ಅಂತರಂಗ
ಅರಿಮೆಯ ಅರಿವಿರಲಿ – 23 : ನಾನು ದ ಗ್ರೇಟ್
- ಯೋಗೇಶ್ ಮಾಸ್ಟರ್
ದೂರ ಸ್ಥಳದಿಂದ ಕಟ್ಟಡದ ಕೆಲಸಕ್ಕಾಗಿ ಬಂದಿರುವ ಕೂಲಿಕಾರ್ಮಿಕರ ಟೆಂಟುಗಳವು. ನಮ್ಮ ಮನೆಯ ಎದುರಿನ ಮೈದಾನದಲ್ಲೇ ಅವರ ವಾಸ್ತವ್ಯ. ಗಂಡಸರು ಮತ್ತು ಹೆಂಗಸರು ಒಟ್ಟಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದಾಗ ನಾನೂ ಅವರೊಡನೆ ಸೇರಿಕೊಂಡೆ. ಮಾತಿನಲ್ಲಿ ತಿಳಿಯಿತು ಅವರು ತಮಟೆಗಳನ್ನು ನುಡಿಸುವುದರಲ್ಲಿ ನಿಪುಣರು ಎಂದು. ನಾನು ಹೇಳಿದೆ ನನಗೆ ತಮಟೆ ಸದ್ದಿಗೆ ಕುಣಿಯಲು ಬಹಳ ಇಷ್ಟ. ಹೆಣಕ್ಕೆ ಹೊಡೆಯುವ ಹಲಗೆಗೂ ನಾನು ಕುಣಿಯುವವನೇ ಎಂದೆ. “ಥೂ ಥೂ, ನಾವು ಅವರಲ್ಲರೀ. ನಾವು ದೇವರಿಗೆ ಮಾತ್ರ ತಮಟೆ ಹೊಡೆಯುವವರು” ಎಂದ ಅವರ ಹಿರಿಯರಲ್ಲೊಬ್ಬ. ತಮಟೆ ಹೊಡೆಯುವವರಲ್ಲಿ ನಾವು ಶ್ರೇಷ್ಟ. ಹೆಣಕ್ಕೆ ಹೊಡೆಯುವವರು ಕನಿಷ್ಟ. ಅದಕ್ಕೆ ನಮ್ಮನ್ನು ಹೋಲಿಸಿಬಿಟ್ಟಿರಲ್ಲಾ ಎಂದು ಅವರ ಧೋರಣೆ.
ಕೀಳರಿಮೆಯನ್ನು ಮೆಟ್ಟಲು ತಮಗಿಂತ ಕೀಳಾಗಿರುವವರನ್ನು ಗುರುತಿಸುವ ಧಾವಂತ ವ್ಯಕ್ತಿಗಳಲ್ಲೂ, ಜಾತಿಗಳಲ್ಲೂ, ಜಾತಿಗಳ ಪಂಗಡಗಳಲ್ಲೂ, ಗೋತ್ರಗಳಲ್ಲೂ, ಧರ್ಮಗಳಲ್ಲೂ, ಜನಾಂಗಗಳಲ್ಲೂ, ವೃತ್ತಿಗಳಲ್ಲೂ. ಐಷಾರಾಮದ ಕಾರಿನಲ್ಲಿ ಪ್ರಯಾಣಿಸುತ್ತಿರುವವನು ತನ್ನ ಪಕ್ಕದಲ್ಲಿ ಬರುವ ಕಡೆಮೆ ಬೆಲೆಯ ಕಾರಿನವನ ಕಡೆ ಹರಿಸುವ ದೃಷ್ಟಿಯಲ್ಲಿ ಮೇಲರಿಮೆ ಇದೆ. ಸುಂದರವಾದ ತನ್ನ ಹೆಂಡತಿ ಅಥವಾ ಪ್ರೇಯಸಿಯ ಜೊತೆಯಲ್ಲಿ ಹೆಜ್ಜೆ ಹಾಕುವ ಪುರುಷನಿಗೆ ಇವನ ಕಡೆಗೆ ಅಸೂಯೆಯಿಂದ ನೋಡುವ ಒಂದಷ್ಟು ಕಣ್ಣುಗಳು ಬೇಕು. ಇಷ್ಟು ಸುಂದರವಾಗಿರುವವಳೊಂದಿಗೆ ಹೋಗುತ್ತಿರುವ ಅವನೆಂತಹ ಲಕ್ಕಿ ಎಂದು ಅವರಿವರು ಇವನನ್ನು ನೋಡುತ್ತಿರಬೇಕು.
ನಮ್ಮ ಏರಿಯಾದಲ್ಲಿ ನಮ್ಮ ಮನೆಯೇ ಅತ್ಯಂತ ದೊಡ್ಡದು ಮತ್ತು ಸುಂದರ ಎನ್ನುವ ಖುಷಿ. ನಡೆದುಕೊಂಡು ಹೋಗುವ ಮಕ್ಕಳ ಮುಂದೆ ಸೈಕಲ್ ತುಳಿಯುತ್ತಾ ಹೋಗುವ ಮಕ್ಕಳ ಧಿಮಾಕು. ಹೀಗೇ ಪಟ್ಟಿ ಮಾಡುತ್ತಾ ಹೋದರೆ ಕೊನೆ ಮೊದಲಿಲ್ಲ. ತಾನು ಇತರರಿಗಿಂತ ಒಂದು ಪಟ್ಟು ಹೆಚ್ಚು; ಇದು ಭಾವ. ಅದಕ್ಕೆ ಯಾವುದಾದರೂ ಕಾರಣವಾಗಿರಬಹುದು. ನನ್ನೆದುರು ಇರುವವನ ತಲೆಗೂದಲು ಉದುರಿ ಬೋಳಾಗಿದ್ದು, ನನ್ನ ತಲೆ ತುಂಬ ಕೂದಲಿದೆ; ಇಷ್ಟು ಸಾಕು ನಾನು ಅವನಿಗಿಂತ ಗ್ರೇಟ್ ಆಗುವುದಕ್ಕೆ. ಅವನಿಗೂ ತಲೆಯಲ್ಲಿ ಕೂದಲಿದೆ, ನನಗೂ ಕೂದಲಿದೆ. ಆದರೆ ಅವನದು ಬೆಳ್ಳಗಾಗಿದೆ. ನನ್ನದು ಪೂರ್ತಿ ಕಪ್ಪಗಿದೆ. ಈಗಲೂ ನಾನು ಗ್ರೇಟ್.
ಸ್ಟಾರ್ ವಾರ್
ಇಲ್ಲೊಂದು ಸೊಸೆಯರಿಬ್ಬರ ಕತೆ ನೋಡಿ. ಸುಮ ಶಮ ಇಬ್ಬರೂ ಒಂದು ಮನೆಯ ಸೊಸೆಯರು. ಸುಮ ಶಮಳಿಗಿಂತ ಮೇಲೆಂದು ಭಾವಿಸುತ್ತಾಳೆ. ಏಕೆಂದರೆ ಅವಳು ಹಿರಿ ಸೊಸೆ. ಅವಳೇ ಮನೆಗೆ ಮೊದಲು ಬಂದಿರುವುದು. ಆದರೆ ಶಮ ತಾನೇ ಮೇಲೆಂದು ಭಾವಿಸುತ್ತಾಳೆ. ಏಕೆಂದರೆ ಅವಳು ಸುಮಳಿಗಿಂತ ತೆಳ್ಳಗೆ ಬೆಳ್ಳಗೆ ಇದ್ದಾಳೆ. ಅವಳು ತೆಳ್ಳಗೆ ಬೆಳ್ಳಗೆ ಇದ್ದರೂ ಸುಮ ತಾನೇ ಮೇಲೆನ್ನುತ್ತಾಳೆ ಏಕೆಂದರೆ ಅವಳು ಈ ಮನೆಗೆ ಹೆಚ್ಚು ವರದಕ್ಷಿಣೆ ತಂದಿದ್ದಾಳೆ. ಆದರೂ ಶಮ ತಾನೇ ಮೇಲೆಂದುಕೊಳ್ಳುತ್ತಾಳೆ ಏಕೆಂದರೆ ಅವಳು ವಿದ್ಯಾವಂತೆ ಮತ್ತು ಉದ್ಯೋಗಸ್ಥೆ.
