Connect with us

ಅಂತರಂಗ

ಅರಿಮೆಯ ಅರಿವಿರಲಿ-14 : ತನ್ನ ಬಣ್ಣಿಸಬೇಡ

Published

on

  • ಯೋಗೇಶ್ ಮಾಸ್ಟರ್

ತ್ಮರತಿಯ ಮತ್ತೊಂದು ಮುಖ್ಯ ಲಕ್ಷಣವೆಂದರೆ ತನ್ನ ಹೊಗಳಿಕೆಯ ಉನ್ಮತ್ತತೆಯಲ್ಲಿ ಮೈಮರೆಯುವುದು. ತನ್ನನ್ನು ಪ್ರದರ್ಶಿಸಿಕೊಳ್ಳುವ ಅಮಲಿನಲ್ಲಿ ಮತ್ತು ಬಣ್ಣಿಸಿಕೊಳ್ಳುವ ಮದದಲ್ಲಿ ಮೈಮರೆಯುವುದು. ಹೆಚ್ಚೆಚ್ಚು ಮಾಡಿಕೊಂಡಷ್ಟೂ ಹೆಚ್ಚೆಚ್ಚು ಮದ. ಯಾವ್ಯಾವ ಸಂದರ್ಭಗಳು ಒದಗುವುದೋ ಅದನ್ನೆಲ್ಲಾ ತನ್ನ ಬಣ್ಣನೆಗೆ ಬಳಸಿಕೊಳ್ಳುವುದು. ಅದಕ್ಕೆ ಖರ್ಚಾಗುವುದೋ? ಆಗಲಿ. ಒಟ್ಟಾರೆ ತನ್ನ ಬಣ್ಣನೆ ವರ್ಣನೆ ಪ್ರದರ್ಶನವಾಗಬೇಕು.

ದೇವಸ್ಥಾನಕ್ಕೆ ಫ್ಯಾನ್ ಹಾಕಿಸಿದರಾ? ಅದ್ಯಾವುದೋ ಆಶ್ರಮಕ್ಕೆ ಅಲಮಾರಿ ಕೊಟ್ಟರಾ? ಇನ್ಯಾವುದೋ ಗುಡಿಗೆ ಗಂಟೆ ದಾನವಿತ್ತರಾ? ಅದರ ಮೇಲೆಲ್ಲಾ ಅವರ ಹೆಸರಿರಬೇಕು. ಕೆಲವೊಮ್ಮೆ ಯಾರದೋ ಸ್ಮರಣೆಯಿಂದ ಕೊಡುತ್ತಿದ್ದು, ಅವರ ಹೆಸರೂ ಸೇರಿದಂತೆ ಕೊಟ್ಟವರ ಹೆಸರೂ, ಅವರ ಹೆಂಡರು ಮಕ್ಕಳ ಹೆಸರೂ ಉಲ್ಲೇಖಿತವಾಗಿರಬೇಕು. ಇದು ಆತ್ಮತೃಪ್ತಿಯ ವಿಷಯವಲ್ಲ. ಅರಿಮೆಯ ತೃಪ್ತಿ. ನಾರ್ಸಿಸಂ ಎಂಬ ಮಾನಸಿಕ ಸಮಸ್ಯೆಯು ಮನಸ್ಸಿಗೆ ಹಾತೊರೆಯುವಂತೆ ಮಾಡುವ ಬಯಕೆ. ಯಾವುದೇ ಅರಿಮೆಯನ್ನು ನಿವಾರಿಸಿಕೊಳ್ಳಲು ಮಾಡಬೇಕಾದ ಮೊದಲನೆಯ ಕೆಲಸವೆಂದರೆ, ಅದನ್ನು ತಮ್ಮಲ್ಲಿ ಗುರುತಿಸಿಕೊಳ್ಳುವುದು ಮತ್ತು ಅದು ಮತ್ತೆ ತಲೆ ಎತ್ತದಂತೆ ಬಹಳ ಎಚ್ಚರದಿಂದ ಕೆಲಸ ಮಾಡುವುದು. ಪ್ರಜ್ಞಾಪೂರ್ವಕವಾಗಿ ವರ್ತಿಸುವುದು.

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎನ್ನುವ ಬಸವಣ್ಣ ಆತ್ಮರತಿಯ ಅರಿಮೆಯನ್ನು ನಿವಾರಿಸಿಕೊಳ್ಳಲು ಅರಿವಿನ ದಾರಿ ತೋರುತ್ತಾರೆ. ತನ್ನನ್ನು ಬಣ್ಣಿಸಿಕೊಳ್ಳುವುದೊಂದು ವಿಧಾನವಾದರೆ, ಮತ್ತೊಬ್ಬರನ್ನು ಹಳಿಯುತ್ತಾ ತಾನೆಷ್ಟು ಉತ್ತಮನು ಎಂದು ಪ್ರದರ್ಶಿಸಿಕೊಳ್ಳುವುದು ಮತ್ತೊಂದು ವಿಧಾನ. ತನ್ನ ಬಣ್ಣಿಸಿಕೊಂಡು ಇದಿರಿರುವವರನ್ನು ಹಳಿಯುವುದಕ್ಕೆ ಮನೆಯಲ್ಲಿ ಮಕ್ಕಳಿಗೆ ಬಹಳಷ್ಟು ಪೋಷಕರೇ ಮಾದರಿಯಾಗುತ್ತಾರೆ.

