Connect with us

ಅಂತರಂಗ

ಅರಿಮೆಯ ಅರಿವಿರಲಿ-14 : ತನ್ನ ಬಣ್ಣಿಸಬೇಡ

Published

on

  • ಯೋಗೇಶ್ ಮಾಸ್ಟರ್

ತ್ಮರತಿಯ ಮತ್ತೊಂದು ಮುಖ್ಯ ಲಕ್ಷಣವೆಂದರೆ ತನ್ನ ಹೊಗಳಿಕೆಯ ಉನ್ಮತ್ತತೆಯಲ್ಲಿ ಮೈಮರೆಯುವುದು. ತನ್ನನ್ನು ಪ್ರದರ್ಶಿಸಿಕೊಳ್ಳುವ ಅಮಲಿನಲ್ಲಿ ಮತ್ತು ಬಣ್ಣಿಸಿಕೊಳ್ಳುವ ಮದದಲ್ಲಿ ಮೈಮರೆಯುವುದು. ಹೆಚ್ಚೆಚ್ಚು ಮಾಡಿಕೊಂಡಷ್ಟೂ ಹೆಚ್ಚೆಚ್ಚು ಮದ. ಯಾವ್ಯಾವ ಸಂದರ್ಭಗಳು ಒದಗುವುದೋ ಅದನ್ನೆಲ್ಲಾ ತನ್ನ ಬಣ್ಣನೆಗೆ ಬಳಸಿಕೊಳ್ಳುವುದು. ಅದಕ್ಕೆ ಖರ್ಚಾಗುವುದೋ? ಆಗಲಿ. ಒಟ್ಟಾರೆ ತನ್ನ ಬಣ್ಣನೆ ವರ್ಣನೆ ಪ್ರದರ್ಶನವಾಗಬೇಕು.

ದೇವಸ್ಥಾನಕ್ಕೆ ಫ್ಯಾನ್ ಹಾಕಿಸಿದರಾ? ಅದ್ಯಾವುದೋ ಆಶ್ರಮಕ್ಕೆ ಅಲಮಾರಿ ಕೊಟ್ಟರಾ? ಇನ್ಯಾವುದೋ ಗುಡಿಗೆ ಗಂಟೆ ದಾನವಿತ್ತರಾ? ಅದರ ಮೇಲೆಲ್ಲಾ ಅವರ ಹೆಸರಿರಬೇಕು. ಕೆಲವೊಮ್ಮೆ ಯಾರದೋ ಸ್ಮರಣೆಯಿಂದ ಕೊಡುತ್ತಿದ್ದು, ಅವರ ಹೆಸರೂ ಸೇರಿದಂತೆ ಕೊಟ್ಟವರ ಹೆಸರೂ, ಅವರ ಹೆಂಡರು ಮಕ್ಕಳ ಹೆಸರೂ ಉಲ್ಲೇಖಿತವಾಗಿರಬೇಕು. ಇದು ಆತ್ಮತೃಪ್ತಿಯ ವಿಷಯವಲ್ಲ. ಅರಿಮೆಯ ತೃಪ್ತಿ. ನಾರ್ಸಿಸಂ ಎಂಬ ಮಾನಸಿಕ ಸಮಸ್ಯೆಯು ಮನಸ್ಸಿಗೆ ಹಾತೊರೆಯುವಂತೆ ಮಾಡುವ ಬಯಕೆ. ಯಾವುದೇ ಅರಿಮೆಯನ್ನು ನಿವಾರಿಸಿಕೊಳ್ಳಲು ಮಾಡಬೇಕಾದ ಮೊದಲನೆಯ ಕೆಲಸವೆಂದರೆ, ಅದನ್ನು ತಮ್ಮಲ್ಲಿ ಗುರುತಿಸಿಕೊಳ್ಳುವುದು ಮತ್ತು ಅದು ಮತ್ತೆ ತಲೆ ಎತ್ತದಂತೆ ಬಹಳ ಎಚ್ಚರದಿಂದ ಕೆಲಸ ಮಾಡುವುದು. ಪ್ರಜ್ಞಾಪೂರ್ವಕವಾಗಿ ವರ್ತಿಸುವುದು.

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ” ಎನ್ನುವ ಬಸವಣ್ಣ ಆತ್ಮರತಿಯ ಅರಿಮೆಯನ್ನು ನಿವಾರಿಸಿಕೊಳ್ಳಲು ಅರಿವಿನ ದಾರಿ ತೋರುತ್ತಾರೆ. ತನ್ನನ್ನು ಬಣ್ಣಿಸಿಕೊಳ್ಳುವುದೊಂದು ವಿಧಾನವಾದರೆ, ಮತ್ತೊಬ್ಬರನ್ನು ಹಳಿಯುತ್ತಾ ತಾನೆಷ್ಟು ಉತ್ತಮನು ಎಂದು ಪ್ರದರ್ಶಿಸಿಕೊಳ್ಳುವುದು ಮತ್ತೊಂದು ವಿಧಾನ. ತನ್ನ ಬಣ್ಣಿಸಿಕೊಂಡು ಇದಿರಿರುವವರನ್ನು ಹಳಿಯುವುದಕ್ಕೆ ಮನೆಯಲ್ಲಿ ಮಕ್ಕಳಿಗೆ ಬಹಳಷ್ಟು ಪೋಷಕರೇ ಮಾದರಿಯಾಗುತ್ತಾರೆ.

ತಾವು ಸಣ್ಣವರಿದ್ದಾಗ ಅದೆಷ್ಟು ಕಷ್ಟಪಟ್ಟೆವು. ನಮಗೆ ಕೇಳಿದ್ದೆಲ್ಲಾ ಸಿಗುತ್ತಿರಲಿಲ್ಲ. ನಿಮಗೆ ಎಲ್ಲಾ ಸಿಗುತ್ತಿದೆ. ನಿಮಗೆ ಕಷ್ಟ ಅರ್ಥವಾಗಲ್ಲ. ನಾವು ಅಷ್ಟು ದೂರ ನಡೆದುಕೊಂಡು ಹೋಗುತ್ತಿದ್ದೆವು. ನಿಮಗೆ ಈಗ ವಾಹನ ಸೌಕರ್ಯವಿದೆ. ನಮಗೆ ಹೊಟ್ಟೆಗೆ ಸರಿಯಾಗಿ ದೊರಕುತ್ತಿರಲಿಲ್ಲ. ನಿಮಗೆ ಕೇಳಿದ್ದು ಕೇಳಿದ್ದೆಲ್ಲಾ ಸಿಗುತ್ತದೆ. ನಿಮಗೆ ಹೊಟ್ಟೆ ತುಂಬಾ ಸಿಗತ್ತಲ್ಲಾ ಅದಕ್ಕೇ ಕೊಬ್ಬು. ನಮಗೆ ಒಂದು ಪುಸ್ತಕ ಬೇಕಾದರೆ ಅದೆಷ್ಟು ಕಾಡಿಬೇಡಿ ಪಡೆಯಬೇಕಿತ್ತು. ನೀವು ಅದೆಷ್ಟು ವ್ಯರ್ಥ ಮಾಡುತ್ತೀರಿ. ಇಲ್ಲಿ ಪೋಷಕರು ತಮ್ಮನ್ನು ಬಣ್ಣಿಸಿಕೊಂಡು, ಮಕ್ಕಳನ್ನು ಹಳಿದುಕೊಂಡು ಮಾಡುತ್ತಿರುವುದೇನು? ಮಕ್ಕಳ ಮುಂದೆ ಪೋಷಕರ ಆತ್ಮರತಿಯ ಪ್ರದರ್ಶನ.

ಕಪಟತನ ಕದವಿಕ್ಕಿಕೊಳ್ಳದು

ಆತ್ಮರತಿಯ ವೇದಿಕೆ ಯಾವುದಾದರೂ ಆಗಬಹುದು. ದೇಗುಲ, ಅನಾಥಾಶ್ರಮ, ಸಾಮಾಜಿಕ ಸಂಸ್ಥೆಗಳು, ಆಧ್ಯಾತ್ಮಿಕ ಆಶ್ರಮಗಳು, ಧಾರ್ಮಿಕ ಕೇಂದ್ರಗಳು; ಹೀಗೆ.
ಆತ್ಮರತಿಯ ಈ ಅರಿಮೆಯ ಬಗ್ಗೆ ಎಚ್ಚರವಹಿಸಲು ಯೇಸು ನೀಡುವ ಎಚ್ಚರಿಕೆ ಬಹಳ ಸ್ಪಷ್ಟವಾಗಿದೆ.

ನೀನು ದಾನಧರ್ಮ ಮಾಡುವಾಗ ತುತ್ತೂರಿ ಊದಿಸಬೇಡಿ. ಜನರ ಹೊಗಳಿಕೆಗಾಗಿ ಕಪಟಿಗಳು ಪ್ರಾರ್ಥನಾಮಂದಿರಗಳಲ್ಲೂ ಹಾದಿಬೀದಿಗಳಲ್ಲೂ ಹೀಗೆ ಪ್ರದರ್ಶನ ಮಾಡುತ್ತಾರೆ. ನೀನು ದಾನಧರ್ಮ ಮಾಡುವಾಗ ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೂ ತಿಳಿಯದ ಹಾಗೆ ಗೋಪ್ಯವಾಗಿರಲಿ.”
“ಪ್ರಾರ್ಥನೆ ಮಾಡುವಾಗ ಕಪಟಿಗಳಂತೆ ಮಾಡಬೇಡಿ. ಜನರು ತಮ್ಮನ್ನು ನೋಡಲೆಂದು ಪ್ರಾರ್ಥನಾಮಂದಿರಗಳಲ್ಲೂ ಬೀದಿಯ ಚೌಕಗಳಲ್ಲೂ ನಿಂತು ಪ್ರಾರ್ಥನೆ ಮಾಡಲು ಇಚ್ಛಿಸುತ್ತಾರೆ. ನೀನು ಪ್ರಾರ್ಥನೆ ಮಾಡುವಾಗ ನಿನ್ನ ಕೊಠಡಿಗೆ ಹೋಗು; ಬಾಗಿಲನ್ನು ಮುಚ್ಚು; ಅಂತರಂಗದಲ್ಲಿರುವ ನಿನ್ನ ತಂದೆಗೆ ಪ್ರಾರ್ಥನೆ ಮಾಡು.”

ತಾನೆಷ್ಟು ಪರಮ ಭಕ್ತ ಎಂದು ಹೊರಗೆ ತೋರಿಸಿಕೊಳ್ಳುವುದು ಭಕ್ತಿಯಲ್ಲ ಆತ್ಮರತಿ ಎನ್ನುವುದು ಯೇಸುವಿನ ಧೋರಣೆ. ಈ ಅರಿಮೆಯನ್ನು ಗುರುತಿಸುತ್ತಾ ಮುಂದುವರಿಸುವ ಬಸವಣ್ಣ,  ಮಾಡಿ ಕೆಟ್ಟರು ಮನವಿಲ್ಲದೆ. ನೀಡಿ ನೀಡಿ ಕೆಟ್ಟರು ನಿಜವಿಲ್ಲದೆ” ಮಾಡುವ ಮತ್ತು ನೀಡುವುದು ಎರಡೂ ತನ್ನ ಆತ್ಮರತಿಯ ತೃಪ್ತಿಗೇ ಹೊರತು ಆತ್ಮತೃಪ್ತಿಗಲ್ಲ. ಮಾಡುವ ನೀಡುವ ನಿಜಗುಣವುಳ್ಳವನು ಡಂಗೂರವನ್ನು ಸಾರುವುದೇನೂ ಬೇಕಾಗಿಲ್ಲ ಎಂಬುದು ಬಸವಣ್ಣನವರ ಸ್ಪಷ್ಟತೆ.

ಯೇಸು ಹೇಳುವಂತೆ ಕಪಟತನವು ಕದವಿಕ್ಕಿಕೊಳ್ಳದು. ಹೊರಗೆ ಆಡಂಬರಕ್ಕೆ ತನ್ನ ಪ್ರದರ್ಶನ ಮಾಡಬೇಕು. ಅದು ದಾನವೋ, ಪ್ರಾರ್ಥನೆಯೋ, ಪೂಜೆಯೋ ಎಂತದ್ದೋ. ಈಗ ಕರೋನಾ ಲಾಕ್ ಡೌನ್ ಸಮಯದಲ್ಲಿಯೂ ಕೂಡಾ ಅದೆಷ್ಟು ಜನರು ತಮ್ಮ ಪಾಡಿಗೆ ತಾವು ಆಹಾರ ವಿತರಣೆ ಅಥವಾ ದೈನಂದಿನ ಜೀವನಕ್ಕೆ ಅಗತ್ಯವಿರುವುದರ ವಿತರಣೆಗಳನ್ನು ಉಚಿತವಾಗಿ ತಮ್ಮ ಸಾಮಾಜಿಕ ಕರ್ತವ್ಯದಂತೆ ಆತ್ಮತೃಪ್ತಿಗಾಗಿ ಮಾಡುತ್ತಿದ್ದಾರೆ. ಹಾಗೆಯೇ ಒಂದಿಷ್ಟು, ಒಂದು ದಿನ ಎಲ್ಲೋ ಒಂದಷ್ಟು ಮಾಡಿ ಅದರ ಫೋಟೋ ಮತ್ತು ವಿಡಿಯೋಗಳನ್ನು ಮಾಡಿಕೊಂಡು ವರ್ಷವಿಡೀ ವಾಟ್ಸಪ್ ಮತ್ತು ಫೇಸ್ಬುಕ್ಕಿನಲ್ಲಿ ಎಲ್ಲರಿಗೂ ತೋರಿಸಿಕೊಂಡು ಪ್ರಶಂಸೆಯ ಹಸಿವಿಗೆ ಉಣಬಡಿಸಿಕೊಳ್ಳುತ್ತಿರುವುದೂ ಕೂಡಾ ಬೇಕಾದಷ್ಟಿದೆ.

