Connect with us

ಅಂತರಂಗ

ಅರಿಮೆಯ ಅರಿವಿರಲಿ-10 : ನಾನು ಎಂದರೆ ಯಾರು..?

Published

on

  • ಯೋಗೇಶ್ ಮಾಸ್ಟರ್

ನಮಸ್ಕಾರ” ಎಂದಿರಿ ಅವರಿಗೆ. ಅವರೂ “ನಮಸ್ಕಾರ” ಎಂದರು. ನಿಮ್ಮಿಬ್ಬರ ಭೇಟಿಯಾಗಿ ಹತ್ತು ನಿಮಿಷಗಳಾಗಿವೆ. ಹನ್ನೊಂದನೆಯ ನಿಮಿಷಕ್ಕೆ ಇನ್ಯಾರೋ ಮೂರನೆಯವರು ಅವರಿಗೆ ತಿಳಿದಿರುವವರೋ ಅಥವಾ ಸಾಂದರ್ಭಿಕವಾಗಿ ಬಂದರು. ಅವರು ನಿಮ್ಮನ್ನು ವರ್ಣಿಸಲು ಪ್ರಾರಂಭಿಸುತ್ತಾರೆ. ನಿಮ್ಮದೆಂತಹ ಉದಾತ್ತ ವ್ಯಕ್ತಿತ್ವ, ನೀವು ಎಷ್ಟು ಪ್ರತಿಭಾವಂತರು, ನೀವು ಅವರಿಗೆ ಈಗ ಸಿಕ್ಕಿದ್ದು ಎಷ್ಟು ಅದೃಷ್ಟ; ಇತ್ಯಾದಿ.

ನಿಮ್ಮ ಅಗಣಿತ ಗುಣನಾಮ ಬಹುಪರಾಕುಗಳನ್ನೆಲ್ಲಾ ಕೇಳಿ ನೀವೇನಾದರೂ ಎಣ್ಣೆಗೆ ಬಿದ್ದ ಪೂರಿಯಂತೆ ಉಬ್ಬಿದಿರೋ ನೀವೊಬ್ಬ ನಾರ್ಸಿಸಸ್. ನಿಮ್ಮನ್ನು ಪುಂಖಾನುಪುಂಖವಾಗಿ ಹೊಗಳುತ್ತಿರುವವರು ಕೂಡಾ ಒಬ್ಬ ನಾರ್ಸಿಸಸ್. ಬರಿಯ ಹತ್ತು ನಿಮಿಷದ ಪರಿಚಯದಲ್ಲಿ ನಿಮ್ಮ ಜೀವಮಾನದ ಸಾಧನೆಯನ್ನು ಜಗತ್ತಿಗೆ ಸಾರಲು ಪಣತೊಟ್ಟು ನಿಂತಿರುವ ಮತ್ತು ನಿಮಗೆ ಬೇಕು ಬೇಕಾದ ಎಲ್ಲಾ ಪ್ರಶಸ್ತಿಗಳನ್ನು ಅವರ ಪೆಟ್ಟಿಗೆಯಿಂದ ತೆಗೆತೆಗೆದು ಕೊಡುತ್ತಿದ್ದಾರೆಂದರೆ ಅವರೂ ಕೂಡಾ ಒಬ್ಬ ನಾರ್ಸಿಸಸ್.

ನೀವೂ ಕೂಡಾ ಇಂತೆಯೇ ಅವರನ್ನು ಪ್ರಶಂಸಿಸಬೇಕೆಂದು ಅವರು ನಿಮಗೆ ಲಂಚ ನೀಡುತ್ತಿರುವುದು. ನೀವು ಅವರು ಬಡಿಸಿದ ರಸದೌತಣ ಸವಿದು, ಗಪ್ಪನೆ ಸುಮ್ಮನಾಗಿಬಿಟ್ಟರೆ. ಅವರು ನಿಮ್ಮನ್ನು ಮತ್ತೆಂದೂ ಹೊಗಳಲಾರರು. ನೀವೂ ಹೊಗಳಿದರೋ ಅಲ್ಲಿಗೆ ಕೊಟ್ಟು ಪಡೆಯುವ ವ್ಯವಹಾರ ಸುಸೂತ್ರವಾಗಿ ನಡೆಯುತ್ತಲೇ ಇರುತ್ತದೆ. ಇದು ಕೆಲವು ಸಲ ವೇದಿಕೆಯ ಮೇಲೂ ನಡೆಯುತ್ತದೆ.