ತಾವು ಸಣ್ಣವರಿದ್ದಾಗ ಅದೆಷ್ಟು ಕಷ್ಟಪಟ್ಟೆವು. ನಮಗೆ ಕೇಳಿದ್ದೆಲ್ಲಾ ಸಿಗುತ್ತಿರಲಿಲ್ಲ. ನಿಮಗೆ ಎಲ್ಲಾ ಸಿಗುತ್ತಿದೆ. ನಿಮಗೆ ಕಷ್ಟ ಅರ್ಥವಾಗಲ್ಲ. ನಾವು ಅಷ್ಟು ದೂರ ನಡೆದುಕೊಂಡು ಹೋಗುತ್ತಿದ್ದೆವು. ನಿಮಗೆ ಈಗ ವಾಹನ ಸೌಕರ್ಯವಿದೆ. ನಮಗೆ ಹೊಟ್ಟೆಗೆ ಸರಿಯಾಗಿ ದೊರಕುತ್ತಿರಲಿಲ್ಲ. ನಿಮಗೆ ಕೇಳಿದ್ದು ಕೇಳಿದ್ದೆಲ್ಲಾ ಸಿಗುತ್ತದೆ. ನಿಮಗೆ ಹೊಟ್ಟೆ ತುಂಬಾ ಸಿಗತ್ತಲ್ಲಾ ಅದಕ್ಕೇ ಕೊಬ್ಬು. ನಮಗೆ ಒಂದು ಪುಸ್ತಕ ಬೇಕಾದರೆ ಅದೆಷ್ಟು ಕಾಡಿಬೇಡಿ ಪಡೆಯಬೇಕಿತ್ತು. ನೀವು ಅದೆಷ್ಟು ವ್ಯರ್ಥ ಮಾಡುತ್ತೀರಿ. ಇಲ್ಲಿ ಪೋಷಕರು ತಮ್ಮನ್ನು ಬಣ್ಣಿಸಿಕೊಂಡು, ಮಕ್ಕಳನ್ನು ಹಳಿದುಕೊಂಡು ಮಾಡುತ್ತಿರುವುದೇನು? ಮಕ್ಕಳ ಮುಂದೆ ಪೋಷಕರ ಆತ್ಮರತಿಯ ಪ್ರದರ್ಶನ.

ಕಪಟತನ ಕದವಿಕ್ಕಿಕೊಳ್ಳದು

ಆತ್ಮರತಿಯ ವೇದಿಕೆ ಯಾವುದಾದರೂ ಆಗಬಹುದು. ದೇಗುಲ, ಅನಾಥಾಶ್ರಮ, ಸಾಮಾಜಿಕ ಸಂಸ್ಥೆಗಳು, ಆಧ್ಯಾತ್ಮಿಕ ಆಶ್ರಮಗಳು, ಧಾರ್ಮಿಕ ಕೇಂದ್ರಗಳು; ಹೀಗೆ.
ಆತ್ಮರತಿಯ ಈ ಅರಿಮೆಯ ಬಗ್ಗೆ ಎಚ್ಚರವಹಿಸಲು ಯೇಸು ನೀಡುವ ಎಚ್ಚರಿಕೆ ಬಹಳ ಸ್ಪಷ್ಟವಾಗಿದೆ.

ನೀನು ದಾನಧರ್ಮ ಮಾಡುವಾಗ ತುತ್ತೂರಿ ಊದಿಸಬೇಡಿ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ.”
“ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು.”

ತಾನೆಷ್ಟು ಪರಮ ಭಕ್ತ ಎಂದು ಹೊರಗೆ ತೋರಿಸಿಕೊಳ್ಳುವುದು ಭಕ್ತಿಯಲ್ಲ ಆತ್ಮರತಿ ಎನ್ನುವುದು ಯೇಸುವಿನ ಧೋರಣೆ. ಈ ಅರಿಮೆಯನ್ನು ಗುರುತಿಸುತ್ತಾ ಮುಂದುವರಿಸುವ ಬಸವಣ್ಣ,  ಮಾಡಿ ಕೆಟ್ಟರು ಮನವಿಲ್ಲದೆ. ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ” ಮಾಡುವ ಮತ್ತು ನೀಡುವುದು ಎರಡೂ ತನ್ನ ಆತ್ಮರತಿಯ ತೃಪ್ತಿಗೇ ಹೊರತು ಆತ್ಮತೃಪ್ತಿಗಲ್ಲ. ಮಾಡುವ ನೀಡುವ ನಿಜಗುಣವುಳ್ಳವನು ಡಂಗೂರವನ್ನು ಸಾರುವುದೇನೂ ಬೇಕಾಗಿಲ್ಲ ಎಂಬುದು ಬಸವಣ್ಣನವರ ಸ್ಪಷ್ಟತೆ.

ಯೇಸು ಹೇಳುವಂತೆ ಕಪಟತನವು ಕದವಿಕ್ಕಿಕೊಳ್ಳದು. ಹೊರಗೆ ಆಡಂಬರಕ್ಕೆ ತನ್ನ ಪ್ರದರ್ಶನ ಮಾಡಬೇಕು. ಅದು ದಾನವೋ, ಪ್ರಾರ್ಥನೆಯೋ, ಪೂಜೆಯೋ ಎಂತದ್ದೋ. ಈಗ ಕರೋನಾ ಲಾಕ್ ಡೌನ್ ಸಮಯದಲ್ಲಿಯೂ ಕೂಡಾ ಅದೆಷ್ಟು ಜನರು ತಮ್ಮ ಪಾಡಿಗೆ ತಾವು ಆಹಾರ ವಿತರಣೆ ಅಥವಾ ದೈನಂದಿನ ಜೀವನಕ್ಕೆ ಅಗತ್ಯವಿರುವುದರ ವಿತರಣೆಗಳನ್ನು ಉಚಿತವಾಗಿ ತಮ್ಮ ಸಾಮಾಜಿಕ ಕರ್ತವ್ಯದಂತೆ ಆತ್ಮತೃಪ್ತಿಗಾಗಿ ಮಾಡುತ್ತಿದ್ದಾರೆ. ಹಾಗೆಯೇ ಒಂದಿಷ್ಟು, ಒಂದು ದಿನ ಎಲ್ಲೋ ಒಂದಷ್ಟು ಮಾಡಿ ಅದರ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಂಡು ವರ್ಷವಿಡೀ ವಾಟ್ಸಪ್ ಮತ್ತು ಫೇಸ್ಬುಕ್ಕಿನಲ್ಲಿ ಎಲ್ಲರಿಗೂ ತೋರಿಸಿಕೊಂಡು ಪ್ರಶಂಸೆಯ ಹಸಿವಿಗೆ ಉಣಬಡಿಸಿಕೊಳ್ಳುತ್ತಿರುವುದೂ ಕೂಡಾ ಬೇಕಾದಷ್ಟಿದೆ.