ಆದರೂ ಸುಮ ತಾನು ಮೇಲೆಂದು ಅಂದುಕೊಳ್ಳುತ್ತಾಳೆ ಏಕೆಂದರೆ ಪ್ರತಿಯೊಂದಕ್ಕೂ ಅತ್ತೆ ಮಾವ ತನ್ನನ್ನೇ ಕೇಳುವುದು. ಹಾಗಿದ್ದರೂ ಶಮ ತಾನು ಮೇಲು ಎಂದುಕೊಳ್ಳಲು ಕಾರಣವಿದೆ ಏಕೆಂದರೆ, ಇಂಟರ್ ನೆಟ್ನಲ್ಲಿ ಆಗ ಬೇಕಾದ ವ್ಯವಹಾರಕ್ಕೆಲ್ಲಾ ಅವರು ಇವಳನ್ನೇ ಅವಲಂಬಿಸಿರುವುದು. ಹಾಗಿದ್ದರೂ ಶಮನೇ ಗ್ರೇಟು ಏಕೆಂದರೆ ಅವರ ಮನೆಯ ನಾಯಿ ಅವಳಿಗೇ ಬಾಲ ಅಲ್ಲಾಡಿಸುವುದು ಮತ್ತು ಕರೆದ ಕೂಡಲೇ ಬರುವುದು. ಆದರೂ ಶಮ ತಾನೇ ಮೇಲೆಂದು ಅಂದುಕೊಳ್ಳುತ್ತಾಳೆ, ನಾಯಿಗೆ ಅದೆಂತದ್ದೋ ಸಮಸ್ಯೆ ಬಂದಾಗ ಅವಳ ವೆಟರ್ನರಿ ಡಾಕ್ಟರ್ ಫ್ರೆಂಡ್ ಕೊಟ್ಟ ಸಲಹೆಯಿಂದ ಸರಿಹೋಯಿತೆಂದು.
ಒಟ್ಟಾರೆ ಇಬ್ಬರೂ ಸಮ ಸಮ ಅಲ್ಲ, ಅಷ್ಟೇ. ಸ್ಟಾರ್ ವಾರ್ ಗಳು ವಾರಾರಗಿತ್ತಿಗಳಲಿದ್ದಂತೆ ಕಛೇರಿಗಳಲ್ಲಿ, ವಿಧಾನ ಸಭೆಗಳಲ್ಲಿ, ಕಲಾಕ್ಷೇತ್ರಗಳಲ್ಲಿ, ಧಾರ್ಮಿಕ ಪೀಠಗಳಲ್ಲಿ, ಸಾಹಿತ್ಯ ಸಂಸ್ಕೃತಿಯ ಕ್ಷೇತ್ರಗಳಲ್ಲಿ; ಎಲ್ಲಿ ಬೇಕಾದರೂ ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಣುವುದು. ಇಲ್ಲಿ ಎರಡು ಬಗೆಯ ಮೇಲರಿಮೆಗಳನ್ನು ಗಮನಿಸಿದಿರಿ. ಒಂದು ತನ್ನಲ್ಲಿರುವ ಕೀಳರಿಮೆಯನ್ನು ಮೆಟ್ಟಲು ತನಗಿಂತ ಕೀಳಾಗಿರುವವರನ್ನು ಗುರುತಿಸುವ ಪ್ರಯತ್ನದಲ್ಲಿ ತನ್ನ ಮೇಲರಿಮೆಯನ್ನು ತೃಪ್ತಿಪಡಿಸಿಕೊಳ್ಳುವುದು. ಮತ್ತೊಂದು ಅವರಿಗಿಂತ ತಾನು ಭಿನ್ನ ಅಥವಾ ವಿಶೇಷವಾಗಿರುವ ಕಾರಣದಿಂದ ಶ್ರೇಷ್ಟವೆಂದು ಭಾವಿಸುವುದು. ಎರಡೂ ಕೂಡಾ ಮಾನಸಿಕ ಸಮಸ್ಯೆಯೇ.
ದಮನಕಾರಿ ವ್ಯಸನ
ಶಾಲಾ ಕಾಲೇಜುಗಳಲ್ಲಿ ಹಿರಿಯ ಮಕ್ಕಳು ಹೊಸದಾಗಿ ಸೇರ್ಪಡೆಯಾಗುವ ಮಕ್ಕಳ ಮೇಲೆ ನಡೆಸುವ ದೌರ್ಜನ್ಯ, ರ್ಯಾಗಿಂಗ್ ಕೂಡಾ ಮೇಲರಿಮೆಯ ಕಾರಣವೇ. ಅವರಷ್ಟೇ ಮೇಲೆಂದು ಅಥವಾ ಶ್ರೇಷ್ಟವೆಂದು ಭಾವಿಸಿ ಸುಮ್ಮನಾಗಿಬಿಡುವಂತಿದ್ದರೆ ಹೋಗ್ಲಿ ಬಿಡು ಅತ್ತ ಅಂತ ಸುಮ್ಮನಿದ್ದುಬಿಡಬಹುದಾಗಿತ್ತು. ಆದರೆ ವಿಷಯ ಅಷ್ಟಕ್ಕೇ ನಿಲ್ಲುವುದಿಲ್ಲ. ನನ್ನ ಧರ್ಮ ಅಥವಾ ಜಾತಿ ಎಷ್ಟು ಶ್ರೇಷ್ಟ ಎಂದು ಗೊತ್ತಾದ ಮೇಲೆ ಅದು ಇತರ ಧರ್ಮದವರಿಗೂ ಗೊತ್ತಾಗಬೇಕಲ್ಲಾ. ಅದಕ್ಕೆ ಅವರ ಲೋಪದೋಷಗಳನ್ನು ಹುಡುಕಿ ತೆಗೆದು, ಅದಕ್ಕೆ ಪರ್ಯಾಯವಾಗಿ ತಮ್ಮದು ಅದೆಷ್ಟು ಶ್ರೇಷ್ಟ ಎಂಬುದನ್ನು ಹೇಳುವುದು. ಅವರ ಅವಹೇಳನಕ್ಕೆ ಇಳಿಯುವುದು.
ನನ್ನ ಧರ್ಮದ ಮೇಲರಿಮೆಯನ್ನು ಅವನ ಧರ್ಮದ ಮೇಲರಿಮೆಯು ಒಪ್ಪುವುದಿಲ್ಲವಲ್ಲ; ಅವನೂ ಮತ್ತೊಂದೇನೋ ಹೇಳುತ್ತಾ ದಾಳಿಯಿಡುತ್ತಾನೆ. ಅಲ್ಲಿಗೆ ಕೆಸರೆರಚಾಟ ಪ್ರಾರಂಭವಾಗುತ್ತದೆ. ಸಂಸ್ಕೃತಿ, ಜನಾಂಗ, ಪ್ರದೇಶ, ಪಕ್ಷಗಳು ಹೀಗೆ ಯಾವುದಾದರೂ ನಡೆಯುತ್ತದೆ ಮೇಲರಿಮೆಯನ್ನು ಸಾಧಿಸಲು. ನಾನು ಹುಟ್ಟಿದಾಗಿನಿಂದ ನನ್ನ ಧರ್ಮದ ವಿಚಾರವನ್ನೇ ಅಥವಾ ಜಾತಿಯ ವಿಚಾರವನ್ನೇ ಆಳವಾಗಿ ತಿಳಿದುಕೊಂಡಿರುವುದಿಲ್ಲ.
