ಅಂತರಂಗ
ಅರಿಮೆಯ ಅರಿವಿರಲಿ – 16 : ನನ್ನ ಕೊಲ್ಲುವರಿವರು
- ಯೋಗೇಶ್ ಮಾಸ್ಟರ್
ಕನ್ನಡದ ಮುಖ್ಯನಾಟಕಕಾರರಲ್ಲಿ ಒಬ್ಬರಾದ ಸಂಸ ಮೈಸೂರಿನಲ್ಲಿ ಏಕಾಂಗಿಯಾಗಿ ವಾಸವಿದ್ದರು. ಕಿಟಕಿಯಿಂದ ಬೆಳಕೂ ಒಳಗೆ ಬೀಳದಂತೆ ಇಡೀ ಕೋಣೆಗೆ ವಾರ್ತಾಪತ್ರಿಕೆಗಳನ್ನು ಅಂಟಿಸಿದ್ದರು. ಹೊರಗೆ ಹೋಗಲು ಹೆದರುವಂತ ಸ್ಥಿತಿ ತಲುಪಿದ್ದರು. ತಮ್ಮ ಸ್ನೇಹಿತರು, ಪರಿಚಯಸ್ಥರು ಬಾಗಿಲು ತಟ್ಟಿದರೂ ಬಾಗಿಲು ತೆರೆಯದಂತಹ ಮನಸ್ಥಿತಿಯನ್ನು ಅವರು ಹೊಂದಿದ್ದರು. ಸಿಕ್ಕಾಪಟ್ಟೆ ಹೆದರಿದ್ದರು. ಮೈಸೂರಿನ ಪೋಲಿಸರು ತನ್ನ ಬೆನ್ನು ಬಿದ್ದಿದ್ದಾರೆಂದುಕೊಂಡಿದ್ದರು. ಆ ಪೋಲೀಸರು ಮಾಹಿತಿದಾರರನ್ನು ಅಥವಾ ಗೂಢಾಚಾರರನ್ನು ತಮ್ಮ ಹಿಂದೆ ಬಿಟ್ಟು ತಮ್ಮೆಲ್ಲಾ ಚಲನವಲನ ಗಮನಿಸುತ್ತಾ ತಮ್ಮನ್ನು ಹಿಂಸಿಸುತ್ತಿದ್ದಾರೆಂದುಕೊಂಡಿದ್ದರು. ಅದೇ ಭಯದಿಂದ ಅವರು ಕೊನೆಯದಿನಗಳಲ್ಲಿ ತುಂಬಾ ನರಳಿದ್ದರು.
ಕೆಲವರಿಗೆ ಏನೋ ಭಯ. ಅವರ ಭಯಕ್ಕೆ ಕಾರಣವೇ ಇರುವುದಿಲ್ಲ. ತಮ್ಮನ್ನು ಕಡೆಗಣಿಸುತ್ತಾರೆ, ತಮ್ಮನ್ನು ಹಿಂಸಿಸುತ್ತಾರೆ, ತಮಗೆ ಕಿರುಕುಳಕೊಡುತ್ತಾರೆ ಎಂಬ ಭಾವ. ತಮ್ಮನ್ನು ಸರಿಯಾಗಿ ನಡೆಸಿಕೊಳ್ಳುವುದಿಲ್ಲ. ಉದ್ದೇಶಪೂರ್ವಕವಾಗಿ, ನನ್ನನ್ನೇ ಗುರಿಯಾಗಿಸಿಕೊಂಡು ವಾಗ್ದಾಳಿ ಮಾಡುತ್ತಾರೆ, ನಿಂದಿಸುತ್ತಾರೆ; ಇತ್ಯಾದಿಯಷ್ಟೇ ಅಂದುಕೊಳ್ಳುವುದಲ್ಲ.
ಈ ಮನೋಭಾವವು ಉಲ್ಬಣಗೊಂಡಂತೆ ತಾನೊಂದು ದೊಡ್ಡ ಅಪಾಯದಲ್ಲಿ ಸಿಲುಕಿದ್ದೇನೆ ಎಂದು ಭಾವಿಸುವರು. ಯಾರೋ ಒಬ್ಬರು ಅಥವಾ ಇಂತಿಂತವರು ಅಥವಾ ಇಂತಹದೊಂದು ಗುಂಪು ಅಥವಾ ಇಂಥಾ ವ್ಯವಸ್ಥೆಯು ನನ್ನನ್ನು ನಿವಾರಿಸಲು ಹೊಂಚು ಹಾಕುತ್ತಿದೆ, ಸಂಚು ಹೂಡುತ್ತಿದೆ ಎಂದು ಭಾವಿಸುವರು.
