Connect with us

ಅಂತರಂಗ

ಅರಿಮೆಯ ಅರಿವಿರಲಿ – 23 : ನಾನು ದ ಗ್ರೇಟ್

Published

on

  • ಯೋಗೇಶ್ ಮಾಸ್ಟರ್

ದೂರ ಸ್ಥಳದಿಂದ ಕಟ್ಟಡದ ಕೆಲಸಕ್ಕಾಗಿ ಬಂದಿರುವ ಕೂಲಿಕಾರ್ಮಿಕರ ಟೆಂಟುಗಳವು. ನಮ್ಮ ಮನೆಯ ಎದುರಿನ ಮೈದಾನದಲ್ಲೇ ಅವರ ವಾಸ್ತವ್ಯ. ಗಂಡಸರು ಮತ್ತು ಹೆಂಗಸರು ಒಟ್ಟಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದಾಗ ನಾನೂ ಅವರೊಡನೆ ಸೇರಿಕೊಂಡೆ. ಮಾತಿನಲ್ಲಿ ತಿಳಿಯಿತು ಅವರು ತಮಟೆಗಳನ್ನು ನುಡಿಸುವುದರಲ್ಲಿ ನಿಪುಣರು ಎಂದು. ನಾನು ಹೇಳಿದೆ ನನಗೆ ತಮಟೆ ಸದ್ದಿಗೆ ಕುಣಿಯಲು ಬಹಳ ಇಷ್ಟ. ಹೆಣಕ್ಕೆ ಹೊಡೆಯುವ ಹಲಗೆಗೂ ನಾನು ಕುಣಿಯುವವನೇ ಎಂದೆ. “ಥೂ ಥೂ, ನಾವು ಅವರಲ್ಲರೀ. ನಾವು ದೇವರಿಗೆ ಮಾತ್ರ ತಮಟೆ ಹೊಡೆಯುವವರು” ಎಂದ ಅವರ ಹಿರಿಯರಲ್ಲೊಬ್ಬ. ತಮಟೆ ಹೊಡೆಯುವವರಲ್ಲಿ ನಾವು ಶ್ರೇಷ್ಟ. ಹೆಣಕ್ಕೆ ಹೊಡೆಯುವವರು ಕನಿಷ್ಟ. ಅದಕ್ಕೆ ನಮ್ಮನ್ನು ಹೋಲಿಸಿಬಿಟ್ಟಿರಲ್ಲಾ ಎಂದು ಅವರ ಧೋರಣೆ.

ಕೀಳರಿಮೆಯನ್ನು ಮೆಟ್ಟಲು ತಮಗಿಂತ ಕೀಳಾಗಿರುವವರನ್ನು ಗುರುತಿಸುವ ಧಾವಂತ ವ್ಯಕ್ತಿಗಳಲ್ಲೂ, ಜಾತಿಗಳಲ್ಲೂ, ಜಾತಿಗಳ ಪಂಗಡಗಳಲ್ಲೂ, ಗೋತ್ರಗಳಲ್ಲೂ, ಧರ್ಮಗಳಲ್ಲೂ, ಜನಾಂಗಗಳಲ್ಲೂ, ವೃತ್ತಿಗಳಲ್ಲೂ. ಐಷಾರಾಮದ ಕಾರಿನಲ್ಲಿ ಪ್ರಯಾಣಿಸುತ್ತಿರುವವನು ತನ್ನ ಪಕ್ಕದಲ್ಲಿ ಬರುವ ಕಡೆಮೆ ಬೆಲೆಯ ಕಾರಿನವನ ಕಡೆ ಹರಿಸುವ ದೃಷ್ಟಿಯಲ್ಲಿ ಮೇಲರಿಮೆ ಇದೆ. ಸುಂದರವಾದ ತನ್ನ ಹೆಂಡತಿ ಅಥವಾ ಪ್ರೇಯಸಿಯ ಜೊತೆಯಲ್ಲಿ ಹೆಜ್ಜೆ ಹಾಕುವ ಪುರುಷನಿಗೆ ಇವನ ಕಡೆಗೆ ಅಸೂಯೆಯಿಂದ ನೋಡುವ ಒಂದಷ್ಟು ಕಣ್ಣುಗಳು ಬೇಕು. ಇಷ್ಟು ಸುಂದರವಾಗಿರುವವಳೊಂದಿಗೆ ಹೋಗುತ್ತಿರುವ ಅವನೆಂತಹ ಲಕ್ಕಿ ಎಂದು ಅವರಿವರು ಇವನನ್ನು ನೋಡುತ್ತಿರಬೇಕು.

ನಮ್ಮ ಏರಿಯಾದಲ್ಲಿ ನಮ್ಮ ಮನೆಯೇ ಅತ್ಯಂತ ದೊಡ್ಡದು ಮತ್ತು ಸುಂದರ ಎನ್ನುವ ಖುಷಿ. ನಡೆದುಕೊಂಡು ಹೋಗುವ ಮಕ್ಕಳ ಮುಂದೆ ಸೈಕಲ್ ತುಳಿಯುತ್ತಾ ಹೋಗುವ ಮಕ್ಕಳ ಧಿಮಾಕು. ಹೀಗೇ ಪಟ್ಟಿ ಮಾಡುತ್ತಾ ಹೋದರೆ ಕೊನೆ ಮೊದಲಿಲ್ಲ. ತಾನು ಇತರರಿಗಿಂತ ಒಂದು ಪಟ್ಟು ಹೆಚ್ಚು; ಇದು ಭಾವ. ಅದಕ್ಕೆ ಯಾವುದಾದರೂ ಕಾರಣವಾಗಿರಬಹುದು. ನನ್ನೆದುರು ಇರುವವನ ತಲೆಗೂದಲು ಉದುರಿ ಬೋಳಾಗಿದ್ದು, ನನ್ನ ತಲೆ ತುಂಬ ಕೂದಲಿದೆ; ಇಷ್ಟು ಸಾಕು ನಾನು ಅವನಿಗಿಂತ ಗ್ರೇಟ್ ಆಗುವುದಕ್ಕೆ. ಅವನಿಗೂ ತಲೆಯಲ್ಲಿ ಕೂದಲಿದೆ, ನನಗೂ ಕೂದಲಿದೆ. ಆದರೆ ಅವನದು ಬೆಳ್ಳಗಾಗಿದೆ. ನನ್ನದು ಪೂರ್ತಿ ಕಪ್ಪಗಿದೆ. ಈಗಲೂ ನಾನು ಗ್ರೇಟ್.

ಸ್ಟಾರ್ ವಾರ್

ಇಲ್ಲೊಂದು ಸೊಸೆಯರಿಬ್ಬರ ಕತೆ ನೋಡಿ. ಸುಮ ಶಮ ಇಬ್ಬರೂ ಒಂದು ಮನೆಯ ಸೊಸೆಯರು. ಸುಮ ಶಮಳಿಗಿಂತ ಮೇಲೆಂದು ಭಾವಿಸುತ್ತಾಳೆ. ಏಕೆಂದರೆ ಅವಳು ಹಿರಿ ಸೊಸೆ. ಅವಳೇ ಮನೆಗೆ ಮೊದಲು ಬಂದಿರುವುದು. ಆದರೆ ಶಮ ತಾನೇ ಮೇಲೆಂದು ಭಾವಿಸುತ್ತಾಳೆ. ಏಕೆಂದರೆ ಅವಳು ಸುಮಳಿಗಿಂತ ತೆಳ್ಳಗೆ ಬೆಳ್ಳಗೆ ಇದ್ದಾಳೆ. ಅವಳು ತೆಳ್ಳಗೆ ಬೆಳ್ಳಗೆ ಇದ್ದರೂ ಸುಮ ತಾನೇ ಮೇಲೆನ್ನುತ್ತಾಳೆ ಏಕೆಂದರೆ ಅವಳು ಈ ಮನೆಗೆ ಹೆಚ್ಚು ವರದಕ್ಷಿಣೆ ತಂದಿದ್ದಾಳೆ. ಆದರೂ ಶಮ ತಾನೇ ಮೇಲೆಂದುಕೊಳ್ಳುತ್ತಾಳೆ ಏಕೆಂದರೆ ಅವಳು ವಿದ್ಯಾವಂತೆ ಮತ್ತು ಉದ್ಯೋಗಸ್ಥೆ.

ಆದರೂ ಸುಮ ತಾನು ಮೇಲೆಂದು ಅಂದುಕೊಳ್ಳುತ್ತಾಳೆ ಏಕೆಂದರೆ ಪ್ರತಿಯೊಂದಕ್ಕೂ ಅತ್ತೆ ಮಾವ ತನ್ನನ್ನೇ ಕೇಳುವುದು. ಹಾಗಿದ್ದರೂ ಶಮ ತಾನು ಮೇಲು ಎಂದುಕೊಳ್ಳಲು ಕಾರಣವಿದೆ ಏಕೆಂದರೆ, ಇಂಟರ್ ನೆಟ್‍ನಲ್ಲಿ ಆಗ ಬೇಕಾದ ವ್ಯವಹಾರಕ್ಕೆಲ್ಲಾ ಅವರು ಇವಳನ್ನೇ ಅವಲಂಬಿಸಿರುವುದು. ಹಾಗಿದ್ದರೂ ಶಮನೇ ಗ್ರೇಟು ಏಕೆಂದರೆ ಅವರ ಮನೆಯ ನಾಯಿ ಅವಳಿಗೇ ಬಾಲ ಅಲ್ಲಾಡಿಸುವುದು ಮತ್ತು ಕರೆದ ಕೂಡಲೇ ಬರುವುದು. ಆದರೂ ಶಮ ತಾನೇ ಮೇಲೆಂದು ಅಂದುಕೊಳ್ಳುತ್ತಾಳೆ, ನಾಯಿಗೆ ಅದೆಂತದ್ದೋ ಸಮಸ್ಯೆ ಬಂದಾಗ ಅವಳ ವೆಟರ್ನರಿ ಡಾಕ್ಟರ್ ಫ್ರೆಂಡ್ ಕೊಟ್ಟ ಸಲಹೆಯಿಂದ ಸರಿಹೋಯಿತೆಂದು.