ಕ್ರೂರ ಕರುಣೆ

ಕೆಲವರಿಗೆ ಅವರಾತ್ಮರತಿಯ ತೃಪ್ತಿಗೆ ಅನಾಥಾಶ್ರಮಗಳ ಅಥವಾ ವೃದ್ಧಾಶ್ರಮಗಳೂ ಕೂಡಾ ಆತ್ಮರತಿಯ ವೇದಿಕೆಗಳಾಗುತ್ತವೆ. ಮೊದಲನೆಯದಾಗಿ ಅದನ್ನು ಅನಾಥಾಶ್ರಮ ಎನ್ನುವುದೇ ಒಂದು ವ್ಯಂಗ್ಯ ಮತ್ತು ಕ್ರೂರ. ಆ ಗೂಡಿನಲ್ಲಿರುವವರನ್ನು ತಾವು “ಅನಾಥ ಅನಾಥ” ಎಂಬ ಪ್ರಜ್ಞೆಯನ್ನು ಸದಾ ಜಾಗೃತವಾಗಿಡುವ ಫಲಕಗಳು ಅವು. ಅಲ್ಲಿಗೆ ಹೋಗಿ ಸಮಾರಂಭದಂತೆ ಒಂದು ಕಾರ್ಯಕ್ರಮ ಮಾಡಿ, ವೇದಿಕೆಯ ಮೇಲೆ ದಾನಿಗಳನ್ನು ಇನ್ನಿಲ್ಲದಂತೆ ಹಾಡಿ ಹೊಗಳಿ, ಅವರು ಉಬ್ಬಿ, ಕೊಡುವ ಕೈ ಮೇಲೆ ಎಂಬ ಭಾವದಿಂದ ಮೈಮರೆತು, ತಮ್ಮ ಮುಂದೆ ಕುಳಿತಿರುವ ಅನಾಥರು, ವೃದ್ಧರು, ಮಕ್ಕಳು ತಾವು ಯಾರದೋ ಅಧೀನದಲ್ಲಿ, ಕೃಪೆಯಲ್ಲಿ ಬದುಕುತ್ತಿದ್ದೇವೆ ಎಂಬ ಕೀಳರಿಮೆಯಲ್ಲಿ ಮುಖಬಾಡಿಸಿಕೊಂಡು ಕುಳಿತಿದ್ದು ಯಾವ ಸಾರ್ಥಕ್ಯಕ್ಕೆ?

ಅನಾಥಾಲಯದಿಂದಲೋ, ಹೆಣ್ಣು ಮಕ್ಕಳಿರುವ ಸೇವಾಶ್ರಮದಿಂದಲೋ ಯಾರನ್ನಾದರೂ ಮದುವೆಯಾಗುವುದು ಇನ್ನೂ ದೊಡ್ಡ ತುತ್ತೂರಿ. ‘ಆ ಹೆಣ್ಣು ಮಗುವಿಗೆ ಬಾಳು ಕೊಡುತ್ತಿರುವ ತಾನೊಬ್ಬ ಬಹು ದೊಡ್ಡ ಉದಾರಿ’ ಎಂದು ಪತ್ರಿಕೆಯಲ್ಲಿ ಪ್ರಕಟಿಸಿಕೊಳ್ಳುವಷ್ಟು ಆತ್ಮರತಿ. ಯಾರು ಯಾರಿಗೆ ಬಾಳು ಕೊಡುವುದು? ವಿಧವೆ ಎಂದು ಕರೆಯುವುದೂ, ಅನಾಥರೆಂದೂ ಕರೆಯುವುದೂ ಕೂಡಾ ಒಂದು ಅಮಾನವೀಯವೇ ಆಗಿರುವಾಗ, ಅವರನ್ನು ಮದುವೆಯಾಗಿ ಬಾಳು ಕೊಡುತ್ತೇನೆ ಎಂದು ಘೋಷಿಸಿಕೊಳ್ಳುವುದು ಆ ಹೆಣ್ಣುಮಗುವನ್ನು ದೈನೇಸಿಯಾಗಿಯೇ ಇಡುವ ಬಗೆ. ಆತ್ಮರತಿಯ ಅರಿಮೆಯುಳ್ಳವರಿಗೆ ಇಂಥಾ ಕ್ರೂರ ಕಾರುಣ್ಯವು ಮತ್ತು ಪ್ರದರ್ಶಕ ಔದಾರ್ಯವು ಸಾಮಾನ್ಯ.

ವಿಧವೆಯ ಅಥವಾ ಯಾವುದೇ ಹೆಣ್ಣುಮಗುವಿನೊಂದಿಗಿನ ಮದುವೆ ಆ ಭಾವವೇ ಇಲ್ಲದೇ ಬರಿಯ ವ್ಯಕ್ತಿಗತವಾಗಿ ಆಪ್ತ ಸಂಗತಿಯಾಗಬಾರದೇ! ಕೆಲವರು ಕೊಡುವ ಕಾರಣವೇನೆಂದರೆ, ಇವು ಇತರರಿಗೆ ಪ್ರೇರಣೆಯಾಗುವುದು ಎಂದು. ಒಬ್ಬನ ಆತ್ಮರತಿಯು ಇನ್ನೊಬ್ಬನ ಆತ್ಮರತಿಯ ಪ್ರದರ್ಶನಕ್ಕೆ ದಾರಿಯಾಗುವುದು ಅಷ್ಟೇ. ಏಕೆಂದರೆ, ಪ್ರಾಮಾಣಿಕ ಮನಸ್ಸುಳ್ಳವನಿಗೆ ಈ ಪ್ರೇರಣೆಗಳೇನೂ ಬೇಕಾಗಿಲ್ಲ. ಆತನ ಆತ್ಮಸಾಕ್ಷಿ ಮತ್ತು ಸ್ವಪ್ರೇರಣೆಯೇ ಸಾಕಾಗಿರುತ್ತದೆ.

ಸಾಮೂಹಿಕ ರತಿಕ್ರೀಡೆ

ಎಷ್ಟೋ ಬಾರಿ ನಮ್ಮ ದೇಶದಲ್ಲಿಯೂ ಸೇರಿದಂತೆ ವಿವಿಧ ಸಮಾಜಗಳಲ್ಲಿ ಯಾವುದಕ್ಕೆ ನಾಚಿಕೊಳ್ಳಬೇಕೋ ಅದಕ್ಕೆ ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಯಾವುದಕ್ಕೆ ಹೆಮ್ಮೆಪಟ್ಟುಕೊಳ್ಳಬೇಕೋ ಅದಕ್ಕೆ ನಾಚಿಕೊಳ್ಳುತ್ತಾರೆ.

ಸಮೂಹ ಆತ್ಮರತಿ ಅಥವಾ (Collective narcissism or group narcissism)
ಅಂತ ಒಂದಿದೆ. ಅದರದೇನಪ್ಪಾ ಲಕ್ಷಣ ಅಂದರೆ, ವ್ಯಕ್ತಿಗತವಾದ ಆತ್ಮರತಿಯು ಸಮುದಾಯ ಗುರುತಿನಲ್ಲಿ ಅಥವಾ ಸಂಕಲಿತವಾಗಿರುವ ವಿಷಯದಲ್ಲಿ ವಿಲೀನಗೊಳಿಸಿಕೊಂಡಿರುವುದು. ಆ ಸಮುದಾಯವನ್ನು ಅಥವ ಸಮೂಹವನ್ನು ಅಥವಾ ಸಂಸ್ಥೆಯನ್ನು ಯಾರಾದರೂ ಏನಾದರೂ ನಕಾರಾತ್ಮಕವಾಗಿ ಅಂದರೆ ವೈಯಕ್ತಿಕವಾಗಿ ತನಗೇ ಏನಾದರೂ ಆದಂತೆ ಭಾಸವಾಗುವುದು.

ಅದೇ ರೀತಿಯಲ್ಲಿ ತಾನು ಆ ಸಮೂಹದವನು ಎಂದು ಹೆಮ್ಮೆ ಪಡುವುದು. ಅದೇ ರೀತಿಯಲ್ಲಿ ಅದಕ್ಕೇನಾದರೂ ಪ್ರಶಂಸೆಯು ದೊರಕಿದರೆ ವಿಪರೀತವಾಗಿ ತಾನು ಹೆಮ್ಮೆ ಪಡುವುದು. ಇದು ಹಲವು ವೇಷಗಳನ್ನು ಹಾಕಿಕೊಂಡು ಬರುತ್ತದೆ. ಧರ್ಮ, ಸಂಸ್ಕೃತಿ, ಜಾತಿ, ಸಂಘ, ಸಂಸ್ಥೆ; ಹೀಗೆ. ಧಾರ್ಮಿಕತೆಯ ಸಂಘರ್ಷವೇ ಬಹಳ ಪ್ರಧಾನ ಕಿರುಕುಳವಾಗಿರುವ ಈ ಸಮಯದಲ್ಲಿ ಧಾರ್ಮಿಕ ಸಮುದಾಯಗಳ ವಿಚಾರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ.

ನಾನು ಇಂತಹ ಧರ್ಮದಲ್ಲಿ ಗುರುತಿಸಿಕೊಂಡೆನೆಂದರೆ, ಆ ಧರ್ಮವು ಅತ್ಯಂತ ಶ್ರೇಷ್ಟವೆಂದೂ, ಅದರಲ್ಲಿ ಯಾವುದೇ ಬಗೆಯ ನ್ಯೂನ್ಯತೆಗಳಿರುವುದಿಲ್ಲವೆಂದೂ, ಅದರ ವಿಚಾರಗಳೇ ಅಂತಿಮವೆಂದೂ, ಅದನ್ನು ವಿರೋಧಿಸುವವರು ಅಥವಾ ವಿಮರ್ಶಿಸುವವರು ನಮ್ಮ ಶತ್ರುಗಳೆಂದು ಭಾವಿಸುವುದು ಸಮೂಹರತಿಯ ಅರಿಮೆಯ ವ್ಯಾಪ್ತಿಗೆ ಒಳಗಾಗುತ್ತದೆ.

ಎಷ್ಟೋ ಬಾರಿ ಆ ಧರ್ಮವು ತಾನು ಹುಟ್ಟಿದ ಸಂದರ್ಭದ ಸಾಮಾಜಿಕ ವ್ಯವಸ್ಥೆಗೆ ಮತ್ತು ಆಗಿನ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ತನ್ನ ರೂಪುರೇಷೆಗಳನ್ನು ತೀರ್ಮಾನಿಸಿಕೊಂಡಿರುತ್ತದೆ. ಹಿಂದೂ ಧರ್ಮದ ಹೊರತಾಗಿ ವಿಶ್ವದ ಇತರ ಸ್ಥಾಪಿತ ಧರ್ಮಗಳೆಲ್ಲವೂ ಕೂಡಾ ಸಮಾಜೋಧಾರ್ಮಿಕದ ಆಂದೋಲನದ ಪ್ರತಿಫಲಗಳೇ ಆಗಿವೆ. ಹಾಗಾಗಿ ಅವುಗಳನ್ನು ಈ ಕಾಲ ಘಟ್ಟದಲ್ಲಿ ನಿಲುಕಿಸಿಕೊಳ್ಳುವಾಗ ಕೆಲವು ಅಭಿಪ್ರಾಯ ಬೇಧಗಳು ಮತ್ತು ತಾಂತ್ರಿಕ ವ್ಯತ್ಯಾಸಗಳು ಬಹಳ ಸಹಜವಾಗಿರುತ್ತವೆ.

ಇನ್ನು ಹಿಂದೂ ಧರ್ಮವು ವಿಶಾಲ ಭೌಗೋಳಿಕ ಪರಿಸರದಲ್ಲಿ ವಿಕಾಸವಾದ ಜೀವನ ಪದ್ಧತಿಯೇ ಹೊರತು ಯಾವುದೊಂದು ಉದ್ದೇಶದ ಹಿನ್ನೆಲೆಯಲ್ಲಿ ಸ್ಥಾಪಿತವಾದದ್ದೇ ಅಲ್ಲ. ಇಲ್ಲೇ ಸಮಸ್ಯೆ ಇರುವುದು. ವ್ಯಕ್ತಿಗತವಾಗಿ ಸಂಮೋಹಿತಗೊಂಡು ವ್ಯಕ್ತಿಗಳು ಆಯಾ ಧಾರ್ಮಿಕತೆಯಲ್ಲಿ ಮೈಮರೆಯುವುದರಿಂದ ಧರ್ಮವು ದಾರಿಯಾಗದೇ ಗುರಿಯಾಗಿ ಪರಿಣಮಿಸಿ ಒಂದು ಅರಿಮೆಯಾಗಿ ಪರಿಣಮಿಸುತ್ತದೆ.

ತನ್ನ ಧರ್ಮವೇ ಅಂತಿಮವೆಂದೂ, ಶ್ರೇಷ್ಟವೆಂದೂ ಎತ್ತಿ ಹಿಡಿಯಲು ಎಲ್ಲಾ ಧರ್ಮಿಯರೂ ಹೋರಾಡುವಾಗ ಸಂಘರ್ಷಗಳು ಉಂಟಾಗುತ್ತವೆ. ಅಷ್ಟೇ ಅಲ್ಲದೇ ನಿನ್ನ ಧರ್ಮವು ನನ್ನ ಧರ್ಮಕ್ಕಿಂತ ಕನಿಷ್ಟ ಎಂದು ನಿರೂಪಿಸಲು ತನ್ನ ವಿರೋಧಿ ಧರ್ಮವೆಂದು ಯಾವುದನ್ನು ಭಾವಿಸಿರುತ್ತಾರೋ ಅದರ ಹುಳುಕುಗಳನ್ನು ಎತ್ತಿ ಹಿಡಿಯುವುದು, ಆಯಾ ಧಾರ್ಮಿಕ ವ್ಯಕ್ತಿಗಳ ತೇಜೋವಧೆ ಮಾಡಲು ಯತ್ನಿಸುವುದು, ಆ ಮೂಲಕ ವಿರೋಧಿಗಳನ್ನು ಕೆರಳಿಸುವುದು ಇತ್ಯಾದಿಗಳಾಗುತ್ತವೆ. ಇದರಿಂದ ಸಾಂಪ್ರದಾಯಿಕ ವಿರೋಧಿಗಳು ರೂಪುಗೊಳ್ಳುತ್ತವೆ.