ಕ್ರೂರ ಕರುಣೆ

ಕೆಲವರಿಗೆ ಅವರಾತ್ಮರತಿಯ ತೃಪ್ತಿಗೆ ಅನಾಥಾಶ್ರಮಗಳ ಅಥವಾ ವೃದ್ಧಾಶ್ರಮಗಳೂ ಕೂಡಾ ಆತ್ಮರತಿಯ ವೇದಿಕೆಗಳಾಗುತ್ತವೆ. ಮೊದಲನೆಯದಾಗಿ ಅದನ್ನು ಅನಾಥಾಶ್ರಮ ಎನ್ನುವುದೇ ಒಂದು ವ್ಯಂಗ್ಯ ಮತ್ತು ಕ್ರೂರ. ಆ ಗೂಡಿನಲ್ಲಿರುವವರನ್ನು ತಾವು “ಅನಾಥ ಅನಾಥ” ಎಂಬ ಪ್ರಜ್ಞೆಯನ್ನು ಸದಾ ಜಾಗೃತವಾಗಿಡುವ ಫಲಕಗಳು ಅವು. ಅಲ್ಲಿಗೆ ಹೋಗಿ ಸಮಾರಂಭದಂತೆ ಒಂದು ಕಾರ್ಯಕ್ರಮ ಮಾಡಿ, ವೇದಿಕೆಯ ಮೇಲೆ ದಾನಿಗಳನ್ನು ಇನ್ನಿಲ್ಲದಂತೆ ಹಾಡಿ ಹೊಗಳಿ, ಅವರು ಉಬ್ಬಿ, ಕೊಡುವ ಕೈ ಮೇಲೆ ಎಂಬ ಭಾವದಿಂದ ಮೈಮರೆತು, ತಮ್ಮ ಮುಂದೆ ಕುಳಿತಿರುವ ಅನಾಥರು, ವೃದ್ಧರು, ಮಕ್ಕಳು ತಾವು ಯಾರದೋ ಅಧೀನದಲ್ಲಿ, ಕೃಪೆಯಲ್ಲಿ ಬದುಕುತ್ತಿದ್ದೇವೆ ಎಂಬ ಕೀಳರಿಮೆಯಲ್ಲಿ ಮುಖಬಾಡಿಸಿಕೊಂಡು ಕುಳಿತಿದ್ದು ಯಾವ ಸಾರ್ಥಕ್ಯಕ್ಕೆ?

ಅನಾಥಾಲಯದಿಂದಲೋ, ಹೆಣ್ಣು ಮಕ್ಕಳಿರುವ ಸೇವಾಶ್ರಮದಿಂದಲೋ ಯಾರನ್ನಾದರೂ ಮದುವೆಯಾಗುವುದು ಇನ್ನೂ ದೊಡ್ಡ ತುತ್ತೂರಿ. ‘ಆ ಹೆಣ್ಣು ಮಗುವಿಗೆ ಬಾಳು ಕೊಡುತ್ತಿರುವ ತಾನೊಬ್ಬ ಬಹು ದೊಡ್ಡ ಉದಾರಿ’ ಎಂದು ಪತ್ರಿಕೆಯಲ್ಲಿ ಪ್ರಕಟಿಸಿಕೊಳ್ಳುವಷ್ಟು ಆತ್ಮರತಿ. ಯಾರು ಯಾರಿಗೆ ಬಾಳು ಕೊಡುವುದು? ವಿಧವೆ ಎಂದು ಕರೆಯುವುದೂ, ಅನಾಥರೆಂದೂ ಕರೆಯುವುದೂ ಕೂಡಾ ಒಂದು ಅಮಾನವೀಯವೇ ಆಗಿರುವಾಗ, ಅವರನ್ನು ಮದುವೆಯಾಗಿ ಬಾಳು ಕೊಡುತ್ತೇನೆ ಎಂದು ಘೋಷಿಸಿಕೊಳ್ಳುವುದು ಆ ಹೆಣ್ಣುಮಗುವನ್ನು ದೈನೇಸಿಯಾಗಿಯೇ ಇಡುವ ಬಗೆ. ಆತ್ಮರತಿಯ ಅರಿಮೆಯುಳ್ಳವರಿಗೆ ಇಂಥಾ ಕ್ರೂರ ಕಾರುಣ್ಯವು ಮತ್ತು ಪ್ರದರ್ಶಕ ಔದಾರ್ಯವು ಸಾಮಾನ್ಯ.

ವಿಧವೆಯ ಅಥವಾ ಯಾವುದೇ ಹೆಣ್ಣುಮಗುವಿನೊಂದಿಗಿನ ಮದುವೆ ಆ ಭಾವವೇ ಇಲ್ಲದೇ ಬರಿಯ ವ್ಯಕ್ತಿಗತವಾಗಿ ಆಪ್ತ ಸಂಗತಿಯಾಗಬಾರದೇ! ಕೆಲವರು ಕೊಡುವ ಕಾರಣವೇನೆಂದರೆ, ಇವು ಇತರರಿಗೆ ಪ್ರೇರಣೆಯಾಗುವುದು ಎಂದು. ಒಬ್ಬನ ಆತ್ಮರತಿಯು ಇನ್ನೊಬ್ಬನ ಆತ್ಮರತಿಯ ಪ್ರದರ್ಶನಕ್ಕೆ ದಾರಿಯಾಗುವುದು ಅಷ್ಟೇ. ಏಕೆಂದರೆ, ಪ್ರಾಮಾಣಿಕ ಮನಸ್ಸುಳ್ಳವನಿಗೆ ಈ ಪ್ರೇರಣೆಗಳೇನೂ ಬೇಕಾಗಿಲ್ಲ. ಆತನ ಆತ್ಮಸಾಕ್ಷಿ ಮತ್ತು ಸ್ವಪ್ರೇರಣೆಯೇ ಸಾಕಾಗಿರುತ್ತದೆ.