ಎಲ್ಲರಿಂದ ನಾನು ದೂರಾಗಿದ್ದೇನೆ. ನನ್ನನ್ನು ಮೂಲೆಗುಂಪಾಗಿ ಮಾಡಿದ್ದಾರೆ. ನನ್ನನ್ನು ಹಿಂಸಿಸಲು ಅವರೆಲ್ಲಾ ಪಿತೂರಿಗಳನ್ನು ಹೂಡುತ್ತಿದ್ದಾರೆ ಎಂದು ತಾವು ಯಾರನ್ನು ಕುರಿತು ಆಲೋಚಿಸುತ್ತಿರುತ್ತಾರೋ ಅವರನ್ನು ದೂರುವುದು. ಅವರಿಂದ ತಪ್ಪಿಸಿಕೊಂಡು ಓಡುವುದು. ಸತತವಾಗಿ ಅಜ್ಞಾತವಾಸದಲ್ಲಿರುವುದು. ಯಾರನ್ನೂ ನಂಬದಿರುವುದು. ಯಾರೇ ತಮ್ಮ ಸಂಪರ್ಕಕ್ಕೆ ಬಂದರೂ ಅವರು ತನ್ನ ಮೇಲೆ ದ್ವೇಷ ಸಾಧಿಸುವವರಿಗೆ ನೆರವಾಗಿ ತನಗೆ ಎರವಾಗಬಹುದು ಎಂದು ಭ್ರಮಿಸುವುದು ಇತ್ಯಾದಿಗಳೆಲ್ಲಾ ಹಿಂಸೆಗೊಳಗಾಗುವ ಅರಿಮೆಯ (Persecution Complex) ಲಕ್ಷಣಗಳು.
ಇವರು ಯಾರನ್ನೂ ನಂಬುವುದಿಲ್ಲ. ತನ್ನ ಬಗ್ಗೆ ಆಡಿಕೊಳ್ಳುತ್ತಾರೆಂದುಕೊಳ್ಳುವುದು. ಯಾರು ಏನೇ ಮಾತಾಡಿದರೂ ತನ್ನ ಬಗ್ಗೆಯೇ ಆಡುತ್ತಿದ್ದಾರೆಂದುಕೊಳ್ಳುವುದು. ತನ್ನನ್ನು ಉದ್ದೇಶಿಸಿ ಪರೋಕ್ಷವಾಗಿ ಮಾತಾಡುತ್ತಿದ್ದಾರೆ ಎಂದುಕೊಳ್ಳುವುದು ಕೂಡಾ ಇದರ ಲಕ್ಷಣವೇ. ಹೀಗಾಗಿ ಯಾರಲ್ಲೂ ವಿಶ್ವಾಸವನ್ನು ಹೊಂದದೇ ಹೋಗುತ್ತಾರೆ.
ವಿಷವಿಡುವರು
ಜನರ ಮೇಲಿನ ಈ ಅವಿಶ್ವಾಸ ಅಥವಾ ಈ ಬಗೆಯ ಮಾನಸಿಕ ಅವ್ಯವಸ್ಥೆಯಿಂದ ಮುಂದೆ ಅವರ ಸ್ಥಿತಿ ಎಷ್ಟರಮಟ್ಟಿಗೆ ಹೋಗುತ್ತದೆ ಎಂದರೆ ಭ್ರಮಾಧೀನರಾದಂತೆ ವಿಲಕ್ಷಣವಾಗಿ ವರ್ತಿಸುವರು. ಸಹಜವಾದ ಪ್ರತಿಕ್ರಿಯೆಗಳಿಗೆ ಬದಲಾಗಿ ವಿಲಕ್ಷಣವಾದಂತಹ ಪ್ರತಿಕ್ರಿಯೆಗಳನ್ನು ನೀಡುವುದು ಅಥವಾ ವರ್ತಿಸುವುದೂ ಕೂಡಾ ಮಾಡುವರು.