ಆಗ ರಾಜಕೀಯ, ಸಾಮಾಜಿಕ ಸ್ಥಾನಮಾನವೇ ಮೊದಲಾಗಿ ಸಾಂಸ್ಕೃತಿಕ ಅಸಹನೆಗಳೂ ಉಂಟಾಗಿ ಸಾಮಾಜಿಕ ಸಂಘರ್ಷಗಳು ಉಂಟಾಗಿ ಜೀವಗಳು ಮೌಲ್ಯರಹಿತವಾಗುತ್ತವೆ.ಆಗ ನಡೆದ ಕ್ರೈಸ್ತರ ಮತ್ತು ಮುಸಲ್ಮಾರದ ಕ್ರುಸೇಡ್ ಯುದ್ಧಗಳು, ಇಸ್ರೇಲ್ ಮತ್ತು ಪ್ಯಾಲೆಸ್ತಿನನಲ್ಲಿ ಮುಸಲ್ಮಾನರ ಮತ್ತು ಯಹೂದಿಗಳ ಸಂಘರ್ಷ, ಪ್ರಾಚೀನ ಭಾರತದಲ್ಲಿ ವೈದಿಕರ ಮತ್ತು ಬೌದ್ಧಾನುಯಾಯಿಗಳ ಸಂಘರ್ಷ, ಪ್ರಸ್ತುತ ಭಾರತದಲ್ಲಿ ಹಿಂದೂ ಮುಸ್ಲೀಮರ ಸಂಘರ್ಷಗಳು, ಆರ್ಯ ರಕ್ತೋನ್ಮಾದದಲ್ಲಿ ಯಹೂದಿಗಳ ಮೇಲೆ ನಾಜಿಗಳ ದ್ವೇಷ, ರೊಹಿಂಗ್ಯಾದಲ್ಲಿ ಮುಸಲ್ಮಾನರ ಮೇಲೆ ಬೌದ್ಧರ ಆಕ್ರಮಣ, ತಮಿಳುನಾಡಿನಲ್ಲಿ ಶೈವ ಮತ್ತು ವೈಷ್ಣವ ಸಂಘರ್ಷ, ಪ್ರಾಚೀನ ಕರ್ನಾಟಕದಲ್ಲಿ ಜೈನ ಮತ್ತು ಶೈವರ ಸಂಘರ್ಷ; ಹೀಗೆ ಒಂದೆರಡು ಉದಾಹರಣೆಗಳಲ್ಲ.

ತಮ್ಮ ಶ್ರೇಷ್ಟತೆಯು ತಮ್ಮ ವಿರೋಧಿಗಳ ದ್ವೇಷದ ಆಧಾರದ ಮೇಲೆಯೇ ಅವಲಂಬಿತವಾಗಿರುವುದು ಸಮೂಹ ರತಿಯ ಪರಮಾವಧಿ. ಪರಸ್ಪರ ವ್ಯಕ್ತಿಗತ ಪರಿಚಯವೇ ಇಲ್ಲದವರು, ಪರಸ್ಪರ ಯಾವುದೇ ದ್ವೇಷ ಮತ್ತು ಸಂಘರ್ಷಗಳು ಇರದಿದ್ದರೂ ಸಮುದಾಯ, ಮತ, ಧರ್ಮ, ಸಂಸ್ಕೃತಿ, ಬುಡಕಟ್ಟು ಮತ್ತು ಜನಾಂಗಗಳು ಎಂಬ ಕಾರಣಕ್ಕಾಗಿ ವಿರೋಧಿಸುವುದು ಮತ್ತು ದಾಳಿಗಳನ್ನು ಮಾಡುವುದು ಸಮುದಾಯದಲ್ಲಿ ಉಲ್ಬಣಗೊಂಡಿರುವ ಮನೋರೋಗದ ಲಕ್ಷಣ. ನೆಮ್ಮದಿಯ ಜೀವನಕ್ಕೆ, ಬದುಕಿನ ವ್ಯವಹಾರಕ್ಕೆ ಬೇಡದೇ ಇರುವುದೆಲ್ಲವೂ ದ್ವೇಷಿಸುವುದಕ್ಕೆ ಕಾರಣವಾಗಿ ಪರಿಣಮಿಸುತ್ತದೆ.

ವ್ಯಕ್ತಿಗತವಾದಂತಹ ದೌರ್ಬಲ್ಯವನ್ನು, ಅಪರಾಧಗಳನ್ನು ಸಮುದಾಯದ ತಲೆಗೆ ಕಟ್ಟಿ ದ್ವೇಷಿಸುವಂತಹ ಮನಸ್ಥಿತಿ ಬೆಳೆದಿರುತ್ತದೆ. ಯಾರಾದರೊಬ್ಬ ಮುಸಲ್ಮಾನ ಕ್ಯಾಬ್ ಡ್ರೈವರ್ ನಿಮ್ಮೊಡನೆ ಸರಿಯಾಗಿ ಚಿಲ್ಲರೆ ಕೊಡದೇ ಹೊರಟುಹೋದಾಗ ಮುಸಲ್ಮಾನರೇ ಹೀಗೆ ಮೋಸಗಾರರು ಎಂಬ ಮಾತು ಮೊದಲು ಹೊರಟರೆ, ಅಥವಾ ಬ್ರಾಹ್ಮಣ ಪತ್ರಕರ್ತನೊಬ್ಬ ತನ್ನ ಶ್ರೇಷ್ಟತೆಯ ವ್ಯಸನವನ್ನು ಪತ್ರಿಕೆಯಲ್ಲಿಯೋ ಅಥವಾ ಮಾಧ್ಯಮಗಳಲ್ಲಿಯೋ ಕಾರಿಕೊಂಡಾಗ ಬ್ರಾಹ್ಮಣರೆಲ್ಲರೂ ಹೀಗೇ ಎಂದು ಅಭಿಪ್ರಾಯಕ್ಕೆ ಬಂದರೆ ಅಲ್ಲಿಗೆ ಸಮೂಹ ಆತ್ಮರತಿಯ ಅರಿಮೆಯಲ್ಲಿ ಸಿಕ್ಕಿದ್ದೇವೆಂದು ಅರ್ಥ.

ವ್ಯಕ್ತಿಗಳೇ ಇಂತಹ
ಮನೋರೋಗಗಳಲ್ಲಿರುವವರು. ಅವರು ಯಾವ ಜಾತಿಯಲ್ಲಿದ್ದರೂ, ಧರ್ಮದಲ್ಲಿದ್ದರೂ ಅವುಗಳ ಲಾಂಛನದಡಿಯಲ್ಲಿ ತಮ್ಮ ಅರಿಮೆಗಳ ಪ್ರದರ್ಶನ ಮಾಡುತ್ತಿರುತ್ತಾರೆ. ಅವನು ಮುಸಲ್ಮಾನನಾಗಿದ್ದರೆ ಇಸ್ಲಾಂ ಶ್ರೇಷ್ಟತೆಯ ಗೀಳು, ಹಿಂದೂ ಆಗಿದ್ದರೆ ಹಿಂದೂ ಶ್ರೇಷ್ಟತೆಯ ಗೀಳು ಅಷ್ಟೇ. ಈ ಗೀಳಿನ ಅಥವಾ ವ್ಯಸನದ, ಅರಿಮೆಯ ಸಮಸ್ಯೆ ಧರ್ಮಗಳದ್ದೋ, ಸಂಸ್ಕೃತಿಗಳದ್ದೋ ಅಲ್ಲ. ವ್ಯಕ್ತಿಗಳದ್ದು. ಅವನಿಗಿರುವ ಸಮಸ್ಯೆ Collective narcissism or group narcissism. ಆದರೆ ಎಡವಟ್ಟಾಗುವುದು ಎಲ್ಲಿ ಗೊತ್ತೇ? ಸಮಾನ ಮನಸ್ಕರು ಸಮೂಹಗಳನ್ನು ಮಾಡಿಕೊಂಡು ಅವರ ಅಭಿರುಚಿ, ಆಸಕ್ತಿ ಇತ್ಯಾದಿಗಳನ್ನು ಗಟ್ಟಿಗೊಳಿಸಿಕೊಳ್ಳುವಂತೆ, ಈ ಸಮೂಹ ರತಿಯ ಅರಿಮೆಯ ಮನಸ್ಥಿತಿಯವರೂ ಕೂಡಾ ಆಯಾ ಜಾತಿ, ಧರ್ಮ ಇತ್ಯಾದಿಗಳ ಲಾಂಛನಗಳಲ್ಲಿ ಶ್ರೇಷ್ಟತೆಯ ವ್ಯಸನವನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಹೋಗುತ್ತಾರೆ.

ಅದರ ಜಾಲದಲ್ಲಿ ಸಿಕ್ಕವರೆಲ್ಲರೂ ಮತ್ತೆ ಮತ್ತೆ ತಮ್ಮ ಧರ್ಮಾಂಧತೆಗೆ ಅಥವಾ ಜಾತಿವಾದಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾ ಹೋಗುತ್ತಾರೆ. ಭಾರತದಲ್ಲಿ ಜಾತಿಯ ವಿಷಯದಲ್ಲಿಯೂ ಈ ಸಾಮುದಾಯಿಕ ಮಾನಸಿಕ ಸಮಸ್ಯೆ ಬಹಳ ಗಾಢವಾಗಿದೆ. ಯಾವುದೇ ವ್ಯಕ್ತಿಯು ತನ್ನ ಜಾತಿಯ ಹೆಸರನ್ನು ತನ್ನ ಹೆಸರಿನ ಜೊತೆಗೆ ಹೆಮ್ಮೆಯಿಂದ ತಗುಲಿಹಾಕಿಕೊಳ್ಳುವನೋ, ಅಥವಾ ಅಪ್ರಾಯೋಗಿಕವಾಗಿದ್ದರೂ, ಅವೈಚಾರಿಕವಾಗಿದ್ದರೂ, ಅವೈಜ್ಞಾನಿಕವಾಗಿದ್ದರೂ, ಅಪ್ರಸ್ತುತವಾಗಿದ್ದರೂ ಜಾತಿಯ ಆಚರಣೆಗಳನ್ನು ಜೀವಂತವಾಗಿ ಇಡಲೇಬೇಕು ಎಂದು ಪ್ರಯತ್ನಿಸುತ್ತಾ, ಸಾಮಾಜಿಕ ಮತ್ತು ವೈಯಕ್ತಿಕವಾದ ಮಾನಸ ಸಂಬಂಧಗಳನ್ನು ಕಡೆಗಣಿಸುತ್ತಾನೆಂದರೆ ಅವನಿಗೆ ಈ ಮನೋರೋಗವಿದೆ ಎಂದೇ ಅರ್ಥ.

ಇದೇ ರೀತಿಯಲ್ಲಿ ಸಂಸ್ಕೃತಿಯಲ್ಲಿ ಉನ್ಮತ್ತತೆಯಿಂದ ಗುರುತಿಸಿಕೊಳ್ಳುವಂತಹ ಅರಿಮೆಯೂ ಕೂಡಾ ಇದರ ಒಂದು ಭಾಗವಾಗಿದೆ. ಗಮನಿಸಿ, ಇಂತವರೆಲ್ಲಾ ಒಟ್ಟೊಟ್ಟಿಗೆ ಗುಂಪುಗೂಡಿಕೊಂಡು ನಮ್ಮದೇ ಶ್ರೇಷ್ಟ, ಮತ್ತೊಬ್ಬರದು ಕನಿಷ್ಟ, ನಾವು ಏನಾದರೂ ನಮ್ಮದನ್ನು ಬಿಡಬಾರದು. ಹೀಗೆಲ್ಲಾ ಮಾತಾಡಿಕೊಂಡು ಸಂತೋಷಪಡುವುದು ಸಾಮೂಹಿಕ ರತಿಕ್ರೀಡೆಯಂತೆ.

ಜಗತ್ತಿನಲ್ಲಿಯೇ ನಮ್ಮಷ್ಟು ಶ್ರೇಷ್ಟ ಸಂಸ್ಕೃತಿ ಯಾವುದೂ ಇಲ್ಲ, ನಮ್ಮದೇ ಅತ್ಯಂತ ಪುರಾತನ, ನಮ್ಮದೇ ಈಗಲೂ ಪ್ರಸ್ತುತ, ಇತರ ಎಲ್ಲಾ ಸಂಸ್ಕೃತಿಗಳ ನಮ್ಮದಕ್ಕಿಂತ ಕೀಳು; ಈ ಬಗೆಯ ವ್ಯಸನವು ಅಥವಾ ಶ್ರೇಷ್ಟತೆಯ ಗೀಳು ಕೂಡಾ ಈ ಕಾಂಪ್ಲೆಂಕ್ಸ್‍ನ ಒಂದು ಭಾಗವಾಗಿದೆ.

ಒಳಕುದಿ

ಹಾಗಾದರೆ ನಮ್ಮದರ ಬಗ್ಗೆ ನಮಗೆ ಹೆಮ್ಮೆ, ಅಭಿಮಾನ ಬೇಡವೇ? ಬೇಕು. ಅದು ಆರೋಗ್ಯಕರವಾಗಿರುವುದು ಯಾವಾಗೆಂದರೆ, ನಮ್ಮಂತದ್ದೇ ಹಲವು ಸಂಸ್ಕೃತಿಗಳು, ಧರ್ಮಗಳು ಜಗತ್ತಿನಲ್ಲಿ ಅಸ್ತಿತ್ವದಲ್ಲಿವೆ. ಅವುಗಳಿಗೆ ಅವುಗಳದೇ ಆದಂತಹ ಮೌಲ್ಯವಿದೆ. ನಾವು ಅನುಸರಿಸುತ್ತಿರುವಂತೆ ಅವುಗಳನ್ನು ಕೂಡಾ ನಮ್ಮಂತಹ ಜೀವಿಗಳೇ ಅನುಸರಿಸುತ್ತಿದ್ದಾರೆ. ನಮ್ಮದು ಮತ್ತು ಅವರದರಲ್ಲಿ ಕೂಡುವಿಕೆಯ ಅಂಶಗಳಾವುವು? ಭಿನ್ನವಿರುವ ಅಂಶಗಳಾವುವು; ಇತ್ಯಾದಿಗಳೆಲ್ಲಾ ನಮ್ಮ ಅಧ್ಯಯನದ ಅಥವಾ ಅರಿವಿನ ವಿಷಯಗಳಾಗಿ ಒದಗಿದರೆ ಆರೋಗ್ಯಕರವಾದ ಸಾಂಸ್ಕೃತಿಕ ಅಥವಾ ಧಾರ್ಮಿಕವಾದ ವಾತಾವರಣವು ಸಮಾಜದಲ್ಲಿ ಉಂಟಾಗುತ್ತದೆ.