ಒಟ್ಟಾರೆ ಇಬ್ಬರೂ ಸಮ ಸಮ ಅಲ್ಲ, ಅಷ್ಟೇ. ಸ್ಟಾರ್ ವಾರ್ ಗಳು ವಾರಾರಗಿತ್ತಿಗಳಲಿದ್ದಂತೆ ಕಛೇರಿಗಳಲ್ಲಿ, ವಿಧಾನ ಸಭೆಗಳಲ್ಲಿ, ಕಲಾಕ್ಷೇತ್ರಗಳಲ್ಲಿ, ಧಾರ್ಮಿಕ ಪೀಠಗಳಲ್ಲಿ, ಸಾಹಿತ್ಯ ಸಂಸ್ಕೃತಿಯ ಕ್ಷೇತ್ರಗಳಲ್ಲಿ; ಎಲ್ಲಿ ಬೇಕಾದರೂ ಸೂಕ್ಷ್ಮವಾಗಿ ಅವಲೋಕಿಸಿದರೆ ಕಾಣುವುದು. ಇಲ್ಲಿ ಎರಡು ಬಗೆಯ ಮೇಲರಿಮೆಗಳನ್ನು ಗಮನಿಸಿದಿರಿ. ಒಂದು ತನ್ನಲ್ಲಿರುವ ಕೀಳರಿಮೆಯನ್ನು ಮೆಟ್ಟಲು ತನಗಿಂತ ಕೀಳಾಗಿರುವವರನ್ನು ಗುರುತಿಸುವ ಪ್ರಯತ್ನದಲ್ಲಿ ತನ್ನ ಮೇಲರಿಮೆಯನ್ನು ತೃಪ್ತಿಪಡಿಸಿಕೊಳ್ಳುವುದು. ಮತ್ತೊಂದು ಅವರಿಗಿಂತ ತಾನು ಭಿನ್ನ ಅಥವಾ ವಿಶೇಷವಾಗಿರುವ ಕಾರಣದಿಂದ ಶ್ರೇಷ್ಟವೆಂದು ಭಾವಿಸುವುದು. ಎರಡೂ ಕೂಡಾ ಮಾನಸಿಕ ಸಮಸ್ಯೆಯೇ.

ದಮನಕಾರಿ ವ್ಯಸನ

ಶಾಲಾ ಕಾಲೇಜುಗಳಲ್ಲಿ ಹಿರಿಯ ಮಕ್ಕಳು ಹೊಸದಾಗಿ ಸೇರ್ಪಡೆಯಾಗುವ ಮಕ್ಕಳ ಮೇಲೆ ನಡೆಸುವ ದೌರ್ಜನ್ಯ, ರ್ಯಾಗಿಂಗ್ ಕೂಡಾ ಮೇಲರಿಮೆಯ ಕಾರಣವೇ. ಅವರಷ್ಟೇ ಮೇಲೆಂದು ಅಥವಾ ಶ್ರೇಷ್ಟವೆಂದು ಭಾವಿಸಿ ಸುಮ್ಮನಾಗಿಬಿಡುವಂತಿದ್ದರೆ ಹೋಗ್ಲಿ ಬಿಡು ಅತ್ತ ಅಂತ ಸುಮ್ಮನಿದ್ದುಬಿಡಬಹುದಾಗಿತ್ತು. ಆದರೆ ವಿಷಯ ಅಷ್ಟಕ್ಕೇ ನಿಲ್ಲುವುದಿಲ್ಲ. ನನ್ನ ಧರ್ಮ ಅಥವಾ ಜಾತಿ ಎಷ್ಟು ಶ್ರೇಷ್ಟ ಎಂದು ಗೊತ್ತಾದ ಮೇಲೆ ಅದು ಇತರ ಧರ್ಮದವರಿಗೂ ಗೊತ್ತಾಗಬೇಕಲ್ಲಾ. ಅದಕ್ಕೆ ಅವರ ಲೋಪದೋಷಗಳನ್ನು ಹುಡುಕಿ ತೆಗೆದು, ಅದಕ್ಕೆ ಪರ್ಯಾಯವಾಗಿ ತಮ್ಮದು ಅದೆಷ್ಟು ಶ್ರೇಷ್ಟ ಎಂಬುದನ್ನು ಹೇಳುವುದು. ಅವರ ಅವಹೇಳನಕ್ಕೆ ಇಳಿಯುವುದು.

ನನ್ನ ಧರ್ಮದ ಮೇಲರಿಮೆಯನ್ನು ಅವನ ಧರ್ಮದ ಮೇಲರಿಮೆಯು ಒಪ್ಪುವುದಿಲ್ಲವಲ್ಲ; ಅವನೂ ಮತ್ತೊಂದೇನೋ ಹೇಳುತ್ತಾ ದಾಳಿಯಿಡುತ್ತಾನೆ. ಅಲ್ಲಿಗೆ ಕೆಸರೆರಚಾಟ ಪ್ರಾರಂಭವಾಗುತ್ತದೆ. ಸಂಸ್ಕೃತಿ, ಜನಾಂಗ, ಪ್ರದೇಶ, ಪಕ್ಷಗಳು ಹೀಗೆ ಯಾವುದಾದರೂ ನಡೆಯುತ್ತದೆ ಮೇಲರಿಮೆಯನ್ನು ಸಾಧಿಸಲು. ನಾನು ಹುಟ್ಟಿದಾಗಿನಿಂದ ನನ್ನ ಧರ್ಮದ ವಿಚಾರವನ್ನೇ ಅಥವಾ ಜಾತಿಯ ವಿಚಾರವನ್ನೇ ಆಳವಾಗಿ ತಿಳಿದುಕೊಂಡಿರುವುದಿಲ್ಲ.

ಇನ್ನು ಜಗತ್ತಿನ ಇತರ ಧರ್ಮಗಳ ಮತ್ತು ಪಂಗಡಗಳ ಬಗ್ಗೆ ತಿಳಿದುಕೊಂಡಿರುವುದು ದೂರವೇ ಉಳಿಯಿತು. ಆದರೂ ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳುತ್ತೇನೆ, ಇಡೀ ಜಗತ್ತಿನಲ್ಲಿ ನನ್ನ ಧರ್ಮವೇ ಶ್ರೇಷ್ಟ ಎಂದು. ಯಾವ ವ್ಯಕ್ತಿಯು ನಿಜವಾದ ಅಧ್ಯಯನ ಮಾಡಿರುತ್ತಾನೆಯೋ ಅವನಿಗೆ ಯಾವುದೂ ಶ್ರೇಷ್ಟವಾಗಿರುವುದಿಲ್ಲ ಅಥವಾ ಕನಿಷ್ಟವಾಗಿರುವುದಿಲ್ಲ. ಎಲ್ಲದರಲ್ಲೂ ಅವನಿಗೆ ಇದು ಅಗತ್ಯ ಅಥವಾ ಅನಗತ್ಯ ಎಂಬುದಷ್ಟೇ ಗೋಚರಿಸುತ್ತಿರುತ್ತದೆ.

ರೋಗಾಯೋಗ

ಅಗತ್ಯ ಮತ್ತು ಅನಗತ್ಯ, ಉಚಿತ ಮತ್ತು ಅನುಚಿತ, ವಾಸ್ತವ ಮತ್ತು ಅವಾಸ್ತವ, ಪ್ರಾಯೋಗಿಕ ಮತ್ತು ಅಪ್ರಯೋಗಿಕ, ಆರೋಗ್ಯ ಮತ್ತು ಅನಾರೋಗ್ಯ; ಇವುಗಳ ನೆಲೆಗಟ್ಟಿನಿಂದ ನೋಡುವುದನ್ನು ಬಿಟ್ಟು, ಶ್ರೇಷ್ಟ ಮತ್ತು ಕನಿಷ್ಟ, ಮೇಲು ಮತ್ತು ಕೀಳು, ಪವಿತ್ರ ಮತ್ತು ಅಪವಿತ್ರ ಎಂಬ ದೃಷ್ಟಿಯಿಂದ ನೋಡುತ್ತಿದ್ದಾನೆಂದರೆ ಆ ವ್ಯಕ್ತಿಗೆ ಶ್ರೇಷ್ಟತೆಯ ವ್ಯಸನ ಅಂದರೆ ಮೇಲರಿಮೆಯ ಮಾನಸಿಕ ಸಮಸ್ಯೆ ಇದೆ ಎಂದು ಅರ್ಥ.