ನಮ್ಮ ಸಾಧನೆಯ ಪಟ್ಟಿ ಒಂದು ನಮ್ಮ ಕೈಯ ಒಂದು ಮೊಳದಷ್ಟಿರುತ್ತದೆ. ಆದರೆ ನಮ್ಮನ್ನು ಕರೆಸಿದವರು ಅದನ್ನು ದುಬೈನ ಬುರ್ಜಾ ಖಲೀಫ್ ಕಟ್ಟಡದಷ್ಟು ಎಳೆದಿರುತ್ತಾರೆ. ಅಲ್ಲಿ ನಮ್ಮನ್ನು ಕರೆಯಿಸಿದವರಿಗೆ ನಾರ್ಸಿಸಸ್ ಹಸಿವೆಗೆ ಎರಡು ಬಗೆಯ ಊಟ ಬೇಕು. ಒಂದು ನಾವು ಕರೆಯಿಸಿರುವ ವ್ಯಕ್ತಿ ಸಾಧಾರಣ ಅಲ್ಲ. ಅಸಮಾನ್ಯ. ಅವರು ಅಷ್ಟು ಅಗ್ರಗಣ್ಯ ಎಂಬ ಚಿತ್ರಣವನ್ನು ಸಭಿಕರಿಗೆ ನೀಡುವುದು ಒಂದಾದರೆ, ಅಷ್ಟು ಹೊಗಳಿಸಿ ಹೂಮಳೆಗರೆಸಿಕೊಂಡವರು ಅದಕ್ಕೆ ಧನ್ಯತಾಭಾವದಿಂದ ಮರುಹೊಗಳಿಕೆ ಕೊಡಬಾರದೇ? ಇಂತಹ ಕಾರ್ಯಕ್ರಮ ಮಾಡುತ್ತಿರುವ ಇವರು ಅದೆಷ್ಟು ಮಹೋನ್ನತ ವ್ಯಕ್ತಿ ಎಂದು ಬಿನ್ನವತ್ತಳೆ ನೀಡದೇ ಹಾಗೇ ಹೋಗುವುದು ನ್ಯಾಯವೇ? ಧರ್ಮವೇ? ಸರಿ, ಪೈಪೋಟಿಗಳ ಮೇಲೆ ಹೊಗಳಬೇಕಾಗುತ್ತದೆ.ಹೊಗಳಿಕೆಗಳ ಹೊನ್ನಶೂಲದಿಂದ ಪರಸ್ಪರ ಇರಿದಿರಿದುಕೊಳ್ಳುತ್ತಿರುವುದು ಆತ್ಮರತಿಯರಿಮೆಯ ಮತ್ತೊಂದು ಫಳಫಳಿಸುವ ಲಕ್ಷಣ.

ಹೊಗಳಿಕೆಗಳ ಸುರಿಮಳೆ ಸುರಿದಾಗ ನಾರ್ಸಿಸಸ್ ಅಲ್ಲದವರಾದರೆ ಸಂಕೋಚದಿಂದ ಹಿಡಿಮುದ್ದೆಯಾಗುತ್ತಾರೆ. ಸ್ಪಂದಿಸುವುದೂ ಕಷ್ಟವಾಗುತ್ತದೆ. ಅಂತವರು ಸುಮ್ಮನಿದ್ದರೆ ಒಪ್ಪಿಕೊಂಡಂತಹ ಕಷ್ಟ, ಅದನ್ನು ಅಲ್ಲಗಳೆದರೆ ಸಭಿಕರ ಮುಂದೆ ಆಯೋಜಕರನ್ನು ಮುಜುಗರಕ್ಕೆ ತಳ್ಳಿದಂತಾಗುವುದು. ಅದಕ್ಕೆ ಅಡ್ಡಗೋಡೆ ಮೇಲೆ ದೀಪವಿಟ್ಟುಬಿಡುತ್ತಾರೆ. “ಇವರು ನನ್ನ ಮೇಲಿನ ಅಭಿಮಾನದಿಂದ ಇಷ್ಟು ಹೇಳುತ್ತಿದ್ದಾರೆ. (ನಾನು ಅಷ್ಟು ಇಲ್ಲ) ಎಂದು ಬ್ರಾಕೆಟಲ್ಲಿ ಓದುವವರಿಗೆ ಅರ್ಥವಾಗುವಷ್ಟು ಒಂದಿಷ್ಟು ನಗೆ ನಕ್ಕು ವಿಷಯವನ್ನು ತೇಲಿಸಿಬಿಡುತ್ತಾರೆ.

ಕೆಲವು ಸಮಾರಂಭಗಳು ಆತ್ಮರತಿಯ ಅಮೋಘ ಮೆರವಣಿಗೆಯೇ ಆಗಿರುತ್ತದೆ. ನಾರ್ಸಿಸಮ್ ಬಗ್ಗೆ ತಿಳಿದಿವರಿಗೆ ಅದು ಬಲ್ಲವನೇ ಬಲ್ಲ ಬೆಲ್ಲದ ರುಚಿಯ ಗಾದೆಯಂತೆ. ಕೆಲವರೆಲ್ಲಾ ಆ ಎಲ್ಲಾ ಹೊಗಳಿಗೆಗಳನ್ನು ಸ್ವೀಕರಿಸುತ್ತಾರೆ. ಹೌದು, ನಾನಿದಕ್ಕೆ ಅರ್ಹ ಎಂದು ಭಾವಿಸಿರುತ್ತಾರೆ. ಇನ್ನೂ ಸರಿಯಾಗಿ ಮತ್ತು ಪೂರ್ತಿಯಾಗಿ ಅವರು ಹೇಳಿಲ್ಲ ಎಂದೂ ಸ್ವಲ್ಪ ನಿರಾಶೆಯಾಗುತ್ತದೆ. ಇವರು ನಾರ್ಸಿಸಮ್ ಪಂಥದವರು.
ನೀವು ಅವರಿಗೆ ನಿರಾಶೆ ಮಾಡಿದಿರೋ, ಉಹುಂ, ಇನ್ನೊಂದು ಸಲ ಅವರು ನಿಮ್ಮನ್ನು ಅವರು ಲಕ್ಷಿಸುವುದಿಲ್ಲ. ನೀವು ಅವರನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ, ಅತಿಥಿಯಾಗಿ ಕರೆದು ಉಪೇಕ್ಷೆ ಮಾಡಿಬಿಡುತ್ತೀರಿ ಎಂದು ನಿಮ್ಮ ಕಡೆ ಹೊರಳುವುದಿಲ್ಲ.