ನಮ್ಮ ಸಂಸ್ಕೃತಿ ಅಥವಾ ಧರ್ಮದ ಮಾನ್ಯತೆಯು ಅಥವಾ ಶ್ರೇಷ್ಟತೆಯು ಮತ್ತೊಂದು ಯಾವುದೋ ಒಂದರ ಜೊತೆಗಿನ ಪೈಪೋಟಿಯಂತಾಗಿರಬಾರದು. ಅಥವಾ ಅದನ್ನು ದ್ವೇಷಿಸುವ ಮಾನದಂಡದಲ್ಲಿ ನಮ್ಮದರ ಶ್ರೇಷ್ಟತನವು ತಲೆಯೆತ್ತುವಂತಹ ಮನಸ್ಥಿತಿಯು ಇರಕೂಡದು. ಅಷ್ಟೇ!
ಒಟ್ಟಾರೆ ವ್ಯಕ್ತಿವ್ಯಕ್ತಿಯ ಮನಸ್ಥಿತಿಗಳು ಆರೋಗ್ಯದಿಂದಿದ್ದರೆ ಸಮಾಜವು ಆರೋಗ್ಯವಾಗಿರುತ್ತದೆ. ಏಕೆಂದರೆ ವ್ಯಕ್ತಿವ್ಯಕ್ತಿಗಳಿಂದ ಕುಟುಂಬ, ಕುಟುಂಬಗಳಿಂದ ಸಮಾಜ.

ಇತರ ಧರ್ಮೀಯರನ್ನು, ಸಂಸ್ಕೃತಿ, ಆಚಾರ ವಿಚಾರಗಳನ್ನು ಅನಿವಾರ್ಯವಾಗಿ ಸಹಿಸಿಕೊಳ್ಳುವಂತಹ ಮನಸ್ಥಿತಿಯೂ ಕೂಡಾ ಆರೋಗ್ಯಕರವೇನಲ್ಲ. ಏಕೆಂದರೆ ಇದು ಒಳ ಕುದಿಯಾಗಿರುತ್ತದೆ. ಈ ಒಳಕುದಿ ಸ್ವೀಕರಿಸಿರುವುದಿಲ್ಲ. ಸಹಿಸಿಕೊಂಡಿರುತ್ತದೆ ಅಷ್ಟೇ. ಯಾವಾಗ ಅವರ ಸಹನಾ ಶಕ್ತಿ ಬಲ ಕಳೆದುಕೊಳ್ಳುತ್ತದೆಯೋ ಆಗ ಸ್ಫೋಟಗೊಳ್ಳುತ್ತದೆ. ಸಮಾಜದ ಧರ್ಮಗಳಲ್ಲಿ, ಸಂಸ್ಕೃತಿಗಳಲ್ಲಿ ಮಾತ್ರವಲ್ಲ ಸಹಿಸಿಕೊಂಡಿರುವ ಈ ಒಳಕುದಿಯ ಸಂಘರ್ಷ. ಮನೆಗಳಲ್ಲಿಯೂ ಕೂಡಾ. ಗಂಡ ಹೆಂಡತಿಯನ್ನು ಅಥವಾ ಹೆಂಡತಿ ಗಂಡನನ್ನು, ಮಕ್ಕಳು ಪೋಷಕರನ್ನು, ಪೋಷಕರು ಮಕ್ಕಳನ್ನು ಮತ್ತು ಇತರ ಸದಸ್ಯರನ್ನು ಅವರವರ ಸ್ವಭಾವ, ಅಭಿರುಚಿ, ವ್ಯಕ್ತಿತ್ವದಂತೆ ಸ್ವೀಕರಿಸಿರುವುದಿಲ್ಲ. ಹೇಗೋ ಸಹಿಸಿಕೊಂಡಿರುತ್ತಾರೆ.

ಸಹಿಸಿಕೊಳ್ಳುವುದಕ್ಕೂ ಸ್ವೀಕರಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಸಹಿಸಿಕೊಳ್ಳುವುದು ಎಂದರೆ ಅಸಹನೆ ಇದೆ, ಒಪ್ಪಿಗೆ ಇಲ್ಲ, ಆದರೆ ವಾತಾವರಣವು ಕೆಡಬಾರದು ಎಂದೋ ಅಥವಾ ಇನ್ನಾವುದಾದರೂ ಕಾರಣಕ್ಕೆ ಸಂಘರ್ಷಗಳಾಗಬಾರದು ಎಂದೋ ‘ಅಡ್ಜೆಸ್ಟ್’ ಮಾಡಿಕೊಳ್ಳುವುದು. ಹೊಂದಾಣಿಕೆ ಮಾಡಿಕೊಳ್ಳುವುದು. ಅಡ್ಜೆಸ್ಟ್ ಮಾಡಿಕೊಳ್ಳುವವರು ತಮ್ಮ ಬಲ ಮೇಲಾದಾಗ ರಿಜೆಕ್ಟ್ ಮಾಡುವುದರಲ್ಲಿ ಯಾವ ಆಶ್ಚರ್ಯವೂ ಇರುವುದಿಲ್ಲ. ಅಡ್ಜೆಸ್ಟ್‍ಮೆಂಟ್ ಎಂದರೆ ಒತ್ತಡದಲ್ಲಿರುವ ಬಂಧನವೇ.

ಆದರೆ ಅಕ್ಸೆಪ್ಟ್ ಮಾಡಿರುವವರು ಅವರಿಂದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವುದಿಲ್ಲ. ತಮ್ಮ ಆತ್ಮರತಿಯ ಅರಿಮೆಗೆ ಅನುಗುಣವಾಗಿ ಅವರು ವರ್ತಿಸಬೇಕೆಂದು ಕಾಯುವುದಿಲ್ಲ. ಅವರು ಇರುವುದೇ ಹಾಗೆ. ನಾನು ಇರುವುದೇ ಹೀಗೆ. ಪರಸ್ಪರ ನಿರೀಕ್ಷೆಗಳಿಲ್ಲದೇ ಅನುಬಂಧದಲ್ಲಿರುವುದು. ಕೂಡುವಂತಹ ಚುಕ್ಕಿಗಳಿಗೆ ಗೆರೆಗಳನ್ನು ಎಳೆದು ರಂಗೋಲಿ ಬಿಡಿಸುವುದು. ಆತ್ಮರತಿಯ ಅರಿಮೆಯೆಂದ ಬಿಡುಗಡೆ ಎಂದರೆ ಮಿಲನ. ಆತ್ಮರತಿಯ ಅರಿಮೆಯಲ್ಲಿರುವುದು ಎಂದರೆ ಕಾರಾಗೃಹಗಳೊಂದಿಗೆ ನಡೆದಾಡುತ್ತಿರುವುದು. ಯಾರೂ ಯಾರನ್ನೂ ಸಂಧಿಸರು, ಬೆರೆಯರು.
ಅದಕ್ಕೆ ಬಸವಣ್ಣನವರ ಸರಳ ಸೂತ್ರ “ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ.” ಅರಿಮೆಯಿಂದ ಹೊರಗೆ ಬರುವುದು ವ್ಯಕ್ತಿಯು ತನ್ನ ಮನೋರೋಗದಿಂದ ಮುಕ್ತನಾಗುವುದು ಅಂತರಂಗ ಶುದ್ಧಿ. ವ್ಯಕ್ತಿಗತವಾಗಿ ಮಾನಸಿಕವಾಗಿ ಆರೋಗ್ಯವಾಗಿರುವವರಿಂದ ಆರೋಗ್ಯಕರ ಸಮಾಜವೇ ನಿರ್ಮಾಣವಾಗುತ್ತದೆ. ಇದು ಬಹಿರಂಗ ಶುದ್ಧಿ.

(ಮುಂದುವರಿಯುವುದು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂತರಂಗ

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

Published

on

250ಕ್ಕೂ ಹೆಚ್ಚು ಗಿಳಿಗಳ ನಿಗೂಢ ಸಾವು

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆತಂಕ

ಬೆಂಗಳೂರು: ಮಧ್ಯಪ್ರದೇಶ ರಾಜ್ಯದ ಖಾರ್ಗೋನ್ ಜಿಲ್ಲೆಯಲ್ಲಿರುವ ನರ್ಮದಾ ನದಿ ತೀರದಲ್ಲಿ 250ಕ್ಕೂ ಹೆಚ್ಚು ಗಿಳಿಗಳು ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ ಸಾವನ್ನಪ್ಪಿರುವ ಪ್ರಕರಣ ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ನಡೆದ ದುರ್ಘಟನೆ ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನರ್ಮದಾ ನದಿ ತೀರದಲ್ಲಿ ಸುಮಾರು ಇನ್ನೂರಕ್ಕೂ ಅಧಿಕ ಗಿಳಿಗಳು ನಿಗೂಢವಾಗಿ ಸಾವನ್ನಪ್ಪಿದ್ದು ಆರಂಭದಲ್ಲಿ ಇದು ಹಕ್ಕಿ ಜ್ವರ ದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿತ್ತು ಆದರೆ ಪಶುವೈದ್ಯಕೀಯ ಅಧಿಕಾರಿ ಡಾ. ಸುರೇಶ್ ಬಫೇಲ್ ಅವರು ನೀಡಿದ ಮಾಹಿತಿ ಪ್ರಕಾರ ಹಕ್ಕಿಗಳ ಹೊಟ್ಟೆಯಲ್ಲಿ ಅಕ್ಕಿ ಕಾಳುಗಳು ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿವೆ. ಅಲ್ಲದೆ ಕೃಷಿ ಭೂಮಿಯಲ್ಲಿ ಬಳಸುವ ಕೀಟನಾಶಕ ಮಿಶ್ರಿತ ಆಹಾರ ಅಥವಾ ನರ್ಮದಾ ನದಿಯ ಕಲುಷಿತ ನೀರು ಸೇವಿಸಿ 200 ರಿಂದ 50 ಕ್ಕೂ ಅಧಿಕ ಮೃತಪಟ್ಟಿರುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಿದ್ದು ಇವರ ಮಾಹಿತಿಯನ್ನು ಆದರಿಸಿ ವಿಶೇಷ ತನಿಖೆ ಮಾಡಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಆಗ್ರಹಿಸಿದೆ.

ಖರ್ಗೋನ್‌ ಜಿಲ್ಲೆಯ ಬದ್ವಾ ಪ್ರದೇಶದ ನರ್ಮದಾ ನದಿ ತೀರದಲ್ಲಿರುವ ಅಕ್ವೆಡಕ್ಟ್ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು ಅರಣ್ಯ ಇಲಾಖೆಯು ಸೇತುವೆಯ ಸುತ್ತಮುತ್ತ ಹಕ್ಕಿಗಳಿಗೆ ಆಹಾರ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಸದ್ಯ ಹಕ್ಕಿಗಳ ಸಾವಿಗೆ ನಿಖರ ಕರಣ ತಿಳಿಯಲು ಹಕ್ಕಿಗಳ ಅವಶೇಷಗಳನ್ನು ಜಬಲ್ಪುರಕ್ಕೆ ಕಳುಹಿಸಲಾಗಿದೆ. ಸದ್ಯ ಅರಣ್ಯ ಇಲಾಖೆ ಮತ್ತು ಪಶುವೈದ್ಯಕೀಯ ತಂಡಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.

ಇನ್ನೊಂದು ಮುಖ್ಯ ವಿಚಾರ ಏನೆಂದರೆ ಪಕ್ಷಿಗಳಿಗೆ ಮನುಷ್ಯರು ಸೇವಿಸುವ ಎಣ್ಣೆ ಪದಾರ್ಥ ಅಥವಾ ಬೇಯಿಸಿದ ಆಹಾರ ನೀಡುವುದು ಅವುಗಳ ಜೀರ್ಣಾಂಗ ವ್ಯವಸ್ಥೆಯ ಮೇಲೆ ಮಾರಕ ಪರಿಣಾಮ ಬೀರುತ್ತದೆ ಎಂದು ಪಶುವೈದ್ಯಕೀಯ ಅಧಿಕಾರಿ ಡಾ. ಮನಿಷಾ ಚೌಹಾಣ್ ಹೇಳಿದ್ದಾರೆ. ಏನೇ ಆದರೂ ನೂರಾರು ಗಿಳಿಗಳು ಸಾವನ್ನಪಿರುವುದು ಮಾತ್ರ ದುರಂತ.

ಈ ಸಂದರ್ಭದಲ್ಲಿ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರೂ ಹಾಗೂ ರಾಷ್ಟ್ರೀಯ ಸಮಿತಿ ನಿರ್ದೇಶಕರಾದ ಮಾಲತೇಶ್ ಅರಸ್ ಹರ್ತಿಕೋಟೆ, ಹಿರಿಯ ಉಪಾಧ್ಯಕ್ಷರಾದ ಗುರುರಾಜ್ ಹೂಗಾರ್, ಉಪಾಧ್ಯಕ್ಷರಾದ ಯೋಗೀಶ್ ಕುಮಾರ್, ರುದ್ರಮುನಿ, ಡಾ.ಸಿದ್ದಲಿಂಗಪ್ಪ, ಮತ್ತು ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

Continue Reading

ಅಂತರಂಗ

ಭೀಮಾ ಕೋರೆಗಾಂವ ; ಮಹರ್ ಸೈನಿಕರ ವೀರಗಾಥೆ

Published

on

~ ಡಾ. ಸುಜಾತಾ ಚಲವಾದಿ

ಭಾರತದ ಇತಿಹಾಸದಲ್ಲಿ ಅನೇಕ ಕ್ರೂರ ವ್ಯಂಗ್ಯಗಳಿವೆ. ಅವುಗಳಲ್ಲಿ ಪೇಶ್ವಾಶಾಹಿ ಆಡಳಿತವು ಒಂದು. ಅವರ ಆಡಳಿತ ಸಂದರ್ಭದಲ್ಲಿ ಅಸ್ಪೃಶ್ಯರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿಯಿತ್ತು. ಜಾತಿ ವ್ಯವಸ್ಥೆ ವಿಜೃಂಭಿಸುತ್ತಿದ್ದ ಕಾಲವದು.