ಸಾಮೂಹಿಕ ರತಿಕ್ರೀಡೆ

ಎಷ್ಟೋ ಬಾರಿ ನಮ್ಮ ದೇಶದಲ್ಲಿಯೂ ಸೇರಿದಂತೆ ವಿವಿಧ ಸಮಾಜಗಳಲ್ಲಿ ಯಾವುದಕ್ಕೆ ನಾಚಿಕೊಳ್ಳಬೇಕೋ ಅದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಯಾವುದಕ್ಕೆ ಹೆಮ್ಮೆಪಟ್ಟುಕೊಳ್ಳಬೇಕೋ ಅದಕ್ಕೆ ನಾಚಿಕೊಳ್ಳುತ್ತಾರೆ.

ಸಮೂಹ ಆತ್ಮರತಿ ಅಥವಾ (Collective narcissism or group narcissism)
ಅಂತ ಒಂದಿದೆ. ಅದರದೇನಪ್ಪಾ ಲಕ್ಷಣ ಅಂದರೆ, ವ್ಯಕ್ತಿಗತವಾದ ಆತ್ಮರತಿಯು ಸಮುದಾಯ ಗುರುತಿನಲ್ಲಿ ಅಥವಾ ಸಂಕಲಿತವಾಗಿರುವ ವಿಷಯದಲ್ಲಿ ವಿಲೀನಗೊಳಿಸಿಕೊಂಡಿರುವುದು. ಆ ಸಮುದಾಯವನ್ನು ಅಥವ ಸಮೂಹವನ್ನು ಅಥವಾ ಸಂಸ್ಥೆಯನ್ನು ಯಾರಾದರೂ ಏನಾದರೂ ನಕಾರಾತ್ಮಕವಾಗಿ ಅಂದರೆ ವೈಯಕ್ತಿಕವಾಗಿ ತನಗೇ ಏನಾದರೂ ಆದಂತೆ ಭಾಸವಾಗುವುದು.

ಅದೇ ರೀತಿಯಲ್ಲಿ ತಾನು ಆ ಸಮೂಹದವನು ಎಂದು ಹೆಮ್ಮೆ ಪಡುವುದು. ಅದೇ ರೀತಿಯಲ್ಲಿ ಅದಕ್ಕೇನಾದರೂ ಪ್ರಶಂಸೆಯು ದೊರಕಿದರೆ ವಿಪರೀತವಾಗಿ ತಾನು ಹೆಮ್ಮೆ ಪಡುವುದು. ಇದು ಹಲವು ವೇಷಗಳನ್ನು ಹಾಕಿಕೊಂಡು ಬರುತ್ತದೆ. ಧರ್ಮ, ಸಂಸ್ಕೃತಿ, ಜಾತಿ, ಸಂಘ, ಸಂಸ್ಥೆ; ಹೀಗೆ. ಧಾರ್ಮಿಕತೆಯ ಸಂಘರ್ಷವೇ ಬಹಳ ಪ್ರಧಾನ ಕಿರುಕುಳವಾಗಿರುವ ಈ ಸಮಯದಲ್ಲಿ ಧಾರ್ಮಿಕ ಸಮುದಾಯಗಳ ವಿಚಾರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.

ನಾನು ಇಂತಹ ಧರ್ಮದಲ್ಲಿ ಗುರುತಿಸಿಕೊಂಡೆನೆಂದರೆ, ಆ ಧರ್ಮವು ಅತ್ಯಂತ ಶ್ರೇಷ್ಟವೆಂದೂ, ಅದರಲ್ಲಿ ಯಾವುದೇ ಬಗೆಯ ನ್ಯೂನ್ಯತೆಗಳಿರುವುದಿಲ್ಲವೆಂದೂ, ಅದರ ವಿಚಾರಗಳೇ ಅಂತಿಮವೆಂದೂ, ಅದನ್ನು ವಿರೋಧಿಸುವವರು ಅಥವಾ ವಿಮರ್ಶಿಸುವವರು ನಮ್ಮ ಶತ್ರುಗಳೆಂದು ಭಾವಿಸುವುದು ಸಮೂಹರತಿಯ ಅರಿಮೆಯ ವ್ಯಾಪ್ತಿಗೆ ಒಳಗಾಗುತ್ತದೆ.

ಎಷ್ಟೋ ಬಾರಿ ಆ ಧರ್ಮವು ತಾನು ಹುಟ್ಟಿದ ಸಂದರ್ಭದ ಸಾಮಾಜಿಕ ವ್ಯವಸ್ಥೆಗೆ ಮತ್ತು ಆಗಿನ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ತನ್ನ ರೂಪುರೇಷೆಗಳನ್ನು ತೀರ್ಮಾನಿಸಿಕೊಂಡಿರುತ್ತದೆ. ಹಿಂದೂ ಧರ್ಮದ ಹೊರತಾಗಿ ವಿಶ್ವದ ಇತರ ಸ್ಥಾಪಿತ ಧರ್ಮಗಳೆಲ್ಲವೂ ಕೂಡಾ ಸಮಾಜೋಧಾರ್ಮಿಕದ ಆಂದೋಲನದ ಪ್ರತಿಫಲಗಳೇ ಆಗಿವೆ. ಹಾಗಾಗಿ ಅವುಗಳನ್ನು ಈ ಕಾಲ ಘಟ್ಟದಲ್ಲಿ ನಿಲುಕಿಸಿಕೊಳ್ಳುವಾಗ ಕೆಲವು ಅಭಿಪ್ರಾಯ ಬೇಧಗಳು ಮತ್ತು ತಾಂತ್ರಿಕ ವ್ಯತ್ಯಾಸಗಳು ಬಹಳ ಸಹಜವಾಗಿರುತ್ತವೆ.

ಇನ್ನು ಹಿಂದೂ ಧರ್ಮವು ವಿಶಾಲ ಭೌಗೋಳಿಕ ಪರಿಸರದಲ್ಲಿ ವಿಕಾಸವಾದ ಜೀವನ ಪದ್ಧತಿಯೇ ಹೊರತು ಯಾವುದೊಂದು ಉದ್ದೇಶದ ಹಿನ್ನೆಲೆಯಲ್ಲಿ ಸ್ಥಾಪಿತವಾದದ್ದೇ ಅಲ್ಲ. ಇಲ್ಲೇ ಸಮಸ್ಯೆ ಇರುವುದು. ವ್ಯಕ್ತಿಗತವಾಗಿ ಸಂಮೋಹಿತಗೊಂಡು ವ್ಯಕ್ತಿಗಳು ಆಯಾ ಧಾರ್ಮಿಕತೆಯಲ್ಲಿ ಮೈಮರೆಯುವುದರಿಂದ ಧರ್ಮವು ದಾರಿಯಾಗದೇ ಗುರಿಯಾಗಿ ಪರಿಣಮಿಸಿ ಒಂದು ಅರಿಮೆಯಾಗಿ ಪರಿಣಮಿಸುತ್ತದೆ.