ಹೊಗಳಿಕೆಯೇ ಆಹಾರ

ಆತ್ಮರತಿಯ ಸುಖಿಗಳು ತಮ್ಮನ್ನು ಭೇಟಿ ಮಾಡಿದವರಿಗೆ ತಮ್ಮ ಜೀವನದ ಮಹತ್ವದ ಅನೇಕಾನೇಕ ಘಟನೆಗಳನ್ನು ಹೇಳುತ್ತಿರುತ್ತಾರೆ. ಅದು ಆ ಸಂದರ್ಭಕ್ಕೆ ಬೇಕಿರಲಿ, ಬೇಡದಿರಲಿ. ಹೇಳದೇ ಬಿಡುವುದಿಲ್ಲ. ನೀವು ಕತೆ ಕೇಳಿದಂತೆ ಕೇಳಿ ಸುಮ್ಮನಾಗಿಬಿಟ್ಟರೆ ಅವರಿಗೆ ಬಹಳ ನಿರಾಶೆಯಾಗುತ್ತದೆ. ಅವರು ಅಷ್ಟೂ ಹೊತ್ತು ಹೇಳಿದ್ದೇಕೆಂದರೆ, ಆ ಗುಣಗಳನ್ನೆಲ್ಲಾ ನೀವು ಗುರುತಿಸಿ, ಹೆಕ್ಕಿ, ಒಂದಿಷ್ಟು ಒಳ್ಳೆಯ ಮಾತುಗಳನ್ನಾಡಬೇಕು ಎಂದು. ಅವು ಕಷ್ಟದ ಮತ್ತು ಸಾಹಸದ ಕೆಲಸಗಳಾಗಿರಬಹುದು.

ಯಾರಿಗೋ ಉಪಕಾರ ಮಾಡಿದ್ದಾಗಿರಬಹುದು.ಯಾವುದೋ ಸನ್ನಿವೇಶದಲ್ಲಿ ಹೆಣಗಾಡಿದ್ದೋ, ಹೋರಾಡಿದ್ದೋ ಆಗಿರಬಹುದು.
ಅವರಿಗೆ ಪ್ರಿಯವಾಗುವ ಶಬ್ದಗಳೇನೆಂದರೆ,
“ಅಬ್ಬಾ, ನೀವು ಅದು ಹೇಗೆ ಆ ಸಾಹಸ ಮಾಡಿದಿರಿ? ನೀವಾಗಿದ್ದಕ್ಕೆ ಮಾಡಿದಿರಿ. ಬೇರೆಯವರಾಗಿದ್ದರೆ ಓಡಿ ಹೋಗಿಬಿಡುತ್ತಿದ್ದರು. ಸೋತು ಸುಣ್ಣವಾಗಿಬಿಡುತ್ತಿದ್ದರು.”

“ಈಗಿನ ಕಾಲದಲ್ಲಿ ಯಾರು ಆ ರೀತಿ ನೆರವಾಗುತ್ತಾರೆ. ಎಲ್ಲರೂ ಅವರವರದು ನೋಡಿಕೊಳ್ಳುತ್ತಾರೆ. ನೀವಾಗಿದ್ದಕ್ಕೆ ಅಷ್ಟು ಉಪಕಾರ ಮಾಡಿದ್ದೀರಿ. ನಿಜವಾಗಿಯೂ ನೀವು ಗ್ರೇಟ್.” “ಪ್ಚ್, (ಅವರನ್ನೇ ದಿಟ್ಟಿಸಿ ನೋಡುತ್ತಾ) ನಂಬಕ್ಕೇ ಆಗಲ್ಲ. ನೀವು ಹೇಗೆ ಇವೆಲ್ಲಾ ಮಾಡಿದಿರಿ? ನನಗೆ ನಿಮ್ಮ ಜೊತೆ ಹೀಗೆ ಇರೋದೇ ಹೆಮ್ಮೆ.”

ಆಗ ಅವರ ಮುಖ ನೋಡಿ. ಕಣ್ಣುಗಳಲ್ಲಿ ಹೊಳಪಿರುತ್ತದೆ. ಮುಖದ ಪೂರ್ತಿ ನಗು ತುಂಬಿರುತ್ತದೆ. ವೆಂಕಟೇಶ್ವರ ಮಹಾತ್ಮ್ಯೆ ಸಿನಿಮಾದಲ್ಲಿ ಪ್ರತ್ಯಕ್ಷವಾದ ದೇವರು ನಸುನಗುತ್ತಾ ಭಕ್ತನ ಸ್ತುತಿಗೀತೆಗಳನ್ನು ಕೇಳುತ್ತಾ ತಲೆಯಾಡಿಸುತ್ತಿರುವಂತೆ ಕಾಣುತ್ತದೆ.
ಆತ್ಮರತಿಯ ರತಿಮನ್ಮಥರ ಸಂಭಾಷಣೆಯಲ್ಲಿ ಸಾಮಾನ್ಯವಾಗಿ ಅವರು ಮಾಡಿರುವ ಸಾಧನೆ ಅಥವಾ ಪಟ್ಟಿರುವ ವೇದನೆಗಳಿಂದ ಗೆದ್ದಿರಿವುದ ನಿವೇದನೆ. ಇತರರಿಗಿಂತ ತಾವು ವಿಶೇಷವೆಂದು ತಮ್ಮ ಕೇಳುಗ ಕುರಿಗಳಿಗೆ ಅರ್ಥ ಮಾಡಿಸಬೇಕಾಗಿರುವುದೇ ಅವರ ಗುರಿ.

ಅವರ ಮಾತುಗಳನ್ನು ಮುಂದಿರುವವರು ಕೇಳುತ್ತಿದ್ದಾರೋ ಇಲ್ಲವೋ ಎಂದು ಯೋಚಿಸುವುದೇ ಇಲ್ಲ. ತಮ್ಮ ಮುಂದಿರುವವರು ತಾವು ಕೇಳುತ್ತಿರುವ ಸಂಕೇತವಾಗಿ ಪ್ರಶ್ನೆಗಳನ್ನು ಕೇಳದಿದ್ದರೂ, ಅನುಮಾನಗಳನ್ನು ಮುಂದಿಟ್ಟು ಬಗೆಹರಿಸಿಕೊಳ್ಳಲು ಯತ್ನಿಸದಿದ್ದರೂ ಇವರು ಹೇಳುತ್ತಲೇ ಇರುತ್ತಾರೆ. ಅವರ ಹಸಿವಿಗೆ ಕೇಳುಗರ ಸಕಾರಾತ್ಮಕ ಪ್ರತಿಕ್ರಿಯೆಯೇ ಆಹಾರ.

ಅಪಾರ ಆತ್ಮವಿಶ್ವಾಸದ ವ್ಯಕ್ತಿಯಂತೆ ಕಾಣುವ ಅವರು ಹಾಗೆಯೇ ವರ್ತಿಸುತ್ತಾರೆ. ಅವರ ಆತ್ಮರತಿಗೆ ಸರಸವಾಗಿ ಉಣಬಡಿಸದ ಅರಸಿಕರನ್ನು ಅವರು ಇಷ್ಟಪಡುವುದಿಲ್ಲ. ದೂರಲಿ, ದೂರದಿರಲಿ ಖಂಡಿತವಾಗಿ ದೂರೀಕರಿಸುತ್ತಾರೆ. ಅವರ ಸುತ್ತ ಹೊಗಳುಭಟರಿರಬೇಕು. ಅವರು ಹೇಳಿದ್ದಕ್ಕೆಲ್ಲಾ, “ಪ್ಚ, ಅಮೋಘ! ವಿಸ್ಮಯ! ಅದ್ಭುತ!” ಎಂದು ಬೆರಗಾಗುತ್ತಿರಬೇಕು.

ಏಳು ಮಹಾಪಾತಕಗಳು

ನಾರ್ಸಿಸಮ್‍ನ ಏಳು ಮಹಾಪಾತಕಗಳನ್ನು ಮನೋವಿಜ್ಞಾನಿಗಳು ಗುರುತಿಸುತ್ತಾರೆ.