ದೌರ್ಜನ್ಯ, ಅನ್ಯಾಯಕ್ಕೆ ಒಳಗಾಗಿ ಸದಾ ನೋವಿನ ಬದುಕು ಅಸ್ಪೃಶ್ಯರದ್ದಾಗಿತ್ತು. ಕಿತ್ತುತಿನ್ನುವ ಬಡತನ, ಹಸಿವು, ದಾರಿದ್ರö್ಯ, ಅಶಿಕ್ಷಿತರಾದ ಅಸ್ಪಶ್ಯರು ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಕನಸಿನ ಮಾತಾಗಿತ್ತು. ಇವರ ಬಲಹೀನತೆಯನ್ನು ಬಳಸಿಕೊಂಡು ‘ಪ್ರಾಣಿಗಿಂತ ಕೀಳಾಗಿ’ ನಡೆಸಿಕೊಳ್ಳುತ್ತಿದ್ದ ಪೇಶ್ವಾ ಆಡಳಿತವು ಶೂದ್ರರ, ನಿಮ್ನರ ಮೇಲೆ ತಮ್ಮ ಅಟ್ಟಹಾಸವನ್ನು ಮೆರೆಯುತ್ತಿದ್ದರು.

ಅನ್ಯಾಯಕ್ಕೆ ಒಳಗಾದ ಕೆಳಜಾತಿಯ ಮಹಾರರು, ಮಾಂಗರು, ಚಮ್ಮಾರರು ಮತ್ತು ಮಹಿಳೆಯರು ತತ್ತರಿಸಿ ಹೋಗಿದ್ದರು. ಮಹಾರಾಷ್ಟçದ ಪೇಶ್ವಾಶಾಹಿ ಕಾಲಘಟ್ಟದಲ್ಲಿ ನಡೆದ ಭೀಮಾ ಕೋರೆಗಾಂವ ಚಳವಳಿಯನ್ನು ಬರಹದ ರೂಪದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ನಮ್ಮ ಮುಂದೆ ಇರಿಸಿದ್ದಾರೆ.
1ನೇ ಜನವರಿ 1818ರಲ್ಲಿ ಅಂದರೆ ಇಂದಿಗೆ 207 ವರ್ಷಗಳ ಹಿಂದೆ 28,000 ಸಾವಿರ ಸಂಖ್ಯೆಯ ಪೇಶ್ವಾಸೈನ್ಯದ ಎದುರು ಐದುನೂರು ಮಹಾರ ಜನಾಂಗದವರು ಹೋರಾಡಿ ವಿಜಯ ಸಾಧಿಸಿದ ದಿನ ಕೋರೆಗಾಂವ್ ಯುದ್ಧ ‘ನ್ಯಾಯದ ಯುದ್ಧ’, ಇಡೀ ಪರಿಶಿಷ್ಟ ಜಾತಿಯವರಿಗೆ ಸ್ವಾಭಿಮಾನದ ಸಂಕೇತವಾಗಿ ಪರಿಣಮಿಸಿದೆ.

ಈ ದಿನವನ್ನು ಯಾವ ಮಹಾರರೂ ಮರೆಯುವ ಹಾಗಿಲ್ಲ. ಬಾಬಾಸಾಹೇಬರು ಈ ದಿನದ ಸ್ಮರಣೆಯನ್ನು “ದಲಿತರ ಪರಾಕ್ರಮ ದಿನ”ವೆಂದು ತಿಳಿದು ಕೋರೆಗಾಂವನಲ್ಲಿ ನಿರ್ಮಿಸಿದ ವಿಜಯಸ್ತಂಭ ಸ್ಮಾರಕಕ್ಕೆ ವಂದಿಸಲು ಪ್ರತೀ ವರ್ಷ ಜನವರಿ 1 ರಂದು ತಪ್ಪದೇ ಹೋಗಿ ಬರುತ್ತಿದ್ದರು. ಜಾತಿಪದ್ಧತಿಯೇ ಪ್ರಧಾನವಾದ ಕಾಲದಲ್ಲಿ ಅಸ್ಪಶ್ಯರ ಸ್ಥಿತಿ ತುಂಬಾ ಹದಗೆಟ್ಟು ಹೋಗಿತ್ತು. ಮೇಲು-ಕೀಳು ಎಂಬ ಭಾವನೆ ಏರುಮುಖದಲ್ಲಿದ್ದ ಕಾಲ.

ಮನುಸ್ಮೃತಿಯನ್ನು ಚಾಚೂ ತಪ್ಪದೇ ಮುನ್ನಡೆಸಿಕೊಂಡು ಬರುವ ಮೇಲ್ವರ್ಗದವರು ಅಸ್ಪೃ್ಪಶ್ಯರನ್ನು ಕಂಡರೆ ಅನೇಕ ಬಗೆಯ ಶಿಕ್ಷೆಗೆ ಒಳಗು ಮಾಡುತ್ತಿದ್ದರು. ಅಸ್ಪೃಶ್ಯರನ್ನು ಕಂಡರೆ ಮೈಲಿಗೆಯಾಗುತ್ತದೆ ಎನ್ನುವ ಮನಸ್ಥಿತಿ ಅವರದ್ದು, ಅಸ್ಪೃಶ್ಯ ರಸ್ತೆಗೆ ಇಳಿಯಕೂಡದು, ಒಳ್ಳೆ ಬಟ್ಟೆ ಹಾಕಿಕೊಳ್ಳುವ ಹಾಗಿಲ್ಲ, ಒಳ್ಳೆಯ ಆಹಾರ ಸೇವನೆಯಂತೂ ಕನಸಿನ ಮಾತಾಗಿತ್ತು. ಊರ ಪ್ರವೇಶಕ್ಕೆ ಸಮಯ ನಿಗದಿ ಮಾಡಿದ್ದರು.

ಸೂರ್ಯೋದಯ, ಸೂರ್ಯಾಸ್ತದ ಸಂದರ್ಭದಲ್ಲಿ ಅಸ್ಪೃಶ್ಯ ವ್ಯಕ್ತಿ ಊರಲ್ಲಿ ಬರುವಂತಿರಲಿಲ್ಲ. ಸೂರ್ಯ ನೆತ್ತಿಯ ಮೇಲಿದ್ದಾಗ ಮಾತ್ರ ಊರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬೀದಿಯಲ್ಲಿ ಹೋಗಬೇಕಾದರೆ ಕೊರಳಿಗೆ ಮಣ್ಣಿನ ಸಣ್ಣ ಕುಡಿಕೆಯನ್ನು ಹಾಕಿಕೊಂಡು ಹೋಗಬೇಕು, ಉಗುಳುವ ಸಂದರ್ಭ ಬಂದರೆ, ಅದೇ ಕುಡಿಕೆಯಲ್ಲಿಯೇ ಉಗುಳಿಕೊಳ್ಳಬೇಕು. ಕಾರಣ ರಸ್ತೆಯಲ್ಲಿ ಅಸ್ಪೃಶ್ಯರು ಉಗುಳಿದರೆ ಅವನ ಹೇಸಿಗೆಯನ್ನು ಸವರ್ಣೀಯರು ತುಳಿಯಬಾರದು.

ತುಳಿದರೆ ಮೈಲಿಗೆಯಾಗುತ್ತಿತ್ತು. ರಸ್ತೆಯಲ್ಲಿ ನಡೆಯುವಾಗ ಆತನ ನೆರಳು ಅವನ ಕಾಲಲ್ಲಿಯೇ ಉಳಿಯುವ ಹಾಗೇ ಮಧ್ಯಾಹ್ನದ ನೆತ್ತಿ ಸುಡುವ ಬಿಸಿಲಿನಲ್ಲಿ ಮಾತ್ರ ಊರಲ್ಲಿ ಬರಬೇಕು. ನಡೆದುಕೊಂಡು ಹೋಗುವಾಗ ಹೆಜ್ಜೆ ಗುರುತುಗಳು ಕಾಣದಿರಲಿ ಎಂದು ಬೆನ್ನಿಗೆ ಮುಳ್ಳಿನ ಪೊರಕೆಯನ್ನು ಕಟ್ಟಿಕೊಂಡು ಸಾಗಬೇಕಾದ ಸ್ಥಿತಿ ಅವರದಾಗಿತ್ತು. ಹಾಗೇ ಅಸ್ಪೃಶ್ಯನೊಬ್ಬ ಬರುವುದನ್ನು ‘ಸಂಭೋಳಿ ಸಂಭೋಳಿ ಮಾಯ್ ಬಾಪ್ ಹೊಲೆಯ ಬರುತ್ತಿದ್ದೇನೆ’ ಅಂತಾ ಕೂಗಿ ಹೇಳಬೇಕು. ಇಲ್ಲ, ಕೈಯಲ್ಲಿ ಗೆಜ್ಜೆಕಟ್ಟಿದ ಕೋಲನ್ನು ಹಿಡಿದುಕೊಂಡು ನೆಲಕ್ಕೆ ಕುಕ್ಕಿಸಿಕೊಂಡು ಸದ್ದು ಮಾಡುತ್ತ ಹೋಗಬೇಕು.

ಇದಲ್ಲದೆ ಅಸ್ಪೃಶ್ಯ ಊರ ಪ್ರವೇಶ ಮಾಡಿದಾಗ ಯಾರಾದರೂ ಎದುರು ಬಂದರೆ ಸುಡುವ ಬಿಸಿಲಲ್ಲಿ ಓಡಿ ಹೋಗಿ ಭೂಮಿಯನ್ನು ಅಪ್ಪಿಕೊಳ್ಳಬೇಕು. ಸವರ್ಣೀಯರಿಗೆ ಅವನ ನೆರಳೂ ಸ್ಪರ್ಶ ಮಾಡುವಂಗಿರಲಿಲ್ಲ. ಇಂತಹ ಅಮಾನವೀಯ ನಿಯಮಗಳನ್ನು ಹೊರಡಿಸಿದ ಕಾಲಘಟ್ಟವದು. ಇಷ್ಟೆಲ್ಲಾ ನಿಯಮಗಳನ್ನು ಅಸ್ಪಶ್ಯರ ಮೇಲೆ ಹೇರಿದರೂ ಕೂಡಾ ಮಹಾರ್ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೊಗಲರ ಬೃಹತ್ ಸೈನ್ಯದ ವಿರುದ್ಧ ಹೋರಾಡಿ ಪೇಶ್ವೆಗಳ ಪರವಾಗಿ ಯುದ್ಧಕ್ಕೆ ಸನ್ನದ್ಧರಾಗಿದ್ದರು. ಮಹಾರ್ ಸೈನಿಕರ ಶೌರ್ಯದಿಂದಲೇ ಪೇಶ್ವೆಗಳ ಆಡಳಿತ ಸುಗಮವಾಗಿ ನಡೆಯುತ್ತಿತ್ತು. ಆದರೆ ಪೇಶ್ವಗಳು ಮತ್ತು ಸವರ್ಣೀಯರು ಮಹಾರ್‌ಸೈನಿಕರನ್ನು ತುಚ್ಛವಾಗಿ ನಡೆಸಿಕೊಳ್ಳುತ್ತಿದ್ದರು.

1758 ರಲ್ಲಿ ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿಯನ್ನು ಸ್ಥಾಪಿಸಿದ ನಂತರ ಮಹಾರ್ ಜನರನ್ನು ಸೈನಿಕರಾಗಿ ನೇಮಕ ಮಾಡಿಕೊಳ್ಳಲು ಪ್ರಾರಂಭಿಸಿದರು. ಭಾರತೀಯ ಮಹಾರ್ ಸೈನಿಕರಿಗೆ ಶಿಕ್ಷಣದ ಅವಕಾಶವನ್ನು ಮಾಡಿಕೊಟ್ಟಿದ್ದರ ಪರಿಣಾಮ ಸ್ವಲ್ಪ ಮಟ್ಟಿಗೆ ತಿಳಿವಳಿಕೆ ಮೂಡಲು ಸಹಾಯವಾಯಿತು. ತಮ್ಮ ಹಕ್ಕು-ಬಾಧ್ಯತೆಗಳನ್ನು ತಿಳಿಯುವಂತಾಯಿತು. ಬ್ರಿಟಿಷರಲ್ಲಿ ಇರದ ಜಾತಿವ್ಯವಸ್ಥೆ ನಮ್ಮ ದೇಶದಲ್ಲಿ ಕಂಡ ಮಹಾರ್ ಸೈನಿಕರು ಬ್ರಿಟಿಷರಿಗೆ ತಮ್ಮ ಬೆಂಬಲವನ್ನು ನೀಡುವಂತಾಯಿತು. ಅವಮಾನ, ಅನ್ಯಾಯ, ದೌರ್ಜನ್ಯಕ್ಕೆ ಒಳಗಾದ ಮಹಾರ್ ಜನಾಂಗದವರು, ಈ ಎಲ್ಲದರಿಂದ ಮುಕ್ತಿ ಕಾಣಲು ಬ್ರಿಟಿಷರ ಪರವಾಗಿ ಯುದ್ಧಗಳಲ್ಲಿ ಹೋರಾಡಲು ಪ್ರಾರಂಭಿಸಿದರು.