ಇನ್ನು ಜಗತ್ತಿನ ಇತರ ಧರ್ಮಗಳ ಮತ್ತು ಪಂಗಡಗಳ ಬಗ್ಗೆ ತಿಳಿದುಕೊಂಡಿರುವುದು ದೂರವೇ ಉಳಿಯಿತು. ಆದರೂ ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುತ್ತೇನೆ, ಇಡೀ ಜಗತ್ತಿನಲ್ಲಿ ನನ್ನ ಧರ್ಮವೇ ಶ್ರೇಷ್ಟ ಎಂದು. ಯಾವ ವ್ಯಕ್ತಿಯು ನಿಜವಾದ ಅಧ್ಯಯನ ಮಾಡಿರುತ್ತಾನೆಯೋ ಅವನಿಗೆ ಯಾವುದೂ ಶ್ರೇಷ್ಟವಾಗಿರುವುದಿಲ್ಲ ಅಥವಾ ಕನಿಷ್ಟವಾಗಿರುವುದಿಲ್ಲ. ಎಲ್ಲದರಲ್ಲೂ ಅವನಿಗೆ ಇದು ಅಗತ್ಯ ಅಥವಾ ಅನಗತ್ಯ ಎಂಬುದಷ್ಟೇ ಗೋಚರಿಸುತ್ತಿರುತ್ತದೆ.
ರೋಗಾಯೋಗ
ಅಗತ್ಯ ಮತ್ತು ಅನಗತ್ಯ, ಉಚಿತ ಮತ್ತು ಅನುಚಿತ, ವಾಸ್ತವ ಮತ್ತು ಅವಾಸ್ತವ, ಪ್ರಾಯೋಗಿಕ ಮತ್ತು ಅಪ್ರಯೋಗಿಕ, ಆರೋಗ್ಯ ಮತ್ತು ಅನಾರೋಗ್ಯ; ಇವುಗಳ ನೆಲೆಗಟ್ಟಿನಿಂದ ನೋಡುವುದನ್ನು ಬಿಟ್ಟು, ಶ್ರೇಷ್ಟ ಮತ್ತು ಕನಿಷ್ಟ, ಮೇಲು ಮತ್ತು ಕೀಳು, ಪವಿತ್ರ ಮತ್ತು ಅಪವಿತ್ರ ಎಂಬ ದೃಷ್ಟಿಯಿಂದ ನೋಡುತ್ತಿದ್ದಾನೆಂದರೆ ಆ ವ್ಯಕ್ತಿಗೆ ಶ್ರೇಷ್ಟತೆಯ ವ್ಯಸನ ಅಂದರೆ ಮೇಲರಿಮೆಯ ಮಾನಸಿಕ ಸಮಸ್ಯೆ ಇದೆ ಎಂದು ಅರ್ಥ.
ಇದು ಏಕೆ ಅಪಾಯವೆಂದರೆ, ವ್ಯಕ್ತಿಯ ಮತ್ತು ಸಮುದಾಯಗಳ ಅಹಂಕಾರವನ್ನು ಬಲಗೊಳಿಸುತ್ತದೆ. ಬಲಗೊಳ್ಳುವ ಅಹಂಕಾರವು ಒಳಗೊಳ್ಳುವ ಅಥವಾ ವಿನೀತವಾಗುವ ಅಥವಾ ಸ್ವೀಕರಿಸುವಂತಹ ಯಾವುದೇ ಸಲಿಲತೆಯ ಗುಣವನ್ನು ಕಳೆದುಕೊಳ್ಳುತ್ತವೆ. ಪೆಡುಸಾಗಲಾರಂಭಿಸುತ್ತದೆ. ಇಂತಹ ಪೆಡಸುತನಗಳಿಂದ ದೌರ್ಜನ್ಯಗಳು ಮತ್ತು ದಬ್ಬಾಳಿಕೆಗಳು ಪ್ರಾರಂಭವಾಗಿ ಸಾಮರಸ್ಯ ಕೇಡುತ್ತವೆ. ಸಂಘರ್ಷಗಳು ಪ್ರಾರಂಭವಾಗಿ ಗೆಲುವೇ ಗುರಿಯಾಗುತ್ತವೆ. ಅವರಲ್ಲಿ ಸಂವಾದ ಇರುವುದಿಲ್ಲ. ವಾದಗಳು, ವಿತಂಡವಾದಗಳು, ಕುತರ್ಕಗಳು ಇರುತ್ತವೆ. ಯಾವುದರದ್ದೇ ವಾದಿಗಳು ತಾವು ತಮ್ಮ ವಾದದಲ್ಲಿ ಗೆಲ್ಲಬೇಕೆಂದು ಬಯಸುತ್ತಾರೆ.
ಅವರು ತಮ್ಮ ವಿರುದ್ಧ ಸಿದ್ಧಾಂತದವರನ್ನು ಎದುರಾಗುವುದೇ ತಾವು ಶ್ರೇಷ್ಟ, ನೀವು ಕನಿಷ್ಟ ಎಂಬುದನ್ನು ಸಾಧಿಸಿ ತೋರಿಸಲಿಕ್ಕೆ. ಹಾಗಾಗಿ ಅವರು ತಮ್ಮ ಎದುರಾಳಿಗಳ ಮಾತುಗಳನ್ನು ಕೇಳುವುದೇ ಇಲ್ಲ. ಅವರು ತಮಗೆ ಆಕ್ರಮಣ ಮಾಡಬೇಕೆಂದು ಬಯಸುತ್ತಿರುತ್ತಾರೆ. ಬುಲ್ ಫೈಟಲ್ಲಿ ಇದ್ದಂತೆ. ಕೆಂಪು ಬಟ್ಟೆಯನ್ನು ತೋರಿಸಿ ತೋರಿಸಿ ಕೆಣಕಿ ಗೂಳಿಯು ಮಲ್ಲನನ್ನು ಕೆಣಕಲು ಬಂದಾಗ ಅವನು ಅದನ್ನು ತಡೆದು ಅಥವಾ ಎತ್ತಿ ಎಸೆದು ತನ್ನ ಬಹುಪರಾಕ್ರಮವನ್ನು ತೋರಿಸುವಂತೆ, ತನ್ನ ಶಕ್ತಿ ಪ್ರದರ್ಶನ ಮಾಡುವಂತೆ, ವಾದಿಗಳೂ ತಮ್ಮ ಎದುರಾಳಿಗಳನ್ನು ಕೆಣಕುತ್ತಾರೆ. ಅವರು ಆಕ್ರಮಣ ಮಾಡಿದರೆ ಇವರು ಪ್ರತ್ಯಾಕ್ರಮಣವನ್ನು ಮಾಡಿ ತಮ್ಮ ಶಕ್ತಿಯನ್ನು, ಕೋಪವನ್ನು ತೋರಿ ಮೇಲ್ಗೈಯನ್ನು ಸಾಧಿಸಬಹುದು. ಇದು ಮೇಲರಿಮೆಗಳ ಮೇಲಾಟಗಳ ಕಣ್ಣು ಮುಚ್ಚಾಲೆಯಾಟ.
ರೋಗ ಲಕ್ಷಣಗಳು
ವ್ಯಕ್ತಿಗಳಲ್ಲಿನ ಮೇಲರಿಮೆಯ ಲಕ್ಷಣಗಳನ್ನು ಗುರುತಿಸುವುದ ತಿಳಿದರೆ, ಅದೇ ರೀತಿಯಲ್ಲಿ ಸಾಮುದಾಯಿಕವಾಗಿಯೂ ಸಮಾಜದಲ್ಲಿ ಅದನ್ನು ಗುರುತಿಸಬಹುದು. ವ್ಯಕ್ತಿಯೊಬ್ಬನ ಮಾನಸಿಕ ಆರೋಗ್ಯವು ಸಮಾಜದ ಮಾನಸಿಕ ಆರೋಗ್ಯಕ್ಕೆ ತೀರಾ ಅವಶ್ಯಕ. ಏಕೆಂದರೆ ವ್ಯಕ್ತಿ ವ್ಯಕ್ತಿಗಳಿಂದಲೇ ಸಮುದಾಯ ಮತ್ತು ಸಮಾಜ ಎಂದು ಮರೆಯದಿರೋಣ.
ಪ್ರಾರಂಭಿಕ ಲಕ್ಷಣ; ತಮ್ಮ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು. ತಾವೆಷ್ಟು ಮೌಲ್ಯವುಳ್ಳವರು ಎಂದು ಪದೇಪದೇ ನಿರೂಪಿಸಲು ಯತ್ನಿಸುತ್ತಿರುವುದು.
ನಂತರ, ತಮ್ಮಲ್ಲಿರುವ ಕುಂದುಕೊರತೆಗಳನ್ನು ಅಥವಾ ಲೋಪದೋಷಗಳನ್ನು ಒಪ್ಪದಿರುವುದು. ಯಾರಾದರೂ ಅದಕ್ಕೆ ಬೆರಳು ಮಾಡಿ ತೋರಿಸಿದರೆ ವಾದಗಳಿಂದ ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು. ಸಮಜಾಯಿಷಿ ಕೊಟ್ಟುಕೊಳ್ಳುವುದು. ತಮ್ಮನ್ನು ತಾವು ಇತರರೊಂದಿಗೆ ಮೇಲ್ಸ್ತರದಲ್ಲಿ ಹೋಲಿಸಿಕೊಳ್ಳುವುದು.
ತಾವೆಷ್ಟು ಘನತೆಯುಳ್ಳವರು, ಪ್ರತಿಷ್ಟೆ ಎಂತದ್ದು, ತಮ್ಮ ಗೌರವ ಎಂದರೆ ಏನು ಎಂಬುದನ್ನು ತೋರ್ಪಡಿಕೊಳ್ಳುತ್ತಿರುವುದು ಮತ್ತು ಸಾಬೀತುಪಡಿಸಲು ಯತ್ನಿಸುತ್ತಿರುವುದು.ಇತರರ ವ್ಯಕ್ತಿತ್ವದ ಕುರಿತು ಮಾತಾಡುವುದು, ಇತರರ ಚಾರಿತ್ರ್ಯ ಹರಣಕ್ಕೆ ಪ್ರಯತ್ನಿಸುವುದು ಹಾಗೂ ಇತರರ ಸಣ್ಣ ಪುಟ್ಟ ದೋಷಗಳಿಗೆ ವಿಪರೀತವಾಗಿ ತಲೆಕೆಡಿಸಿಕೊಂಡು ಅದಕ್ಕೆ ಖಂಡನೆ, ಶಿಕ್ಷೆ, ದಂಡನೆ ಎಂದೆಲ್ಲಾ ಹುಯಿಲೆಬ್ಬಿಸುತ್ತಿರುವುದು. ಏಕೆಂದರೆ ಇತರರನ್ನು ಅಪರಾಧಿಯಾಗಿಸಿ ತಮ್ಮನ್ನು ತೀರ್ಪುಗಾರರನ್ನಾಗಿಸಿಕೊಳ್ಳುವುದರಲ್ಲಿ ಈ ಅರಿಮೆಗೆ ಭಾರೀ ಖುಷಿ.
ಎಲ್ಲವೂ ತಮ್ಮ ಕೇಂದ್ರಿತವಾಗಿರಬೇಕೆಂಬ ಬಯಕೆ ಅವರದು. ಒಂದು ಶಾಲೆಯಲ್ಲಿ ಸಣ್ಣ ಮಗುವೊಂದು ಚೆನ್ನಾಗಿ ಓದುವುದು ಬರೆಯುವುದು ಮಾಡುತ್ತದೆ. ಆದರೆ ಶಿಕ್ಷಕರು ಅದಕ್ಕೇ ವಿಶೇಷ ಗಮನ ಕೊಡಬೇಕೆಂದು ಅದು ಬಯಸುತ್ತದೆ. ಮಗುವು ಶೌಚಾಲಯಕ್ಕೆಲ್ಲಾದರೂ ಹೋದಾಗ ಪಾಠವನ್ನು ಪ್ರಾರಂಭಿಸಿಬಿಟ್ಟಿದ್ದರೆ ಅಥವಾ ಮುಂದುವರಿಸಿಬಿಟ್ಟಿದ್ದರೆ ಗಲಾಟೆ ಮಾಡುತ್ತದೆ. ಮತ್ತೆ ಪ್ರಾರಂಭಿಸಲು ಬಯಸುತ್ತದೆ. ಎಲ್ಲರ ಎದುರಿಗೆ ತನ್ನನ್ನು ಸರಿಪಡಿಸಲು ಒಪ್ಪುವುದಿಲ್ಲ. ಅವಮಾನವಾಯಿತೆಂದು ಅಳುತ್ತದೆ. ಹಟ ಹಿಡಿಯುತ್ತದೆ. ಇದು ಮಗುವಾಗಿರುವುದರಿಂದ ನೇರವಾಗಿ ಅಭಿವ್ಯಕ್ತಗೊಳಿಸುತ್ತದೆ. ಆದರೆ ಹಿರಿಯರಾದವರಲ್ಲಿ ಈ ಬಗೆಯ ಅರಿಮೆ ಇದ್ದಲ್ಲಿ ಇಷ್ಟು ನೇರವಾಗಿ ಮತ್ತು ಮಗುವಿನ ರೀತಿಯಲ್ಲಿ ವ್ಯಕ್ತಪಡಿಸದಿದ್ದರೂ, ಆ ಮಗುವಿನ ಮನೋಭಾವವೇ ಅವರದಾಗಿರುತ್ತದೆ. ಅದನ್ನು ಬೇರೊಂದು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ.
ಆತ್ಮರತಿಯ ಮತ್ತೊಂದು ಪದರವೇ ಮೇಲರಿಮೆಯಾಗಿರುವುದರಿಂದ ಅದರ ಮತ್ತು ಇದರ ಹಲವಾರು ಲಕ್ಷಣಗಳಲ್ಲಿ ಸಾಮ್ಯತೆಗಳಿವೆ.
ಮೇಲರಿಮೆಯವರೂ ತಮ್ಮನ್ನು ಬಿರುದುಬಾವಲಿಗಳಿಂದ ಪರಾಕುಗೊಳ್ಳಲು ಬಯಸುತ್ತಿರುತ್ತಾರೆ. ತಮ್ಮ ಅಂಕೆಯಲ್ಲಿ, ನಿಯಂತ್ರಣದಲ್ಲಿ ವಿಷಯಗಳು, ಸಂಗತಿಗಳು ಇರಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲದೇ, ಸಾರ್ವಜನಿಕ ಸಮಾರಂಭಗಳಲ್ಲಿತಮ್ಮ ಗೌರವ ಘನತೆಯನ್ನು ನೋಡಿ ಉಳಿದವರು ಮಸುಕಾಗುವಂತಹ ಪೆÇ್ರೀಟೋಕಾಲುಗಳು ಇರಬೇಕೆಂದು ಬಯಸುತ್ತಾರೆ.
ಉಫ್, ಒಟ್ಟಾರೆ ತಾನು ಮೇಲು, ಶ್ರೇಷ್ಟ ಎಂಬ ಅರಿಮೆಯು ಗೀಳಿನಂತಹ ಅಥವಾ ವ್ಯಸನದಂತಹ ಒಂದು ಮನೋರೋಗ. ಅದನ್ನು ಆತ್ಮಾಭಿಮಾನ ಮತ್ತು ಸ್ವಾಭಿಮಾನ ಇತ್ಯಾದಿಗಳಿಂದ ಕರೆದುಕೊಂಡು ಮನಸ್ಸಿನ ಆರೋಗ್ಯಕ್ಕೆ ವಂಚಿಸಬಾರದು. ಸ್ವಾಭಿಮಾನಕ್ಕೂ, ಅಹಂಕಾರಕ್ಕೂ, ಹೆಮ್ಮೆಗೂ, ಮೇಲರಿಮೆಗೂ ವ್ಯತ್ಯಾಸಗಳಿವೆ. ಮುಂದೆ ನೋಡೋಣ.
(ಮುಂದುವರಿಯುವುದು)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಕೆಲವೇ ಕೆಲವು ಧ್ವನಿಗಳು ಕಾಲವನ್ನು ಮೀರಿ ಅಮರತ್ವ ಪಡೆದಿವೆ. ಅಂತಹ ಅಮರ ಸ್ವರಗಳಲ್ಲಿ ಅತ್ಯಂತ ಪ್ರಕಾಶಮಾನವಾದ ಹೆಸರು ಎಸ್. ಜಾನಕಿ. ತಮ್ಮ ಅಪೂರ್ವ ಕಂಠಸಿರಿಯಿಂದ ಆರು ದಶಕಗಳಿಗೂ ಹೆಚ್ಚು ಕಾಲ ಕೋಟ್ಯಂತರ ಸಂಗೀತಾಭಿಮಾನಿಗಳ ಹೃದಯವನ್ನು ಗೆದ್ದಿದ್ದ ಈ ಮಹಾನ್ ಹಿನ್ನೆಲೆ ಗಾಯಕಿ ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನವು ಕೇವಲ ಒಬ್ಬ ಗಾಯಕಿಯ ಅಗಲಿಕೆಯಲ್ಲ; ಭಾರತೀಯ ಸಂಗೀತ ಪರಂಪರೆಯ ಒಂದು ಮಹತ್ತರ ಯುಗದ ಅಂತ್ಯವಾಗಿದೆ.
ಸಂಗೀತವು ಭಾಷೆಯ ಎಲ್ಲೆಗಳನ್ನು ಮೀರಿ ಹೃದಯವನ್ನು ತಲುಪುವ ಮಾಧ್ಯಮ. ಆ ಸತ್ಯವನ್ನು ತಮ್ಮ ಗಾಯನದ ಮೂಲಕ ಸಾಬೀತುಪಡಿಸಿದ ಕಲಾವಿದೆ ಎಸ್. ಜಾನಕಿ. ಅವರು ಹಾಡಿದ ಸಾವಿರಾರು ಗೀತೆಗಳು ಇಂದಿಗೂ ಪ್ರೀತಿ, ವಿರಹ, ಭಕ್ತಿ, ಮಾತೃತ್ವ, ಸಂತೋಷ ಮತ್ತು ಬದುಕಿನ ಸೂಕ್ಷ್ಮ ಭಾವನೆಗಳಿಗೆ ಧ್ವನಿಯಾಗಿವೆ. ಅವರ ಕಂಠ ಕೇಳಿದ ಕ್ಷಣವೇ ಹಾಡಿನ ಪಾತ್ರ ಜೀವಂತವಾಗಿ ಕಣ್ಣೆದುರು ಮೂಡುತ್ತಿತ್ತು. ಅದೇ ಅವರ ಗಾಯನದ ಮಹತ್ವ.
ಸಾಮಾನ್ಯ ಕುಟುಂಬದಿಂದ ಸಂಗೀತ ಸಾಮ್ರಾಜ್ಯದವರೆಗೆ
1938ರ ಏಪ್ರಿಲ್ 23ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಸಮೀಪ ಜನಿಸಿದ ಜಾನಕಿ, ಬಾಲ್ಯದಿಂದಲೇ ಸಂಗೀತದತ್ತ ಅತೀವ ಆಸಕ್ತಿ ಹೊಂದಿದ್ದರು. ಮನೆಯಲ್ಲಿದ್ದ ಸಂಗೀತದ ವಾತಾವರಣವೇ ಅವರ ಪ್ರತಿಭೆಗೆ ಮೊದಲ ಪ್ರೇರಣೆ. ಸಂಪ್ರದಾಯಬದ್ಧ ಸಂಗೀತ ಶಿಕ್ಷಣ ಸೀಮಿತವಾಗಿದ್ದರೂ, ದೇವರು ನೀಡಿದ ಸಹಜ ಕಂಠವೇ ಅವರನ್ನು ಅಪರೂಪದ ಗಾಯಕಿಯನ್ನಾಗಿ ರೂಪಿಸಿತು.
ಕುಟುಂಬದ ಬೆಂಬಲದೊಂದಿಗೆ ಅವರು ಆಗಿನ ಮದ್ರಾಸಿಗೆ ತೆರಳಿ ಹಿನ್ನೆಲೆ ಗಾಯನದಲ್ಲಿ ಅವಕಾಶ ಹುಡುಕಿದರು. ಆರಂಭದ ದಿನಗಳು ಸುಲಭವಾಗಿರಲಿಲ್ಲ. ಆದರೆ ಪ್ರತಿಭೆ, ಶ್ರಮ ಮತ್ತು ಸಂಗೀತದ ಮೇಲಿನ ಅಚಲ ನಿಷ್ಠೆ ಅವರನ್ನು ಬೇಗನೇ ಸಂಗೀತ ನಿರ್ದೇಶಕರ ಗಮನಕ್ಕೆ ತಂದಿತು. 1957ರಲ್ಲಿ ಆರಂಭವಾದ ಅವರ ಗಾಯನಯಾನ, ನಂತರ ಭಾರತದ ಸಂಗೀತ ಇತಿಹಾಸದಲ್ಲೇ ಅತ್ಯಂತ ದೀರ್ಘ ಹಾಗೂ ಯಶಸ್ವಿ ಪಯಣಗಳಲ್ಲಿ ಒಂದಾಗಿ ಬೆಳೆಯಿತು.
ಭಾಷೆಗಳ ಗಡಿಗಳನ್ನು ಮೀರಿ ಮೊಳಗಿದ ಧ್ವನಿ
ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ, ಒಡಿಯಾ, ತುಳು, ಕೊಂಕಣಿ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ಅವರು ಸಾವಿರಾರು ಹಾಡುಗಳನ್ನು ಹಾಡಿದರು. ವಿವಿಧ ಮೂಲಗಳ ಪ್ರಕಾರ ಅವರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ಪ್ರತಿ ಭಾಷೆಯ ಉಚ್ಚಾರಣೆಯನ್ನು ಅತ್ಯಂತ ಶ್ರದ್ಧೆಯಿಂದ ಕಲಿತು, ಆ ಭಾಷೆಯವರೇ ಹಾಡಿದಂತೆ ಹಾಡುವುದು ಅವರ ವಿಶೇಷತೆ. ಅದಕ್ಕಾಗಿಯೇ ಅವರು ಹಾಡಿದ ಗೀತೆಗಳನ್ನು ಯಾವ ರಾಜ್ಯದ ಜನರೂ ತಮ್ಮದೇ ಭಾಷೆಯ ಹಾಡುಗಳೆಂದು ಪ್ರೀತಿಸಿದರು. ಒಬ್ಬ ಗಾಯಕಿಗೆ ಇದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ.
ಕನ್ನಡಿಗರ ಮನದ ಜಾನಕಿ
ಕರ್ನಾಟಕದ ಸಂಗೀತಾಸಕ್ತರಿಗೆ ಎಸ್. ಜಾನಕಿ ಎಂದರೆ ವಿಶೇಷವಾದ ಭಾವನಾತ್ಮಕ ಬಂಧ. ಕನ್ನಡ ಚಿತ್ರರಂಗದ ಸುವರ್ಣಯುಗದ ನೂರಾರು ಅಮರಗೀತೆಗಳಿಗೆ ಅವರು ಜೀವ ತುಂಬಿದ್ದಾರೆ.
ಡಾ. ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಅನಂತ್ ನಾಗ್, ರಮೇಶ್ ಅರವಿಂದ್ ಸೇರಿದಂತೆ ಹಲವು ತಲೆಮಾರಿನ ನಟ–ನಟಿಯರ ಭಾವನೆಗಳಿಗೆ ಅವರ ಧ್ವನಿಯೇ ಆತ್ಮವಾಗಿತ್ತು.
ವಿಜಯಭಾಸ್ಕರ್, ಜಿ.ಕೆ. ವೆಂಕಟೇಶ್, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಹಂಸಲೇಖ ಸೇರಿದಂತೆ ಕನ್ನಡದ ಶ್ರೇಷ್ಠ ಸಂಗೀತ ನಿರ್ದೇಶಕರೊಂದಿಗೆ ಅವರು ನೀಡಿದ ಹಾಡುಗಳು ಇಂದಿಗೂ ಸಂಗೀತಾಸಕ್ತರ ತುಟಿಗಳಲ್ಲಿ ಜೀವಂತವಾಗಿವೆ.
ಪ್ರೇಮಗೀತೆಗಳಾಗಲಿ, ಭಕ್ತಿಗೀತೆಗಳಾಗಲಿ, ಜಾನಪದ ಸೊಗಡಿನ ಹಾಡುಗಳಾಗಲಿ ಅಥವಾ ವಿರಹದ ಮೌನವನ್ನು ಹೇಳುವ ಮಧುರಗೀತೆಗಳಾಗಲಿ—ಜಾನಕಿ ಅವರ ಧ್ವನಿ ಪ್ರತಿಯೊಂದು ಭಾವಕ್ಕೂ ಹೊಸ ಅರ್ಥ ನೀಡುತ್ತಿತ್ತು.
ಇಳಯರಾಜಾ–ಜಾನಕಿ: ಸಂಗೀತದ ಅದ್ಭುತ ಜೋಡಿ
ತಮಿಳು ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕ ಇಳಯರಾಜಾ ಮತ್ತು ಎಸ್. ಜಾನಕಿ ಅವರ ಸಂಗಮ ಭಾರತೀಯ ಚಿತ್ರಸಂಗೀತದ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.
ಇಳಯರಾಜಾ ಅವರ ಸಂಗೀತದ ಸೂಕ್ಷ್ಮ ಭಾವಗಳನ್ನು ಜಾನಕಿ ತಮ್ಮ ಧ್ವನಿಯಲ್ಲಿ ಜೀವಂತಗೊಳಿಸುತ್ತಿದ್ದರು. ಈ ಜೋಡಿಯ ಅನೇಕ ಗೀತೆಗಳು ಇಂದಿಗೂ ದಕ್ಷಿಣ ಭಾರತದ ಸಂಗೀತಾಭಿಮಾನಿಗಳ ನಿತ್ಯ ಸಂಗಾತಿಗಳಾಗಿವೆ.
ಅದೇ ರೀತಿ ಎಂ.ಎಸ್. ವಿಶ್ವನಾಥನ್, ಕೆ.ವಿ. ಮಹಾದೇವನ್, ಚಕ್ರವರ್ತಿ, ಹಂಸಲೇಖ, ರಾಜನ್–ನಾಗೇಂದ್ರ, ವಿಜಯಭಾಸ್ಕರ್ ಮೊದಲಾದ ದಿಗ್ಗಜರ ಸಂಗೀತಕ್ಕೂ ಅವರು ವಿಶಿಷ್ಟ ಕಂಠಸಿರಿ ನೀಡಿದ್ದಾರೆ.
ಧ್ವನಿಯೊಳಗಿದ್ದ ಸಾವಿರ ರೂಪಗಳು
ಎಸ್. ಜಾನಕಿ ಅವರ ಗಾಯನದ ಅತ್ಯಂತ ದೊಡ್ಡ ವೈಶಿಷ್ಟ್ಯವೆಂದರೆ ಧ್ವನಿಯ ರೂಪಾಂತರ. ಒಂದು ಹಾಡಿನಲ್ಲಿ ಮಗು ಮಾತನಾಡಿದಂತೆ ಹಾಡಬಲ್ಲರು; ಮತ್ತೊಂದು ಹಾಡಿನಲ್ಲಿ ವಯಸ್ಸಾದ ಮಹಿಳೆಯ ಭಾವನೆ ಮೂಡಿಸುತ್ತಿದ್ದರು. ಕೆಲವೊಮ್ಮೆ ಗ್ರಾಮೀಣ ಹುಡುಗಿಯ ಮುಗ್ಧತೆ, ಮತ್ತೊಮ್ಮೆ ನಗರ ಮಹಿಳೆಯ ಆತ್ಮವಿಶ್ವಾಸ, ಇನ್ನೊಮ್ಮೆ ತಾಯಿಯ ಮಮತೆ, ಮತ್ತೆ ಭಕ್ತೆಯ ಪ್ರಾರ್ಥನೆ—ಪ್ರತಿ ಭಾವಕ್ಕೂ ಬೇರೆ ಧ್ವನಿಯನ್ನು ನೀಡುವ ಸಾಮರ್ಥ್ಯ ಅವರಿಗೆ ಮಾತ್ರ ಸಾಧ್ಯವಾಗಿತ್ತು. ಅವರ ಧ್ವನಿ ಕೇವಲ ಸಂಗೀತವಲ್ಲ; ಅದು ಅಭಿನಯವೂ ಆಗಿತ್ತು.
ಶ್ರಮ, ಶಿಸ್ತು ಮತ್ತು ಪರಿಪೂರ್ಣತೆಯ ಪ್ರತೀಕ
ಒಂದು ಹಾಡನ್ನು ಹಾಡುವ ಮೊದಲು ಅದರ ಸಾಹಿತ್ಯವನ್ನು ಸಂಪೂರ್ಣ ಅರ್ಥೈಸಿಕೊಳ್ಳುವುದು ಅವರ ಅಭ್ಯಾಸ. ಉಚ್ಚಾರಣೆಯಲ್ಲಿ ಯಾವುದೇ ತಪ್ಪು ಆಗಬಾರದು ಎಂಬ ಕಾರಣಕ್ಕೆ ಹೊಸ ಭಾಷೆಗಳನ್ನು ಸಹ ಕಲಿಯುತ್ತಿದ್ದರು.
ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಸಮಯಪಾಲನೆ, ಶಿಸ್ತು ಹಾಗೂ ಸಂಗೀತದ ಮೇಲಿನ ಅಪಾರ ಗೌರವದಿಂದ ಅವರು ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಸಂಗೀತ ನಿರ್ದೇಶಕರು ಅನೇಕ ಬಾರಿ ಹೇಳಿದ್ದೇನಂದರೆ, ಜಾನಕಿ ಹಾಡನ್ನು ಒಮ್ಮೆ ಅರ್ಥ ಮಾಡಿಕೊಂಡರೆ ಅದನ್ನು ಮತ್ತೆ ವಿವರಿಸುವ ಅಗತ್ಯವೇ ಇರಲಿಲ್ಲ.
ಪ್ರಶಸ್ತಿಗಳಿಗಿಂತ ದೊಡ್ಡದು ಜನರ ಪ್ರೀತಿ
ಎಸ್. ಜಾನಕಿ ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿವಿಧ ರಾಜ್ಯ ಸರ್ಕಾರಗಳಿಂದ ಮೂವತ್ತಕ್ಕೂ ಅಧಿಕ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಅವರಿಗೆ ಸಂದಿವೆ. ಆದರೆ ಅವರು ಎಂದಿಗೂ ಪ್ರಶಸ್ತಿಗಳಿಗಾಗಿ ಹಾಡಲಿಲ್ಲ. ಸಂಗೀತವೇ ಅವರ ಧ್ಯಾನ, ಗಾಯನವೇ ಅವರ ಪೂಜೆ.
ಪದ್ಮಭೂಷಣ ಪ್ರಶಸ್ತಿಯನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದು ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ತಮ್ಮ ಸಾಧನೆಗೆ ತಡವಾಗಿ ಗೌರವ ನೀಡಲಾಗಿದೆ ಎಂಬ ಭಾವನೆಯನ್ನು ಅವರು ಅತ್ಯಂತ ಗೌರವಯುತವಾಗಿ ವ್ಯಕ್ತಪಡಿಸಿದ್ದರು.
ಎಸ್.ಪಿ.ಬಿ.–ಜಾನಕಿ: ಮರೆಯಲಾಗದ ಸಂಗೀತಯಾನ
ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಜೋಡಿ ಭಾರತೀಯ ಚಿತ್ರಸಂಗೀತದ ಅತ್ಯಂತ ಜನಪ್ರಿಯ ಗಾಯನ ಜೋಡಿಗಳಲ್ಲಿ ಒಂದು.
ಅವರಿಬ್ಬರು ಹಾಡಿದ ಸಾವಿರಾರು ಯುಗಲಗೀತೆಗಳು ಇಂದಿಗೂ ರೇಡಿಯೋಗಳಲ್ಲಿ, ಸಂಗೀತ ಕಾರ್ಯಕ್ರಮಗಳಲ್ಲಿ ಮತ್ತು ಅಭಿಮಾನಿಗಳ ನೆನಪುಗಳಲ್ಲಿ ಸದಾ ಕೇಳಿಸುತ್ತಿವೆ.ಇವರ ಗಾಯನದಲ್ಲಿ ಸ್ಪರ್ಧೆಯಿರಲಿಲ್ಲ; ಪರಸ್ಪರ ಪೂರಕವಾದ ಸಂಗೀತ ಮಾತ್ರ ಇತ್ತು.
ಸರಳತೆಯೇ ಅವರ ಅಲಂಕಾರ
ಅಸಂಖ್ಯಾತ ಪ್ರಶಸ್ತಿಗಳು, ಲಕ್ಷಾಂತರ ಅಭಿಮಾನಿಗಳು, ದೇಶವ್ಯಾಪಿ ಖ್ಯಾತಿ—ಇವೆಲ್ಲ ಇದ್ದರೂ ಎಸ್. ಜಾನಕಿ ಅತ್ಯಂತ ಸರಳ ಜೀವನ ನಡೆಸಿದರು.ವೇದಿಕೆಯಲ್ಲಿ ಎಂದಿಗೂ ಆಡಂಬರ ತೋರಲಿಲ್ಲ. ಸಂದರ್ಶನಗಳಲ್ಲಿಯೂ ತಮ್ಮ ಸಾಧನೆಗಿಂತ ಸಂಗೀತದ ಮಹತ್ವದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು.ಹೊಸ ಗಾಯಕರಿಗೆ ಪ್ರೋತ್ಸಾಹ ನೀಡುವುದು, ಅವರನ್ನು ಮೆಚ್ಚುವುದು ಮತ್ತು ಸಂಗೀತವನ್ನು ಗೌರವಿಸುವಂತೆ ಸಲಹೆ ನೀಡುವುದು ಅವರ ಸ್ವಭಾವವಾಗಿತ್ತು.
ಹೊಸ ತಲೆಮಾರಿನಲ್ಲೂ ಜೀವಂತ ಧ್ವನಿ
ಡಿಜಿಟಲ್ ಸಂಗೀತದ ಯುಗದಲ್ಲಿಯೂ ಎಸ್. ಜಾನಕಿ ಅವರ ಹಾಡುಗಳ ಜನಪ್ರಿಯತೆ ಕಡಿಮೆಯಾಗಲಿಲ್ಲ. ಯೂಟ್ಯೂಬ್, ಸಂಗೀತ ಆ್ಯಪ್ಗಳು, ರಿಯಾಲಿಟಿ ಶೋಗಳು, ಸಾಮಾಜಿಕ ಜಾಲತಾಣಗಳು—ಎಲ್ಲೆಡೆ ಅವರ ಹಾಡುಗಳು ಹೊಸ ತಲೆಮಾರಿನ ಕಿವಿಗಳಿಗೆ ತಲುಪುತ್ತಲೇ ಇವೆ. ಇಂದಿನ ಅನೇಕ ಯುವ ಗಾಯಕ–ಗಾಯಕಿಯರು ತಮ್ಮ ಸಂಗೀತಯಾನದ ಪ್ರೇರಣೆಯಾಗಿ ಜಾನಕಿ ಅವರನ್ನು ಉಲ್ಲೇಖಿಸುತ್ತಾರೆ.
ಸಂಗೀತ ಲೋಕದ ಕಂಬನಿ
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದೇಶದಾದ್ಯಂತ ಸಂಗೀತ ಲೋಕದಲ್ಲಿ ಶೋಕದ ಛಾಯೆ ಆವರಿಸಿತು. ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕ–ಗಾಯಕಿಯರು, ಸಾಹಿತ್ಯಿಕರು, ರಾಜಕೀಯ ನಾಯಕರು ಹಾಗೂ ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಭಾವಪೂರ್ಣ ನಮನ ಸಲ್ಲಿಸಿದರು.
“ಒಂದು ಯುಗ ಮುಗಿಯಿತು”, “ಗಾನಕೋಗಿಲೆಯ ಧ್ವನಿ ಎಂದೆಂದಿಗೂ ಜೀವಂತ”, “ನಮ್ಮ ಜೀವನದ ನೆನಪುಗಳಿಗೆ ಹಿನ್ನೆಲೆ ಸಂಗೀತ ನೀಡಿದ ಧ್ವನಿ” ಎಂಬ ಮಾತುಗಳು ಎಲ್ಲೆಡೆ ಕೇಳಿಬಂದವು.
ಕನ್ನಡಿಗರ ನೆನಪಿನಲ್ಲಿ ಎಂದೆಂದಿಗೂ
ಕರ್ನಾಟಕದ ಮನೆಮನೆಗಳಲ್ಲೂ ಎಸ್. ಜಾನಕಿ ಅವರ ಹಾಡುಗಳು ಇಂದಿಗೂ ಬೆಳಗಿನ ಭಕ್ತಿಗೀತೆಗಳಾಗಿ, ಪ್ರೇಮಗೀತೆಗಳಾಗಿ, ಹಬ್ಬದ ಸಂಭ್ರಮವಾಗಿ, ಬದುಕಿನ ನೆನಪುಗಳಾಗಿ ಮೊಳಗುತ್ತಿವೆ.
ಅವರ ಧ್ವನಿ ಅನೇಕ ಕುಟುಂಬಗಳ ಭಾವನೆಗಳ ಒಂದು ಭಾಗವಾಗಿದೆ. ತಾಯಿಯ ನೆನಪಿನಲ್ಲಿ, ಪ್ರೀತಿಯ ನೆನಪಿನಲ್ಲಿ, ಬಾಲ್ಯದ ನೆನಪಿನಲ್ಲಿ, ಹಬ್ಬದ ಸಂಭ್ರಮದಲ್ಲಿ—ಎಲ್ಲೆಲ್ಲೂ ಜಾನಕಿ ಅವರ ಹಾಡುಗಳಿವೆ.
ಸ್ವರ ಮೌನವಾದರೂ…
ಕಾಲ ಬದಲಾಗಬಹುದು. ಸಂಗೀತದ ಶೈಲಿಗಳು ಬದಲಾಗಬಹುದು. ಹೊಸ ತಂತ್ರಜ್ಞಾನಗಳು ಬರಬಹುದು. ಆದರೆ ಭಾವನೆಗೆ ಜೀವ ತುಂಬುವ ಧ್ವನಿಗಳು ಅಪರೂಪ.
ಎಸ್. ಜಾನಕಿ ಅಂತಹ ಅಪರೂಪದ ಧ್ವನಿ. ಅವರ ದೇಹ ನಮ್ಮೊಂದಿಗಿಲ್ಲ. ಆದರೆ ಅವರು ಹಾಡಿದ ಪ್ರತಿಯೊಂದು ಗೀತೆ ಮುಂದಿನ ಹಲವು ತಲೆಮಾರುಗಳಿಗೂ ಬದುಕಿನ ಸಂಗಾತಿಯಾಗಿರುತ್ತದೆ. ಸಂಗೀತ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿಟ್ಟು ಮುಂದೆ ಸಾಗುವುದು ಅಸಾಧ್ಯ. ಮರಣವು ಒಬ್ಬ ವ್ಯಕ್ತಿಯನ್ನು ಮಾತ್ರ ಕಸಿದುಕೊಳ್ಳಬಹುದು; ಅವರು ಸೃಷ್ಟಿಸಿದ ಕಲೆಯನ್ನು ಅಲ್ಲ.
ಎಸ್. ಜಾನಕಿ ಅವರ ಸ್ವರ ಇಂದು ಮೌನವಾಗಿದೆ. ಆದರೆ ಅವರು ಹಾಡಿದ ಸಾವಿರಾರು ಗೀತೆಗಳು ಭಾರತೀಯ ಸಂಗೀತಾಕಾಶದಲ್ಲಿ ಶಾಶ್ವತವಾಗಿ ಪ್ರತಿಧ್ವನಿಸುತ್ತಲೇ ಇರುತ್ತವೆ.
ಅವರ ಕಂಠಸಿರಿ ಕಾಲವನ್ನು ಮೀರಿದೆ.
ಅವರ ಸಂಗೀತ ತಲೆಮಾರುಗಳನ್ನು ಮೀರಿದೆ.
ಅವರ ನೆನಪು ಎಂದಿಗೂ ಅಳಿಯದು.
ಸ್ವರ ಮೌನವಾಗಿದೆ… ಆದರೆ ಸಂಗೀತ ಅಮರವಾಗಿದೆ. ಅದೇ ಎಸ್. ಜಾನಕಿ ಅವರ ಶಾಶ್ವತ ಪರಂಪರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ದೇವರ ಹೂವು
~ ಡಾ. ಸಿ.ಬಿ.ಐನಳ್ಳಿ
ಊಟ ಮಾಟ ವೇಷ ಭಾಷೆ
ಪ್ರಾರ್ಥನೆ ಬೇರೆ ಬೇರೆ
ಪವಿತ್ರಪಠ್ಯ ಅವನದೊಂದು
ನನ್ನದಿನ್ನೊಂದಂತೆ
ನದಿ ದಂಡೆಯ ಮೇಲೆ
ನೋಟ ಬೆರೆತು ಮಾತು ಮರೆತು
ಮೈತ್ರಿ ಮೊಳೆಯಿತು
ಎಷ್ಟು ಬಿಗಿದಪ್ಪಿಕೊಂಡರೂ
ಉಳಿಯುತ್ತಿತ್ತು ನಡುವೆ ಸಣ್ಣ ಪೊಳ್ದಾಣ
ಹೂದೋಟದ ದುಂಬಿ ಸತತ ಮೂರು
ವಸಂತದ ಗಾಳಿ ಅಣಕಿಸಿದಾಗ
ಪರಾಗಸ್ಪರ್ಶಕೆ ಹೊಸ ಹೂವೊಂದು
ಅರಳಿ ನಿಂತಿತು
ಪೊಳ್ಳಿನ ನೆನಪೇ ಮಾಯವಾಗಿದೆ
ಎಳೆ ಹೂವು ಮೈಮರೆತು
ಹಾಡಿ ಓಡಿ ನಲಿಯುತಿದೆ
ಧರ್ಮ ನನ್ನ ಕಣ್ಣೊಳಗೆ ಜಿನುಗಿ
ಹನಿಯಾಗಿ ಜಾರುತಿದೆ
ಕವಿ ಪರಿಚಯ : ಡಾ. ಸಿ.ಬಿ.ಐನಳ್ಳಿ, ಸಹಾಯಕ ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ, ಕರ್ನಾಟಕ ಕಲಾ ಮಹಾವಿದ್ಯಾಲಯ, ಧಾರವಾಡ
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days agoಮಾಠಾಧೀಶರ ಮೇಲೆ ಹಲ್ಲೆ ; ನಿರ್ಲಕ್ಷಿಸಿದರೆ ದುಷ್ಕೃತ್ಯ ಹೆಚ್ಚಳ ಸಂಭವ; ಕಠಿಣ ಕ್ರಮಕ್ಕೆ ಎಚ್.ಆಂಜನೇಯ ಆಗ್ರಹ
-
ಅಂಕಣ6 days agoಭಾಷೆ ಗಡಿಗಳ ಮೀರಿ ಮೊಳಗಿದ ಧ್ವನಿ ; ಗಾನಕೋಗಿಲೆ ಎಸ್. ಜಾನಕಿ ನಿರ್ಗಮನ
-
ದಿನದ ಸುದ್ದಿ5 days agoಮಾಜಿ ರಾಜ್ಯಸಭಾ ಸದಸ್ಯ ಹೆಚ್ ಹನುಮಂತಪ್ಪ ನಿಧನ
-
ದಿನದ ಸುದ್ದಿ3 days agoಕೆ.ಆರ್.ಐ.ಡಿ.ಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ಗೌಡ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoಎಸ್.ಐ.ಆರ್ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ. 56 ರಷ್ಟು ಪೂರ್ಣ
-
ದಿನದ ಸುದ್ದಿ21 hours agoಸ್ಟಾರ್ ಹೆಲ್ತ್ ಉಚಿತ ವೈದ್ಯಕೀಯ ಸಲಹೆ