ಇದು ಏಕೆ ಅಪಾಯವೆಂದರೆ, ವ್ಯಕ್ತಿಯ ಮತ್ತು ಸಮುದಾಯಗಳ ಅಹಂಕಾರವನ್ನು ಬಲಗೊಳಿಸುತ್ತದೆ. ಬಲಗೊಳ್ಳುವ ಅಹಂಕಾರವು ಒಳಗೊಳ್ಳುವ ಅಥವಾ ವಿನೀತವಾಗುವ ಅಥವಾ ಸ್ವೀಕರಿಸುವಂತಹ ಯಾವುದೇ ಸಲಿಲತೆಯ ಗುಣವನ್ನು ಕಳೆದುಕೊಳ್ಳುತ್ತವೆ. ಪೆಡುಸಾಗಲಾರಂಭಿಸುತ್ತದೆ. ಇಂತಹ ಪೆಡಸುತನಗಳಿಂದ ದೌರ್ಜನ್ಯಗಳು ಮತ್ತು ದಬ್ಬಾಳಿಕೆಗಳು ಪ್ರಾರಂಭವಾಗಿ ಸಾಮರಸ್ಯ ಕೇಡುತ್ತವೆ. ಸಂಘರ್ಷಗಳು ಪ್ರಾರಂಭವಾಗಿ ಗೆಲುವೇ ಗುರಿಯಾಗುತ್ತವೆ. ಅವರಲ್ಲಿ ಸಂವಾದ ಇರುವುದಿಲ್ಲ. ವಾದಗಳು, ವಿತಂಡವಾದಗಳು, ಕುತರ್ಕಗಳು ಇರುತ್ತವೆ. ಯಾವುದರದ್ದೇ ವಾದಿಗಳು ತಾವು ತಮ್ಮ ವಾದದಲ್ಲಿ ಗೆಲ್ಲಬೇಕೆಂದು ಬಯಸುತ್ತಾರೆ.

ಅವರು ತಮ್ಮ ವಿರುದ್ಧ ಸಿದ್ಧಾಂತದವರನ್ನು ಎದುರಾಗುವುದೇ ತಾವು ಶ್ರೇಷ್ಟ, ನೀವು ಕನಿಷ್ಟ ಎಂಬುದನ್ನು ಸಾಧಿಸಿ ತೋರಿಸಲಿಕ್ಕೆ. ಹಾಗಾಗಿ ಅವರು ತಮ್ಮ ಎದುರಾಳಿಗಳ ಮಾತುಗಳನ್ನು ಕೇಳುವುದೇ ಇಲ್ಲ. ಅವರು ತಮಗೆ ಆಕ್ರಮಣ ಮಾಡಬೇಕೆಂದು ಬಯಸುತ್ತಿರುತ್ತಾರೆ. ಬುಲ್ ಫೈಟಲ್ಲಿ ಇದ್ದಂತೆ. ಕೆಂಪು ಬಟ್ಟೆಯನ್ನು ತೋರಿಸಿ ತೋರಿಸಿ ಕೆಣಕಿ ಗೂಳಿಯು ಮಲ್ಲನನ್ನು ಕೆಣಕಲು ಬಂದಾಗ ಅವನು ಅದನ್ನು ತಡೆದು ಅಥವಾ ಎತ್ತಿ ಎಸೆದು ತನ್ನ ಬಹುಪರಾಕ್ರಮವನ್ನು ತೋರಿಸುವಂತೆ, ತನ್ನ ಶಕ್ತಿ ಪ್ರದರ್ಶನ ಮಾಡುವಂತೆ, ವಾದಿಗಳೂ ತಮ್ಮ ಎದುರಾಳಿಗಳನ್ನು ಕೆಣಕುತ್ತಾರೆ. ಅವರು ಆಕ್ರಮಣ ಮಾಡಿದರೆ ಇವರು ಪ್ರತ್ಯಾಕ್ರಮಣವನ್ನು ಮಾಡಿ ತಮ್ಮ ಶಕ್ತಿಯನ್ನು, ಕೋಪವನ್ನು ತೋರಿ ಮೇಲ್ಗೈಯನ್ನು ಸಾಧಿಸಬಹುದು. ಇದು ಮೇಲರಿಮೆಗಳ ಮೇಲಾಟಗಳ ಕಣ್ಣು ಮುಚ್ಚಾಲೆಯಾಟ.

ರೋಗ ಲಕ್ಷಣಗಳು

ವ್ಯಕ್ತಿಗಳಲ್ಲಿನ ಮೇಲರಿಮೆಯ ಲಕ್ಷಣಗಳನ್ನು ಗುರುತಿಸುವುದ ತಿಳಿದರೆ, ಅದೇ ರೀತಿಯಲ್ಲಿ ಸಾಮುದಾಯಿಕವಾಗಿಯೂ ಸಮಾಜದಲ್ಲಿ ಅದನ್ನು ಗುರುತಿಸಬಹುದು. ವ್ಯಕ್ತಿಯೊಬ್ಬನ ಮಾನಸಿಕ ಆರೋಗ್ಯವು ಸಮಾಜದ ಮಾನಸಿಕ ಆರೋಗ್ಯಕ್ಕೆ ತೀರಾ ಅವಶ್ಯಕ. ಏಕೆಂದರೆ ವ್ಯಕ್ತಿ ವ್ಯಕ್ತಿಗಳಿಂದಲೇ ಸಮುದಾಯ ಮತ್ತು ಸಮಾಜ ಎಂದು ಮರೆಯದಿರೋಣ.

ಪ್ರಾರಂಭಿಕ ಲಕ್ಷಣ; ತಮ್ಮ ಬೆಲೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು. ತಾವೆಷ್ಟು ಮೌಲ್ಯವುಳ್ಳವರು ಎಂದು ಪದೇಪದೇ ನಿರೂಪಿಸಲು ಯತ್ನಿಸುತ್ತಿರುವುದು.
ನಂತರ, ತಮ್ಮಲ್ಲಿರುವ ಕುಂದುಕೊರತೆಗಳನ್ನು ಅಥವಾ ಲೋಪದೋಷಗಳನ್ನು ಒಪ್ಪದಿರುವುದು. ಯಾರಾದರೂ ಅದಕ್ಕೆ ಬೆರಳು ಮಾಡಿ ತೋರಿಸಿದರೆ ವಾದಗಳಿಂದ ತಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು. ಸಮಜಾಯಿಷಿ ಕೊಟ್ಟುಕೊಳ್ಳುವುದು. ತಮ್ಮನ್ನು ತಾವು ಇತರರೊಂದಿಗೆ ಮೇಲ್‍ಸ್ತರದಲ್ಲಿ ಹೋಲಿಸಿಕೊಳ್ಳುವುದು.

ತಾವೆಷ್ಟು ಘನತೆಯುಳ್ಳವರು, ಪ್ರತಿಷ್ಟೆ ಎಂತದ್ದು, ತಮ್ಮ ಗೌರವ ಎಂದರೆ ಏನು ಎಂಬುದನ್ನು ತೋರ್ಪಡಿಕೊಳ್ಳುತ್ತಿರುವುದು ಮತ್ತು ಸಾಬೀತುಪಡಿಸಲು ಯತ್ನಿಸುತ್ತಿರುವುದು.ಇತರರ ವ್ಯಕ್ತಿತ್ವದ ಕುರಿತು ಮಾತಾಡುವುದು, ಇತರರ ಚಾರಿತ್ರ್ಯ ಹರಣಕ್ಕೆ ಪ್ರಯತ್ನಿಸುವುದು ಹಾಗೂ ಇತರರ ಸಣ್ಣ ಪುಟ್ಟ ದೋಷಗಳಿಗೆ ವಿಪರೀತವಾಗಿ ತಲೆಕೆಡಿಸಿಕೊಂಡು ಅದಕ್ಕೆ ಖಂಡನೆ, ಶಿಕ್ಷೆ, ದಂಡನೆ ಎಂದೆಲ್ಲಾ ಹುಯಿಲೆಬ್ಬಿಸುತ್ತಿರುವುದು. ಏಕೆಂದರೆ ಇತರರನ್ನು ಅಪರಾಧಿಯಾಗಿಸಿ ತಮ್ಮನ್ನು ತೀರ್ಪುಗಾರರನ್ನಾಗಿಸಿಕೊಳ್ಳುವುದರಲ್ಲಿ ಈ ಅರಿಮೆಗೆ ಭಾರೀ ಖುಷಿ.