ಎರಡನೆಯ ಬಾಜೀರಾವ್ ಪೇಶ್ವೆಯ ರಾಜ್ಯಾಡಳಿತವಿದ್ದ ಸಂದರ್ಭದಲ್ಲಿ 31 ನೇ ಡಿಸೆಂಬರ್ 1817 ರ ರಾತ್ರಿ ಬ್ರಿಟಿಷರ ಸೇನಾಪತಿ ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಡನ್ ಮುಂದಾಳತ್ವದಲ್ಲಿ ಸೇನೆ ಪೇಶ್ವೆಗಳ ಮೇಲೆ ದಾಳಿ ಮಾಡಲು ಸಿದ್ಧಗೊಂಡಿತು. ಇದನ್ನು ತಿಳಿದ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕ ಮಾರುವೇಷದಲ್ಲಿ ಪೇಶ್ವೆಯನ್ನು ಕಾಣುತ್ತಾನೆ. ಆಗ ಪೇಶ್ವೆ ಮಹಾರ್ ಬೆಟಾಲಿಯನ್ನಿನ ನಾಯಕ ಸಿದ್ಧನಾಕನನ್ನು ಒಳಗೆ ಬಿಟ್ಟವನನ್ನು ಕೊಲ್ಲಿಸುತ್ತಾನೆ. ಇಂಗ್ಲಿಷರು ನಿಮ್ಮ ಮೇಲೆ ಯುದ್ಧ ಮಾಡುವರಿದ್ದಾರೆ, ನೀವು ನಮ್ಮ ಹಕ್ಕುಗಳನ್ನು ನಮಗೆ ನೀಡುವುದಾದರೆ ನಿಮ್ಮ ಪರವಾಗಿ ಅವರ ವಿರುದ್ಧ ನಾವು ಹೋರಾಡುತ್ತೇವೆ ಎನ್ನುತ್ತಾನೆ. “ನಿಮ್ಮ ಹಕ್ಕುಗಳು ಯಾವವು? ನೀನು ಇನ್ನೊಂದು ಘಳಿಗೆ ಇಲ್ಲಿ ನಿಂತರೆ ನಿನ್ನ ಶಿರಚ್ಛೇದನ ಮಾಡುತ್ತೇನೆ” ಎಂದು ಗದರುತ್ತಾನೆ. ಸಿದ್ಧನಾಕ ಮರಳಿ ಬಂದು ಅಲ್ಲಿ ನಡೆದ ಎಲ್ಲ ವಿವರ ಸಂಗಾತಿಗಳಿಗೆ ನೀಡುತ್ತಾನೆ. ಅಂತಿಮವಾಗಿ ಇಂಗ್ಲಿಷರ ಪರವಾಗಿ ಮಹಾರ್ ಬೆಟಾಲಿಯನ್ ಹೋರಾಡಲು ಸಿದ್ಧವಾಗುತ್ತದೆ. ಪೇಶ್ವೆಗಳ ಸೈನ್ಯ ಕೋರೆಗಾಂವ್ ಪ್ರದೇಶದ ಭೀಮಾನದಿಯ ಬಲದಂಡೆಯ ಮೇಲೆ ಯುದ್ಧಕ್ಕೆ ಸಜ್ಜಾಗಿ ಸುತ್ತುವರೆದು ನಿಂತುಕೊಂಡಿತು. ಮಹಾರ್ ರೆಜಿಮೆಂಟ್ ಸೈನ್ಯ ಬ್ರಿಟಿಷರ ಪರವಾಗಿ ಯುದ್ಧಕ್ಕೆ ಸಜ್ಜಾಗಿದ್ದರು.

ಪೇಶ್ವೆಗಳ ಸೇನೆಯು 25,000 ಕುದುರೆ ಸವಾರರು ಮತ್ತು 3,000 ಕ್ಕಿಂತಲೂ ಹೆಚ್ಚು ಸಂಖ್ಯೆಯಲ್ಲಿದ್ದ ಯೋಧರಿಂದ ತುಂಬಿ ತುಳುಕುತ್ತಿತ್ತು. ಎರಡೂ ಸೇನೆಗಳ ನಡುವೆ ಘನಘೋರ ಯುದ್ಧ ಪ್ರಾರಂಭವಾಗುತ್ತದೆ. ಬೃಹತ್ ಸೇನೆಯ ವಿರುದ್ಧ ಬ್ರಿಟಿಷ್ ಸೇನಾಪತಿ ಕ್ಯಾಪ್ಟನ್ ಪ್ರಾನ್ಸಿಸ್ ಸ್ಟಂಡನ್ ತಾನು ಸೋಲುತ್ತೇನೆ ಎಂದುಕೊAಡು ನಿರಾಶೆಯನ್ನು ತಳೆದಿದ್ದ. ಆದರೂ ಎದುರಾಳಿಯ ಜೊತೆ ಯುದ್ಧದಲ್ಲಿ ಮುನ್ನುಗ್ಗುವುದು ಆತನ ವಿಚಾರವಾಗಿತ್ತು. “ಮಹಾರ್ ಸೈನಿಕರು ವೀರಾವೇಶದಿಂದ ಹೋರಾಡಿ ಪೇಶ್ವೆಗಳು ಪಲಾಯನ ಗೈಯ್ಯಲು ಕಾರಣರಾದರು. ಈ ಯುದ್ಧದಲ್ಲಿ ಎರಡನೆಯ ಬಾಜಿರಾವ್ ಪೇಶ್ವೆಯು ಪಲಾಯನ ಮಾಡುವುದರಲ್ಲಿ ಮೊದಲಿಗ”ನೆಂದು ಬಾಬಾಸಾಹೇಬರು ತಮ್ಮ ಬರಹದಲ್ಲಿ ದಾಖಲಿಸಿದ್ದಾರೆ.

ಬೆಳಿಗ್ಗೆ ಆರು ಗಂಟೆಗೆ ಪ್ರಾರಂಭವಾದ ಯುದ್ಧ ರಾತ್ರಿ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ಸಂಖ್ಯೆಯಲ್ಲಿ ಅಲ್ಪವಾಗಿದ್ದರೂ ಅತ್ಯಂತ ಕೆಚ್ಚಿನಿಂದ ಕಲಿತನ ಪ್ರದರ್ಶಿಸಿದ ಮಹಾರ್ ಯೋಧರು, ತಮ್ಮ ಮೇಲೆ ಅಮಾನವೀಯವಾದ ಅಸ್ಪೃಶ್ಯತೆಯನ್ನು ಹೇರಿದ್ದ ಪೇಶ್ವೆ ಆಡಳಿತವನ್ನು ಯುದ್ಧದಲ್ಲಿ ಮಣ್ಣು ಮುಕ್ಕಿಸಿದರು. ಮಹಾರ್ ಸೈನಿಕರ ಅಭೂತಪೂರ್ವ ಕಲಿತನದ ಕಾರಣದಿಂದಲೇ ಬ್ರಿಟಿಷರು ಕೋರೆಗಾಂವ್ ಯುದ್ಧವನ್ನು ಗೆಲ್ಲಲು ಸಾಧ್ಯವಾಯಿತು. ಗೆಲುವಿಗೆ ಕಾರಣರಾದ, ಕದನದಲ್ಲಿ ಹುತಾತ್ಮರಾದ ಯೋಧರನ್ನು ಸದಾಕಾಲ ಸ್ಮರಿಸುವಂತೆ ಕೋರೆಗಾಂವನ ಭೀಮಾನದಿ ತೀರದ ಪ್ರಶಸ್ತವಾದ ಮೈದಾನ, ಕದನದ ಕಿಡಿ ಮೊಟ್ಟ ಮೊದಲು ಹೊತ್ತಿದ ಸ್ಥಳದಲ್ಲಿ ಬ್ರಿಟಿಷರು ಸ್ಮರಣ ಸ್ತಂಭವನ್ನು ಸ್ಥಾಪಿಸಿದರು.

26 ನೆಯ ಮಾರ್ಚ್ 1821 ರಲ್ಲಿ ಈ ಭವ್ಯ ವಿಜಯಸ್ತಂಭಕ್ಕೆ ಅಡಿಗಲ್ಲು ಹಾಕಿದಾಗ ಬಂದೂಕು ಮತ್ತು ತೋಪುಗಳ ಮೂಲಕ ಹುತಾತ್ಮರಿಗೆ ರಾಜಮರ್ಯಾದೆಯ ಶ್ರದ್ಧಾಂಜಲಿ ಸಲ್ಲಿಸಲಾಯಿತು. 63 ಅಡಿ ಎತ್ತರ ಇರುವ ಈ ವಿಜಯಸ್ತಂಭವು 1822 ರಲ್ಲಿ ಪೂರ್ಣವಾಗಿ ನಿರ್ಮಾಣವಾಯಿತು. ಮೊದಲಿಗೆ ಈ ಸ್ತಂಭವನ್ನು ಮಹಾರ್ ಸ್ತಂಭವೆAದು ಕರೆಯಲಾಗುತ್ತಿತ್ತು. ನಂತರದಲ್ಲಿ ವಿಜಯಸ್ತಂಭವೆಂದು ಹೆಸರಿಸಲಾಯಿತು.

ವಿಜಯಸ್ತಂಭದ ಮೇಲೆ 20 ಮಹಾರ್ ಸೈನಿಕರ ಹೆಸರುಗಳನ್ನು ಕೆತ್ತಿಸಲಾಗಿದೆ. ಪ್ರತಿವರ್ಷ ಜನೆವರಿ 1 ರಂದು ಬಾಬಾಸಾಹೇಬರು ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ನಮನವನ್ನು ಸಲ್ಲಿಸುತ್ತಿದ್ದರು. ಇಂತಹ ಐತಿಹಾಸಿಕ ವಿಜಯದ ಸಂಕೇತವಾದ ಕೋರೆಗಾಂವ ಚಳವಳಿಯನ್ನು ಮತ್ತೆ ಮತ್ತೆ ನೆನೆಯುವುದು ಇಂದಿನ ಅನಿವಾರ್ಯವೂ ಹೌದು. ಏಕೆಂದರೆ ಬಾಬಾಸಾಹೇಬರೇ ಹೇಳಿದ ಹಾಗೆ “ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಗದು” ಎಂದಿದ್ದಲ್ಲದೆ ದಲಿತರಾರೂ ಕುರಿಗಳಲ್ಲ, ಅವರು ಹುಲಿಗಳು’ ಎಂದು ಹೇಳಿರುವುದನ್ನು ಮತ್ತೆ ಮತ್ತೆ ಮನನಿಸಬೇಕಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂತರಂಗ

ಕುವೆಂಪು ಅವರಿಗೆ ಲಂಕೇಶರ ಎಂಟು ಪ್ರಶ್ನೆಗಳು

Published

on

ಕುವೆಂಪು ಅವರನ್ನು ನಾನು ಅಂದು ನೋಡಿದ್ದು ಎರಡನೆ ಸಲ. ನಾನು ನೋಡಲು ಬಂದಿರುವ ವಿಷಯ ತಿಳಿದು ಕೈಯಲ್ಲಿ ನನ್ನ ಪ್ರಶ್ನೆ ಮತ್ತು ತಮ್ಮ ಉತ್ತರಗಳಿಂದ ಕೂಡಿದ ಟೈಪ್ ಮಾಡಿದ ಹಾಳೆಗಳನ್ನು ಹಿಡಿದುಕೊಂಡು ಬಂದರು. ನಾನು ಮತ್ತು ಮಿತ್ರ ನೆಲಮನೆ ದೇವೇಗೌಡರು ನಮಸ್ಕರಿಸಿದೊಡನೆ ಕೂತು ಪ್ರಶ್ನೆ ಮತ್ತು ಉತ್ತರಗಳನ್ನು ಓದುತ್ತ ವಿವರಿಸತೊಡಗಿದರು.

ತಮಗೆ ಯಾವುದೇ ಜಾತಿಯ ಬಗ್ಗೆ ಒಣ ಅಭಿಮಾನವಾಗಲಿ ಅನಗತ್ಯ ಪೂರ್ವಗ್ರಹವಾಗಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಅವರ ಮಾತಿನಲ್ಲಿ ತಮ್ಮ ಉತ್ತರಗಳು ಜನಕ್ಕೆಲ್ಲಿ ತಿಳಿಯುವುದಿಲ್ಲವೋ ಎಂಬ ಆತಂಕವಿದ್ದಂತಿತ್ತು. ಆದ್ದರಿಂದ ತಮ್ಮ ಕೃತಿಗಳಿಂದ ಉದಾಹರಣೆ ಎತ್ತಿಕೊಂಡು ಮಾತಾಡಿದರು. ನಾನು ಅವೆಲ್ಲವನ್ನೂ ಓದಿದ್ದೆನಾದ್ದರಿಂದ ಆ ವಿವರಣೆ ಅನಗತ್ಯವಾಗಿತ್ತು. ಆದರೆ ಕುವೆಂಪು ಅವರಿಗೆ ಅದಮ್ಯ ಉತ್ಸಾಹವಿದೆ; ಈ ಸಮಾಜದ ಕೆಡಕುಗಳ ಬಗ್ಗೆ ಕೋಪವಿದೆ. ತಾವು ಎಷ್ಟೇ ಬರೆದರೂ ಮಾತಾಡಿದರೂ ಈ ಜನತೆ ಸರಿಹೋಗುತ್ತದೋ ಇಲ್ಲವೋ ಎಂಬ ಸಂದೇಹವಿದೆ. ಆದ್ದರಿಂದಲೇ ಹಲವೊಮ್ಮೆ ವ್ಯಗ್ರವಾಗಿ ಮಾತಾಡುತ್ತಾರೆ. ಅವರು ನನ್ನ ಪ್ರಶ್ನೆಗಳಿಗೆ ಉತ್ತರ ಹೇಳುತ್ತ ಹೊಸ ಸಾಹಿತ್ಯದ ಬಗ್ಗೆ ಮಾತಾಡಿರುವುದನ್ನೂ ಈ ಅರ್ಥದಲ್ಲೇ ತೆಗೆದುಕೊಳ್ಳಬೇಕೆಂದು ಕಾಣುತ್ತದೆ.

ಕಿರಿಯ ಲೇಖಕರು ಯಾರಿಗೂ ಅರ್ಥವಾಗದ ಗೊಂದಲಗಳಲ್ಲಿ ಸಿಲುಕಿಕೊಂಡು ತಮ್ಮನ್ನು ತಾವು ಮೋಸಗೊಳಿಸಿಕೊಳ್ಳುವ ಬದಲು ಸಮಾಜಕ್ಕೆ ತಮ್ಮನ್ನು ತಾವು ತೆರೆದುಕೊಳ್ಳಬೇಕೆಂದೂ ಸಮಾಜದ ಅನಿಷ್ಟಗಳನ್ನು ಸರಿಪಡಿಸಬೇಕೆಂದೂ ಅವರು ಸೂಚಿಸುತ್ತಾರೆ. ಇದು ಕಿರಿಯ ಬರಹಗಾರರು ಅನುಭವ ಪಡೆಯುವ ಬಗ್ಗೆ ಉತ್ತಮ ಹಿತವಚನ. ಇನ್ನೊಂದು ಬಗೆಯಲ್ಲಿ ಇದು ನೀತಿ ಪಾಠ. ಇವೆರಡೂ ಕುವೆಂಪು ಮಾತುಗಳಲ್ಲಿರುವುದು ಎಂಥವರಿಗೂ ಕಂಡು ಬರುತ್ತದೆ.