ಇವರು ಮನೆಯವರನ್ನೂ ನಂಬುವುದಿಲ್ಲ. ಸಾಲದಕ್ಕೆ ತಮ್ಮ ಸಂಬಂಧಗಳನ್ನು ವಿಶ್ವಾಸಿಸುವುದಿಲ್ಲ. ನನಗೆ ವಿಷವಿಟ್ಟು ಬಿಡುತ್ತಾರೆ ಎಂದು ಮನೆಯಲ್ಲಿ ಸರಿಯಾಗಿ ಊಟ ಮಾಡದೇ ಇರುವುದು, ಹರಿತವಾದ ಆಯುಧದಿಂದ ತನ್ನನ್ನು ಕೊಲೆ ಮಾಡುವರೆಂದು ಚಾಕು, ಕತ್ತರಿಗಳನ್ನು ಬಚ್ಚಿಡುವುದೂ ಉಂಟು.
ಹಾಗೆ ಸ್ಥೂಲವಾಗಿ ನೋಡಿದರೆ ಅವರು ತಮಗೆ ಸಹಜಕ್ಕಿಂತ ಅತಿಯಾದ ಪ್ರಾಮುಖ್ಯತೆಯನ್ನು ಬಯಸುವಂತೆ ಕಾಣುವುದು.
ಅಂತಹ ಪ್ರಾಮುಖ್ಯತೆಯನ್ನು ನೀಡದಿದ್ದರೆ ಮೂರ್ಚೆ ಹೋಗುವುದೋ, ಅಥವಾ ಆತ್ಮಹತ್ಯೆಗೆ ಮುಂದಾಗುವುದೋ ಅಥವಾ ಎಲ್ಲಿಯೋ ಹೋಗಿ ಏಕಾಂತದಲ್ಲಿ ಅಡಗಿಕೊಳ್ಳುವುದೋ; ಎಂತದ್ದೋ ಮಾಡುತ್ತಾರೆ. ಆದರೆ ಇದು ಪ್ರಾಮುಖ್ಯತೆಯ ಬೇಡಿಕೆಯಲ್ಲ. ಅದು ಬೇರೆ, ಮಾರ್ಟಿರ್ ಕಾಂಪ್ಲೆಕ್ಸ್. ಆದರೆ ಇವರ ಕೆಲವು ವರ್ತನೆಗಳು ಸ್ಥೂಲ ನೋಟಕ್ಕೆ ಹಾಗೆ ಕಾಣುತ್ತದೆ. ಇವರಿಗೆ ಇತರರಿಂದ ಸಮಾಧಾನವೋ, ಸಾಂತ್ವಾನವೋ ಬೇಕಾಗಿರುವುದಿಲ್ಲ. ಮೊದಲಾಗಿ ಅವರು ವ್ಯಕ್ತಿಗಳನ್ನೇ ನಂಬುವುದಿಲ್ಲ. ಒಟ್ಟಾರೆ ಎಂತದ್ದೋ ಸಹಜವಾಗಿ ಪ್ರತಿಕ್ರಿಯಿಸುವ ಬದಲು ಇತರರಿಗೆ ಹೆದರಿಸುವಂತೆ ಅಥವಾ ರೇಜಿಗೆ ಹುಟ್ಟಿಸುವಷ್ಟು ಅಸಹಜವಾಗಿ ವರ್ತಿಸುವರು.
ವಿಲಕ್ಷಣ ವರ್ತನೆಗಳು
ಕೆಲವು ಮಕ್ಕಳು ಇಂತಹ ಲಕ್ಷಣಗಳನ್ನು ತೋರುವರು. ಇತರ ಮಕ್ಕಳು ತಮ್ಮನ್ನು ಬೇಕೆಂದೇ ಆಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದೋ, ತನ್ನನ್ನು ದೂರಕ್ಕೆ ತಳ್ಳುತ್ತಾರೆ ಎಂದೋ, ತನ್ನ ಕಂಡರೆ ಇಷ್ಟಪಡುವುದಿಲ್ಲ ಎಂದೋ ದೂರುತ್ತಿರುತ್ತಾರೆ. ಈ ದೂರು ನಿತ್ಯ ಗೋಳಾಟಕ್ಕೆ ಕಾರಣವೂ ಆಗಿರುತ್ತದೆ. ಇತರ ಮಕ್ಕಳಿಗೆ ಇದರಿಂದ ಇವರ ಬಗ್ಗೆ ಇನ್ನಷ್ಟು ರೇಜಿಗೆ, ಬೇಸರ ಆಗಿ ಮತ್ತಷ್ಟು ತಪ್ಪಿಸಿಕೊಳ್ಳಲು ಯತ್ನಿಸತೊಡಗುತ್ತಾರೆ. ಕೊನೆಗೆ ಸಂಬಂಧಗಳು ಕಿರಿಕಿರಿಗಳಿಂದಲೇ ಸಡಿಲಗೊಂಡು ಒಬ್ಬರನ್ನೊಬ್ಬರು ಸದಾ ನಿವಾರಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ.
ಮಗುವೊಂದು ತನಗೇನಾದರೂ ಬೇಕಾದರೆ ನಿಂತಲ್ಲಿ ಹಟ ಮಾಡದೇ, ಅಳದೇ ಗಮನ ಸೆಳೆಯಲು ಯಾವುದೋ ಟೇಬಲ್ಲಿನ ಕೆಳಗೆ ಕುಳಿತು ಅಳುತ್ತಿದೆ ಎಂದರೆ ಎಚ್ಚೆತ್ತುಕೊಳ್ಳಿ. ಯಾವಾಗಲೂ ಇತರರ ಮೇಲೆ ತನ್ನನ್ನು ಅವರು ಅವಾಯ್ಡ್ ಮಾಡ್ತಾರೆ, ನಾನೆಷ್ಟು ಇಷ್ಟಪಟ್ಟರೂ ಅವರು ನನ್ನ ಇಷ್ಟಪಡುವುದಿಲ್ಲ, ನನ್ನ ಕಂಡರೆ ಅವರಿಗೆ ಆಗುವುದಿಲ್ಲ; ಇತ್ಯಾದಿ ಮಾತುಗಳನ್ನು ಆಗ್ಗಿಂದಾಗ್ಗೆ ಹೇಳುತ್ತಿದ್ದರೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ.
ತಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದು ವಿಶ್ವಾಸವನ್ನು ಅವರಲ್ಲಿ ತುಂಬುವ, ಅವರೊಡನೆ ಮುಕ್ತವಾಗಿ ಮಾತಾಡುವ ಮತ್ತು ಅವರಿಗೆ ಆ ರೀತಿ ಮಾತಾಡುವ ಅವಕಾಶಗಳನ್ನು ಕಲ್ಪಿಸಿಕೊಡುವ ದಿಕ್ಕಿನಲ್ಲಿ ಪೋಷಕರು ಮತ್ತು ಶಿಕ್ಷಕರು ಕೆಲಸ ಮಾಡಬೇಕು. ಬಾಲ್ಯದಲ್ಲೇ ಇಂತಹ ಲಕ್ಷಣಗಳನ್ನು ಗುರುತಿಸಿದರೆ, ತಕ್ಷಣವೇ ಅದಕ್ಕೆ ಉಪಚರಿಸಿದರೆ ಕ್ರಮೇಣ ಅದು ಇಲ್ಲವಾಗುವುದು. ವಿಲಕ್ಷಣವಾಗಿ ವರ್ತಿಸಿದಾಗೆಲ್ಲಾ ಮಕ್ಕಳ ಗಮನಕ್ಕೆ ತರಬೇಕು. ಹಾಗೆ ಅವರ ಗಮನಕ್ಕೆ ತರುವಾಗ ಸೌಜನ್ಯದಿಂದಲೂ ಮತ್ತು ಪ್ರೀತಿಯಿಂದಲೂ, ಆದರೆ ಕಟ್ಟುನಿಟ್ಟಾಗಿಯೂ ಇರಬೇಕು.
ದುರಂತ ನಾಟಕಗಳು ದುರಂತ ಅಂತ್ಯ
ಕನ್ನಡದ ನಾಟಕಕಾರ ಸಂಸರಿಗೆ ಈ ಪರ್ಸೆಕ್ಯೂಶನ್ ಕಾಂಪ್ಲೆಕ್ಸ್ ಯಾವಾಗ ಶುರುವಾಗಿತ್ತೋ ಗೊತ್ತಿಲ್ಲ. ಅವರು ಬೆಳೆಬೆಳೆದಂತೆ ಅಂತರ್ಮುಖಿಯಾಗಿರುತ್ತಿದ್ದರು. ಯಾರ ಜೊತೆಗೂ ಯಾವ ವಿಷಯವನ್ನೂ ಹಂಚಿಕೊಳ್ಳುತ್ತಿರಲಿಲ್ಲ. ಕೊನೆಕೊನೆಗೆ ಅದೆಷ್ಟು ಅತಿಯಾಯಿತೆಂದರೆ 14.02.1939ರಲ್ಲಿ ತನಗೆ ಪೋಲಿಸರು ಮತ್ತು ಅವರ ಗೂಢಾಚಾರರು ಕೊಡುತ್ತಿರುವ ಕಿರುಕುಳದಿಂದ ನನಗೆ ಜೀವನ ಅಸಹನೀಯವಾಗಿದೆ ಎಂದು ಹೇಳಿ ವೆರೋನಲ್ ಎಂಬ 150 ನಿದ್ರೆಗುಳಿಗೆಗಳನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡರು.
ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಸಣ್ಣ ಕೊಠಡಿಯಲ್ಲಿ ಸತ್ತು ಹೋಗಿದ್ದು, ಅವರ ಸಾವಿನ ಸುದ್ಧಿ ತಿಳಿದಿದ್ದು ಅನೇಕ ದಿನಗಳ ನಂತರ. ಅದೂ ಹೆಣವು ಕೊಳೆತು ಹೊರಗೆ ವಾಸನೆ ಬರಲಾರಂಭಿಸಿದ ಮೇಲೆ. ಅತ್ಯದ್ಭುತವಾದ ಸಾಹಿತ್ಯ ರಚನಾ ಸಾಮರ್ಥ್ಯ ಹೊಂದಿದ್ದ ಅವರಿಗೆ ಬಾಲ್ಯದಿಂದಲೇ ಆಪ್ತತೆಯನ್ನು ಹೊಂದಿರುವಂತಹ ಸರಿಯಾದ ವ್ಯಕ್ತಿಯ ಸಾಮಿಪ್ಯ ದೊರಕಿರಲಿಲ್ಲ. ತಂದೆಯನ್ನೂ ಎಳೆಯ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದರು. ಸಾಲದಕ್ಕೆ ಅವರು ಬರೆಯುತ್ತಿದ್ದದ್ದು ಹೆಚ್ಚು ದುರಂತ ನಾಟಕಗಳು. ಮೈಸೂರು ಸಂಸ್ಥಾನದ ಅರಸರ ರಾಜಕೀಯಗಳಲ್ಲಿ ನಡೆಯುತ್ತಿದ್ದ ಒಳಸಂಚು, ಪಿತೂರಿ, ಮತ್ಸರ, ಕೊಲೆ ಇತ್ಯಾದಿ ವಿಷಯಗಳೇ ಅವರ ಸಾಹಿತ್ಯ ವಸ್ತುಗಳು.
ಪದೇಪದೇ ಅವುಗಳ ಬಗ್ಗೆಯೇ ಆಲೋಚಿಸುವ, ಅವುಗಳ ಕುರಿತಾಗಿಯೇ ಅಧ್ಯಯನ ಮಾಡುವ, ಅವನ್ನೇ ರಚಿಸುವ ಪುನರಾವರ್ತನೆಯ ನಕಾರಾತ್ಮಕ ಚಿಂತನೆಗಳಿಂದ ತಮ್ಮ ಪರ್ಸೆಕ್ಯೂಶನ್ ಕಾಂಪ್ಲೆಕ್ಸನ್ನು ಮತ್ತಷ್ಟು ಬಲಪಡಿಸಿಕೊಂಡು ಅದರಿಂದ ಹೊರಗೆ ಬರದೇ ಅದರಲ್ಲೇ ಸತ್ತು ಹೋದರು. ದುರಂತ ನಾಟಕಗಳ ನಾಟಕಕಾರ ದುರಂತವನ್ನು ಕಂಡಿದ್ದು ಒಂದು ವಿಪರ್ಯಾಸವಾದರೂ ಅದೇನೂ ವಿಧಿಯೋ ಅಥವಾ ಪರಿಸ್ಥಿತಿಯು ಹಾಗೊದಗಿದ್ದೋ ಖಂಡಿತ ಅಲ್ಲ. ಅವರ ಮಾನಸಿಕ ಸಮಸ್ಯೆ, ಅವರಿಗಿದ್ದ ಹಿಂಸೆಗೊಳಗಾಗುವ ಅರಿಮೆಯೇ ಕಾರಣ.
ಒಂದು ವೇಳೆ ನೀವೋ, ನಿಮ್ಮ ಜೊತೆಯವರೋ, ನಿಮ್ಮ ಮಕ್ಕಳೋ ತಮ್ಮನ್ನು ಕಡೆಗಣಿಸುತ್ತಾರೆ, ತಮಗೆ ಬೇಕೆಂದೇ ಕಿರುಕುಳಕೊಡುತ್ತಾರೆ, ಅಥವಾ ಅವರು ಇವರು ಎಲ್ಲಾ ನನ್ನ ಬಗ್ಗೆಯೇ ಕೆಟ್ಟದಾಗಿ ಮಾತಾಡಿಕೊಳ್ಳುತ್ತಾರೆ, ಎಂಬಂತಹ ಲಕ್ಷಣಗಳನ್ನು ತೋರಿದರೆ ಅವರನ್ನು ಹೆಚ್ಚು ಹೆಚ್ಚು ಜನರೊಂದಿಗೆ ಬೆರೆಯಲು ಪ್ರೋತ್ಸಾಹಿಸಬೇಕು. ಪ್ರೀತಿ, ವಿಶ್ವಾಸ, ಭಾವುಕತೆ ಇಂತವುಗಳಿಂದ ಅವರ ಸಂಬಂಧವನ್ನು ಆಪ್ತಗೊಳಿಸಬೇಕು. ಒಂದು ವೇಳೆ ಇಂತಹ ಲಕ್ಷಣಗಳನ್ನು ತೋರಿಯೂ ಅವರು ಸ್ನೇಹಜೀವಿಯಾಗಿದ್ದಾರೆ, ಎಲ್ಲರೊಡನೆ ಬೆರೆಯುತ್ತಿದ್ದಾರೆ, ಕೆಲಸ ಮಾಡುವಲ್ಲಿ ತಮ್ಮ ಕೈ ಜೋಡಿಸುತ್ತಾರೆ ಎಂದಾದರೆ ಇದು ತತ್ಕಾಲದ ಸಮಸ್ಯೆಯಾಗಿದ್ದು ಕ್ರಮೇಣ ಹೊರಟುಹೋಗುತ್ತದೆ.
ಆದರೆ ಜನರಿಂದ ದೂರಾದರೆ, ಅಂತರ್ಮುಖಿಗಳಾಗಿ ಏಕಾಂಗಿಗಳಾಗಿದ್ದರೆ ಕಷ್ಟ. ಆದ್ದರಿಂದ ಮಕ್ಕಳಲ್ಲಿ ಅಥವಾ ಯುವಕರರಲ್ಲಿ ಇಂತಹ ಪರ್ಸಕ್ಯೂಶನ್ ಲಕ್ಷಣಗಳು ಕಂಡರೆ ಸಾಮಾಜಿಕ ಸಂಬಂಧವನ್ನು ಉತ್ತಮಪಡಿಸುವುದರ ಜೊತೆಗೆ, ವ್ಯಕ್ತಿಗತವಾಗಿ ಆಪ್ತತೆಯನ್ನು ಮತ್ತು ಆತ್ಮೀಯತೆಯನ್ನು ಬೆಳೆಸಿಕೊಳ್ಳುವುದು ಚಿಕಿತ್ಸಕವಾಗಿ ಕೆಲಸ ಮಾಡುತ್ತದೆ. ಪರ್ಸಕ್ಯುಶನ್ ಕಾಂಪ್ಲೆಕ್ಸ್ ಅಥವಾ ಹಿಂಸೆಗೊಳಗಾಗುವ ಅರಿಮೆಯೂ ಸೇರಿದಂತೆ ಯಾವುದೇ ಕಾಡುವ ಕಾಂಪ್ಲೆಕ್ಸ್ ಗಳನ್ನು ಬಾಲ್ಯದಲ್ಲಿಯೇ ಅಥವಾ ಆರಂಭದಲ್ಲಿಯೇ ಅಥವಾ ಬಲಿಯುವ ಮುನ್ನವೇ ಗುರುತಿಸಿದರೆ ಅದರಿಂದ ಆ ಸಮಸ್ಯೆಗೆ ಒಳಗಾಗಿರುವ ವ್ಯಕ್ತಿಗಳನ್ನು ಕಾಪಾಡಲು ಸಾಧ್ಯ. ಕೆಮ್ಮು ನೆಗಡಿ ಜ್ವರವನ್ನು ನಿವಾರಿಸಿಕೊಂಡಂತೆಯೇ ಸಮಾಲೋಚನೆ ಮತ್ತು ಮನೋಭಾವವನ್ನು ಕ್ರಮಗೊಳಿಸಿಕೊಳ್ಳುವ ವಿಧಾನಗಳಿಂದ ಇಂತಹ ಕಾಂಪ್ಲೆಕ್ಸ್ಗಳನ್ನು ನಿವಾರಿಸಿಕೊಳ್ಳಬಹುದು.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ21 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