ನಾಚಿಗೇಡಿತನ: ಸಾಮಾನ್ಯವಾಗಿ ಆತ್ಮರತಿಯ ವ್ಯಕ್ತಿಗಳು ಮುಕ್ತವಾಗಿ ಮತ್ತು ಅಭಿಮಾನದಿಂದ ನಾಚಿಗೇಡಿಯಾಗಿರುತ್ತಾರೆ. ನಾನೂಂದ್ರೆ ಏನು? ನಾನೂಂದ್ರೆ ಯಾರು? ನಾನು ಮನಸ್ಸು ಮಾಡಿದರೆ ಏನು ಮಾಡ್ತೇನೆ ಗೊತ್ತಾ?; ಈ ವಾಕ್ಯಗಳೆಲ್ಲಾ ಅವರವೇ. ಅವರು ತಾವು ಯಾವಾಗಲೂ ವಿಮರ್ಶಾತೀತವಾಗಿರಲು ಬಯಸುತ್ತಾರೆ. ತನ್ನಲ್ಲಿ ವಿಮರ್ಶೆ ಮಾಡಲೇನಿದೆ? ನನ್ನ ಟೀಕಿಸುವವನು ಅಥವಾ ವಿಮರ್ಶಿಸುವವನು ಖಂಡನೆ ಅರ್ಹನೆಂದು ಅವರ ಅಚಲ ನಂಬಿಕೆ. ತಾವು ಶ್ರೀಮಾನ್ ಅಥವಾ ಶ್ರೀಮತಿ ಪರ್ಫೆಕ್ಟ್. ಒಂದು ವೇಳೆ ಅವರ ಯಾವುದಾದರೂ ಕೆಲಸ ಖಂಡಿತವಾಗಿ ಖಂಡನೀಯ ಮತ್ತು ತಪ್ಪು ಎಂದು ನಿರೂಪಿಸಿಬಿಟ್ಟಿದ್ದೇ ಆದರೂ, ಅವರು ಹೇಳುವುದೇನೆಂದರೆ, “ಅಕಸ್ಮಾತ್, ಈ ಕೆಲಸ ತಪ್ಪಾಗಿರಬಹುದು.

ಆದರೆ ನನ್ನ ಉದ್ದೇಶವು ಉತ್ತಮವಾಗಿತ್ತು. ನಾನು ಒಳ್ಳೆಯ ಉದ್ದೇಶದಿಂದ ಮಾಡಿದ್ದು” ಎಂದು ಹೇಳುತ್ತಾರೆಯೇ ಹೊರತು, ತಾವು ಅಪರಾಧ ಪ್ರಜ್ಞೆಯಿಂದ ನರಳುವುದೂ ಇಲ್ಲ. ತಾವು ತಪ್ಪಿತಸ್ಥರೆಂದು ಒಪ್ಪಿಕೊಳ್ಳುವುದೂ ಇಲ್ಲ.

ಅಸಾಧ್ಯ ಸಾಧಕ: ನಾರ್ಸಿಸಿಸ್ಟ್‍ಗಳು ತಮ್ಮನ್ನು ತಾವು ಪರ್ಫೆಕ್ಟ್ ಎಂದು ನಂಬಿರುವ ಕಾರಣದಿಂದ ಇತರರಿಗೆ ಸಾಧ್ಯವಾಗದ ಅದ್ಭುತಗಳನ್ನು ತಾವು ಸೃಷ್ಟಿಸುತ್ತೇವೆಂದು ನಂಬಿರುತ್ತಾರೆ. ಇತರರನ್ನು ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡುತ್ತಾರೆಯೇ ಹೊರತು ತಮ್ಮ ಆತ್ಮಚಿತ್ರಣವನ್ನು ಕಿಂಚಿತ್ತೂ ಮುಕ್ಕಾಗಿಸಿಕೊಳ್ಳರು.

ಸೊಕ್ಕು: ಯಾರಾದರೂ ಅವರನ್ನು ಖಂಡಿಸಿದರೆ, ಟೀಕಿಸಿದರೆ ಅವರ ಉಸಿರಾಟ ವೇಗವನ್ನು ಪಡೆಯುತ್ತದೆ. ಸೊಕ್ಕು ಉಕ್ಕೇರುತ್ತದೆ. ಆ ಟೀಕೆಗಳನ್ನು ತುಂಬಾ ವ್ಯಕ್ತಿಗತವಾಗಿ ಅದನ್ನು ತೆಗೆದುಕೊಳ್ಳುವುದು ಮಾತ್ರವಲ್ಲದೇ ಇತರರಿಗೆ ಅವರ ಬಗ್ಗೆ ನಕಾರಾತ್ಮಕವಾಗಿ ಹೇಳುತ್ತಿರುತ್ತಾರೆ. ಅವರ ಚಾರಿತ್ರ್ಯವಧೆ ಮಾಡಲು ಹೇಸುವುದಿಲ್ಲ. ಅವರಿಗೆಂತಾದರೂ ಸಂಕಟ ಬಂದರೆ “ಅವರಿಗೆ ಹಾಗೇ ಆಗಬೇಕು” ಎಂದು ತೃಪ್ತಿಪಡುವ ಪ್ರಯತ್ನ ಮಾಡುತ್ತಾರೆ.

ಅಸೂಯೆ: ಇತರರ ಸಾಧನೆಗಳನ್ನು ಪ್ರಶಂಸಿಸುವುದು ಅವರಿಗೆ ಎಂದೂ ಆಗದು. ಇತರರೇನಾದರೂ ಸಾಧನೆ ಮಾಡಿದ್ದಾರೆಂದರೆ ಅವರ್ಯಾವುದೋ ಅಡ್ಡದಾರಿಯಿಂದ ಮೇಲೆದ್ದು ಬಂದಿರಬೇಕು, ಯಾವುದಾದರೂ ವಶೀಲಿ, ಲಂಚ ರುಶುವತ್ತುಗಳ ಪ್ರಭಾವವಿರಬೇಕು, ಅವರಿಗೇನು ಅವರಪ್ಪನ ಹತ್ತಿರ ದುಡ್ದು ಬೇಕಾದಷ್ಟಿದೆ ಮಾಡುತ್ತಾನೆ; ಹೀಗೆ, ಏನಾದರೊಂದು ಹೇಳಿಯೇ ತೀರುತ್ತಾರೆಯೇ ಹೊರತು ಮೆಚ್ಚುವುದಂತೂ ಇಲ್ಲ. ಅದ್ಯಾವ ಸೀಮೆ ಸಾಧನೆ ಎಂಬ ಉಪೇಕ್ಷೆಯು ಅಸೂಯೆಯ ಬಿಂಬವೇ ಹೊರತು ಮತ್ತೇನಿಲ್ಲ.

ಪರಾಕುಪ್ರಿಯ: ನಾರ್ಸಿಸಿಸ್ಟ್‍ಗಳು ಸಕಾರಣಕ್ಕೆ ಹೊರತಾದ ಬಿರುದುಬಾವಲಿಗಳನ್ನು ಹೊಂದುವುದಕ್ಕೆ ಇಷ್ಟಪಡುತ್ತಾರೆ. ಪಕ್ಕದ ರಸ್ತೆಯವರಿಗೆ ಅವರ ಬಗ್ಗೆ ತಿಳಿದಿರದಿದ್ದರೂ ತಾವು ಜಗದ್ವಿಖ್ಯಾತರು ಎಂದು ಅನ್ನಿಸಿಕೊಳ್ಳಲು ಆಶಿಸುತ್ತಾರೆ. ಅದನ್ನು ಉಳಿಸಿಕೊಳ್ಳಲು ಸದಾ ಹೆಣಗಾಡುತ್ತಿರುತ್ತಾರೆ. ಅದನ್ನು ಒಪ್ಪಿಕೊಳ್ಳದವರ ಬಗ್ಗೆ ಬಹಳ ಕೋಪವಿರುತ್ತದೆ.

ಪಟಾಲಂ ಪಡೆ: ತಮ್ಮ ಸುತ್ತಲೂ ಹೇಳಿದಂತೆ ಕೇಳಿಕೊಂಡಿರುವ ಒಂದಷ್ಟು ಜನರನ್ನು ಹೊಂದಿರುವಂತಹ ಮನಸ್ಥಿತಿ ಬಹಳ ಸಾಧಾರಣ. ಆ ಜನರು ಇವರಿಗೆ ಪರಾಕು ಹೇಳಲು ಮಾತ್ರವಲ್ಲದೇ, ಇವರ ಶ್ರೇಷ್ಟತೆ ಮತ್ತು ಹೆಗ್ಗಳಿಕೆಯ ಬಗ್ಗೆ ಜನಗಳಲ್ಲಿ ಜಾಗೃತಿಯನ್ನು ಉಂಟು ಮಾಡಬೇಕೆಂದು ಇವರ ಅಭಿಲಾಷೆ. ಸಾಧಾರಣರಲ್ಲದೇ ಇವರು ಮಹಾನ್ ಸಾಧಕರಾಗಿದ್ದರೂ, ಪ್ರಖ್ಯಾತರಾಗಿದ್ದರೂ ಇಂತಹ ಮನಸ್ಥಿತಿಯಲ್ಲೇ ಇರುತ್ತಾರೆ.

ಅವರೊಬ್ಬರು ಈ ನಾಡಿನ ಬಹುಪ್ರಖ್ಯಾತರು. ನಾನೂ ಮತ್ತು ಕೆಲವು ಯುವನಿರ್ದೇಶಕರ ತಂಡಕ್ಕೆ ಅವರು ಗೆಳೆಯರು. ನಾವೆಲ್ಲರೂ ಕೂಡಿ ಒಂದು ಸಂಸ್ಥೆಗೆ ಔಪಚಾರಿಕ ಭೇಟಿ ನೀಡಬೇಕಿತ್ತು. ಪ್ರಖ್ಯಾತರ ಗೆಳೆಯರೊಬ್ಬರೂ ನಮ್ಮೊಂದಿಗೆ ಬಂದಿದ್ದರು.

ಈ ನಮ್ಮ ತಂಡ ಸಾಮಾನ್ಯವಾಗಿ ಮಾತಾಡಿಕೊಂಡು ಬರುತ್ತಿದ್ದೆವು. ಪ್ರಖ್ಯಾತರ ಗೆಳೆಯ ನಮ್ಮ ತಂಡದ ಬಳಿಗೆ ಬಂದು ಹೇಳಿದರು, “ನೀವು ಮೊದಲು ಒಳಗೆ ಬೇಗ ಬೇಗ ಹೋಗಿ. ಅಲ್ಲಿ ಇರುವವರಿಗೆ ಹೇಳಿ, ‘ಸಾರ್ ಬಂದರು, ಸಾರ್ ಬಂದರು’ ಅಂತ. ಅಲರ್ಟ್ ಆಗಲಿ” ಎಂದು.

ಪ್ರಖ್ಯಾತರ ಮುಖವನ್ನು ನೋಡಿದರೆ ಅವರು ಸಹಜವಾಗಿ ಅಲರ್ಟ್ ಆಗುತ್ತಾರೆ. ಮೇಲೆದ್ದು ಬಂದು ಗೌರವಿಸುತ್ತಾರೆ, ಸ್ವಾಗತಿಸುತ್ತಾರೆ. ನಾವು ಹೋಗಿ ‘ಬಂದ್ರು ಬಂದ್ರು’ ಅಂತ ಹೇಳೋದೇನಿದೇಂತ ನಮ್ಮ ಧೋರಣೆ. ನಾವು ಅದಕ್ಕೆ ಜಾಣ ಮುಗ್ಧರಾಗಿ ‘ನೀವು ಹೇಳುವುದು ಹೇಗೆ ಮಾಡುವುದು ಎಂದು ತಿಳಿಯಲಿಲ್ಲ’ ಎಂಬಂತೆ ಪಿಳಪಿಳನೆ ನೋಡುತ್ತಿದ್ದೆವು. ಆಗ ನಗಲೂ ಆಗುತ್ತಿರಲಿಲ್ಲ. ನಾವುಗಳು ಆಮೇಲೆ ಮನಸೋಯಿಚ್ಚೆ ನಗಾಡಿಕೊಂಡೆವು. ಬಹುಶಃ ನಮ್ಮ ಹತ್ತಿರ ಮಾಡಿಕೊಂಡ ತಮ್ಮ ಗೆಳೆಯರ ಅಹವಾಲು ಆ ಪ್ರಖ್ಯಾತರಿಗೆ ತಿಳಿದಿರಲಿಲ್ಲ ಎನಿಸುತ್ತದೆ.

ಇರಲಿ, ಇಂತಹ ಪಟಾಲಂ ಪಡೆಯನ್ನು ಹೊಂದಿರುವಾಸೆ ಆತ್ಮರತಿಸಖರದು. ಅವರನ್ನು ಶೋಷಿಸುತ್ತಿದ್ದೇವೆ ಎಂಬ ಅರಿವೂ ಅವರಿಗಿರುವುದಿಲ್ಲ. ತಮಗಾಗಿ ಅವರು ಹಾಗೆ ಮಾಡಬೇಕಾಗಿರುವುದು ಅವರ ಧರ್ಮ ಎಂದು ಅವರು ಭಾವಿಸಿರುತ್ತಾರೆ.

ಸೀಮೆಯೊಳಗೆ ಬಂಧಿತರು: ಬಹಳ ಶೋಚನೀಯ ಸಂಗತಿಯೆಂದರೆ, ತಾವು ತಮ್ಮ ಸುತ್ತಲೂ ಒಂದು ಎಲ್ಲೆಯನ್ನು ಗೀಚಿಕೊಂಡು ತಮ್ಮನ್ನು ಸಂಕುಚಿತಗೊಳಿಸಿಕೊಳ್ಳುತ್ತಿದ್ದೇವೆ ಎಂಬ ಅರಿವು ಅವರಿಗೆ ಇರದೇ ಹೋಗುವುದು. ಅವರು ತಮ್ಮ ಮತ್ತು ಇತರರ ನಡುವೆ ಕಂದಕಗಳನ್ನು ತೋಡಿಕೊಳ್ಳುತ್ತಿದ್ದೇವೆ ಎಂದು ಅವರ ಅರಿವಿಗೆ ಬಾರದೇ ಹೋಗುವುದು. ಒಂದು ವೇಳೆ ಅವರು ಖ್ಯಾತನಾಮರಾಗಿದ್ದರೆ, ಉನ್ನತ ಅಧಿಕಾರಸ್ಥರಾಗಿದ್ದರೆ ಅನಿವಾರ್ಯವಾಗಿ ಅವರಿಂದ ಕೆಲಸಗಳಾಗಬೇಕಾದವರು ತಗ್ಗುವ ಬಗ್ಗುವ ನಟನೆ ಮಾಡುತ್ತಿರುತ್ತಾರೆ.