ಆವೊತ್ತು ಮಾತಾಡುವ ಮೂಡಲ್ಲಿದ್ದರು ಕುವೆಂಪು ನಾವಿಬ್ಬರೂ ಕೆಲಸದ ಮೂಡಿನಲ್ಲಿದ್ದೆವು. ಅವರು ತಮ್ಮ ‘ರಾಮಾಯಣ ದರ್ಶನಂ’ನಿಂದ ಓದಿ ತೋರಿಸುವುದಾಗಿ ಸೂಚಿಸಿ ಬೇರೊಂದು ವಿಷಯ ಎತ್ತಿಕೊಂಡು ವಿವರಿಸತೊಡಗಿದರು. ‘ಪಾಂಚಾಲಿ’ ವಿವಿಧ ತೊಡಕುಗಳಲ್ಲಿ ಸಿಲುಕಿದ್ದ ನಾನು ಮತ್ತು ದೇವೇಗೌಡರು ನಮಸ್ಕಾರ ಹೇಳಿ ಹೊರಬಿದ್ದೆವು.

ಕುವೆಂಪು ಒಂದು ಸಂಸ್ಥೆ ಅಥವಾ ದೇವತೆಯಾಗಿ ಹುಂಬರ ಮನಸ್ಸಿನಲ್ಲಿ ಬೆಳೆಯುತ್ತಿದ್ದ ವೇಳೆಗೆ ಸರಿಯಾಗಿ ಅವರು ಮೈಕೊಡವಿಕೊಂಡು ಹೊರಬಂದು ಮನುಷ್ಯರೂ ವಿಚಾರವಾದಿಗಳೂ ಆಗಿ ಮಾತಾಡುತ್ತಿದ್ದುದು ನನಗೆ ಸಂತಸ ಉಂಟುಮಾಡಿತ್ತು.

——————————————————————-

ಲಂಕೇಶ್: ಸಾಮಾನ್ಯವಾಗಿ ಸಾರ್ವಜನಿಕ ಸಭೆಗಳಲ್ಲಿ ಮತ್ತು ವಾದವಿವಾದಗಳಲ್ಲಿ ಭಾಗವಹಿಸದ ತಾವು ಈಚೆಗೆ ಹೀಗೆ ಭಾಗವಹಿಸುವ ಮೂಲಕ ತಮ್ಮ ವಿಶಿಷ್ಟ ಬಗೆಯ ಕೀರ್ತಿಗೆ ಕಳಂಕ ತಂದುಕೊಳ್ಳುತ್ತಿರಬಹುದೇ ಎಂಬ ಅಳುಕು ತಮ್ಮ ಅಭಿಮಾನಿಗಳಲ್ಲಿ ಕೆಲವರಿಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯವೇನು?

ಕುವೆಂಪು: ಕೀರ್ತಿಗಿಂತಲೂ ನನಗೆ ಹೆಚ್ಚು ಪ್ರಿಯವಾದದ್ದು ಸತ್ಯ. ಸತ್ಯ ಹೇಳಿದರೆ ಕಲುಷಿತವಾಗುವ ಕೀರ್ತಿ ಭ್ರಷ್ಟಾಚಾರದ ವಸ್ತುವಾಗುತ್ತದೆ. ಅಲ್ಲದೆ ‘ಕೀರ್ತಿಶನಿ’ ಎಂಬ ನನ್ನ ಸಾನೆಟ್ಟಿನಲ್ಲಿ ಅನೇಕ ವರ್ಷಗಳ ಹಿಂದೆಯೇ ನಾನು ಅದನ್ನು ‘ತೊಲಗಾಚೆ’ ಎಂದು ತೊಲಗಿಸಿದ್ದೇನೆ. ಆದರೂ, ಶ್ರೀ ಎ.ಆರ್. ಕೃಷ್ಣಶಾಸ್ತ್ರಿಗಳು ಹೇಳಿದಂತೆ, ಶನಿ ಒಮ್ಮೆ ಬೆನ್ನು ಹತ್ತಿದರೆ ಬಿಡುವುದಿಲ್ಲವಂತೆ. ನನ್ನ ಮತ್ತೊಂದು ಸಾನೆಟ್ ‘ಯಶೋಲಕ್ಷ್ಮಿ’ ಈ ವಿಚಾರವಾಗಿ ನನ್ನ ಭಾವನೆ ಏನು ಎಂಬುದನ್ನು ತಿಳಿಸುತ್ತದೆ. ಕೀರ್ತಿ ಕಲುಷಿತವಾಗುವುದಿರಲಿ ಅಪಕೀರ್ತಿಯೆ ಬಂದರು ಸತ್ಯ ಹೇಳುವುದನ್ನು ಬಿಡುವುದಿಲ್ಲ.

ಲಂಕೇಶ್: ಕೆಟ್ಟಿರಲಿ, ಕೆಡದಿರಲಿ ಭಾರತೀಯ ಸಂಸ್ಕೃತಿಯೆಂದರೆ ವೈದಿಕ ಸಂಸ್ಕೃತಿಯೇ ಎಂಬ ಅಭಿಪ್ರಾಯದ ಬಗ್ಗೆ ನಿಮಗೇನೆನ್ನಿಸುತ್ತದೆ?

ಕುವೆಂಪು: ಇದೊಂದು ತಪ್ಪು ಅಭಿಪ್ರಾಯ. ಭಾರತೀಯ ಸಂಸ್ಕೃತಿ ಬರಿಯ ವೈದಿಕವಲ್ಲ. ಅವೈದಿಕವೂ ಅದರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಬೌದ್ಧ, ಜೈನಗಳಲ್ಲದೆ ನ್ಯಾಯ, ವೈಶ್ಲೇಷಿಕ, ಸಾಂಖ್ಯ, ಯೋಗ ದರ್ಶನಗಳೂ ವೇದದ ಪರಮ ಪ್ರಾಮಾಣ್ಯವನ್ನು ಅವಿಚಾರಕವಾಗಿ ಒಪ್ಪಬೇಕು ಅನ್ನುವುದಿಲ್ಲ. ನನ್ನದು ವಿಶ್ವಸಂಸ್ಕೃತಿ. ಅಭಾರತೀಯವೂ ಅದರಲ್ಲಿ ಸೇರಿದೆ. ಸನಾತನವೂ (ಪುರಾತನ ಅಲ್ಲ.) ಶಾಶ್ವತವೂ ಆಧ್ಯಾತ್ಮಿಕವೂ ವಿಚಾರ ಮತ್ತು ವಿಜ್ಞಾನಗಳಿಗೆ ಅವಿರುದ್ಧವೂ ಆಗಿರುವ ಸತ್ಯ ಎಲ್ಲಿಯೇ ಇರಲಿ ಅದನ್ನು ನಾನು ಸ್ವೀಕರಿಸಿದ್ದೇನೆ.

ಲಂಕೇಶ್: ಬ್ರಾಹ್ಮಣ ಜಾತಿಯಲ್ಲಿ ಹಲವು ಒಳಪಂಗಡಗಳಿದ್ದರೂ ಕೇವಲ ಒಂದು ಪಂಗಡವನ್ನು ನೀವು ಟೀಕಿಸಿದ್ದು ಕೇವಲ ಉದಾಹರಣೆಗೋ ಅಥವಾ ಆ ಪಂಗಡ ತೀರಾ ಮಲಿನಗೊಂಡಿದೆ ಎಂಬ ಕಾರಣಕ್ಕೋ?

ಕುವೆಂಪು: ನನ್ನ ಭಾಷಣ ಬ್ರಾಹ್ಮಣರಿಗಾಗಲಿ, ಮಾಧ್ವರಿಗಾಗಲೀ ನಿರ್ದೆಶಿಸಿದ್ದಲ್ಲ; ಒಕ್ಕೂಟದವರಿಗಾಗಿ ಮಾತ್ರ. ಜಗತ್ತಿನ ಪುರೋಹಿತಶಾಹಿ ಅವೈಚಾರಿಕ ಮತ್ತು ಅವೈಜ್ಞಾನಿಕ ಮೂಢ ಭಾವನೆಗಳ ಆಶ್ರಯದಲ್ಲಿ ಶ್ರೀ ಸಾಮಾನ್ಯರನ್ನು ಹೇಗೆ ವಂಚಿಸುತ್ತಾ ಬಂದಿದೆ ಎನ್ನುವುದನ್ನು ಕುರಿತು ವಿಚಾರವಾದಿಗಳಾಗಿ ಬಾಳನ್ನು ನಡೆಸಬೇಕು ಎನ್ನುವ ತರುಣರಿಗೆ ತಿಳಿಸುತ್ತಿದ್ದೆ. ಪ್ರಾಸಂಗಿಕವಾಗಿ, ನಾನು ಕೆಲವೇ ದಿನಗಳ ಹಿಂದೆ ಆ ಪುಸ್ತಕಗಳನ್ನು ಓದುತ್ತಿದ್ದು ಸಂಗತಿ ಮನಸ್ಸಿನಲ್ಲಿ ಹೊಚ್ಚ ಹೊಸದಾಗಿ ಇದ್ದುದರಿಂದ ಮಧ್ವ-ಜಯತೀರ್ಥರ ನಿದರ್ಶನಗಳನ್ನು ಕೊಟ್ಟೆನಷ್ಟೆ; ಆಮೇಲೆ ಗುಲ್ಲೆದ್ದ ಮತಭ್ರಾಂತರ ಗಲಾಟೆಯಿಂದಲೇ ಗೊತ್ತಾದದ್ದು ನಾನು ಎಂತಹ ಹೇಸಿಗೆಯ ಹೊಂಡಕ್ಕೆ ಕಲ್ಲು ಎಸೆದಿದ್ದೇನೆ ಎಂದು.

ಲಂಕೇಶ್: ತಮ್ಮ ಕಾವ್ಯದ ಮತ್ತು ಮುಖ್ಯ ಕಥಾಸಾಹಿತ್ಯದ (fiction) ಕೇಂದ್ರ ನಿಲುವು ವೈದಿಕ, ಆದರ್ಶಮಯ, ಅವಾಸ್ತವ ಎಂದು ಹಲವರು ಟೀಕಿಸುತ್ತಾರೆ. ಇದಕ್ಕೆ ತಮ್ಮ ಉತ್ತರವೇನು?

ಕುವೆಂಪು: ಅವರ ತಲೆ; ನನ್ನದು ವಿಶ್ವಪ್ರಜ್ಞೆ. ನಾನು ಭಾರತೀಯನಾಗಿ ಅದರಲ್ಲೂ ಕನ್ನಡಿಗನಾಗಿ ಹುಟ್ಟಿದ್ದರಿಂದ ಆ ಸಂಸ್ಕೃತಿಯ ಮತ್ತು ಆ ಭಾಷೆಯ ಪರಿಭಾಷೆಯನ್ನು ಅನಿವಾರ್ಯವಾಗಿ ಉಪಯೋಗಿಸುತ್ತೇನಷ್ಟೆ. ಸತ್ಯ ವೈದಿಕವಾಗಿ ಪ್ರಕಟವಾದ ಮಾತ್ರಕ್ಕೆ ಅಸತ್ಯವಾಗುವುದಿಲ್ಲ. ಆದರ್ಶಮಯವಾದ ಮಾತ್ರಕ್ಕೆ ಅವಾಸ್ತವವಾಗುವುದಿಲ್ಲ. ನನ್ನ ಭಾಷಣದ ಉದ್ದೇಶವೆ ಒಕ್ಕೂಟದ ಹುಡುಗರನ್ನು ಅಂತಹ ತಪ್ಪುದಾರಿಗೆ ಹೋಗದಿರುವಂತೆ ತಡೆಯಬೇಕು ಎಂಬುದಾಗಿತ್ತು. ಚಿನ್ನದ ಒಡವೆಯನ್ನು ಅಕ್ಕಸಾಲಿ ಮಾಡಿದ ಮಾತ್ರಕ್ಕೆ ಚಿನ್ನ ಅಸತ್ಯವಾಗುತ್ತದೆಯೇ? ಗ್ರಾವಿಟೇಶನ್ ಸಿದ್ಧಾಂತವನ್ನು ನ್ಯೂಟನ್ ಕಂಡುಹಿಡಿದ ಮಾತ್ರಕ್ಕೆ ಅದು ಕ್ರೈಸ್ತವಾಗುತ್ತದೆಯೇ? ವೇದದ ಋಷಿ ಸನಾತನ ಶಾಶ್ವತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ಅದಕ್ಕೆ ‘ಬ್ರಹ್ಮನ್’ ಎಂದು ಹೆಸರು ಕೊಟ್ಟ ಮಾತ್ರಕ್ಕೆ ಆ ಸತ್ಯ ಆ ಋಷಿಯ ಸೃಷ್ಠಿಯಾಗುತ್ತದೆಯೇ? ಆ ಸತ್ಯ ಋಷಿಗೆ ಪೂರ್ವದಲ್ಲಿಯೇ ಇದ್ದುದು; ಆ ಋಷಿ ಮಾತ್ರವಲ್ಲ ಮನುಷ್ಯರೆಲ್ಲ ಮುಗಿದ ಮೇಲೆಯೂ ಆ ಸತ್ಯಕ್ಕೆ ಚ್ಯುತಿ ಬರುವುದಿಲ್ಲ. ಗುರುತ್ವಾಕರ್ಷಣ ಶಕ್ತಿ ನ್ಯೂಟನ್ನಿಗೆ ಪೂರ್ವದಲ್ಲಿಯೂ ಇತ್ತು, ಮನುಷ್ಯ ಕುಲವೇ ನಾಶವಾದ ಮೇಲೆಯೂ ಇರುತ್ತದೆ.