ಎಲ್ಲವೂ ತಮ್ಮ ಕೇಂದ್ರಿತವಾಗಿರಬೇಕೆಂಬ ಬಯಕೆ ಅವರದು. ಒಂದು ಶಾಲೆಯಲ್ಲಿ ಸಣ್ಣ ಮಗುವೊಂದು ಚೆನ್ನಾಗಿ ಓದುವುದು ಬರೆಯುವುದು ಮಾಡುತ್ತದೆ. ಆದರೆ ಶಿಕ್ಷಕರು ಅದಕ್ಕೇ ವಿಶೇಷ ಗಮನ ಕೊಡಬೇಕೆಂದು ಅದು ಬಯಸುತ್ತದೆ. ಮಗುವು ಶೌಚಾಲಯಕ್ಕೆಲ್ಲಾದರೂ ಹೋದಾಗ ಪಾಠವನ್ನು ಪ್ರಾರಂಭಿಸಿಬಿಟ್ಟಿದ್ದರೆ ಅಥವಾ ಮುಂದುವರಿಸಿಬಿಟ್ಟಿದ್ದರೆ ಗಲಾಟೆ ಮಾಡುತ್ತದೆ. ಮತ್ತೆ ಪ್ರಾರಂಭಿಸಲು ಬಯಸುತ್ತದೆ. ಎಲ್ಲರ ಎದುರಿಗೆ ತನ್ನನ್ನು ಸರಿಪಡಿಸಲು ಒಪ್ಪುವುದಿಲ್ಲ. ಅವಮಾನವಾಯಿತೆಂದು ಅಳುತ್ತದೆ. ಹಟ ಹಿಡಿಯುತ್ತದೆ. ಇದು ಮಗುವಾಗಿರುವುದರಿಂದ ನೇರವಾಗಿ ಅಭಿವ್ಯಕ್ತಗೊಳಿಸುತ್ತದೆ. ಆದರೆ ಹಿರಿಯರಾದವರಲ್ಲಿ ಈ ಬಗೆಯ ಅರಿಮೆ ಇದ್ದಲ್ಲಿ ಇಷ್ಟು ನೇರವಾಗಿ ಮತ್ತು ಮಗುವಿನ ರೀತಿಯಲ್ಲಿ ವ್ಯಕ್ತಪಡಿಸದಿದ್ದರೂ, ಆ ಮಗುವಿನ ಮನೋಭಾವವೇ ಅವರದಾಗಿರುತ್ತದೆ. ಅದನ್ನು ಬೇರೊಂದು ರೀತಿಯಲ್ಲಿ ವ್ಯಕ್ತಪಡಿಸುತ್ತಾರೆ.
ಆತ್ಮರತಿಯ ಮತ್ತೊಂದು ಪದರವೇ ಮೇಲರಿಮೆಯಾಗಿರುವುದರಿಂದ ಅದರ ಮತ್ತು ಇದರ ಹಲವಾರು ಲಕ್ಷಣಗಳಲ್ಲಿ ಸಾಮ್ಯತೆಗಳಿವೆ.

ಮೇಲರಿಮೆಯವರೂ ತಮ್ಮನ್ನು ಬಿರುದುಬಾವಲಿಗಳಿಂದ ಪರಾಕುಗೊಳ್ಳಲು ಬಯಸುತ್ತಿರುತ್ತಾರೆ. ತಮ್ಮ ಅಂಕೆಯಲ್ಲಿ, ನಿಯಂತ್ರಣದಲ್ಲಿ ವಿಷಯಗಳು, ಸಂಗತಿಗಳು ಇರಬೇಕೆಂದು ಬಯಸುತ್ತಾರೆ. ಅಷ್ಟೇ ಅಲ್ಲದೇ, ಸಾರ್ವಜನಿಕ ಸಮಾರಂಭಗಳಲ್ಲಿತಮ್ಮ ಗೌರವ ಘನತೆಯನ್ನು ನೋಡಿ ಉಳಿದವರು ಮಸುಕಾಗುವಂತಹ ಪೆÇ್ರೀಟೋಕಾಲುಗಳು ಇರಬೇಕೆಂದು ಬಯಸುತ್ತಾರೆ.
ಉಫ್, ಒಟ್ಟಾರೆ ತಾನು ಮೇಲು, ಶ್ರೇಷ್ಟ ಎಂಬ ಅರಿಮೆಯು ಗೀಳಿನಂತಹ ಅಥವಾ ವ್ಯಸನದಂತಹ ಒಂದು ಮನೋರೋಗ. ಅದನ್ನು ಆತ್ಮಾಭಿಮಾನ ಮತ್ತು ಸ್ವಾಭಿಮಾನ ಇತ್ಯಾದಿಗಳಿಂದ ಕರೆದುಕೊಂಡು ಮನಸ್ಸಿನ ಆರೋಗ್ಯಕ್ಕೆ ವಂಚಿಸಬಾರದು. ಸ್ವಾಭಿಮಾನಕ್ಕೂ, ಅಹಂಕಾರಕ್ಕೂ, ಹೆಮ್ಮೆಗೂ, ಮೇಲರಿಮೆಗೂ ವ್ಯತ್ಯಾಸಗಳಿವೆ. ಮುಂದೆ ನೋಡೋಣ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಇತಿಹಾಸ ಕಥನಶಾಸ್ತ್ರ: ಅಂಬೇಡ್ಕರ್ ಅವರ ಚಿಂತನೆಯ ಹಾದಿ

Published

on

~ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ

ಅಂಬೇಡ್ಕರ್ ಅವರು ಭಾರತದ ಚರಿತ್ರೆಗಳ ರಚನೆಗೆ ಪ್ರಾಯೋಗಿಕ ಉಪಕರಣಗಳನ್ನು (ಎಂಪರಿಕಲ್ ಟೂಲ್ಸ್) ಬಳಸಿರುತ್ತಾರೆ. ಆದರೆ ಈ ಎಲ್ಲ ಉಪಕರಣಗಳು ಕೇವಲ ಚರಿತ್ರೆಯ ರಚನೆಗೆ ಮಾತ್ರ ಕಾರಣವಾಗದೆ, ಸಮೂಹಗಳ ಸಾಮಾಜಿಕ-ರಾಜಕೀಯ ಸಮಾನತೆ, ಸ್ವಾಯತ್ತತೆಯನ್ನೂ ಕಲ್ಪಿಸುವುದಕ್ಕೂ ಬದ್ಧವಾಗಿರುತ್ತವೆ. ಆರ್ಥಿಕತೆಯ ನಿಲುವುಗಳ ಮೂಲಕ ಭಾರತದ ಚರಿತ್ರೆಯನ್ನು ವ್ಯಾಖ್ಯಾನಿಸುವ ಕ್ರಮಗಳನ್ನು ಅಂಬೇಡ್ಕರ್ ಅವರು ಅತ್ಯಂತ ಕಟುವಾಗಿಯೇ ವಿಮರ್ಶಿಸುತ್ತಾರೆ.

ಸಮಾಜವಾದಿಗಳು ಮತ್ತು ಮಾರ್ಕ್ಸ್ವಾದಿಗಳು ಆರ್ಥಿಕತೆಯ ನೆಲೆಯಿಂದ ಭಾರತದಲ್ಲಿ ಚರಿತ್ರೆಗಳನ್ನು ನಿರ್ವಚಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎನ್ನುವುದನ್ನು ಇಲ್ಲಿ ಗಮನಿಸಬಹುದು. ಭಾರತದ ಚರಿತ್ರೆಗಳಲ್ಲಿ ದಾಖಲಾಗಿರುವ ಯಾವುದೇ ರಾಜಕೀಯ ಕ್ರಾಂತಿ/ಹೋರಾಟಗಳು ಯಾವಾಗಲೂ ಸಾಮಾಜಿಕ-ಧಾರ್ಮಿಕ ಕ್ರಾಂತಿಗಳಿಂದ ಮಾತ್ರ ಕೂಡಿರುವುದನ್ನೂ ಅಂಬೇಡ್ಕರ್ ಅವರು ಇಲ್ಲಿ ಗುರುತಿಸುತ್ತಾರೆ. ಭಾರತದಲ್ಲಿ ಅಷ್ಟೆಯಲ್ಲ, ಅಮೆರಿಕ, ಯುರೋಪ್, ಅರೇಬಿಯಾ ದೇಶಗಳಲ್ಲಿಯೂ ಇದೇ ಬಗೆಯ ಚರಿತ್ರೆಯ ನಿರ್ಮಾಣವು ನಡೆದಿರುವುದನ್ನು ನೋಡುತ್ತೇವೆ. ಮತ್ತು ಶಿವಾಜಿ, ಚಂದ್ರಗುಪ್ತ ಮೌರ್ಯ, ಸಿಖ್ ರಾಜ್ಯಗಳ ರಾಜರುಗಳಿಂದ ಕೈಗೊಳ್ಳಲಾದ ರಾಜಕೀಯ ಕ್ರಾಂತಿಗಳು, ಬುದ್ಧ, ಗುರು ನಾನಕ್ ಹಾಗೂ ಇತರ ಸಾಧು ಸಂತರ ಸಾಮಾಜಿಕ, ಧಾರ್ಮಿಕ ಚಳವಳಿಗಳ ಮೂಲಕ ಕಂಡಿರುತ್ತೇವೆ.

ಆದರೆ ಪರಿಣಾಮಗಳಲ್ಲಿ ಅಗಾಧವಾದ ವ್ಯತ್ಯಾಸಗಳನ್ನೂ ನಾವು ಇವತ್ತು ಕಾಣುತ್ತೇವೆ ಹಾಗೂ ಭಾರತದ ಚರಿತ್ರೆಗಳನ್ನು ಕುರಿತು ಬ್ರಿಟಿಶರು ತಾಳಿರುವ ಧೋರಣೆಗಳು ಅತ್ಯಂತ ದೋಷಪೂರಿತ ನೆಲೆಗಳಿಂದ ಕೂಡಿದ್ದವು ಎಂಬುದನ್ನು ಅಂಬೇಡ್ಕರ್ ಅವರು ಅತ್ಯಂತ ಬಲವಾಗಿ ನಂಬಿದ್ದರು. ಮತ್ತು ಅವುಗಳನ್ನು ಬಿಡಿಸಿ ತೋರಿಸುವುದಕ್ಕೆ ಬೇಕಾದ ಪರಿಕರಗಳನ್ನೂ ತಮ್ಮ ಅಧ್ಯಯನಗಳ ಮೂಲಕ ರೂಪಿಸಿರುತ್ತಾರೆ.