ತನ್ನ ಧರ್ಮವೇ ಅಂತಿಮವೆಂದೂ, ಶ್ರೇಷ್ಟವೆಂದೂ ಎತ್ತಿ ಹಿಡಿಯಲು ಎಲ್ಲಾ ಧರ್ಮಿಯರೂ ಹೋರಾಡುವಾಗ ಸಂಘರ್ಷಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೇ ನಿನ್ನ ಧರ್ಮವು ನನ್ನ ಧರ್ಮಕ್ಕಿಂತ ಕನಿಷ್ಟ ಎಂದು ನಿರೂಪಿಸಲು ತನ್ನ ವಿರೋಧಿ ಧರ್ಮವೆಂದು ಯಾವುದನ್ನು ಭಾವಿಸಿರುತ್ತಾರೋ ಅದರ ಹುಳುಕುಗಳನ್ನು ಎತ್ತಿ ಹಿಡಿಯುವುದು, ಆಯಾ ಧಾರ್ಮಿಕ ವ್ಯಕ್ತಿಗಳ ತೇಜೋವಧೆ ಮಾಡಲು ಯತ್ನಿಸುವುದು, ಆ ಮೂಲಕ ವಿರೋಧಿಗಳನ್ನು ಕೆರಳಿಸುವುದು ಇತ್ಯಾದಿಗಳಾಗುತ್ತವೆ. ಇದರಿಂದ ಸಾಂಪ್ರದಾಯಿಕ ವಿರೋಧಿಗಳು ರೂಪುಗೊಳ್ಳುತ್ತವೆ.

ಆಗ ರಾಜಕೀಯ, ಸಾಮಾಜಿಕ ಸ್ಥಾನಮಾನವೇ ಮೊದಲಾಗಿ ಸಾಂಸ್ಕೃತಿಕ ಅಸಹನೆಗಳೂ ಉಂಟಾಗಿ ಸಾಮಾಜಿಕ ಸಂಘರ್ಷಗಳು ಉಂಟಾಗಿ ಜೀವಗಳು ಮೌಲ್ಯರಹಿತವಾಗುತ್ತವೆ.ಆಗ ನಡೆದ ಕ್ರೈಸ್ತರ ಮತ್ತು ಮುಸಲ್ಮಾರದ ಕ್ರುಸೇಡ್ ಯುದ್ಧಗಳು, ಇಸ್ರೇಲ್ ಮತ್ತು ಪ್ಯಾಲೆಸ್ತಿನನಲ್ಲಿ ಮುಸಲ್ಮಾನರ ಮತ್ತು ಯಹೂದಿಗಳ ಸಂಘರ್ಷ, ಪ್ರಾಚೀನ ಭಾರತದಲ್ಲಿ ವೈದಿಕರ ಮತ್ತು ಬೌದ್ಧಾನುಯಾಯಿಗಳ ಸಂಘರ್ಷ, ಪ್ರಸ್ತುತ ಭಾರತದಲ್ಲಿ ಹಿಂದೂ ಮುಸ್ಲೀಮರ ಸಂಘರ್ಷಗಳು, ಆರ್ಯ ರಕ್ತೋನ್ಮಾದದಲ್ಲಿ ಯಹೂದಿಗಳ ಮೇಲೆ ನಾಜಿಗಳ ದ್ವೇಷ, ರೊಹಿಂಗ್ಯಾದಲ್ಲಿ ಮುಸಲ್ಮಾನರ ಮೇಲೆ ಬೌದ್ಧರ ಆಕ್ರಮಣ, ತಮಿಳುನಾಡಿನಲ್ಲಿ ಶೈವ ಮತ್ತು ವೈಷ್ಣವ ಸಂಘರ್ಷ, ಪ್ರಾಚೀನ ಕರ್ನಾಟಕದಲ್ಲಿ ಜೈನ ಮತ್ತು ಶೈವರ ಸಂಘರ್ಷ; ಹೀಗೆ ಒಂದೆರಡು ಉದಾಹರಣೆಗಳಲ್ಲ.

ತಮ್ಮ ಶ್ರೇಷ್ಟತೆಯು ತಮ್ಮ ವಿರೋಧಿಗಳ ದ್ವೇಷದ ಆಧಾರದ ಮೇಲೆಯೇ ಅವಲಂಬಿತವಾಗಿರುವುದು ಸಮೂಹ ರತಿಯ ಪರಮಾವಧಿ. ಪರಸ್ಪರ ವ್ಯಕ್ತಿಗತ ಪರಿಚಯವೇ ಇಲ್ಲದವರು, ಪರಸ್ಪರ ಯಾವುದೇ ದ್ವೇಷ ಮತ್ತು ಸಂಘರ್ಷಗಳು ಇರದಿದ್ದರೂ ಸಮುದಾಯ, ಮತ, ಧರ್ಮ, ಸಂಸ್ಕೃತಿ, ಬುಡಕಟ್ಟು ಮತ್ತು ಜನಾಂಗಗಳು ಎಂಬ ಕಾರಣಕ್ಕಾಗಿ ವಿರೋಧಿಸುವುದು ಮತ್ತು ದಾಳಿಗಳನ್ನು ಮಾಡುವುದು ಸಮುದಾಯದಲ್ಲಿ ಉಲ್ಬಣಗೊಂಡಿರುವ ಮನೋರೋಗದ ಲಕ್ಷಣ. ನೆಮ್ಮದಿಯ ಜೀವನಕ್ಕೆ, ಬದುಕಿನ ವ್ಯವಹಾರಕ್ಕೆ ಬೇಡದೇ ಇರುವುದೆಲ್ಲವೂ ದ್ವೇಷಿಸುವುದಕ್ಕೆ ಕಾರಣವಾಗಿ ಪರಿಣಮಿಸುತ್ತದೆ.