ಅಂತಹ ಸತ್ಯವನ್ನು ನಿತ್ಯ, ಸನಾತನ ಶಾಶ್ವತ ಎನ್ನುತ್ತೇವೆ. ಬೇರೆ ಬೇರೆ ದೇಶಗಳು, ಬೇರೆ ಬೇರೆ ಭಾಷೆಗಳೂ ಬೇರೆ ಬೇರೆ ಹೆಸರು ಕೊಡಬಹುದಷ್ಟೆ. ನನ್ನ ಜೀವನ ದರ್ಶನ ಅಂತಹ ಅಚ್ಯುತ ಸತ್ಯದ ಮೇಲೆ ನಿಂತಿದೆ. ನನ್ನ ಸಾಹಿತ್ಯವೂ ಅದನ್ನೆ ಅಭಿವ್ಯಕ್ತಗೊಳಿಸುತ್ತದೆ. ಅದನ್ನು ‘ನಿಮ್ಮಲ್ಲಿ’ ಕೆಲವರು ‘ವೈದಿಕ’ ಎಂದು ನಿಂದಿಸುವಂತೆ ‘ಅವರಲ್ಲಿ’ ಕೆಲವರು ‘ಅವೈದಿಕ’ ಎಂದೂ ತಿರಸ್ಕರಿಸುತ್ತಾರೆ. ಆದರೆ ನನ್ನ ಸಾಹಿತ್ಯ ಉದ್ಭವಿಸುವುದು ಬದುಕಿನಿಂದ, ಬದುಕಿಗಾಗಿ; ಮತ್ತು ಬದುಕಿನಾಚೆಯ ಬದುಕಿಗಾಗಿ.

ಲಂಕೇಶ್: ಈಚೆಗೊಬ್ಬರು ತಮ್ಮ ಸಾಮಾಜಿಕ ವಿಮರ್ಶೆಯನ್ನು ಕುರಿತು ಹೇಳುತ್ತಾ ‘ಕುವೆಂಪು ಅವರ ಮಾತಿನಲ್ಲಿ ಬ್ರಾಹ್ಮಣ ವಿರೋಧಿ ಧ್ವನಿ ಕೇಳಿ ಬರುತ್ತಿದ್ದರೆ ಅದಕ್ಕೆ ಕಾರಣವನ್ನು ಅವರ ವೈಯಕ್ತಿಕ ಅನುಭವದಲ್ಲಿ ಹುಡುಕಬೇಕು’ ಎಂದಿದ್ದಾರೆ. ಇದಕ್ಕೆ ತಮ್ಮ ಪ್ರತಿಕ್ರಿಯೆ?

ಕುವೆಂಪು: ಶುದ್ಧ ಅಪಾರ್ಥ! ಮೊದಲನೆಯದಾಗಿ ಅದು ಬ್ರಾಹ್ಮಣ ವಿರೋಧಿ ಧ್ವನಿಯಲ್ಲ. ಅಂದರೆ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಂ ಮತ್ತು ಲಿಂಗಾಯಿತ ಪುರೋಹಿತಶಾಹಿಯನ್ನೂ ಒಳಗೊಂಡಿದೆ. ನನ್ನ ಪುರೋಹಿತಶಾಹಿ ಖಂಡನೆಗೆ ಕಾರಣವನ್ನು ನನಗಿರಬಹುದಾದ ವೈಯಕ್ತಿಕ ಅನುಭವದಲ್ಲಿ ಹುಡುಕುವುದು ಅತ್ಯಂತ ಹಾಸ್ಯಾಸ್ಪದ. ನನ್ನ ಮೂವತ್ತು ನಲವತ್ತು ವರ್ಷದ ಹಿಂದಿನ ಬರಹವನ್ನು ಯಾರೋ ಒಬ್ಬರು ಅಂದು ಟೀಕಿಸಿದುದಕ್ಕಾಗಿ ಇಂದು ನಾನು ನಲವತ್ತು ವರ್ಷಗಳ ಮೇಲೆ ರೊಚ್ಚು ತೀರಿಸಿಕೊಳ್ಳುವುದಕ್ಕೆ ಹಾಗೆ ಮಾತನಾಡಿದೆನೆಂದು ಹೇಳುವುದು ನನ್ನ ವ್ಯಕ್ತಿತ್ವಕ್ಕೆ ಅತ್ಯಂತ ‘ಅಲ್ಪತನ’ ಆರೋಪಿಸಿದಂತಾಗುತ್ತದೆ. ನಾನು ಅಷ್ಟು ‘ಸಣ್ಣ’ವನಲ್ಲ. ನಲವತ್ತು ಐವತ್ತು ವರ್ಷಗಳಿಂದಲೂ ನಾನು ಗದ್ಯ, ಪದ್ಯ, ನಾಟಕ ಎಲ್ಲದರಲ್ಲಿಯೂ ಹೇಳುತ್ತಾ ಬಂದಿರುವುದನ್ನೆ ಮೊನ್ನೆಯು ಹೇಳಿದ್ದೇನೆ ಅಷ್ಟೆ. ಆದರೆ ಇವರು ಯಾರೂ ನೀವೂ ಸೇರಿ, ನನ್ನ ಬರಹಗಳನ್ನು ಅಷ್ಟು ಆಸ್ಥೆಯಿಂದ ಓದಿಯೇ ಇಲ್ಲ ಎಂಬುದು ನನ್ನ ಗುಮಾನಿ. ಇಡೀ ರಾಮಾಯಣದರ್ಶನವೆ ನನ್ನ ‘ದರ್ಶನ’ಕ್ಕೆ ಒಡ್ಡಿದ ಮಹಾ ಪ್ರತಿಮೆಯಾಗಿದೆ. (ನಿಮ್ಮ ಎರಡನೆಯ ಪ್ರಶ್ನೆಗೆ ಕೊಟ್ಟಿರುವ ಉತ್ತರವನ್ನೂ ನೋಡಬಹುದು.)

ಲಂಕೇಶ್: ‘ಬ್ರಾಹ್ಮಣ’ ‘ಶೂದ್ರ’ ‘ಮಣ್ಣಿನ ವಾಸನೆ’ ಇತ್ಯಾದಿ ಮಾತು ಬಹಳವಾಗಿ ಕೇಳಿಬರುತ್ತಿರುವ ಈ ಕಾಲದಲ್ಲಿ ಬ್ರಾಹ್ಮಣ, ಶೂದ್ರರ ಭಾಷೆ, ಅನುಭವ ದೃಷ್ಟಿಯನ್ನು ಕುರಿತ ತಮ್ಮ ವಿಶ್ಲೇಷಣೆ ಏನು?

ಕುವೆಂಪು: ಈ ಮಾತುಗಳೆಲ್ಲ ಮತ್ತೆ ಪುರೋಹಿತಶಾಹಿಯ ಪಿತೂರಿಯ ಟಂಕಸಾಲೆಯ ನಾಣ್ಯಗಳೆ. ನಿಮ್ಮನ್ನು ದಿಕ್ಕು ತಪ್ಪಿಸಿ ಬದುಕಿನ ಋಜುಮಾರ್ಗದಿಂದ ಕಟಂಕಿತ ಮಾರ್ಗಕ್ಕೆ ತಳ್ಳುವ ಉಪಾಯದಿಂದಲೆ ಅವರು ಅವನ್ನು ಹುಟ್ಟಿಸಿದ್ದಾರೆ. ನೀವೂ ಹಿಂದಿನಂತೆಯೇ ಇಂದು ಬೆಪ್ಪುಗಳಾಗಿ ಅದಕ್ಕೆ ವಶರಾಗಿ, ಜನರ ಬದುಕನ್ನು ಮತಮೌಢ್ಯದಿಂದ ಪಾರು ಮಾಡಿ ಅವರನ್ನು ವೈಚಾರಿಕ ಬುದ್ಧಿ ಮತ್ತು ವೈಜ್ಞಾನಿಕ ದೃಷ್ಟಿ ಸಂಪನ್ನರಾಗಿ ಪರಿವರ್ತಿಸಿ ಅವರ ಮನಸ್ಸು ಮತ್ತು ಹೃದಯಗಳನ್ನು ಬೆಳಗುವ, ಅವರ ಸೋತ ಹೃದಯಗಳನ್ನು ಹುರಿದುಂಬಿಸುವ, ಮತ್ತು ವರ್ಣ, ಜಾತಿ ಭೇದಭಾವನೆಗಳನ್ನೆಲ್ಲ ಕಸದ ಬುಟ್ಟಿಗೆ ತೂರಿ ಅವರನ್ನು ಸಮಾನತಾವಾದಿಗಳನ್ನಾಗಿ ಪರಿವರ್ತಿಸುವ ಸಾಹಿತ್ಯ ಸೃಷ್ಟಿ ಮಾಡುವ ಬದಲು, ಗುಂಪುಗಾರಿಕೆಗಲ್ಲದೆ ಮತ್ತೆ ಯಾರಿಗೂ ಬೇಡದ ಮತ್ತು ಯಾರಿಗೂ ಅರ್ಥವಾಗದ ‘ನವ್ಯ’ ನಾಮಕ ವಿಕಾರ ಸೃಷ್ಟಿಗೆ ಮರುಳಾಗಿ ಹೋಗಿದ್ದೀರಿ. ಅಂತಹ ಕೃತಕ ಅನುಕರಣೀಯ ಪಂಥಗಳನ್ನೆಲ್ಲ ನಿಮ್ಮ ಹೃದಯದಿಂದ ಕಿತ್ತೊಗೆದು, ನಿಮ್ಮವರ ಬದುಕನ್ನು ನೇರವಾಗಿ ನೋಡಿ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವರನ್ನು ಮೇಲಕ್ಕೆತ್ತುವ ಧೀರಭಾವಗಳನ್ನೂ ಕ್ರಿಯಾಶೀಲ ಆದರ್ಶಗಳನ್ನೂ ನಿಮ್ಮ ಬರವಣಿಗೆಗಳಲ್ಲಿ ನೀಡಬೇಕಾಗಿರುವುದು ಸದ್ಯದ ನಿಮ್ಮ ಆದ್ಯ ಕರ್ತವ್ಯ. ಪುರೋಹಿತಶಾಹಿಯ ಮೆಚ್ಚುಗೆಗೂ ಹೊಗಳಿಕೆಗೂ ಹಾತೊರೆದು ಬಾಯಿ ಬಿಟ್ಟು ನಿಮ್ಮ ಪೌರುಷ ತೇಜಸ್ಸುಗಳಿಗೆ ಅಪಮಾನ ಮಡಿಕೊಳ್ಳುವುದನ್ನು ಒಡನೆಯೇ ನಿಲ್ಲಿಸಿಬಿಡಿ. (ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಿದ್ದ ಲೇಖಕರ ಗೋಷ್ಠಿಯನ್ನು ಉದ್ಘಾಟಿಸುತ್ತಾ ನಾನು ಮಾಡಿದ ಭಾಷಣವನ್ನು ಗಮನವಿಟ್ಟು ಓದಿ ನೋಡಿದರೆ ನನ್ನ ಅಭಿಪ್ರಾಯಗಳು ಸ್ಪಷ್ಟಗೊಳ್ಳುತ್ತವೆ.)

ಲಂಕೇಶ್: ಕನ್ನಡ ಸಾಹಿತಿಗಳು ಬಹುಕಾಲದಿಂದ ಈ ನಾಡ ಹೆಸರಿನ ಬದಲಾವಣೆ, ಕನ್ನಡ ಮಾಧ್ಯಮ ಕುರಿತು ಮಾತನ್ನಾಡುತಿದ್ದರೂ ಕೇವಲ ಹೆಸರಿನ ಬದಲಾವಣೆ ಮಾತ್ರ ಆಗಿ ಮಾಧ್ಯಮದ ಪ್ರಶ್ನೆ ಹಾಗೇ ಉಳಿದಿದೆ. ಇದು ಸಾಹಿತಿಯ ಪ್ರಭಾವದ ದೌರ್ಬಲ್ಯ ತೋರುತ್ತದೆಯೆ?

ಕುವೆಂಪು: ಹಾಗೇನಿಲ್ಲ, ಈಗಾಗಲೆ ತಕ್ಕಷ್ಟು ಕಾರ್ಯ ನಡೆದಿದೆ. ನಡೆಯುತ್ತಲೂ ಇದೆ. ಜನತೆ, ಸರಕಾರ, ಸಾಹಿತ್ಯ ಪರಿಷತ್ತು ಮತ್ತು ವಿಶ್ವವಿದ್ಯಾಲಯಗಳು ಎಲ್ಲವೂ ಕನ್ನಡ ಮಾಧ್ಯಮ ತತ್ವವನೊಪ್ಪಿ ಕ್ರಿಯಾಶೀಲವಾಗಿ ಮುಂದುವರೆಯುತ್ತಿವೆ. ಅದು ಪೂರ್ತಿ ಕೈಗೂಡಲು ತುಸು ಸಮಯ ಬೇಕಾಗಬಹುದು ಅಷ್ಟೆ.

ಲಂಕೇಶ್: ಈ ನಾಡ ತರುಣರಿಗೆ ತಮ್ಮ ಹಿತವಚನವೇನು?

ಕುವೆಂಪು: ನನ್ನ ಸಾಹಿತ್ಯದಲ್ಲಿ- ಕತೆ, ಕಾದಂಬರಿ, ಭಾವಗೀತೆ, ಕಾವ್ಯ, ಮಹಾಕಾವ್ಯ, ಜೀವನ ಚರಿತ್ರೆ, ಭಾಷಣ, ವಿಮರ್ಶೆ ಇತ್ಯಾದಿ- ನಾನು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇನೆ. ಇಷ್ಟವಿರುವ ತರುಣರು ಅವುಗಳನ್ನು ಮನಸ್ಸಿಟ್ಟು ಓದಲಿ. ವಿಶೇಷವಾಗಿ, ಅದರ ಮುನ್ನುಡಿ ಸಹಿತ ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂಬ ಪುಸ್ತಕದ ನಾಲ್ಕು ಭಾಷಣಗಳನ್ನಾದರೂ ಓದಲಿ. ಆದರೆ ನಾಲ್ಕನ್ನೂ ಸಮಗ್ರವಾಗಿ ತೆಗೆದುಕೊಳ್ಳಬೇಕು, ಅಷ್ಟೆ.- ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ ಇವುಗಳೇ ಎಲ್ಲರ ಧ್ಯೇಯಮಂತ್ರಗಳಾಗಲಿ.

ಕೃಪೆ: -‘ಪಾಂಚಾಲಿ’ (ದೀಪಾವಳಿ-ರಾಜ್ಯೋತ್ಸವ ವಿಶೇಷ ಸಂಚಿಕೆ, ಪುಟ: 11-14, 1974)
ಸಂಪಾದಕರು: ಪಿ. ಲಂಕೇಶ್

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending