪುಳಕ. ಮೈಯೆಲ್ಲಾ ನವಿರೆದ್ದಿತು.
ಅದೆಷ್ಟು ಬೆಚ್ಚಗಿದೆ ಅವಳ ಪ್ರೇಮದ ಸ್ಪರ್ಷ!
ಗಂಟಲೊಣಗಿತು. ಉಗುಳು ತಾನೇ ಒಳಕ್ಕೆ ಧುಮುಕಿಕೊಂಡಿತು.
ನಾನು ಪ್ರಪೋಸ್ ಮಾಡಬೇಕೆಂದುಕೊಂಡಿರುವ ಪ್ರೇಮಿಯು ತಾನೇ ಪ್ರಪೋಸ್ ಮಾಡುತ್ತಾಳೆಂದರೆ ಅದಕ್ಕಿಂತ ಮಿಗಿಲಾದ ಆನಂದ ಇನ್ನೇನಿರುತ್ತದೆ!
“ಹೇಳು ಲುಬೈನಾ” ಎಂದು ನನ್ನ ಎಡಗೈಯಿಂದ ಹಿಡಿದಿದ್ದ ಅವಳ ಕೈಗಳ ಮುಷ್ಟಿಯನ್ನು ಮೆಲ್ಲನೆ ಮುಟ್ಟಿದೆ.
“ಯೋಗಿ, ನಿನ್ನ ಮೇಲೆ ನನಗೆ ನಂಬಿಕೆ ಇದೆ. ನನಗೆ ಪ್ಲೀಸ್ ಹೆಲ್ಪ್ ಮಾಡು” ಎಂದ ಲುಬೈನಾ ನನ್ನ ಹಿಡಿತದಿಂದ ಅವಳ ಕೈಗಳನ್ನು ತೆಗೆದುಕೊಂಡು ಬ್ಯಾಗಿನಿಂದ ಒಂದು ಮಡಿಸಿದ ಪತ್ರವನ್ನು ನನ್ನ ಕೈಗಿತ್ತಳು. ಅವಳ ಕಣ್ಣುಗಳು ಪದೇ ಪದೇ ಬಾಗಿಲಿನ ಕಡೆಗೆ.
“ಯೋಗಿ, ಇದು ಗಿರೀಶ್ ನನಗೆ ಕೊಟ್ಟಿರೋದು. ಲವ್ ಲೆಟರ್. ಬೇಕಾದರೆ ನೀನು ನಿಧಾನವಾಗಿ ಓದು. ಅವನಿಗೆ ವಾಪಸ್ ಕೊಟ್ಟುಬಿಡು. ಅವನಿಗೆ ಒಂದು ಮಾತು ಹೇಳಿಬಿಡು. ನನಗೆ ಈ ರೀತಿಯೆಲ್ಲಾ ಲವ್ವು ಅದೂ ಇದೂಂತ ಪ್ರಪೌಸ್ ಮಾಡಿದರೆ ಡಿಸ್ಟರ್ಬ್ ಆಗತ್ತೆ.
ನಮ್ಮ ಮನೆಯವರೆಲ್ಲಾ ನನಗೆ ಇಷ್ಟು ಮಾತ್ರ ಕಾಲೇಜಿಗೆ ಕಳಿಸುತ್ತಿರುವುದೇ ಹೆಚ್ಚು. ನಮ್ಮ ಮನೆಯ ಹೆಂಗಸರಲ್ಲಿ ನಾನೇ ಮೊದಲನೆಯವಳು ಈ ತರ ಕಾಲೇಜಿಗೆ ಬಂದು ಕಲಿಯುತ್ತಿರುವುದು. ನಮ್ಮ ಮನೆಯಲ್ಲಿ ಹೀಗೆಲ್ಲಾ ಅಂತ ಗೊತ್ತಾದರೆ ಕಾಲೇಜಿಗೇ ಕಳಿಸೊಲ್ಲ. ಅದೆಲ್ಲಾ ಬೇರೆ ವಿಷಯ. ಮುಖ್ಯವಾಗಿ ನನಗೇ ಇದರಲ್ಲೆಲ್ಲಾ ಇಂಟರೆಸ್ಟ್ ಇಲ್ಲ. ನಾನು ಚೆನ್ನಾಗಿ ಓದಬೇಕು. ಹೈಯರ್ ಸ್ಟಡೀಸ್ ಮಾಡಬೇಕು. ನನ್ನ ಕೆರಿಯರ್ ಬಗ್ಗೆ ನಾನು ಕಂಪ್ಲೀಟ್ ಕಾನ್ಸೆನ್ಟ್ರೇಶನ್ ಮಾಡ್ತಿದ್ದೀನಿ. ನಾವೂ ನೀವೂ ಎಲ್ಲಾ ಫ್ರೆಂಡ್ಲಿಯಾಗಿ ಇದ್ದೀವಲ್ಲಾ ಅಷ್ಟೇ ಒಂದು ಖುಷಿ.
ಈ ತರ ಲವ್ವು ಗಿವ್ವು ಅಂತ ಪ್ರಪೋಸ್ ಮಾಡೋದು, ಡಿಸ್ಟರ್ಬ್ ಮಾಡಿದರೆ ಈಗ ಇರೋ ಫ್ರೆಂಡ್ಶಿಪ್ ಕೂಡಾ ಇರಲ್ಲ. ಅವನ ಪಾಡಿಗೆ ಅವನಿಗೆ ಇರಕ್ಕೆ ಹೇಳು. ಆಸ್ಮಾಗೇನಾದರೂ ಗೊತ್ತಾದರೆ ಅವಳು ದೊಡ್ಡ ಬಾಯಿಯವಳು. ಜಗಳ ಮಾಡಿಬಿಡ್ತಾಳೆ. ನಿನ್ನೆ ಸಾಯಂಕಾಲ ಅವನು ಲೆಟರ್ ಕೊಟ್ಟ. ರಾತ್ರಿ ಪೂರ್ತಿ ನಿದ್ರೆನೇ ಬರಲಿಲ್ಲ. ಥೋ ಎಂತಾ ಕೆಲ್ಸ ಆಗೋಯ್ತು.
ಇವನೇನಾದರೂ ಹಟ ಮಾಡ್ಕೊಂಡು ಲವ್ವು ಗಿವ್ವು ಅಂತ ಹಿಂದಿಂದೆ ಬಿದ್ದರೆ ನನ್ನ ಸ್ಟಡೀಸ್ ಗತಿ ಏನು ಅಂತ ನೆನಿಸ್ಕೊಂಡು ನೆನಿಸ್ಕೊಂಡೇ ಅಳು ಬರ್ತಾಯಿತ್ತು. ಜ್ವರ ಬಂದಾಗಿಬಿಟ್ಟಿದೆ ಯೋಗಿ. ನೀನು ನನ್ನ ಬ್ರದರ್ ಅಂತ ತಿಳ್ಕೊಂಡು ರಿಕ್ವೆಸ್ಟ್ ಮಾಡ್ಕೊಳ್ತಿದ್ದೀನಿ. ಗಿರೀಶನಿಗೆ ಪ್ಲೀಸ್ ಕನ್ವೀನ್ಸ್ ಮಾಡು. ಮೊದಲಿದ್ದ ಹಾಗೇ ಇರಲಿ. ಇದೊಂದು ಅವನ ತಲೆಯಿಂದ ತೆಗೆದುಹಾಕಿಬಿಡಲಿ ಅಷ್ಟೇ. ಪ್ಲೀಸ್” ಲುಬೈನಾ ಕೈ ಮುಗಿದಳು.
ಮುಗಿದ ಅವಳ ಕೈಯನ್ನು ಹಿಡಿದುಕೊಂಡು ಹೇಳಿದೆ.
“ಯೋಚ್ನೆ ಮಾಡಬೇಡ. ನಾನು ಅವನ ಜೊತೆ ಮಾತಾಡ್ತೀನಿ. ನೀನು ಕೈಯೆಲ್ಲಾ ಏನೂ ಮುಗಿಯೋದು ಬೇಡ.”
“ಯಾರಿಗೂ ಹೇಳಬೇಡ. ಈ ವಿಷಯ ನಮ್ಮೂವರಲ್ಲೇ ಮುಗಿದು ಹೋಗಲಿ. ಪ್ಲೀಸ್” ಎಂದ ಲುಬೈನಾ ಆಸ್ಮಾ ಬರುವುದನ್ನು ನೋಡಿ ಮಾತು ನಿಲ್ಲಿಸಿದಳು.
ನಾನು ನಕ್ಕೆ. ಗಿರೀಶನಿಗೆ ಅವಳು ಹೇಳಿದ್ದನೆಲ್ಲಾ ಹೇಳಿದೆ. ಅವಳು ಕೊಟ್ಟ ಪತ್ರವನ್ನು ಮರಳಿಸಿದೆ.
“ಅನ್ನಿಸ್ತು ಪ್ರಪೋಸ್ ಮಾಡ್ದೆ. ಅವರಿಗೆ ಇಷ್ಟ ಇಲ್ಲಾಂದ್ರೆ ಬಿಡು, ಅಷ್ಟೇ!” ಎಂದ ಅವನ ಕಣ್ಣಂಚಿನಲ್ಲಿ ಜಿನುಗಲು ಸಿದ್ಧವಾಗಿದ್ದ ಕಣ್ಣೀರಿನ ಹನಿಗಳನ್ನು ಆದಷ್ಟು ತಡೆದುಕೊಂಡ.
ಆದರೆ ನನಗೆ ಧಳಧಳ ಸುರಿದೇ ಬಿಟ್ಟಿತು.
“ಹೋಗಲಿ ಬಿಡು” ಅವನಿಗೆ ಅಂದು ಜೀವನದಲ್ಲೇ ತುಂಬಾ ಆಪ್ತನಾದ ಸ್ನೇಹಿತ ಎಂದೆಸಿದ್ದಿರಬೇಕು. ತನ್ನ ಸ್ನೇಹಿತನ ಭಗ್ನ ಹೃದಯಕ್ಕೆ ಇಷ್ಟೊಂದು ಮರಗುತ್ತಿದ್ದಾನಲ್ಲಾ ಎಂದು ಅವನು ನನ್ನ ಬಗ್ಗೆ ತನ್ನ ಆತ್ಮೀಯತೆಯನ್ನು ಮತ್ತಷ್ಟು ಗಾಢ ಮಾಡಿಕೊಂಡಿರಬೇಕು.
“ಪ್ಚ್, ನೀನೇನೋ, ನನಗೊಸ್ಕರ ಇಷ್ಟು ಫೀಲ್ ಮಾಡ್ಕೊಳ್ತಿದ್ದೀಯಾ?” ಎಂದ ಅವನು ನನ್ನ ಭುಜವನ್ನು ಬಳಸಿ ಹಿಡಿದುಕೊಂಡು “ಇಷ್ಟು ಸಾಕು ಬಿಡು ಗುರು, ಇಷ್ಟು ಸಾಕು” ಎಂದ ಅವನ ಕಣ್ಣಿಂದಲೂ ಧುಮುಕುತ್ತಿತ್ತು.
ಯಾರೊಂದಿಗೂ ಹಂಚಿಕೊಳ್ಳದ ಅಂದು ನನ್ನ ಕಣ್ಣಿಂದ ನೀರು ಸುರಿದ ರಹಸ್ಯವನ್ನು ನಾನು ಬಿಚ್ಚಿಟ್ಟಿದ್ದು ಸುಮಾರು ಇಪ್ಪತ್ತೈದು ವರ್ಷಗಳ ನಂತರ. ಅದು ದಲೀಲ್ ಮುಂದೆ. ದಲೀಲ್ ಲುಬೈನಾಳ ಗಂಡ. ಅವನು ಮುಂಬೈನಲ್ಲಿ ರಂಗತಂಡವೊಂದನ್ನು ಹೊಂದಿದ್ದ. ನಾನೂ ರಂಗಕರ್ಮಿ ಎಂದು ಲುಬೈನಾಳಿಂದ ತಿಳಿದಾಗ ನನ್ನ ಜೊತೆ ಮಾತಾಡಲು ಇಷ್ಟ ಪಟ್ಟಿದ್ದ.
ನನ್ನ ರಂಗಪ್ರಯೋಗ ಖಲೀಲ್ ಗಿಬ್ರಾನನ ದ ಪ್ರಾಫೆಟ್ ಹಲವು ಪ್ರಯೋಗಗಳನ್ನು ಕಂಡು, ಪತ್ರಿಕೆಗಳಲ್ಲಿ ಅದರ ಬಗ್ಗೆ ಬರಹಗಳನ್ನು ನೋಡಿದಾಗ ಲುಬೈನಾ ಮತ್ತು ದಲೀಲ್ ನನಗೆ ಫೋನ್ ಮಾಡಿ ಮುಂದಿನ ಪ್ರಯೋಗ ಇದ್ದಾಗ ತಿಳಿಸಲು ಹೇಳಿದ್ದರು. ಅಲೆಯನ್ಸ್ ಡಿ ಫ್ರಾನಿಸ್ ನಲ್ಲಿ ಪ್ರಯೋಗವಾದಾಗ ಇಬ್ಬರೂ ಬಂದು ನಾಟಕ ನೋಡಿ ಖುಷಿಪಟ್ಟರು. ಇಬ್ಬರೂ ಬೆನ್ಸನ್ ಟೌನಿನಲ್ಲಿರುವ ತಮ್ಮ ಮನೆಗೆ ಊಟಕ್ಕೆ ಕರೆದರು. ಲುಬೈನಾಗೆ ದೇವಿಯನ್ನು ಕಂಡರೆ ಬಲೇ ಮುದ್ದಾಗಿತ್ತು.
ರಂಗಪ್ರಯೋಗದಲ್ಲಿಯೂ ಪುಟಪುಟನೆ ವೇದಿಕೆಯ ಮೇಲೆ ನಾಟಕದ ಭಾಗವಾಗಿದ್ದ ದೇವಿ ಪ್ರದರ್ಶನದ ವೇಳೆ ಕೆಳಗಿಳಿದು ಬಿಟ್ಟಳು. ಲುಬೈನಾ ಅವಳನ್ನು ಎತ್ತಿಕೊಂಡು ಮತ್ತೆ ವೇದಿಕೆ ಹತ್ತಿಸಿದ್ದಳು. ಕತ್ತಲಿನಲ್ಲಿ ನನಗೆ ಆ ವ್ಯಕ್ತಿ ಲುಬೈನಾ ಎಂದು ತಿಳಿದಿರಲಿಲ್ಲ. ಆದರೆ ನಾಟಕ ಮುಗಿದ ಮೇಲೆ ಅವಳೆಂಬ ಅಚ್ಚರಿ ಕಾದಿತ್ತು.
ಗಂಡ ಹೆಂಡಿರಿಬ್ಬರೇ ಇದ್ದ ಅವರ ಮನೆಯಲ್ಲಿ ನಾವು ಕುಟುಂಬ ಸಮೇತ ಊಟ ಮಾಡುವಾಗ ಲುಬೈನಾ “ನಾವು ಕಾಲೇಜಲ್ಲಿ ಓದುವಾಗ ಒಂದು ಘಟನೆ ನಡಿತು. ಏನೂಂತ ನೀನೇ ಕೇಳು” ಎಂದು ಲುಬೈನಾ ದಲೀಲನಿಗೆ ಹೇಳಿದಳು.
ನಾನು ಗಿರೀಶ್ ಪ್ರೇಮಪತ್ರ ಕೊಟ್ಟ ಕತೆಯನ್ನು ಹೇಳುತ್ತೇನೆ ಎಂದಷ್ಟೇ ತಿಳಿದಿದ್ದ ಲುಬೈನಾಗೆ ಅಚ್ಚರಿ ಕಾದಿತ್ತು.
ನನ್ನೊಮೆಯನ್ನೂ ತೆರೆದಿಟ್ಟಾಗ ದಲೀಲ್ ನಮ್ಮಿಬ್ಬರ ಮುಖವನ್ನು ನೋಡಿ ನೋಡಿ ನಗುತ್ತಿದ್ದ.
“ಅಯ್ಯೋ ನಿನ್ನಾ. ನೀನು ಹೇಳಲೇ ಇಲ್ಲಾ!” ಎಂದಳು ಲುಬೈನಾ.
ನಾನು ನಕ್ಕೆ. ಗಂಗಾ ಕೂಡಾ ನಗುತ್ತಿದ್ದಳು.
“ಇವರು ಹೇಳಿದ್ದರೆ ಏನು ಮಾಡುತ್ತಿದ್ದೆ?” ಎಂದು ಕೇಳಿದ ದಲೀಲ್.
“ಆವಾಗ ಇವನ ಕತೆ ಹೀಗೇಂತ ಗಿರೀಶನಿಗೇ ಹೇಳಿರುತ್ತಿದ್ದೆ” ಎಂದು ನಕ್ಕಳು ಲುಬೈನಾ.
“ಗಿರೀಶ ಮತ್ತೆ ಯೋಗೀಶ ಇಬ್ಬರೂ ಪ್ರಪೋಸ್ ಮಾಡಿದ್ದರೆ?” ಎಂದು ಕೇಳಿದ ದಲೀಲ್.
“ಮಹೇಶನಿಗೆ ಹೇಳ್ತಿದ್ದೆ!” ಎಂದಳು ಲುಬೈನಾ.
“ಅವನ್ಯಾರು?”
“ಪಕ್ಕದ ಕ್ಲಾಸ್ ರೌಡಿ” ಎಂದು ನಕ್ಕಳು ಲುಬೈನಾ.
“ನೋಡಿ ಗಂಗಾ ನಿಮ್ಮ ಗಂಡ ಭಯಂಕರ ಸೀಕ್ರೆಟ್ ಲವ್ವರ್. ಇಷ್ಟು ವರ್ಷ ಆದ ಮೇಲೆ ಹೇಳ್ತಿದ್ದಾರೆ” ಎಂದ ದಲೀಲ್.
“ಅವರ ಹತ್ತಿರ ಯಾವ ಸೀಕ್ರೇಟೂ ಇರಲ್ಲ. ಕತೆ ಕಾದಂಬರಿಗಳಲ್ಲಾದರೂ ಬಂದುಬಿಡತ್ತೆ” ಎಂದ ಗಂಗಾ, “ಅವರು ಒಳಗೊಳಗೇ ಏನೂ ಇಟ್ಕೊಳಲ್ಲ” ಎಂದು ಪುನರುಚ್ಚರಿಸಿದಳು.
ಹೌದು, ಹಾಗೆ ಇಟ್ಟುಕೊಳ್ಳಲ್ಲ. ಆದರೆ ಅದಿತ್ತು ಇಪ್ಪತ್ತೈದು ವರ್ಷ. ದಲೀಲ್ ಮತ್ತು ಲುಬೈನಾ ದಂಪತಿಗಳ ಮುಕ್ತ ಮನಸ್ಸು ಮತ್ತು ಒಡನಾಟ ನೋಡಿ ಅದನ್ನು ಹೇಳಲು ಸಾಧ್ಯವಾಯಿತು. ಲುಬೈನಾ ಕಾಲೇಜಿನಲ್ಲಿ ಹಿಂಜರಿಯುತ್ತಿದ್ದಂತೆ ಈಗ ಇರದೇ ಹಿಜಾಬಿನಲ್ಲೇ ಬಾಯ್ಬಿಟ್ಟು ನಗುತ್ತಿದ್ದಳು. ಕಣ್ಣರಳಿಸಿ ಹುಬ್ಬೆತ್ತಿ ಕೇಳುವ, ಹೇಳುವ ಬಗೆಯಲ್ಲಿ ಅವಳ ಮುಕ್ತತೆ, ಲವಲವಿಕೆ ಕಾಣುತ್ತಿತ್ತು.
ಒಂದು ವೇಳೆ ದಲೀಲ್ ಕಾಟೇವಾಡ ಹಾಕಿಕೊಂಡಿರುವ ವ್ಯಕ್ತಿಯಂತೆ ಕಂಡಿದ್ದರೆ ಊಟ ಮಾಡಿ “ನಮ್ಮನೆಗೂ ಬನ್ನಿ” ಎಂದು ಆಹ್ವಾನಿಸುವುದರಲ್ಲೇ ನಮ್ಮ ಮಾತುಕತೆ ಮುಗಿದಿರುತ್ತಿತ್ತು. ಗಂಗಾ ಹೇಳಿದಂತೆ ಯಾವುದೋ ಕತೆ, ಕಾದಂಬರಿಯಲ್ಲಿ ಯಾರದೋ ಕತೆಯಂತೆ, ಯಾವುದೋ ಪಾತ್ರದ್ದಂತೆ ಇದು ನುಸುಳೇ ತೀರಿರುತ್ತಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಸ್ತೆ ವಿಸ್ತೀರ್ಣ ವಿರೋಧಿಸಿ ಎಸ್ಓಜಿ ಕಾಲೋನಿ ನಿವಾಸಿಗಳ ಪ್ರತಿಭಟನೆ
ದಾವಣಗೆರೆ: ಎಸ್ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸುವುದರೊಂದಿಗೆ, ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಎಸ್ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ಸೇರಿದ ಎಸ್ಒಜಿ ಕಾಲೊನಿಯ ನಿವಾಸಿಗಳು ಇಲ್ಲಿಂದಲೇ ಮೆರವಣಿಗೆ ಹೊರಟು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.
ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್ಲೈನ್ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ ಎಂದು ಎಸ್ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

ಅಂತರಂಗ
ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ
~ ಡಾ. ಸುಜಾತಾ ಚಲವಾದಿ
ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.
ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.
ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.
ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.
ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.
ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.
ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.
ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.
1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.
ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.
ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.
ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.
26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.
ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ
ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು
ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.
ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.
ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.
ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.
ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.
——————————————————————-
ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?
ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.
ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?
ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.
ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?
ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.
ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?
ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.
ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.
ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?
ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)
ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?
ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)
ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?
ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.
ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?
ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.
ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್
ಸುದ್ದಿದಿನ.ಕಾಂ|ವಾಟ್ಸಾಪ್|9980346243