ಭಿನ್ನ ಸಂವೇದನೆಯ ಮೂಲಕ ಭಾರತವನ್ನು ಗ್ರಹಿಸಿದ ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕವಾಗಿ ಅತ್ಯಂತ ಸೂಕ್ಷ್ಮ ನಿಲುವುಗಳಾಗಿ ಯಾವತ್ತಿಗೂ ಚರ್ಚೆಗೆ ಒಳಪಡುತ್ತಿರುವ ‘ಅಲ್ಪಸಂಖ್ಯಾತರು’ ‘ಲಿಂಗ’ ಹಾಗೂ ‘ಜಾತಿ’ಗಳ ನಡುವೆ ಒಂದು ಬಗೆಯ ತಾರ್ಕಿಕ ನಂಟನ್ನು ಏರ್ಪಡಿಸಬಹುದು. ರಾಷ್ಟ್ರೀಯತೆಯ ಜೊತೆಗೆ ಅಲ್ಪಸಂಖ್ಯಾತರು, ಲಿಂಗ ಹಾಗೂ ಜಾತಿಯ ವಿನ್ಯಾಸಗಳನ್ನು ಇಟ್ಟು ನೋಡಿದರೆ, ರಾಷ್ಟ್ರೀಯತೆ ಎನ್ನುವುದು ಕೇವಲ ಏಕಾಕೃತಿಯ ನೆಲೆಯನ್ನಾಗಿ ಬಿಂಬಿಸಲಾಗುತ್ತದೆ. ಇಂತಹ ಏಕಾಕೃತಿ ನಿಲುವುಗಳನ್ನು ಭಗ್ನ ಮಾಡುವ ಅತ್ಯಂತ ಪ್ರಖರವಾದ ಚಿಂತನೆಗಳನ್ನು, ಅಲ್ಪಸಂಖ್ಯಾತ, ಲಿಂಗ, ಜಾತಿ ಮತ್ತು ಧರ್ಮಗಳ ವಿನ್ಯಾಸಗಳನ್ನು ನೆಲೆಯಾಗಿಸಿಕೊಂಡು ಅಂಬೇಡ್ಕರ್ ಅವರು ಚಿಂತಿಸಿರುತ್ತಾರೆ. ಹಾಗೂ ಈ ಚಿಂತನೆಗಳ ಮುಖೇನವೇ ಸಾಂಸ್ಕೃತಿಕ-ಚಾರಿತ್ರಿಕ ಬಹುಳತೆಯನ್ನು ಕಂಡರಿಸುವ ದಾರಿಗಳನ್ನೂ ಅವರ ಚಿಂತನೆಗಳಲ್ಲಿ ಕಾಣಬಹುದಾಗಿದೆ.

ಅಂದರೆ ಅಂಬೇಡ್ಕರ್ ಅವರ ಸೈದ್ಧಾಂತಿಕ ತಿಳಿವಿನ ಚೌಕಟ್ಟನ್ನು ಅರಿಯಬೇಕೆಂದರೆ, ಅವರು ಫ್ರೆಂಚ್ ಕ್ರಾಂತಿಯಿಂದ ಎರವಲು ಪಡೆದಿರುವ ಸಾಮಾಜಿಕ-ರಾಜಕೀಯ ‘ತ್ರಿಕೂಟ’ (ಟ್ರಿನಿಟಿ) ಪರಿಕಲ್ಪನೆಗಳನ್ನು ಇಲ್ಲಿ ನಾವು ಪರಿಗಣನೆಗೆ ತೆಗೆದುಕೊಳ್ಳುವ ಅಗತ್ಯವಿದೆ. ‘ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರತ್ವ’ ಎಂಬುದಾಗಿ ಈ ತ್ರಿಕೂಟ ಪರಿಕಲ್ಪನೆಗಳನ್ನು ಗುರುತಿಸಬಹುದು.

ಫ್ರೆಂಚ್ ಕ್ರಾಂತಿಯ ನಿಲುವುಗಳನ್ನು ಕುರುಡಾಗಿ ಅನುಕರಿಸುವುದಾಗಲೀ ಇಲ್ಲವೇ ಆ ಕ್ರಾಂತಿಯ ನಿಲುವುಗಳನ್ನು ಯಥಾವತ್ತಾಗಿ ಪಾಲಿಸುವುದಾಗಲೀ ಅಂಬೇಡ್ಕರ್ ಅವರ ಉದ್ದೇಶವಾಗಿರಲಿಲ್ಲ. ಆದರೆ ಈ ಕ್ರಾಂತಿಯಿಂದ ಪ್ರೇರಣೆಯನ್ನು ಮಾತ್ರ ಪಡೆದುಕೊಂಡಿರುತ್ತಾರೆ. ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳನ್ನು ಮರುಪರೀಕ್ಷಿಸುವುದು ಅಷ್ಟೆಯಲ್ಲದೆ ಅವುಗಳನ್ನು ಮರು ವಿನ್ಯಾಸಗೊಳಿಸಿರುವುದನ್ನೂ ಇಲ್ಲಿ ನೋಡಬಹುದು. ಅಂದರೆ, ಫ್ರೆಂಚ್ ಕ್ರಾಂತಿಯ ಸನ್ನಿವೇಶಕ್ಕಿಂತ ಮಿಗಿಲಾದ ಸಾಮಾಜಿಕ-ಸಾಂಸ್ಕೃತಿಕ ಆಯಾಮ ಮತ್ತು ಅರ್ಥಗಳನ್ನು ಅಂಬೇಡ್ಕರ್ ಅವರು ಈ ಪರಿಕಲ್ಪನೆಗಳಿಗೆ ಕೊಟ್ಟಿರುತ್ತಾರೆ.

ಜಾತಿಕೇಂದ್ರಿತವಾದ ಭಾರತ ದೇಶವು ವರ್ಗಕೇಂದ್ರಿತವಾದ ಫ್ರೆಂಚ್ ದೇಶಕ್ಕಿಂತ ಸಹಜವಾಗಿಯೇ ಭಿನ್ನವಾಗಿದೆ. ಈ ಸಾಮಾಜಿಕ ವಿನ್ಯಾಸಕ್ಕೆ ಅನುಗುಣವಾಗಿಯೇ ಅಂಬೇಡ್ಕರ್ ಅವರು ಈ ತ್ರಿಕೂಟ ಪರಿಕಲ್ಪನೆಗಳ ತಾತ್ವಿಕತೆಯನ್ನು ರೂಪಿಸಿರುತ್ತಾರೆ. ಸಮೂಹಗಳ ಒಳ್ಳೆಯ ಬದುಕಿಗೆ ಈ ತ್ರಿಕೂಟಗಳು ಅತ್ಯಂತ ಅವಶ್ಯವೆಂಬುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು (ರೊಡ್ರಿಗಸ್, 2002). ಚರಿತ್ರೆಯ ನಿರ್ಮಾಣದಲ್ಲಿ ಹಾಗೂ ಸಾಮಾಜಿಕ ಬದುಕುಗಳನ್ನು ಕಟ್ಟಿಕೊಳ್ಳುವಲ್ಲಿ ಈ ಸಮಾನತೆ, ಸ್ವಾತಂತ್ರ್ಯ ಹಾಗೂ ಸಹೋದರತ್ವವು ಎಷ್ಟೊಂದು ಮಹತ್ವದ ಪಾತ್ರವನ್ನು ವಹಿಸಬಲ್ಲವು ಎನ್ನುವುದನ್ನು ಅಂಬೇಡ್ಕರ್ ಅವರು ಮನಗಂಡಿದ್ದರು.

ಅಂಬೇಡ್ಕರ್ ಅವರು ಗಾಂಧಿ ಮತ್ತು ಕಾಂಗ್ರೇಸ್ ಸಂಘಟನೆಯನ್ನು ಕುರಿತು ‘ವ್ಹಾಟ್ ಗಾಂಧಿ ಆ್ಯಂಡ್ ಕಾಂಗ್ರೇಸ್ ಹ್ಯಾವ್ ಡನ್ ಟು ದ ಅನ್ಟಚೇಬಲ್ಸ್’ ಎಂಬ ಬರಹದಲ್ಲಿ ಸಮೂಹಗಳ ಏಳ್ಗೆಯ ನೆಲೆಯಿಂದ ವಿಶ್ಲೇಷಣೆ ಮಾಡಿರುತ್ತಾರೆ. ಅಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದಂತಹ ತ್ರಿಕೂಟ ಕಲ್ಪನೆಗಳು ಸಮೂಹಗಳ ಅಸ್ತಿತ್ವ, ಅಸ್ಮಿತೆ ಹಾಗೂ ಪ್ರಜ್ಞೆಯನ್ನು ಕುರಿತು ಮಾತ್ನಾಡಿದರೆ, ಕಾಂಗ್ರೆಸ್ ಸಂಘಟನೆಯು ರಾಷ್ಟ್ರೀಯತೆಯ ಕಲ್ಪನೆಯ ಬಗೆಗೆ ಮಾತ್ರ ಹೆಚ್ಚು ಕಾಳಜಿಯನ್ನು ವಹಿಸಿರುವುದನ್ನು ಇಲ್ಲಿ ನೋಡುತ್ತೇವೆ. ಆದರೆ ಗಾಂಧೀಜಿಯವರು ಸಾಂಪ್ರದಾಯಿಕ ರಾಷ್ಟ್ರೀಯತೆಯನ್ನು ಕುರಿತು ಯೋಚಿಸಿದರೆ, ನೆಹರೂ ಅವರು ಸಮಾಜವಾದದ ನೆಲೆಯಿಂದ ರಾಷ್ಟ್ರೀಯತೆಯ ಪ್ರಜ್ಞೆಯನ್ನು ರೂಪಿಸುವ ತುಡಿತವನ್ನು ಹೊಂದಿದ್ದರು. ಒಟ್ಟಾರೆ ರಾಷ್ಟ್ರೀಯತೆ ಬಗೆಗಿನ ನಿಲುವುಗಳಲ್ಲಿ ಬಹುಸಮಾಜಗಳು ಎದುರಿಸುವ ಸಾಮಾಜಿಕ-ರಾಜಕೀಯ ಬಿಕ್ಕಟ್ಟುಗಳು ಮಹತ್ವವನ್ನು ಪಡೆಯದೆ, ಕೇವಲ ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಕುರಿತಾದ ಮೌಲ್ಯಗಳು ಮಾತ್ರ ಮುಂಚೂಣಿಗೆ ಬರುತ್ತವೆ.

ಹಾಗಾಗಿ ಭಾರತದ ಚರಿತ್ರೆಗಳಲ್ಲಿ ರಾಷ್ಟ್ರ, ರಾಷ್ಟ್ರ ಪ್ರಭುತ್ವ ಹಾಗೂ ರಾಷ್ಟ್ರೀಯತೆಗಳ ಮಹತ್ವ ಮತ್ತು ಹಿರಿಮೆಯ ಬಗೆಗಿರುವ ಕಾಳಜಿಗಳು, ಸಾಮಾಜಿಕ ಚರಿತ್ರೆಯನ್ನು ಬಿಂಬಿಸುವಲ್ಲಿ ಗೈರು ಆಗಿರುತ್ತವೆ. ಅಂಬೇಡ್ಕರ್ ಅವರು ಇಂತಹ ಚಾರಿತ್ರಿಕ ಲೋಪಗಳನ್ನು ಗುರುತಿಸುವ ಜೊತೆಗೆ, ರಾಜಕೀಯ ಪ್ರೇರಿತವಾದ ಚರಿತ್ರೆಗಳಿಗಿಂತ, ಸಾಮಾಜಿಕ ನೆಲೆಗಳಿಂದ ಚರಿತ್ರೆಯನ್ನು ಬರೆಯುವುದು ಎಷ್ಟೊಂದು ಮಹತ್ವದ ಕೆಲಸವೆಂಬುದನ್ನೂ ಮನಗಾಣಿಸಿದ್ದಾರೆ. ಸಾಮಾಜಿಕ ಚರಿತ್ರೆಗಳನ್ನು ಕಡೆಗಣಿಸಿ ರಾಷ್ಟ್ರೀಯತೆಯ ಕಲ್ಪನೆಯನ್ನು ಊಹಿಸುವುದು ಕೂಡ ದುಸ್ತರದ ಸಂಗತಿಯೆಂಬುದನ್ನು ಅಂಬೇಡ್ಕರ್ ಅವರು ಚಿಂತನೆಗಳು ನಮಗೆ ಮನವರಿಕೆ ಮಾಡುತ್ತವೆ. ಈ ಕಾರಣಗಳಿಂದ ‘ಚರಿತ್ರೆಯನ್ನು ಮರೆತವರು ಚರಿತ್ರೆಯನ್ನು ಸೃಷ್ಟಿಸಲಾರರು’ ಎಂಬ ನಿಲುವನ್ನು ಅತ್ಯಂತ ಬಲವಾಗಿಯೇ ಅಂಬೇಡ್ಕರ್ ಅವರು ನಂಬಿರುತ್ತಾರೆ ಎಂಬುದು ಅತ್ಯಂತ ಗಮನಾರ್ಹ ಸಂಗತಿ.

ಚರಿತ್ರೆ ಎಂಬುದು ಒಂದು ಕನಸಾಗಲೀ ಇಲ್ಲವೇ ಭ್ರಮೆಯಾಗಲೀ ಅಲ್ಲ ಹಾಗೂ ಚರಿತ್ರೆಯೆಂಬುದು ಒಂದು ನಿರ್ವಾತವೂ ಅಲ್ಲ ಮತ್ತು ತೆರಪುಗಳನ್ನು ತುಂಬುವ ಪ್ರಕ್ರಿಯೆಯೂ ಅಲ್ಲ. ಬದಲಾಗಿ ಅದೊಂದು ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಗ್ರಹಿಕೆ ಮತ್ತು ಜ್ಞಾನಶಿಸ್ತು ಆಗಿರುತ್ತದೆ. ಜ್ಞಾನಶಿಸ್ತುಗಳು ಮತ್ತು ಗ್ರಹಿಕೆಗಳು ಸಮೂಹ ಕೇಂದ್ರಿತವಾಗಿರುಬೇಕೆ ಹೊರತು ಕೇವಲ ರಾಜಕೀಯ-ಸಾಮಾಜಿಕ ಪ್ರಾಬಲ್ಯವನ್ನು ಹೊಂದಿರುವ ವ್ಯಕ್ತಿಗಳ ಇಲ್ಲವೇ ಆಳುವ ವರ್ಗಗಳನ್ನು ಮಾತ್ರ ಪ್ರತಿನಿಧಿಸುವ ವಿನ್ಯಾಸಗಳಾಗಿ ಇವುಗಳು ಇರಲಾರವು. ಚರಿತ್ರೆಯೂ ಒಂದು ಜ್ಞಾನಶಿಸ್ತೇ ಆಗಿರುವುದರಿಂದ, ಇದು ಬಹುಸಮೂಹಗಳನ್ನು ಪ್ರತಿನಿಧಿಸುವ ವಿನ್ಯಾಸವಾಗಬೇಕು ಎಂಬ ಅಚಲವಾದ ನಿಲುವನ್ನು ಅಂಬೇಡ್ಕರ್ ಅವರು ತಾಳಿದ್ದರು. ಯಾವುದೇ ಗ್ರಹಿಕೆಯು ಸಮೂಹ ಕೇಂದ್ರಿತವಾಗಿರುತ್ತದೆ ಎನ್ನುವ ನಿಲುವಿನಲ್ಲಿ ಅಂಬೇಡ್ಕರ್ ಅವರಿಗೆ ತಾತ್ವಿಕ ಹಾಗೂ ವೈಯಕ್ತಿಕವಾಗಿ ಅಪಾರವಾದ ನಂಬಿಕೆಯಿತ್ತು.

ಹಾಗಾಗಿ ಅಂಬೇಡ್ಕರ್ ಅವರು ನಿನ್ನೆಗಳನ್ನು ಕುರಿತಾದ ತಾತ್ವಿಕ ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಂಡು, ಅವುಗಳಿಗೆ ಉತ್ತರಗಳನ್ನು ಹುಡುಕುವ ಪ್ರಯತ್ನವನ್ನು ಮಾಡಿರುತ್ತಾರೆ. ನಿನ್ನೆಗಳು ತಮ್ಮ ಹಕ್ಕುಗಳೆಂದು ಯಾರು ವಾದಿಸುವವರೋ ಅವರೆಲ್ಲರಿಗೂ, ವರ್ತಮಾನದಲ್ಲಿ ಉಂಟಾಗಿರುವ ಬಿಕ್ಕಟ್ಟುಗಳಿಗೆ ಈ ನಿನ್ನೆಗಳು ಹೇಗೆ ಹೊಣೆಯಾಗಿವೆ ಎಂಬ ದಿಟವನ್ನು ಅರಿಯುವುದಕ್ಕೆ ಬೇಕಾದ ವಿಶ್ಲೇಷಣೆಗಳನ್ನು ಇವರು ಮಾಡಿರುತ್ತಾರೆ. ಅಂಬೇಡ್ಕರ್ ಅವರ ಈ ಹಾದಿಯು ಎಲ್ಲರಿಗೂ ಒಪ್ಪಿತವಾಗುವ ಸತ್ಯವನ್ನು ಹೇಳುವುದಲ್ಲ. ಬದಲಾಗಿ, ಎಲ್ಲ ಸಮೂಹಗಳ ಇವತ್ತಿನ ಬದುಕಿಗೆ ಅಗತ್ಯವಾಗಿರುವ ಹಾದಿಗಳನ್ನು ರೂಪಿಸುವುದಾಗಿತ್ತು. ಆದ್ದರಿಂದ, ಸದ್ಯದ ಚರಿತ್ರೆ, ಸಾಹಿತ್ಯ, ಸಂಸ್ಕೃತಿ, ಆರ್ಥಿಕತೆ ಹಾಗೂ ರಾಜಕಾರಣವನ್ನು ವಿಶ್ಲೇಷಿಸುವುದಕ್ಕೆ ಅಂಬೇಡ್ಕರ್ ಅವರು ರೂಪಿಸಿದ ಈ ತಾತ್ವಿಕ ವಿನ್ಯಾಸಗಳು ಅತ್ಯಂತ ಸಮರ್ಪಕವಾಗಿರುತ್ತವೆ. ಇವರ ಈ ತಾತ್ವಿಕ ವಿನ್ಯಾಸಗಳಲ್ಲಿ ಅನ್ಯ ಪ್ರಭಾವಕ್ಕಿಂತ ಪ್ರೇರಣೆಗಳನ್ನು ಮಾತ್ರ ನಾವು ಕಾಣುತ್ತೇವೆ. ಆದ್ದರಿಂದ ಅಂಬೇಡ್ಕರ್ ಅವರು ರೂಪಿಸಿದ ಮರುರಚನೆಯ (ರೀಕನ್ಸ್ಟ್ರಕ್ಸನ್) ಮಾದರಿಗಳು ಕೇವಲ ತೆರಪುಗಳನ್ನು ತುಂಬುವ ರಚನೆಗಳಾಗದೆ, ವರ್ತಮಾನದ ಬಿಕ್ಕಟ್ಟುಗಳಿಗೆ ಇವುಗಳು ಹೇಗೆ ಕಾರಣವಾಗಿರುತ್ತವೆ ಹಾಗೂ ಇವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಬಗೆಗಳಾವುವು ಎಂಬೆಲ್ಲ ಸಂಗತಿಗಳನ್ನು ಕುರಿತು ಅತ್ಯಂತ ವಸ್ತುನಿಷ್ಠ ವಿಶ್ಲೇಷಣೆಗಳನ್ನು ತಮ್ಮ ಬರಹಗಳಲ್ಲಿ ಮಾಡಿರುತ್ತಾರೆ.

ಅಂಬೇಡ್ಕರ್ ಅವರಿಗಿಂತ ಮೊದಲು ಇಂತಹದೊಂದು ನೋಟಕ್ರಮಕ್ಕೆ ಚಾಲನೆಯನ್ನು ಕೊಟ್ಟವರು ಜ್ಯೋತಿರಾವ್ ಫುಲೆಯವರು. ಆದರೆ ಇವರಿಬ್ಬರ ತಿಳಿವಳಿಕೆಗಳನ್ನು ಹೋಲಿಸಿ ನೋಡುವ ಉದ್ದೇಶಕ್ಕಿಂತ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳು ಬೆಳೆಯುವುದಕ್ಕೆ ಬೇಕಾಗಿರುವ ಚಾರಿತ್ರಿಕ ಒತ್ತಡಗಳು ಹೇಗಿರುತ್ತವೆ ಎಂಬ ದಿಟವನ್ನು ಅರಿಯುವುದಕ್ಕೆ, ಫುಲೆಯವರ ಚಿಂತನೆಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಗೂ ಭಾರತದ ಸನ್ನಿವೇಶದಲ್ಲಿ ಚರಿತ್ರೆ ಕಥನಶಾಸ್ತ್ರಗಳ ವಿಭಿನ್ನ ಸ್ವರೂಪವನ್ನೂ ಈ ಮೂಲಕ ಅರಿಯಬಹುದಾಗಿದೆ. ಜ್ಞಾನಶಿಸ್ತುಗಳನ್ನು ರೂಪಿಸುವ ಪ್ರಕ್ರಿಯೆಯ ಭಾಗವಾಗಿ ಈ ಹಾದಿಯನ್ನು ಕರ್ನಾಟಕದ ವಿದ್ವತ್ ಲೋಕದಲ್ಲಿ ಇಡೀಯಾಗಿ ಅನುಸರಿಸುವುದನ್ನು ನಾನು ಕಾಣಲಾರೆ.

ಅಂದರೆ ಯಾರೂ ಈ ಹಾದಿಯನ್ನು ತುಳಿಯುತ್ತಿಲ್ಲವೆಂದು ಅರ್ಥವಲ್ಲ. ಬದಲಾಗಿ ಇದುವೇ ಮುಖ್ಯಧಾರೆ ಚಿಂತನೆಯ ಕ್ರಮವಾಗಿ ಭಾರತ ಇಲ್ಲವೇ ಕರ್ನಾಟಕದಲ್ಲಿ ಇನ್ನೂ ಬೆಳೆದಿಲ್ಲವೆಂದರ್ಥ. ಆದರೆ ಅಂಬೇಡ್ಕರ್ ಚಿಂತನೆಯ ಮಾದರಿಯೆಂಬುದನ್ನು ಕೇವಲ ಪರ್ಯಾಯ ಆಲೋಚನೆಯ ಕ್ರಮವನ್ನಾಗಿ ಮಾತ್ರ ನೋಡಲಾಗಿದೆ. ಈ ನಿಲುವು ಸರಿಯಲ್ಲ. ಏಕೆಂದರೆ, ಸಮೂಹಕೇಂದ್ರಿತ ಆಲೋಚನೆಯ ಕ್ರಮಗಳೇ ನಮ್ಮ ಮುಖ್ಯಧಾರೆಯ ಆಲೋಚನೆಯ ಕ್ರಮಗಳಾಗಬೇಕಾದ ತುರ್ತು ಇದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಸಂಪಾದಕೀಯ | ದಾವಣಗೆರೆ ದಕ್ಷಿಣ ಉಪಚುನಾವಣೆ: ಪ್ರತಿಷ್ಠೆಯ ಹೋರಾಟದಲ್ಲಿ ಜನರ ಧ್ವನಿ ಪ್ರಬಲವಾಗಲಿ

Published

on

~ಗೋವರ್ಧನ ನವಿಲೇಹಾಳು 

ಮಧ್ಯ ಕರ್ನಾಟಕದ ಹೃದಯಭಾಗವಾದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಈಗ ಉಪಚುನಾವಣೆಯ ಕಾವು‌ ಏರುತ್ತಲೇ ಇದೆ. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಖಾಲಿಯಾದ ಈ ಕ್ಷೇತ್ರದಲ್ಲಿ ಏಪ್ರಿಲ್ 9, 2026ರಂದು ಮತದಾನ ನಡೆಯಲಿದೆ. ಫಲಿತಾಂಶ ಮೇ 4ರಂದು ಪ್ರಕಟವಾಗಲಿದೆ. ಈ ಉಪಚುನಾವಣೆಯು ಕೇವಲ ಒಂದು ಸೀಟಿನ ಹೋರಾಟವಲ್ಲ; ಇದು ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆ, ಕುಟುಂಬ ವಾರಸುದಾರಿಕೆ, ಸಮುದಾಯ ಸಮೀಕರಣಗಳು ಮತ್ತು ಅಭಿವೃದ್ಧಿ ನಿರೀಕ್ಷೆಗಳ ನಡುವಿನ ಸಂಕೀರ್ಣ ಸಮರವಾಗಿದೆ.

ಶಾಮನೂರು ಶಿವಶಂಕರಪ್ಪ ಅವರು ತಾನು ಸ್ಪರ್ಧಿಸಿದ ಈ ಕ್ಷೇತ್ರವನ್ನು ಎಂದೂ ಸೋಲದೆ ಉಳಿಸಿಕೊಂಡಿದ್ದರು. ಅವರ ನಂತರ ಕಾಂಗ್ರೆಸ್ ಪಕ್ಷವು ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದು ಕಾಂಗ್ರೆಸ್ ಹೇಳುವಂತೆ “ಕುಟುಂಬಕ್ಕೆ ಟಿಕೆಟ್ ನೀಡುವ ಸಾಂಪ್ರದಾಯಿಕ ನಡೆ”ಯಾಗಿದೆ. ಬಿಜೆಪಿ ಪಕ್ಷವು ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಇದರ ಜೊತೆಗೆ SDPIಯ ಅಫ್ಸರ್ ಕೊಡ್ಲಿಪೇಟೆ, ಸಾದಿಕ್ ಪೈಲ್ವಾನ್ ಸೇರಿದಂತೆ 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಮುಖ್ಯ ಹೋರಾಟ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆಯೇ ಇದೆ .

ಈ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಪಾತ್ರ ನಿರ್ಣಾಯಕವಾಗಿದೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಸುಮಾರು 40% ಇದೆ ಎಂದು ಅಂದಾಜು. ಶಾಮನೂರು ಕುಟುಂಬಕ್ಕೆ ಐತಿಹಾಸಿಕ ಬೆಂಬಲವಿದ್ದರೂ, ಈ ಬಾರಿ ಮುಸ್ಲಿಂ ನಾಯಕರು ಟಿಕೆಟ್ ಆಕಾಂಕ್ಷೆಯನ್ನು ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪಕ್ಷವು ಕುಟುಂಬ ವಾರಸುದಾರಿಕೆಯನ್ನು ಆಯ್ಕೆ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಸಚಿವ ಜಮೀರ್ ಅಹಮದ್ ಅವರ ಪ್ರಚಾರ ಮತ್ತು ಸಿಎಂ ಸಿದ್ದರಾಮಯ್ಯ ಅವರ ಭೇಟಿಗಳು ಈ ಅಸಮಾಧಾನವನ್ನು ತಣಿಸುವ ಪ್ರಯತ್ನವಾಗಿದೆ. ಆದರೆ ಮುಸ್ಲಿಂ ಮತಗಳ ವಿಭಜನೆಯ ಸಾಧ್ಯತೆ ಇದೆ. SDPI ಮತ್ತು ಇತರ (ಕಾಂಗ್ರೆಸ್ ಸಾದಿಕ್ ಅವರನ್ನು ಪೈಲ್ವಾನ್ ತಟಸ್ಥರಾಗಿರುವಂತೆ ಹೇಳಿದೆ) ಮುಸ್ಲಿಂ ಅಭ್ಯರ್ಥಿಗಳು ಈ ವಿಭಜನೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ. ಬಿಜೆಪಿ ಎಸ್‌ಟಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅಹಿಂದ ಮತಗಳನ್ನು ಸೆಳೆಯುವ ತಂತ್ರ ರೂಪಿಸಿದೆ.

ಕಾಂಗ್ರೆಸ್ ಪಕ್ಷಕ್ಕೆ ಈ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವಾಗಿ ತನ್ನ ಬಲವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ದಾವಣಗೆರೆ ದಕ್ಷಿಣಕ್ಕೆ 100 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದು, ಇದು ಉಪಚುನಾವಣೆಗೆ ಮುನ್ನ ಜನರನ್ನು ಆಕರ್ಷಿಸುವ ಪ್ರಯತ್ನವಾಗಿ ಕಾಣುತ್ತಿದೆ. ಅನುಕಂಪದ ಅಲೆಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಬಂಡಾಯದ ಬಿಸಿ ತಟ್ಟಿದೆ. ಕಾಂಗ್ರೆಸ್ ನ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಅವರನ್ನು ಪಕ್ಷ ಚುನಾವಣೆಯಲ್ಲಿ ತಟಸ್ಥರಾಗಿರುವಂತೆ ಹೇಳಿದೆ. ಆದರೆ ಇದು ಮುಸಲ್ಮಾನರ ಒಳಮುನಿಸನ್ನು ತಣಿಸುತ್ತದೆಯೇ ಅಥವಾ ಮತ ವಿಭಜನೆಗೆ ಕಾರಣವಾಗುತ್ತದೆಯೇ ಎಂಬುದು ಫಲಿತಾಂಶದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ.

ಬಿಜೆಪಿ ಪಕ್ಷಕ್ಕೆ ಇದು ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಅವಕಾಶ. 2023ರ ವಿಧಾನಸಭಾ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಅಭ್ಯರ್ಥಿ ಅಜಯ್ ಕುಮಾರ್ ಅವರನ್ನು ಸುಮಾರು 27,888 ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಬಿಜೆಪಿ “ಬದಲಾವಣೆ”ಯ ಸಂದೇಶವನ್ನು ನೀಡುತ್ತಿದೆ. ಅಭಿವೃದ್ಧಿ ಕೊರತೆ, ಗ್ಯಾರಂಟಿ ಯೋಜನೆಗಳ ವೆಚ್ಚ ಮತ್ತು ಸರ್ಕಾರದ ನೀತಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಶ್ರೀನಿವಾಸ್ ದಾಸಕರಿಯಪ್ಪ ಅವರು ಕುಟುಂಬ ರಾಜಕಾರಣಕ್ಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಆದರೆ ಬಿಜೆಪಿಗೆ ಕ್ಷೇತ್ರದಲ್ಲಿ ಐತಿಹಾಸಿಕ ಬೆಂಬಲ ಕಡಿಮೆ. ಮುಸ್ಲಿಂ ಮತ್ತು ಅಹಿಂದ ಮತಗಳನ್ನು ತನ್ನತ್ತ ಸೆಳೆಯುವುದು ಅವರ ದೊಡ್ಡ ಸವಾಲು.

ದಾವಣಗೆರೆ ದಕ್ಷಿಣ ಕ್ಷೇತ್ರವು ಕೈಗಾರಿಕೆ, ವ್ಯಾಪಾರ ಮತ್ತು ಕೃಷಿಯ ಸಮ್ಮಿಶ್ರಣವಾಗಿದೆ. ರಸ್ತೆಗಳು, ನೀರಾವರಿ, ಉದ್ಯೋಗ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಜನರ ಮುಖ್ಯ ನಿರೀಕ್ಷೆಗಳು. ಹಿರಿಯ ಶಾಸಕರ ಕಾಲದಲ್ಲಿ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದವು. ಆದರೆ ಇಂದು ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಸ್ಥಳೀಯ ಸಮಸ್ಯೆಗಳು ಬಗೆಹರಿಯಬೇಕಿದೆ. ಉಪಚುನಾವಣೆಯಲ್ಲಿ ಅಭ್ಯರ್ಥಿಗಳು ಭರವಸೆಗಳ ಮಳೆ ಸುರಿಸುತ್ತಿದ್ದಾರೆ. ಆದರೆ ಜನರು ನೋಡುವುದು ಕಾರ್ಯನಿರ್ವಹಣೆಯನ್ನು. 100 ಕೋಟಿ ಅನುದಾನ ಘೋಷಣೆಯಂತಹ ಕ್ರಮಗಳು ತಾತ್ಕಾಲಿಕ ಆಕರ್ಷಣೆಯಾಗಬಹುದು, ಆದರೆ ಸುಸ್ಥಿರ ಅಭಿವೃದ್ಧಿ ಅಗತ್ಯ.

ರಾಜಕೀಯವು ಜನಸೇವೆಗಾಗಿ ಇರಬೇಕು, ಅಧಿಕಾರಕ್ಕಾಗಿ ಅಲ್ಲ ಎಂಬುದು ಎಲ್ಲರೂ ಹೇಳುವ ಮಾತು. ಆದರೆ ವಾಸ್ತವದಲ್ಲಿ ಕುಟುಂಬ ರಾಜಕಾರಣ, ಜಾತಿ-ಸಮುದಾಯ ಲೆಕ್ಕಾಚಾರಗಳು ಪ್ರಬಲವಾಗಿವೆ. ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಕುಟುಂಬದ ವರ್ಚಸ್ಸು ದೀರ್ಘಕಾಲದ್ದು. ಇದು ಜನಸೇವೆಯ ಫಲವೋ ಅಥವಾ ವ್ಯವಸ್ಥೆಯ ದೌರ್ಬಲ್ಯವೋ ಎಂಬುದನ್ನು ಜನರು ನಿರ್ಧರಿಸಬೇಕು. ಬಿಜೆಪಿ “ಬದಲಾವಣೆ”ಯ ಸಂದೇಶ ನೀಡುತ್ತಿದ್ದರೂ, ಅದು ಕೇವಲ ವಿರೋಧ ಪಕ್ಷದ ಧ್ವನಿಯಾಗಿ ಉಳಿಯದೆ ಸಕಾರಾತ್ಮಕ ಪರ್ಯಾಯವಾಗಬೇಕು.

ಈ ಉಪಚುನಾವಣೆಯಲ್ಲಿ ಮತದಾರರ ಜವಾಬ್ದಾರಿ ದೊಡ್ಡದು. ಅನುಕಂಪ, ಕುಟುಂಬ ನಿಷ್ಠೆ ಅಥವಾ ಸಮುದಾಯ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಅಭಿವೃದ್ಧಿ, ಪಾರದರ್ಶಕತೆ ಮತ್ತು ಜನೋಪಯೋಗಿ ಕಾರ್ಯಗಳನ್ನು ಆಧರಿಸಿ ಮತ ನೀಡಬೇಕು. ಯುವಕರು ಮತ್ತು ಮಹಿಳೆಯರು ಹೆಚ್ಚು ಸಕ್ರಿಯರಾಗಬೇಕು. ಮತದಾನ ಶೇಕಡಾ 80ಕ್ಕಿಂತ ಹೆಚ್ಚು ಆಗುವಂತೆ ಮಾಡುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಸೂಚಕ.

ಕರ್ನಾಟಕ ರಾಜಕೀಯದಲ್ಲಿ ಉಪಚುನಾವಣೆಗಳು ಸಣ್ಣ ಪರೀಕ್ಷೆಗಳು. ದಾವಣಗೆರೆ ದಕ್ಷಿಣದ ಫಲಿತಾಂಶವು 2028ರ ವಿಧಾನಸಭಾ ಚುನಾವಣೆಗೆ ಸಂದೇಶ ನೀಡುತ್ತದೆ. ಕಾಂಗ್ರೆಸ್ ಗೆದ್ದರೆ ಅದು ತನ್ನ ಬಲವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುತ್ತದೆ. ಬಿಜೆಪಿ ಗೆದ್ದರೆ ಅದು ವಿರೋಧ ಪಕ್ಷವಾಗಿ ತನ್ನ ಸಾಮರ್ಥ್ಯವನ್ನು ತೋರಿಸುತ್ತದೆ. ಆದರೆ ಗೆಲುವು ಯಾರದ್ದಾದರೂ, ಜಯಿಸುವುದು ದಾವಣಗೆರೆ ದಕ್ಷಿಣದ ಜನರೇ ಆಗಬೇಕು.

ಈ ಹೋರಾಟದಲ್ಲಿ ರಾಜಕೀಯ ಪಕ್ಷಗಳು ಜನರ ಸಮಸ್ಯೆಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ಪ್ರಚಾರ ಮಾಡಲಿ. ಮತದಾರರು ತಮ್ಮ ಧ್ವನಿಯನ್ನು ಸ್ಪಷ್ಟವಾಗಿ ಮತ್ತು ನಿರ್ಭಯವಾಗಿ ವ್ಯಕ್ತಪಡಿಸಲಿ. ದಾವಣಗೆರೆ ದಕ್ಷಿಣ ಉಪಚುನಾವಣೆಯು ಪ್ರಜಾಪ್ರಭುತ್ವದ ಸೌಂದರ್ಯವನ್ನು ಪ್ರದರ್ಶಿಸುವ ಅವಕಾಶವಾಗಲಿ. ಅಭಿವೃದ್ಧಿ, ಸಮಾನತೆ ಮತ್ತು ಪಾರದರ್ಶಕ ಆಡಳಿತದತ್ತ ಕ್ಷೇತ್ರ ಸಾಗಲಿ ಎಂಬುದೇ ನಮ್ಮ ಆಶಯ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

Trending