ಕೊನೆಗೊಮ್ಮೆ ಅವರಿಂದ ಏನೂ ಕೆಲಸ ಆಗುವ ಅಗತ್ಯ ಇಲ್ಲದೇ ಹೋದಾಗ ಅವರನ್ನು ತಟ್ಟನೆ ನಿರ್ಲಕ್ಷಿಸಿಬಿಡುತ್ತಾರೆ. ಸಂಪೂರ್ಣ ಬಿಟ್ಟುಬಿಡುತ್ತಾರೆ. ತಮ್ಮ ಸುತ್ತಲೂ ವಂದಿಮಾಗದರನ್ನು, ಪಟಾಲಮನ್ನು ಕಟ್ಟಿಕೊಂಡು ತಿರುಗಾಡುತ್ತಿದ್ದವರಿಗೆ ಒಮ್ಮಿಂದೊಮ್ಮೆಲೆ ಆಘಾತವಾಗುತ್ತದೆ. ತಮ್ಮ ಅಹಂಕಾರಕ್ಕೆ ಆಹಾರ ಸಿಗದೇ ಮಾನಸಿಕವಾಗಿ ಕೃಶವಾಗುತ್ತಾರೆ. ಖಿನ್ನತೆಗೆ ಜಾರುತ್ತಾರೆ. ಅಂತಹ ಖಿನ್ನತೆಗಳಿಂದ ಹೊರಬರಲಾಗದೇ ಅನೇಕ ರೀತಿಯ ವ್ಯಸನಗಳಿಗೆ ತುತ್ತಾಗುತ್ತಾರೆ. ಕೆಲವೊಮ್ಮೆ ಆತ್ಮಹತ್ಯೆಗೆ ಶರಣಾಗಲೂಬಹುದು.

ಈ ಮಾನಸಿಕ ಸಮಸ್ಯೆ ಬಹಳಷ್ಟು ಜನರಲ್ಲಿರುವುದರಿಂದ ವ್ಯಕ್ತಿಗತವಾಗಿಯೂ ಮತ್ತು ಸಾಮಾಜಿಕವಾಗಿಯೂ ಬಹಳ ಸಂಘರ್ಷಗಳು ಮತ್ತು ಸಮಸ್ಯೆಗಳು ಉಂಟಾಗುತ್ತಿರುತ್ತವೆ. ಇದನ್ನು ಓದಿದಾಗ ನನ್ನಲ್ಲೂ ಇಂತಹ ಸಮಸ್ಯೆಯೊಂದಿದೆ ಎಂದು ಯಾರಿಗಾದರೂ ಅನ್ನಿಸಿದರೆ, ಅದು ಬಹಳ ಒಳ್ಳೆಯ ಸೂಚನೆ. ಏಕೆಂದರೆ, ಯಾವುದೇ ಮಾನಸಿಕ ಸಮಸ್ಯೆಯ ಚಿಕಿತ್ಸೆಯ ಕಾರ್ಯ ಪ್ರಾರಂಭವಾಗುವುದು ‘ನನಗೆ ಈ ಸಮಸ್ಯೆ ಇದೆ’ ಅರಿವಿನಿಂದ.

ಅದೇ ಪರಿಹಾರಕ್ಕೆ ಮೊದಲ ಹೆಜ್ಜೆ. ಸಾಮಾನ್ಯವಾಗಿ ಮಾನಸಿಕ ಸಮಸ್ಯೆಯು ತೀವ್ರವಾಗಿರುವವರು ತಮಗೆ ಮಾನಸಿಕ ಸಮಸ್ಯೆ ಇದೆ ಎಂದು ಒಪ್ಪಿಕೊಳ್ಳುವುದೇ ಇಲ್ಲ. ಇತರರಲ್ಲಿ ಅದು ಇದೆ ಎಂದು ಗುರುತಿಸಲು ಯತ್ನಿಸುತ್ತಿರುತ್ತಾರೆ. ತಾವು ಮಾತ್ರ ಸಂಪೂರ್ಣ ಆರೋಗ್ಯದಿಂದ ಇದ್ದೇವೆ ಎಂದುಕೊಂಡಿರುತ್ತಾರೆ. ಮನೋರೋಗಕ್ಕೆ ಮದ್ದಿಲ್ಲ ಎಂಬ ಗಾದೆಯನ್ನು ಒಪ್ಪುವುದು ಬೇಡ.ಮನೋರೋಗಕ್ಕೆ ಮದ್ದಿದೆ ಎಂಬ ಭರವಸೆ ಮತ್ತು ವಿಶ್ವಾಸದೊಡನೆ ಆತ್ಮವಿಮರ್ಶೆಗೊಳಗಾಗುವುದು ಈ ಸಮಸ್ಯೆಗೆ ಪರಿಹಾರಕ್ಕೆ ದಾರಿ ಕಾಣುವ ಪ್ರಾರಂಭ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ಅಂಕಣ

ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ

Published

on

ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.

ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.

ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ

1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.

ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.

ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ

ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.

ಕನ್ನಡಿಗರ ಮನದ ಜಾನಕಿ

ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.

ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.

ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.

ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.

ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ

ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.

ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.

ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.

ಧ್ವನಿಯೊಳಗಿದ್ದ ಸಾವಿರ ರೂಪಗಳು

ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.

ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ

ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.

ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.

ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ

ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.

ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.

ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.

ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.

ಸರಳತೆಯೇ ಅವರ ಅಲಂಕಾರ

ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.

ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ

ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್‌ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.

ಸಂಗೀತ ಲೋಕದ ಕಂಬನಿ

ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.

“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.

ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ

ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.

ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.

ಸ್ವರ ಮೌನವಾದರೂ…

ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.

ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.

ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.

ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಕವಿತೆ | ದೇವರ ಹೂವು

Published

on

~ ಡಾ. ಸಿ.ಬಿ.ಐನಳ್ಳಿ

ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ

ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ

ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ

ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ

ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

Trending