ವ್ಯಕ್ತಿಗತವಾದಂತಹ ದೌರ್ಬಲ್ಯವನ್ನು, ಅಪರಾಧಗಳನ್ನು ಸಮುದಾಯದ ತಲೆಗೆ ಕಟ್ಟಿ ದ್ವೇಷಿಸುವಂತಹ ಮನಸ್ಥಿತಿ ಬೆಳೆದಿರುತ್ತದೆ. ಯಾರಾದರೊಬ್ಬ ಮುಸಲ್ಮಾನ ಕ್ಯಾಬ್ ಡ್ರೈವರ್ ನಿಮ್ಮೊಡನೆ ಸರಿಯಾಗಿ ಚಿಲ್ಲರೆ ಕೊಡದೇ ಹೊರಟುಹೋದಾಗ ಮುಸಲ್ಮಾನರೇ ಹೀಗೆ ಮೋಸಗಾರರು ಎಂಬ ಮಾತು ಮೊದಲು ಹೊರಟರೆ, ಅಥವಾ ಬ್ರಾಹ್ಮಣ ಪತ್ರಕರ್ತನೊಬ್ಬ ತನ್ನ ಶ್ರೇಷ್ಟತೆಯ ವ್ಯಸನವನ್ನು ಪತ್ರಿಕೆಯಲ್ಲಿಯೋ ಅಥವಾ ಮಾಧ್ಯಮಗಳಲ್ಲಿಯೋ ಕಾರಿಕೊಂಡಾಗ ಬ್ರಾಹ್ಮಣರೆಲ್ಲರೂ ಹೀಗೇ ಎಂದು ಅಭಿಪ್ರಾಯಕ್ಕೆ ಬಂದರೆ ಅಲ್ಲಿಗೆ ಸಮೂಹ ಆತ್ಮರತಿಯ ಅರಿಮೆಯಲ್ಲಿ ಸಿಕ್ಕಿದ್ದೇವೆಂದು ಅರ್ಥ.

ವ್ಯಕ್ತಿಗಳೇ ಇಂತಹ
ಮನೋರೋಗಗಳಲ್ಲಿರುವವರು. ಅವರು ಯಾವ ಜಾತಿಯಲ್ಲಿದ್ದರೂ, ಧರ್ಮದಲ್ಲಿದ್ದರೂ ಅವುಗಳ ಲಾಂಛನದಡಿಯಲ್ಲಿ ತಮ್ಮ ಅರಿಮೆಗಳ ಪ್ರದರ್ಶನ ಮಾಡುತ್ತಿರುತ್ತಾರೆ. ಅವನು ಮುಸಲ್ಮಾನನಾಗಿದ್ದರೆ ಇಸ್ಲಾಂ ಶ್ರೇಷ್ಟತೆಯ ಗೀಳು, ಹಿಂದೂ ಆಗಿದ್ದರೆ ಹಿಂದೂ ಶ್ರೇಷ್ಟತೆಯ ಗೀಳು ಅಷ್ಟೇ. ಈ ಗೀಳಿನ ಅಥವಾ ವ್ಯಸನದ, ಅರಿಮೆಯ ಸಮಸ್ಯೆ ಧರ್ಮಗಳದ್ದೋ, ಸಂಸ್ಕೃತಿಗಳದ್ದೋ ಅಲ್ಲ. ವ್ಯಕ್ತಿಗಳದ್ದು. ಅವನಿಗಿರುವ ಸಮಸ್ಯೆ Collective narcissism or group narcissism. ಆದರೆ ಎಡವಟ್ಟಾಗುವುದು ಎಲ್ಲಿ ಗೊತ್ತೇ? ಸಮಾನ ಮನಸ್ಕರು ಸಮೂಹಗಳನ್ನು ಮಾಡಿಕೊಂಡು ಅವರ ಅಭಿರುಚಿ, ಆಸಕ್ತಿ ಇತ್ಯಾದಿಗಳನ್ನು ಗಟ್ಟಿಗೊಳಿಸಿಕೊಳ್ಳುವಂತೆ, ಈ ಸಮೂಹ ರತಿಯ ಅರಿಮೆಯ ಮನಸ್ಥಿತಿಯವರೂ ಕೂಡಾ ಆಯಾ ಜಾತಿ, ಧರ್ಮ ಇತ್ಯಾದಿಗಳ ಲಾಂಛನಗಳಲ್ಲಿ ಶ್ರೇಷ್ಟತೆಯ ವ್ಯಸನವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುತ್ತಾರೆ.

ಅದರ ಜಾಲದಲ್ಲಿ ಸಿಕ್ಕವರೆಲ್ಲರೂ ಮತ್ತೆ ಮತ್ತೆ ತಮ್ಮ ಧರ್ಮಾಂಧತೆಗೆ ಅಥವಾ ಜಾತಿವಾದಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾ ಹೋಗುತ್ತಾರೆ. ಭಾರತದಲ್ಲಿ ಜಾತಿಯ ವಿಷಯದಲ್ಲಿಯೂ ಈ ಸಾಮುದಾಯಿಕ ಮಾನಸಿಕ ಸಮಸ್ಯೆ ಬಹಳ ಗಾಢವಾಗಿದೆ. ಯಾವುದೇ ವ್ಯಕ್ತಿಯು ತನ್ನ ಜಾತಿಯ ಹೆಸರನ್ನು ತನ್ನ ಹೆಸರಿನ ಜೊತೆಗೆ ಹೆಮ್ಮೆಯಿಂದ ತಗುಲಿಹಾಕಿಕೊಳ್ಳುವನೋ, ಅಥವಾ ಅಪ್ರಾಯೋಗಿಕವಾಗಿದ್ದರೂ, ಅವೈಚಾರಿಕವಾಗಿದ್ದರೂ, ಅವೈಜ್ಞಾನಿಕವಾಗಿದ್ದರೂ, ಅಪ್ರಸ್ತುತವಾಗಿದ್ದರೂ ಜಾತಿಯ ಆಚರಣೆಗಳನ್ನು ಜೀವಂತವಾಗಿ ಇಡಲೇಬೇಕು ಎಂದು ಪ್ರಯತ್ನಿಸುತ್ತಾ, ಸಾಮಾಜಿಕ ಮತ್ತು ವೈಯಕ್ತಿಕವಾದ ಮಾನಸ ಸಂಬಂಧಗಳನ್ನು ಕಡೆಗಣಿಸುತ್ತಾನೆಂದರೆ ಅವನಿಗೆ ಈ ಮನೋರೋಗವಿದೆ ಎಂದೇ ಅರ್ಥ.

ಇದೇ ರೀತಿಯಲ್ಲಿ ಸಂಸ್ಕೃತಿಯಲ್ಲಿ ಉನ್ಮತ್ತತೆಯಿಂದ ಗುರುತಿಸಿಕೊಳ್ಳುವಂತಹ ಅರಿಮೆಯೂ ಕೂಡಾ ಇದರ ಒಂದು ಭಾಗವಾಗಿದೆ. ಗಮನಿಸಿ, ಇಂತವರೆಲ್ಲಾ ಒಟ್ಟೊಟ್ಟಿಗೆ ಗುಂಪುಗೂಡಿಕೊಂಡು ನಮ್ಮದೇ ಶ್ರೇಷ್ಟ, ಮತ್ತೊಬ್ಬರದು ಕನಿಷ್ಟ, ನಾವು ಏನಾದರೂ ನಮ್ಮದನ್ನು ಬಿಡಬಾರದು. ಹೀಗೆಲ್ಲಾ ಮಾತಾಡಿಕೊಂಡು ಸಂತೋಷಪಡುವುದು ಸಾಮೂಹಿಕ ರತಿಕ್ರೀಡೆಯಂತೆ.

ಜಗತ್ತಿನಲ್ಲಿಯೇ ನಮ್ಮಷ್ಟು ಶ್ರೇಷ್ಟ ಸಂಸ್ಕೃತಿ ಯಾವುದೂ ಇಲ್ಲ, ನಮ್ಮದೇ ಅತ್ಯಂತ ಪುರಾತನ, ನಮ್ಮದೇ ಈಗಲೂ ಪ್ರಸ್ತುತ, ಇತರ ಎಲ್ಲಾ ಸಂಸ್ಕೃತಿಗಳ ನಮ್ಮದಕ್ಕಿಂತ ಕೀಳು; ಈ ಬಗೆಯ ವ್ಯಸನವು ಅಥವಾ ಶ್ರೇಷ್ಟತೆಯ ಗೀಳು ಕೂಡಾ ಈ ಕಾಂಪ್ಲೆಂಕ್ಸ್‍ನ ಒಂದು ಭಾಗವಾಗಿದೆ.

ಒಳಕುದಿ

ಹಾಗಾದರೆ ನಮ್ಮದರ ಬಗ್ಗೆ ನಮಗೆ ಹೆಮ್ಮೆ, ಅಭಿಮಾನ ಬೇಡವೇ? ಬೇಕು. ಅದು ಆರೋಗ್ಯಕರವಾಗಿರುವುದು ಯಾವಾಗೆಂದರೆ, ನಮ್ಮಂತದ್ದೇ ಹಲವು ಸಂಸ್ಕೃತಿಗಳು, ಧರ್ಮಗಳು ಜಗತ್ತಿನಲ್ಲಿ ಅಸ್ತಿತ್ವದಲ್ಲಿವೆ. ಅವುಗಳಿಗೆ ಅವುಗಳದೇ ಆದಂತಹ ಮೌಲ್ಯವಿದೆ. ನಾವು ಅನುಸರಿಸುತ್ತಿರುವಂತೆ ಅವುಗಳನ್ನು ಕೂಡಾ ನಮ್ಮಂತಹ ಜೀವಿಗಳೇ ಅನುಸರಿಸುತ್ತಿದ್ದಾರೆ. ನಮ್ಮದು ಮತ್ತು ಅವರದರಲ್ಲಿ ಕೂಡುವಿಕೆಯ ಅಂಶಗಳಾವುವು? ಭಿನ್ನವಿರುವ ಅಂಶಗಳಾವುವು; ಇತ್ಯಾದಿಗಳೆಲ್ಲಾ ನಮ್ಮ ಅಧ್ಯಯನದ ಅಥವಾ ಅರಿವಿನ ವಿಷಯಗಳಾಗಿ ಒದಗಿದರೆ ಆರೋಗ್ಯಕರವಾದ ಸಾಂಸ್ಕೃತಿಕ ಅಥವಾ ಧಾರ್ಮಿಕವಾದ ವಾತಾವರಣವು ಸಮಾಜದಲ್ಲಿ ಉಂಟಾಗುತ್ತದೆ.

ನಮ್ಮ ಸಂಸ್ಕೃತಿ ಅಥವಾ ಧರ್ಮದ ಮಾನ್ಯತೆಯು ಅಥವಾ ಶ್ರೇಷ್ಟತೆಯು ಮತ್ತೊಂದು ಯಾವುದೋ ಒಂದರ ಜೊತೆಗಿನ ಪೈಪೋಟಿಯಂತಾಗಿರಬಾರದು. ಅಥವಾ ಅದನ್ನು ದ್ವೇಷಿಸುವ ಮಾನದಂಡದಲ್ಲಿ ನಮ್ಮದರ ಶ್ರೇಷ್ಟತನವು ತಲೆಯೆತ್ತುವಂತಹ ಮನಸ್ಥಿತಿಯು ಇರಕೂಡದು. ಅಷ್ಟೇ!
ಒಟ್ಟಾರೆ ವ್ಯಕ್ತಿವ್ಯಕ್ತಿಯ ಮನಸ್ಥಿತಿಗಳು ಆರೋಗ್ಯದಿಂದಿದ್ದರೆ ಸಮಾಜವು ಆರೋಗ್ಯವಾಗಿರುತ್ತದೆ. ಏಕೆಂದರೆ ವ್ಯಕ್ತಿವ್ಯಕ್ತಿಗಳಿಂದ ಕುಟುಂಬ, ಕುಟುಂಬಗಳಿಂದ ಸಮಾಜ.

ಇತರ ಧರ್ಮೀಯರನ್ನು, ಸಂಸ್ಕೃತಿ, ಆಚಾರ ವಿಚಾರಗಳನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುವಂತಹ ಮನಸ್ಥಿತಿಯೂ ಕೂಡಾ ಆರೋಗ್ಯಕರವೇನಲ್ಲ. ಏಕೆಂದರೆ ಇದು ಒಳ ಕುದಿಯಾಗಿರುತ್ತದೆ. ಈ ಒಳಕುದಿ ಸ್ವೀಕರಿಸಿರುವುದಿಲ್ಲ. ಸಹಿಸಿಕೊಂಡಿರುತ್ತದೆ ಅಷ್ಟೇ. ಯಾವಾಗ ಅವರ ಸಹನಾ ಶಕ್ತಿ ಬಲ ಕಳೆದುಕೊಳ್ಳುತ್ತದೆಯೋ ಆಗ ಸ್ಫೋಟಗೊಳ್ಳುತ್ತದೆ. ಸಮಾಜದ ಧರ್ಮಗಳಲ್ಲಿ, ಸಂಸ್ಕೃತಿಗಳಲ್ಲಿ ಮಾತ್ರವಲ್ಲ ಸಹಿಸಿಕೊಂಡಿರುವ ಈ ಒಳಕುದಿಯ ಸಂಘರ್ಷ. ಮನೆಗಳಲ್ಲಿಯೂ ಕೂಡಾ. ಗಂಡ ಹೆಂಡತಿಯನ್ನು ಅಥವಾ ಹೆಂಡತಿ ಗಂಡನನ್ನು, ಮಕ್ಕಳು ಪೋಷಕರನ್ನು, ಪೋಷಕರು ಮಕ್ಕಳನ್ನು ಮತ್ತು ಇತರ ಸದಸ್ಯರನ್ನು ಅವರವರ ಸ್ವಭಾವ, ಅಭಿರುಚಿ, ವ್ಯಕ್ತಿತ್ವದಂತೆ ಸ್ವೀಕರಿಸಿರುವುದಿಲ್ಲ. ಹೇಗೋ ಸಹಿಸಿಕೊಂಡಿರುತ್ತಾರೆ.

ಸಹಿಸಿಕೊಳ್ಳುವುದಕ್ಕೂ ಸ್ವೀಕರಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಸಹಿಸಿಕೊಳ್ಳುವುದು ಎಂದರೆ ಅಸಹನೆ ಇದೆ, ಒಪ್ಪಿಗೆ ಇಲ್ಲ, ಆದರೆ ವಾತಾವರಣವು ಕೆಡಬಾರದು ಎಂದೋ ಅಥವಾ ಇನ್ನಾವುದಾದರೂ ಕಾರಣಕ್ಕೆ ಸಂಘರ್ಷಗಳಾಗಬಾರದು ಎಂದೋ ‘ಅಡ್ಜೆಸ್ಟ್’ ಮಾಡಿಕೊಳ್ಳುವುದು. ಹೊಂದಾಣಿಕೆ ಮಾಡಿಕೊಳ್ಳುವುದು. ಅಡ್ಜೆಸ್ಟ್ ಮಾಡಿಕೊಳ್ಳುವವರು ತಮ್ಮ ಬಲ ಮೇಲಾದಾಗ ರಿಜೆಕ್ಟ್ ಮಾಡುವುದರಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ. ಅಡ್ಜೆಸ್ಟ್‍ಮೆಂಟ್ ಎಂದರೆ ಒತ್ತಡದಲ್ಲಿರುವ ಬಂಧನವೇ.

ಆದರೆ ಅಕ್ಸೆಪ್ಟ್ ಮಾಡಿರುವವರು ಅವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಿಲ್ಲ. ತಮ್ಮ ಆತ್ಮರತಿಯ ಅರಿಮೆಗೆ ಅನುಗುಣವಾಗಿ ಅವರು ವರ್ತಿಸಬೇಕೆಂದು ಕಾಯುವುದಿಲ್ಲ. ಅವರು ಇರುವುದೇ ಹಾಗೆ. ನಾನು ಇರುವುದೇ ಹೀಗೆ. ಪರಸ್ಪರ ನಿರೀಕ್ಷೆಗಳಿಲ್ಲದೇ ಅನುಬಂಧದಲ್ಲಿರುವುದು. ಕೂಡುವಂತಹ ಚುಕ್ಕಿಗಳಿಗೆ ಗೆರೆಗಳನ್ನು ಎಳೆದು ರಂಗೋಲಿ ಬಿಡಿಸುವುದು. ಆತ್ಮರತಿಯ ಅರಿಮೆಯೆಂದ ಬಿಡುಗಡೆ ಎಂದರೆ ಮಿಲನ. ಆತ್ಮರತಿಯ ಅರಿಮೆಯಲ್ಲಿರುವುದು ಎಂದರೆ ಕಾರಾಗೃಹಗಳೊಂದಿಗೆ ನಡೆದಾಡುತ್ತಿರುವುದು. ಯಾರೂ ಯಾರನ್ನೂ ಸಂಧಿಸರು, ಬೆರೆಯರು.
ಅದಕ್ಕೆ ಬಸವಣ್ಣನವರ ಸರಳ ಸೂತ್ರ “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ.” ಅರಿಮೆಯಿಂದ ಹೊರಗೆ ಬರುವುದು ವ್ಯಕ್ತಿಯು ತನ್ನ ಮನೋರೋಗದಿಂದ ಮುಕ್ತನಾಗುವುದು ಅಂತರಂಗ ಶುದ್ಧಿ. ವ್ಯಕ್ತಿಗತವಾಗಿ ಮಾನಸಿಕವಾಗಿ ಆರೋಗ್ಯವಾಗಿರುವವರಿಂದ ಆರೋಗ್ಯಕರ ಸಮಾಜವೇ ನಿರ್ಮಾಣವಾಗುತ್ತದೆ. ಇದು ಬಹಿರಂಗ ಶುದ್ಧಿ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending